Friday, October 18, 2019

ಕಜಲ್ ೫೦


ಬೆನ್ನು ಬಿದ್ದ ಬೇತಾಳದಂತೆಯೆ, ಮಸಣದಿಂದ
ನನ್ನ ಹೆಜ್ಜೆ ಗುರುತುಗಳನ್ನೆ ಹಿಂಬಾಲಿಸಿಕೊಂಡು
ಬರಬೇಡವೊ ಪಾಗಲ್...
ಸುರಿದುಕೊಳ್ಳುತ್ತಿರುವೆ... ತಣ್ಣೀರನ್ನೆ!!
ನೀನಿಲ್ಲವೆಂಬ ಸುದ್ದಿಯನ್ನು ಅರಿತು...
ಅರಿಯಲಾರದಂತೆ

ಬೆತ್ತಲೆಯ ಬೆನ್ನಿನ ಮೇಲೆ ಹಾಗೆಯೆ...
ಉಳಿಸಿಕೊಳ್ಳಬೇಕೆಂದುಕೊಂಡಿದ್ದೆ, ನಿನ್ನಧರದ ನೆನಪಿನ
ಕುರುಹುಗಳನ್ನು ಪಾಗಲ್...
ಇಲ್ಲ..!!! ಇಲ್ಲ..!! ತೊಳೆದುಕೊಂಡು ಬಿಡುವೆ,
ಬರುವವರು..ಅಲ್ಲಿ ತುಂಬುವುದು ಕಾಮವೊ!!
ಮೋಹವೊ!!, ವಿರಹವೊ!!! ವಿಷವೊ!! ನಾನ್ಹೇಗೆ
ಕಂಡುಕೊಳ್ಳಲಿ!!!

ಗೋಕುಲಾಷ್ಠಮಿಯಂದು ಕೊಡಿಸಿದ
ಈ ರಂಗು ರಂಗೀನ ದುಪ್ಪಟವನ್ನು... ನಿನ್ನ
ಗೋರಿಯ ಮೇಲೆ ಹೊದಿಸಿಬಿಡಬೇಕೆಂದಿದ್ದೆ ಪಾಗಲ್...
ಆದರೂ... ಎತ್ತಿಟ್ಟುಕೊಂಡೆ! ನೆನಪಿಗಾಗಲ್ಲ,
ಕಾಮದ್ಹಸಿವಿನ ವಿರಹಿಗಳ ಹಾಸಿಗೆಯಾಗಿಸಲು,
ಭುಜವ ಕಚ್ಚಿದ ನೋವಿಗೆ, ಸುರಿವ ಎರಡು ಹನಿ
ಕಣ್ಣೀರ ಒರೆಸಿಕೊಳ್ಳಲು...

ನಿಜವೆನಿಸಿತು ನನಗಿಂದು, ನಿನ್ನನು ಗೋರಿಯೊಳಗಿಟ್ಟು
ಮಣ್ಣನು ಸುರಿದ ಕ್ಷಣ...ಪ್ರೀತಿಗೆ ಸಾವಿಲ್ಲವೆಂಬುದು
ಪಾಗಲ್...
ಆದರೆ.......!!! ಮಸಣದ ಮೂಲೆ ಮೂಲೆಯನ್ನು ಹುಡುಕಿದರು..... ವಿರಹದ ಸಾವಿನ ಕುರುಹುವೆ
ಕಾಣಿಸುತ್ತಿಲ್ಲವಲ್ಲ!!, ಎರಡು ಒಂದೆ ನಾಣ್ಯ‌ದ 
ಎರಡು ಮುಖಗಳೇನು?

ಅಡಿಯಿಂದ ಮುಡಿಯವರೆಗೂ... ನೋವೆ ತುಂಬಿಕೊಂಡಿದ್ದರು,
ಅದ್ಹೇಗೆ ಸಂತಸವಾಗಿರುತ್ತಿದ್ದೆಯೋ? ಒಂದೆ ಒಂದು ಮಧು
ಬಟ್ಟಲನ್ನು ಕುಡಿದು ಪಾಗಲ್....
ಹೇಳಲು ನೀನಿಗಿಲ್ಲ!!, ನಾನು?....ಅಲ್ಲಿಗೀಗ ಬರುವ ಹಾಗಿಲ್ಲ!!
ನಿನೆಂದೂ ಚಿರನಿದ್ರೆಗೆ ಹಪಹಪಿಸಿದವನೆ ಅಲ್ಲ, ಮೈಗೇರಿದ
ಅಮಲಿನಲ್ಲೂ...ಅವಳ ಹೆಸರನ್ನೆ ಜಪಿಸುತ್ತಿದ್ದೆ..
ಮಣ್ಣಿನಲ್ಲಿ?....ಜಪಿಸಬೇಡ, ಸುತ್ತಲಿರುವ ಆತ್ಮಗಳೆಲ್ಲ
ಎದ್ದು ಕುಳಿತು ಬಿಟ್ಟಾವು!!

No comments:

Post a Comment