Monday, January 29, 2024

ಗಾಲಿಬ್...

ಗಾಲಿಬ್....

ಮುಗಿಲ ತುಂಬೆಲ್ಲಾ...‌‌ ಗರ್ಭ ಕಟ್ಟದ
ಮೋಡಗಳೆ ತುಂಬಿಕೊಂಡಿದ್ದರೆ ಏನು ಬಂದಿತು,
ಹುಳಿಯಾಡುವ ಮುನ್ನವೇ ಕಡೆದು
ಬೆಣ್ಣೆಯ ತೆಗೆಯದೆ ಹೋದರೆ ಏನು ಉಳಿಯುವುದು
ಗಾಲಿಬ್..
ಮಾತಿಲ್ಲದೆ...ಸುಮ್ಮನೆ ಗಾಳಿಗೆ ಚದುರಿ ಹೋಗುವ
ಮೋಡಗಳಂತೆ ದೂರ ಸರಿದು ಹೋದರೆ..!!
ಬಾಯಾರಿ, ಬಿರುಕು ಬಿಟ್ಟ ಎದೆಯ ಭಾವದ
ಬಯಲಿಗೆ ತಂಪನ್ನಾದರು ಎರೆಯುವುದಾದರು ಯಾರು?
ಇನ್ನೂ... ಹದಮಾಡದ ನೆಲದ ಮೇಲೆ
ವಿಷದ ಬೀಜವನ್ನು ಚೆಲ್ಲಿ ಹೋಗಿರುವರಲ್ಲ...
ಅದೆಂತಹ ಅದಮ್ಯ ನಂಬಿಕೆ ಅವರದ್ದು..!!


ಕಾಲ...ಕಾಲಭೈರವನ ಮಾತನ್ನೇ..ಕೇಳುವುದಿಲ್ಲ..!!
ಎಷ್ಟು ದೂರ ನಡೆದುಬರಲಿ ನಾನು...ನನ್ನ ಕಾಲೊಳಗಿನ
ಶಕ್ತಿಯು ಕುಂದುತ್ತಿದೆ ಗಾಲಿಬ್...
ಬಯಸಿದ್ದೆ ಮೂರು ಗಂಟು...ಬದುಕನ್ನೆ ಕಗ್ಗಂಟನ್ನಾಗಿ
ಮಾಡಿಬಿಟ್ಟರಲ್ಲ..!!
ಅರಿಷಿಣದ ದಾರವನ್ನು ಕುಣಿಕೆಯನ್ನಾಗಿಸಿ ನನ್ನೇದುರಿಗೆ
ಹಾಕಿರುವರು..!! ಕಣ್ಣುಮುಚ್ಚಿ ಕತ್ತನೊಡ್ಡುಬಿಡಲೆ..?
ಇಲ್ಲವೆ ಹೆದರಿ ಹಿಂದಕ್ಕೆ ಪಲಾಯನಗೈದುಬಿಡಲೆ...?
ಯಾವುದನ್ನು ಆಯ್ದುಕೊಳ್ಳಲಿ...

ಕಡ್ಡಿ ಮುರಿದ ಹಾಗೆ ಸಂಬಂಧವನ್ನು ಕಡೆದುಕೊಂಡು
ಹೋದರೆ ಹೇಗೇಳು....?
ಗಿಡದಿಂದ ಚಿವುಟಿದ ಮೇಲೂ ಹೂವಿನೆದೆಯಿಂದ
ಮಧುವು ಪಸರಿಸದೆ ಇರುವುದೇನು ಹೇಳು...?
ಗಾಲಿಬ್....
ಮುಂಬರುವ ಎಲ್ಲ ಬಂಜೆ ಸಂಜೆಗಳ ತೊಳಲಾಟಕ್ಕೆ
ಸುಂಕವನ್ನು ಕಟ್ಟುವವರು ಯಾರು..?
ಬುಲೆಟ್ ರೈಲಿನಲ್ಲಿ ಹೋದವರ ಹಿಂದೆ ಹೋಗಲು,
ನಾನು ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೇನೆ
ಅವರು ಸಿಗುವರೇನು..?


ಯೋಚಿಸುತ್ತಾ ಕುಳಿತುಕೊಂಡುಬಿಟ್ಟರೆ ಯೌವ್ವನ..?
ಯೌವ್ವನ ಸುಡುಗಾಡಿನ ಗೇಟನ್ನು ದಾಟಿರುತ್ತದೆ..!!
ನಡುಗುವ ಕೈಗಳನ್ನು ಹಿಡಿದು, ನಡೆದಾಡಲು ಬಾರದ
ಮೊಣಕಾಲು ನೋವಿನೊಂದಿಗೆ ಕರೆದುಕೊಂಡು ಹೋಗಲು ಬಂದರೆ....!! ಏನು ಮಾಡಲಿ..
ಗಾಲಿಬ್....
ನಾನೇನು ಮಾವಿನಕಾಯಿಯ ಗೊಟ್ಟವೆ..? ಉಪ್ಪು,
ಎಣ್ಣೆ, ಅರಿಷಿಣದ ಮಸಾಲೆಯೊಂದಿಗೆ ಬೆರಸಿ ಡಬ್ಬದಲ್ಲಿ
ಹಾಕಿಟ್ಟು.. ಮಾಗಿದ ಮೇಲೆ ಉಣ್ಣಲು..!!
ಹೆಣ್ಣು-ಹಣ್ಣಾಗಿರುವೆ.. ಕೊಳೆತು ತಿಪ್ಪೆಯ ಸೇರಿ ಹಂದಿಯ ಬಾಯಿಗೆ ಆಹಾರವಾಗುವ ಬದಲು...
ಗಿಣಿ ಕಚ್ಚಿಬಿಟ್ಟ ಹಣ್ಣಂತಾದರೂ ನಾನಾಗಬೇಡವೆ..?

No comments:

Post a Comment