Monday, March 17, 2025

ಸೇಡವು (ಚಿತ್ತಿ ಮಳಿಯಾಗ )

ಚಿತ್ತಿ ಮಳಿಯಾಗ ಮನಸಿನ ಚಿತ್ತಕ್ಕ
ಬೆಂಕಿ ಹಚ್ಚಿ ಕೂರಬೇಡ...
ಮತ್ತಿನ ಗಮ್ಮತ್ ಅರಿಯದ ಹುಡುಗನ
ತಲಿಗೆ, ನಿನ್ ಪ್ರೀತಿ ಅಮಲು ಎರಿಸಬ್ಯಾಡ..

ಜೋಳ ಬಿತ್ತಾಕ ಹದ ಮಾಡಿದ ಹೊಲದಂಗ
ನನ್ನೆದಿ ನೆಲದಾಗ ...ಪ್ರೀತಿ ಬೀಜ ಬಿತ್ತದನ...ವಿರಹದ ಕಸ ಬಿಳಿಸಿ ಹೋಗಬ್ಯಾಡ...
ಅನ್ನ.. ಕೊಡೊ ಭೂಮಿಗೆ ದುಡಿಯೊರ ಇಲ್ದಂಗ
ಆಗೈತಿ, ಅಂತದ್ರಾಗ...ನನ್ ದುಃಖಕ್ಕ ಯಾರ ಹೆಗಲ
ಕೊಡ್ತಾರ..

ಧರ್ಮರಾಯನ ಬಾಯಿಂದಲೂ ಅಧರ್ಮ
ನುಡದಿತ್ತಂತ... ಅಂತ ಬಾಯಿಲೆ ಏನು ಹೇಳಬ್ಯಾಡ...
ಮಾತೆಲ್ಲ ಮುತ್ತಾಗು..ವು ಕಣ್ಣಾಗ..!! ಆ ಕಣ್ಣಂಚಿದ
ನೋಡಿಬಿಡೊಮ್ಮೆ.. ಓದ್ಕೊಂಡು ಎದಿಯಾಗ ಮುಚ್ಚಿಟ್ಕೊಂಡಬಿಡ್ತೀನಿ ಕಪ್ಪೆಚಿಪ್ಪನಂಗ..

ಕೆರಿ ದಂಡಿ ಯಾವಾಗಲೂ ಮೆತ್ತಗ ಇರುವಂಗ
ತುಪ್ಪದಾಗ ಹುರದ ಮಾಡಿದ ಬೇಸನ ಉಂಡಿ
ಹಂಗ ಆಗೈತಿ‌ ಮನಸ್ಸು...!!
ಪ್ರೀತಿ ಹಾಲಿಗೆ ಹೆಪ್ಪ್ ಹಾಕತೀಯೊ ಉಪ್ಪ ಹಾಕತಿಯೋ
ಗೊತ್ತಿಲ್ಲ..
ಒಟ್ಟನ್ಯಾಗ ಒಡದ ಹಾಕಬ್ಯಾಡ ನೋಡ ಈ
ಹುಡುಗನ ಕನಸ್ಸು...!!

ಚುಟುಕುಗಳು

ಬಟ್ಟಲೊಳಗಿನ ಮಧುವನ್ನು
ನೋಡಿದಾಗಲೆಲ್ಲ... ಅವಳ
ಕೆಂದುಟಿಯ ರಂಗು
ನನ್ನೆದೆಯನ್ನು ಸುಡುತ್ತದೆ...!!
ಕಣ್ಣುಮುಚ್ಚಿ.. ಒಂದೇ.. ಗುಟುಕಿಗೆ
ಕುಡಿದುಬಿಟ್ಟೆ..!!
ಒಳಗಿಳಿದ ಮದ್ಯವೀಗ..
ತೊಂಡೆ ತುಟಿಗಳ
ಸವಿಯನ್ನು ನೆನಪಿಸುತ್ತಿದೆ...!!

ಅವಳು ಸುಮ್ಮನಿದ್ದಾಳೆ..!!
ನಾನು ಸುಮ್ಮನಿದ್ದೆನೆ..!!
ಜಗತ್ತೇಕೊ ನಮ್ಮಿಬ್ಬರ
ಕುರಿತು ಸುಮ್ಮನೆ ಕೂರುತ್ತಿಲ್ಲ..!!
ನಿನ್ನೆ..ಮೊನ್ನೆ..ನಾಳೆ..ನಾಡಿದ್ದು..
ಹೀಗೆ ದಿನಗಳನ್ನು ಎಣಿಸುತ್ತ
ಕುಳಿತಿದೆ...
ಸಮಯವೇನು ಇವರ ಗಡಿಯಾರದಲ್ಲಿ
ಯಾವಾಗಲೂ ಒಂದೇ ರೀತಿ
ಇರುತ್ತದೆ ಎನ್ನುವ ಭ್ರಮೆಯಲ್ಲಿ..!!


ಪ್ರೀತಿ ಕೆಟ್ಟದ್ದೆ..‌!!?
ಅವಳು ಕಡೆಗಣಿಸಿ
ಹೋದರೆ..‌!!
ಕುಡಿತ ಒಳ್ಳೆಯದೆ...
ಅದು ಬೇರೆಯವರು
ಕುಡಿಸಿದರೆ...!!

ಉರಿಯುವ ಕಟ್ಟಿಗೆಯ
ಮೇಲೆ ಮದ್ಯವನ್ನು
ಸುರಿದೆ...!!
ಬೆಂಕಿಯು ಮತ್ತಷ್ಟು
ಧಗಧಗಿಸತೊಡಗಿತು..
ಅದೇ ಮಧುವನ್ನು
ಗಂಟಲಿಗಿಳಿಸಿಕೊಂಡೆ
ಎದೆಯೊಳಗಿನ
ಬೆಂಕಿಯೆಲ್ಲ ತಣ್ಣಗಾಯಿತು..!!


ಪ್ರೀತಿಯೊಳಗಿನ
ಎಲ್ಲ ಸುಖ:-ದುಃಖಗಳನ್ನು
ಒದಗಿಸಿಕೊಟ್ಟ
ದೇವರು... ಬದುಕಿನ
ಪುಟದಲ್ಲಿ ಅವಳ
ಹೆಸರನ್ನು ಬರೆಯುವುದನ್ನೆ
ಮರೆತುಬಿಟ್ಟನೇಕೊ...?

ಮಾಡಿದ ಕರ್ಮಗಳನ್ನೆಲ್ಲ
ಇದೆ ಜನ್ಮದಲ್ಲಿ ಅನುಭವಿಸದೆ..
ಇನ್ನಾವ ನದಿಯಲ್ಲಿ
ಹೋಗಿ ತೊಳೆದುಕೊಳ್ಳಲಿ
ಗುರುವೆ....
ಗಂಗೆಯ ಮಗನಾದರೂ...
ಶರಶಯ್ಯಯೆ ಮೇಲೆ
ಮಲಗುವುದು ತಪ್ಪಲಿಲ್ಲ..!!
ನಾನು..? ಹುಲು ಮಾನವ
ತಪ್ಪಿಸಿಕೊಳ್ಳಬಲ್ಲೇನೆ...?