ನನ್ನರಮನೆಯ ಮೇಲಿಂದು ಗರಡಿಯ
ಮನೆಯಲ್ಲಿ ಮೈ ಹುರಿಗೊಳಿಸಿಕೊಂಡ
ಸುಲ್ತಾನನಂತೆ......ಮೈದುಂಬಿ ಬಂದಿರುವ
ಚಂದಿರನಿಂದು ಗಾಲಿಬ್!!!
ಇಷ್ಟು ಹೊತ್ತು... ಹಸಿದವರಿಗೆ ಬಿಸಿಯಾಗಿ
ಬಡಿಸಿ..ಉಣಿಸಿ..ತಣಿಸಿ ಕಾದು ನಿಂತವಳು ನಾನು!!
ಹಳಸಿದ ಅನ್ನವನುಂಡು ಕೈ ತೊಳೆಯದ, ನಿನ್ನ ಒರಟು ಎಂಜಲು ಬೆರಳುಗಳಿಂದ ಈ ತುಟಿಯಂಚನ್ನು ಸವರದೆ
ಹೋದರೆ.... ನನ್ನೊಳಗಿನ ಬಿಸಿ, ಹೇಗೆ ತಾನೆ ಆರಿ ಹೋದಿತು!!
ಅವನಿಗೇನುಬಿಡು ಊರೊಳೊಗೆ ಅವನನನ್ನು
ಕಾಯುತ್ತಿರುವವರು... ಒಬ್ಬರೆ... ? ಇಬ್ಬರೆ..?
ಹಸಿದ ದೇಹಗಳೇಷ್ಟೊ?, ಬೆಂದ ಮನಸುಗಳೇಷ್ಟೊ?
ಎಲ್ಲರಿಗೂ ಅವನೇ ಬೇಕು...ನನಗೆ..!!? ನನಗೆ ಮಾತ್ರ
ನೀನೆ ಬೇಕು ಗಾಲಿಬ್ ನೀನೆ ಬೇಕು...
ಹೊಟ್ಟೆ ತುಂಬಿದವರಿಗೇನು ಗೊತ್ತು!!? ಹಸಿದವನ
ಸಂಕಟ, ಕೇವಲ ಕಾಮದ ವಾಸನೆಯನ್ನೆ....
ತುಂಬಿಕೊಂಡಂತಹ ಮಲ್ಲಿಗೆಯನ್ನು ಎಷ್ಟೂ...ಅಂತ
ಮೂಸಲಿ..ಮುಡಿಯಲಿ..ವಾಕರಿಕೆ ಬರುತ್ತಿದೆ!!
ಈಗೀಗ ಏತಕೋ...ಕಮಟು ವಾಸನೆ ತುಂಬಿದ ನಿನ್ನೆದೆಯ
ಮೇಲಿನ ಬಟ್ಟೆಯೆ ಹಿತವೆನಿಸುತ್ತಿದೆ..
ನೀನಿನ್ನು ಪ್ರೇಮಿಯಾಗಿರಲಿಲ್ಲ.... ದೊಡ್ಡ ಬಟ್ಟಲಿನಲ್ಲಿ
ಕಾಮಧೇನುವಿನ ಕೆಚ್ಚಲಿನಿಂದ ಕರೆದ, ನೊರೆಯಿಲ್ಲದ
ಹೊಳೆಯುವ ಹಾಲಿನಂತವನಿಗೆ, ನಾ ಮಧುಶಾಲೆಗೆ
ಕಾಲಿಟ್ಟಾಗಿನಿಂದ ಮೋಹಿತಳಾಗಿರುವೆ ಗಾಲಿಬ್!!
ಹುಟ್ಟು ಕಿವುಡನಿರಬೇಕವನು!! ಯಾರು ಕೇಳದ ನೋವು,
ಯಾರಲ್ಲಿ ಹೇಳಿಕೊಳ್ಳಲಾಗದಂತಹ ಸಂಕಟ, ಅನುಭವಿಸುವ
ಅವಮಾನ-ಯಾತನೆಯನ್ನು.... ದಿನೆ...ದಿನೆ
ಮೋಡದ ಮರೆಯಿಂದ ಇಣುಕಿಣುಕಿ ನೋಡುತ್ತಲೆ
ಪೂರ್ಣವಾಗುತ್ತಾನೆ...
ನಾನು ಹೀಗೆ, ಮಧುಶಾಲೆಯ ಮಹಡಿಯ ಮೇಲೆ ನಿಂತು
ಆಸೆ ಕಂಗಳಲ್ಲಿ ಅವನನ್ನು ನೋಡುತ್ತಾ, ಮಾತಾಡುತ್ತ
ನಿಂತೆನೆಂದರೆ ಸಾಕು...... ತಣ್ಣಗೆ ಕರಗುತ್ತ, ಹೊಟ್ಟೆಯಲ್ಲಿ
ಆರದ ಕಿಚ್ಚನ್ನು ಹಚ್ಚಿ ಕರಗಿ ಹೋಗಿಬಿಡುತ್ತಾನೆ.
ಇವನನ್ನು ನಂಬುವುದಾದರೂ ಹೇಗೆ? ತಬ್ಬಿ
ಮುದ್ದಾಡಲು... ಸನಿಹದಲ್ಲಿಲ್ಲ!! ಹಗಲಿಗೆ..? ಹೆಗಲಾಗುವುದಿಲ್ಲ !!
ಉತ್ತರಕುಮಾರನಷ್ಟೇ ಪೌರುಷ ಇವನದು ಗಾಲಿಬ್!!
ನಾನು ಹೂವಂತೆ ಹಗುರಾಗಬೇಕು ನಿನ್ನ
ಮಡಿಲೊಳಗೆ...!
ಬೆಚ್ಚಗಾಗಬೇಕು ಕಾವುಣ್ಣುವ ಮೊಟ್ಟೆಯಂತೆ!
ಜಗವನೇ....ಮರೆಯಬೇಕು ತೆಕ್ಕೆಯೊಳಗೆ!!
ಜೀವಸೆಲೆಯಾಗಿಬಿಡು ಈ ರಾತ್ರಿಗೆ...
ಇದೆಲ್ಲವ... ಕಂಡವನು ಹೊಟ್ಟೆಯುರಿದುಕೊಂಡು
ಮರೆಯಾಗಬೇಕು ನೋಡವನು ಮೊಡದೊಳಗೆ!!
No comments:
Post a Comment