#ಕಾದಂಬರಿ_ನಿರ್ಣಯ
#ಕಾದಂಬರಿಕಾರ_ಶರಣಪ್ಪ_ಬೇವಿನಕಟ್ಟಿ
ಸೃಜನಶೀಲ ಬರೆಹಗಾರರಾದ ಶರಣಪ್ಪ ಬೇವಿನಕಟ್ಟಿ ಅವರ ಸೃಜನಶೀಲ ಕೃತಿ #ನಿರ್ಣಯ, ನನಗೆ ಯಾವುದು ಸರಿಯೆಂದು ನಿರ್ಣಯಿಸುವಲ್ಲಿ ಗೊಂದಲವನ್ನೇ ಉಂಟು ಮಾಡಿದ ಕೃತಿ. ಈ ಕೃತಿ ಓದಿದ ನಂತರ ಮತ್ತೆ ಮತ್ತೆ ಕಾಡುವ ಗುಣವನ್ನು ಹೊಂದಿದ್ದು ಮನಸಿಗೆ ಅತೀವವಾದ ನೋವನ್ನು ನೀಡಿತು. ಹಾಗೆಂದು ಕೃತಿಯ ದೋಷವಲ್ಲ, ಅದು ಕೃತಿಯ ಶ್ರೇಷ್ಠತೆ. ಇಂತಹ ಒಂದು ಕಾಡುವ ನೋವನ್ನು ನೀಡುವ ಕೃತಿ ನೀಡಿದ ಶರಣಪ್ಪ ಬೇವಿನಕಟ್ಟಿ ಅವರಿಗೆ ಅಭಿನಂದನೆಗಳನ್ನು ಕೋರುವೆ.
ಇಂದು ಬೆಳಿಗ್ಗೆ ಎದ್ದವನೇ #ನಿರ್ಣಯ ಪುಸ್ತಕ ಹಿಡಿದು ಕುಳಿತೆ. ಓದಲು ಆರಂಭಿಸಿದ ಮೇಲೆ ಅದನ್ನು ಪೂರ್ಣಗೊಳಿಸಿಯೇ ಬಿಟ್ಟದ್ದು, ಅದರ ನಡುವೆ ಮಡದಿ ತಂದ ಚಹಾ ಓದಿನೊಡಗೂಡಿಯೇ ಮುಗಿದದ್ದು ವಿಶೇಷ. ಬಹು ವರ್ಷಗಳ ನಂತರ ಈ ರೀತಿ ಪುಸ್ತಕ ಓದಿದ್ದು ಇದೇ ಮೊದಲು. ಶಾಲಾ ಅವಧಿ, ಕಾಲೇಜು ದಿನಗಳಲ್ಲಿ ನಾನೊಬ್ಬ ಓದಿನ ರಾಕ್ಷಸನಾಗಿದ್ದೆ. ಈಗ ಓದೇ ಅಪರೂಪವಾಗಿ ಹೋಗಿದೆ. ಅದರ ನಡುವೆಯೂ ಬರೆಹವಂತೂ ನಿಂತಿಲ್ಲ. ಬರೆಹಕ್ಕಿಂತ ಓದು ಬಹು ಮುಖ್ಯ. ಓದಿನ ಪರಿಪಕ್ವತೆ ಇಲ್ಲದಿದ್ದರೆ ಬರೆಹ ಹೇಗೆ ಸಾರ್ಥಕವಾಗುತ್ತದೆ ಹೇಳಿ. ಅದು ಇರಲಿ ಬಿಡಿ. ಇತ್ತ ಶರಣಪ್ಪರ ಚಿಂತನಾಶೀಲತೆ, ಬದುಕಿನ ಸಂವೇದನಾ ಶೀಲ ಗುಣಧರ್ಮ, ಸತ್ಯದ ಹುಡುಕಾಟದಲ್ಲಿ ನೊಂದವರ ಬದುಕ ದೌರ್ಬಲ್ಯ ಮತ್ತು ಅದರ ಪರಿಣಾಮಗಳ ಘೋರತೆ ಕಾದಂಬರಿಯ ವಸ್ತು. ವಸ್ತುವಿನ ಆಯ್ಕೆ ಬಹಳ ಸುಂದರ ಮತ್ತು ಪ್ರಸ್ತುತವೂ ಹೌದು. ಆದರೆ ಕಥೆಯ ಅಂತ್ಯ ಅತ್ಯಂತ ಹೃದಯ ವಿದ್ರಾವಕವಾದುದು. ಗ್ರೀಕ್ ರುದ್ರ ನಾಟಕಗಳ ಪ್ರೇರಣೆ ಈ ಕಾದಂಬರಿಯಲ್ಲಿ ಕಾಣಬಹುದು.
ಅಖಿಲ್ ಮತ್ತು ರಮೇಶ ಎಂಬೀರ್ವರ ಸುತ್ತ ಸುತ್ತುವ ಕಥೆಯು ಅವರ ಅತಿ ಘೋರವಾದ ಸವಾಲುಗಳ ನಡುವೆ ನರನರಳಿ ಸಾಗುವ ಬದುಕಿನ ಪಥ ಓದುಗನನ್ನು ಅತಿಯಾಗಿ ಕಾಡುತ್ತದೆ. ಸಾಮಾನ್ಯ ವರ್ಗದ ಜನರ ಜೀವನದ ಕಠೋರ ಸತ್ಯಗಳು ಕಥೆಯ ಕೇಂದ್ರ ವಸ್ತುವಾದರೂ ಅದರ ಮಹತ್ತರವಾದ ಉದ್ದೇಶ ಸಮಸ್ಯೆಯ ಪರಿಹಾರಕ್ಕೆ ತುಡಿಯುವಾಗ ಆಗುವ ಸಮಸ್ಯೆ ಮತ್ತು ಸವಾಲುಗಳನ್ನು ಓದುಗನಿಗೆ ಹೃದಯಸ್ಪರ್ಶಿ ಮುಟ್ಟುವಲ್ಲಿ ಕೃತಿ ಗೆಲ್ಲುತ್ತದೆ.
ರಮೇಶ ಕೌಟುಂಬಿಕ ಬದುಕಿನಲ್ಲಿ ಕಾಣುವ ವ್ಯಥೆ, ಇಂದಿನ ಸಮಾಜದಲ್ಲಿನ ಅನಂತ ಕುಟುಂಬಗಳ ಸತ್ಯದ ಕಥೆಯೇ ಹೌದು. ಅಖಿಲನ ಕಥೆಯು ಸಹ ಹೊರತಾದುದಲ್ಲ. ಆರಂಭದಲ್ಲೇ ಓದುಗನನ್ನು ಹಿಡಿದಿಟ್ಟುಕೊಳ್ಳುತ್ತಾ ಸಾಗಿ, ಕೊನೆಯಲ್ಲಿ ಕುತೂಹಲ ಮೈನವಿರೇಳಿಸುವ ಬರೆಹವಿದೆ. ಬದುಕಿನ ಸ್ವಾರ್ಥಕ್ಕಾಗಿ ತೆಗೆದುಕೊಳ್ಳುವ ನಿರ್ಣಯ ಅದೆಷ್ಟು ಮುಖ್ಯ ಎಂಬುದನ್ನು ಕಾದಂಬರಿ ಸಮರ್ಪಕವಾಗಿ ಸಾಧಿಸುತ್ತದೆ.
ಒಬ್ಬ ಕಾದಂಬರಿಕಾರನಿಗೆ ಇರುವ ತಂತ್ರಗಾರಿಕೆ ಶರಣಪ್ಪರಿಗೆ ಸಿದ್ಧಿಸಿದೆ. ಮನೋವಿಜ್ಞಾನದ ಪ್ರಯೋಗಶೀಲತೆ, ವಾಸ್ತವದ ಸವಾಲುಗಳ ನಡುವೆ ಉಂಟಾಗುವ ಜಿಜ್ಞಾಸೆಗಳ ಮೂಲಕ ಕಾದಂಬರಿ ವಾಸ್ತವದ ಕಟು ಸತ್ಯವನ್ನೇ ಸಾಧಿಸುತ್ತಾರೆ. ಪಾರ್ಕಿನ ಸುತ್ತ ಆರಂಭವಾದ ಕತೆಯು ಪಾರ್ಕಿನ ನಡುವೆ ನಡೆವ ಕೆಲವು ಅಗೋಚರಿತ ವಿದ್ಯಮಾನಕ್ಕೂ ಸೂಕ್ಷ್ಮವಾದ ಸಂಕಲ್ಪಿಸಿ, ೫೦೦ ರೂಪಾಯಿ ಪಡೆದುದು ಅಷ್ಟಾಗಿ ಒಪ್ಪದಿದ್ದರು ಒಪ್ಪವಾಗಿಸಿದ್ದಾರೆ. ಅಂತ್ಯದಲ್ಲಿನ ತಿರುವು ತೀವ್ರವಾಗಿ ಓದುಗನಿಗೆ ಅಚ್ಚರಿಯ ಫಲಿತವನ್ನು ನೀಡುತ್ತದೆ.
ಕಾದಂಬರಿಯನ್ನು ಸವಿವರವಾಗಿ ತಿಳಿಸಲು ಬಯಸಲಾರೆ. ಏಕೆಂದರೆ ಓದುಗನಿಗೆ ಕಾತುರತೆ ಇಲ್ಲವಾಗುತ್ತದೆ. ಕಾದಂಬರಿ ಎಲ್ಲರೂ ಓದಬೇಕಾದ ಗುಣಧರ್ಮಗಳನ್ನು ಹೊಂದಿದೆ. ಹಾಗಾಗಿ ಎಲ್ಲರೂ ಓದುವಂತೆ ಕೋರುವೆ. ಇಂದಿನ ಬರೆಹಗಾರರಿಗೆ ಬರೆಯುವುದೊಂದೇ ಧರ್ಮವಾಗಿ ಓದಿನ ಭಾವ ಇಲ್ಲದಾಗಿ ಬರೆಹಗಳು ನಿಸ್ಸಾರವಾಗಿವೆ. ಓದು ಕಾಡಬೇಕು, ಎದೆಯ ಪೀಡಿಸಬೇಕು, ಮತ್ತೆ ಮತ್ತೆ ಯೋಚಿಸಬೇಕು. ಅದೇ ಕೃತಿಯ ಗೆಲುವು. ಈ ನಿಟ್ಟಿನಲ್ಲಿ ಶರಣಪ್ಪ ಯಶಸ್ವಿಯಾಗಿದ್ದಾರೆ.
ಕೃತಿ ಸಂಪೂರ್ಣಗೊಂಡ ಬಳಿಕ ನಿರುತ್ತರನಾಗಿ ಕುಳಿತ ನನಗೆ "ಏನಾಯ್ತು ರೀ ನಿಮಗೆ" ಎಂದು ಮಡದಿ ಪ್ರಶ್ನಿಸಿದಾಗ ಮೌನವೊಂದೇ ಉತ್ತರವಾಯಿತು. ಇಂತಹ ಕೃತಿಯ ಓದು ನಮಗೆ ಬೇಕು. ಆದರೆ ಬಡತನದವರು ಧರ್ಮ, ಸತ್ಯ, ನ್ಯಾಯದ ಪಥ ಹಿಡಿದು ಸೋಲುತ್ತಾರೆ ಆದರೆ ಸಿರಿವಂತರಿಗೆ ಇದರ ಹಂಗಿಲ್ಲ ಆದರೂ ಗೆಲ್ಲುತ್ತಾರೆ. ಇಲ್ಲಿ ಈ ದ್ವಂದ್ವಗಳು ನನಗೆ ಕಾಡುವ ಪ್ರಶ್ನೆಯಾಗೇ ಉಳಿದವು. ಇವುಗಳಿಗೆ ಉತ್ತರ ಏಕಿಲ್ಲ. ಕತೆಯನ್ನು ಸುಖಾಂತ್ಯಗೊಳಿಸಿದ್ದರೂ ಚೆನ್ನಾಗಿತ್ತು. ಆದರೆ ಕಾದಂಬರಿಕಾರ ಈ ಪ್ರಯತ್ನಕ್ಕೆ ಕೈಹಾಕದೇ ಗೆದ್ದಿದ್ದಾನೆ.
ಒಟ್ಟಾರೆ #ನಿರ್ಣಯ ಕಾದಂಬರಿಯನ್ನು ಓದಿ ಅದರ ನಿರ್ಣಯವನ್ನು ನೀವೇ ಹೇಳಬೇಕು. ಇದು ನನ್ನ ಅನುಭವಕ್ಕೆ ದಕ್ಕಿದ್ದು. ಸೂಪರ್ ಶರಣಪ್ಪರೇ. ನಿಮ್ಮ ಬರೆಹಕ್ಕೊಂದು ಶರಣು.
👌👌👌👌🙏🙏🙏🙏
ಪ್ರೀತಿಯಿಂದ,.
ಡಾಕೇಶ್ ತಾಳಗುಂದ
೨೪.೦೫.೨೦೧೯
No comments:
Post a Comment