ಕೊಲ್ಲುತಿದೆ ನೀನಿರದ ಏಕಾಂತ
ಮನದ ದುಗುಡ ದುಮ್ಮಾನಗಳ
ಅಲೆಗಳಾಗುತ್ತಿಲ್ಲ ಪ್ರಶಾಂತ
ಸಮಾಧಾನದ ಮಾತುಗಳ
ಮಳೆಯೇ ಸುರಿಸಿದರೂ
ಮನವಾಗುತ್ತಿಲ್ಲ ಶಾಂತ
ನೀ ಬರುವವರೆಗೂ ಕಣ್ಣುಗಳು
ಪಡೆಯುವುದಿಲ್ಲವಂತೆ ವಿಶ್ರಾಂತ
ಎಷ್ಟೇಂದು ಕಾಯಲಿ ಘಂಟೆಗಳಿಗಿಂತ
ನಿಮಿಷಗಳೆ ಭಾರವಾಗಿರುವಾಗ
ಸುಡುವ ನೆತ್ತಿಯ ಆ ರವಿಯ ಉರಿಗಿಂತ
ಮನದುರಿಯೇ ಹೆಚ್ಚಿರುವಾಗ
ಬೀಸುವ ಗಾಳಿಗೆ ತರಗೆಲೆಯ ಶಬ್ದಕ್ಕಿಂತ
ನಿನ್ನ ಕಾಲ್ಗೆಜ್ಜೆಯ ಸದ್ದಿಗೆ ಕಿವಿಗಳು
ಹಾತೊರೆಯುತ್ತಿರುವಾಗ
ಬರುತ್ತಿಲ್ಲವೇಕೆ?
ನನ್ನನು ಈ ಏಕಾಂತದ ಸುಳಿಗೆ ಸಿಲುಕಿಸಿ
ಉರಿಯುವ ಬೆಂಕಿಯಲಿ ದೂಡಿ
ವಾಸಿಗೊಳ್ಳದ ಚಡಪಡಿಸುವ ರೋಗಕ್ಕೆ ನೂಕಿ
ನಿಂತಿರುವೆ ಎಲ್ಲಿ ನನ್ನ ಮರೆತು
ಆಗುತ್ತಿಲ್ಲ, ನಿಲ್ಲಲು ಕಾಯಲು
ಈ ಪ್ರಕೃತಿಯ ನಿಶ್ಯಬ್ದವು ನನ್ನುಸಿರ
ಕಟ್ಟಿಸುವಂತಾಗುತ್ತಿದೆ
ಕದ್ದ ಕಳ್ಳನನ್ನು ಓಡಿ ಹೋಗದಂತೆ
ಕೈ ಕಾಲು ಕಟ್ಟಿ ಹಾಕಿದ ಹಾಗೆ, ನನ್ನ ಕಾಲುಗಳು
ನಿನ್ನ ಮೊಗದ ನಗುವ ನೋಡದೆ ಕದಲನೆಂದು
ಹಗ್ಗ ಕಟ್ಟಿಕೊಂಡು ಕುಳಿತುಬಿಟ್ಟಿವೆ
ನೀ ಬಾರದೆ...
ಈ ಒಂಟಿ ಮರದ ಕೆಳಗೆ ನಾನೊಬ್ಬನೆ
ಒಬ್ಬಂಟಿಯಾಗಿರುವೆ
No comments:
Post a Comment