Saturday, October 29, 2016

ಮನವಿ

ಹೇಗೆ ದೂಡಲಿ ಇನ್ನುಳಿದ
ದಿನಗಳನು
ಹೇಗೆ ಕಳೆಯಲಿ ನೀ ಬಾರದ
ದಿನಗಳನು

ಯಾಕಿಷ್ಟು ಹಠವು ಈ
ಬಡವನ ಮೇಲೆ
ಯಾಕಿಷ್ಟು ಕೋಪ ಭೂದೇವಿಯ
ಮೇಲೆ

ಕಾಡ ಕಡೆದು ನಾಡ ಕಟ್ಟಿದುದಕೆ
ಕೆರೆಯ ಮರೆಸಿ ಮನೆಯ ಕಟ್ಟಿದುದಕೆ
ಭೂಗಂಗೆಯನು ನೀರರ್ಥಕವಾಗಿ ಹರಿಬಿಡುವದಕೆ
ನಿನ್ನಯ ನೀರನು ಉಳಿಸದೆ ಹಳ್ಳಕೆ ಹರಿಸಿದುದಕೆ

ಮಳೆರಾಯ, ಭೂದೇವಿಯ
ಒಡಲೊಡೆಯ, ಸಕಲ ಜೀವರಾಶಿಗಳ
ಆತ್ಮಜನೆ ಸುರಿದುಬಿಡು ಧೊ ಎಂದು
ಎಲ್ಲರೆದೆಯ ಉರಿಯಾರುವಂತೆ

ಬಿತ್ತಿದ ಬೆಳೆಯ ಉಸಿರಾಗಿಸೋಕೆ
ಮೂಕ ಜೀವಿಗಳ ದಾಹ ತಣಿಸುವದಕೆ
ಧರಣಿಯು ಹಸಿರುಡುಗೆಯ ಹೊಂದುವದಕೆ
ಕೊರಡೊಂದು ಚಿಗುರೊಡೆಯುವದಕೆ

ಹಸಿದೊಡಲ ಮಕ್ಕಳು ಅಮ್ಮಾ....ಎಂದು
ಕೂಗಿದರೆ ಮನೆಯಲಿ ಹಿಡಿ ಹಿಟ್ಟಿಲ್ಲ
ಸೇರು ಅಕ್ಕಿಯಿಲ್ಲ, ಕೊಟ್ಟಿಗೆಯ ದನಗಳು
ಅಂಬಾ... ಎಂದು ಕೂಗಿದರೆ ಹಾಕಲು ಮೇವಿಲ್ಲ
ಕುಡಿಸಲು ನೀರಿಲ್ಲ

ದನಗಳನ್ನಾದರು ಮನಸ್ಸು ಕಲ್ಲು ಮಾಡಿಕೊಂಡು
ಕಟುಕನಿಗೆ ಮಾರಿಬಿಡಬಹುದು, ಮೇವಿಲ್ಲದೆ ಬಾಯಾರಿ
ಸಾಯಲೆಂದು ಗುಡ್ಡದ ತೆಪ್ಪಲಿನಲ್ಲಿ ಬಿಟ್ಟು ಬರಬಹುದು
ಶಿವ್ನೆ  ನನ್ನನ್ನೇ ನಂಬಿ ಬಂದ ನನ್ನ ಮಡದಿ, ಎಷ್ಟೇ
ಕಷ್ಟವಾದರೂ ಸರಿ ಸಾಕುತ್ತೇನೆಂಬ ಭರವಸೆಯಲಿ
ಹಡೆದ ಮಕ್ಕಳನೇನು ಮಾಡಲಿ, ಅವರನ್ನೂ.....?

ನಿನ್ನ ನಾಕು ಹನಿ ಸಾಕೇನಗೆ ಇನ್ನೊಬ್ಬರ
ಹಂಗಲಿ ಬೀಳದಂತೆ, ಯಾರೊಬ್ಬರ ಮುಂದೆ
ಕೈ ಚಾಚದಂತೆ, ಕುಹಕ ಮಂದಿಯ ನಡುವೆ
ಕುಗ್ಗಿ ನಡೆಯದಂತೆ, ನನ್ನೆದೆಯ ಉಸಿರು
ನಿಟ್ಟುಸಿರಾಗುದಂತೆ ತಡೆಯಲು

ನಿನ್ನ ಕೊರಗಲಿ ಮಡದಿ ಮಕ್ಕಳು
ನಾನು ಮಣ್ಣ ಸೇರುವ ಮುನ್ನ
ಇಳಿದು ಬಿಡು ಧರೆಗೆ ಇಲ್ಲವೆ ನಾವೆ
ಸೇರುತ್ತೇವೆ ಮಣ್ಣಿಗೆ

ಇಂತಿ ನಿನ್ನ ದಾರಿ ಕಾಯುತ್ತಿರುವ
ಮಳೆಯಾಕಾಂಕ್ಷಿ

No comments:

Post a Comment