Sunday, January 30, 2022

ರಂಗೀ


ಸಂಬಂಧಗಳು ತೋರಿಸುವ
ನರಕ ದರ್ಶನ,
ಜೀವಾವಧಿ ಶಿಕ್ಷೆಗಿಂತಲೂ....
ಘನ ಘೋರವಾದದ್ದು
ಅಲ್ಲವೆ?
ರಂಗೀ....
ನೋವು- ಸಂಕಟ, ಅವಮಾನ
ತಿರಸ್ಕಾರ, ತುಚ್ಛ ಭಾವಗಳೆಲ್ಲ...
ದೇಹ ಮಣ್ಣು ಸೇರುವವರೆಗೂ
ನಮ್ಮನ್ನು ಸುಡುತ್ತಲೆ
ಇರುತ್ತವಲ್ಲವೆ?

Sunday, January 16, 2022

ಗಾಲಿಬ್


ಗಾಲೀಬ್
ನಾ...ಹೇಗೆ ಹೇಳಲಿ? ಯಾವುದನ್ನು ಹಂಚಿಕೊಳ್ಳಲಿ?
ಮಧುಶಾಲೆಗೆ ಬರುವವರೆಲ್ಲ ಮೊಳ..ಮೊಳ 
ಹೂಗಳನ್ನು ಹೊತ್ತು ತಂದವರೆ ಗಾಲಿಬ್!!
ಮುಡಿದೆ, ಹರಿದು ಚೆಲ್ಲಿದೆ, ಶಯ್ಯಾಗೃಹದ ಇಂಚಿಂಚಿಗೂ
ತೊಡಿಸಿದೆ ಎಲ್ಲ ಹೂವುಗಳಲ್ಲೂ ಕಾಮದ
ವಾಸನೆ ಚಿಮ್ಮುತ್ತಿತ್ತೆ ವಿನಃ...ಒಲವ ಸೂಸುವ
ಮಕರಂದದ ಹನಿಯೊಂದು ಕಾಣಸಿಗಲಿಲ್ಲವಲ್ಲ!!

ಕುಡಿದರು...ಕುಪ್ಪಳಿಸಿದರು...ಹೆಬ್ಬಟ್ಟಿನಿಂದ
ನಾಲಿಗೆಯ ಎಂಜಲನು ಸವರಿ ಎಣಿಸದ ಕಂತೆ...
ಕಂತೆ ನೋಟುಗಳನ್ನೆ ಚೆಲ್ಲುತ್ತಾ, ನನ್ನನು ಆಟದ
ಮೈದಾನವನ್ನಾಗಿಸಿಕೊಂಡರು ಗಾಲಿಬ್!!
ಕುಣಿದು ಬಳಲಿ ಹೋದ ನಡುವು, ಪಾದಗಳ
ನೋವನ್ನು, ತೊಡೆಯ ಮೇಲೆ ಮಲಗಿಸಿಕೊಂಡು
ಹೆರಳುಗಳಲ್ಲಿ ಬೆರಳಾಡಿಸುತ್ತ ಸಂತೈಸುವ 
ಮನದಂಗಳವಾಗಿ ಒಬ್ಬರೂ... ಬರಲಿಲ್ಲವಲ್ಲ!!

ನಿನ್ನೊಂದಿಗೆ ನನ್ನನು ಕರೆದುಕೊಂಡು ಹೊರಟುಬಿಡು!!
ಮದ್ಯ, ಮಹಲು, ಆಡಂಬರವೆಲ್ಲ ಕಣ್ಣಿಗೆ ಸ್ವರ್ಗದಂತೆ ಕಂಡರೂ....
ನನಗೆ ಮಾತ್ರ ನರಕವನ್ನೆ ಸೃಷ್ಟಿಸುತ್ತಿರುವ ಈ.. ಬಂಗಾರದ
ಪಂಜರದಿಂದ ಮುಕ್ತಿಗೊಳಿಸಿಬಿಡು ಗಾಲಿಬ್!!!
ನಡೆದು ಬರುತ್ತೇನೆ ಸುಮ್ಮನೆ ನಿನ್ನ ಹಿಂದೆ, ಒಂದೇ...
ಒಂದು ಹೆಜ್ಜೆಯೂ ಮೂಡದಂತೆ!! ನನ್ನ ಹೆಜ್ಜೆಯ
ಜಾಡು ಮತ್ತೊಬ್ಬಳಿಗೆ ಹಾದಿಯಾಗಬಾರದಲ್ಲವೆ?

ಕಲ್ಲು ಸಾವಿರ ಪೆಟ್ಟುಗಳನ್ನು ತಿಂದು ದೇವರಾಗುತ್ತದಲ್ಲ!!
ಅದೆಂದೂ ನೋವಿನ ಬಗ್ಗೆ ದೂರಿದ್ದೆ ಇಲ್ಲವಲ್ಲ
ಗಾಲಿಬ್!!
ನನ್ನನೂ.... ರತಿದೇವಿಯಂತೆ ಪೂಜಿಸಿದರು...
ಅನುಭವಿಸಿದರು... ದೇಹದ ತುಂಬೆಲ್ಲಾ, ಮಿಲನದ ಕುರುಹನ್ನೆ ಬಿಟ್ಟು ಹೋದರು... ನನಗೂ ಸಹ ಈ ಎಲ್ಲ
ನೋವುಗಳ ನುಂಗಿಕೊಳ್ಳುವ ಶಕ್ತಿಯನ್ನು ಆ ಕಲ್ಲೇಕೆ?ನೀಡಲಿಲ್ಲ!!

ಹೋಗಲಿಬಿಡು..... ಹಾಡಿದ್ದನ್ನೇ.. ಹಾಡುತ್ತ ಕುಳಿತರೆ
ಕೇಳುವವರಾದರು ಯಾರಿಲ್ಲಿ? ಅಲ್ಲವೆ ಗಾಲಿಬ್
ಇಲ್ಲೆಲ್ಲ ನೋವಿನ ಪಾತ್ರೆಯಲ್ಲಿ ಕೈಗೆ ಸಿಗದ ಸುಖದ
ಮೀನನ್ನು ಹಿಡಿದು, ಬಂಧಿಸಿಡಲು ಹೊರಟವರೆ
ಅಲ್ಲವೇನು!!? ಸುಖವನ್ನು ಕಂಡುಕೊಳ್ಳಬೇಕಷ್ಟೆ
ನಿನ್ನ ಹಾಗೆ ಮದ್ಯದಲ್ಲೋ.....? ಮಸಣದಲ್ಲೋ...?




Thursday, January 13, 2022

ರಂಗೀ


ಹಗಲೇನು...? ಇರುಳೇನು...?
ಎಡೆಬಿಡದೆ ದಾಳಿ ಇಡುವವಳ
ನೆನಪುಗಳನ್ನು, ಹಾಲ್ಗಲ್ಲದ ಹಸು
ಕೂಸನ್ನು ಎದೆಗವಚಿಕೊಂಡು
ಮಲಗಿಸುವಂತೆ... ಕಾಪಾಡಿಕೊಳ್ಳುತ್ತೀರುವೆ
ರಂಗೀ....
ವಿರಹದ ಜ್ವಾಲಾಮುಖಿಯನ್ನು
ತಣಿಸಲು, ಉಸಿರಿರುವರೆಗೂ...
ಇವುಗಳನ್ನೆಲ್ಲ  
ಜೊತೆಗಿರಿಸಿಕೊಳ್ಳಲೆಬೇಕಲ್ಲ!!

Saturday, January 8, 2022

ರಂಗೀ

ಈ...
ಹಾಲ್ದುಟಿಯಂಚಲಿ
ಏನೋ.... ಕಡಿಮೆಯಿದೆ
ಎಂದೆನಿಸುತ್ತಿಲ್ಲವೆ?
ರಂಗೀ....
ಹೇಗೆ ಹೇಳಲಿ!?
ಮೊನ್ನೆ ಎಳ್ಳಮವಾಸೆಗೆ
ತೆಗೆದ ಹೋಳಿಗೆ ಲಟ್ಟಣಿಕೆ
ಇನ್ನೂ...ಅಟ್ಟವನ್ನೇರಿಲ್ಲವಲ್ಲ!!

ಚುಟುಕು


ಎದ್ರ ಕುಂದ್ರಸ್ಕೊಂಡ ಹಿಂಗ
ಈ ಸುಂದ್ರನ ರೂಪದ ಬಗ್ಗೆ
ಚೆಂದಾನ ಪದ್ಯ ಬರಿಯಾಕ
ಹತ್ತ್ಯಾಳಂತಂದ
ತಿಳ್ಕೊಬ್ಯಾಡ್ರಪಾ!!
ಮಳ್ಳಿ..!??
ಲಾಕ್ ಡೌನ್ ನ್ಯಾಗ
ಹಿಂಬದಿಗೆ ನಾಕ ಏಟ
ಬಿಳ್ಲೆಂತಂದ ಕಿರಾಣಿ
ಸಾಮಾನ ಬರ್ದ ಕೊಡಾಕ್ಹತ್ತಾಳ
ನಕ್ಕೊಂತ.