Monday, August 31, 2020

ಚುಟುಕು

ಕೊಟ್ಟ ಹೂವನ್ನು ಹೀಗೆ
ಕಿವಿಯಲ್ಲಿಯೆ, ಇಟ್ಟುಕೊಂಡು
ಕೂರಬೇಡ! 
ಮಳೆಗೆ ಮೈ ನೆನೆದು
ನೆಗಡಿಯಾದರೆ!!?.
ಕೊರೋನಾ ಎಂದು
ಕರೆದುಕೊಂಡು ಹೋಗಿ ಬಿಡುತ್ತಾರೆ.
ಆಗ ಅಲ್ಲಿ.........
ನನ್ನ ಹೆಸರನ್ನು ಮಾತ್ರ ಹೇಳಬೇಡ!

ಶಾಯರಿ

ತಪ್ಪಲ್ಲವೇನು? ರಂಗೀಯು
ಎದ್ದು ಹೋದದ್ದು!
ಸಾಕಿ...
ಉತ್ತರವಾಗಬೇಕಿದ್ದವಳು
ನನ್ನನೆ ಪ್ರಶ್ನೆಯನ್ನಾಗಿಸಿ,
ಎದೆಯಲ್ಲಡಗಿದ ನೂರು
ಭಾವಗಳನು ಕೂಡಿಸಿ-ಕಳೆದು
ವ್ಯವಕಲಿಸಿದೆ, ಸೊನ್ನೆಯನ್ನೆ 
ಸುತ್ತಿಟ್ಟುಬಿಟ್ಟಳಲ್ಲ! ಎಣಿಸಲಿಕ್ಕೆ 
ಕೈಯಲ್ಲಿ ಕೊಟ್ಟು ಹೋದದ್ದಾದರು
ಏಕೆ?.....
ವಿರಹವೆಂಬ 'ಮಗ್ಗಿ ಪುಸ್ತಕ!'

Saturday, August 29, 2020

ಶಾಯರಿ

ಈ ರಾತ್ರಿಗಳೆಲ್ಲ
ಬಂಜೆತನವನ್ನೆ ತುಂಬಿಕೊಂಡಿರುವಾಗ,
ಕನಸುಗಳು ಪ್ರಸವಿಸುವವೇನು?
ಸಾಕಿ...
ಪ್ರತಿ ಸಂಜೆಗಳೂ...
ನನಗೆ ಸೂತಕವೆ.
ಕಳೆದುಕೊಳ್ಳಲು ಮದಿರೆ
ಬಟ್ಟಲು ಇದೆಯಲ್ಲ!
ಇನ್ನೇನು ಬೇಕು.

ಚುಟುಕು

ಆಗಾಗ ಹೀಗೆ
ಮೂಗುತಿಯನ್ನು
ಮುಟ್ಟಿ ನೋಡುತ್ತಿರಬೇಡ,
ಮಾಸಿ ಹೋಗಬಹುದು!
ಹೇಳುತ್ತಿರುವುದು
ಪ್ರೀತಿಯಿಂದೇನಲ್ಲ!!!,
ಮತ್ತೆ ಜೇಬಿಗೆ 'ಕತ್ತರಿ'
ಬೀಳುತ್ತದಲ್ಲ ಎಂಬ....
ಕಳವಳದಿಂದ!

ಚುಟುಕು

ಹೆಣೆದುಕೊಂಡ
ಜಡೆಗೇನು ಗೊತ್ತು
ನನ್ನವನ
ಮುನಿಸು!
ಕಾಣುತ್ತಿರುವುದೇನೊ?
ಸಂಜೆಗೆ ಬರುಬಹುದೆಂಬ
ಮಲ್ಲಿಗೆಯ 
ಕನಸು!

Friday, August 28, 2020

ಚುಟುಕು

ಪದಗಳನ್ನು ಹೆಕ್ಕಿ ತೆಗೆದು
ಕವಿತೆಗಳನ್ನೇನೊ
ಗೀಚಿಬಿಡುವೆ!
ಕುಕ್ಕಿ ತಿನ್ನುವವಳ
ನೆನಪುಗಳನ್ನು ಮರೆಯಲಾಗದೆ
ಇಲ್ಲಿ, ಚಡಪಡಿಸುತ್ತಿರುವೆ!

ಚುಟುಕು

ಈ ನಿದಿರೆ
ಬಾರದ ರಾತ್ರಿಗಳನ್ನು
ಬಳುವಳಿಯಾಗಿ ಕೊಟ್ಟದ್ದು
ಅವಳಲ್ಲವೆ
ಸಾಕಿ....
ಎಷ್ಟೇ.... ಕುಡಿದರು
ಮದಿರೆಯ ಮತ್ತೆ
ಎರುತ್ತಿಲ್ಲ, ಕಂಡು
ಹಾಲು ಬೆಳದಿಂಗಳನು.

Monday, August 24, 2020

ಚುಟುಕು

ಆಡುವ ಮಾತುಗಳಲ್ಲಿ
ನೂರೆಂಟು ಅರ್ಥಗಳಿವೆ.
ವ್ಯರ್ಥವಾಗಿ ಹುಡುಕಬೇಡ!
ಹಚ್ಚಿಕೊಳ್ಳುವವರಿಗೆ ಬಣ್ಣ
ಯಾವುದಾದರೇನು?
ನಮಗೆ ಮಸಿಯನ್ನು 
ಬಳೆಯವುದು ಮಾತ್ರ
ಮರೆಯುವುದಿಲ್ಲ!

ಚುಟುಕು

ಸೊಂಕು ಯಾವುದಾದರೆನು?
ಎದುರಿಸಿ ಗೆಲ್ಲಬಲ್ಲೆನು.
ಸೊಂಕಿತ ಮನಸ್ಸುಗಳನ್ನು
ಹೇಗೆ ಎದುರಿಸಲಿ!
ಮದ್ದಿಲ್ಲದ‌ ರೋಗಕ್ಕೆ,
ಸಾವಾದರು ಔಷಧಿಯಾಗಬಹುದು!
ಹುಟ್ಟು- ಸಾವಿನ ನಡುವೆ
ನರಳುವಂತೆ ಮಾಡುವ ಈ
ಜಗದ ಸ್ನೇಹವನ್ನು  ನಾ
ಹೇಗೆ ಗಟ್ಟಿಕೊಳಿಸಿಕೊಳ್ಳಲಿ!

ಚುಟುಕು

ನನಗೆ ಮುಖಕ್ಕೆ
ಬಣ್ಣ ಹಚ್ಚಿಕೊಳ್ಳುವುದು
ಗೊತ್ತಿಲ್ಲ! ಹೀಗಾಗಿ
ಎಲ್ಲರ ಮುಂದೆ
ನಾಟಕವಾಡಲು
ಬರುವುದಿಲ್ಲ!
ಹೇಳಿದ್ದನ್ನು ಕೇಳುತ್ತೇನೆ.
ತಿಳಿದಿದ್ದನ್ನು ಹೇಳುತ್ತೇನೆ.
ಇವೆರಡರ ಮಧ್ಯದಲ್ಲಿ,
ಎದ್ದು ಹೋದವರ ಬೆನ್ನ
ಹಿಂದೆ ಮಾತನಾಡುವುದನ್ನು
ಈಗೀಗ ನಿಲ್ಲಿಸಿಬಿಟ್ಟಿದ್ದೇನೆ.

ಚುಟುಕು

ಎದೆಯ ಕಡಲಿನ
ತುಂಬಾ....
ವಿರಹದ
ನಂಜನ್ನೆ ಸುರಿದು
ಹೋದೆಯಲ್ಲ
ನಂಜಿ!
ಮನಸಿನ ಭಾವನೆಗಳಿಗೆ
ಮೂರು ಕಾಸಿನ
ಬೆಲೆಯನ್ನೆ ಕೊಡದ
ಊಸರವಳ್ಳಿಯ
ಜನರ ಮಾತಿಗಂಜಿ!

ಚುಟುಕು

ಕೇವಲ,
ಕಾಮದ ನೋಟದಲ್ಲೆ
ನನ್ನನ್ನು ಮೈಲಿಗೆಯಾಗಿಸಬೇಡ!
ನಮಗೆಂದೆ
ಮಧುಮಂಚ ಕಾದಿದೆ
ಇಲ್ಲಿ, ಬರುವುದಕ್ಕೆ
ಲಜ್ಜೆಯ
ನೆಪವನ್ನು ಮಾತ್ರ
ಒಡ್ಡಬೇಡ!

ಚುಟುಕು

ಮೊದಲ ಹೆಜ್ಜೆಯನಿಟ್ಟಾಗ
ಎಲ್ಲರೂ...
ನಕ್ಕರು!
ಗೆದ್ದಿರುವೆನೆಂದುಕೊಂಡಿಲ್ಲ
ನಕ್ಕವರೆಲ್ಲ ಇಂದು
ಪಕ್ಕದಲ್ಲೆ ನಿಂತಿದ್ದಾರೆ.

ಶಾಯರಿ

ತುಂಬಿಟ್ಟ ಮಧು
ಬಟ್ಟಲಿಗೆ, ಎಷ್ಟಾದರು
ಲಿಂಬೆಯ ರಸವನ್ನು
ಹಿಂಡಿಟ್ಟುಬಿಡು.
ನನ್ನ ಬದುಕಿನ
ಕಹಿಯನ್ನೇನದು
ಕಡಿಮೆಗೊಳಿಸುವುದಿಲ್ಲ
ಸಾಕಿ...
ಬಟ್ಟಲು ಬರಿದಾಗುತ್ತದೆ
ಮಾತ್ರ.
ನೋವಿನ ಒರತೆ
ಬಸಿಯುತ್ತಲೆ ಇರುತ್ತದೆ
ಸದಾ.

ಶಾಯರಿ

ಹಲ್ಲಿ ಲೊಚಗುಟ್ಟಿದ್ದರೂ...
ಪ್ರೀತಿ ಹುಸಿಯಾಗಿ
ಹೋಯಿತಲ್ಲ
ಸಾಕಿ...
ಪಾಲಿಗೆ ಬಂದ
ವಿಷವನ್ನು ಹಿಡಿದು
ಯಾರಲ್ಲಿ ನ್ಯಾಯವನ್ನು
ಕೇಳಲಿ.

ಚುಟುಕು

ಎದೆಯಲ್ಲಿ  ರಂಗೀಯು
ಎಬ್ಬಿಸಿಹೋದ 
ಚಂಡಮಾರುತಗಳಿಗೆ
ಲೆಕ್ಕವೆ ಇಲ್ಲ!!
ಬದುಕನ್ನೆ ಚೆಂಡನ್ನಾಗಿಸಿ
ಆಟವಾಡಿದ ಕಪಟಿಯ
ನಾಟಕ, ಮುಗ್ದ?
ಜನರಿಗೇಕೊ
ಅರಿವಾಗುತಿಲ್ಲ!!

ಚುಟುಕು

ನಿಜ.
ನಾನು ಕಡಿದು
ಹಾಕುವಷ್ಟು ದೊಡ್ಡ
ಮರವೇನಲ್ಲ!
ಸಾವಿರ ಜನರು
ತುಳಿದು ಹೋದರು
ಸೋಲದೆ, ಎದ್ದು 
ನಿಲ್ಲುವ ಕಾಲಡಿಯ
ಗರಿಕೆ!

ಚುಟುಕು

ನೀನು ಬಿಟ್ಟು

ಹೋದ ಘಳಿಗೆ!

ಎದೆಯ ನೆಲವೀಗ

ಪದಗಳೆ ಹುಟ್ಟದಷ್ಟು

ಬರಡು!!

ಇಲ್ಲಿಗೂ... ಬರಬೇಡವೆಂದು

ದಿಗ್ಬಂಧನವ ಹಾಕಿಬಿಟ್ಟಿದೆ

ಸುಡುಗಾಡು!

Saturday, August 22, 2020

ಚುಟುಕು

ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡರು
ಎದೆಯ ನೋವು ವಾಸಿ
ಯಾಗುವುದೆಂಬ ಭರವಸೆಯನ್ನೇನು ಕೊಟ್ಟಿಲ್ಲ
ವೈದ್ಯರು!
ಹೂವಂತ ಅಂಗೈಯನ್ನು
ಎದೆಯ ಮೇಲೆ ಇಟ್ಟುಬಿಡು.
ಅದರ ಕಾವಿನಿಂದಾದರು
ನೋವು ವಾಸಿಯಾಗುವುದಂತೆ?
ಅಂತ ಹೇಳುತ್ತಿರುತ್ತಾರೆ
ಅನುಭವಸ್ಥರು!

ಚುಟುಕು

ಹಚ್ಚಿದ ಬೆಂಕಿ, ಕಾಯಿಸಿಕೊಂಡ
ಮೈ ಎರಡು ತಣ್ಣಗಾಗುತ್ತವೆ
ಮೆಹರಬಾನ್!
ಅಮಾಯಕ ಜೀವಗಳು,
ಸುಣ್ಣದ ಗೋಡೆಗಳು, ಬದುಕ
ಬಂಡಿಗೆ ಆಸರೆಯಾಗಿದ್ದ
ವಾಹನಗಳು.... ಇವರ
ತೀಟೆಗಾಗಿಬಿಟ್ಟವಲ್ಲ!
ಕುರುಬಾನ್!!.

ಚುಟುಕು

ಬರಡು ಎದೆಯ
ಮೇಲೆ, ನೀನು ಹೀಗೆ 
ಸುಮ್ಮನೆ
ಗೀರಿ ಹೋದ ಗಾಯಕ್ಕೆ
ಹಚ್ಚಿದರೆ ಮಲಾಮು
ವಾಸಿಯಾಗುವುದೇನು?
ಬಟ್ಟಲು ಮದಿರೆಯನ್ನಾದರು
ಸುರಿದುಬಿಡು!
ನೋವು ಉಳಿದು, ಗಾಯ
ಕಲೆಯಾಗಿಯಾದರು ಉಳಿದು
ನಿನ್ನ ನೆನಪಿಸಬಲ್ಲದೇನೊ?



ಚುಟುಕು

ಇವರ ಮನೆ
ಬಾಗಿಲಿಗಿಲ್ಲ ಸಾಗವಾನಿ
ಮರದ ಚೌಕಟ್ಟು!
ಅನುಭವಿಸಬಲ್ಲಳಾ? ತಾಯಿ
ಅರಮನೆಯಲ್ಲಿ ಇಂತಹ
ಸುಖವನ್ನು.
ಹಾದಿ-ಬೀದಿಯವರ ಕಣ್ಣು
ಕುಕ್ಕುವ ಮುನ್ನವೆ,
ಹಾಕಿಸಿಡಬೇಕಲ್ಲವೆ ಈ
ಕ್ಷಣದ ಪಟಕ್ಕೊಂದು
ಬಂಗಾರದ ಚೌಕಟ್ಟು!

Friday, August 21, 2020

ಚುಟುಕು

ಮಾಗಿದ ಕೈಯಲ್ಲಿ
ರೂಪಗೊಂಡ 'ದೇವರನ್ನು'
ಮಾರಲೆಬೇಕು...
ಹೊಟ್ಟೆಪಾಡಿಗಾಗಿ!
ಜೀವ ಯಾವುದಾದರೇನು?
ಹೊತ್ತು...ಹೊತ್ತಿಗೂ
ಹೋರಾಡುತ್ತಲೆ ಇರಬೇಕು
ತುತ್ತು ಅನ್ನಕ್ಕಾಗಿ!

ಚುಟುಕು

ಅಹಲ್ಯೆ!
ಕಾಡು ಕಗ್ಗಲ್ಲಾಗಿ
ಬಿದ್ದಿದ್ದರು, ಕಾಯುತ್ತಿದ್ದಳು 
ರಾಮ ಬಂದೆ ಬರುವನೆಂಬ
ಭರವಸೆಯಲ್ಲಿ!
ಸುಖದ ಸುಪ್ಪತ್ತಿಗೆಯೆ
ಸೋರಿ ಹೋಗುತ್ತಿದ್ದರಿಲ್ಲಿ,
ನಲುಗಿ ಹೋಗುತ್ತಿದೆ, ಎಸುಳು
ತನುವು ರಾವಣಾಸುರನ
ಮನಸ್ಥಿತಿಯಲ್ಲಿ!



Thursday, August 20, 2020

ಚುಟುಕು

ಪ್ರೀತಿಯಲ್ಲಿ ಲಾಭವನ್ನು
ಮಾಡಿಕೊಳ್ಳಬಹುದೆಂದು
ಅವಳು ತೋರಿಸಿಕೊಟ್ಟಳು!
ಕೈ ಹಾಕಿದಾಗಲೆಲ್ಲ, ಎದೆಯ
ಮೇಲಿನ ಜೇಬಿಗಿಂತ, ಒಳಗಿನ
ಜೇಬಿಗೆ ಹೆಚ್ಚು ನಷ್ಟ!
ಅಕ್ಕ ಪಕ್ಕದಲ್ಲಿ 
ಯಾರು ಇರುವುದಿಲ್ಲ ಆಗ
ಕೇಳಲು.....ಒಡಲೊಳಗಿನ
ಸಂಕಷ್ಟ!

Wednesday, August 19, 2020

ಚುಟುಕು

ಕಣ್ಣೊಳಗಿನ ಭಾವವನ್ನೆ
ಅರಿತುಕೊಂಡಿದ್ದರೆ
ಸಾಕಿತ್ತು, ಮೌನವ
ಮುರಿಯುವ ಜರೂರತ್ತಾದರು
ಏನಿತ್ತು!?
ಮುರಿದರೂ...ಮಾತು
ಮುತ್ತಾಗಬೇಕಿತ್ತು.
ಎದೆಯ ಸೀಳುವ
ಸಿಡಿಮದ್ದಾಗಬಾರದಿತ್ತು!.

ಚುಟುಕು

ಬದುಕಿಗೆ ಹೆಗಲು
ಕೊಟ್ಟವರ ಬುಡವನ್ನೆ
ಅಲ್ಲಾಡಿಸುವ
ಜನರಿಹರಿಲ್ಲಿ!
ಮೌಲ್ಯಗಳಿಗಿಂತ,
ಧನ-ಕನಕಗಳನ್ನೆ
ಹೆಚ್ಚು... ತೂಗಿ ನೋಡುತ್ತಾರೆ
ನಾಲ್ಕು ದಿನದ
ಸಂತೆಯ ತಕ್ಕಡಿಯಲ್ಲಿ!

ಚುಟುಕು

ಹೀಗೆ...
ಗುಲಾಬಿಗಳನ್ನೆ ತೋರಿಸುತ್ತ
ಸುಮ್ಮನೆ ನನ್ನನು
ಕೊಲ್ಲಬೇಡಿ!
ಬಿಟ್ಟು ಹೋದ
ಹೂವಂತವಳನ್ನೊಮ್ಮೆ
ದಯಮಾಡಿ...
ಕರೆತಂದುಬಿಡಿ!

ಚುಟುಕು

ಅತಿಯಾದದ್ದು ಯಾವಾಗಲೂ
ವಿಷವಂತೆ.
ಎಡೆಬಿಡದೆ ಸುರಿದ
ಮಳೆಗೆ, ಕಾಯಿಗಳು
ಗರ್ಭದಲ್ಲೆ ಚಿಗುರೊಡಿಯುತ್ತಿವೆ.
ಬಿತ್ತಿದವರ ಎದೆಯಲ್ಲಿ
ಹತಾಶೆಯ ಅಗ್ನಿಕುಂಡವನ್ನು
ಹೊತ್ತುರಿಸುತ್ತಿವೆ.

ಚುಟುಕು

ಅವ್ವ-ಅಪ್ಪ....
ತೊಟ್ಟುಬಿಟ್ಟ ಬಟ್ಟೆಗಳ
ಹರಿದು, ಹೊಲಿಸಿದ
ಕೌದಿಗಳಲ್ಲೂ....ಅದೆಂತಹ
ಬೆಚ್ಚಗಿನ ಸುಖವಿದೆ!
ಬ್ರೇಡ್ಡು ತಿಂದು, ನಿದಿರೆಯಿಲ್ಲದೆ
ಕರ್ಲಾನ್ ಬೆಡ್ ನಲ್ಲಿ 
ನರಳಾಡುವುದಕ್ಕಿಂತ...
ಒಪ್ಪೊತ್ತಿನ ಗಂಜಿಯಾದರು ಸರಿ
ಕುಡಿದು ಮಲಗುವುದರಲ್ಲಿ
ಸ್ವರ್ಗ ಸುಖವೆ ಅಡಗಿದೆ!

ಚುಟುಕು

ನನ್ನ ನೋಡಿ, ನೀನು
ಹೀಗೆ ನಕ್ಕಗಾಲೆಲ್ಲ
ಜಾರಿ ಹೋಗುತ್ತದೆ
ಮನಸ್ಸು.
ತನುಮನವನ್ನೆ ನಿಗ್ರಹಿಸಿಕೊಳ್ಳಲು 
ಆಗದೆ ಇರುವಾಗ, 
ಮಾಡಿದರೆಷ್ಟು ಬಂತು... 
ವಿಶ್ವಾಮಿತ್ರನಂತೆ ವ್ಯರ್ಥ
ತಪಸ್ಸು.

ಚುಟುಕು

ಕತ್ತಲು ಕಳೆಯುತ್ತೇನೆಂದೆ
ಮೊಂಬತ್ತಿಯನ್ನು
ಹಚ್ಚಿದೆ!
ಒಂದು...ಎರಡು..
ಮೂರು, ನಾಲ್ಕು ಹೀಗೆ
ಉರಿದು ಹೋದವು
ಸುಮ್ಮನೆ.
ಕಳೆಯುವುದಾದರು ಹೇಗೆ?
ಮದದ ಬಣವೆಗೆ 
ಜ್ಞಾನದ ಕಿಡಿಯನ್ನು
ಸೋಕಿಸದೆ!

ಚುಟುಕು

ನಮಗೇನಿದು
ಹೊಸತಲ್ಲ ಬಿಡಿ!
ಕೆಡುವುದು-ಕಟ್ಟುವುದು,
ಸುಡುವುದು-ಬಳಿಯುವುದು.
ತಡೆದುಕೊಳ್ಳುವುದಾದರು
ಎಷ್ಟು ದಿನವಂಥ! ಹೇಳಿ?
ಬಾಯಲ್ಲಿ ಬೆಣ್ಣೆ ಮಾತು
ಎದೆತುಂಬ ಕಾರ್ಕೋಟಕದ ವಿಷ!
'ನೆಮ್ಮದಿ' ಎಂಬುದನ್ನು ನಾವಿನ್ನೇನು
ಹಣಕೊಟ್ಟು ಕೊಂಡುಕೊಳ್ಳಬೇಕೆ?

ಚುಟುಕು

ಇಲ್ಲಿ...
ಆರಿಸುವವರಿಗಿಂತ
ತುಪ್ಪ ಸುರಿಯುವವರೆ
ಜಾಸ್ತಿ!
ಉರಿದು ಹೋದರೇನಾಯಿತು?
ಹೊಟ್ಟೆ-ಬಟ್ಟೆ ಕಟ್ಟಿ
ಗಳಿಸಿಕೊಂಡ
ಆಸ್ತಿ-ಪಾಸ್ತಿ!.

ಶಾಯರಿ

ಜಗಕೆಲ್ಲ ಬರ
ಬಂದರೂ...
ಮಧು ಬಟ್ಟಲಿಗೆ
ಬರ ಬರುವುದೆ?
ಸಾಕಿ...
ಒಂದು ವೇಳೆ
ಮಧುವಿಗೂ.. ಬರ
ಬಂದರು, 
ರಂಗೀಯ ನೆನಪುಗಳಿಗೆ?

Thursday, August 6, 2020

ಚುಟುಕು

ನನ್ನ ನೋಡಿ, ನೀನು
ಹೀಗೆ ನಕ್ಕಗಾಲೆಲ್ಲ
ಜಾರಿ ಹೋಗುತ್ತದೆ
ಮನಸ್ಸು.
ತನುಮನವನ್ನೆ ನಿಗ್ರಹಿಸಿಕೊಳ್ಳಲು 
ಆಗದೆ ಇರುವಾಗ, 
ಮಾಡಿದರೆಷ್ಟು ಬಂತು... 
ವಿಶ್ವಾಮಿತ್ರನಂತೆ ವ್ಯರ್ಥ
ತಪಸ್ಸು.