Tuesday, January 24, 2023

ಭೈರಾಗಿ.!!



ಹಂಗೀನ ಬದುಕನ್ಯಾಗ
ಹುಚ್ಚು ಮಲ್ಲರ ಸಂಗ ಯಾಕೋ?
ಜೋಳಗಿ ಹಿಡದ ಹೊಂಟಿ ಹಿಡಿ 
ಪ್ರೀತಿ ಇಲ್ಲದ ಬದುಕಬಲ್ಲವೇನೊ? ಭೈರಾಗಿ!!

ಮಳ್ಳ ಮಾತ ಮಾತಾಡಿ
ಮಂದಿ ಮೋಸ ಮಾಡೊರ ಹೆಗಲ್ಯಾಕೋ?
ಎರಡ ಪದ ಬರಿತೀವಂದ್ರ, ಅದು ಓದೋನ
ಎದಿ ದುಃಖ್ಖಾನ ಕಮ್ಮಿ ಮಾಡಿದ್ರ ಸಾರ್ಥಕ
ಅಲ್ಲವೇನೊ? ಭೈರಾಗಿ!!

ಮುಕ್ಕಣ್ಣನಿಗೂ ಬಿಡದ ತಾಪ-ತ್ರಯ
ನಮ್ಮನ್ನು ಬಿಟ್ಟಿತು ಹೇಗೊ?
ಸಂಸಾರದ ಮಡಿಕ್ಯಾಗ ಕಷ್ಟ-ಸುಖಾನ
ಸಮನಾಗಿ ಕಡದು-ಕುಡದ  ವಿಷಕಂಠ
ನಾಗಬೇಕಲ್ಲವೇನೊ? ಭೈರಾಗಿ!!

ಸಾಸಿವೆ ಜ್ಞಾನವನ್ನು ಹೊಂದದೆ
ಇಲ್ಲಿಯವರೆಗೂ ನಡೆದು ಬಂದು
ಬಿಟ್ಟೆವಲ್ಲೊ?
ತಪಗೈಯ್ಯಬೇಕು, ಒಳಗಿನೆಲ್ಲದವ
ಕಳೆದುಕೊಂಡು; ಬದುಕಬೇಕು ಭೈರಾಗಿ!!
ಬದುಕಬೇಕು...

ಶರಣಪ್ಪ ಬೇವಿನಕಟ್ಟಿ 🙏🙏🙏🙏

ಕಡು ಕತ್ತಲೆ ಹಾದಿಯ ಕ್ರಮಿಸಲು ಕಾವ್ಯದ 
ನಂದದ ಕಂದೀಲ ಕೈಗಿತ್ತ ಆತ್ಮ ಬಂಧುವೆ 
ಬರಿದಾದ ಜೋಗಿ ಜಂಗಮನ ಜೋಳಿಗೆಗೆ
ಅಕ್ಷರಗಳ ಅರಿವ ಸುರಿದು ಹರಸಿದ್ದು ನಿಜವೆ 
ಇಗೋ ನಿನಗೊಂದು ನಮನ !

*****

ಅಪವಾದದ ಅವಮಾನದ ಗೀರು ಗಾಯಗಳಿಗೆ
ಮದ್ದರೆವ ಸಾಹಿತ್ಯ ಸಿದ್ಧ ಸೂತ್ರವ ತಿಳಿಸಿದೆ 
ನೋವಿಗೊಂದು ನಲಿವಿಗೊಂದು ಕವಿತೆ ಬರೆವಂತೆ
ಗೆಳೆತನದ ಮರದ ಮರೆಯಲೇ ನಿಂತು ಹರಸಿದೆ
ಇಗೋ ನಿನಗೊಂದು ನಮನ !

*****

ತಿಳಿದಿರುವುದು ಅಲ್ಪ ತಿಳಿಯಬೇಕಿರುವುದು ಕಲ್ಪ
ಹಿಂದೆ ತೆಗಳಿ ಮುಂದೆ ಹೊಗಳುವವರ ಬಿಡೋ ಹುಚ್ಚ
ನಿನ್ನ ದಾರಿ ನೀ ಹಿಡಿದು ಸಾಗುತಿರು ಎನುತಲಿ ಎಚ್ಚರಿಸಿ
ಹೇಳಿದೆ ಹೀಗಳೆಯುವವರ ಸಾಹಿತ್ಯ ಶಿವನೂ ಮೆಚ್ಚ
ಇಗೋ ನಿನಗೊಂದು ನಮನ !

✍🏻ರಾಜ್ ಆಚಾರ್ಯ
       ೨೪-೦೧-೨೦೨೩




No comments:

Post a Comment