Tuesday, November 21, 2023

ರಂಗೀ


ಇವಳೆಂಥಹ.....
ಹುಚ್ಚು ಹುಡುಗಿ..!!
ಮುಡಿಯುವ ಮಲ್ಲಿಗೆಯನ್ನು
ಮುಂಗೈಗೆ ಸುತ್ತಿಕೊಂಡು
ಆಘ್ರಾಣಿಸುತ್ತಿದ್ದಾಳೆ....
ಊರಾಚೆ ಎಸೆಯಬೇಕಿದ್ದ
ಈ ಮದ್ಯದ ದಾಸನನ್ನು
ತನ್ನ ಹೃದಯ 
ಮಂದಿರದೊಳಗಿಟ್ಟುಕೊಂಡು
ಆರಾಧಿಸುತ್ತಿದ್ದಾಳೆ..!!

ಅಕ್ಷರ ಬಡವ.

Friday, October 20, 2023

ಚುಟುಕು

ಜಾಸ್ತಿ ಕುಡಿಯಬೇಡ..!!!
ಆರೋಗ್ಯ ಹಾಳಾಗಿ 
ಹೋಗುತ್ತದೆಂದು...
ಇನ್ನಾರದ್ದೊ ಕೈಯಲ್ಲಿ
ಹೇಳಿ ಕಳುಹಿಸುತ್ತಿದ್ದಾಳೆ
ಆ ಹುಡುಗಿ..!!
ಮರೆತು ಹೋಗಿರಬಹುದೇನೊ...
ಅವಳಿಗೆ..
ಎದೆತುಂಬ.. ವಿರಹದ
ವಿಷವನ್ನೆ ಸುರಿದು
ಹೋದದ್ದು..!!

Wednesday, October 18, 2023

ಗೆಳೆಯ


ಕಳೆದು ಹೋದದ್ದನ್ನು
ಹಿಡಿದಿಟ್ಟುಕೊಳ್ಳಬಹುದೇನು?
ಕೈಯಲ್ಲಿ ಇರುವುದನ್ನು
ಚೆಲ್ಲಿ ಕೂರುವುದು
ತರವೇನೊ....
ಗೆಳೆಯ...
ಪ್ರತಿಯೊಂದು ನಿಲ್ದಾಣಕ್ಕೂ...
ಒಬ್ಬ ಮಾಲಿಯಾದರೂ..
ಇರುತ್ತಾನೆ, ನಿಜ.
ಇಲ್ಲಿ... ನೆನಪಿನ ಮೂಟೆಯನ್ನು
ನಾವೇ..ಹೊತ್ತು ಸಾಗಬೇಕು.!!
ಇಳಿಸುವವರಕ್ಕಿಂತಲೂ...
ಹೊರಸಿ ಹೋಗುವವರೆ
ಜಾಸ್ತಿ...!!

Thursday, October 12, 2023

ಚುಟುಕುಗಳು


ಉಣ್ಣುವ ಅನ್ನವನ್ನು
ಬಿತ್ತುವುದು
ಮಣ್ಣಿನಲ್ಲಿಯೇ... ಹಾಗಂತ,
ಅನ್ನದ ತಾಟಿನಲ್ಲಿ 
ಮಣ್ಣನ್ನು ಕಲಿಸಿ
ಉಣ್ಣಲು ಸಾಧ್ಯವೇನೊ..?
ಗೆಳೆಯ
ಮೋಸದ ಬರೆಗೆ ಒಮ್ಮೆ
ಬೆನ್ನನೊಡ್ಡಿದ್ದೆ ಸಾಕಿತ್ತು..
ಸುಟ್ಟ ಸಲಾಕೆಯು ತಣ್ಣಗಾಗುತ್ತದೆ
ನಿನ್ನ ಹಾಗೆ ಪದೇ...ಪದೇ...
ಕೆಂಡವನ್ನು ಕಾರುವುದಿಲ್ಲ..!!

ಭಗ್ನ ಪ್ರೇಮಿಯ ಕಥೆ
ಕಲ್ಲಿಗೂ.... ಬೇಡವಾಗಿ 
ವಿಘ್ನಗೊಂಡು
ಬಿದ್ದಿದೆ ನೋಡು
ರಂಗೀ...
ತೆಪೆ ಬಳೆಯುವವರ
ಕೈಯಲ್ಲಿ...ಈಗ
ಗುದ್ದಲಿ-ಕುಡಗೋಲು
ಸಿಕ್ಕಿದೆಯಲ್ಲ..!!

ನೀನಂದು ಹೇಳಿದ್ದು
ಇಂದು ನಿಜವಾಯಿತು
ನೋಡು ರಂಗೀ...
ಅವಳಿಗೆಲ್ಲಿ ಮನಸ್ಸಿದೆ..?
ಹುಗಿದ ಗೋರಿಯ ಮುಂದೆ
ಬಾಡಿ ಹೋಗುವ
ಹೂಗುಚ್ಛವನ್ನು ಇಟ್ಟಿರುವಳಲ್ಲ!!
ಇದೇ ಹೂವನ್ನು
ಆ ಸಂಜೆಗೆ ಒಪ್ಪಿ
ಅಪ್ಪಿಕೊಂಡಿದ್ದರೆ...

ಅವಳಿಗೆ ಹೇಳು...
ಹುಗಿದ ಗೋರಿಯ ಮೇಲೊಂದು
ಹೂವನ್ನಿಡುವ ಬದಲು
ಕಲ್ಲು ಬಂಡೆಯನ್ನು ಹೇರಿ
ಹೋಗೆಂದು
ರಂಗೀ...
ಇದ್ದಾಗ.. ತಲೆಯ ಮೇಲೆ
ಹಾಕುವ ಅವಕಾಶ
ಸಿಕ್ಕಿರಲಿಕ್ಕಿಲ್ಲ...!! ಇಲ್ಲಿ
ಹಾಕಿದರು.. ಯಾರಿಗೇನು
ಜವಾಬು ಕೊಡುವ
ಅವಶ್ಯಕತೆ ಬಿಳುವುದಿಲ್ಲ..

ಜಗತ್ತು....
ಮುಳ್ಳು-ಕಂಟೆಗಳ 
ಮಧ್ಯದಲ್ಲಿ ನಿಲ್ಲಿಸಿ...
ಹೂ ಹಾಸಿಗೆಯ ಮೇಲೆ
ನಡೆದು ಹೋಗೆನ್ನುತ್ತದೆ
ಜಾನೆಮನ್...
ನಡೆದು ಬಿಡುತ್ತೇನೆ ಬಿಡು..‌
ಹಾದಿಯ ತುಂಬ
ಕಂದಕಗಳನ್ನು ತೋಡಿದ್ದರು....
ತೋಡಿಲ್ಲವೆಂಬಂತೆ...

ಅಂಗೈಯೊಳಗಿನ 
ಹೂವಿನಂತೆ
ಕಾಪಿಟ್ಟುಕೊಳ್ಳುವೆನೆಂದು
ಮಾತನ್ನು ಕೊಟ್ಟಿದ್ದೆಯಲ್ಲ
ಗೆಳೆಯ...
ನೀನೆ ಹೇಳು...
ಬಳ್ಳಿಯಿಂದ ಹೂವುಗಳೇನೊ
ಕಳಚಿವೆ...
ಆಘ್ರಾಣಿಸುವೆಯೊ...?
ಉಸಿರ ಕಟ್ಟಿಸುವೇಯೊ...?

ಮೋಸ ಮಾಡುವ ಈ
ಜೋಡಿ ಕಣ್ಣುಗಳಿಂದ
ಪದೇ..ಪದೇ...
ನನ್ನನ್ನೆ..
ವಂಚಿಸುತ್ತಿರುವಳಲ್ಲ
ರಂಗೀ...
ಜಾಲಕ್ಕೆ ಸಿಕ್ಕಿಬಿದ್ದು
ಒದ್ದಾಡುವವನ
ನೋವಿನಲ್ಲಿ 
ಯಾರು ಪಾಲನ್ನು
ಬೇಡುವುದಿಲ್ಲ..!!

ಚುಟುಕು

ಆ ಬೀದಿಯ ಕೊನೆಯಲ್ಲಿ
ಯಾರೂ... ಹೋಗಬೇಡಿ
ಮುದುಕರು ಸಹ..!!
ಅಲ್ಲೊಂದು ಹೂವಿದೆ.
ನೋಡಿದವರು... 
ಮತ್ತೆ, ಸಾಮಾನ್ಯ 
ಬದುಕಿನಲ್ಲಿ
ಉಸಿರಾಡಲಾರರು..

ಹೆಸರಿಡಿದ ಕವಿತೆಗಳು

ಇಲ್ಲಿ ಕೇಳೊ... ಮಹಾತ್ಮ...
ರಾತ್ರಿಯೆಲ್ಲ ಹುಳಿ, ಹೆಂಡವನ್ನು
ಸವಿದ ನಾಲಿಗೆಯಿಂದು, ಕುಡಿತದಿಂದ
ಸಮಾಜದ ಸ್ವಾಸ್ಥ್ಯ ಹದಗೆಡುತ್ತದೆಂದು
ಭೋದಿಸುತ್ತಿದೆ...

ಇಲ್ಲಿ ನೋಡೊ.... ಮಹಾತ್ಮ...
ಊರಿಗೆ ಬೆಂಕಿ ಹಚ್ಚಿಸಿದವರು
ಅಮಾಯಕರ ಮುಂದೆ  ಶಾಂತಿ-ಸಹಬಾಳ್ವೆಯ
ಹರಿಕಥೆಯನ್ನು ಹರಿಬಿಡುತ್ತಿದ್ದಾರೆ..

ಇಲ್ಲೇನು ಹೇಳುವೇಯೊ... ಮಹಾತ್ಮ...
ಶಾಂತಿಯ ಹೂತೋಟದಲ್ಲಿ ಜಾತಿಗಳೆಂಬ
ಮುಳ್ಳು ಬೇಲಿಯನ್ನು ಹೆಣೆಯುತಿರುವರಲ್ಲೊ
ಇಲ್ಲಿ ಯಾರೊ ಬೆಳೆದದ್ದನ್ನು.. ಇನ್ನಾರೊ
ಉಣ್ಣುತ್ತಾರೆ...

ಅವರಿಗೆಲ್ಲ ಏನೂ ಹೇಳುವುದು... ಮಹಾತ್ಮ..
ಉಂಡ ತಟ್ಟೆಯಲ್ಲಿ ಮಣ್ಣು ಸುರಿದು, ಎದ್ದು
ಹೋಗುವ ಬು(ಲ)ದ್ಧಿ ಜೀವಿಗಳ ಬೆನ್ನನು
ತಟ್ಟುವ ತಾಯ್ಗಂಡರೀರುವಾಗ...

ಮರೆತುಬಿಡೋಣ ಬಿಡು... ಮಹಾತ್ಮ...
ಅರೆ ಘಳಿಗೆ.‌!! ನಿನ್ನ ಪಟಕ್ಕೊಂದು ಹಾರ ಹಾಕಿ,
ಹಕ್ಕಿಯಂತೆ ಕಪಾಟುಗಳ ಬಂಧನದಲ್ಲಿದ್ದ ತಿರಂಗವನ್ನು
ಹಾರಿಸಿ, ದೌಡಾಯಿಸಿ ಬಿಡಬೇಕಿದೆ.. ತೋಟಕ್ಕೊ
ಊರ ಹೊರಗಿನ ಒಂಟಿ ಮನೆಯ ಕಡೆಗೊ
ಇಲ್ಲದಿದ್ದರೆ, ಗುಂಡು-ತುಂಡು ಎರಡು 'ಮಿಸ್ಸ್'
ಆಗುವ ಸಾಧ್ಯತೆ ಇದೆಯಲ್ಲವೇನು?

Wednesday, October 4, 2023

ಮುನ್ನುಡಿ

ಇನ್ನೂ ಇವರ ಕಥಾ ಸಂಕಲನದ ಬಗ್ಗೆ ಹೇಳಬೇಕೆಂದರೆ ಅಥವಾ ವಿಮರ್ಶಿಸಬೇಕೆಂದರೆ ನನಗಂತೂ ಸುಲಿದ ಬಾಳೆ ಹಣ್ಣಿದ್ದ ಹಾಗೆನೆ. ಸಾಹಿತ್ಯ ಪ್ರಕಾರದ ಯಾವುದೇ ವಿಷಯವಿರಲಿ ಅಂದರೆ ಅದು ಬರೆಯುವುದೆ ಇರಲಿ ಇಲ್ಲವೆ ಓದುವುದೆ ಇರಲಿ ಅದರಲ್ಲೂ ಸಾಹಿತ್ತಿಕ ಹೊಸ ಪ್ರಕಾರಕ್ಕೆ ಕೈ ಹಾಕುವ ಮುನ್ನವಂತೂ ನಮ್ಮಿಬ್ಬರ ನಡುವೆ ಸಾಕಷ್ಟು ಚರ್ಚೆಗಳು ನಡೆದೆ ನಡೆಯುತ್ತಿರುತ್ತವೆ. ನಮ್ಮವ್ವ ಕವನ ಸಂಕಲನದ ನಮ್ಮವ್ವ ಎಂಬ ಕವನಗಳು, ಚೌಕಟ್ಟಿನ ಬಂಧವೇಕೆಂದು ಗಜಲ್ ಪೂರಕವಾಗಿ ಕಜಲ್, ಸಾಕಿಯ ಪ್ರತಿರೂಪವಾಗಿ ರಂಗೀ, ಹೀಗೆ ಹತ್ತು ಹಲವಾರು ಪ್ರಾಯೋಗಿಕ ಸಾಹಿತ್ಯದ ಕೃಷಿಯನ್ನು ಕೈಗೊಂಡಿದ್ದಾರೆ. ನನಗಿನ್ನು ಚೆನ್ನಾಗಿ ನೆನಪಿದೆ ನಾನು ಉಡುಪಿಯಲ್ಲಿ ನನ್ನ ಗೆಳೆಯನೊಂದಿಗೆ ಬೈಕನಲ್ಲಿ ಹೋಗುತ್ತಿರಬೇಕಾದರೆ ಅಪಘಾತವಾಗಿ, ಮನೆಯಲ್ಲಿ ಆರಾಮನ್ನು ತೆಗೆದುಕೊಳ್ಳುತ್ತಿದ್ದಂತಹ ಸಂದರ್ಭದಲ್ಲಿ, ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿ  ಕರೆದಿದ್ದಂತಹ ರಾಷ್ಟ್ರಮಟ್ಟದ ಕಥಾ ಸ್ಪರ್ದೆಯಲ್ಲಿ ಭಾಗವಹಿಸುವಿಕೆ ಹಾಗೂ ಅದಕ್ಕೆಂದೆ ಕೇವಲ ಚಂದ್ರವ್ವ ಎಂಬ ಕಥೆಯ ಅಂತ್ಯದ ಎಳೆಯನ್ನು ಹೇಳಿದಾಗ ನನಗೆ ಕ್ಷಣ ಶಾಕ್ ಆಯಿತು. ಕೇವಲ ದೀರ್ಘ ಕವನ, ಚುಟುಕು, ಶಾಯರಿಗಳನ್ನು ಬರೆಯುತ್ತಿದ್ದವರು ಇಂದು ಕಥೆಗಾರನಾಗಿ ನನ್ನ ಮುಂದೆ ಕುಳಿತಿರುವುದನ್ನು ಕಂಡು ಇವರೊಳಗಿರುವ ಆ ಸಾಹಿತ್ಯದ ಬಗೆಗಿನ ಸೆಳೆತ, ಮೋಹ, ಶ್ರದ್ಧೆ, ತಾಳ್ಮೆ ಎಂತಹದ್ದೆಂದು ನನಗರಿವಾಯಿತು. ಆಗ ನಾನು ಇದು ಹೀಗೆ ಬರಲಿ ಎಂದು ಸೂಚಿಸಿದ್ದೆ ಕೂಡ, ಆ ಕಥೆಯನ್ನು ಬರೆಯಲಾಯಿತು, ಕಳುಹಿಸಿಯು ಆಯಿತು; ಅಲ್ಲಿ ವಿಮರ್ಶಕರ ಮೆಚ್ಚುಗೆಗೆ ಆಯ್ಕೆಯಾಗಿ ವಿಶೇಷ ಬಹುಮಾನವನ್ನು ಪಡೆದುಕೊಂಡದ್ದು ಇವರ ಮುಂದಿನ ಹಲವಾರು ಕಥೆ, ಕಾದಂಬರಿಗಳಿಗೆ ಪ್ರೇರಣೆಯಾಯಿತು ಎಂದರೆ ಸುಳ್ಳಲ್ಲ, ಆಗಿನ್ನು ಇವರು ಕಾದಂಬರಿಕಾರರಾಗಿರಲಿಲ್ಲ. ಅದಕ್ಕೂ ಬಹಳ ದಿನಗಳನ್ನೇನು ತೆಗೆದುಕೊಳ್ಳಲಿಲ್ಲ, ಇವರೊಳಗಿನ ಸಾಹಿತ್ಯದ ತುಡಿತ ಎಷ್ಟಿತ್ತೆಂದರೆ ನಿರ್ಣಯ ಎಂಬ ಕಾದಂಬರಿಯನ್ನು ಕೇವಲ ಆರು ತಾಸುಗಳಲ್ಲಿ ಬರೆದು ಕೊಟ್ಟದ್ದು ನನಗಿನ್ನು ಆಶ್ಚರ್ಯವಾಗಿಯೆ ಕಾಡುತ್ತಲಿದೆ.  ಇರಲಿ ಇತ್ತ ಕಥಾ ಸಂಕಲನದ ಬಗ್ಗೆ ನಾವು ನೋಡುವುದಾದರೆ, ಏನು ಕಥೆಗಳು ? ಏನನ್ನು ಹೇಳುತ್ತವೆ, ಓದುಗನನ್ನು ಯಾವ ದಿಕ್ಕಿಗೆ ತಂದು ನಿಲ್ಲಿಸುತ್ತವೆ ಎಂಬಿತ್ಯಾದಿ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ. ಕಥಾ ಸಂಕಲನದಲ್ಲಿ ಒಂದೊಂದೆ ಕಥೆಗಳನ್ನು ಓದುತ್ತಾ ಹೋದಂತೆ ಕೌಟುಂಬಿಕ, ಸಾಮಾಜಿಕ, ರಾಜಕೀಯ, ಅಪರಾಧ, ಅಸಹಾಯಕತೆ, ಬದುಕಿನ ಗುರಿ, ಹುಟ್ಟಿದ ಜೀವದ ಸಾರ್ಥಕತೆ ಹೀಗೆ ಹತ್ತು ಹಲವಾರು ವಿಷಯಗಳನ್ನು ನಮಗೆ ಮನನವನ್ನು ಮಾಡಿಸುತ್ತಾ ಸಾಗುತ್ತವೆ. ಎಲ್ಲ ಕಥೆಗಳ ಒಳ ಹೂರಣವನ್ನು ನಾನಿಲ್ಲಿ ಬಡಿಸುತ್ತ ಸಾಗುವುದಿಲ್ಲ, ಒಬ್ಬೊಬ್ಬ ಓದುಗನಲ್ಲೂ ಒಂದೊಂದು ಮನಸ್ಥಿತಿ ಇರುತ್ತದೆ, ಆಯಾ ಕಥೆ, ಸನ್ನಿವೇಶ, ಸಂಭಾಷಣೆ, ಪಾತ್ರಗಳು ಓದುಗನ ಎದೆಯಲ್ಲಿ ಅಚ್ಚಳಿಯದೆ ಉಳಿದು ಹೋಗುತ್ತವೆ. ಓದು ಓದುಗರ ಬಾಳಿನ ಹಾದಿಗೆ ಬೆಳಕಾಗಬೇಕು, ಮಾರ್ಗದರ್ಶಕವಾಗಬೇಕು, ಗುರುವಾಗಬೇಕು, ನಿರ್ದೇಶಿಸಬೇಕು ಎಲ್ಲದಕ್ಕೂ ಮೊದಲಾಗಿ ಅವರಲ್ಲಿ ಮನುಷ್ಯತ್ವ, ಮಾನವಿಯತೆ, ಕರುಣೆ, ಅನುಕಂಪ, ತ್ಯಾಗದೊಂದಿಗೆ ಮಾನವನನ್ನಾಗಿಸಬೇಕು. ಅದು ಪ್ರತಿಯೊಬ್ಬ ಲೇಖಕರ/ಕಿಯರ ಸಿದ್ಧಾಂತವಾಗಬೇಕು, ಬರಹ ಕೇವಲ ಜನರ ಭಾವನೆಗಳನ್ನು ಕೆರಳಿಸುತ್ತ, ಮುಖಕ್ಕೆ ಮಸಿ ಬಳಿಯುತ್ತ, ಬೆಳೆಯುತ್ತ ಸಾಗುವುದು ಸಾಹಿತ್ಯದ ಭಾಗವಾಗಬಾರದು. ಮತ್ತು ಇನ್ನೊಂದು ಮುಖ್ಯ ಅಂಶವೆನೆಂದರೆ ಅವರು ಈ ನೆಲದ ಘಮಲನ್ನು ಎತ್ರಿ ಹಿಡಿದಿರುವುದು; ಕಥೆಗಳನ್ನು ಸಾಹಿತ್ತಿಕ ಭಾಷೆಯಲ್ಲಿ ವಿಸ್ತರಿಸುತ್ತ ಸಾಗಿ ಪಾತ್ರಗಳ ಸಂಭಾಷಣೆಯನ್ನು ಆಡು ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ, ಈಗೀನ ಕಾಲಘಟ್ಟಕ್ಕೆ ಇದು ಅತ್ಯವಶ್ಯವು ಕೂಡಾ. ಹೊಟ್ಟೆಪಾಡಿಗಾಗಿ ಆಂಗ್ಲ ಭಾಷೆಯ ಮೊರೆಹೋಗಿ ಮಾತೃಭಾಷೆಯ ಕಡೆಗಣನೆಯು ಹೆಚ್ಚಾಗುತ್ತ ಸಾಗಿದೆ. ಇತ್ತಿತ್ತಲಾಗಿ ಕೆಲವೊಂದು ಆಡು ಭಾಷೆಯ ಪದಗಳೆ ಅಳಿದು ಹೋದಂತಿವೆ ಮತ್ತು ಮರೆತು ಹೋಗುತ್ತಿದ್ದೇವೆ ಕೂಡ, ಅದರ ಮರುಬಳಕೆ ಹಾಗೂ ಮುಂದಿನ ಪೀಳಿಗೆಗೆ ಶಬ್ದ ಸಂಗ್ರಹದ ಅವಶ್ಯಕತೆಯೂ ಬಹಳಷ್ಟಿದೆ ಈ ನಿಟ್ಟಿನಲ್ಲಿ ಇವರ ಪ್ರಯತ್ನ ಶ್ಲಾಘನೀಯ