Wednesday, February 14, 2018

ನನ್ನುಸಿರನು ಬೇರಸಿ

ರನ್ನೆ.... ಎಷ್ಟೀದ್ದರೇನು ತಲೆಯಲ್ಲಿ ಹೇನು!!
ಬಾಚಿ, ಹೆಕ್ಕಿ ಹೊಸೆಯುವುದಿಲ್ಲವೆ ನಾನು ?
ಇರದಿದ್ದರೇನು ? ಹೇರಳುಗಳಿಗೆ ಎಣ್ಣೆ..
ನವೀರಾಗಿ ಬಾಚಿ..ಜಡೆಯ ಕಟ್ಟುವೆ ಕೇಳೆ ಜಾಣೆ
ಜಗದಲಿ ನಿನಗಿಂತಲೂ ಸುಂದರಿಯ ನಾ ಕಾಣೆ

ತುಂಬಿಲ್ಲವೆ ನಮ್ಮ ಬಾಳಲ್ಲಿ ಎಷ್ಟೊಂದು ಜೇನು !!
ತರು ಲತೆಗಳ ಮಿಲನಕರಳಿಲ್ಲವೆ ಮಡಿಲಲೊಂದು ಹೂವು
ಸಿರಿತನದ ಬೇಗುದಿಯೊಂದನು ಹೊರತುಪಡಿಸಿ
ಸುರಲೋಕದ ಸುಖವು ಸಂಕಟಗೊಳ್ಳುತಿಹುದು...
ನಮ್ಮಿಬ್ಬರ ನೋಡಿ..

ನಿನಗದೇಷ್ಟು ವಂದಿಸಲಿ ಕರುಣಾಮಯಿ...
ತುಳಿಯುವ ಸಪ್ತಪದಿ ಕಲ್ಲು ಮುಳ್ಳುಗಳ
ಹಾಸೆಂದರಿತಿದ್ದರೂ...ಕಣ್ಮುಚ್ಚಿ ನಡೆದುಬಂದೆ
ನನಗೆಂದೆ...ಹರಿದ ಸೀರೆಯ ಸೆರಗಂಚಲಿ
ಪ್ರೀತಿಯ...ಬುತ್ತಿಯನು ಕಟ್ಟಿ..ತಂದೆ

ಹೊಸ್ತಿಲಿಲ್ಲದವನ ಬೆನ್ನು ಬಿದ್ದು ಬಂದವಳೆ...
ಸೂರು... ನೆರಳಿಲ್ಲದ ತಿರುಕನಿಗೆ ಒಲಿದವಳೆ..
ಹಣಕೊಟ್ಟು ತರುವುದಿರಲಿ... ಊರ ತೋಟದ
ಹೂವೊಂದನು ಮುಡಿಸದವನಿಗೆ ಒಲಿದ ಲಕ್ಷ್ಮೀಯೆ..
ಕಾಪಾಡಿಕೊಳ್ಳುವೆ ಹುಡಿಯೊಳಗಿನ ಲೋಹಕ್ಕಿಂತಲೂ ಹೆಚ್ಚಾಗಿ

ಹೊತ್ತಿನನ್ನವ ಕುಚ್ಚಲು... ಮಣ್ಣ ಮಡಿಕೆಯೂ
ಇಲ್ಲದವನ ಮಡದಿಯಾದವಳೆ...
ಹೊತ್ತೊತ್ತಿಗಿಲ್ಲದಗುಳಿಗೆ ಬತ್ತಿದೆಯನು ಕಂದನು
ಗೀರುವ... ನೋವ ಸಹಿಸಿಕೊಳ್ಳುವವಳೆ
ನೋವೆಲ್ಲ ನನಗಿರಲಿ.. ನಗುವೊಂದೆ ನಿನಗಿರಲೆನ್ನುವವಳೆ..

ಏನು ಕೊಡಲೆ... ಮಡದಿ ನಿನ್ನೀ... ತ್ಯಾಗಕೆ
ಸರಿದೂಗುವುದೆ..ನಿನ್ನೊಲವಿಗೆ ನಿರ್ಜೀವ ಕಾಣಿಕೆ
ನೀನೊಬ್ಬಳು ಬೆಲೆ ಕಟ್ಟಲಾಗದ ಅವತಾರ ಕನ್ನಿಕೆ
ಏನಿದೆ... ನನ್ನಲಿ ನಿನ್ನೊಲವೊಂದನು ಹೊರತುಪಡಿಸಿ
ಮಲಗಿಬಿಡುವೆ ಸುಮ್ಮನೆ.... ನಿನ್ಮಡಿಲಿಗೆ, ನಿನ್ನುಸಿರಿಗೆ
ನನ್ನುಸಿರನು ಬೇರಸಿ

ಬಿಟ್ಟದ್ದು ಚು. ೪೧೮

ನಿನ್ನ ಒಲವಿನ
ಸುಳಿಯಲ್ಲಿ ಸಿಕ್ಕಿ ಬಿದ್ದದ್ದು
ನಾನೆ ಎಂದು ಎಲ್ಲರಿಗೂ
ಗೊತ್ತಿತ್ತು... ನಿನಗೂ ಸಹ..!!!
ಒಬ್ಬರದಾರೂ ಕೈ ಹಿಡಿದೆತ್ತಲಿಲ್ಲ
ನೀನಿರುವೆ ಎಂದು.
ಅವರಾರಿಗೂ...
ಗೊತ್ತೆ...ಇರಲಿಲ್ಲ
ನೀನೆಂದೊ...
ನನ್ನ ಕೈಯನ್ನು
ಬಿಟ್ಟದ್ದು..

Tuesday, February 13, 2018

ಯೌವ್ವನ ಚು.೪೧೭

ಯೌವ್ವನ ಅರೆತು
ಬಾಳಿದರೆ ದೀವಿಗೆ...
ಮರೆತು ಬದುಕಿದರೆ
ಬರೀದೆ ಕೊಡವದು
ಮುಪ್ಪಿಗೆ..

ಶಾಯರಿಗಳು ೧

ನಿನ್ನ ಕೈಯೊಳಗಿನ ಅಮೃತವ
ಕುಡಿದು..ಕುಡಿದು ಸತ್ತನೆಂದರೆಲ್ಲರೂ...
ಸಾಕೀ...
ಅವರಿಗೆಲ್ಲ ಏನು ಗೊತ್ತು ?
ಅವಳಿಲ್ಲದೆ ಬಿಕ್ಕುತ್ತಿದ್ದ ಜೀವಕೆ
ಹನಿ..ಹನಿಯನು ಹಾಕಿ
ನೀ....ಉಳಿಸಿಕೊಂಡದ್ದು..!!
****

ನಿನ್ನ ಮುಂದೆ ಪದೆ ಪದೆ
ಸೋಲುತ್ತಿರುವೆ..
ಗೆಲ್ಲಲಾಗಲಂದಲ್ಲ..
ದಾಸನಾಗಲೆಂದು..!!!

ಶಾಯರಿಗಳು

ಅವಳೊಂದಿಗಿನ ಕಳೆದ ಮಧುರ
ನೆನಪುಗಳನ್ನೆಲ್ಲವ  ನೆನೆದಾಗ...
ನೀ...ಸುರಿದ ಮದಿರೆಯು
ಕಹಿಯಾಗುವುದು ಸಾಕೀ...
ಬದುಕಿನ ಬಿಂದಿಗೆಗೆ ವಿರಹದ
ವಿಷವನ್ನೆ ತುಂಬಿರುವವಳಲ್ಲ....
ಬದುಕಲೇನಿದೆ ಬಾಕಿ..
ಮರೆಯುವ ಮಾತದು...ಮರತೆ
ಹೋಗಿರುವಾಗ...!!!

Saturday, February 10, 2018

ಬೆಸುಗೆ

ಗೆಳತಿ...
ಎದೆಯೊಳಗಿನ ಒಲವ ಝರಿ
ಬತ್ತಿ ಹೋಗುವುದೆಂಬ ಭ್ರಮೆಯ
ಮರೆತುಬಿಡು... ಗೊತ್ತಿಲ್ಲದಿರುವುದೆ ನಿನಗೆ ?
ಅದನ್ನು ನಾನೆ ಚಿಮ್ಮಿಸಿರುವುದೆಂದು..!!
ನಿನ್ನ ಸೌಂದರ್ಯ ಗಣಿಯ ಮುಂದೆ
ಎಂತಹ ಹಳಸಲು ಪದಗಳು... ಸ್ವರ್ಣ
ಲೇಪನವ ಹೊಂದುವವು...
ಹಾಡಲೆಂದು ಕುಳಿತಾಗಲೆಲ್ಲ ಗಂಟಲು
ಕಟ್ಟಿ ಬರುವುದು...ಸನಿಹದಲಿ
ನಿನ್ನನುರಾಗವಿಲ್ಲದುದನು ಅರಿತು..
ಮರಭೂಮಿಯನಾಗಿಸಿಕೊಳ್ಳದಿರು
ಮನವನು...ಒಲವ ಸುಧೆಯ ಎಷ್ಟೇ
ಸುರಿಸಿದರೂ... ದಾಹತೀರದ ಒಡಲದರದ್ದು...
ಬರಿಯ ಇಬ್ಬನಿಯನೆ ಅಪ್ಪಿ...
ಫಲ ಕೊಡುವ ಮಣ್ಣಾಗು...
ನನ್ಮನವ ಅರಿತು... ಟೀಸಿಲಿನ
ಪ್ರೇಮ ಕೊಂಡಿಗೆ ಬೆಸುಗೆಯಾಗು...

Thursday, February 8, 2018

ಮೀನ ಮೇಷವೇಕೆ

ಸದ್ದಿಲ್ಲದೆ ಮನದಂಗಳದಿ ಪ್ರೀತಿ
ಬಳ್ಳಿಯ ನೆಟ್ಟವಳೆ...
ಒಳಬರಲಿಂದು ಅಪ್ಪಣೆಯು ಬೇಕೆ ?
ನನ್ನೆದೆಯ ನಗುವಿನ ತಿಜೋರಿಯ
ಕೀಯನು ಹೊತ್ತೊಯ್ದವಳೆ....
ಅವಸರಿಸಿ ಬರಲು ಇನ್ನೂ..
ಮೀನ ಮೇಷವೇಕೆ ?