Tuesday, February 14, 2023

ಪೊಲ್ವಾಮ್


ಅಲ್ಲಿ ನೆತ್ತರು ಹರಿದು ಹೋದ ರಸ್ತೆಯಲ್ಲ
ಸ್ವಚ್ಛವಾಗಿದೆ!
ಏನಾಗಿತ್ತಲ್ಲಿ ಎಂಬುದನ್ನು ಮರೆತು ಗಾಡಿ-
ಮೋಟಾರುಗಳು ಓಡಾಡುತ್ತಿವೆ!
ಇತಿಹಾಸದ ಪುಟದಲ್ಲಿ ಅದೊಂದು ದಿನವು
ಸೇರಿ ಹೋಗಿದೆಯಷ್ಟೆ!!

ನೆನಪಿಸಿಕೊಂಡು ಅಳುವುದಕ್ಕೆ; ದುಃಖಿಸುತ್ತ
ಕೂರುವುದಕ್ಕೆ ಅವರೇನು ಒಡಹುಟ್ಟಿದವರೆ?
ಯಾರೊ ಹೆತ್ತ ಮಕ್ಕಳು... ಹೊಟ್ಟೆಪಾಡಿಗಾಗಿ
ಸೇರಿದವರು!!
ಇದ್ದರೇಷ್ಟು ಹೋದರೇಷ್ಟು... ಅಲ್ಕಣೆ...
ಉಪ್ಪಿಟ್ಟು ರೆಡಿಯಾಯ್ತ..? ಇವತ್ತೊಂದು
ಬಕರಾಗೆ ಸೈಟ್ ಹೊಂದಿಸಿಕೊಡಬೇಕಿದೆ..

ಓಹ್..!! ಅವರೀಗತಾನೆ ವೇದಿಕೆಯಿಂದ
ಇಳಿದು ಹೋದರು!! ಹೇಳಿದ್ದಾದರೂ ಏನು?
ಹೇಳುವುದಾದರೇನು ಪಾಪ... ನೀವು
ಅವರಂತಾಗಬೇಕಷ್ಟೆ! ಮುಂದಕ್ಕಿದೆಯಲ್ಲ
ಸುರಿಸಲಿಕ್ಕೆ ನಾಟಕದ ಎರಡು ಹನಿ..

ಛೇ...ಪಾಪ ಆ ಜಾತಿಯ ಮಕ್ಕಳಂತೆ
ಈ ರಸ್ತೆಗೆ ಅವರ ಹೆಸರು ಇಡಬೇಕಾ?
ಏನು ಕಡೆದು ಗುಡ್ಡೆ ಹಾಕಿದ್ದನೆಂದು ಕಟ್ಟೆಯನ್ನು
ಕಟ್ಟಿಸಬೇಕು!!
ಒಂದು ಗುಲಾಬಿ ಹೂ ಸಾಕಲ್ಲವಾ? ಅಯ್ಯೋ
ಜೇಬಿನಲ್ಲಿ ಚಿಲ್ಲರೆಯೆ ಇಲ್ಲವಲ್ಲ..!!
ಏನಪ್ಪ ನಿನ್ನ ಹತ್ತಿರ ಪೋನ್ ಪೇ ಇದೆಯಾ?

ಅಯ್ಯೋ ಬಿಡ್ರಿ.. ನಮ್ಮವರಿಗಿನ್ನೂ ಮೀಸಲಾತಿಯೆ
ಸಿಕ್ಕಿಲ್ಲ!!
ಅನುಭವಿಸುತ್ತಿರುವವರಿಗೆ ಯಾರ ಗೊಡವೆಯೂ ಬೇಕಿಲ್ಲ!!
ಇವತ್ತೇನು ರಜೆ ಕೊಟ್ಟಿಲ್ಲ ! ಥಿಯೇಟರ್ ನಲ್ಲೂ ಅಂಥ
ಯಾವ ಒಳ್ಳೆ ಸಿನಿಮಾ ಬಂದಿಲ್ಲ!!
ಇರ್ಲಿ ಬಿಡ್ರಿ "ದೇಶದ ಕಥೆ ಇಷ್ಟೆ ಕಣಮ್ಮಿ"
ಅಂದ್ಬಿಡುವಾ...!!

No comments:

Post a Comment