Thursday, May 25, 2023

ಗಹ

ಅಪ್ಪ ಹೋದ ಮೇಲೆ..... 

   ಬದುಕು ಒಂಥರಾ ವಿಚಿತ್ರ! ಹೌದಲ್ವಾ?, ಅಲ್ಲವಾ?, ನಾನಂತೂ ಈ ವಿಷಯದಲ್ಲಿ ಅಡ್ಡಗೋಡೆಯ ಮೇಲಿಟ್ಟ ದೀಪದಂತೆ ಆಗಿಬಿಟ್ಟಿದ್ದೇನೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಏನಾದರೊಂದು ದೊಡ್ಡ ಗಂಡಾಂತರ ಕಾದಿರುತ್ತದೆ ಅದು ಸಂಖ್ಯೆ ಎಂಟರಿಂದ ಪ್ರಾರಂಭವಾಗುವ ಎಂಟರಿಂದ ೮೮ ರಲ್ಲಿ ಅತೀವ ಪಿತ್ತವಾಗಿ ರಾತ್ರಿ ಎಂದರೆ ರಾತ್ರಿ, ಬೆಳಗಿನ ನಸುಕಿನ ಜಾವ ಎಂದರೂ ಸರಿ, ಇನ್ನೂ ಚಳಿಗಾಲದಲ್ಲಂತೂ ನನ್ನ ಪಾಡು ಬೇಡ. ನಮ್ಮದು ಚಹಾದ ಅಂಗಡಿಯ ವ್ಯಾಪಾರವಾದ್ದರಿಂದ ನಾಲ್ಕು ಜನ ಗಂಡಾಳುಗಳು ಇದ್ದರು ಒಬ್ಬರು ಕಂಠೆಪ್ಪ ಮ್ಯಾಗೇರಿ, ಅಬ್ದುಲ್ ಸಾಬ (ಗಿಡ್ಡಪ್ಪಣ್ಣ), ಇಮಾಮಸಾಬ (ಚಿಟ್ಟ್ಯಾ), ಇವರು ಮೂವರು ಮಾತ್ರ ಖಾಯಂ ಆಗಿ ಕೆಲಸಕ್ಕೆ ಬರುತ್ತೀದ್ದರೆ ನಾಲ್ಕನೇ ಆಸಾಮಿ ಆಟಕ್ಕುಂಟು ಲೆಕ್ಕಕ್ಕಿದ್ದಿಲ್ಲ ಹೀಗಾಗಿ ಅವನ ಹೆಸರು ಅಷ್ಟೊಂದು ನೆನಪಿನಂಗಳದಲ್ಲಿ ಉಳಿದಿಲ್ಲ. ಹೀಗೆ ನಾಲ್ಕು ಜನ ಇದ್ದರು ನನಗೆ ಹೊತ್ತಿಲ್ಲದ ಹೊತ್ತಿನಲ್ಲಿ ಬರುತ್ತಿದ್ದ ತಂಪಿಗೆ ಚುಟುಗಿ (ಬರೆ, ಸೀಮೆಎಣ್ಣೆಯ ಚಿಕ್ಕ ಚಿಮಣಿಯಲ್ಲಿ ಸೂಜಿಯನ್ನು ಕಾಯಿಸಿ, ಎರಡು ಹುಬ್ಬುಗಳ ಮಧ್ಯದಲ್ಲಿ ಇಲ್ಲವೆ ಹೊಕ್ಕಳಿನ ಕೆಳಗಡೆ ಎರಡು ಬರೆಯನ್ನು ಹಾಕುತ್ತಿದ್ದರು)ಯನ್ನು ಹಾಕಿಸಿಕೊಂಡು ಬರಲು ಕಂಠೇಪ್ಪಜ್ಜ ನನ್ನನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಹೋಗಿ ಚುಟುಗಿಯನ್ನು ಹಾಕಿಸಿಕೊಂಡು ಬರುತ್ತಿದ್ದನು. ಅದನ್ನು ಹಾಕುವಾಗ ನರಕಯಾತನೆ ಇಬ್ಬರಿಗೂ ಹಸುಗೊಳ್ಳದಂತೆ(ಹಿಡಿದುಕೊಳ್ಳಲಾಗದಂತೆ) ಒದ್ದಾಡಿ ಬಿಡುತ್ತಿದ್ದೆ..; ಹೀಗಾದರೂ ಬಿಡುತ್ತಿದ್ದಲ್ಲ ಕಂಠೇಪ್ಪಜ್ಜ ಎರಡು ಕೈ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಬರೆಯನ್ನು ಹಾಕಿಸಿಕೊಂಡು ಬರುತ್ತಿದ್ದ. ವರುಷ ಕಳೆಯಿತು ಬರೆಯನ್ನು ಹಾಕುವವನಿಗೂ, ಹಾಕಿಸಿಕೊಂಡು ಬರುವವನಿಗೂ, ಹಾಕಿಸಿಕೊಳ್ಳುವವನಿಗೂ ಸಾಕು ಸಾಕಾಗಿ ಹೋಗಿತ್ತು. ಇಂತಹ ಸಂದರ್ಭದಲ್ಲಿ ನಮ್ಮ ಚಹಾದಂಗಡಿ ಚಹಾ ಕುಡಿಯಲು ಬಂದಂತಹ ಒಬ್ಬ ಮುದುಕ 'ಈ ಹುಡುಗ್ಗ ಜರದಾ ತಂಬಾಕನ್ನ ಸಣ್ಣಗೆ ಅರೆದು, ನೀರಿನಲ್ಲಿ ಹಾಕಿ ಕಲಿಸಿ ಕುಡಿಸಿಬಿಡಿ ಎಲ್ಲಾ ಪಿತ್ತ ಹೊರಗಡೆ ಕಿತ್ಗೊಂಡ ಬರತದ' ಎಂದು ಸಲಹೆಯನ್ನು ನೀಡಿದ. ಬಹುಶಃ ಆ ದೇವರು ನಮ್ಮ ಮೂವರ ಕಷ್ಟವನ್ನು ನೋಡಲಾಗದೆ ಇವನನ್ನು ಕಳಿಸಿಕೊಟ್ಟಿರಬೇಕು. ಅಂದು ಸಂಜೆ ಅಜ್ಜಿ ಶ್ಯಾವಂತ್ರಮ್ಮ ತನ್ನ ಕೆಂಚಿಯೊಳಗಿಂದ ನರಸಿಂಗಸಾ ತಂಬಾಕನ್ನು ತೆಗೆದು ಕಂಠೇಪ್ಪಜ್ಜನ ಕೈಗೆಕೊಟ್ಟು ಸಣ್ಣಗೆ ಅರಿಸಿ ಒಂದು ಲೋಟ ನೀರಿನಲ್ಲಿ ಹಾಕಿಕೊಂಡಿಟ್ಟುಕೊಂಡು, ನನ್ನನ್ನು ತನ್ನ ಪಕ್ಕದಲ್ಲಿ ಕುರಿಸಿಕೊಂಡು 'ನೋಡಪ್ಪಿ ಇದನ್ನ ಕುಡದೆಂತಂದ್ರ ನಿಂಗ ಹೊಳ್ಳ-ಮುಳ್ಳ (ಪದೇ ಪದೇ) ಚುಟಗಿ ಹಾಕಿಸೋದ ತಪ್ಪತ್ತಂತ ಕುಡಿತೀಯಾ ಇದನ್ನ' ತಲೆಮೇಲೆ ನೇವರಿಸುತ್ತ ಬಹಳಷ್ಟು ನೊಂದುಕೊಂಡು ಕೇಳಿಕೊಂಡಿದ್ದಳು. ನೋವು-ನಲಿವುಗಳನ್ನು ಅಳೆದು ತೂಗಿ ನೋಡುವಂತಹ ವಯಸ್ಸೇನಲ್ಲ ನಂದು, ಕಾರಣವಿಷ್ಟೇ.. ಅ ಹಿರಿಜೀವ ಅಷ್ಟೊಂದು ನೊಂದುಕೊಂಡು ಯಾಕೆ ಮಾತನಾಡುತ್ತಿದ್ದಳೆಂದರೆ, ಅಜ್ಜಿಗೆ ಅಪ್ಪನೊಬ್ಬನೆ ಮಗ, ಆತನಿಗೆ ಸತತ ಒಂದರ ಮೇಲೊಂದರಂತೆ ಎರಡು ಹೆಣ್ಣು ಮಕ್ಕಳು ಹುಟ್ಟಿದ ತಿಂಗಳಲ್ಲಿ ಅಸುನೀಗಿದ್ದವು!, ಮತ್ತೇರಡು ಹೆಣ್ಣು ಮಕ್ಕಳ ನಂತರ ಕಲಬುರ್ಗಿಯ ಶರಣಬಸಪ್ಪನಲ್ಲಿ ಗಂಡು ಮಗುವಿಗಾಗಿ ಹರಕೆಯನ್ನು ಹೊತ್ತು ಐದನೇ ಮಗುವಾಗಿ ಅದು  ವಂಶವನ್ನು ಬೆಳಗುವ ಮೊದಲನೇ ಗಂಡು ಮಗುವಾಗಿ ನನ್ನ ಜನನವಾದ್ದರಿಂದ ಹಾಗೂ ನಾನು ಸ್ವಲ್ಪ ಮೆದುಕಲು (ಮೆತ್ತಗೆ) ಇದ್ದುದರಿಂದ ಅಜ್ಜಿ ಅಷ್ಟೊಂದು ಸಂಕಟಗೊಳಪಟ್ಟಿದ್ದಳು. ಅಜ್ಜಿಯ ಮಾತಿಗೆ ಮರುಮಾತನಾಡದೆ ಹ್ಞೂಂ... ಎಂದು ಆ ತಂಬಾಕು ಮಿಶ್ರಣದ ಗ್ಲಾಸನ್ನು ಹಿಡಿದುಕೊಂಡು ಹೊರಬಂದು, ಅಜ್ಜಿಯ ಮುಖವನ್ನೊಮ್ಮೆ ನೋಡಿ ಕಣ್ಮುಚ್ಚಿಕೊಂಡು ಒಂದೇ ಗುಟುಕಿಗೆ ಕುಡಿದುಬಿಟ್ಡೆ... ಅಷ್ಟೇ ಎರಡು ನಿಮಿಷ ಕೂಡ‌ ಆಗಿರಲಿಲ್ಲ ಹೊಟ್ಟೆಯಲ್ಲಿ ಏನೋ ಕಲಿಸಿದಂತಾಗಿ, ತಲೆಯಲ್ಲ ತೂರಾಡಿದಂತಾಗಿ ವ್ಯಾ....ಕ ಅಂತ ಒಂದು ಸಲ ಹೀಗೆ ವಾಂತ ಮಾಡಿದೆ ಹೊಟ್ಟೆಯೊಳಗಿನ ಕಲ್ಮಶ, ಎದೆಯೊಳಗೆ ಕಟ್ಟಿಕೊಂಡಿದ್ದಂತಹ ಹಚ್ಚನೆಯ ಕಫವೆಲ್ಲ ಒಂದೆ ಏಟಿಗೆ ಹೊರಬಿದ್ದಿತ್ತು, ಎರಡು ಮೂರು ಸಲ ವಾಂತಿಯನ್ನು ಮಾಡಿದಾಗ ಸಮಾಧಾನವಾಯಿತು, ಆ ರಾತ್ರಿ ಒಂದು ಲೋಟ ಹಾಲನ್ನು ಕುಡಿದು ಮಲಗಿದ್ದೆನಷ್ಟೇ, ಮರು ದಿವಸದಿಂದ ಹೊಸದೊಂದು ಬೆಳಕು ಮೂಡಿತ್ತು, ಹೊತ್ತಿಲ್ಲದ ಹೊತ್ರಿನಲ್ಲಿ ಕಾಡುತ್ತಿದ್ಸ ತಂಪು ಮಾಯವಾಗಿ ಹೋಗಿ‌ ಮತ್ತೆಂದು ಹತ್ತಿರ ಸುಳಿಯಲೆ ಇಲ್ಲ...

No comments:

Post a Comment