ಯಾರೋ.... ಹೇಳಿದರೆಂದು ನಿನ್ನರಮನೆಯ
ಬಾಗಿಲಿಗೆ ಬಂದು ಕುಳಿತುಕೊಂಡು ಬಿಟ್ಟೆ..!!
ಕಾಡಿಗೆ ಕಣ್ಣವಳ ನೊಟದ ಬಾಣಕ್ಕಾದ ನೋವಿಗೆ
ಮದ್ಯವೆ ಮದ್ದೆಂದು ನಾ ಕುಡಿದು ಕೆಟ್ಟೆ..!!
ಸಾಕಿ...
ದೇವರು ಸೃಷ್ಟಿಸಿದ ಮನುಷ್ಯನಿಂದ ದೇವರಿಗಾಗಿಯೆ
ಕಟ್ಟಿಸಿದ ಕಲ್ಲು ಕಟ್ಟಡದ ಮುಂದಾದರು ಕುಳಿತುಕೊಂಡಿದ್ದರೆ..
ಭಿಕ್ಷೆ ಬೇಡುವುದನ್ನಾದರು ಚೆನ್ನಾಗಿ ಕಲಿತುಕೊಳ್ಳುತ್ತಿದೆ..!!! ಪ್ರೇಮ ದೇವತೆ ದಯೆ ತೋರಲಿಲ್ಲ..
ಲಕ್ಷ್ಮೀ ದೇವಿಯಾದರೂ ಒಲಿದರೆ....ಮುಂದಿನ
ಸಂಜೆಗಳಿಗೆ ಬೆಳಕಾದರೂ ಅಗಬಹುದು..!!
ಹುಚ್ಚನೆಂದು ನಡು ಬೀದಿಯಲ್ಲಿ ಎಂದೋ... ಕೈ
ಬಿಟ್ಟು ಹೋಗಿರುವಳವಳು..
ನನ್ನೆದೆಯ ನೋವು ಅವಳಿಗಿಂತಲೂ ಚೆನ್ನಾಗಿ...
ಹನಿ...ಹನಿ...ರಕ್ತವನ್ನು ನುಂಗುತ್ತಾ ಅಚ್ಚೆಯನ್ನು ಹಾಕಿದ
ಸೂಜಿಗಷ್ಟೇ ಗೊತ್ತಿದೆ ಸಾಕಿ.....
ಇಂದೋ...ನಾಳೆಯೋ... ಅಂಗೈಯ ತುಂಬಾ
ಗೊರಂಟಿಯನ್ನು ಹಚ್ಚಿಕೊಳ್ಳುತ್ತಾವಳು...
ತುಂಬು ಚಂದಿರನ ಬೆಳದಿಂಗಳ ಹೆಣದೊಂದಿಗೆ
ಮಲಗಬೇಕಿದೆ ನಾನು ಅಂಗಳದಲ್ಲಿ....
ಅಚ್ಚೆ ಹಾಕಿಸಿಕೊಂಡ ಹೆಸರಿನೊಂದಿಗೆ ಒಬ್ಬಂಟಿಯಾಗಿ!!
ಅರೇ... ಆದ ಗಾಯದ ಕಿವುವನ್ನು ಹಿಚುಕಿ, ಮುಲಾಮನ್ನು
ಸವರಿ ಶುಶ್ರೂಷೆ ಮಾಡುವ ದಾದಿಗಿಂತಲೂ ಕಲ್ಲು
ಹೃದಯದವಳಾಗಿಬಿಟ್ಟಳಾ..?
ಬಾಡಿದ ಮಲ್ಲಿಗೆಯನ್ನು ನೀಲಿಯಲ್ಲಿ ಅದ್ದಿ ತೆಗೆದು
ಮರು ದಿನಕ್ಕೆ ಮಾರಾಟ ಮಾಡಲು ನಿಲ್ಲುವ ಹೂವಾಡಗಿತ್ತಿಗಿಂತಲೂ ಕೀಳಾಗಿಬಿಟ್ಟಳಾ..?
ಸಾಕಿ...
ಮನೆಯ ಎದುರಿಗೆ ಹೋದಾಗಲೊಮ್ಮೆ ಕಲ್ಲುಗಳನ್ನು
ಎಸೆಯುತ್ತಾಳೆ..!!
ಆಕೆ ಎಸೆದ ಒಂದೊಂದು ಕಲ್ಲುಗಳನ್ನು ಎತ್ತಿಟ್ಟುಕೊಂಡು
ಬಂದು ಕಾಪಿಟ್ಟುಕೊಳ್ಳುತ್ತೇನೆ..!!
ಭಕ್ತಿಯಿಂದ ಶಿವನ ನೆತ್ತಿಯಿಂದ ಜಾರಿಬಿದ್ದ ಹೂವುಗಳಂತೆ
ನಾಳೆ ನನ್ನದಲ್ಲ...ನಿನ್ನೆ ನೆನಪಿಲ್ಲ... ಇಂದು ಅವಳಿಲ್ಲ..
ಹೊತ್ತು-ಗೊತ್ತುಗಳೆ ಮೋಸ ಹೋಗಿಬಿಟ್ಟಿವೆ ಅವಳ
ನಗುವಿನ ಸದ್ದಿಗೆ..!! ಯಾವುದು ನಿಂತಿದೆ ? ಯಾವುದು
ಓಡುತ್ತಿದೆ ಒಂದು ಅರ್ಥವಾಗುತ್ತಿಲ್ಲ
ಸಾಕಿ...
ಈಗೀಗ ಎಲ್ಲ ಕೊಳಚೆಗಳ ಬಾಯಿಗಳನ್ನು ಮುಚ್ಚಿಬಿಟ್ಟಿದ್ದಾರೆ
ಬೀಳುವ ಭಯವಿಲ್ಲ..!! ಹೀಗೆ ನಡು ಬೀದಿಯಲ್ಲಿ ನಿಲ್ಲಲು
ಸುಂಸ್ಕೃತ ಜನರು ಬಿಡುವುದಿಲ್ಲ...!! ಹಾಳಾಗಿ ಹೋಗಲಿ
ಸುಡುಗಾಡಿಗಾದರೂ ಹೋಗೋಣವೆಂದರೆ... ಉಸಿರಿರುವ
ತನಕ ಇಲ್ಲಿ ಕಾಲಿಡಬೇಡ ಎನ್ನುತ್ತಾರಲ್ಲ..!!
ಅವರಿಗೆಲ್ಲ ಏನು ಗೊತ್ತು.. ನನ್ನುಸಿರು ಅವಳ ಕಿರುನಗೆಯ ಅಂಚಿನಲ್ಲಿ ಸಿಲುಕಿ ವಿಲವಿಲನೆ ಒದ್ದಾಡುತ್ತಿರುವುದು...