Monday, February 17, 2020

ಹಾಯ್ಕುಗಳು ೧-೩೦

೧.
ಸಾಗರದೊಡಲು
ಬರಿದಾಗುತ್ತಿದೆ.
ಉಳ್ಳವರ ಹಸಿವು ಇನ್ನೂ ನಿಗಿಲ್ಲ!!

 ೨.
ಅನಾದಿಯಿಂದಲೂ ಗಂಗೆ
ಹರೆಯುತ್ತಿದ್ದಾಳೆ.
ಪಾಪದ ಮೂಟೆ ಇನ್ನೂ ಹೆಚ್ಚುತ್ತಲೆ ಇದೆ!

೩.
ತುಳಿದವರು ಬಲವಂತರೇನಲ್ಲ
ಬಲಹೀನರು.
ನಾವೆ ಕೊಸರಾಡಲಿಲ್ಲವಷ್ಟೆ

:೪.
ಸಿರಿವಂತರ ಮಾತುಗಳು
ಹೆಚ್ಚು ಸಿಹಿಯಾಗಿರುತ್ತವೆ.
ಹೊಟ್ಟೆಯನ್ನು ತುಂಬಿಸುವುದಿಲ್ಲ.

 ೫.
ಹೆಣಕ್ಕೆ ಒಯ್ದ ಕಾಯಿಯೊಳಗೆ
ನೀರಿರಲಿಲ್ಲ‌.
ಮಾಡಿದ ಸಾರು ಮಾತ್ರ ರುಚಿಯಾಗಿತ್ತು.

೬.
ಇಲ್ಲಿ ವಿವಿಧ ಹೂಗಳು
ಅರಳುತ್ತವೆ.
ಆಸ್ವಾದಿಸುವುದಕ್ಕಿಂತ, ಹೊಸಕುವವರೆ ಜಾಸ್ತಿ.

೭.
ತೆಪ್ಪದಲ್ಲಿ ಕೂರಿಸಿಕೊಂಡವರು
ದಡವನ್ನು ಸೇರಿಸಲಿಕ್ಕಿಲ್ಲ.
ಈಜುವ ಬಲವಿದ್ದವರಷ್ಟೆ ಪಯಣಿಸಬೇಕು.

೮.
ಊರಿನಲ್ಲಿ ಅವರ ಮನೆಯೆ
ಗ್ರಂಥಾಲಯವಾಗಿತ್ತು.
ಒಬ್ಬ ಓದುಗನು ರೂಪಗೊಳ್ಳಲಿಲ್ಲ.

೯.
ಮುಳ್ಳಿನ ಕಂಟಿಗಳಲ್ಲೂ
ಹೂವು ಅರಳುತ್ತವೆ.
ಜನ, ಮುಳ್ಳಿಗೆ ಹೆಚ್ಚು ಪ್ರಾಶಸ್ತ್ಯವನ್ನು
ನೀಡುತ್ತಾರೆ.

೧೦.
ಜನರು ತಮ್ಮೊಳಗಿನ
ವಿಶ್ವಾಸಕ್ಕಿಂತ,
ಪಂಥಗಳನ್ನು ಹೆಚ್ಚು ನಂಬುತ್ತಾರೆ.

೧೧.
ಅವಳು ಮುಖಕ್ಕೆ ಹಚ್ಚಿದ್ದ
ಬಣ್ಣದ ಬೆಲೆ,
ಮಾತನಾಡಿದಾಗಲೆ ಅರಿವಾದದ್ದು.

೧೨.
ಹೊಟ್ಟೆ ಸರಿಯಿಲ್ಲವೆಂದು ತಟ್ಟೆಯಲ್ಲಿ
ಅಗುಳನ್ನುಳಿಸಿದೆ.
'ಅಮ್ಮಾ...' ಎನ್ನುವ ಕೂಗು ಮನೆಯಿಂದಾಚೆ ಕೇಳಿಸಿತು. 

೧೩.
'ರಾಮ'ನೆಂದಾಗ
ನನ್ನೊಳಗಿನ ಗಂಡಸು
ನಡಗುತ್ತಾನೆ.

೧೪.
ನಗುವನ್ನೆ ಮರೆತು
ಕೇಳುತ್ತಾರೆ.
ಹಗೆಯನ್ನು ಮರೆಯುವುದು ಹೇಗೆ?

೧೫.
ಚೆಲ್ಲಿದ ಮುಸುರಿಗೆ ಹಂದಿಗಳು
ಕಾದಾಡುವಾಗ,
ಕಾಳು, ಕಾಳಿಗೂ ಹೊಲದಲ್ಲಿ
ಅವ್ವ ಬಾಗಿದ್ದು ನೆನಪಾಯಿತು.

೧೬.
ನಾನಿನ್ನೂ ಮಲಗಿಯೆ
ಇದ್ದೆ.
ಯಾರೊ ಮಗ್ಗುಲಲ್ಲಿ ಹಾದು
ಹೋದ ಹಾಗಾಯಿತು.

೧೭.
ಹೊಸಮನೆಯ ಮಧುಮಂಚದಲ್ಲಿ
ಹೆಂಡತಿಯ ರವಿಕೆಯನ್ನು
ಬಿಚ್ಚುವಾಗ,
ಹಾಲುಣಿಸಿದ ಅವ್ವನೆದೆ ನೆನಪಾಗಲಿಲ್ಲ.

೧೮.
ಆಸ್ಪತ್ರೆಯ ಬಿಲ್ ನ್ನು 
ಕಟ್ಟುವಾಗ,
ರಾತ್ರಿ ತಿಗಣೆ ಕಚ್ಚಿದ ನೆನಪಾಯಿತು.

೧೯.
ತಿರುವಿನಲ್ಲಿ ನಿಂತು, ಈ
ದಾರಿ ಎಲ್ಲಿಗೆ ಹೋಗುತ್ತದೆ
ಎಂದೆ,
'ನೀನೆ ಹೋಗಬೇಕು' ಎಂದ.

೨೦.
ಎದೆಯ ಜೇಬಿನಲ್ಲಿ
ಹಣವಿರಲಿಲ್ಲ.
ಶಾಲೆಯ ಗೇಟಿನ ಹತ್ತಿರ ಹೋಗಲಿಂದು
ಧೈರ್ಯ ಸಾಲಲಿಲ್ಲ.
 
೨೧.
ಅವಳು ಎದುರು 
ಬಂದಾಗಲೆಲ್ಲ,
ಅಪ್ಪನ ಮನೆ ಸಾಲದ ಕಂತು
ಎದುರುಗೊಳ್ಳುತ್ತದೆ.

೨೨.
ನಾನಿಟ್ಟ ಹೆಜ್ಜೆಗಳೆ
ದಾರಿಯಾಗುತ್ತದೆಂದುಕೊಂಡೆ.
ನನಗಿಂತ ದೊಡ್ಡವರೆ, ಅಲ್ಲಿ
ನಡೆದು ಹೋದರು.

೨೩.
ಲಕ್ಷ್ಮಣನೆಳೆದಿದ್ದ ಗೆರೆ
ಪಾಲಿಸದಿದ್ದಕ್ಕೆ,
ರಾವಣನೆಳೆದಿದ್ದ ಬರೆ.

೨೪.
ದುಃಖವನ್ನು
ಹಿಡಿದಿಟ್ಟುಕೊಂಡೆ.
ಸಂತನಾಗಲಿಲ್ಲ! ಗಟ್ಟಿಗೊಂಡೆ.

೨೫.
ಗೋಡೆಗೆ ಬರೆಯಲಾಗಿತ್ತು
'ನೀರನ್ನು ಉಳಿಸಿ'
ಸರಕಾರಿ ನಲ್ಲಿಗೆ ನಳವೆ ಇರಲಿಲ್ಲ.

೨೬.
ವೀರಾವೇಶದಿಂದ ಮಾತನಾಡುತ್ತಿದ್ದವನ
ಪುಸ್ತಕದ ಮದ್ಯದಿಂದ
ಬ್ಲ್ಯಾಂಕ್ ಚೆಕ್ಕೊಂದು ಜಾರಿ 
ಬಿದ್ದಿತು.

೨೭.
ಮಾತು ಮಾತಿನಲ್ಲಿ
ಬುದ್ಧನಿರುತ್ತಿದ್ದ.
ಅಡುಗೆ ಮನೆ ಪಾತ್ರೆಯಲ್ಲಿ
ಕೋಳಿ ಚೆನ್ನಾಗಿ ಬೆಯುತ್ತಿತ್ತು.

೨೮.
ಗುಡ್ಡವ ಕಡೆದು, ಕಟ್ಟಿದ
ಕಟ್ಟಡದಲ್ಲಿ
ಅರಣ್ಯ ರಕ್ಷಣೆಯ ಕುರಿತು
ಮಾತಾಗುತ್ತಿತ್ತು.

 ೨೯.
ಕೆರೆಯ ಮುಚ್ಚಿ
ನಗರವಾಗಿಸಿಕೊಂಡವರು, 
ನೀರಿಗಾಗಿ ಪ್ರಾರ್ಥನೆಗೈಯ್ಯುತಿಹರು.

೩೦.
ಕೆರೆಯನ್ನು ಮುಚ್ಚುವ
ಮದ್ಯದಲ್ಲಿ
ಇಂಜಿನೀಯರ್ ಬಿಕ್ಕತೊಡಗಿದನು.

No comments:

Post a Comment