Friday, August 11, 2023

ಕಜಲ್

ನಿನ್ನ ಅವಳ ಪ್ರೇಮ ಚರಿತ್ರೆಯನ್ನು
ಬರೆದ ಗೋಡೆಗಳ ಮೇಲೀಗ, ಎಲೆಯಡಿಕೆ
ಜಗಿದುಗುಳಿದ ಕೆಂಪು ಕಲೆಯಿಂದಲೆ ತುಂಬಿ ಹೋಗಿದೆ
ಗಾಲೀಬ್...!!
ಅದಕ್ಕೂ... ಇನ್ನೇನು ಕೆಲವೆ ದಿನಗಳಲ್ಲಿ
ಬಣ್ಣವನ್ನು ಬಳೆದುಬಿಡುತ್ತಾರೆ..!!
ಹಚ್ಚಿದಷ್ಟು ನೆರೆತು ಹೋಗುವ ತಲೆಗೂದಲುಗಳಿಗೆ
ಸವರಿದಂತೆ

ಮಧುಶಾಲೆಯಿಂದ ಎದ್ದು ಹೋದವರು...
ಮರಳಿಬಂದ ಇತಿಹಾಸವೇ.. ಇಲ್ಲ..!!
ಅವರೇನು ಭೋದಿ ವೃಕ್ಷದ ಕೆಳಗೆ ಕುಳಿತು
ಜ್ಞಾನವನ್ನೇನು ಹೊಂದಲಿಲ್ಲ.... ಬದಲಾಗಿ
ಆ ಮರದ ಬೇರಿಗೆ ಗೊಬ್ಬರವಾಗಿ ಮಣ್ಣಾಗಿ ಹೋಗಿದ್ದಾರೆ
ಗಾಲೀಬ್...
ಅವರಿಗೆ ಮೊದಲೆ ಹೇಳಿದ್ದೆ.. ನಾನು ಕೊಡುವುದು
ಅಮೃವಲ್ಲ ವಿಷವೆಂದು..ಆದರೂ.. ಗುಟುಕರಿಸಿ
ಕುಡಿಯುತ್ತ, ನಗುತ್ತ, ಅಳುತ್ತ, ನೋವನೆಲ್ಲ ಗೆದ್ದವರ
ಹಾಗೆ ಬೀಗುತ್ತಿದ್ದರಷ್ಟೆ...

ಅವಳ ಪಾದವ ತೊಳೆದು ನೀರು
ಕುಡಿದವರೆಲ್ಲ... ನನ್ನ ಮಧು ಶಾಲೆಯ
ಮಧುವನ್ನು ಹೀರದೆ ಹೋದವರೇನು..?
ಗಾಲಿಬ್...
ಬದುಕಿನ ಕೊನೆಯ ಉಸಿರಿನವರೆಗೂ ಅವಳೆಂದಿಗೂ
ತೀರದ ದಾಹದಂತೆ.... ಹನಿ... ಹನಿ... ಪ್ರೀತಿಗಾಗಿ
ಚಡಪಡಿಸಿ, ತಡವರಿಸುತ್ತ, ನರಳಾಡುತ್ತಿರಬೇಕಷ್ಟೆ...

ಯಾರೋ ಹೇಳಿದರು ಬಿಕ್ಕುತ್ತಿರುವ ನಿನ್ನ
ಗಂಟಲಿಗೆ, ಗಂಗಾಜಲವನ್ನು ಸುರಿಯಿರೆಂದು...
ಅವರಿಗೆಲ್ಲ ಏನು ಗೊತ್ತು? ಬೇಕಿರುವುದು ಹನಿ ಮಧು.!!
ಉಸಿರು ನಿಲ್ಲಲು ಅವಳ ಕೊನೆಯ ಭೇಟಿ ಅಲ್ಲವೆ
ಗಾಲೀಬ್....!!
ಉರಿದು.. ಸುಟ್ಟು ಹೋದ ನಿನ್ನ ಭಸ್ಮವನ್ನು...
ಅವಳ ಮೇಲ್ಮುದ್ದೆ ಮಾಳಿಗೆಯಲ್ಲಿ ಸುರಿದು ಬರುವೆ..
ಜಿಟಿಜಿಟಿಯಾಗಿ... ಸುರಿಯುವ ಮಳೆಯ ಹನಿಗಳು
ಬೂದಿಯೊಡಗೂಡಿ ಜಂತಿಯ ಒಳಗಿಳಿದು, ಅವಳ
ಪಾದದ ಮೇಲೆ ಬಿದ್ದು ತೋಯಿಸಿ ಹೋದರೆ.....
ನಿನ್ನ ಸಾವು ಸಾರ್ಥಕವಲ್ಲವೇನು...?

No comments:

Post a Comment