ಏಕೆ ಹಚ್ಚಿಟ್ಟುಕೊಂಡಿರುವೆ..
ದೀಪವನ್ನು ಸುಮ್ಮನೇ...!!
ಕತ್ತಲು.... ಕಾಲಕಾಲಾಂತರದ್ದು
ಇದೊಂದು ರಾತ್ರಿಗೆ ಸುಟ್ಟು ಹೋಗಿ
ಬಿಡುವುದೇನೆ..!?
ಸಾಕಿ....
ಬೆತ್ತಲೆ ಬಯಲು, ಬಾನು
ಬೇಕಿದ್ದರೆ ದೇಹಗಳನ್ನು ಕಾಣಬಹುದು..!
ಮನಸ್ಸುಗಳನ್ನೆಂದಾದರೂ
ಕಂಡಿರುವೇಯೇನು?
ಯಾರ ಎದೆಯಲ್ಲಿ ಪ್ರೀತಿಯ
ಬಳ್ಳಿಯನ್ನು ನೆಡಲಿ..!!
ಯಾವ ದಿಕ್ಕಿಗೆ ಒಲವ
ಸುಧೆಯನ್ನು ಹರಿಸಲಿ...!!??
ಸಾಕಿ...
ಎಲ್ಲರೆದೆಯಲ್ಲೂ ಗೋರಿಗಳೆ
ಬಾಯ್ತೆರೆದು ಕುಳಿತಿವೆ,
ಮತ್ತೊಬ್ಬರನ್ನು ನುಂಗಿ ಹಾಕಲು!
ಯಾವ ತಿರುವಿನಲ್ಲೂ ದಾಹಿಗಳಿಲ್ಲ!!
ಕತ್ತಿಯ ಮಸೆಯುತ್ತ ನಿಂತಿಹರು
ರಕ್ತದ ಕೊಡಿಯನ್ನೆ ಹರಿಸಲು..!!
ಅರಮನೆಯನ್ನು ಬಿಡು, ಪುಟ್ಟ
ಗುಡಿಸಲನ್ನು ಕಟ್ಟಿಕೊಳ್ಳಲು ಜಾಗವಿಲ್ಲವಿಲ್ಲಿ!
ಊರ ಒಳ-ಹೊರಗೆ, ಕೆರೆ- ಬಾವಿಗಳ ತುಂಬಾ
ದೊಡ್ಡವರ ಹೆಜ್ಜೆ ಗುರುತುಗಳೆ..
ಸಾಕಿ....
ಬರೆದು ಕೊಟ್ಟ ಪುಟಗಳ ಕೆಳಗೆ, ಬಣ್ಣದ ಹಾಳೆಗಳನ್ನು
ಕೊಟ್ಟರಷ್ಟೆ ಇಲ್ಲಿ ಉಸಿರಾಟ..!!
ವಾಹನ ದಟ್ಟಣೆಯ ಸದ್ದಿನಲ್ಲಿ ಯಾರಿಗೆ
ಕೇಳುವುದು ಹೇಳು ನಮ್ಮಂಥ ಬಡಪಾಯಿಗಳ
ನರಳಾಟ!!
No comments:
Post a Comment