Monday, December 30, 2019

ನಿರ್ಭಾವುಕತೆಗಳು

ಬರೆಯುವುದರಲ್ಲಿ ಏನುಳಿದಿತ್ತು?
ಆಡಲು ಮಾತೊಂದೆ ಇತ್ತು.
ವಿವರಿಸಲು ಸಮಯವಾದರು ಎಷ್ಟಿತ್ತು?
ಅಲ್ಲಿ... ನನ್ನ ತಪ್ಪು ಎಲ್ಲಿತ್ತು.
ಕಣ್ಣು.. ಕಣ್ಣುಗಳು ಮಾತಿಗೆ ಕೂರುವ
ಮೊದಲೆ ಸೂರ್ಯಾಸ್ತವಾಗಿತ್ತು
ತುಟಿಯಂಚಿನ ತುಂಬು ಬಸಿರಿನ ಮಾತೊಂದು
ಕೊನರುವ ಮೊದಲೆ, ನಿನ್ನ ಕೈಯಲ್ಲಿ
ಮದುವೆ ಆಮಂತ್ರಣದ ಪತ್ರವಿತ್ತು.

Saturday, December 28, 2019

ಚುಟುಕು

ಹುಟ್ಟು-ಸಾವುಗಳ
ಧನ್ಯ ಮಿಲನವಿಂದು!
ಸಂಭ್ರಮವೊ?...
ಸಂತಾಪವೊ?....
ಆಚರಿಸುವುದಾದರು
ಯಾವುದನ್ನು?
ಒಂದು ಸಾಹಿತ್ಯದ
ಉದಯ!
ಮತ್ತೊಂದು ಧಾರ್ಮಿಕದ
ಅಂತ್ಯ!

ಚುಟುಕು

ಕಳಚಿಕೊಂಡಿದೆ,
ಈ ಲೋಕದಿಂದ
ಮತ್ತೊಂದು ಧಾರ್ಮಿಕ
ಕೊಂಡಿ!
ಸನ್ಮಾರ್ಗವ
ತೋರಲು, ಯಾರಿಲ್ಲದೆ
ಇನ್ನೆತ್ತ ಸಾಗುವುದೊ?
ನಮ್ಮ ಬದುಕಿನ
ಬಂಡಿ!

ಚುಟುಕು

ಕನ್ನಡದ ಕಂಪನ್ನು
ಪಸರಿಸಿದಿರಿ...
ಜಗದೆಲ್ಲ ರಸಿಕರ
ಎದೆಯ ಭಾವವ
ಮೀಟಿ!
ನಾವೆಂದು.....
ತಾಯ್ನೆಲದ ಋಣವ 
ತೀರಿಸಬಲ್ಲೆವು? ಕವಿಋಷಿ.
ನಿಮಗಿದೊ... ನಮ್ಮೆಲ್ಲರ 
ಹೃದಯಾಳದಿ ನಮಿಪೆವು
ನಿಮಗೆ, ಅನಂತ
ಕೋಟಿ!

ಚುಟುಕು

ಕೈಗೆ ಮಸಿ
ಮೆತ್ತಿಕೊಂಡರು
ಪರ್ವಾಗಿಲ್ಲ,
ಇನ್ನೊಬ್ಬರ ವ್ಯಕ್ತಿತ್ವಕ್ಕೆ
ಮಸಿಯನ್ನು 
ಬಳಿಯಬೇಡಿ!
ಮೇಲೆತ್ತುವ ಶಕ್ತಿ
ನಿಮ್ಮೊಳಗಿರದಿದ್ದರು
ಚಿಂತೆಯೇನಿಲ್ಲ,
ಚಿಗುರುವವರನ್ನು ಕಾಲಡಿಯಲ್ಲಿ
ಹಾಕಿ ತುಳಿಯಬೇಡಿ!

Friday, December 27, 2019

ಮಂಗಳಮುಖಿ

'ಯವ್ವಾ ಹ್ಯಾಂಗ ಕೆ.ಜಿ ಬೆ ಟಮಾಟಿ ಹಣ್ಣು'
'ಯಪ್ಪಾ ಹದ್ನೆಂಟ ರುಪೈ ಕಿಲೊ ನೋಡ ನನ್ಮಗ್ನ, ಹೇಳ್ ಎಷ್ಟ ಕೊಡ್ಲೆಪ್ಪ, ಎನ್ನುತ್ತಾ  ಎಡಗೈಯಿಂದ ತಕ್ಕಡಿಯನ್ನು ಎತ್ತಿಕೊಳ್ಳುತ್ತಾ, ಬಲಗೈಯಿಂದ ಟೊಮ್ಯಾಟೊ ಹಣ್ಣಿನ ಬುಟ್ಟಿಗೆ ತಾನೆ ಕೈ ಹಾಕಿ ಒಳ್ಳೊಳ್ಳೆ ಹಣ್ಣುಗಳನ್ನು ಆರಿಸಿ ತೂಗಲು ಮುಂದಾದಳು ಕಲ್ಲವ್ವ,
'ಭಾಳ ತುಟ್ಟಿ ಆತಲ್ಲಬೆ, ಮೊನ್ನೆರ ಹನ್ನೆರ್ಡ ರುಪಾಯ್ಗೆ ಕೆಜಿ ಹಂಗ ಒದಿದ್ನಿ' 
'ಯಪ್ಪಾ ದಿನ್ದಿಂದ ದಿನಕ್ಕ ರೇಟ್ ಹೆಚ್ಚು ಕಡ್ಮಿ ಆಕ್ಕಿರ್ತಾವೊ ತಂದೆ, ಹೊಲ್ದಾಗ ನೀರ ಕಮ್ಮಿ ಆಗಿ ಪಿಕ ಬರ್ವಲ್ದಂಗ ಆಗೈವು ನೋಡ್ಪಾ' ಮುಖವನ್ನು ಗಿಂಜುತ್ತಾ, ಬೇಗಬೇಗನೆ ಹಣ್ಣುಗಳನ್ನು ಆರಿಸಿಕೊಂಡು ಕೆ.ಜಿ ಲೆಕ್ಕದಲ್ಲಿ ತೂಗಿ ಗಿರಾಕಿಯ ಚೀಲಕ್ಕೆ ಹಾಕಲು ತಕ್ಕಡಿಯನ್ನು ಮುಂದಕ್ಕೆ ಚಾಚಿದಳು.
'ಅಯ್ಯ, ಬ್ಯಾಡ ಬಿಡ್ಬೆ ಇವತ್ತ, ಊರ ಸೇರಾಕ ರೊಕ್ಕ ಕಮ್ಮಿ ಬಿಳ್ತಾವ, ಅದಲ್ದನಾ ಮನ್ಯಾಗ ಸಣ್ಣ ಸಣ್ಣ ಯಾಡ ಹುಡ್ರ ಅದಾವು ಅವುಕ್ಕ ತಿನ್ನಾಕ ಇನ್ನಾ ಬಿಸ್ಕಿಟ್ ಪಡ್ಕ ತಗೊಂಡ ಹೋಗ್ಬೇಕು, ಮಾಲಾಕ್ನು ಇವತ್ತ್ ಚೂರು ರೊಕ್ಕಾನು ಕಮ್ಮಿ ಕೊಟ್ಟಾನ' ಎನ್ನುತ್ತಲೆ ಮುಂದಕ್ಕೆ ಹೆಜ್ಜೆ ಹಾಕುವವನಿದ್ದವನ ಕೈ ಚೀಲವನ್ನು ಕಸಿದುಕೊಂಡು ಹಣ್ಣನ್ನು ಸುರಿದುಕೊಡುತ್ತಾ,
'ರೊಕ್ಕೆಲ್ಲರ ಓಡಿ ಹೊಕ್ಕತೇನ ಮಗ್ನ, ಇವತ್ತಿಲ್ಲ, ನಾಳ್ಗಿ ತಂದ ಕೊಡ, ಏನ ದುಡ್ದ ಕಟ್ಗೊಂಡ್ ಸಾಯೋದೈತ ಹೇಳು, ಸತ್ತಾಗೇನ ಹೊತ್ಗೊಂಡ ಹೊಕ್ಕಿವೇನು ಎಲ್ಲಾನು?, ತಗೊಂಡ ಹೋಗ್ಪಾ,' ಅಂತಃಕರಣದಿಂದ ನುಡಿದಳು
ಅವಳು ಮಾತುಗಳನ್ನು ಕೇಳಿ ಆ ಗಿರಾಕಿ ಮರುಮಾತನಾಡದೆ,
ತಲೆಯಾಡಿಸಿ, ಚೀಲವನ್ನು ಎತ್ತಿ ಹೆಗಲ ಮೇಲಿಟ್ಟುಕೊಂಡು ನಡೆದನು.

ಐದು ನಿಮಿಷದಲ್ಲಿ  ಕುಳಿತ ಸ್ವಲ್ಪ ದೂರದಿಂದ ಏನೊ ಕೂಗಾಡ, ಗದ್ದಲದ ಸದ್ದು ಕೇಳಿಸಿದಂತಾಯಿತು ಕಲ್ಲವ್ವನಿಗೆ, ಆಗಲೆ ಹಳ್ಳಿಗೆ ಹೋಗುವ ಹೊತ್ತಾದ್ದರಿಂದ ತಡಬಡಿಸಿ ಎದ್ದು,  ತರಕಾರಿಗಳನ್ನು ಪುಟ್ಟಿಯಲ್ಲಿ ತುಂಬಿಕೊಂಡು, ಅಲ್ಲಿಯೆ ಹಿಂದ ಇದ್ದ ಶೆಟ್ಟರ ಕಿರಾಣಿ ಅಂಗಡಿಯಲ್ಲಿಟ್ಟು, ಮೇಲೆ ಹಸಿಮಾಡಿದ ಗೋಣಿಚೀಲವೊಂದನ್ನು ಹೊದಿಸಿ, ಅಂದು ಸಂಪಾದನೆ ಮಾಡಿದ ಹಣವನ್ನು ಲೆಕ್ಕ ಹಾಕಿ, ಹಳ್ಳಿಗೆ ಹೋಗಲು ಬೇಕಾಗುವಷ್ಟು ಹಣವನ್ನಷ್ಟೆ ಕೈಯಲ್ಲಿ ಹಿಡಿದುಕೊಂಡು, ಉಳಿದ ಹಣವನ್ನು  ಗದ್ದಲ ನಡೆದ ದಿಕ್ಕಿನತ್ತ ನಡೆದಳು. ಅದಾಗಲೆ ಗುಂಪು ಚದುರಿ ಹೋಗಿ ಒಬ್ಬಿಬ್ಬರು ಅಷ್ಟೇ ನಿಂತುಕೊಂಡಿದ್ದರು, ಕೆಳಗೆ ಒಬ್ಬ ವ್ಯಕ್ತಿಯು ಅಳುತ್ತಾ ಕುಳಿತುಕೊಂಡಿದ್ದನು ಅವನ ಅನತಿ ದೂರದಲ್ಲಿ ಮಂಗಳಮುಖಿಯರ ಗುಂಪೊಂದು ನಗುತ್ತಾ, ಕೆಕೆ ಹಾಕುತ್ತಾ ನಿಂತಿತ್ತು. 
ಕಲ್ಲವ್ವ ಸಮೀಪಕ್ಕೆ ಹೋಗಿ ನೋಡಿದಾಗ, ಆ ಮಂಗಳಮುಖಿಯರ ಗುಂಪಿನಲ್ಲಿ ತನ್ನ ಮಗನಿದ್ದದ್ದನ್ನು ಕಂಡು ಕಣ್ಣ ಹುಬ್ಬುಗಳನ್ನು ಗಂಟಿಕ್ಕಿಕೊಂಡು, ನೆಲದ ಮೇಲೆ ಕುಳಿತುಕೊಂಡ ವ್ಯಕ್ತಿಯ ಕಡೆಗೆ ನೋಡಿದಳು, ಅರೆ! ಅವನೆ, ಈಗ ತಾನೆ ನನ್ನ ಬಳಿ ತರಕಾರಿಯನ್ನು ತೆಗೆದುಕೊಂಡು ಬಂದವನಲ್ಲವೆ ಎಂದುಕೊಳ್ಳುತ್ತಾ, ಅವನ ಹತ್ತಿರ ಹೋಗಿ 'ಯಾಕ್ಮಗ್ನ ಏನಾತ' ಅನ್ನುತ್ತಾ ಕುಕ್ಕರ್ಗುಂಡಿಲೆ ಅವನೆದುರು ಕುಳಿತು ಕೇಳಿದಳು. ತಲೆಯೆತ್ತಿ ನೋಡಿದ ವ್ಯಕ್ತಿ, 'ನೋಡ್ಬೆ, ಊರ್ಮುಟ್ಟಾಕ ಅಂತಿಟ್ಗೊಂಡಿದ್ದ ರೊಕ್ಕಾನೆಲ್ಲ ಕಸ್ಕೊಂಡ್ಬಿಟ್ರು' ಎಂದನು ಹತಾಶೆಯ ಧನಿಯಲ್ಲಿ, ' ಅಯ್ಯ ತಮ್ಮ ಹೋದ್ರ ಹೋಗ್ಲ ತಗೋ ಅತ್ಲಾಗ ಹಾಳಾಗಿ, ಈಕ ನಾ ಕೊಡ್ತಿನಿ ತಗೊ ಏಳು, ನಾಳೆರ ಇಲ್ಲ ನಾಡಿದ್ದರ ತಂದು ಕೊಡ್ವಂತಿಯಂತ, ಏಳ, ಏಳ ಹೊತ್ತ್ ಮುಳ್ಗಾಕ ಬಂತ ಆಗ್ಲೆ' ಎನ್ನುತ್ತಾ, ಅವನ ಮರುಮಾತಿಗೂ ಕಾಯದೆ, ತನ್ನೂರಿಗೆಂದು ತೆಗೆದಿಟ್ಟುಕೊಂಡಿದ್ದ ಹಣವನ್ನು ಅವನ ಜೇಬಿಗೆ ತುರುಕಿ, ಭುಜಕ್ಕೆ ಕೈ ಹಾಕಿ ಎಬ್ಬಿಸಿ, ಜೊತೆಯಲ್ಲಿಯೆ ಕರೆದುಕೊಂಡು ನಡೆಯುತ್ತಾ, ಮಂಗಳಮುಖಿಯರ ಕಡೆಗೊಮ್ಮೆ ನೋಡಿದಳು, ಅವರಾಗಲೆ ಹಣದ ವಸೂಲಿಗಾಗಿ ಮತ್ತೊಬ್ಬನ ಮೈ ಮೇಲೆ ಬಿದ್ದಿದ್ದರು. 
ದಾರಿಯಲ್ಲಿ ಹೋಗುತ್ತಾ, ಕಲ್ಲವ್ವ ಆ ವ್ಯಕ್ತಿಯನ್ನು ಕೇಳಿದಳು
'ತಮ್ಮಾ, ತಪ್ಪ ತಿಳ್ಕೊಬ್ಯಾಡ, ನಿನ್ ಹೆಸರೇನ್ಪಾ?'
'ಹ್ಞಾಂ..., ಶಂಕ್ರಯ್ಯ ಬೆ'
'ಊರು?'
'ಇಲ್ಲೆ ಬೆ, ನಿಡಗುಂದಿ '
' ಹೌದಾ!!, ಮದ್ವಿ ಮಕ್ಳು?'
'ಹ್ಞೂಂ ಲಗ್ನ ಆಗಿ ಎರ್ಡ ಹೆಣ್ಮಕ್ಳ ಅದಾವ್'
'ಗಂಡು?'
' ಇಲ್ವಾ, ನಾನ ಯಾವುದ್ಕೂ ಆಸೆನ ಪಟ್ಟಾಂವಲ್ಲ, ಹೆಣ್ಣಾದ್ರನ, ಗಂಡಾದ್ರೆನ ಮಕ್ಳ, ಮಕ್ಳ.. ಗಂಡ... ಗಂಡಂತದ ಹಡ್ಕೊಂತ ಕುಂತ್ರ, ಆಕಿ ಆರೋಗ್ಯಾ ಹಾಳಾಗಿ ಹೊಕ್ಕೈತಲ್ರಿ, ಅದಕ್ ಮ್ಯಾಲ...ಮ್ಯಾಲ ಯಾಡು ಹೆಣ್ಣ್ ಆದ್ವು, ಅದ್ಜ ಎಲ್ಲಿದ ತಗಿ ಅತ್ಲಾಗ ಅನ್ಕೊಂಡ, ಆಪ್ರಷೇನ್ ಮಾಡ್ಸಬಿಟ್ಟಿನ ನೋಡ್ವಾ, '
'ಛಲೊ ಆತ ನೋಡ ನನ್ನಪ್ಪ, ನಿಮ್ಮಂತೊರು ಊರಿಗೆ ನಾಕ್ಮಂದಿ ಇದ್ರಂದ ಸಾಕ, ಹೆಣ್ಣ ಹಡಿಯೊ ಹೆಣ್ಮಕ್ಳ ಭಾಳೆ ಬಂಗಾರಾಗಿರ್ತೈತಿ' ಎಂದು ಹುಸಿ ನಗವನ್ನು ಮುಖದಲ್ಲಿ ತುಂಬಿಕೊಳ್ಳುತ್ರಾ,  ಉಗುಳನ್ನು ನುಂಗಿಕೊಂಡು
'ಯಪ್ಪಾ, ಅವ್ರೆಲ್ಲ ಈಗ ನಿನ್ಹತ್ರ ರೊಕ್ಕಾ ಕಿತ್ಕೊಂಡ ಹೋದ್ರಲ್ಲಾ, ಅವ್ರಗೇನ ನಿ ಕೈಗಡ ಏನರ ಕೊಡೊದಿತ್ತೇನ' ಸ್ವಲ್ಪ ಅಳುಕಿನ ಧ್ವನಿಯಲ್ಲಿಯೆ ಕೇಳಿದಳು.
ಪ್ರಶ್ನಾರ್ಥಕವಾಗಿ, ಹುಬ್ಬುಗಳನ್ನು ಗಂಟಿಕ್ಕಿಕೊಂಡು ಕಲ್ಲವ್ವನನ್ನೆ ದಿಟ್ಟಿಸಿನೋಡಿದನು.
ಅವನ ಈ ನೋಟವನ್ನು ಕಂಡಂತ ಕಲ್ಲವ್ವಳು ಮನದಲ್ಲಿಯೆ ಹೆದರಿಕೊಂಡಳು.
'ಇಲ್ಲವ್ವ, ಇವ್ರ ಹತ್ರ ಯಾರ ಕೈಗಡ ತಗೊತಾರ್ಬೆ'
'ಮತ್ತ್ ಹಾಂಗ ಎದಿಮ್ಯಾಲ ಬಿದ್ದ ಹಂತೇಕಿನ ರೊಕ್ಕಾನೆಲ್ಲಾ ಕಿತ್ಗೊಂಡ ಹೋದ್ರು'
'ಅದಾ...‌ಅವ್ರದೊಂದು ಛಾಳಿ ಅದು'
'ಛಾಳಿ..!!! ಹಂಗಂದ್ರ'
'ಅಯ್ಯ, ಇತ್ತಿತ್ಲಾಗ ಇವ್ರ ಆಟ ಭಾಳ ಜೋರಾಗೈತ್ಬೆ ಯವ್ವ, ದುಡಿಯಂಗಿಲ್ಲ ದುಖ್ ಪಡೊಂಗಿಲ್ಲ, ಮುಂಜಾನಿದ್ದ ಸಂಜಿತನ್ಕ ಊರ...ಊರ ಸಂತಿ ಅಡ್ಡಾಡಿ, ರೊಕ್ಕಾ ಇಸ್ಗೊತಾರ, ಕೊಟ್ರ ಛಲೊ, ಕೊಡದಿದ್ರ? ಈಗ ನೋಡಿದೆಲ್ಲವ್ವ, ಹಿಂಗಾ, ತ್ರಾಸ್ ಅಂದ್ರು ಇಲ್ಲ, ಬ್ಯಾನಿ ಅಂದ್ರು ಇಲ್ಲ, ಇರ್ಲಿ, ಇರ್ದ ಹೋಗ್ಲಿ ಎದಿಮ್ಯಾಲ ಬಿದ್ದು ಇದ್ಬದ್ದ ರೊಕ್ಕಾನೆಲ್ಲ ಕಸ್ಗೊಂಡ ಹೋಕ್ಕಾರ, ಇತ್ತಿತ್ಲಾಗ ಇವ್ರನ್ನ ಹೇಳೊರ ಕೇಳೊರ ಯಾರಿಲ್ದಂಗಾಗೈತಿ'
ಅವನ ಮಾತುಗಳನ್ನು ಕೇಳುತ್ತಿದ್ದಂತೆಯೆ, ಕಲ್ಲವ್ವನ ನಡಿಗೆ ಸಣ್ಣದಾಯಿತು, ಬಾಯರಿದಂತಾಗಿ, ಮೈಯಲ್ಲ ಬೆವರಿಕೊಂಡು,  ಕ್ಷಣಕಾಲ‌ ಕಣ್ಣಿಗೆ ಕತ್ತಲು ಕಟ್ಟಿದಂತಾಗಿ, ಆ ಹುಡುಗನ ತೋಳನ್ನು ಹಿಡಿದುಕೊಂಡು ನಿಂತುಬಿಟ್ಟಳು.
'ಯಾಕಬೆ,‌ ಏನಾತ?' ಎಂದನಾತ ತುಸು ಗಾಬರಿಯಿಂದ
'ಏನಿಲ್ಲಪಾ ತಂದೆ, ನಿ ಹೇಳಿದ್ದ ಮಾತ ಕೇಳಿ, ನನ್ನೆದಿ ಝಲ್ ಅಂದಂಗಾತು ಅದ್ಕ,' ಎಂದಳು ಮೆಲ್ಲನೆ ಸಾವರಿಸಿಕೊಳ್ಳುತ್ತಾ
ಕಣ್ಣನ್ನು ತೆರೆದಳು.
'ಈಗ ಹ್ಯಾಂಗೈತಿ ಆರಾಮ, ಐತಿಲ್ಲೊ, ಏನ್ ನೀರು ಪಾರು ಕುಡಿತಿರೊ' ಕೇಳಿದನು ಕಾಳಜಿಯಿಂದ
'ಬ್ಯಾಡ್ತಮ್ಮ, ಬ್ಯಾಡ, ಅಲ್ಲಾ, ಮತ್ತ್ ಅವಕ್ಕ...ದಗದಾ ಬಗ್ಸಿ ಅಂತ ಏನಿಲ್ಲನ'
'ಯಾ ದಗದಾ ತರ್ತಿಬೆ, ಹಿಂಗ ಗಂಡರಗೂಳಿ ಅಡ್ಡಾಡ್ದಂಗ ಅಡ್ಡಾಡ್ತಾವು, ಕೆಲವೊಬ್ರ ಅದಾರ, ತಂ ಪಾಡಿಗೆ ತಾವು ದುಡ್ಕೊಂಡ, ಛಲೊತ್ನಾಗಿ ಬಾಳೆ ಮಾಡಾಕ ಹತ್ತ್ಯಾವು, ಇವ್ ಒಂದಿಷ್ಟು ಪ್ಯಾಸನ್ ಅಂತಂದ ಗಂಡ ಹೋಗಿ ಹೆಣ್ಣಿನ ವೇಷಾ ಹಾಕ್ಕೊಂಡ, ಹಿಂಗ ಬೀದಿ ಬೀದಿ ಅಲಿತಾವ,'
'ಅಂದ್ರ ಇವ್ರ ಹೊಟ್ಟಿ ಉಪಜೀವ್ನ ಇದ ಅಂದಂಗಾತು'
'ಹೌದವ್ವಾ, ಇದ ಕಾಡೋದು, ಬೇಡೊದು, ಇಸ್ಕೊಳ್ಳುದು ಮಜಾ ಮಾಡೋದ, ಹೊಟ್ಟಿಗೊಂದಿಷ್ಟ ಹಿಟ್ಟ, ಜುಟ್ಗೊಂದಿಷ್ಟ ಹೂವ, ಆತಲ್ಲ ಮತ್ತಿನ್ನೇನ ಯಾರ್ದ ದುಡ್ಡ್ ಹಾಂ ಎಲ್ಲವ್ವನ ಜಾತ್ರಿ' ಹೇಳುತ್ತಾ... ಹೇಳುತ್ತಾ ನಿಲ್ದಾಣ ಬಂದೆ ಬಿಟ್ಟಿತು.
ಕೊಡುಬ ಹಣವನ್ನು ಇನ್ನೆರಡು ದಿನದಲ್ಲಿ ಕೊಡುವುದಾಗಿ ಹೇಳಿ ಕಲ್ಲವ್ವನನ್ನು ಹಳ್ಳಿಯ ಬಸ್ಸಿಗೆ ಹತ್ತಿಸಿ, ತಾನು ತನ್ನೂರಿನ ಹಾದಿಯನ್ನು ಹಿಡಿದನು.

Wednesday, December 25, 2019

ಚುಟುಕು

ಸುಡುವ ಸೂರ್ಯನಿಗೂ
ಕೂಡಿ ಬಂದಿತಿಂದು
ಕಂಕಣದ ಭಾಗ್ಯ!
ನೀಡುವೆ ನೀನೆಂದು
ಒಪ್ಪಿಗೆ, ಕೂಡಿಬರಲು
ನಮ್ಮಿಬ್ಬರಿಗೂ
ಕಂಕಣದ ಸೌಭಾಗ್ಯ!!

Monday, December 23, 2019

ಚುಟುಕು

ನಾನೀಗ
ಬೀಜವಿಲ್ಲದ ಹಣ್ಣಾಗಬೇಕಿದೆ.
ಹಳತುಗಳ ನಡುವೆ
ಸಿಕ್ಕು...‌ಕೊಳೆತು
ಹೋಗುವ ಮುನ್ನ,
ಹೊಸತನಗಳೊಳಗೆ
ಬೆರೆತು ಮತ್ತೆ
ಚಿಗುರಬೇಕೆಂದೆನಿಸಿದೆ.

ಚುಟುಕು

ನಿಮ್ಮೊಳಗಿನಷ್ಟು
ಶಾಂತಿಯು ತುಂಬಿಕೊಂಡಿಲ್ಲ
ನನ್ನೆದೆಯಲ್ಲಿ
ಗಾಂಧಿ...
ಆದರೂ....
ವಿನಾಕಾರಣ, ಹಿಂಸಿಸುವ
ನೆನಪುಗಳಿಗೆ ಹಾಡಬೇಕಿದೆ
ನಾಂದಿ...

ಚುಟುಕು

ವರೋಪಚಾರ ಅಪರಾಧ!!!
ಅದಕ್ಕಾಗಿ,  ನಿನ್ನನ್ನು ಬಿಟ್ಟು
ಬೇರೇನು... ಬೇಡೆನು
ಚೆಂದುಳ್ಳಿ!!
ಸಂಸಾರ ಸಾಗಿಸಲು
ರಸಿಕತೆಯಾದರು ಬೇಕಲ್ಲವೆ?
ತಡಮಾಡಬೇಡ, ಹೊತ್ಗೊಂಡು 
ಬಾ ಪುಟ್ಟಿ,  ಈರುಳ್ಳಿ!!

ಚುಟುಕು

ಯಾರಿಗೂ...
ಅರಿವಾಗುತ್ತಿಲ್ಲ
ನಮ್ಮಯ ಗೋಳು!!
ಇನ್ನೂರು ಕೊಟ್ಟರು
ಸಿಗುತ್ತಿಲ್ಲ ಆಳು!!
ಸಿಕ್ಕರೂ...ಪದೆ..ಪದೆ
ಮಳೆಯು ಸುರಿದು
ಮಾಡುತ್ತಿದೆ, ಮೂರಾಬಟ್ಟೆ
ನಮ್ಮೆಲ್ಲ‌ ಒಕ್ಕಲಿಗರ ಬಾಳು!!

ಚುಟುಕು

ಹೇಳಿಕೊಳ್ಳಬೇಕೆಂದಿರುವೆ
ನಿಮ್ಮೆದುರಿಗೊಂದು
ಗುಟ್ಟಿನ ವಿಷಯ!
ಕಾಡುತ್ತಿದೆ...
ಈ ಗುಟ್ಟು, ನಿಮ್ಮೊಳಗೆ
ಗುಟ್ಟಾಗಿ ಉಳಿಯುವುದೆ?
ಎಂಬ ಸಂಶಯ!!!

ಚುಟುಕು

ಚಂದಿರನಿಗೂ ದಕ್ಕಿತಿಂದು
ಸ್ವಾತಂತ್ರ್ಯ.....
ಮೋಡಗಳ
ಸೆರೆಯಿಂದ!
ಇನ್ನಾದರೂ...
ಸಿಗಬಹುದೇನೊ?
ನಮಗೆಲ್ಲ ಮುಕ್ತಿ
ನೆರೆಯಿಂದ!!!

ಚುಟುಕು

ಎಡೆಬಿಡದೆ ಸುರಿದು
ಹೋಗಿದೆ ಮಳೆ
ಫಸಲಿಗಿಂತಲೂ ಫಲವತ್ತಾಗಿ
ಬೆಳೆದಿದೆ ಕಳೆ
ಎರಡರ ನಡುವೆ ಸಿಕ್ಕು
ಕೊಳೆತು ಹೋಗುತ್ತಿದೆ
ಬೆಳೆದ ಬೆಳೆ

ಚುಟುಕು

ಬಿಟ್ಟು ಹೋಗುವುದಾದರೆ....
ಹೇಳದೆ ಹೊರಟುಬಿಡು!!
ಕಾಯುವುದರಲ್ಲೂ ಒಂಥರಾ
ಸುಖವಿದೆ!
ನಿನಗೇನು ಗೊತ್ತು!!,
ನೀನಿಲ್ಲವೆಂಬ ಸತ್ಯದ
ಜೊತೆ ಬದುಕುವುದರಲ್ಲಿ
ಅನುಭವಿಸಿಕೊಳ್ಳಲಾರದಷ್ಟು
ಯಾತನೆಯಿದೆ!

Sunday, December 22, 2019

ಚುಟುಕು

ಕಣ್ಣ ಹನಿಗಳಿಗೆ
ಬೆಲೆ ಕಟ್ಟುವರಾರು?
ಅದು ಬರೀ ಉಪ್ಪು!
ಅತಿಯಾಗಿ ನಂಬಿ
ಮೋಸ ಹೋಗುವುದಿದೆಯಲ್ಲ
ಅದು ನಮ್ಮ ತಪ್ಪು!!

ಚುಟುಕು

ಪ್ರೀತಿಯೂರಿನಲ್ಲಿ
ನೋವಿಗೆ ಮದ್ದಿಲ್ಲವೆಂದರಿತಿದ್ದರೂ
ಹೆಜ್ಜೆ ಇಟ್ಟೆ!
ಮರಳಲಿ ಹೇಗೆ?
ಅವಳಿಲ್ಲದೆ ಬರಿಗೈಯಲ್ಲಿ!
ಸಾವಾದರು ಬರಬಹುದಲ್ಲ!!!
ಕರೆಯಲೆಂದು, ಅದಕೆ
ಇಲ್ಲಿಯೇ... ಸುಮ್ಮನೆ
ಕುಳಿತುಬಿಟ್ಟೆ!!

ಚುಟುಕು

ಭಾರವಾಗುವುದಿಲ್ಲೇನು?
ಚೆಲುವೆ, ಮೂಗಿಗೆ
ಈ ನತ್ತು!!
ತರದಿದ್ದರೆ ಸಾಕು...
ನಿನ್ನ ಸೌಂದರ್ಯಕ್ಕೆ
ಕುತ್ತು!!

ಭಾರವಾಗುವುದಿಲ್ಲೇನು?
ಚೆಲುವೆ, ಮೂಗಿಗೆ
ಈ ನತ್ತು!!
ಇರಲಿಬಿಡು,
ತರದಿದ್ದರಷ್ಟೆ ಸಾಕು
ನನ್ನ ಜೇಬಿಗೆ
ಆಪತ್ತು!!

ಚುಟುಕು

ಕಲ್ಲು ಗೋಡೆಗಳಿಗಾಗಿ
ನಿಮ್ಮ ಮನಸ್ಸುಗಳನ್ನು
ಕಲ್ಲಾಗಿಸಿಕೊಳ್ಳಬೇಡಿ!
ಇಲ್ಲಿ ಯಾವುದು
ಶಾಶ್ವತವಲ್ಲ!! ಇದ್ದ
ನೆಲವನ್ನೆ, 
ಸ್ವರ್ಗವಾಗಿಸಿಕೊಂಡುಬಿಡಿ

ಚುಟುಕು

ಇದಲ್ಲವೇನು ಮೋಸ?
ತುಟಿಯಂಚಿನಲ್ಲಿಯೆ.. ತುಂಬಿಟ್ಟು
ಕೊಂಡಿರುವೆಯಲ್ಲ,
ಮಧುರಸ...
ಅರಿವಾಗುತ್ತಿಲ್ಲವೇನು?
ಬಾಯಾರಿ.. ಕುಳಿತಿಹನಿಲ್ಲಿ
ಪ್ರೇಮದಾಸ!

ಚುಟುಕು

ನನ್ನೆದೆಯೆ..
ಕತ್ತಲೆಯ ಕೂಪ!
ನಾನೇಕೆ ಹಚ್ಚಲು
ಹೋಗಲಿ...
ಬೇರೆಯವರಂಗಳದಲ್ಲಿ
ದೀಪ!!

ಚುಟುಕು

ಸಾಲು ಕದ್ದವನ
ಮಾತು ಬಿಡು! ಅವನೇನು
ಭಾವವ ಕದಿಯಬಲ್ಲನೇನು?
ಮನಸ್ಸು ಕದ್ದವಳು
ನೀನು... ಬಾ ಇಲ್ಲಿ
ಉತ್ತರಿಸು, ಈ ವಿರಹದ
ಸೆರಮನೆವಾಸಿಯನ್ನು
ಬಿಡಿಸಿಕೊಂಡು ಹೋಗುವುದು
ಯಾವಾಗ?

ಚುಟುಕು

ಎಷ್ಟು ದರವಾದರೇನು?
ಖರಿದೀಸಿಕೊಳ್ಳಬೇಕೆಂದಿದ್ದೆ
ಈ ಸೀರೆಯನ್ನು 
ನನ್ನವಳಿಗಾಗಿ...
ಖರಿದಿಸಲಿಲ್ಲ!!!
ಕಾರಣವಿಷ್ಟೆ, ಇದರಷ್ಟು
ನುಣುಪು ನಡವು
ನನ್ನವಳದ್ದು ಇಲ್ಲದ್ದಕ್ಕಾಗಿ

Wednesday, December 18, 2019

ಶಾಯರಿ

ಅವಳ ಕುರಿತು
ಮಾತನಾಡಬೇಕೆಂದಾಗಲೆಲ್ಲ
ಮಧು ಬಟ್ಟಲಿಗೆ
ಚುಂಬಿಸುತ್ತೇನೆ ಸಾಕಿ.....
ಕುಡಿದು....
ಮೌನವಾಗಿರಬೇಕೆಂದುಕೊಂಡಾಗಲೆಲ್ಲ
ಮತ್ತೆ, ಮಾತನಾಡುವಂತೆ
ಪ್ರೇರೆಪಿಸುತ್ತವಲ್ಲ!! ರಂಗೀಯ
ನೆನಪುಗಳು....
ಇದಾವ ರೀತಿ.

Sunday, November 24, 2019

ಚುಟುಕು


ಮಾಡಿದ್ದನ್ನು ಇಲ್ಲಿಯೆ
ಉಂಡು ಹೋಗಬೇಕು!
ಪಾಪದ್ದು...
ಹಳಸಿ ಹೋಗುತ್ತದೆ!!
ಪುಣ್ಯದ್ದು, ಹೊಟ್ಟೆಯನ್ನಾದರು
ತುಂಬಿಸುತ್ತದೆ!

Wednesday, November 20, 2019

ಸಾಕಿ

ವಿರಹದ ಬೇಗೆಯಲ್ಲಿ
ಬೆಂದು...ಬೆಂದು...
ಬಳಲಿಹೋಗಿರುವೆ,
ಇಂದಿರುಳಿಗಾದರು ಅವಳ
ನೆನಪುಗಳಿಂದ ದೂರವಿರಿಸು
ಸಾಕಿ....
ಈ ರಾತ್ರಿಗಾದರೂ...
ಕೈಗೂಡದ ಕನಸುಗಳನ್ನು
ನನಸಾಗಿಸಿಕೊಳ್ಳುವ
ವ್ಯರ್ಥ ಪ್ರಯತ್ನವನ್ನಾದರೂ
ಮಾಡುವೆ!!

Saturday, November 16, 2019

ಚುಟುಕು

ನಾನೆ ಪಂಜರದ ಹಕ್ಕಿ
ಅವಳೊಲವಲ್ಲಿ!
ಇನ್ನೂ ಸೆರೆಯಾಗುವ
ಮಾತೆಲ್ಲಿ!
ನಾನೆ ಮರೆಯಾಗಬೇಕಿದೆ
ಅವಳ ಸೀರೆ
ಸೆರಗಿನಂಚಿನಲ್ಲಿ!

ಚುಟುಕು

ವಾದ್ಯದ ತರಂಗಗಳಿಗೆ
ಮಿಡಿಯುವ ನೀನು...
ನನ್ನೆದೆಯ ತರಂಗದ ರಾಗವು
ನಿನಗೆ ಕೇಳಿಸದೇನು?
ಪಲ್ಲವಿಗೆ ಸೋತು ಹೋಗುವ
ನೀನು.... ಯುಗಳ ಗೀತೆಗಳನ್ನು
ಹಾಡಿದರೂ...ನಿನಗೆ
ಕೇಳಿಸುತ್ತಿಲ್ಲವೇನು?

ಚುಟುಕು

ಸಾಲು ಕದ್ದವನ
ಮಾತು ಬಿಡು! ಅವನೇನು
ಭಾವವ ಕದಿಯಬಲ್ಲನೇನು?
ಮನಸ್ಸು ಕದ್ದವಳು
ನೀನು... ಬಾ ಇಲ್ಲಿ
ಉತ್ತರಿಸು, ಈ ವಿರಹದ
ಸೆರಮನೆವಾಸಿಯನ್ನು
ಬಿಡಿಸಿಕೊಂಡು ಹೋಗುವುದು
ಯಾವಾಗ?

Sunday, November 10, 2019

ರಂಗೀ..

ವಿಳಾಸವಿಲ್ಲದ
ನಿನ್ನೂರನ್ನು ಬೇಕಿದ್ದರು
ಹುಡುಕಿಕೊಂಡು
ಬರುವೆ ರಂಗೀ....
ಎದುರಾದಾಗ
ನಿನ್ನ ದಿವ್ಯ ನಿರ್ಲಕ್ಷ್ಯದ
ನೋಟವನ್ನು ನಾ
ಹೇಗೆ ಸಹಿಸಿಕೊಳ್ಳಲಿ!

ಶಾಯರಿ

ಅವಳಿಗಿನ್ನೂ...
ನನ್ನಮೇಲದಷ್ಟು
ಕೋಪವಿರಬಹುದು
ಸಾಕಿ....
ಮದುವೆಯ
ಮೊದಲ ರಾತ್ರಿಯಲ್ಲಿ
ಚೂರಾದ ಬಳೆಗಳನ್ನು
ತಂದು.... ನನ್ನ ಗೋರಿಯ
ಮೇಲೆ ಚೆಲ್ಲಿರುವಳಲ್ಲ!!

Saturday, November 9, 2019

ಚುಟುಕು

ನಿನಗೆಂದೆ ಕಟ್ಟಿದ
ಜೋಳಿಗೆಯಲ್ಲಿ.... ನಾ
ಬರೆದಿಟ್ಟ ಕವಿತೆಗಳೆಲ್ಲ
ನಿದಿರುಸುತ್ತಿವೆ!
ಏನು ಮಾಡಲೀಗ?
ಬಂದರೆ, ಇವುಗಳನ್ನು ಎಬ್ಬಿಸುವುದೋ?
ಕರೆಯದೆ, ನಾನೊಬ್ಬನೆ
ವಿರಹವನ್ನು ಅನುಭವಿಸುವುದೊ?


ಚುಟುಕು

ಲೆಕ್ಕ ಇಟ್ಟವರಾರಿಲ್ಲಿ?
ನಿನ್ನ ಕಣ್ಣೊಟದ
ಬಾಣಕ್ಕೆ, ಹತ್ಯೆಯಾಗಿ
ಹೋದವರನ್ನು!!
ಕುರುಡರಾಗಿಬಿಟ್ಟಿದ್ದಾರೆ
ಎಲ್ಲರೂ... ನಿನ್ನಂದಕ್ಕೆ!!!
ಯಾರು ದಾಖಲಿಸಿಕೊಳ್ಳುತ್ತಲೆ
ಇಲ್ಲ, ಫಿರ್ಯಾದಿಯನ್ನು!

Wednesday, November 6, 2019

ಚುಟುಕು

ಮನಸುಗಳೆ....
ಬೇರತಾದ ಮೇಲೆ
ಬೇವರಿನ ವಾಸನೆಗೇತಕೆ
ಅಂಜುವೆ!!
ನಮಗೇತಕೆ?
ಹೆಜ್ಜೆ....ಹೆಜ್ಜೆಗೂ... 
ಲಜ್ಜೆಯೆನ್ನುವ ಈ 
ನಿರ್ಲಜ್ಜ ಜಗದ
ಗೊಡವೆ!!

Tuesday, November 5, 2019

ಚೆನ್ನಿ


ಹಿಂಗ್ ಕಣ್ಣನ್ಯಾಗ ಮಾತಾಡೊದನ್ನ ನೀ... ಯಾವಾಗ 
ಬಿಡ್ತಿದಿ?, ಲೆಕ್ಕ ಇಡಲಾರ್ದಷ್ಟ ದಿವ್ಸಾ...ಸುಟ್ಟ್ಹೊಂಟಾವಿಲ್ಲೆ...
ಯಾಕ್ ಸುಮ್ನ ಕಾಲ ಕಳಿಯಾಕ ಹತ್ತಿದಿ?
ಬೆಂಕಿ ಹಚ್ಚಲಾರ್ದನ ಒಳ್ಗೊಳ್ಗ ಸುಟ್ಟ ಹೊಂಟೆನ ನಾನಿಲ್ಲೆ
ಗೊತ್ತಿಲ್ಲೇನ, ತಣ್ಗ ಮಾಡೊ ದವಾ ನಿನ್ಹತ್ರನ ಐತಿ...
ಬಿಟ್ಟ ಕಣ್ ಬಿಟ್ಕೊಂತ ಮಳ್ಳಿಯಂಗ ಕುತ್ಗೊಂಡಿಯಲ್ಲೆ ಅಲ್ಲೆ

ಅನುಮಾನ ಮಾಡಬ್ಯಾಡ ಹುಡ್ಗಿ, ನಿನ್ಮ್ಯಾಲಿನ ಪ್ರೀತಿ ಮ್ಯಾಲೆ
ಗೊತ್ತೈತನು ಅಳ್ದ, ತೂಗಿ ಲೆಕ್ಕ ಮಾಡಾಕ ಪ್ರೀತಿಗಿನ್ನೂ ಎಲ್ಲಿ ತಕ್ಕಡಿ..ನ ಸಿಕ್ಕಿಲ್ಲ...
ಚೀಲ್ದಾಗ ತುಂಬಲಾರ್ದಷ್ಟ, ಗೋದಾಮನ್ಯಾಗ ನಿಟ್ಟ ಒಟ್ಟಲಾರದಷ್ಟು ನನ್ನೆದಿಯೊಳ್ಗ ತುಂಬಿ ತುಳ್ಕಾಕ್ಹತ್ತೈತಿ 
ಇದು ನಿಂಗಿನ್ನ್.. ಗೊತ್ತಿಲ್ಲ...

ಸೇರನ್ಯಾಗ ತುಂಬಾಕ ಹೋಗಬ್ಯಾಡ, ಮರದಾಗ ಹಸ್ನss
ಮಾಡ್ಕೊಂತ ಕುಂದ್ರಬ್ಯಾಡ... ಬೇಕಿದ್ರ ಸಾಣ್ಗಿ ಹಿಡ್ದ ನೋಡ!!!
ಒಂದ್ಸಲ!!!, ಒಂದ ಒಂದ ಕಾಳ ಹುಳ್ಕ ಬರೋದಿಲ್ಲ ನನ್ನ ಪ್ರೀತ್ಯಾಗ
ನಿಗಿನಿಗಿ ಕೆಂಡದ ಮ್ಯಾಲಿಟ್ಟ ನೋಡ...ಕುದ್ದು..ಕುದ್ದು...ಅರಳಿ ಹೂವಾಕ್ಕೈತಿ.. ಹೊರ್ತ...ಹಳಿಸಂತು ಹೋಗುದಿಲ್ಲ!

ಊಟದಾಗಿನ ಉಪ್ಪಿನಕಾಯ್ಹಂಗ....ನೆಕ್ಕಿ ನೋಡಬ್ಯಾಡ, 
ಹುಣ್ಮಿ ಹೊಳ್ಗಿಯಂಗ ಬಾಯ್ಚಪ್ಪರಿಸಿ ನೋಡ....
ನನ್ನೊಳ್ಗ ಬೇವು.. ಐತಿ, ಬೆಲ್ಲಾನೂ ಐತಿ... ಎರ್ಡನ್ನ
ಬೇರ್ಸಿ ಯುಗಾದಿ ಮಾಡ್ಕೊ, ಸಾಕ್ಷಿಗೆ ಕಾರ್ತಿಕಕ್ಕೊಂದ
ತೊಟ್ಲ ತೂಗಸ್ಲಿಲ್ಲಂದ್ರ ಕೇಳ!!

ಇನ್ನ ತಡಮಾಡಬ್ಯಾಡ ಲಡ್ಕಿ.... ಹರೆ ಹರ್ದ ಹೊಂಟೈತಿ
ಖಾಲಿಯಾದ ಮೇಲೆನೈತಿ 
ನೀನು ಒಳ್ಳಾಗು...‌ನಾ ರುಬ್ಬಗುಂಡ ಆಕ್ಕಿನಿ..‌ಬಾಳ್ವೆದಾಗಿನ
ಎಲ್ಲಾ ಕಷ್ಟಾನೂ ರುಬ್ಬಿ ಹಾಕೋನು...
ಮತ್ತ್ ನೀ ಮಡ್ಕಿಯಾಗು... ನಾ ಕೂಡಗೋಲ ಆಕ್ಕೈನಿ
ಅರ್ಮನಿಯಂತ ಗುಡ್ಸಿಲೊಳ್ಗು ನಾವ್ ಸುಖಾ ಅನ್ನೊ
ಬೆಣ್ಣಿ ಕಡಿಯೊನ ಚೆನ್ನಿ.... ಸುಖಾ ಅನ್ನೊ ಬೆಣ್ಣಿ ಕಡಿಯೊನು

Saturday, November 2, 2019

ಶಾಯರಿ

ನಾ ಕೊಟ್ಟ ಬಳೆಗಳನ್ನು
ಅವಳು ತೊಡದೆ
ಹೋಗಿದ್ದರು ಸಾಕಿತ್ತು
ಸಾಕಿ...
ಒಡೆದು ಹೋದಳು!!
ತಡೆದುಕೊಳ್ಳುವುದೆ ಈ...
ಹೃದಯ

Saturday, October 26, 2019

ಚುಟುಕು

ಚೂರಿ...
ಸಾಣೆ ಹಿಡಿದದ್ದಾರೇನು?
ತುಕ್ಕು ಹಿಡಿದದ್ದಾರೇನು? ಇರಿಯುವುದಾರೆ
ಇರಿದು ಕೊಂದುಬಿಡು...
ಹೀಗೆ, ಮೌನ ಬೀದಿಯಲ್ಲಿ
ನನ್ನನೊಬ್ಬನನ್ನೆ ಬಿಟ್ಟು
ಹೋಗಬೇಡ.

Friday, October 25, 2019

ಶಾಯರಿ

ಅವಳಿಗ...
'ಮೌನ'ವಾಸಿ
ಸಾಕಿ...
ನಾನೀಗ...
ನಿನ್ನ'ಮದ್ಯ'
ವಾಸಿ

Wednesday, October 23, 2019

ಚುಟುಕು

ನಿನ್ನ ಕುರಿತು 
ಬರೆವ ಸಾಲುಗಳಿಗೆ
ಕೊನೆಯೆ.... ಇಲ್ಲ!!!
ಯಾವ ರಾಗದಲ್ಲಿ
ಹಾಡಲಿ....?
ಒಂದೂ...
ನಿನ್ನಂದಕೆ ಹೋಲುತ್ತಿಲ್ಲ!!!

Monday, October 21, 2019

ಸಾಕಿ

ಪರದೆಯನ್ನೆಳೆದರೆ
ಪ್ರೀತಿಯು 
ಸಾಯುವುದೇನು?
ಸಾಕಿ..
ಮರೆಮಾಚಿದ
ದುಪ್ಪಟಕ್ಕೂ...
ಅದರ ಸೊಂಕು
ತಗಲುವುದಿಲ್ಲವೇನು?

ಚುಟುಕು

ಸಾಕು...
ತೆಗೆದಿಟ್ಟುಬಿಡು
ಉಸಿರುಗಟ್ಟಿ
ಹೋದಾತು!!!
ತೊಡಿಕೊಂಡುಬಿಡು
ಮನದ ಮಾತುಗಳನ್ನು
ಕನಸುಗಳಿಗೆ ಜೀವ,
ಬಂದರು... ಬಂದಾತು!!

Friday, October 18, 2019

ಕಜಲ್ ೫೦


ಬೆನ್ನು ಬಿದ್ದ ಬೇತಾಳದಂತೆಯೆ, ಮಸಣದಿಂದ
ನನ್ನ ಹೆಜ್ಜೆ ಗುರುತುಗಳನ್ನೆ ಹಿಂಬಾಲಿಸಿಕೊಂಡು
ಬರಬೇಡವೊ ಪಾಗಲ್...
ಸುರಿದುಕೊಳ್ಳುತ್ತಿರುವೆ... ತಣ್ಣೀರನ್ನೆ!!
ನೀನಿಲ್ಲವೆಂಬ ಸುದ್ದಿಯನ್ನು ಅರಿತು...
ಅರಿಯಲಾರದಂತೆ

ಬೆತ್ತಲೆಯ ಬೆನ್ನಿನ ಮೇಲೆ ಹಾಗೆಯೆ...
ಉಳಿಸಿಕೊಳ್ಳಬೇಕೆಂದುಕೊಂಡಿದ್ದೆ, ನಿನ್ನಧರದ ನೆನಪಿನ
ಕುರುಹುಗಳನ್ನು ಪಾಗಲ್...
ಇಲ್ಲ..!!! ಇಲ್ಲ..!! ತೊಳೆದುಕೊಂಡು ಬಿಡುವೆ,
ಬರುವವರು..ಅಲ್ಲಿ ತುಂಬುವುದು ಕಾಮವೊ!!
ಮೋಹವೊ!!, ವಿರಹವೊ!!! ವಿಷವೊ!! ನಾನ್ಹೇಗೆ
ಕಂಡುಕೊಳ್ಳಲಿ!!!

ಗೋಕುಲಾಷ್ಠಮಿಯಂದು ಕೊಡಿಸಿದ
ಈ ರಂಗು ರಂಗೀನ ದುಪ್ಪಟವನ್ನು... ನಿನ್ನ
ಗೋರಿಯ ಮೇಲೆ ಹೊದಿಸಿಬಿಡಬೇಕೆಂದಿದ್ದೆ ಪಾಗಲ್...
ಆದರೂ... ಎತ್ತಿಟ್ಟುಕೊಂಡೆ! ನೆನಪಿಗಾಗಲ್ಲ,
ಕಾಮದ್ಹಸಿವಿನ ವಿರಹಿಗಳ ಹಾಸಿಗೆಯಾಗಿಸಲು,
ಭುಜವ ಕಚ್ಚಿದ ನೋವಿಗೆ, ಸುರಿವ ಎರಡು ಹನಿ
ಕಣ್ಣೀರ ಒರೆಸಿಕೊಳ್ಳಲು...

ನಿಜವೆನಿಸಿತು ನನಗಿಂದು, ನಿನ್ನನು ಗೋರಿಯೊಳಗಿಟ್ಟು
ಮಣ್ಣನು ಸುರಿದ ಕ್ಷಣ...ಪ್ರೀತಿಗೆ ಸಾವಿಲ್ಲವೆಂಬುದು
ಪಾಗಲ್...
ಆದರೆ.......!!! ಮಸಣದ ಮೂಲೆ ಮೂಲೆಯನ್ನು ಹುಡುಕಿದರು..... ವಿರಹದ ಸಾವಿನ ಕುರುಹುವೆ
ಕಾಣಿಸುತ್ತಿಲ್ಲವಲ್ಲ!!, ಎರಡು ಒಂದೆ ನಾಣ್ಯ‌ದ 
ಎರಡು ಮುಖಗಳೇನು?

ಅಡಿಯಿಂದ ಮುಡಿಯವರೆಗೂ... ನೋವೆ ತುಂಬಿಕೊಂಡಿದ್ದರು,
ಅದ್ಹೇಗೆ ಸಂತಸವಾಗಿರುತ್ತಿದ್ದೆಯೋ? ಒಂದೆ ಒಂದು ಮಧು
ಬಟ್ಟಲನ್ನು ಕುಡಿದು ಪಾಗಲ್....
ಹೇಳಲು ನೀನಿಗಿಲ್ಲ!!, ನಾನು?....ಅಲ್ಲಿಗೀಗ ಬರುವ ಹಾಗಿಲ್ಲ!!
ನಿನೆಂದೂ ಚಿರನಿದ್ರೆಗೆ ಹಪಹಪಿಸಿದವನೆ ಅಲ್ಲ, ಮೈಗೇರಿದ
ಅಮಲಿನಲ್ಲೂ...ಅವಳ ಹೆಸರನ್ನೆ ಜಪಿಸುತ್ತಿದ್ದೆ..
ಮಣ್ಣಿನಲ್ಲಿ?....ಜಪಿಸಬೇಡ, ಸುತ್ತಲಿರುವ ಆತ್ಮಗಳೆಲ್ಲ
ಎದ್ದು ಕುಳಿತು ಬಿಟ್ಟಾವು!!

Wednesday, October 16, 2019

ಚುಟುಕು

ಹೂವುಗಳು.....
ಚುಚ್ಚಿ ನೋಯಿಸಬಹುದು
ನಿನ್ನಂಗಾಲನ್ನು
ಚೆಲುವೆ,
ಹೆಜ್ಜೆಯೂರುವುದಾದರೆ...
ನನ್ನೆದೆಯ ಮೇಲೆ
ಊರು...
ಎಡವಾದರೇನು?
ಬಲಗಾಲಾದರೇನು?

Tuesday, October 15, 2019

ಶಾಯರಿ ಹಿಂದಿ

ಯ್ಯೂಂ.....ನಾ ದೇಖ್ಹೊ
ಇನ್ ನಷಿಲಿ ಆಂಖೋಸೆ...
ದಿಲ್ ಕಿ ದಡಖನ್ ನಾ...
ರುಖ್ ಜಾಯೆ!!!

ತರಸ್ ಕರೋ.. ಇಸ್
ದಿವಾನೆಕೆ ಊಪರ್..
ದಿಲ್ ಮೆ ಪ್ಯಾರ ಕಾ
ಫೂಲ ಖಿಲ್ ಜಾಯೆ!!

Saturday, September 28, 2019

ಶಾಯರಿ

ಕನಸುಗಳ ಮೂಟೆ
ಹೊರೆಸಿ, ಮೋಸದೂರಿನಲ್ಲಿ
ಮಾಯವಾದವಳು
ಇನ್ನೂ.... ಸಿಕ್ಕಿಲ್ಲ
ಸಾಕಿ...
ಹಗುರವಾಗಬೇಕೆಂದುಕೊಂಡೆ,
ನಿನ್ನರಮನೆ ಬಟ್ಟಲೊಳಗಿನ
ಮದ್ಯವ ಕುಡಿದು....
ಆದರೆ, ನಿನ್ನ ಮೈಗೆ ಪೋಸಿಕೊಂಡ
ಅತ್ತಾರಿನ ಘಮಲು...
ಮತ್ತೆ ಅವಳನ್ನೆ...
ನೆನಪಿಸಿತಲ್ಲ!!!

Thursday, September 26, 2019

ನಿನ್ನ ಬರುವಿಕೆ, ಸುಳಿ
ಗಾಳಿಗೂ ಸುಳಿವು ಸಿಕ್ಕಿದೆಯೇನೊ?
ಅದಕೆ‌ ಸೀರೆ ಸೆರಗನ್ನು ಎಳೆಯುತ್ತಿದೆ!
ಮೂಡಿದ ಮೊಗದ ಮೇಲಿನ
ನಾಚಿಕೆಯ ಕಂಡು... ರವಿಯ
ಕಿರಣವು ನನ್ನ ಕೆನ್ನೆಯನು ಚುಂಬಿಸುತ್ತಿದೆ!

Wednesday, September 25, 2019

ನಿರ್ಭಾವುಕತೆಗಳು ೧೦

ಹೇಳಿಕೊಳ್ಳಬೇಕೆನಿಸುತ್ತಿದೆ,
ಹಾಡಿ ಹಳತುಗಳ ಹಳಸಿಕೊಳ್ಳುವ ಹಾಗಿಲ್ಲ!!
ಮೌನವಾಗಿರಬೇಕೆಂದುಕೊಂಡಿರುವೆ,
ಮುಚ್ಚಿಟ್ಟುಕೊಂಡ ಮಾತುಗಳೆಲ್ಲ
ಮನದೊಳಗೆ ಮಸಣವನ್ನೆ ಸೃಷ್ಟಿಸುತ್ತಿವೆ!!!
ಕೂಗಿಬಿಡಬೇಕೆಂದುಕೊಂಡೆ,
ಕೊರಳಿಗೆ ಕಟ್ಟಿದ ದಾರದ ಗಂಟು...
ಬಿಗಿಯುತ್ತಿದೆ...
ಮಾತೆ ಹೊರಡದಂತೆ!!
ಕನಲಿ ಹೋಗುತ್ತಿರುವೆ ಕ್ಷಣ ಕ್ಷಣಕ್ಕೆ
ಉಸಿರಾಡುತ್ತಿರುವೇನೊ? ಇಲ್ಲವೊ?
ನನಗೆ ಗೊತ್ತಿಲ್ಲ!!!
ಅವನ ನಿರ್ಭಾವತನದ ನೋಟಕ್ಕೆ

Sunday, September 22, 2019

ರಂಗೀ

ನನ್ನ ನಶೆಯಿರಿದ
ಕಣ್ಣುಗಳನ್ನೆ
ದಿಟ್ಟಿಸಿ
ನೋಡುತ್ತಿರಬೇಡ
ರಂಗೀ....
ಅಲ್ಲೂ... ನಿನಗೆ
ಜಾಗವಿಲ್ಲ!!
ಅಲ್ಲೆಲ್ಲ, ಅವಳು
ತುಂಬಿಟ್ಟ, ಬಣ್ಣ ಬಣ್ಣದ
ಕನಸುಗಳಿವೆ.

Saturday, September 21, 2019

ರಂಗೀ

ಅವಳೊ...
ಆಳಕ್ಕಿಳಿದಷ್ಟು
ಅರ್ಥವಾಗದ
ಪುಸ್ತಕ
ರಂಗೀ....
ಮರೆಯೆಂದರೂ...
ಹುಚ್ಚು ಹಿಡಿಸಿಕೊಂಡು
ಬಿಟ್ಟಿದೆ.. ನನ್ನೀ
ಮಸ್ತಕ

ಛೇ.....!!
ಸರಿದೆ ಹೋಯಿತಲ್ಲ
ಆ ಘಳಿಗೆ!!
ಉಳಿದೆ ಹೋಯಿತು
ಹೇಳುವ ಮಾತೊಂದು ನನ್ನೊಳಗೆ!
ಕಾಯ್ದಿರಿಸಿಕೊಳ್ಳಲೆ?
ನಾಳೆಯವರೆಗೂ... ಎದೆಗೂಡಿನಲ್ಲಿ
ಬೆಚ್ಚಗೆ!!

ನಿರ್ಭಾವುಕತೆ ೯

ಚುಚ್ಚಿದ ನತ್ತಿನ
ನೋವು... ಅನುದಿನವೇನು
ಇರುವುದಿಲ್ಲ!!!
ಆಡಿದ ಮಾತು ಮಾತ್ರ,
ಕ್ಷಣ...ಕ್ಷಣವು ಚುಚ್ಚುತಲೆ
ಇರುತ್ತದೆ...
ಬೇವು...ಬೆಳ್ಳಿ..ಬಂಗಾರ
ಯಾವುದಾದರೇನು?, ಸಿಂಗರಿಸಿಕೊಳ್ಳುವುದಕ್ಕೆ!!!
ಮೌನ, ಬಂಗಾರವಾದರೇನು?
ಬೇಕಿಲ್ಲ ನನಗೀಗ...
ಬೆಳ್ಳಿಯಂತಾದರು ಸರಿ,
ಮಾತನಾಡಿಬಿಡು ಒಮ್ಮೆ...
ಮುರಿದು ಮನಸಿನ ಮುನಿಸು.

ರಂಗೀ

ಗುಣಪಡಿಸಲು
ಔಷಧಿಯೇ.. ಇಲ್ಲದಂತಹ
ಗಾಯವ ಮಾಡಿ
ಹೋಗಿಹಳವಳು
ರಂಗೀ....
ಮರೆಯಬಹುದೆಂಬ
ಭ್ರಮೆಯಲ್ಲಿಯೇ...
ದಿನವು ಕುಡಿಯುತ್ತಿರುವೆ
ನಿನ್ನ ಮದಿರೆಯನ್ನು

Friday, September 20, 2019

ನಾಕು ತಂತಿ

ನಾಕು ತಂತಿ

‘ಬೆಂದರೇ ಅದು ಬೇಂದ್ರೆ’ ಎನ್ನುವ ಮಾತೊಂದಿದೆ. ಇಲ್ಲಿ ‘ಬೇಯು’ವದಕ್ಕೂ ಎರಡು ಅರ್ಥಗಳಿವೆ. ಬೆಂಕಿಯಲ್ಲಿ ತಪಿಸುವದು ಎನ್ನುವುದು ಒಂದು ಅರ್ಥವಾದರೆ, ಪಕ್ವವಾಗುವುದು ಎನ್ನುವುದು ಎರಡನೆಯ ಅರ್ಥ. ಬೇಂದ್ರೆಯವರು ಬದುಕಿನ ಕಾವಲಿಯಲ್ಲಿ ಬೆಂದಿದ್ದಂತೂ ಸರಿಯೇ. ಜೊತೆಗೇ ಅವರ ಅಂತರಂಗವೂ ಸಹ ಪಕ್ವವಾಗುತ್ತಿತ್ತು. ಇದು ಅವರ ಕಾವ್ಯದಲ್ಲಿಯೂ ಸಹ ವ್ಯಕ್ತವಾಗಿದೆ. ತರುಣ ಬೇಂದ್ರೆ ಬರೆದ ಕಾವ್ಯಕ್ಕೂ ’ಪಕ್ವ’ ಬೇಂದ್ರೆ ಬರೆದ ಕಾವ್ಯಕ್ಕೂ ಇರುವ ವ್ಯತ್ಯಾಸವು ಈ ತಾಪ ಹಾಗು ತಪಸ್ಸಿನ ಫಲವಾಗಿದೆ.

’ಅರಳು ಮರಳು’ ಕಾವ್ಯಸಂಗ್ರಹ ಪ್ರಕಟವಾದಾಗ ಬೇಂದ್ರೆಯವರಿಗೆ ೬೦ ವರ್ಷ ವಯಸ್ಸು. ಅದಕ್ಕೂ ಮೊದಲಿನ ಅವರ ಕಾವ್ಯದಲ್ಲಿ ಅತ್ಯುಚ್ಚ ಮಟ್ಟದ ಕಲಾಕೌಶಲ್ಯವನ್ನು ಹಾಗು ಕುಸುರಿ ಕೆಲಸವನ್ನು ಕಾಣಬಹುದು. ‘ಅರಳು ಮರಳು’ ಕಾವ್ಯದಲ್ಲಿ ಕುಸುರಿ ಕೆಲಸದ ಸ್ಥಾನವನ್ನು ’ಬಯಲ ಭವ್ಯತೆ’ ಆಕ್ರಮಿಸಿಕೊಂಡಿದೆ. ಬೇಲೂರು ಶಿಲಾಬಾಲಿಕೆಯ ಮೋಹಕ ಚೆಲುವಿನ ಬದಲಾಗಿ ಶ್ರವಣಬೆಳಗೊಳದ ಗೊಮ್ಮಟೇಶ್ವರನ ಭವ್ಯತೆ ಅವರ ಕಾವ್ಯದಲ್ಲಿ ವ್ಯಕ್ತವಾಗುತ್ತದೆ. ‘ಅರಳು ಮರಳು’ ನಂತರ ರಚಿಸಿದ ಕಾವ್ಯವಂತೂ ಪೂರ್ಣವಾಗಿ ಬೇರೊಂದು ರೂಪವನ್ನೇ ಪಡೆದಿದೆ. ಲೌಕಿಕ ಮಾರ್ಗಕ್ಕೆ ವಿಮುಖನಾಗಿ, ಅಲೌಕಿಕ ಮಾರ್ಗದಲ್ಲಿ ಕ್ರಮಿಸುತ್ತಿರುವ ಸಂತಕವಿಯ ಕಾವ್ಯವನ್ನು ಇಲ್ಲಿ ಕಾಣಬಹುದು. ಹೀಗಾಗಿ ಈ ಕಾವ್ಯವು ‘ನಿಗೂಢ ಕಾವ್ಯ’ವಾಗಿದೆ. ಮೈಯಲ್ಲಿ ದೇವರು ಬಂದ ಪೂಜಾರಿಗಳು ಒಡನುಡಿಯುವ ಕಾರ್ಣೀಕವನ್ನು ಈ ನಿಗೂಢ ಕಾವ್ಯಕ್ಕೆ ಹೋಲಿಸಬಹುದು.

ಬೇಂದ್ರೆಯವರ ’ನಾಕು ತಂತಿ’ ಕವನವು ಇಂತಹ ಒಡಪಿನ ರೂಪದ ‘ಕಾರ್ಣಿಕ’ದಲ್ಲಿದೆ. ಬೇಂದ್ರೆಮಾಸ್ತರ ಬರೆದ ಅಡಿಟಿಪ್ಪಣಿಯ ಮೂಲಕ ’ಅಂಬಿಕಾತನದತ್ತ’ನ ಒಡನುಡಿಯ ಒಗಟನ್ನು ಬಿಡಿಸಲು ಪ್ರಯತ್ನಪಡಬೇಕು. ಆದರೂ ನಮಗೆ ಕಾಣುವದು ನಮ್ಮ ಕಣ್ಣಿನ ಪರಿಮಿತಿಗೊಳಪಟ್ಟು. ಬೇಂದ್ರೆಯವರೇ ಹೇಳಿದಂತೆ, ’ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿತsದ ಇದರ ನೆಲೆಯು’!

’ನಾಕು ತಂತಿ’ ಕವನದಲ್ಲಿ ನಾಲ್ಕು ಭಾಗಗಳಿವೆ. ಇವು ಒಂದೇ ಭಾಗದ ನಾಲ್ಕು ಮಗ್ಗಲುಗಳು. ಮೊದಲನೆಯ ಭಾಗದಲ್ಲಿ ಧ್ವನಿ ಪ್ರಬಲವಾಗಿದ್ದರೆ, ಎರಡನೆಯ ಭಾಗದಲ್ಲಿ ಪ್ರತಿಮೆಗಳ ಸಾಲಿವೆ. ಮೂರನೆಯ ಭಾಗದಲ್ಲಿ ಒಂದು ’ಸವಾಲ್-ಜವಾಬ್’ ಇದೆ. ನಾಲ್ಕನೆಯ ಭಾಗ ಮೊದಲನೆಯದರ ಧ್ವನಿಯನ್ನು ಒಡದೇ ಹೇಳುತ್ತದೆ.

(ಭಾಗ-೧)

ಆವು ಈವಿನ
ನಾವು ನೀವಿಗೆ
ಆನು ತಾನದ
ತನನನಾs

ನಾನು ನೀನಿನ
ಈ ನಿನಾನಿಗೆ
ಬೇನೆ ಏನೋ?
ಜಾಣಿ ನಾs

ಚಾರು ತಂತ್ರಿಯ
ಚರಣ ಚರಣದ
ಘನಘನಿತ ಚತು-
-ರಸ್ವನಾ

ಹತವೊ ಹಿತವೊ
ಆ ಅನಾಹತಾ
ಮಿತಿಮಿತಿಗೆ ಇತಿ
ನನನನಾ

ಬೆನ್ನಿನಾನಿಕೆ
ಜನನ ಜಾನಿಕೆ
ಮನನವೇ ಸಹಿ-
ತಸ್ತನಾ

(ಭಾಗ-೨)

ಗೋವಿನ ಕೊಡುಗೆಯ
ಹಡಗದ ಹುಡುಗಿ
ಬೆಡಗಿಲೆ ಬಂದಳು
ನಡು ನಡುಗಿ;

ಸಲಿಗೆಯ ಸುಲಿಗೆಯ
ಬಯಕೆಯ ಒಲುಮೆ
ಬಯಲಿನ ನೆಯ್ಗೆಯ
ಸಿರಿಯುಡುಗಿ;

ನಾಡಿಯ ನಡಿಗೆಯ
ನಲುವಿನ ನಾಲಿಗೆ
ನೆನೆದಿರೆ ಸೋಲುವ
ಸೊಲ್ಲಿನಲಿ;

ಮುಟ್ಟದ ಮಾಟದ
ಹುಟ್ಟದ ಹುಟ್ಟಿಗೆ
ಜೇನಿನ ಥಳಿಮಳಿ
ಸನಿಹ ಹನಿ;

ಬೆಚ್ಚಿದ ವೆಚ್ಚವು
ಬಸರಿನ ಮೊಳಕೆ
ಬಚ್ಚಿದ್ದಾವದೊ
ನಾ ತಿಳಿಯೆ.

ಭೂತದ ಭಾವ
ಉದ್ಭವ ಜಾವ
ಮೊಲೆ ಊಡಿಸುವಳು
ಪ್ರತಿಭೆ ನವ.

(ಭಾಗ-೩)

’ಚಿತ್ತೀಮಳಿ ತತ್ತೀ ಹಾಕತಿತ್ತು
ಸ್ವಾತಿ ಮುತ್ತಿನೊಳಗ
ಸತ್ತಿsಯೊ ಮಗನs
ಅಂತ ಕೂಗಿದರು
ಸಾವೀ ಮಗಳು, ಭಾವೀ ಮಗಳು
ಕೂಡಿ’

’ಈ ಜಗ, ಅಪ್ಪಾ, ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ
ಶ್ರೀ ಗುರುದತ್ತ ಅಂದ.’

(ಭಾಗ-೪)

’ನಾನು’ ’ನೀನು’
’ಆನು’ ’ತಾನು’
ನಾಕೆ ನಾಕು ತಂತಿ,

ಸೊಲ್ಲಿಸಿದರು
ನಿಲ್ಲಿಸಿದರು
ಓಂ ಓಂ ದಂತಿ!
ಗಣನಾಯಕ
ಮೈ ಮಾಯಕ
ಸೈ ಸಾಯಕ ಮಾಡಿ
ಗುರಿಯ ತುಂಬಿ
ಕುರಿಯ ಕಣ್ಣು
ಧಾತು ಮಾತು
ಕೂಡಿ.

ಈಗ ಕವನದ ಮೊದಲನೆಯ ಭಾಗದ ಮೊದಲ ನುಡಿಯನ್ನು ನೋಡಿರಿ:

ಆವು ಈವಿನ
ನಾವು ನೀವಿಗೆ
ಆನು ತಾನದ
ತನನನಾs

ಆವು ಅಂದರೆ ಗೋವು(=ಕಾಮಧೇನು). (ಆವಿನ ಬಹುವಚನವೆ ಆವುಗಳು=ಆಕಳು). ಆವು ಈಯುತ್ತಿದೆ, ಅಂದರೆ ಏನನ್ನು ಈಯುತ್ತಿದೆ (ಪ್ರಸವಿಸುತ್ತಿದೆ)?

ಆವು ಈಯುತ್ತಿರುವದು:-’ ನಾನು ಹಾಗು ನೀನು ಜೊತೆಯಾಗಿ ಸೃಷ್ಟಿಸಿದ ’ಆನು’ವನ್ನು.
’ಆನು’(= ಈ ಸೃಷ್ಟಿ) ಇದು ’ತಾನು’ವಿನ(=ದೇವರ) ತನನನಾ(=ಸಂತೋಷ).

ಈ ಸರ್ವನಾಮಗಳು ಏನನ್ನು ಸೂಚಿಸುತ್ತಿವೆ? ನಾನು ಹಾಗು ನೀನು ಎಂದರೆ ಗಂಡ, ಹೆಂಡತಿ; ಆನು ಎಂದರೆ ಅವರ ಕೂಸು; ತಾನು ಎಂದರೆ ಅವರೆಲ್ಲರೂ ತಾನೇ ಆದ ದೇವಚೈತನ್ಯ. ಈ ಗಂಡ, ಹೆಂಡತಿ ಎಂದರೆ ಲೌಕಿಕ ಗಂಡ, ಹೆಂಡಿರಾಗಬಹುದು ಇಲ್ಲವೆ ದೈವಿಕ ಮಿಥುನವಾಗಬಹುದು. ನಾನು ಎಂದರೆ ಆತ್ಮಾ . ನೀನು ಎಂದರೆ ಪ್ರಕೃತಿ. ಇವರ ಕೂಸೇ ಈ ಸೃಷ್ಟಿ. ತಾನು ಎಂದರೆ ಇದನ್ನೆಲ್ಲ ಒಳಗೊಂಡ ದೈವಿ ಚೈತನ್ಯ. ಇನ್ನೂ ಒಂದು ಅರ್ಥ ಇಲ್ಲಿ ಹೊಮ್ಮುತ್ತದೆ. ನಾನು ಎಂದರೆ ಕವಿ; ನೀನು ಎಂದರೆ ಕಾವ್ಯಪ್ರಜ್ಞೆ. ಕವನ ಇವರೀರ್ವರ ’ಆನು=ಸೃಷ್ಟಿ’. ಆನು ಎನ್ನುವ ಕಾವ್ಯಸೃಷ್ಟಿಯ ’ತಾನ’ ಅಂದರೆ ಸಂಗೀತದ, ತನನನಾs ಎಂದರೆ ಆನಂದಲಹರಿ.

ಎರಡನೆಯ ನುಡಿ ಈ ರೀತಿಯಾಗಿದೆ:

ನಾನು ನೀನಿನ
ಈ ನಿನಾನಿಗೆ
ಬೇನೆ ಏನೋ?
ಜಾಣಿ ನಾs

ಈ ಸಾಲುಗಳನ್ನು ಈ ರೀತಿಯಾಗಿ ಅರ್ಥೈಸಬಹುದು. ನಾನು ಹಾಗು ನೀನು ಇವುಗಳಿಂದ ಸೃಷ್ಟಿಯಾದ ಈ ನೀ+ನಾ+ಆನಿಗೆ, ಯಾವ ಬೇನೆ (=ಪ್ರಸವವೇದನೆ) ಬೇಕು ಎನ್ನುವದನ್ನು ನಾನು (ಜಾಣಿ=ಜ್ಞಾನಿ) ತಿಳಿದಿದ್ದೇನೆ. ಅಂದರೆ ಕವಿ ಹಾಗು ಕಾವ್ಯಪ್ರಜ್ಞೆ ಸೃಷ್ಟಿಸುತ್ತಿರುವ ಈ ಕಾವ್ಯಕ್ಕೆ ಬೇಕಾಗುವಂತಹ ಹೆರಿಗೆಯ ಬೇನೆಯನ್ನು ನಾನು ತಿಳಿದಿದ್ದೇನೆ. ಈನ್ ಎನ್ನುವದಕ್ಕೆ ಸೂರ್ಯ ಎನ್ನುವ ಅರ್ಥವೂ ಇದೆ. ಆದುದರಿಂದ ಈ ಸೃಷ್ಟಿ ಅರ್ಥಾತ್ ಕಾವ್ಯವು  ತೇಜಸ್ವಿಯಾಗಿದೆ ಎನ್ನುವುದು ಇಲ್ಲಿಯ ಅರ್ಥ.

ಈ ಕಾವ್ಯಸೃಷ್ಟಿಯ ಲಕ್ಷಣಗಳನ್ನು ಬೇಂದ್ರೆ ಮೂರನೆಯ ನುಡಿಯಲ್ಲಿ ನೀಡಿದ್ದಾರೆ:

ಚಾರು ತಂತ್ರಿಯ
ಚರಣ ಚರಣದ
ಘನಘನಿತ ಚತು-
ರಸ್ವನಾ

ಚಾರು ಅಂದರೆ ನಾಲ್ಕು ಎನ್ನುವ ಅರ್ಥವೂ ಆಗುತ್ತದೆ; ಸುಂದರವಾದ ಎನ್ನುವ ಅರ್ಥವೂ ಆಗುತ್ತದೆ. ಸುಂದರವಾದ, ನಾಲ್ಕು ತಂತ್ರಗಳನ್ನು ಹೊಂದಿದ ಈ ಕಾವ್ಯಸೃಷ್ಟಿಯ ಪ್ರತಿ ಚರಣದಲ್ಲೂ ಹೊಮ್ಮುವ ನಾದ ಯಾವ ರೀತಿಯದಾಗಿದೆ? ಅದು ಮೋಡಗಳು (=ಘನ) ಡಿಕ್ಕಿ ಹೊಡೆಯುವ ಗರ್ಜನೆಯಂತಿದೆ.
(ಶ್ರಾವಣ ಮಾಸದ ಮೋಡಗಳು ಡಿಕ್ಕಿ ಹೊಡೆಯುವಾಗ ಬೇಂದ್ರೆಯವರಿಗೆ ಕೇಳಿಸುವದು ’ಓಂಕಾರ’. ಅವರ ಮತ್ತೊಂದು ಕವನದಲ್ಲಿ ಈ ತರಹದ ಸಾಲೊಂದಿದೆ:
’ಗುಡುಗುಡು ಗುಡುಗುಡು ಗುಡುಗಾಡುತ್ತಿದೆ
ಪ್ರಣವಪ್ರವೀಣನ ನಾದಸ್ಥಂಬ.”).

ಚತುರಸ್ವನಾ ಎನ್ನುವಲ್ಲಿಯೂ ಸಹ ನಾಲ್ಕು ಧ್ವನಿಗಳು ಎನ್ನುವ ಅರ್ಥ ಹಾಗು ಚತುರವಾದ ಎನ್ನುವ ಅರ್ಥ ಕೂಡಿವೆ. ಈ ಚತುರಸ್ವನಗಳು ಯಾವವು? ಅವು ’ನಾನು, ನೀನು, ಆನು, ತಾನು’ ಎನ್ನುವ ಶಬ್ದಗಳೇ ಆಗಿವೆ. ಈ ಶಬ್ದಗಳಿಗೆ  ಪರಾ, ಪ್ರತ್ಯಕ್, ಪಶ್ಯಂತೀ ಹಾಗು ವೈಖರೀ ಎನ್ನುವ ನಾಲ್ಕು ಹಂತಗಳೂ ಇವೆ. ಅವುಗಳ ಸ್ವರೂಪ ಈ ರೀತಿಯಾಗಿದೆ:

ಮೂಲಾಧಾರ ಚಕ್ರದಲ್ಲಿರುವ ನಿಷ್ಪಂದ ಶಬ್ದಬ್ರಹ್ಮಕ್ಕೆ ’ಪರಾವಾಕ್’ ಎಂದು ಹೇಳಲಾಗುತ್ತದೆ. ಅದು ವಾಯುವಿನ ಜೊತೆಗೂಡಿ, ನಾಭಿಯವರೆಗೆ ಹೋಗಿ (ಸ್ವಾಧಿಷ್ಠಾನ ಚಕ್ರದಲ್ಲಿ), ವಿಮರ್ಶರೂಪದಲ್ಲಿರುವ ಮನಸ್ಸಿನ ಜೊತೆಗೂಡಿ, ’ಪಶ್ಯಂತೀ ವಾಕ್’ ಎನಿಸುತ್ತದೆ. ಆ ಶಬ್ದಬ್ರಹ್ಮವು ಹೃದಯದವರೆಗೆ ಹೋಗಿ (ಅನಾಹತ ಚಕ್ರದಲ್ಲಿ) ನಾದಮಯವಾಗಿ ’ಮಧ್ಯಮಾ ವಾಕ್’ ಎಂದಾಗುತ್ತದೆ. ಕಂಠಪ್ರದೇಶದಲ್ಲಿ (ವಿಶುದ್ಧಿ ಚಕ್ರದಲ್ಲಿ) ಅದು ಕೇಳಲು ಯೋಗ್ಯವಾದ ’ವೈಖರೀ ವಾಕ್’ ಆಗುತ್ತದೆ.)

ಇನ್ನು ನಾಲ್ಕು ತಂತ್ರಗಳು ಯಾವವು? ಇವು ನಾನು, ನೀನು, ಆನು, ತಾನು ಎನ್ನುವ ಭಾವನೆಗಳನ್ನು ಹೊರಡಿಸುವ ನಾಲ್ಕು ತಂತಿಗಳಾಗಿವೆ. ಅಲ್ಲದೇ ಅರವಿಂದ ಮಹರ್ಷಿಗಳು ಸೂಚಿಸಿದ, ಸೌಂದರ್ಯದ ನಾಲ್ಕು ವಿಧಗಳೂ ಆಗಿವೆ. ಐಂದ್ರಿಕ ಸೌಂದರ್ಯ, ಬೌದ್ಧಿಕ ಸೌಂದರ್ಯ, ಭಾವನಾತ್ಮಕ ಸೌಂದರ್ಯ ಹಾಗು ಆಧ್ಯಾತ್ಮಿಕ ಸೌಂದರ್ಯ ಈ ನಾಲ್ಕು ತಂತ್ರಗಳೇ ನಾಲ್ಕು ತಂತಿಗಳಾಗಿವೆ.

ನಾಲ್ಕನೆಯ ನುಡಿ ಈ ರೀತಿಯಾಗಿದೆ:

“ಹತವೊ ಹಿತವೊ
ಆ ಅನಾಹತಾ
ಮಿತಿಮಿತಿಗೆ ಇತಿ
ನನನನಾ”

ಕಾವ್ಯವು ನಾದರೂಪದಲ್ಲಿ ಹೊಮ್ಮಿದಾಗ ಅದರ ಪಥವೇನೆಂದು ಮೆಲೆ ಚರ್ಚಿಸಲಾಗಿದೆ. (ಬೇಂದ್ರೆ ಕಾವ್ಯವು ’ನಾದಲೀಲೆ’ ಎನ್ನುವದನ್ನು ನೆನಪಿಸಿಕೊಳ್ಳಿ.) ಅನಾಹತಚಕ್ರದಲ್ಲಿ ಹೊಮ್ಮುವ ನಾದಕ್ಕೆ ಯಾವುದೇ ’ಆಹತ(=ತಾಡನ)’ ಬೇಕಾಗಿಲ್ಲ. ಆ ಕಾರಣದಿಂದಲೇ ಇದಕ್ಕೆ ’ಅನಾಹತ ಚಕ್ರ’ವೆನ್ನುವ ಹೆಸರಿದೆ.

ಅನಾಹತ ಚಕ್ರದಿಂದ ಅಂದರೆ ಹೃದಯಭಾಗದಿಂದ ಹೊಮ್ಮುವ, ನಾದಶರೀರಿಯಾದ ಈ ಕಾವ್ಯವು ಹತವೊ, ಹಿತವೊ ಅರ್ಥಾತ್ ಒಳ್ಳೆಯದೊ, ಕೆಟ್ಟದ್ದೊ ಅನ್ನುವುದನ್ನು ಬಲ್ಲವರಾರು? ಏನೇ ಆದರೂ ತನ್ನ ಪ್ರತಿ ಮಿತಿಯಲ್ಲಿಯೂ ಅದು ಸ್ವಾತ್ಮಸಂತೋಷವನ್ನು (=ನನನನಾ) ಹೊಮ್ಮಿಸುತ್ತಿದೆ.

ಐದನೆಯ ನುಡಿ ಈ ರೀತಿಯಾಗಿದೆ:

ಬೆನ್ನಿನಾನಿಕೆ
ಜನನ ಜಾನಿಕೆ
ಮನನವೇ ಸಹಿ-
ತಸ್ತನಾ

ಜನನದ ಧ್ಯಾನವೇ(=ಜಾನಿಕೆ) ಬೆನ್ನಿಗೆ ಆನಿಕೆ(=ಆಧಾರ)ಯಾಗಿದೆ. ಕಾವ್ಯದ ಮನನವೇ ಸ-ಹಿತ-ಸ್ತನಾ ಆಗಿದೆ. ಕಾವ್ಯಶಿಶುವಿಗೆ ಹಿತವಾದ ಸ್ತನ್ಯಪಾನ ಮಾಡಿಸಲು, ಅದರ ಮನನವೇ ಸಾಧನವಾಗಿದೆ.

ಕವಿಯ ಮನಸ್ಸಿನಲ್ಲಿ ಕಾವ್ಯ ಸೃಷ್ಟಿಯಾಗುವ ಹಾಗು ಅದು ಹೊರಬರಲು ತವಕಿಸುವ ವರ್ಣನೆ ಮೊದಲ ಭಾಗದಲ್ಲಿ ಈ ರೀತಿಯಾಗಿ ಬಂದಿದೆ.
ಇನ್ನೂ ಅನೇಕ ಅರ್ಥಗಳು ಈ ಭಾಗಕ್ಕೆ ಇರಬಹುದು. ಇಲ್ಲಿ ’ಹೊಳೆ’ದದ್ದು ಒಂದು ಅರ್ಥ ಮಾತ್ರ.

’ನಾಕು ತಂತಿ’ಯ ಎರಡನೆಯ ಭಾಗದಲ್ಲಿ ೬ ನುಡಿಗಳಿವೆ:
ಈ ಭಾಗದಲ್ಲಿ ಅಮೂರ್ತ ಕಾವ್ಯದ ಮೂರ್ತೀಕರಣವಿದೆ.

ಮೊದಲನೆಯ ಭಾಗದಲ್ಲಿ ಆವು (ಅಂದರೆ ಕಾಮಧೇನು=ದೈವೀ ಅನುಗ್ರಹ) ಈಯುತ್ತಿದ್ದ ಅಮೂರ್ತ ಕಾವ್ಯದ ವರ್ಣನೆ ಇದೆ. ಎರಡನೆಯ ಭಾಗದಲ್ಲಿ ಕಾವ್ಯಕನ್ನೆ ಕವಿಯ ಮನಸ್ಸಿನಲ್ಲಿ ಮೂಡಿದ್ದಾಳೆ. ಅವಳ ವ್ಯಕ್ತರೂಪದ ವರ್ಣನೆ ಇಲ್ಲಿದೆ.
ಮೊದಲನೆಯ ನುಡಿ ಹೀಗಿದೆ:

ಗೋವಿನ ಕೊಡುಗೆಯ
ಹಡಗದ ಹುಡುಗಿ
ಬೆಡಗಿಲೆ ಬಂದಳು
ನಡು ನಡುಗಿ;

ಈ ಕಾವ್ಯಕನ್ಯೆ ಗೋವಿನ ಅಂದರೆ ಮೊದಲ ಭಾಗದ ಮೊದಲ ನುಡಿಯಲ್ಲಿ ಬಂದ ’ಆವಿ’ನ ಕೊಡುಗೆ. ಇವಳು ಕವಿಯ ಹೃದಯಸಮುದ್ರದಲ್ಲಿ ನೌಕಾರೂಢಳಾಗಿ ಬರುತ್ತಿದ್ದಾಳೆ.  ಕಾವ್ಯಕನ್ಯೆ ಬೆಡಗಿನಿಂದ ಬರುತ್ತಿದ್ದಾಳೆ. ಆದರೆ ನಡು ನಡುಗಿ ಏಕೆ ಬರುತ್ತಿದ್ದಾಳೆ? ಕಾತರದಿಂದಾಗಿ ನಡುಗುತ್ತಿದ್ದಾಳೆ ಎಂದು ಭಾವಿಸಬೇಕೆ? ಅಥವಾ ನಡು ಅಂದರೆ ಟೊಂಕವು ನಡುಗಿ ಎಂದರೆ ನರ್ತಿಸುತ್ತ ಎಂದು ಭಾವಿಸಬೇಕೆ? ಎರಡೂ ರೀತಿಯಲ್ಲಿ ಅರ್ಥೈಸಬಹುದು.

ಎರಡನೆಯ ನುಡಿ ಹೀಗಿದೆ:

ಸಲಿಗೆಯ ಸುಲಿಗೆಯ
ಬಯಕೆಯ ಒಲುಮೆ
ಬಯಲಿನ ನೆಯ್ಗೆಯ
ಸಿರಿಯುಡುಗಿ;

ಇದೊಂದು ಅತ್ಯಂತ ಸುಂದರವಾದ ನುಡಿ. ಕವಿಗೆ ಹಾಗು ಕಾವ್ಯಕನ್ಯೆಗೆ ಇರುವ ಸಂಬಂಧವನ್ನು ಕವಿ ’ಸಲಿಗೆಯ ಸುಲಿಗೆ’ ಎಂದು ಬಣ್ಣಿಸುತ್ತಾನೆ. ಅವಳ ಉಡುಪಾದರೊ ಬಯಲಿನ ನೆಯ್ಗೆಯ ಸಿರಿಯುಳ್ಳದ್ದು. ಬಯಲಿನ ನೆಯ್ಗೆ ಎಂದರೆ ದಿಕ್ಕುಗಳೇ ಅಂಬರವಾದ ದಿಗಂಬರ ಉಡುಗೆ! ಇದು ‘ಬೃಹತ್ ಭಾವ’ ವನ್ನು ಸೂಚಿಸುವದಲ್ಲದೆ, ಕವಿ ಹಾಗು ಕಾವ್ಯಕನ್ನೆಯ ನಡುವೆ ಯಾವುದೇ ಮುಚ್ಚುಮರೆ ಇಲ್ಲ ಎನ್ನುವುದನ್ನು ಸೂಚಿಸುತ್ತದೆ. ಇಂತಹ ಕಾವ್ಯಕನ್ಯೆಯಲ್ಲಿ ಕವಿಗಿರುವದು ಬಯಕೆಯ ಒಲುಮೆ.

ಮೂರನೆಯ ನುಡಿ ಹೀಗಿದೆ:

ನಾಡಿಯ ನಡಿಗೆಯ
ನಲುವಿನ ನಾಲಿಗೆ
ನೆನೆದಿರೆ ಸೋಲುವ
ಸೊಲ್ಲಿನಲಿ;

ಕಾವ್ಯಕನ್ಯೆಯ ನಡಿಗೆ ಕವಿಯ ನಾಡಿಸ್ಪಂದನಕ್ಕೆ ಅನುಸ್ಪಂದಿಯಾಗಿದೆ. ಈ ನಾಡಿಗಳು ಯಾವವು? ಕಾವ್ಯ ಸೃಷ್ಟಿಯು ಲೌಕಿಕ ಕವಿಯ ಮನಸ್ಸಿನಲ್ಲಿ ನಡೆದರೆ, ಅಲೌಕಿಕ ಕವಿಗೆ ಇದು ಪರಾಮನಸ್ಸಿನಲ್ಲಿ ನಡೆಯುವ ವ್ಯಾಪಾರ. ಇಲ್ಲಿರುವ ನಾಡಿಗಳು ಯೋಗಶರೀರದ ನಾಡಿಗಳು. ಈ ನಾಡಿಗಳಲ್ಲಿ ಕ್ರಮಿಸುವ ಅವಳ ’ವಾಕ್’ ಅನ್ನು ಕವಿ ನಲುವಿನ ನಾಲಿಗೆ ಅಂದರೆ ಆಹ್ಲಾದಕರವಾಗಿದೆ ಹಾಗೂ ಅದು ’ಸೋಲುವ(=ಮರಳಾಗುವ) ಸೊಲ್ಲಿನಲಿ’ ನೆನೆದಿದೆ ಎಂದು ಹೇಳುತ್ತಾನೆ.

ನಾಲ್ಕನೆಯ ನುಡಿ ಹಿಗಿದೆ:

ಮುಟ್ಟದ ಮಾಟದ
ಹುಟ್ಟದ ಹುಟ್ಟಿಗೆ
ಜೇನಿನ ಥಳಿಮಳಿ
ಸನಿಹ ಹನಿ;

ಇದುವರೆಗೂ ಯಾರೂ ಮುಟ್ಟದಂತಹ, (ಈವರೆಗೂ ಹುಟ್ಟಿರದಂತಹ) ಜೇನುಹುಟ್ಟಿನ (-ಜೇನು ಹುಟ್ಟು ಹುಟ್ಟಿರುವದಿಲ್ಲ; ಅದನ್ನು ಜೇನುಹುಳುಗಳು ಕಟ್ಟಿರುತ್ತವೆ-) ಜೇನನ್ನು , ಕಾವ್ಯಕನ್ಯೆ ಕವಿಯ ಸನಿಹದಲ್ಲಿ ಹನಿಸುತ್ತಾಳೆ. ಈ ಹನಿಯುವಿಕೆಯು ಜೇನಿನ ಮಳೆಯನ್ನೆ ಥಳಿ ಹೊಡೆದ ಹಾಗೆ ಸುಖಕರವಾಗಿದೆ. ( ’ಹನಿ’ ಎನ್ನುವಲ್ಲಿ drop ಹಾಗು ’honey’ ಎರಡೂ ಇರುವದು ಸ್ವಯಂವೇದ್ಯ).

ಐದನೆಯ ನುಡಿ ಹೀಗಿದೆ:

ಬೆಚ್ಚಿದ ವೆಚ್ಚವು
ಬಸರಿನ ಮೊಳಕೆ
ಬಚ್ಚಿದ್ದಾವದೊ
ನಾ ತಿಳಿಯೆ.

ಈ ಎಲ್ಲ ಕ್ರಿಯೆಯಲ್ಲಿ ವೆಚ್ಚವಾದದ್ದೇನು? ಕವಿಯ ಉದ್ವೇಗಸ್ಥಿತಿಯ ಬಿಡುಗಡೆಯೆ? ಈ ಭಾವನೆ ಕವಿಯನ್ನು ಬೆಚ್ಚಿಸುತ್ತದೆ. (ವಾಲ್ಮೀಕಿಯ ಉದ್ವೇಗ ಕೊನೆಗೊಮ್ಮೆ ರಾಮಾಯಣದ ರಚನೆಯಲ್ಲಿ ಮುಕ್ತಿ ಪಡೆದದ್ದನ್ನು, ಗೋಪಾಲಕೃಷ್ಣ ಅಡಿಗರು ಬಣ್ಣಿಸುವದು ಹೀಗೆ:
“ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ, ರಾಮಾಯಣಶ್ಲೋಕ ರೇಶ್ಮೆದೊಗಲು”.)
ಕವಿಯ ಬಸರಿನಲ್ಲಿ ಕಾವ್ಯವಂತೂ ಮೊಳೆದಿದೆ. ಆದರೆ ಇಲ್ಲಿ ಇನ್ನೂ ಏನು ಬಚ್ಚಿಟ್ಟುಕೊಂಡಿದೆ ಎನ್ನುವದು ಕವಿಗೆ ಗೂಢವಾಗಿದೆ.

ಆರನೆಯ ನುಡಿ ಹಿಗಿದೆ:

ಭೂತದ ಭಾವ
ಉದ್ಭವ ಜಾವ
ಮೊಲೆ ಊಡಿಸುವಳು
ಪ್ರತಿಭೆ ನವ.

ಕವಿಯನ್ನು ಪ್ರೇರೇಪಿಸಿದ ಭಾವ ಈಗ ಹಳೆಯದಾಯಿತು. ಕವಿತೆ ಹುಟ್ಟಿದ್ದರಿಂದ ಹೊಸ ಬೆಳಗು (=ಜಾವ=ಯಾಮ) ಉದ್ಭವವಾಯಿತು. ಈ ನವಶಿಶುವಿಗೆ ಮೊಲೆ ಊಡಿಸುವಳು ಕವಿಯ ಪ್ರತಿಭೆ. ಅವಳು ಹೊಸ ಹೊಸ ಸ್ಫುರಣಗಳನ್ನು ಮಾಡುವ ಸಾಮರ್ಥ್ಯವುಳ್ಳವಳು(=ಪ್ರತಿಭಾ ನವನವೋನ್ಮೇಶಶಾಲಿನೀ).

ಮೂರನೆಯ ಭಾಗದಲ್ಲಿ ಎರಡೇ ನುಡಿಗಳಿವೆ:

ಮೂರನೆಯ ಭಾಗವು ಸವಾಲು-ಜವಾಬಿನ ರೂಪದಲ್ಲಿದೆ ಎಂದು ಬೇಂದ್ರೆ ಮಾಸ್ತರರ ಅಡಿಟಿಪ್ಪಣಿ ಹೇಳುತ್ತದೆ.
ಸವಾಲು ಮಾಡುವವರು ಇಬ್ಬರು. ಒಬ್ಬಳು ಸಾವೀ ಮಗಳು, ಮತ್ತೊಬ್ಬಳು ಭಾವೀ ಮಗಳು.

’ಚಿತ್ತೀಮಳಿ ತತ್ತೀ ಹಾಕತಿತ್ತು
ಸ್ವಾತಿ ಮುತ್ತಿನೊಳಗ
ಸತ್ತಿsಯೊ ಮಗನs
ಅಂತ ಕೂಗಿದರು
ಸಾವೀ ಮಗಳು, ಭಾವೀ ಮಗಳು
ಕೂಡಿ’

ಚಿತ್ರಾ ನಕ್ಷತ್ರಲ್ಲಿ ಬೀಳುವ ಈ ಚಿತ್ತೀ ಮಳೆಯು ಎಲ್ಲಿ ಸುರಿಯುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಆದರೆ ಸುರಿದಲ್ಲಿ ಬೆಳೆಗೆ ವರವಾಗುತ್ತದೆ. ಕವಿಯ ಅಂತರಂಗದಲ್ಲಿ ಈ ಚಿತ್ತಿ ಮಳೆ ಸಹ ತತ್ತಿಯನ್ನು ಅಂದರೆ ಕಾವ್ಯಭಾವದ ತತ್ತಿಯನ್ನು ಇಡುತ್ತಿದೆ. ಈ ಎಲ್ಲ ತತ್ತಿಗಳೂ ಸಫಲವಾಗುವದಿಲ್ಲ. ಚಿತ್ತಿಯ ನಂತರದ ಸ್ವಾತಿ ಮಳೆ, ಸಿಂಪಿನಲ್ಲಿ ಸೇರಿದಾಗ ಮಾತ್ರ ಮುತ್ತು ಹುಟ್ಟುತ್ತದೆ. ಅದಕ್ಕಾಗಿಯೇ ’ಸತ್ತಿsಯೊ ಮಗನs’ ಎಂದು ಸಾವೀ ಮಗಳು ಹಾಗು ಭಾವೀ ಮಗಳು ಕವಿಗೆ ಎಚ್ಚರಿಕೆ ನೀಡುತ್ತಾರೆ. ಈ ಸಾವೀ ಮಗಳು ಹಾಗು ಭಾವೀ ಮಗಳು ಯಾರು? ಸಾವೀ ಎಂದರೆ ಭೂತಕಾಲದ ಹಾಗು ಭಾವೀ ಎಂದರೆ ಭವಿಷ್ಯಕಾಲದ ಪ್ರತಿನಿಧಿಗಳು ಎಂದು ಭಾವಿಸಬಹುದು.

ಮತ್ತೂ ಒಂದು ಅರ್ಥವು ಇಲ್ಲಿ ಹೊರಡುತ್ತದೆ:
ಚಿತ್ತಿ ಅಂದರೆ ’ಚಿತ್’. ಅದು ಸ್ವಾತಿಮುತ್ತಾಗಬೇಕಾದರೆ, ಅದು ’ಸತ್’ದೊಡನೆ ಸೇರಬೇಕು. ಈ ಎಚ್ಚರಿಕೆಯನ್ನು
ಸಾವೀ ಮಗಳು ಹಾಗು ಭಾವೀ ಮಗಳು ನೀಡುತ್ತಿದ್ದಾರೆಯೆ? ಬೇಂದ್ರೆಯವರ ಕವನದಲ್ಲಿ ಯಾವಾಗಲೂ ಅನೇಕ ಧ್ವನಿಗಳು ಹೊರಡುತ್ತವೆ.

ಈ ಸವಾಲಿಗೆ ಅಂಬಿಕಾತನಯದತ್ತರ ಜವಾಬು ಈ ರೀತಿಯಾಗಿದೆ:

’ಈ ಜಗ, ಅಪ್ಪಾ, ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ
ಶ್ರೀ ಗುರುದತ್ತ ಅಂದ.’

ಪ್ರಕೃತಿ ಹಾಗು ಪುರುಷ (ಅರ್ಥಾತ್ ಆತ್ಮಾ) ಇವರ ಮಿಲನದಿಂದ ಸೃಷ್ಟಿಯಾಗಿದೆ. ಅಪ್ಪ ಎಂದರೆ ಆತ್ಮ ಹಾಗು ಅಮ್ಮ ಎಂದರೆ ಪ್ರಕೃತಿ. ಈ ಜಗತ್ತೇ ಇವರ ಮಗು. ಆದುದರಿಂದ ಅಮ್ಮನಲ್ಲಿ ಕಾಣುವುದು ಅಪ್ಪನ ಮುಖವೇ.

ಈ ತಾಯಿಯ ಭಾರ ಹೊತ್ತವನು ತಂದೆ. ಅದಕ್ಕಾಗಿಯೇ ಅವಳು ’ಭಾರ್ಯಾ’, ಅವನು ’ಭರ್ತಾ’. ಈ ಜಗತ್ತು ಈ ದೈವೀ ತಂದೆ-ತಾಯಿಗಳ ಕೂಸು(ಜಗತ: ಪಿತರೌ). ಈ ನುಡಿಯ ಮೊದಲಿನ ಮೂರು ಸಾಲುಗಳಲ್ಲಿ ಬೇಂದ್ರೆಯವರು, ಕಾಳಿದಾಸನು ತನ್ನ ’ರಘುವಂಶ’ ಕಾವ್ಯಕ್ಕೆ ಬರೆದ ನಾಂದೀಪದ್ಯವನ್ನು ನೆನಪಿಸುತ್ತಾರೆ:
(ಟಿಪ್ಪಣಿ: ರಘುವಂಶ ಎಂದು ಬರೆಯುವ ಬದಲಾಗಿ ನಾನು ‘ಕುಮಾರಸಂಭವ’ ಎಂದು ತಪ್ಪಾಗಿ ಬರೆದಿದ್ದು, ಶ್ರೀ ವಿಜಯಶಂಕರ ಮೆಟಿಕುರ್ಕೆಯವರು ಈ ದೋಷವನ್ನು ನನ್ನ ನಜರಿಗೆ ತಂದದ್ದು, ನಾನೀಗ ಇದನ್ನು ಸರಿಪಡಿಸಿದ್ದೇನೆ.)
“ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ”
’ವಾಕ್’ನಲ್ಲಿ ಪ್ರತಿಫಲನವಾಗುವದು ’ಅರ್ಥ’. (’ವಾಗರ್ಥಾವಿವ ಸಂಪೃಕ್ತೌ’). ಅಂದರೆ ಅಮ್ಮನ ಮುಖದಲ್ಲಿ ಕಾಣುವದು ಅಪ್ಪನ ಮುಖವೇ ಆಗಿದೆ.

ಅಂಬಿಕಾತನಯದತ್ತನು ತಾನು ಈ ದೈವೀ ಮಿಥುನದ ಕಂದನೆಂದು ಹೇಳಿಕೊಳ್ಳುತ್ತಾನೆ. ದೈವಿ ಚೈತನ್ಯವನ್ನು ಅನುಭವಿಸುವವರಿಗಲ್ಲದೆ ಬೇರೆಯವರಿಗೆ ಈ ಘೋಷಣೆ ಅಸಾಧ್ಯ. ’ಶ್ರೀ ಗುರುದತ್ತ ಅಂದ’ ಅಂದರೆ ಶ್ರೀ ಗುರುದತ್ತನು ಈ ರೀತಿಯಾಗಿ ಹೇಳಿದನು ಎನ್ನುವ ಅರ್ಥದೊಡನೆಯೇ, ಗುರುದತ್ತನು ಅಂದವಾಗಿದ್ದಾನೆ ಎನ್ನುವ ಅರ್ಥವೂ ಸಹ ಸೇರಿಕೊಂಡಿದೆ.

ಕೊನೆಯದಾದ ನಾಲ್ಕನೆಯ ಭಾಗದಲ್ಲಿ ಎರಡು ನುಡಿಗಳಿವೆ:

’ನಾನು’ ’ನೀನು’
’ಆನು’ ’ತಾನು’
ನಾಕೆ ನಾಕು ತಂತಿ,

ಕವಿಯು ’ಸಂಸಾರದ ಅರ್ಥವಿರುವದು ಈ ನಾಲ್ಕೇ ತಂತಿಗಳಲ್ಲಿ (ನಾನು, ನೀನು, ಆನು, ತಾನು)’ ಎಂದು ಪುನರುಚ್ಚರಿಸುತ್ತಾನೆ. ನಾನು ಹಾಗು ನೀನು ಇವು ಆತ್ಮ ಮತ್ತು ಪ್ರಕೃತಿಗೆ ಅಥವಾ ತಂದೆ ಹಾಗು ತಾಯಿಗೆ ಸಂಕೇತವಾದರೆ, ಆನು ಇದು ಅವರ ಸೃಷ್ಟಿಗೆ ಸಂಕೇತವಾಗುತ್ತದೆ. ತಾನು ಎನ್ನುವುದು ಇವೆಲ್ಲವನ್ನೂ ಒಳಗೊಂಡ ಚೈತನ್ಯರೂಪವಾಗಿದೆ. ಈ ಚೌದಂಡಿಗೆಯ ಶ್ರಾವ್ಯ ಮತ್ತು ಶ್ರವಣಾತೀತ ಸ್ವರ ಉಸಿರುವದು ಒಂದೇ ರಾಗ: ’ಓಂ ದಂತಿ’ ಎಂದು.

ಸೊಲ್ಲಿಸಿದರು
ನಿಲ್ಲಿಸಿದರು
ಓಂ ಓಂ ದಂತಿ!
ಗಣನಾಯಕ
ಮೈ ಮಾಯಕ
ಸೈ ಸಾಯಕ ಮಾಡಿ
ಗುರಿಯ ತುಂಬಿ
ಕುರಿಯ ಕಣ್ಣು
ಧಾತು ಮಾತು
ಕೂಡಿ.

ಇಲ್ಲಿಯವರೆಗೆ ನಾನು, ನೀನು, ಆನು ತಾನು ಮಾತ್ರ ಇದ್ದುದು ಈಗ ’ದಂತಿ’ಯ ಪ್ರವೇಶವಾಗುತ್ತದೆ. ದಂತಿ ಎಂದರೆ ಗಣಪತಿ. ಆ ಗಣನಾಯಕನೇ ಈ ’ಮೈ ಮಾಯಕ’ವನ್ನು ,ಕಾವ್ಯವನ್ನು (-ಯಾಕೆಂದರೆ ಕಾವ್ಯವೆಂದರೆ ಕವಿಯ ಮಾಯಾಶರೀರ -) ಸೈ ಸಾಯಕ ಮಾಡಿ (-ಸೈ=ಸರಿಯಾದ, ಸಾಯಕ=ಬಾಣ-) ಪ್ರಯೋಗಿಸಬೇಕು. ಈ ಪ್ರಯೋಗ ಹೇಗಿರಬೇಕೆಂದರೆ, ಅದು ಗುರಿಯ ತುಂಬಿ(=ಗುರಿಯ ಕಡೆಗೆ ಲಕ್ಷ್ಯ ತೊಟ್ಟು), ಕುರಿಯ ಕಣ್ಣು(ಕುರಿತು=ನಿರ್ದಿಷ್ಟವಾಗಿ ದೃಷ್ಟಿಸುತ್ತ) ಅಥವಾ bull’s eyeದಂತೆ ಇರಬೇಕು. ಇದರ ಫಲವೆಂದರೆ ಧಾತು (ಅರ್ಥ) ಮತ್ತು ಮಾತು( ವಾಕ್) ಕೂಡಿರಬೇಕು.

ಬೇಂದ್ರೆಯವರು ತಾವು ಬಳಸುವ ಪದಗಳಿಗೆ ಇತರ ಭಾಷೆಯಲ್ಲಿರುವ ಅರ್ಥಗಳನ್ನೂ ಜೋಡಿಸಿರುತ್ತಾರೆ. ಉದಾಹರಣೆಗೆ ’ಮೈ ಮಾಯಕ’ದಲ್ಲಿ ಮೈ ಪದವನ್ನು ಮೂರು ಅರ್ಥಗಳಲ್ಲಿ ಬೇಂದ್ರೆ ಬಳಸಿದ್ದಾರೆ.
(೧) ಮೈ= ಶರೀರ
(೨) ಮೈ= ಮಹಿಮೆ
(೩) ಮೈ= my
ಇದರಂತೆ ’ಸಾಯಕ’ಕ್ಕೆ ಬಾಣ ಹಾಗು ಸಹಾಯಕ ಎನ್ನುವ ಎರಡೂ ಅರ್ಥಗಳನ್ನು ಉಪಯೋಗಿಸಬಹುದು.
’ಕುರಿ’ ಎನ್ನುವ ಪದ ಕುರಿತು ಎಂದರೆ ನಿರ್ದಿಷ್ಟ ಎನ್ನುವ ಅರ್ಥ ಕೊಡುವಂತೆಯೇ ’ಗುರಿ’ ಎನ್ನುವ ಪದಕ್ಕೆ ಧ್ವನಿಸಂವಾದಿ ಪದವೂ ಆಗಿದೆ. ಇದಕ್ಕೆ ಉದಾಹರಣೆಯಾಗಿ ಅವರ ಬೇರೊಂದು ಕವನದ ಎರಡು ಸಾಲುಗಳನ್ನು ಇಲ್ಲಿ ಕೊಡುತ್ತೇನೆ:

“ಘುರ್ರೆ ಘುರ್ರೆ ಘೋಟಕಾ
ನಡೆ ಅಂತಃಸ್ಫೋಟಕಾ”.

ಘುರ್ರೆ ಅನ್ನುವದು ತೆಲುಗಿನ ಕುರ್ರಂ(=ಕುದುರೆ) ಅನ್ನುವ ಪದಕ್ಕೆ ಹಾಗು ಘೋಟಕಾ ಎನ್ನುವದು ಹಿಂದಿ ಭಾಷೆಯ ಘೋಡಾ(=ಕುದುರೆ) ಪದಕ್ಕೆ ಧ್ವನಿಸಂವಾದಿ ಪದಗಳಾಗಿರುವದನ್ನು ಗಮನಿಸಬೇಕು. ಇಂತಹ ಬಳಕೆ ಬೇಂದ್ರೆಯವರ ಕಾವ್ಯದಲ್ಲಿ ಸಾಮಾನ್ಯ.

’ನಾಕು ತಂತಿ’ ಅತ್ಯಂತ ಸರಳ ಕನ್ನಡದಲ್ಲಿ ರಚಿಸಲಾದ ಕವನ. ಆದರೆ ಅಷ್ಟೇ ನಿಗೂಢವಾದ ಕವನ. ಈ ಕವನದಲ್ಲಿ ಪದಗಳಿಗೆ ಅನೇಕ ಅರ್ಥಗಳು ಇರುವಂತೆಯೇ, ಪದಗಳ ನಾದಕ್ಕೂ ಸಹ ಅರ್ಥವಿದೆ. ಲೌಕಿಕ ಹಾಗು ಅಲೌಕಿಕ ಆಯಾಮಗಳಲ್ಲಿ ಈ ಕವನದ ಅರ್ಥವನ್ನು ಅನುಭವಿಸಬೇಕಾಗುತ್ತದೆ.