Saturday, November 12, 2022

ಮಂಗಳಮುಖಿ ೧

ಮಂಗಳಮುಖಿ ೧
   ಪೇಟೆಗೆ ಹೋಗಿ ಹಾಲು ಮತ್ತು ತೋಟದಲ್ಲಿ ಬೆಳೆದಂತಹ ತರಕಾರಿಗಳನ್ನು ಮಾರಿಕೊಂಡು ಮರಳಿ ಹಳ್ಳಿಗೆ ಬರುವ ಮಾರ್ಗ ಮಧ್ಯದಲ್ಲಿ ನಿಂಗವ್ವನ ಗಂಡನ ಬೈಕ್ ಗೆ ಎದುರಿನಿಂದ ಬರುತ್ತಿದ್ದ ಲಾರಿಯ ನಿಯಂತ್ರಣ ತಪ್ಪಿ ಇವನ ಬೈಕ್ ಗೆ ಗುದ್ದಿದರ ಪರಿಣಾಮ ನಿಂಗವ್ವನ ಗಂಡನ ಪ್ರಾಣ ಸ್ಥಳದಲ್ಲಿಯೆ ಹೋಗಿಬಿಡುತ್ತದೆ. ಲಾರಿ ಚಾಲಕ ಬೈಕ್ ಸವಾರನಿಗೆ ಏನಾಗಿದೆ ಎಂದು ನೋಡದೆ ಲಾರಿಯನ್ನು ಮತ್ತಷ್ಟು ವೇಗವಾಗಿ ಓಡಿಸಿಕೊಂಡು ಹೋಗಿಬಿಡುತ್ತಾನೆ. 
ಆಗಿನ್ನೂ ಚಿಕ್ಕ ವಯಸ್ಸು ನಿಂಗವ್ವನದು. ಒಬ್ಬನೆ ಮಗ, ಮೂರು ವರ್ಷದವನಿರಬೇಕು. ತುಂಬು ಹರೆಯದ, ಇನ್ನೂ ಬದುಕಿನ ಸಿಹಿ-ಕಹಿಗಳ ಅನುಭವಿಸಿದ  ವಯಸ್ಸಿನಲ್ಲಿ ಈ ದುರ್ಗತಿ ಬಂದಿದ್ದನ್ನು ನೋಡಿ ಊರಿಗೆ ಊರೆ ದುಃಖದ ಮಡುವಿನಲ್ಲಿ ಮಿಂದಿತ್ತು. ತವರು ಮನೆಯವರು ಎಷ್ಟೋ ಒತ್ತಾಯವನ್ನು ಮಾಡಿದರು ತವರಿಗೆ ಕರೆದುಕೊಂಡು ಹೋಗಲು. ಕೊಟ್ಟು ಹೆಣ್ಣು ಕುಲಕ್ಕೆ ಹೊರಗೆ ಎಂಬಂತೆ ನಿಂಗವ್ವ ಕಲ್ಲು ಬಂಡೆಯಂತೆ ಧೃಡ ನಿರ್ಧಾರಕ್ಕೆ ಬಂದುಬಿಟ್ಟಿದ್ದಳು. ಗಂಡ ಬಿಟ್ಟು ಹೋದಂತಹ ಮೂರುವರೆ ಎಕರೆ ತೋಟದಲ್ಲೆ ದುಡಿದು, ಮಗನನ್ನು ಬೆಳಸಿಕೊಂಡು, ಕಷ್ಟಾನೊ?, ಸುಖಾನೊ? ಬಂದದ್ದು ಬರಲಿ ಗಂಡನ ಮನೆ ಹೊಸ್ತಿಲನ್ನು ನಾನು ದಾಟಿ ಬರುವುದಿಲ್ಲ ಎಂದು ಹಿಡಿದುಕೊಂಡಿದ್ದ ಅವಳ ಹಠವೆ ಜಯಿಸಿತ್ತು. ನಿಂಗವ್ವನ ಗಂಡ ಅತ್ತೆ ಮಾವಂದರಿಗೆ ಒಬ್ಬನೆ ಒಬ್ಬ ಮಗ. ಇವರ ವಿವಾಹವಾದ ಎರಡು ವರ್ಷದಲ್ಲೆ ಅವರು ಶಿವನ ಪಾದವನ್ನು ಸೇರಿಕೊಂಡಿಬಿಟ್ಟಿದ್ದರು ಅನಾರೋಗ್ಯದಿಂದ. ಗಂಡನ ಮನೆಯಲ್ಲಿಗ ಇವಳು ಮತ್ತು ಹಾಲುಗಲ್ಲದ ಹಸುಗೂಸು ಮಾತ್ರ. ಈ ಕಾರಣಕ್ಕಾಗಿ ತವರು ಮನೆಯವರು ಇವಳನ್ನು ತವರಿಗೆ ಕರೆದುಕೊಂಡು ಹೋಗುವ ನಿರ್ಧಾರಕ್ಕೆ ನಿಂಗವ್ವ ತಣ್ಣೀರನ್ನು ಎರೆಚಿದ್ದಳು.  ಇವಳ ಈ ದಿಟ್ಟ ನಿರ್ಧಾರಕ್ಕೆ ಬೆಂಬಲವಾಗಿ, ಗಂಡನ ಪ್ರಾಣ ಸ್ನೇಹಿತನಾದಂತಹ ಮಲ್ಲಪ್ಪ ಮತ್ತು ಅವನ ಮಡದಿ ಶಾಂತವ್ವಳು ಬೆಂಗಾವಲಾದರು. ವಿಧಿ ಇಲ್ಲದೆ ತವರು ಮನೆಯವರು ನಿಂಗವ್ವಳನ್ನು ಗಂಡನ ಮನೆಯಲ್ಲಿಯೆ ಬಿಟ್ಟು ಹೋದರು. 
     ಕಾಲದ ಸುರುಳಿ ಸುತ್ತುತ್ತ ಬಂದಿತು. ಮಲ್ಲಪ್ಪನ ಬೆಂಬಲ, ಸಲಹೆಗಳೊಂದಿಗೆ ತೋಟವನ್ನು ನಳನಳಿಸುವಂತೆ ಮಾಡಿದಳು, ವರ್ಷಕ್ಕೆರಡು ಬೆಳೆಗಳು, ಕಾಲಕಾಲಕ್ಕೆ ಗೊಬ್ಬರ ನೀರನ್ನು ಕೊಡುತ್ತಾ ಬಂಗಾರದಂತಹ ಬೆಳೆಗಳನ್ನು ಬೆಳೆಯುವಲ್ಲಿ, ಬೆಳೆದ ಬೆಳೆ, ತರಕಾರಿಗಳನ್ನು ತಾನೆ ಖುದ್ದಾಗಿ ಮಾರುಕಟ್ಟೆಗೆ ಸಾಗಿಸಿ ಮಾರಾಟವನ್ನು ಮಾಡಿಕೊಂಡು ಬರುತ್ತಾ ಜೊತೆಜೊತೆಯಲ್ಲಿ ಮಗನ ಆರೈಕೆ, ಅಭ್ಯಾಸದ ಕಡೆಗೂ ಗಮನವನ್ನು ಹರಿಸಿ, ಬೆಳೆಸಿ ಕಾಲೇಜಿಗೆ ಸೇರಿಸಿದ್ದಳು. ಮಲ್ಲಪ್ಪನ ಮಗನು ನಿಂಗವ್ವನ ಮಗನು ಒಂದೆ ವಯಸ್ಸಿನವರಾದ್ದರಿಂದ ಇಬ್ಬರನ್ನು ಜೊತೆಗೂಡಿಯೆ ಪದವಿಪೂರ್ವ ಶಿಕ್ಷಣಕ್ಕೆ ಹಳ್ಳಿಯಿಂದ ಸುಮಾರು ಇಪ್ಪತ್ತೆರಡು ಕಿ. ಮೀ. ದೂರವಿರುವ ಗಜೇಂದ್ರಗಡ ನಗರದ ಕಾಲೇಜಿನಲ್ಲಿ ಸೇರಿಸಿ ಬಂದಿದ್ದರು. 

ಎಲ್ಲವು ಸರಿಯಾಗಿಯೆ ನಡೆದುಕೊಂಡು ಹೊರಟಿತ್ತು. ಎಲ್ಲವೂ... ಸರಿಯಾಗಿ, ನಾವಂದುಕೊಂಡಂತೆಯೆ ನಮ್ಮ ಬದುಕಿನ ಹಾದಿ ಹಾಸಿದ್ದರೆ!!! ನರೇಂದ್ರ ಬುದ್ಧನಾಗುತ್ತಿದ್ದನೊ?
ಕಂಸ ಸಾಯುತ್ತಿದ್ದನೊ? ಗಾಂಧಿ ಮಹಾತ್ಮನಾಗುತ್ತಿದ್ದನೆ?
ತಿಮ್ಮಕ್ಕ ಸಾಲುಮರಗಳ ತಾಯಿಯಾಗುತ್ತಿದ್ದಳೆ? ವೀರಪ್ಪನ್ ಬಂದೂಕು ಹಿಡಿದುಕೊಳ್ಳುತ್ತಿದ್ದನೆ? ಕಾಡುವ ಹಸಿವಿಗೆ ಮಂಚವನೇರುವ ದುಸ್ಥಿತಿ ಅವಳಿಗೆ ಬರುತ್ತಿರಲಿಲ್ಲ ಬದುಕೆ ಹೀಗೆ ಅಲ್ಲವೆ? ಹಾದಿಯೊಳಗಿನ ಅದಾವ ತಿರುವು ನಮ್ಮ ಬದುಕಿನ ದಿಕ್ಕನ್ನೆ ಬದಲಿಸಿಬಿಡುತ್ತದೆಯೋ? ಯಾರಿಗೆ ಗೊತ್ತು. ಹಾಲೆಂದುಕೊಂಡದ್ದು ವಿಷವಾಗಿಬಿಡುತ್ತದೆ,  ಕೊಳವಾಗಿದ್ದದ್ದು ಕೆಸರಾಗಿಬಿಡುತ್ತದೆ, ಕಲಿಸಿಟ್ಟ ಅಗುಳು ಹಳಸಿ ಹೋಗುತ್ತದೆ. ಹೀಗೆ ತುಂಬು ಚಂದಿರನ ಪ್ರತಿರೂಪವನ್ನೆ ಹೋಲುತ್ತಿದ್ದಂತಹ, ಹೆಂಗಸರು ಮುಟ್ಟಿದರೆ ಮಾಸಿ ಹೋಗುವವನೇನೊ? ಎಂಬಂತಹ ಮೈ ಬಣ್ಣ, ನಕ್ಕರೆ ಪೂರ್ಣಿಮೆಯ ಬೆಳಕನ್ನು ನಿವಾಳಿಸಿ ಒಗಿಯಬೇಕೆನ್ನುವಂತಹ ಸೆಳೆತ ಇಂತಹ ಸ್ಪುರದ್ರೂಪಿ ಶಶಿಕಾಂತನ ಯೌವ್ವನದ ಹಾದಿಯು ಒಂದು ತಿರುವನ್ನು ಕಂಡಿತು. 
ಮಲ್ಲಪ್ಪನ ಮಗ ನಾಗರಾಜನಿಗೂ ಗೊತ್ತಿರಲಿಲ್ಲ, ಕಾಲೇಜ್ ಬಿಟ್ಟ ತಕ್ಷಣ ಒಂದರ್ಧ ಗಂಟೆ ನಾಗರಾಜನನ್ನು ಬಸ್ ನಿಲ್ದಾಣದಲ್ಲಿಯೆ ಕೂರಿಸಿ, ಶಶಿಕಾಂತನು ಎಲ್ಲಿಗೂ ಹೋಗಿ ಬರುತ್ತಿದ್ದನು. ಬರುವಾಗ ಮಾತ್ರ ಅವನ ಮುಖ ಸೇಬು ಹಣ್ಣಿನ ಕೆಂಪು ಬಣ್ಣದ ಹಾಗೆ ರಂಗೇರಿರುತ್ತಿತ್ತು. ನಾಗರಾಜ ಈ ವಿಷಯವನ್ನು ಎಷ್ಟು ಕೇಳಿದರು ಶಶಿಕಾಂತನು ಒಂದು ದಿನವು ಗುಟ್ಟನ್ನು ಬಿಟ್ಟು ಕೊಟ್ಟಿರಲಿಲ್ಲ ' ಟೈಂ ಬರ್ಲಿ ತಗೊಳ್ಲೆ ಮಗ್ನ ಆವಾಗ ನಿಂಗ ಎಲ್ಲಾ ಗೊತ್ತಾಕೈತಿ' ಎಂದು ಊರ ಬಸ್ಸನ್ನು ಹತ್ತಿ, ಹಳ್ಳಿಯನ್ನು ತಲುಪುವವರೆಗೂ ಮೊಬೈಲ್ ನಲ್ಲಿ ಆ ವ್ಯಕ್ತಿಯೊಂದಿಗೆ ಮಾತನಾಡುತ್ತಲೆ ಇರುತ್ತಿದ್ದ.


ರಾತ್ರಿ ಎಂಟೂವರೆಯಾಗಿತ್ತು, ಮಲ್ಲಪ್ಪನು ಅದೆ ತಾನೆ ಊಟವನ್ನು ಮಾಡಿಕೊಂಡು ಬಂದು ಜಗುಲಿಯ ಮೇಲೆ ಕುಳಿತುಕೊಂಡಿದ್ದನು. ಮಡದಿ ಶಾಂತವ್ವ ವಿಳ್ಯೆದೆಲೆ ತಟ್ಟೆಯನ್ನು ತಂದು ಗಂಡನ  ಮುಂದಿಟ್ಟಳು. ಸಣ್ಣಪ್ಪನು ಒಂದೆರಡು ಎಲೆಗಳನ್ನು ತೆಗೆದುಕೊಂಡು ತೊಟ್ಟನ್ನು ಚಿವುಟಿ ಒಗೆದು,  ಬಲಗೈ ಹೆಬ್ಬರಳಿನಿಂದ ಸುಣ್ಣದ ಡಬ್ಬಿಯಲ್ಲಿದ್ದ ಸುಣ್ಣವನ್ನು ಗೀರಿಕೊಂಡು ಎಲೆಗಳಿಗೆ ಸವರಿ, ಒಂದೆರಡು ಅಡಿಕೆ ಹೋಳುಗಳನ್ನು ಮತ್ತು ಒಣ ಕೊಬ್ಬರಿಯ ತುಂಡೊಂದನ್ನು ಮುರಿದಿಟ್ಟುಕೊಂಡು ಎಲೆಯನ್ನು ಮಡಿಚಿ, ಬಾಯೊಳಗೆ ಹಾಕಿಕೊಂಡು ಜಗಿಯತೊಡಗಿದನು. ಹತ್ತು ನಿಮಿಷ ಕಳೆಯಿತು , ಎದುರು ಮನೆಯಿಂದ ನಿಂಗವ್ವ ಮೈ ತುಂಬಾ ಸೆರಗನ್ನು ಹೊದ್ದುಕೊಂಡು ಬಂದಳು 'ಯಣ್ಣಾ ಊಟಾಯ್ತಾ?, ಅತ್ತೆಮ್ಮ ನಿಂದು'  ಕೇಳುತ್ತ ತಲೆಯ ಮೇಲಿನ ಸೆರಗನ್ನು ಸರಿಪಡಿಸಿಕೊಂಡು ಶಾಂತವ್ವಳ  ಹತ್ತಿರಕ್ಕೆ‌ ಬಂದು ನಿಂತಳು. ಮಲ್ಲಪ್ಪನೆಂದರೆ ಎಲ್ಲಿಲ್ಲದ ಭಯ, ಭಕ್ತಿ, ಗೌರವವಲ್ಲದೆ ಸ್ವಂತ ಅಣ್ಣನಿಗಿಂತಲೂ ಒಂದು ಕೈ ಮೇಲೆಯೆ ಎನ್ನುವಂತಿದ್ದ ನಂಬಿಕೆ.

ನಿಂಗಪ್ಪ ಬಾಯಲ್ಲಿ ತುಂಬಿಕೊಂಡಿದ್ದ ವಿಳ್ಳದ ರಸವನ್ನು ಕಟ್ಟೆಯಾಚೆಗೆ ಉಗಿಯುತ್ತಾ, 'ನಿಂದೂಟ ಆತನವಾ?'
'ಹ್ಞೂಂ' 
'ಮತ್ತೇನವ ಸಮಾಚಾರ, ಬೆಳಿಗೆ ಹುಳಾ ಬಿದ್ದಾವಂತ, ಆ ಹಿತ್ಲಮನಿ ಸೀನ್ಯಾಗ ಹೇಳಿನಿ, ಹೊತ್ತಾರೆನೆ ಹೋಗ್ಬಿಟ್ಟು ಬೆಳಿಗೆಲ್ಲಾ ಎಣ್ಣಿ ಹೊಡ್ದಬಿಟ್ಟ ಬಂದ್ಬಿಡಂತ ಹೇಳಿನಿ'.
'ಹಂಗಾ ಆಗ್ಲಾಳಣ್ಣ' ಸೋತ ಧ್ವನಿಯಲ್ಲಿ ಮಾತನಾಡಿದಳು.
ಅವಳ ಮಾತಿನಲ್ಲಿ ಗೆಲುವಿಲ್ಲದಿರುವುದನ್ನು ಕಂಡುಕೊಂಡ ಮಲ್ಲಪ್ಪನು, ಮುಂದೆ ತುಂಬಿಟ್ಟಿದ್ದ ಚರಿಗೆ ನೀರನ್ನು ಎತ್ತಿಕೊಂಡು ಬೀದಿಯ ಪಕ್ಕಬಂದು, ಬಾಯಲ್ಲಿ ಹಾಕಿಕೊಂಡಿದ್ದ ವಿಳ್ಯದೆಲೆಯನ್ನು ಉಗುಳಿ, ಚರಿಗೆ ನೀರಿನಿಂದ ಬಾಯಿಯನ್ನು ತೊಳೆದುಕೊಂಡು, ಮರಳಿ ಕಟ್ಟೆಯ ಮೇಲೆ‌ ಕುಳಿತುಕೊಂಡು ಗಂಭೀರವಾಗಿ ಮಾತನಾಡಲು ಗಂಟಲನ್ನು ಕೆಮ್ಮಿ ಧ್ವನಿಯನ್ನು ಸರಿಪಡಿಸಿಕೊಂಡು ಎರಡು ನಿಮಿಷ ಸುಮ್ಮನಿದ್ದು, 'ಹೇಳವಾ ಏನರ ಬ್ಯಾರೆ ಮಾತಾಡೋದೈತನು?'
'ಅದು ಊರಿಂದ ಅಣ್ಣಯ್ಯ ಬೆಳಿಗ್ಗೆ ಪೋನ್ ಮಾಡಿದ್ದ'
'ಏನಂತ?'
'ಮಗ್ಳ ಸುಮವ್ವಗ ಗಂಡ ನೋಡಾಕ್ಹತ್ತಾರಂತ'
'ಹೌದಾ? ಆಗ್ಲೆ ಲಗ್ನ‌ ಮಾಡುವಷ್ಟ ಬೆಳ್ದ ಬಿಡ್ತಾ ಆ ಹುಡ್ಗಿ, ಇವನೌನ್ ಅಲ್ಲ ಬೆ ಮೊನ್ ಮೊನ್ನೆ ಶಾಣಬಸಪ್ಪನ ಜಾತ್ರ್ಯಾಗ ಲಂಗಾ ದಾವಣಿ ಹಾಕೊಂಡ ಓಡಾಡ್ತಿದ್ದ ಹುಡ್ಗಿ ಅದು. ಅದಕ್ಕ ಲಗ್ನಾನ? ಹಂಗವ್ವಾ.. ಹೆಣ್ಮಕ್ಳಂದ್ರ ನಿಲಗೇರಿ ಗಿಡ ಇದ್ದಂಗ ಪುರುಪುರು ಅಂತಂದ ಬೆಳ್ದ ನಿಂತ ಬಿಡ್ತಾವು, ನಮ್ಗ ಒಂದು ಹೆಣ್ಣಿಲ್ಲ, ಇದ್ದಿದ್ರ ಇಷ್ಟೊತ್ಗೆ ನಾನು ನೀನು ಅಜ್ಜಾ ಅಜ್ಜಿಯಾಗಿ ಮೊಮ್ಮಕ್ಳನ ಆಡಿಸಿಕೊಂತ ಕುಂದ್ರಬೇಕಾಗಿತ್ತ ನೋಡ್ವಾ, ಹ್ಞೂಂ.. ಮದ್ವಿ, ಮಕ್ಕಳು, ಮೊಮ್ಮಕ್ಳು ಹಿಂಗಾ ಕಣ್ಮುಚ್ಚಿ ಕಣ್ ತೆಗಿಯೊದ್ರಾಗ ಎಲ್ಲಾ ಆಗಿ ಹೋಗಿ ಬಿಡ್ತಾವು. ಹೊಟ್ಟಿ-ಬಟ್ಟಿಗೆ ಕಮ್ಮಿ ಇರ್ಲಿಲ್ಲಂತಂದ್ರ ದಿನಾ ಹ್ಯಾಂಗ ಹ್ವಾದವು ಅನ್ನೋದ ತಿಳಿಯಂಗಿಲ್ಲ ನೋಡ್ವಾ. ಮತ್ತೇನೀಗ ಇಲ್ಲೆ ಎಲ್ಲೇರ ಗಂಡ ನೋಡ್ಬೇಕಂತನು?'
ಅಷ್ಟೊತ್ತು ಸುಮ್ನಿದ್ದ ನಿಂಗವ್ವ, ಬಾಯಿಗೆ ಸೀರೆ ಸೇರಗನ್ನು ಹಿಡಿದು ಬಿಕ್ಕಳಿಸಿ ಅಳತೊಡಗಿದಳು.
'ಯಾಕ ನಮ್ಮವ್ವ, ಏನಾತು' ಶಾಂತಾಳು ನಿಂಗವ್ವನ ಭುಜಕ್ಕೆ ಕೈ ಹಾಕಿ ತಬ್ಬಿಕೊಂಡು ಕೇಳಿದಳು.
ನಿಂಗವ್ವ, ಕಣ್ಣೀರನ್ನು ಒರೆಸಿಕೊಳ್ಳುತ್ತಾ,
'ಮನ್ಯಾಗ ಎದಿಯುದ್ಕ ಬೆಳ್ದ ನಿಂತ  ಅಳಿಯಾ ಅದಾನ, ಅವನ್ನ ಬಿಟ್ಟ ಮತ್ ಹೊರ್ಗನೊರ್ ಯಾರಿಗೊ ಮಗ್ಳ ಕೊಡ್ತಾನಂತ, ನಾನೇನ ಸತ್ ಹೋಗಿನೇನು ಅವ್ರ ಪಾಲಿಗೆ, ಆಕಿನ್ನ ನಿನ್ನ ಮಗ್ಗ ತಗೊರವಾ ಅಂತ ಕೇಳಿದ್ರ ನಾನೇನ ಬ್ಯಾಡ ಅಂತಿದ್ನೇನು? ಕಳ್ಳು-ಬಳ್ಳಿಂತಂದ ಕಲಿಯೋದರ ಯಾವಾಗ? ಆಕಿನ್ನ ಈ ಮನಿ ಸೊಸಿ ಮಾಡ್ಕೊಂಡನೆಂತಂದ್ರ ಛಲೋ ಆಕ್ಕೈತಿಲ್ಲೊ? ಅವ್ರಿಗೆ ಮಗ್ಳು ಇಲ್ಲೆ ಕಣ್ ಮುಂದೆ ಇರ್ತಾಳ, ನಂಗೂ ಬ್ಯಾರೆ ಸೊಸಿನ ತಂದ ಆಕಿಗೂಟ ಏಗೊದ ತಪ್ಪತೈತಿ' ಎದೆಯೊಳಗಿದ್ದ ದುಗುಡವನ್ನೆಲ್ಲ ತೋಡಿಕೊಂಡಳು.
ವಿಷಯವನ್ನು ಅರಿತುಕೊಂಡ ನಿಂಗಪ್ಪನು 
'ಆತ ತಗೋಬೆ, ಇಷ್ಟಕ್ಕೆಲ್ಲ ಯಾಕ ಕಣ್ಣೀರ ಹಾಕಿ, ನಂ ಹುಡ್ಗೇನ ಕುರ್ಡನ, ಕುಂಟ್ನ ಅವ್ರ ಕನ್ಯೆ ಕೊಡೊದಿಲ್ಲ ಅನ್ನಾಕ... ನಾಳಿ ಮುಂಜಾನಿನ ಖುದ್ದ ಹೋಗಿ ಲಗ್ನದ ವಿಷಯನಾ ಮಾತಾಡಿಕೊಂಡ ಬರ್ತಿನಿ, ನಿನೇನ ಅದ್ರ ಬಗ್ಗೆ ಚಿಂತಿ ಮಾಡಾಕ ಹೋಗಬ್ಯಾಡ ಆತ'
ಹ್ಞೂಂ... ಎನ್ನುವ ರೀತಿಯಲ್ಲಿ ತಲೆಯನ್ನಾಡಿಸಿದಳು ನಿಂಗವ್ವ.

  ಬೆಳಿಗ್ಗೆ ಬೇಗ ಎದ್ದವನೆ, ನಿಂಗವ್ವಳ ತವರು ಮನೆಗೆ ಹೋಗಿ ಎಲ್ಲ ನಿಶ್ಚಿತಾರ್ಥ, ಮದುವೆಯ ಕುರಿತು ಮಾತನಾಡಿಕೊಂಡು ಬಂದು ನಿಂಗವ್ವಳಿಗೆ ತಿಳಿಸಿದನು. ಅಣ್ಣನು ತನ್ನ ಮಗಳನ್ನು ಶಶಿಕಾಂತನಿಗೆ ಕೊಡುವ ಮಾತನ್ನು ಕೇಳಿ ಎದೆತುಂಬಿ ಬಂದಿತ್ತು.  ವಾರದಲ್ಲಿ ಹೋಳಿಗೆ ಊಟ ಎನ್ನುವುದು ಖಾತರಿಯಾಯಿತು. ಇದೆ ಸಂದರ್ಭದಲ್ಲಿ ಮಲ್ಲಪ್ಪನ ಮಗ ನಾಗರಾಜನಿಗೂ ಪಕ್ಕದ ಹಳ್ಳಿಯಿಂದ ಹೆಣ್ಣನ್ನು ನಿಶ್ಚಿಯಿಸಿ ಎರಡು ಕಾರ್ಯಗಳನ್ನು ಒಂದೆ ದಿನ ಮಾಡಿ ಮುಗಿಸಿ, ಎರಡು ಮದುವೆಯನ್ನು ಒಂದೆ ಚಪ್ಪರದಲ್ಲಿ ಮಾಡಿ ಮುಗಿಸಿಬಿಡುವ ಯೋಚನೆಯೊಂದಿಗೆ, ಎಲ್ಲರೂ ಮದುವೆ ತಯಾರಿಯ ಕಾರ್ಯದಲ್ಲಿ ತೊಡಗಿಕೊಂಡರು. ಇಲ್ಲಿ ಶಶಿಕಾಂತನ ಮೊಗದಲ್ಲಿ ಮದುವೆ ಮದುಮಗನ ಕಳೆ ಇಲ್ಲದಿರುವುದನ್ನು ಯಾರೊಬ್ಬರು ಗಮನಿಸಲೆ ಇಲ್ಲ. ಮದುವೆಗೆ ಇನ್ನೊಂದು ವಾರ ಬಾಕಿ ಇದ್ದಾಗಲೆ,.

No comments:

Post a Comment