Monday, June 22, 2020

ಎಡಿಟ್ಸ್

ನೀನು ಬಿಟ್ಟು
ಹೋದ ಘಳಿಗೆ!
ಎದೆಯ ನೆಲವೀಗ
ಪದಗಳೆ ಹುಟ್ಟದಷ್ಟು
ಬರುಡು!!
ಇಲ್ಲಿಗೂ... ಬರಬೇಡವೆಂದು
ದಿಗ್ಬಂಧನವ ಹಾಕಿಬಿಟ್ಟಿದೆ
ಸುಡುಗಾಡು!


ನಿಜ.
ನಾನು ಕಡಿದು
ಹಾಕುವಷ್ಟು ದೊಡ್ಡ
ಮರವೇನಲ್ಲ!
ಸಾವಿರ ಜನರು
ತುಳಿದು ಹೋದರು
ಎದ್ದು ನಿಲ್ಲುವ ನಿಮ್ಮ
ಕಾಲಡಿಯ ಗರಿಕೆ!

ಎದೆಯಲ್ಲಿ ಎದ್ದು
ಹೋದ 
ಚಂಡಮಾರುತಗಳಿಗೆ
ಲೆಕ್ಕವೆ ಇಲ್ಲ!!
ಬದುಕನ್ನು ಚೆಂಡನ್ನಾಗಿಸಿ
ಆಟವಾಡಿದ ಕಪಟಿಯ
ನಾಟಕ ಮುಗ್ದ
ಜನರಿಗೇಕೊ
ಅರಿವಾಗುತಿಲ್ಲ!!

ಹಲ್ಲಿ ಲೊಚಗುಟ್ಡಿದರು
ಪ್ರೀತಿ ಹುಸಿಯಾಗಿ
ಹೋಯಿತಲ್ಲ
ಸಾಕಿ...
ಪಾಲಿಗೆ ಬಂದ
ವಿಷವನ್ನು ಹಿಡಿದು
ಯಾರಲ್ಲಿ ನ್ಯಾಯವನ್ನು
ಕೇಳಲಿ.

ತುಂಬಿಟ್ಟ ಮಧು
ಬಟ್ಟಲಿಗೆ, ಎಷ್ಟಾದರು
ಲಿಂಬೆಯ ರಸವನ್ನು
ಹಿಂಡಿಬಿಡು, ಅದೇನು
ನನ್ನ ಬದುಕಿನ
ಕಹಿಯನ್ನೇನು
ಕಡಿಮೆಗೊಳಿಸುವುದಿಲ್ಲ
ಸಾಕಿ...
ಬಟ್ಟಲು ಬರಿದಾಗುತ್ತದೆ
ಮಾತ್ರ.
ನೋವಿನ ಒರತೆ
ಎಂದು 

ಮೊದಲ ಹೆಜ್ಜೆಯನಿಟ್ಟಾಗ
ಎಲ್ಲರೂ...
ನಕ್ಕರು!
ಗೆದ್ದಿರುವೆನೆಂದುಕೊಂಡಿಲ್ಲ
ನಕ್ಕವರೆಲ್ಲ ಇಂದು
ಪಕ್ಕದಲ್ಲೆ ನಿಂತಿದ್ದಾರೆ.

ಕೇವಲ,
ಕಾಮದ ನೋಟದಲ್ಲೆ
ನನ್ನನ್ನು ಮೈಲಿಗೆಯಾಗಿಸಬೇಡ!
ನಮಗೆಂದೆ
ಮಧುಮಂಚ ಕಾದಿದೆ
ಇಲ್ಲಿ, ಬರುವುದಕ್ಕೆ
ಲಜ್ಜೆಯ
ನೆಪವನ್ನು ಮಾತ್ರ
ಒಡ್ಡಬೇಡ!

ಎದೆಯ ಕಡಲಿನ
ತುಂಬಾ....
ವಿರಹದ
ನಂಜನ್ನೆ ಸುರಿದು
ಹೋದೆಯಲ್ಲ
ನಂಜಿ!
ಮನಸಿನ ಭಾವನೆಗಳಿಗೆ
ಮೂರು ಕಾಸಿನ
ಬೆಲೆಯನ್ನೆ ಕೊಡದ
ಊಸರವಳ್ಳಿಯ
ಜನರ ಮಾತಿಗಿಂಜಿ!

ನನಗೆ ಮುಖಕ್ಕೆ
ಬಣ್ಣ ಹಚ್ಚಿಕೊಳ್ಳುವುದು
ಗೊತ್ತಿಲ್ಲ! ಹೀಗಾಗಿ
ಎಲ್ಲರ ಮುಂದೆ
ನಾಟಕವಾಡಲು
ಬರುವುದಿಲ್ಲ!
ಹೇಳಿದ್ದನ್ನು ಕೇಳುತ್ತೇನೆ.
ತಿಳಿದಿದ್ದನ್ನು ಹೇಳುತ್ತೇನೆ.
ಇವೆರಡರ ಮಧ್ಯದಲ್ಲಿ,
ಎದ್ದು ಹೋದವರ ಬೆನ್ನ
ಹಿಂದೆ ಮಾತನಾಡುವುದನ್ನು
ಈಗೀಗ ನಿಲ್ಲಿಸಿಬಿಟ್ಟಿದ್ದೇನೆ.

ಸೊಂಕು ಯಾವುದಾದರೆನು?
ಎದುರಿಸಿ ಗೆಲ್ಲಬಲ್ಲೆನು.
ಸೊಂಕಿತ ಮನಸ್ಸುಗಳನ್ನು
ಹೇಗೆ ಎದುರಿಸಲಿ!
ಮದ್ದಿಲ್ಲದ‌ ರೋಗಕ್ಕೆ,
ಸಾವಾದರು ಔಷಧಿಯಾಗಬಹುದು!
ಹುಟ್ಟು- ಸಾವಿನ ನಡುವೆ
ನರಳುವಂತೆ ಮಾಡುವ ಈ
ಜಗದ ಸ್ನೇಹವನ್ನು  ನಾ
ಹೇಗೆ ಗಟ್ಟಿಕೊಳಿಸಿಕೊಳ್ಳಲಿ!

ಆಡುವ ಮಾತುಗಳಲ್ಲಿ
ನೂರೆಂಟು ಅರ್ಥಗಳಿವೆ.
ವ್ಯರ್ಥವಾಗಿ ಹುಡುಕಬೇಡ!
ಹಚ್ಚಿಕೊಳ್ಳುವವರಿಗೆ ಬಣ್ಣ
ಯಾವುದಾದರೇನು?
ನಮಗೆ ಮಸಿಯನ್ನು 
ಬಳೆಯವುದು ಮಾತ್ರ
ಮರೆಯುವುದಿಲ್ಲ!

No comments:

Post a Comment