ಇಲ್ಲಿ ನೋವನ್ನು ಜನ ಹೇಗೆ ಕೊಡುತ್ತಾರೆಂದರೆ...
ಹಾಲಿನಲ್ಲಿ ಸಕ್ಕರೆ ಹಾಕಿ ಕಲಿಸಿದಷ್ಟು ಸಲೀಸಾಗಿ...
ಹುಳಿಯನ್ನು ಹಿಂಡಿ ಕೊಡುತ್ತಾರೆ...
ಸಾಕಿ....
ಆದ ಗಾಯದ ಬೆನ್ನನ್ನು ತೋರಿಸಿದೆ...!!
ಗೀರಿ...ಚೂರಿ... ತುರಿಸಿ...ತುರಿಸಿ ಇದೇ...
ಏನದು ಎನ್ನುತ್ತಾ...ನಂಜನ್ನು ಸೇರಿಸಿಬಿಟ್ಟರು...
ಅಬ್ಬೋ... ಮಾತಿನಲ್ಲೂ... ಅದೆಂತಹ ನಾಟಕೀಯತೆ!!
ಊಸರವಳ್ಳಿ ಏನಾದರು ಇವರ ನವರಂಗಿ
ಆಟವನ್ನು ನೋಡಿದ್ದರೆ... ತಾನೆ ಆತ್ಮಹತ್ಯೆಯನ್ನು
ಮಾಡಿಕೊಳ್ಳುತ್ತಿತ್ತೇನೊ..?
ಸಾಕಿ...
ಮುಂಜಾನೆಯ ಮಾತು ಸಂಜೆಗಿಲ್ಲ... ರಾತ್ರಿಯ
ಕಥೆ ಬೆಳಿಗ್ಗೆ ಇಲ್ಲ...!! ಬೂಟಾಟಿಕೆಯ ರಂಗಮಂಚದಲ್ಲಿ
ಇವರಿಗೊಂದು ನಾನು ಚಾಟಿ ಬೀಸಿ ಆಡಿಸುವ
ಬುಗುರಿಯಂತೆ..!!
ಅದೆಂತಹ ನಿರ್ಲಜ್ಜತೆ ಅವರ ನಡೆ-ನುಡಿಗಳಲ್ಲಿ..!!
ಆಚಾರ-ವಿಚಾರಗಳ ತೋಳಲಾಟದ ಕೆಸರಿನಲ್ಲಿ
ಅದ್ದಿ ತೆಗೆದು, ನಡು ಬೀದಿಯಲ್ಲಿ ನಿಲ್ಲಿಸಿ ಬಿಡುತ್ತಾರೆ
ಸಾಕಿ....
ಗುಡಿ-ಗುಂಡಾರಗಳನ್ನು ಕಟ್ಟಿದಷ್ಟು ಸುಲಭವಾಗಿ
ಮನೆಯನ್ನು ಕಟ್ಟಲಾದಿತೇನು?
ತಿಂದು-ತೇಗಿ ಬಲಿತ ಕೋಣಗಳಾಗಿರುವ ಇವರನ್ನು
"ಡಯಟ್" ಮಾಡಿಸಿ, ಸರಿ ದಾರಿಗೆ ತರುವುದು
ಸುಳಿದ ಬಾಳೆ ಹಣ್ಣಿನಷ್ಟು ಸಲೀಸೇನು?
No comments:
Post a Comment