Sunday, May 22, 2022

ಗೆಳೆಯ

ಕೆನ್ನೆಗೆ...
ಅರಿಷಿಣವ ಸವರಿ,
ದೃಷ್ಟಿಬೊಟ್ಟನೊಂದನಿಡುವ
ಅವಕಾಶವನ್ನು ಏಕೆ
ಕಳೆದುಕೊಂಡುಬಿಟ್ಟೆ
ಗೆಳೆಯ..!!
ಗಿಣಿ ಕಚ್ಚಿ ಬಿಟ್ಟ
ಹಣ್ಣಿನಂತೆ, ಈ
ಗಲ್ಲದ ಮೇಲೆ ನಿನ್ನ
ಹಲ್ಲಿನ ಗುರುತನ್ನಾದರೂ
ಉಳಿಸಿ ಹೋಗಬೇಕಿತ್ತಲ್ಲವೇನು?

Monday, May 9, 2022

ರಂಗೀ

ಅವಳನ್ನೊಮ್ಮೆ
ತಡೆದು ನಿಲ್ಲಿಸು!! ನನ್ನ
ಕಣ್ಣೀರಿನಿಂದ ಅವಳ
ಅಂಗಾಲನ್ನು
ತೊಳೆಯಬೇಕಿದೆ
ರಂಗೀ....
ಒಲವನ್ನು ಹೊಸಕಿ
ಹೋದ ಪಾಪದ ಗುರುತು....
ಊರಿನವರಿಗೆಲ್ಲ
ಗೊತ್ತಾಗದಿರಲಿ!!

Saturday, April 30, 2022

ರಂಗೀ

ಹುಸಿ ನಗೆಯನ್ನಾದರು
ಚೆಲ್ಲಿ ಬಿಡುವೊಮ್ಮೆ...
ಕಾಗದದಲ್ಲಿ ಅರ್ಧಕ್ಕೆ 
ಸತ್ತು ಬಿದ್ದಿರುವ ಅದೇಷ್ಟೊ
ಕವಿತೆಗಳಿಗೆ... ಮರುಜೀವವಾದರೂ...
ಬಂದಂತಾಗಲಿ!
ರಂಗೀ...
ಇಲ್ಲವಾದರೆ... 
ಕಡ್ಡಿಯನ್ನಾದರೂ ಗೀರಿಬಿಡು...
ಅವುಗಳೆಲ್ಲವುಗಳ ಆರ್ತನಾದ
ಯಾರಿಗೂ ಕೇಳಿಸದ ಹಾಗೆ,
ಉರಿದು ಹೋಗಿಬಿಡಲಿ!

ರಂಗೀ

ಗೊತ್ತು ಬಿಡು....
ಹರಡಿರುವ ಹೇರಳುಗಳಿಗೆ
ಮೊಳ ಮಲ್ಲಿಗೆಯೆಂಬ
ಲಂಚವನ್ನೆ ತಂದಿಲ್ಲ
ನಾನು 
ರಂಗೀ....
ಅವುಗಳನ್ನು ದಾಟಿ...
ಅದರದ ಸವಿಯನ್ನು
ಸವಿಯಲು, ಭ್ರಷ್ಟನಾಗದೆ
ಬೇರೆ ದಾರಿಯೇ...ಉಳಿದಿಲ್ಲ
ಅಲ್ಲವೇನು?

ರಂಗೀ

ರಣ ಬಿಸಿಲಿನಲ್ಲಿ 
ನಾ ಬರುವ ದಾರಿಯನ್ನೆ
ಕಾಯುತ್ತ, ಕುಳಿತಿರಬೇಡ!!
ಕಳೆಗುಂದಿ ಹೋದಿತು
ನಿನ್ನ ವದನ!!!
ರಂಗೀ....
ಮಲ್ಲಿಗೆಯಂತಹ 
ಮೊಗದವಳು... ಬಾಡಿ
ನಿಂತರೆ, ಅದೇಷ್ಟು 
ನೊಂದುಕೊಳ್ಳಬಹುದು?
ನನ್ನೆದೆಯೊಳಗಿನ
ಮದನ!!!

ರಂಗೀ

ಕಣ್ಣಿನಲ್ಲೆ ಹೇಳುವ
ನೂರು...ಮಾತುಗಳನ್ನು 
ಅರಿಯಲಾರದಷ್ಟು
ಕುರುಡನಾಗಿಬಿಟ್ಟಿರುವೆ!!!
ನಿನ್ನೊಲವಿನಲ್ಲಿ
ರಂಗೀ....
ಕೈ ಹಿಡಿದು ನಡೆದುಬಿಡು
ಪ್ರೇಮದೂರಿಗೆ!!
ಹಾದಿಯ ಮದ್ಯದಲ್ಲಿ
ಎಲ್ಲೂ.... ವಿರಹಕ್ಕೆ ಸುಂಕವ
ಕಟ್ಟಿಸದ ಹಾಗೆ!!

Wednesday, April 27, 2022

ರಂಗೀ

ಹೀಗೆ...
ಗುಲಾಬಿಗಳನ್ನೆ ತೋರಿಸುತ್ತ
ಸುಮ್ಮನೆ ನನ್ನನು
ಕೊಲ್ಲಬೇಡ
ರಂಗೀ...
ಕೈ ಮುಗಿಯುವೆ
ಬೇಕಿದ್ದರೆ....
ಬಿಟ್ಟು ಹೋದ
ಹೂವಂತವಳನ್ನೊಮ್ಮೆ
ಕರೆತರಬಾರದೇಕೆ..?