Monday, August 14, 2023

ರಂಗೀ

ಕೇವಲ.... ಅವಳ ನಗೆಯ
ಸದ್ದನ್ನು ಕೇಳಿ.. ಎದೆಯ ಹಕ್ಕಿ
ಬೇಟೆಗಾರ ಬಿಸಿದ ಬಲೆಗೆ ಸಿಕ್ಕು 
ವಿಲವಿಲನೆ ಒದ್ದಾಡುವಂತೆ
ಮಾಡಿಬಿಟ್ಟಿದೆ ರಂಗೀ...
ಇನ್ನವಳು... ಎದುರಿಗೆ 
ಬಂದು ಬಿಟ್ಟರೆ...!! 

ರಂಗೀ


ಅವಳು ಹೊರಟು 
ಹೋದ ಮೇಲೆ... ಹೆಚ್ಚು
ಗಾಬರಿಗೊಂಡುಬಿಟ್ಟಿದ್ದೆ..!!
ಜಗತ್ತು ನನ್ನ ಬಗ್ಗೆ ಏನೆಲ್ಲ
ಯೋಚಿಸುತ್ತದೆ ಅಂತಾ
ರಂಗೀ....
ಯಾವ ಮಣ್ಣಿನಲ್ಲಿ...
ಮಡಿದ ಯೋಧರನ್ನು 
ನೆನಪಿಸಿಕೊಳ್ಳುವುದಿಲ್ಲವೊ
ಅಂತವರು ನನ್ನ ಬಗ್ಗೆ ಯಾವ
ರೀತಿಯ ಕಾಳಜಿಯನ್ನು ಮಾಡುತ್ತಾರೆ
ಬಿಡು...

ಯಾರೋ... ಹೇಳಿದರು
ಅವಳ ಕೆನ್ನೆ ರೇಷ್ಮೆಗಿಂತಲೂ
ಮೃದುವಾಗಿದೆ ಎಂದು
ರಂಗೀ....
ಮುಟ್ಟಲು ಹೋದೆ..!!
ನನ್ನ ಕೆನ್ನೆಗೆ ಕರೆಂಟ್
ಹೊಡೆದಂತಹ
ಅನುಭವವಾಯಿತು..!!

ಅವಳು ಕೈ ಬಿಟ್ಟಳೆಂದು
ನನ್ನ ಪಾಲಿನ ಜಗತ್ತು
ಮುಗಿದು ಹೋಯಿತೆಂದು
ಕಣ್ಮುಚ್ಚಿಕೊಂಡು ಬಿಟ್ಟೆ
ರಂಗೀ....
ಅಲ್ಲಿ ನನ್ನ
ತಾಯಿ ಕಂಡಳು....
ಮತ್ತೊಂದು ಹೊಸ
ಜಗತ್ತು ತೆರೆದುಕೊಂಡಿತು.

ಆ ದೀಪವನ್ನು
ಆರಿಸಿಬಿಡು 
ರಂಗೀ....
ಬಾಳಲ್ಲಿ ಬೆಳಕಾಗ 
ಬೇಕಾದವಳೆ,
ಎಂದೋ...ಕತ್ತಲೆಗೆ
ದೂಡಿ ಹೋಗಿದ್ದಾಳೆ...

ಎದೆಯ ದುಃಖವನ್ನು
ಯಾರೊಂದಿಗೂ ನಾನು
ಹಂಚಿಕೊಳ್ಳಲಾರೆ... ಬೇಕಿದ್ದರೆ
ಚೂರು ವಿಷವನ್ನು ಕೊಟ್ಟುಬಿಡಲಿ
ನುಂಗಿ ಬಿಡುತ್ತೇನೆ...!!
ರಂಗೀ...
ಆ ವಿಷವು ನನ್ನನ್ನು ಕೊಲ್ಲುವುದು
ಇಲ್ಲವೋ... ಗೊತ್ತಿಲ್ಲ..!!
ಅಷ್ಟೊಂದು ನಂಜೆರಿಬಿಟ್ಟಿದೆ
ದೇಹದಲ್ಲಿ..

ದುಃಖವು ಒಂದು 
ಸಿರಿಯಲ್ಲವೇನು..?
ಎಲ್ಲರಿಗೂ ಅದನ್ನು ಹೇಗೆ
ಹಂಚುತ್ತಾ... ಬರಲಿ
ರಂಗೀ....
ಬಟ್ಟಲು ಮದಿರೆಗೆ
ಜೊತೆಯಾದವರು...
ನೋವಿನಲ್ಲಿ 
ಬಾಗಿಯಾಗುವರೇನು?

ಪಾಪ ಕಳೆಯುತ್ತವೆ ಎಂಬ
ಎಲ್ಲ ಹರಿಯುವ ನೀರಿನಲ್ಲೂ
ಅಂಗೈಯನ್ನು ಉಜ್ಜಿ...ಉಜ್ಜಿ
ತೊಳೆದುಕೊಂಡೆ
ರಂಗೀ...
ಕಾಣಿಸಲೆ... ಇಲ್ಲ..
ಯಾವುದು ಇರಬಹುದದು..!!
ಅವಳನ್ನು ಒಲಿಸಿಕೊಂಡವನ
ಅಂಗೈಯ ರೇಖೆ..

ಅವಳ ಕಣ್ಣಂಚಿನಿಂದ
ನನ್ನೆದೆಗೆ ನಂಜನ್ನು
ಸುರಿದುಬಿಟ್ಟರೂ ಸಾಕಿತ್ತು...
ರಂಗೀ...
ಒಲವಿನ ನಶೆಯನ್ನೆ...
ಏರಿಸಿಬಿಟ್ಟಳು...
ವಿರಹದ ನಗರಕ್ಕೆ
ನಾನೇ ರಾಜನೀಗ..

ಏನೂ... ಗೊತ್ತಿಲ್ಲದ
ಅಮಾಯಕ ನಾನು
ನಡೆಯತ್ತಿದ್ದೆ ಬೀದಿಯಲ್ಲಿ
ರಂಗೀ....
ಅವಳು ನಕ್ಕುಬಿಟ್ಟಳು
ಬದುಕಿನ ಹಾದಿಯೆ
ಬದಲಾಗಿ ಹೋಯಿತು..!!

ಹೇಳಿದ ಅದೇಷ್ಟೊ..
ಮಾತುಗಳಿಗವಳು
ಕಿವಿಯಾಗಲೆ ಇಲ್ಲ
ರಂಗೀ...
ಹಿತ್ತಲಿನಲ್ಲಿ ಹಚ್ಚಿದ್ದ
ಹೂವಿನ ಗಿಡಗಳು
ಬಾಡಿ ಹೋಗುತ್ತೀವೆ..

ಹುಟ್ಟಿದವರ ಕೊನೆಯ
ನಿಲ್ದಾಣ ಇದೆ...ತಾನೇ..?
ನಾನೇನು ಹೊತ್ತು ತರಲಿಲ್ಲ
ರಂಗೀ....
ನನ್ನವರೇ...ಇಲ್ಲಿ
ನನ್ನನ್ನು ಸುಟ್ಟು
ಹಾಕಿದರು....

ಅವಳು ನನ್ನನ್ನು
ಬದಲಿಸಿದಳು....
ಜಗತ್ತು ನನ್ಮನ್ನು
ಬದಲಿಸಲಿಲ್ಲ..!
ರಂಗೀ..
ಜಗತ್ತಿಗೆ ನನ್ನ
ಅವಶ್ತಕತೆ ಇತ್ತು
ಅವಳಿಗೆ ಮಾತ್ರ ನನ್ನ
ಜರೂರತ್ತು ಇರಲಿಲ್ಲ.

ಎಲ್ಲರೂ...ಕೇಳಿದರು
ನಿನ್ನೆದೆಗೆ ಗಾಯವನ್ನು
ಮಾಡಿದವರು ಯಾರು..?
ರಂಗೀ...
ಹೇಗೆ ಹೇಳಲಿ....
ಆಕೆಯಿನ್ನೂ... ಮುಖದ
ಪರದೆಯನ್ನೆ ಸರಿಸಿಲ್ಲ..!!

ಕೇವಲ.... ಅವಳ ನಗೆಯ
ಸದ್ದನ್ನು ಕೇಳಿ.. ಎದೆಯ ಹಕ್ಕಿ
ಬೇಟೆಗಾರ ಬಿಸಿದ ಬಲೆಗೆ ಸಿಕ್ಕು 
ವಿಲವಿಲನೆ ಒದ್ದಾಡುವಂತೆ
ಮಾಡಿಬಿಟ್ಟಿದೆ ರಂಗೀ...
ಇನ್ನವಳು... ಎದುರಿಗೆ 
ಬಂದು ಬಿಟ್ಟರೆ...!! 

ಇಂದವಳ ಪಾದವನ್ನು
ಸ್ಪರ್ಶಿಸಿದೆ ರಂಗೀ...
ಹೂವಿಗಿಂತಲೂ...
ಮೃದುವಾಗಿದೆ ಆದರೂ
ಅದರೊಳಗಿನ ಗಂಧ
ಇಲ್ಲಿ ಸಿಗಲಿಲ್ಲ..

Friday, August 11, 2023

ರಂಗೀ-ಗೆಳೆಯ



ಹೋಗಲಿ ಬಿಡು,
ಊರು ನೂರು
ಮಾತನಾಡುತ್ತದೆ
ಗೆಳೆಯ...
ಒಂದು ಮಾತಿಗಾಗಿ
ಇಲ್ಲೊಂದು ಜೀವ
ಕಾದಿದೆ..!!
ನೆನಪಿಲ್ಲದೆ ಹೋದೆಯಾ...?

ನಾನು ಹೀಗೆ
ಬರೆದ ಅದೇಷ್ಟೋ....
ಪತ್ರಗಳಿಗೆ ಅವಳು
ಉತ್ತರಿಸಲೆ...
ಇಲ್ಲ..!! ರಂಗೀ....
ಅರ್ಧಂಬರ್ದ ಕಲಿತಿದ್ದ
ರದ್ದಿ ಅಂಗಡಿಯ
ಮಾಲೀಕ, ಅಲ್ಲಿ
ನನ್ನ ಕವಿತೆಗಳನ್ನು
ಓದುತ್ತಿದ್ದ..!!

ಹಳಿಯ ಮೇಲೆ 
ಹೊರಟಿರುವ ಬೋಗಿಗಳಲ್ಲಿ
ನಮ್ಮವರೆಂದು ಯಾರು
ಇಲ್ಲ...!!
ಜಾನೇಮನ್...
ಕುಳಿತುಕೊಂಡರೆ ಇಲ್ಲಿಯೆ
ಕೂರಬೇಕಾಗುತ್ತದೆ...
ಎದ್ದೇಳು ಏನನ್ನಾದರೂ
ಸಾಧಿಸೋಣ...
ನಾಳೆ ಸಾಯಲೆಬೇಕು...!!!
ಆ ಸಾವಿಗಾದರೂ 
ಒಂದು ನ್ಯಾಯ ಸಿಗಬೇಕಲ್ಲವೆ..!!

ಕಾಲಡಿಯಲ್ಲಿ 
ಒಲವನ್ನೇನೂ...
ಹಾಕಬೇಡ!!
ನಂಬಿಕೆಯನ್ನುವ 
ಬುನಾದಿಯನ್ನು
ಸುರಿದುಬಿಡು.. 
ಹೊತ್ತು ನಡೆದು ಬಿಡುತ್ತೇನೆ
ಬದುಕನ್ನು...
ಉಸಿರಿರುವ ತನಕ!!

ಒಲವೆಂದೋ...
ಉಸಿರುಗಟ್ಟಿ ಹೋಗಿದೆ
ಮೌನದ ಕುಣಿಕೆಯಲ್ಲಿ..!!
ಕುದಿಯುವ ಹಾಲಿನಲ್ಲಿ
ಬಿದ್ದು ಒದ್ದಾಡುವ 
ಹಲ್ಲಿಯಂತಹ ಪಾಡಾಗಿ
ಹೋಗಿದೆ ಈಗ
ಬದುಕಿನಲ್ಲಿ..!!

ಯಾರ ಎದುರಿಗೆ
ತಲೆ ಎತ್ತಿ ಬಾಳಬೇಕೆಂದು
ನಿರ್ಧರಿಸಿಕೊಂಡಿರುತ್ತೇವೆಯೋ...
ಅಂತವರ ಮುಂದೆಯೆ ಬದುಕು
ಒಮ್ಮೊಮ್ಮೆ ನಮ್ಮನ್ನು
ಚಿಲ್ಲರೆಯನ್ನಾಗಿಸಿಬಿಡುತ್ತದೆ...!!
ರಂಗೀ...
ಇಂತಹ ಸಂದರ್ಭದಲ್ಲೂ..
'ನಾನು' ತಲೆಬಾಗಿಸಿಕೊಂಡೆ
ಇರುತ್ತೇನೆ... ಯಾಕೆಂದರೆ
ಪ್ರತಿ ಸಾರಿ ತೂರಿದ ನಾಣ್ಯ
ಬಕ್ಕಾ (ರಾಣಿ)ವಾಗಿ
ಬಿಳುವುದಿಲ್ಲ... ಅಲ್ಲವೆ..?

ಹಿಂದೆ ಆಡಿಕೊಳ್ಳುತ್ತಾರೆ
ಎಂದ ಮಾತ್ರಕ್ಕೆ
ಮುಡಿಗೆ ಮಲ್ಲಿಗೆಯನ್ನು
ಮುಡಿಯದೆ ಇರಲಾದಿತೇನು..?
ಗೆಳೆಯ...
ಉಪ್ಪನ್ನು ಸುರಿಯಲೆಂದೆ
ನಿಂತವರಿಗೆ... ಹಾಲಾದರೇನು?
ಅನ್ನವಾದರೇನು?


ರಂಗೀ...

ಜಗತ್ತಿನ ಬಗ್ಗೆ ನೀನು
ಯಾವತ್ತೂ ತಲೆಯನ್ನು
ಕೆಡಸಿಕೊಳ್ಳಬೇಡ..!! ಅದು
ಯಾವಾಗಲೂ ಸುಟ್ಟು ಉರಿದು
ಬೂದಿಯಾಗುವುದನ್ನೇ....
ಕಾಯುತ್ತಿರುತ್ತದೆ ರಂಗೀ....
ನಮ್ಮ ಬುಡಕ್ಕೆ ನಾವೆ...
ನೀರೇರೆದುಕೊಳ್ಳಬೇಕು..!!
ಬಿರುಗಾಳಿಗೂ ಬೇರುಗಳು
ಜಗ್ಗದಂತೆ..!!

ನಿನ್ನದೊಂದು ಸಿಹಿಯೋ..ಅಥವಾ
ಕಹಿ ಮುತ್ತಿಗಾಗಿ ನಾನು
ಬೇಲಿ ಮೇಲಿನ ಹೂವಾಗಿ
ಅರಳಿಬಿಡುತ್ತೇನೆ
ಗೆಳೆಯ...
ಮತ್ತೊಂದು ದುಂಬಿಯ
ದಾಳಿಗೆ ಸಿಕ್ಕು ನಲುಗಿ
ಹೋಗದಂತೆ
ಕಾಪಿಟ್ಟುಕೊಳ್ಳುವೇಯಾ..?

ಇಲ್ಲಿ...ಹೂವಾದರೇನು?
ಹೆಣ್ಣಾದರೇನು..? ಸೌಂದರ್ಯದ
ಘಮಲಿನಮಲು ಇರುವವರೆಗೆ
ಮಾತ್ರ ಬೆಲೆ
ಗೆಳೆಯ...
ಆಸ್ವಾದಿಸುವವರೆಲ್ಲ
ರಸಿಕರೆ..? ಎಂದು ಹೇಗೆ
ಕರೆಯಲಿ... ಮುಡಿಯ
ಮಲ್ಲಿಗೆಯನ್ನೆ.. ಹೊಸಕಿ
ಹಾಕುವ ಜನರಿಹರಿಲ್ಲಿ...!!

ನೀನು ಹೊರಟು ಹೋದ
ದಾರಿಯನ್ನೇನು...ನಾನು
ನೆನಪಿಟ್ಟುಕೊಂಡಿಲ್ಲ
ಗೆಳೆಯ...
ಬರುವ ಹಾದಿಯನ್ನೆ
ಕಾಯುತ್ತಿದ್ದೇನೆ...!!
ಕವಲಾಗಿಸಿಬಿಡಬೇಡ

ಯಾಕೇ....
ಎಲ್ಲರೂ ನೋವಿನಲ್ಲಿರುವಾಗ
ವೀಣೆಯನ್ನೆ...ನುಡಿಸುತ್ತಾರೆ
ಎಂಬುದು ನನಗರಿವಾಗಿರಲಿಲ್ಲ
ಗೆಳೆಯ...
ಈಗರಿವಾಯಿತು... ನೋಡು
ಬಿಟ್ಟು ಹೋದ ನಿನ್ನ ನೋವಿನ
ನೆನಪುಗಳ ತೊಡೆದು
ಹಾಕಲು ಈ ತಂತಿಗಳ
ನಾದವೇ.... ಮದ್ದೆಂಬುದು..

ಹೂವಿನಂತವಳು....ನೀ
ಹೂವಿಗೆ ನೋವು ಕೊಟ್ಟರೆ
ಹೇಗೆ ಹೇಳು..
ರಂಗೀ...
ಚುಚ್ಚು ಮಾತುಗಳಿಂದ
ನನ್ನೆದೆಯನ್ನು
ಇರಿದಿದ್ದೆ ಸಾಕಿತ್ತು..!!

ಯಾವ ಧರ್ಮದ
ದೇವರನ್ನು ಅಮೃತ ಶಿಲೆಯಲ್ಲಿ
ಕೆತ್ತಿಸಿಟ್ಟರೇನಾಯಿತು?
ಪೂಜಿಸುವ ಎದೆಗಳೆ
ಕಲ್ಲಾಗಿ ಹೋಗಿರುವಾಗ..!!!
ರಂಗೀ...
ಕತ್ತಲು... ಕಳೆದು, ಬೆಳಕನ್ನು
ಸಂಭ್ರಮಿಸುವುದಾದರು
ಯಾವಾಗ..? ಪ್ರೀತಿಯನ್ನು
ಹಂಚುವ ಕೈಯಲ್ಲಿ
ಬಂದೂಕನ್ನು ಹಿಡಿದಿರುವಾಗ..!!!

ಕಜಲ್

ಮಸೀದಿ-ಮಂದಿರ ಚರ್ಚಗಳೆಲ್ಲ ಬಿಕ್ಷೆ
ಬೇಡುವ ಕೇಂದ್ರಗಳಾಗಿ ಮಾರ್ಪಟ್ಟು ಬಿಟ್ಟಿವೆ..!!
ಡೇಬಿಟ್/ಕ್ರೇಡಿಟ್ ಕಾರ್ಡಗಳಿದ್ದರೆ ಮಾತ್ರ... ಕಲಿಯಗದ
ಶ್ರೀಮಂತ ಅಲ್ಲಾ-ಯೇಸು-ದೇವರುಗಳ ದರ್ಶನ
ವಾಗುವುದು ಸಾಕಿ...
ದೇಹಿ ಎಂದು ಹೋದವರೆಲ್ಲ... ದೀನವಾಗಿ
ಸುಡು ಬಿಸಿಲಿನಲ್ಲಿ, ಕಂಕುಳಲ್ಲೊ..ಹೆಗಲ ಮೇಲೊ
ಮಕ್ಕಳನ್ನು ಹೊತ್ತುಕೊಂಡು ಕಾಯುತ್ತಿರಬೇಕಷ್ಟೆ..!!

ಅವರು ಮೆಕ್ಕಾಗೆ ಹೋದರೆ, ಇವರು ಕಾಶಿಯನ್ನು
ಸುತ್ತಿ ಬಂದರು ಮತ್ತವರು ಜೆರುಸೇಲಂ ಗೆ ಹೋಗಿದ್ದರು
ಮತ್ತೊಂದಿಷ್ಟು ಜನ..... ಹಾಲು-ತುಪ್ಪ
ಕುರಿ-ಕೋಳಿಗಳನ್ನು ಬಲಿ ಕೊಡುವ ದೇವ-ದೇವತೆಯರನ್ನು
ಪೂಜಿಸಿದರು-ಆರಾಧಿಸುತ್ತಿರುವರು ಸಾಕಿ...
ಅಲ್ಲಿ, ಇಲ್ಲಿ, ಮತ್ತೆಲ್ಲಿಗೋ... ಹೋಗಿ ಬಂದವರು
ಸಂತರಾದರೂ..? ಸಮಾಜಕ್ಕೆ ಮಾದರಿಯಾದರೂ..?
ಲೋಕೊದ್ಧಾರಕರಾದರೊ..? ಹೋಗಲಿ ಮನೆಯನ್ನು
ಬಿಡಿ... ಮನಸ್ಸಿಗಾದರೂ ಶಾಂತಿ ದಕ್ಕಿದೇಯಾ..?

ಯಾವ ಕಂಪೋಡಿನ ಹತ್ತಿರ ಹೋದರೂ...
ಕಾಮದ ಘಮಟು ವಾಸನೆ ಮೂಗಿಗೆ ಬಡೆಯುತ್ತದೆ..!!
ಕಟ್ಟಡಗಳ ಯಾವ ಮೂಲೆಯೂ ಸಾಕಾಗುತ್ತಿಲ್ಲ
ಕಂತೆ..ಕಂತೆಗಳ ಮೂಟೆಯನ್ನು ಒಟ್ಟಲು
ಸಾಕಿ....
ಕೋರ್ಟಿನ ಕಟಕಟೆಗಳಿಗೂ ಗೆದ್ದಲು ಹತ್ತಿರಬಹುದು!
ಜೈಲಿನ ಕಂಬಿಗಳಿಗೂ.. ತುಕ್ಕು ಹಿಡಿದಿರಬಹುದು..!!
ಶಿಕ್ಷೆಯನ್ನು ಬರೆಯುವ ಲೇಖನಿಯ ಮಸಿಯು ಮಂಕಾಗಿರಬಹುದು...!!
ಎಲ್ಲವನ್ನೂ... ಗೆದ್ದವೆಂದುಕೊಂಡವರು... ಮೇಲಿನವನ
ಲೆಕ್ಕದಿಂದ ನುಣುಚಿಕೊಳ್ಳಬಲ್ಲರಾ...?

ಕಜಲ್


ಇಲ್ಲಿ ನೋವನ್ನು ಜನ ಹೇಗೆ ಕೊಡುತ್ತಾರೆಂದರೆ...
ಹಾಲಿನಲ್ಲಿ ಸಕ್ಕರೆ ಹಾಕಿ ಕಲಿಸಿದಷ್ಟು ಸಲೀಸಾಗಿ...
ಹುಳಿಯನ್ನು ಹಿಂಡಿ ಕೊಡುತ್ತಾರೆ...
ಸಾಕಿ....
ಆದ ಗಾಯದ ಬೆನ್ನನ್ನು ತೋರಿಸಿದೆ...!!
ಗೀರಿ...ಚೂರಿ... ತುರಿಸಿ...ತುರಿಸಿ ಇದೇ...
ಏನದು ಎನ್ನುತ್ತಾ...ನಂಜನ್ನು ಸೇರಿಸಿಬಿಟ್ಟರು...

ಅಬ್ಬೋ... ಮಾತಿನಲ್ಲೂ... ಅದೆಂತಹ ನಾಟಕೀಯತೆ!!
ಊಸರವಳ್ಳಿ ಏನಾದರು ಇವರ ನವರಂಗಿ
ಆಟವನ್ನು ನೋಡಿದ್ದರೆ... ತಾನೆ ಆತ್ಮಹತ್ಯೆಯನ್ನು
ಮಾಡಿಕೊಳ್ಳುತ್ತಿತ್ತೇನೊ..?
ಸಾಕಿ...
ಮುಂಜಾನೆಯ ಮಾತು ಸಂಜೆಗಿಲ್ಲ... ರಾತ್ರಿಯ
ಕಥೆ ಬೆಳಿಗ್ಗೆ ಇಲ್ಲ...!! ಬೂಟಾಟಿಕೆಯ ರಂಗಮಂಚದಲ್ಲಿ
ಇವರಿಗೊಂದು ನಾನು ಚಾಟಿ ಬೀಸಿ ಆಡಿಸುವ
ಬುಗುರಿಯಂತೆ..!!

ಅದೆಂತಹ ನಿರ್ಲಜ್ಜತೆ ಅವರ ನಡೆ-ನುಡಿಗಳಲ್ಲಿ..!!
ಆಚಾರ-ವಿಚಾರಗಳ ತೋಳಲಾಟದ ಕೆಸರಿನಲ್ಲಿ
ಅದ್ದಿ ತೆಗೆದು, ನಡು ಬೀದಿಯಲ್ಲಿ ನಿಲ್ಲಿಸಿ ಬಿಡುತ್ತಾರೆ
ಸಾಕಿ....
ಗುಡಿ-ಗುಂಡಾರಗಳನ್ನು ಕಟ್ಟಿದಷ್ಟು ಸುಲಭವಾಗಿ
ಮನೆಯನ್ನು ಕಟ್ಟಲಾದಿತೇನು?
ತಿಂದು-ತೇಗಿ ಬಲಿತ ಕೋಣಗಳಾಗಿರುವ ಇವರನ್ನು
"ಡಯಟ್" ಮಾಡಿಸಿ, ಸರಿ ದಾರಿಗೆ ತರುವುದು
ಸುಳಿದ ಬಾಳೆ ಹಣ್ಣಿನಷ್ಟು ಸಲೀಸೇನು?

ಕಜಲ್

ನಿನ್ನ ಅವಳ ಪ್ರೇಮ ಚರಿತ್ರೆಯನ್ನು
ಬರೆದ ಗೋಡೆಗಳ ಮೇಲೀಗ, ಎಲೆಯಡಿಕೆ
ಜಗಿದುಗುಳಿದ ಕೆಂಪು ಕಲೆಯಿಂದಲೆ ತುಂಬಿ ಹೋಗಿದೆ
ಗಾಲೀಬ್...!!
ಅದಕ್ಕೂ... ಇನ್ನೇನು ಕೆಲವೆ ದಿನಗಳಲ್ಲಿ
ಬಣ್ಣವನ್ನು ಬಳೆದುಬಿಡುತ್ತಾರೆ..!!
ಹಚ್ಚಿದಷ್ಟು ನೆರೆತು ಹೋಗುವ ತಲೆಗೂದಲುಗಳಿಗೆ
ಸವರಿದಂತೆ

ಮಧುಶಾಲೆಯಿಂದ ಎದ್ದು ಹೋದವರು...
ಮರಳಿಬಂದ ಇತಿಹಾಸವೇ.. ಇಲ್ಲ..!!
ಅವರೇನು ಭೋದಿ ವೃಕ್ಷದ ಕೆಳಗೆ ಕುಳಿತು
ಜ್ಞಾನವನ್ನೇನು ಹೊಂದಲಿಲ್ಲ.... ಬದಲಾಗಿ
ಆ ಮರದ ಬೇರಿಗೆ ಗೊಬ್ಬರವಾಗಿ ಮಣ್ಣಾಗಿ ಹೋಗಿದ್ದಾರೆ
ಗಾಲೀಬ್...
ಅವರಿಗೆ ಮೊದಲೆ ಹೇಳಿದ್ದೆ.. ನಾನು ಕೊಡುವುದು
ಅಮೃವಲ್ಲ ವಿಷವೆಂದು..ಆದರೂ.. ಗುಟುಕರಿಸಿ
ಕುಡಿಯುತ್ತ, ನಗುತ್ತ, ಅಳುತ್ತ, ನೋವನೆಲ್ಲ ಗೆದ್ದವರ
ಹಾಗೆ ಬೀಗುತ್ತಿದ್ದರಷ್ಟೆ...

ಅವಳ ಪಾದವ ತೊಳೆದು ನೀರು
ಕುಡಿದವರೆಲ್ಲ... ನನ್ನ ಮಧು ಶಾಲೆಯ
ಮಧುವನ್ನು ಹೀರದೆ ಹೋದವರೇನು..?
ಗಾಲಿಬ್...
ಬದುಕಿನ ಕೊನೆಯ ಉಸಿರಿನವರೆಗೂ ಅವಳೆಂದಿಗೂ
ತೀರದ ದಾಹದಂತೆ.... ಹನಿ... ಹನಿ... ಪ್ರೀತಿಗಾಗಿ
ಚಡಪಡಿಸಿ, ತಡವರಿಸುತ್ತ, ನರಳಾಡುತ್ತಿರಬೇಕಷ್ಟೆ...

ಯಾರೋ ಹೇಳಿದರು ಬಿಕ್ಕುತ್ತಿರುವ ನಿನ್ನ
ಗಂಟಲಿಗೆ, ಗಂಗಾಜಲವನ್ನು ಸುರಿಯಿರೆಂದು...
ಅವರಿಗೆಲ್ಲ ಏನು ಗೊತ್ತು? ಬೇಕಿರುವುದು ಹನಿ ಮಧು.!!
ಉಸಿರು ನಿಲ್ಲಲು ಅವಳ ಕೊನೆಯ ಭೇಟಿ ಅಲ್ಲವೆ
ಗಾಲೀಬ್....!!
ಉರಿದು.. ಸುಟ್ಟು ಹೋದ ನಿನ್ನ ಭಸ್ಮವನ್ನು...
ಅವಳ ಮೇಲ್ಮುದ್ದೆ ಮಾಳಿಗೆಯಲ್ಲಿ ಸುರಿದು ಬರುವೆ..
ಜಿಟಿಜಿಟಿಯಾಗಿ... ಸುರಿಯುವ ಮಳೆಯ ಹನಿಗಳು
ಬೂದಿಯೊಡಗೂಡಿ ಜಂತಿಯ ಒಳಗಿಳಿದು, ಅವಳ
ಪಾದದ ಮೇಲೆ ಬಿದ್ದು ತೋಯಿಸಿ ಹೋದರೆ.....
ನಿನ್ನ ಸಾವು ಸಾರ್ಥಕವಲ್ಲವೇನು...?