ಹೀಗೆ....ಹೆರಳುಗಳ ಹರವಿ, ಕೈ ತುಂಬ
ಬಳೆಗಳ ತೊಟ್ಟುಕೊಂಡು, ಹತ್ತಿಯ ಹಾಸಿಗೆಯ
ಮೇಲೆ ಹೂವಿನಂತವಳು ನೀ....ಮಲಗಿಬಿಟ್ಟರೆ!!
ಹೇಗೆ? ಸಾಕಿ....
ಬಾಯಾರಿ ಬಂದಿರುವೆ, ಅರಸಿಕರು ಕುಡಿದು
ಬಿಟ್ಟು ಹೋದ ಮಧು ಬಟ್ಟಲುಗಳನ್ನಾದರೂ...
ತೋರಿಸು, ಕುಡಿದು ವಿಷ ವಿರಹದಾಹವನೀಗಿಸಿಕೊಳ್ಳುವೆ...
ಎಂಜಲಾದರೂ ಏನಾಯಿತು? ನನ್ನ ಬಿಟ್ಟು ಹೋದ
ಪ್ರೀತಿಯ ಎಂಜಲನ್ನು ಮತ್ತೊಬ್ಬನು ಉಣ್ಣುತ್ತಿಲ್ಲವೇನು?
ಈ ಸಂಜೆಗೆ ಹೂವನ್ನು ತರಲಿಲ್ಲವೆಂದೆನಾದರು
ಬೇಸರಿಸಿಕೊಂಡಿರುವೇಯಾ? ಸಾಕಿ...
ದಿನದಂತೆ ಹಿಡಿತುಂಬ ನಿನ್ನಿಷ್ಟದ ಮೈಸೂರು
ಮಲ್ಲಿಗೆಯನ್ನೆ ತರುತ್ತಿದ್ದೆ...ದಾರಿಯಲ್ಲೊಂದು ಶವಯಾತ್ರೆಯು ನಡೆದಿತ್ತು ಕೇಳಿದೆ, ಆ ಜೀವವೂ...
ಅವಳ್ಹೆಸರಿನಲ್ಲಿಯೆ ಉಸಿರು ಚೆಲ್ಲಿತೆಂಬುದು ಗೊತ್ತಾಯಿತು!
ಹಿಡಿಯಲ್ಲಿದ್ದ ಅಷ್ಟೂ.... ಹೂಗಳನ್ನು ಅವನೆದೆಯ ಮೇಲೆ
ಸುರಿದು ಬಂದುಬಿಟ್ಟೆ... ತಪ್ಪಾಯಿತೇನು?
ಬರಿಗೈಯಲ್ಲೆ ಬಂದಿರುವೇನೆಂದು ದಾಸಿಗೆ ಹೇಳಿ
ನಿನ್ನರಮನೆಯ ಆವರಣದಿಂದಾಚಗೆ ದೂಡಿಸಿಬಿಡಬೇಡ
ಸಾಕಿ....
ಬಟ್ಟಲೊಳಗಿನ ಮಧು ಸಿಗದಿದ್ದರೂ ಸರಿ... ಗಾಳಿಯಲ್ಲಿ
ತೇಲಿ ಬರುವ ಅದರ ಸುವಾಸನೆಯನ್ನೆ ಹೀರುತ್ತಾ ನೆಮ್ಮದಿಯ ನಿದ್ದೆಯನ್ನಾದರು ಮಾಡುತ್ತೇನೆ!!ನಿನ್ನಂಗಳದಲ್ಲಿ
ಇಲ್ಲವಾದರೆ, ಮಸೀದಿ, ಮಂದಿರ, ಚರ್ಚಗಳೆಂದು ಕಾಣದ ದೇವರಗಳ ಹುಡುಕುತ್ತ...ಇದ್ದೊಂದಿಷ್ಟು ಮನಸ್ಸಿನ
ಶಾಂತಿಯನ್ನೇಕೆ ಹಾಳು ಮಾಡಿಕೊಳ್ಳಲಿ.
ನನ್ನ ನಿನ್ನರಮನೆಯ ಸಂಬಂಧ ಇದೊಂದು ಸಂಜೆಗೆ
ಮುಗಿದು ಹೋಗುವುದ್ದಂತೇನು ಸಾಕಿ....
ಅವಳಿಲ್ಲವಾಯಿತು!! ಇನ್ನೇನಿದ್ದರು ಏಳೆಳು ಉರುಳುಗಳ
ನಂಟು ಇಲ್ಲಿಗೆ.... ಗಟ್ಟಿಯಾಗಲಿಲ್ಲವೇನು?
ಉಸಿರು ನಿಂತ ಮೇಲೆ..!!? ಮಸಣಕ್ಕೆ ಸಾಗಿಹಾಕಿ ಬಿಡಬೇಡ
ನಿತ್ಯ ಸುಗಂಧವ ಸೂಸುವ ನಿನ್ನರಮನೆಯ ತೋಟದಲ್ಲಿ
ಹುಗಿದಿಸಿಬಿಡು... ನೋವು ನೆರಿಗೆಗಳಳಿಸುವ ಹೂಗಳ
ಬೇರುಗಳಿಗೆ ಗೊಬ್ಬರವಾದರು ಆಗಲಿ..
ಆಗುವುದಿಲ್ಲವೇನು...? ಹೇಳು... ಆಗುವುದಿಲ್ಲವೆನು?
No comments:
Post a Comment