ಮಂಗಳಮುಖಿ ೬
ನೋಡ ಶಶಿಯಪ್ಪ ಆದದ್ದ ಆಗಿ ಹೋತು, ಮನಿಗೆ ಗಂಡ ಮಗ ಆದಂತಾವ ವಂಶದ ಹೆಸರನ್ನ ಉಳಿಸಿ-ಬೆಳಸಿಕೊಂಡ ಹೋಗ್ಬೇಕಿತ್ತು, ಈಗ ನೀ ಹಿಂಗ ಆಗಿ ಬಂದಿದಿ ಏನ್ ಮಾಡಾಕ ಬರ್ತೈತಿ ಹೇಳು? ಹಣೆಬರಕ್ಕ ಹೊಣೆ ಯಾರು? ಅಂತ್ಹಂದಂಗ ನಿಮ್ಮವ್ವನ ಹಣೆಬರಕ್ಕ, ನಿನ್ನ ಹಣೆಬರಕ್ಕ ಹೊಣೆ ಯಾರಪ್ಪ? ಇವತ್ತ, ಆ ಶಿವ ನಂ ಹಣ್ಯಾಗ ಏನ ಬರ್ದಾನ ಅದನ್ನ ಉಣ್ಬೇಕಲ್ಲ! ಹರೆ ತುಂಬಿದ ಕೊಡಾ ಇದ್ಹಂಗ ಇದ್ಲ ನಿಮ್ಮವ್ವ ನಿನ್ನನ್ನ ಹಡದಾಗ, ತುಂಬಿದ ಜೋಳದ ತೆನಿಯಂತ ಸಂಸಾರನ ನೋಡಾಕಾಗ್ದೇನೊ ಏನೋ ದ್ಯಾವ್ರು ಆಕಿ ಉಣ್ಣೊ ಗಂಗಾಳ ಕಸ್ಗೊಂಡ ತೊಳ್ದ ಡಬ್ಬ (ಬೊರಲು) ಹಾಕ್ಬೀಟ್ಟಬಿಟ್ಟ, ಮುಟ್ಟಿದ್ರ ತುಳುಕೊ ಹಾಲಿನ ಗಿಂಡಿಯಂತ ವಯಸ್ಸಿದ್ರುನೂ... ನಿನ್ನ ಸಲವಾಗಿ ಆಕಿ ಮೆಹಬೂಬ್ ನ ಟಾಂಗಾ ಕುದರಿ ಕಣ್ಣಿಗೆ ಹಾಕಿದ ಬಟ್ಟಿ ಹಂಗ ತನ್ನ ಬಾಳ್ಯಾಕ ಮಂದಿ ಕಣ್ಣ ಬಿಳಬಾರ್ದಂತ ನಡುನ್ಯಾಗ ಅಲಾದಿ(ಯಾವಾಗಲೂ) ಕುಡಗೋಲ ಇಟ್ಗೊಂಡ ಹೊಲ-ಮನಿ-ಸಂತಿ-ನೀನು... ಇಷ್ಟ ಆಗಿಹೋತ ಅಕಿ ಜೀವ್ನ. ಈ ಬಾಳೆವ ಹಿಂಗ..!, ಉಪ್ಪೇನು? ಖಾರೇನು? ಎಲ್ಲಾನು ನುಂಗಿಕೊಂಡ ಹೋಗೊದ ಜೀವ್ನ ನೋಡಪಾ... ತಮ್ಮಾ.. ಬದ್ಕಿನ ಹಾದ್ಯಾಗ ಯಾವ ತಿರುವನ್ಯಾಗ ಯಾ ದಾರಿ ಸಿಗ್ತೈತೊ ಯಾರಿಗ್ಗೊತ್ತು? ನಡೆಯೊ ದಾರಿ ಎಲ್ಲ ಮಲ್ಗಿ ಹೂ ಹಾಸಿಂದ ಇರ್ಬೇಕಲ್ಲ!!? ಕಲ್ಲು ಮುಳ್ಳಿಂದು ಸಿಗ್ತೈತಿ ಆರಿಸ್ಗೊಂತ, ಸರಿಸ್ಗೊಂತ, ಸುಟಗೊಂತ ನಡಿತಿರ್ಬೇಕು. ಇಲ್ಲಾ, ನಂಗ ಛಲೋ ಹಾದಿನ ಹುಡ್ಕಿ ಕೊಡ್ರಿ ಅಂದ್ರ ಹ್ಯಾಂಗ? ದ್ಯಾವ್ರ ನೆತ್ತಿಮ್ಯಾಲ ಏರೊ ಹೂವಾನು ಕಟ್ಟಿದ ದಾರದ ನೋವನ್ನ ನುಂಗಿಕೊಂಡಿದ್ಕ ಅದು ಆ ಕಳಕಮಲ್ಲಯ್ಯನ ಕೊಳ್ಳಾನ ಹಾರಾನು ಆಕ್ಕೈತಿ, ಗೌರಿ ತಲಿಮ್ಯಾಲಿನ ದಂಡಿನೂ ಆಕ್ಕೈತಿ ಗೊತ್ತನು?'
ಈ ಮಾತಿಗೆ ಅಲ್ಲಿ ಉತ್ತರವಿರಲಿಲ್ಲ, ಮುಂದುವರಿದು ಕಲ್ಲವ್ವ "ನಿಮ್ಮವ್ವಗ ನಿ ಹಿಂಗ ಆಗಿ ಬಂದಿದ್ಕ ಏನೂ.. ತ್ರಾಸ್ ಇದ್ದಿಲ್ಲ, ಮದ್ವಿ ಮಾಡ್ಕೊಂಡ ಸಂಸಾರ ಮಾಡದಿದ್ರೂನು ಚಿಂತಿದ್ದಿಲ್ಲ, ಹಿಂಗ ಉಂಡಾಡಿ ಗುಂಡನಂಗ ಮನ್ಯಾಗ ಮಾಡಿ ಹಾಕಿದ್ದನ್ನ ತಿಂದು ಅಡ್ಡಾಡಿದ್ರು ನಿಮ್ಮವ್ವೇನ ಜಗ್ಗತಿದ್ದಿಲ್ಲ, ರಟ್ಟಿಯೊಳ್ಗ ಶಕ್ತಿ ಇರೋತನ್ಕಾನೊ ದುಡದ, ಕುಂದ್ರಿಸಿ ಕೂಳ ಹಾಕ್ತಿದ್ಳು, ಗೊತ್ತಿಲ್ಲನು? ಇಂತದೆಲ್ಲಾ ಬಿಟ್ಟ ನೀನು...' ಎಂದು ರಾಗ ಎಳೆಯುತ್ತ ಶಶಿಯಪ್ಪನ ಮುಖವನ್ನು ನೋಡಿದಳು.
ಶಶಿನು ಕಣ್ಣ ತುಂಬಾ ನೀರನ್ನು ತುಂಬಿಕೊಂಡು ನೋಡಿದನು...
'ನೀನು ಸಂತಿ ಬಜಾರದೊಳ್ಗ ಮಂದಿ ಮುಂದ ಕೈ ಚಾಚಿ ಭಿಕ್ಷೆ ಬೇಡೊದಲ್ದ, ಬೆವರು ಸುರಿಸಿ ದುಡ್ದ ಕಂಡೊರ ದುಡ್ಡಿಗೆ ಜಬರ್ದಸ್ತ ಮಾಡಿ ಕಸಕೊಳ್ಳದನ್ನ ನೋಡಿ ನಿಮ್ಮವ್ವನ ಎದಿ ಒಡ್ದ ಹೋತ ತಮ್ಮಾ.. ಒಡ್ದ ಹೋತ..
ನಿಮ್ಮಪ್ಪ ಸತ್ತಾಗ್ನೂ ಇಷ್ಟೊಂದ ನೊಂದಕೊಂಡಿದ್ದಿಲ್ಲ ಆಕಿ'
ಆ ಮಾತುಗಳನ್ನು ಕೇಳಿ ಶಶಿಕಾಂತನಿಗೆ ದುಃಖವನ್ನು ತಡೆದುಕೊಳ್ಳಲಾಗಲಿಲ್ಲ, ಗಳಗಳನೆ ಅಳತೊಡಗಿದನು, ಅವನ ಬೆನ್ನನ್ನು ಸವರಿ ಸಮಾಧಾನಿಸುತ್ತ, 'ತಮ್ಮಾ, ಈಗೇನು ಕಾಲ ಮಿಂಚಿಲ್ಲ, ನೋಡಲ್ಲಿ ಹೊಲ ಹ್ಯಾಂಗ ಪಡ(ಬೀಳು- ಸಾಗುವಳಿಯಾಗದೆ ಇರುವಂತಹದ್ದು) ಬಿದ್ದು ಕಸ ಬೆಳ್ದ ನಿಂತೈತಿ, ನಿನ್ ಮೈಯ್ಯೊಳಗ್ನೂ ಇನ್ನೂ ಕಸುವು ಐತಿ, ನೆಲಾನ ಹದಾ ಮಾಡಿ ಬೀಜ ಬಿತ್ತಿ ಬೆಳೆದೆಂತಂದ್ರ ಬಂಗಾರದಂತ ಬೆಳಿ ಬರ್ತೈತಿ, ನೀನು ದಾರಿಗೆ ಹತ್ತೊದಲ್ದ ಮತ್ ನಾಕ್ಮಂದಿಗೆ ಕೆಲ್ಸ ಕೊಟ್ಟಂಗ ಆಕ್ಕೈತಿ, ನಿಮ್ಮವ್ವ... ತಾನು ಬದುಕೊದಲ್ದ ಅಕಿ ಜೊತಿಗೆ ನಾಕ ಮನಿ ದೀಪ ಉರಿತಿದ್ವು ಈ ಹೊಲದಾಗ. ಕೂಡಗೋಲು, ಹಗ್ಗ ಎರಡು ನಿನ್ನ ಕೈಯ್ಯಾಗ ಅದಾವು ನೋಡಪಾ, ನಾವೇನು ಇವತ್ತೊ ನಾಳೆನೊ ಉರುಳಿ ಹೋಗೊ ಮರಗಳ ಇದ್ಹಾಂಗ ಅದೀವಿ, ಕಾಡ ಬಾ ಅಂತೈತಿ ನಾಡ ಹೋಗ್ ಅನ್ನಾಕ್ಹತ್ತೈತಿ ಇನ್ನೇಷ್ಟ ದಿನ್ದ ಈ ಭೂಮಿ ಋಣ ನಮ್ಗ?' ಕಣ್ಣಂಚಲಿ ನೀರನ್ನು ತಂದುಕೊಂಡು ಆಕಾಶದ ಕಡೆಗೆ ನೋಡುತ್ತಾ ಕಣ್ಮುಚ್ಚಿಕೊಂಡು ನಮಸ್ಕರಿಸಿ, ಮೊಣಕಾಲಿನ ಮೇಲೆ ಭಾರವನ್ನು ಹಾಕುತ್ತ ಎದ್ದು ಹಿಂಬದಿಗೆ ಹತ್ತಿದ್ದ ಮಣ್ಣನ್ನು ಜಾಡಿಸಿಕೊಂಡು ಎಲೆಕೆಂಚಿಯ ಚೀಲವನ್ನು ನಡುವಿನಲ್ಲಿ ಸಿಕ್ಕಿಸಿಕೊಳ್ಳುತ್ತ ಮನೆಯ ದಾರಿಯತ್ತ ಹೆಜ್ಜೆಯನ್ನು ಹಾಕಿದಳು.
ಶಶಿಕಾಂತಳು ಪುಟ್ಟ ಮಗುವಿನ ಕೈಯಲ್ಲಿನ ಗೊಂಬೆಯನ್ನು ಕಿತ್ತುಕೊಂಡಾಗ ಹೇಗೆ ಬಿಕ್ಕಳಿಸಿ... ಬಿಕ್ಕಳಿಸಿ... ಅಳುವುದೊ ಹಾಗೆ ಅತ್ತು...ಅತ್ತು... ಹಗುರಾಗತೊಡಗಿದಳು. ಕಣ್ಣೀರನ್ನು ಒರೆಸಿಕೊಳ್ಳುತ್ತಾ, ಹೊಲದ ಕಡೆಗೊಮ್ಮೆ ನಿಟ್ಟುಸಿರನ್ನು ಬಿಡುತ್ತಾ ನೋಡಿದಳು. ಬಿಸಿಲು, ಮಳೆ, ಗಾಳಿ, ಹಸಿರು, ದನ-ಕರುಗಳು, ಸೆಗಣಿ-ಗೆಂಜಲು, ಹೊಟ್ಟು-ಮೇವು, ಬೆಳೆ, ರಾಶಿ, ಲಾಭ-ನಷ್ಟ, ನೋವು-ಸಂಕಟ, ಸುಖ-ಸಮೃದ್ಧಿ ಎಲ್ಲವೂ ಕಣ್ಮುಂದೆ ಹಾದು ಹೋದವು, ಹಾಗೆ ಇತ್ತ, ಬಿದ್ದಿದ್ದ ತನ್ನ ವ್ಯಾನಿಟಿ ಬ್ಯಾಗಿನತ್ತ ಒಮ್ಮೆ ನೋಡಿದಳು. ಹಣ..!! ಸೌಂದರ್ಯ, ಮೋಜು-ಮಸ್ತಿ, ಅಂಕೆಯಿಲ್ಲ, ಸ್ವಾತಂತ್ರ್ಯದ ಮೇರೆಗೆ ಮಿತಿಯೆ ಇಲ್ಲ, ಯಾವ ದಾರಿಗೂ ಅಡೆತಡೆಗಳಿಲ್ಲ, ಸ್ವಚ್ಛಂದ ಹಕ್ಕಿ, ಬಣ್ಣ-ಬಣ್ಣದ ಜಗತ್ತು, ಸೀರೆ,ಹೂವು,ಸಿನಿಮಾ ಏನೆಲ್ಲ ಬೇಕು ಸುಖಕ್ಕೆ ಅದೆಲ್ಲ ಕೈ ಚಾಚಿ ಕರೆಯುತ್ತಿತ್ತು.
ಮತ್ತೆ ಮಣ್ಣಿನತ್ತ ನೋಡಿದನು, ಸಾಲದ ಶೂಲಕ್ಕೆ ಸತ್ತವರ ಮುಖಗಳು, ಮಳೆ ಬೆಳೆಯಿಲ್ಲದೆ ಎಲುಬಿನ ಹಂದರವಾಗಿ ಕಟುಕರಿಗೆ ಮಾರಲು ನಿಂತಂತಹ ದನಕರುಗಳು, ಮದುವೆ ಮುಂಜಿ ಕಾರ್ಯಗಳಿಗೆ ಮಾಡಿದ ಸಾಲವನ್ನು ತೀರಿಸಲಾಗದೆ ಮಂಗಳೂರು-ಬೆಂಗಳೂರು ಕೇರಳವೆಂದು ಕುಟುಂಬ ಸಮೇತರಾಗಿ ಗುಳೆ ಹೋಗುತ್ತಿರುವ ಯುವ ಜನಾಂಗದ ಚಿತ್ರ ಎಳೆಎಳೆಯಾಗಿ ಮೂಡಿದವು.
ಈಗ ಮತ್ತೆ ಬ್ಯಾಗಿನತ್ತ ನೋಡಿದನು, ಹೋಗಿ ಬಂದಲೆಲ್ಲ ಹಣ, ಯಾರಿಗೂ ಲೆಕ್ಕ ಕೊಡಬೇಕಿಲ್ಲ, ಕೂಡಿಡಬೇಕಿಲ್ಲ, ಬೇಕು-ಬೇಡವಾದದ್ದನ್ನು ತಿಂದುಂಡು ಬದುಕಬಹುದಾದಂತ ಜಗತ್ತು.
ಇಲ್ಲಿ, ಹೌದು ಇಲ್ಲಿ ಒಡಹುಟ್ಟಿದವರಲ್ಲದಿದ್ದರೂ.. ರಾಖಿ ಹಬ್ಬಕ್ಕೆ ಹೊಲದಲ್ಲಿ ದುಡಿಯೆಲೆಂದೆ ಬರುತ್ತಿದ್ದ ಹೆಣ್ಣು ಮಕ್ಕಳು ರಾಖಿಯನ್ನು ಕಟ್ಟುತ್ತಿದ್ದರು, ನಡುವಿನಮನಿ ಬಸಮ್ಮ ತನಗೆಂದೆ ತರುತ್ತಿದ್ದ ಮುಟುಗಿ ರೊಟ್ಟಿ, ಕರುವನ್ನು ಹಾಕಿದ ಆಕಳ ಹಾಲಿನಿಂದ ಗಿಣ್ಣವನ್ನು ಮಾಡಿಕೊಂಡು ಬರುತ್ತಿದ್ದ ಶಿವವ್ವ, ಮಕ್ಕಳಿಲ್ಲದ ಸಂಗಪ್ಪ ಪೇಟೆಯ ಸಂತೆಗೆಂದು ಹೋದಾಗಲೆಲ್ಲ ಕೈ ತುಂಬಾ ಸಿಹಿ ತಿನಿಸುಗಳನ್ನು ತಂದು ಕೊಡುತ್ತಿದ್ದ, ಒಬ್ಬನೆ ಮಗ ನೆಲಕ್ಕೆ ಇಳಿಸಿದರೆ ಪಾದವೆ ಸವೆದು ಹೋಗುವವೇನೊ ಎಂದು ಬೆನ್ನಿಗೆ ಸೀರೆಯಿಂದ ಕಟ್ಟಿಕೊಂಡು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಾದರ ಚೆನ್ನವ್ವ, ಒಂದು ಎರಡು ಮೂರು ನಾಲ್ಕು ಹೀಗೆ ನೆನಪಿನ ಬುತ್ತಿಯಿಂದ ತಾನಾಡಿ ಬೆಳೆದ ಪರಿಸರ, ಊರ ಹತ್ತಿರದ ಕಳಕಮಲ್ಲಯ್ಯನ ಜಾತ್ರೆ, ಗೆಳೆಯರ ಜೊತೆಯಲ್ಲಿ ಕೂಡಿಕೊಂಡು ತೇರನ್ನು ಎಳೆದು, ಉತ್ತತ್ತಿಯನ್ನು ಒಗೆದು, ಬಿದ್ದ ಉತ್ತತ್ತಿಗಾಗಿ ಗುದ್ದಾಡಿಕೊಂಡು ತಿಂದದ್ದು, ಬೆಟ್ಟದ ಮೇಲೆ ಹತ್ತಿ ಗಾಳಿಪಟವನ್ನು ಹಾರಿಸಿದ್ದು, ಹಾಲು ಕೊಡಲು ಹೋದಾಗ, ಹಾಲನ್ನು ಕುಡಿದು ಅದಕ್ಕೆ ನೀರನ್ನು ಬೇರೆಸಿ ಮನೆಯವರಿಗೆ ಕೊಡುತ್ತಿದ್ದದ್ದು ಎಲ್ಲ ಎಲ್ಲವು ಸುಳಿಯತೊಡಗಿದವು. ತಾನೇನು ಕಳೆದುಕೊಂಡೆ ಎಂಬ ಹುಚ್ಚು ಭಾವ ಅವನ ತಲೆಯನ್ನು ಹೊಕ್ಕು ತಲೆಯಲ್ಲ ಭಾರವಾದಂತಾಗಿ ತಲೆಯನ್ನು ಜಾಡಿಸಿಕೊಂಡು ಮತ್ತೆ ಬ್ಯಾಗಿನತ್ತ ನೋಡಿದನು.
ನೆಮ್ಮದಿಯಿಲ್ಲ, ನೆಲೆಯಿಲ್ಲ, ಗುರುತಿಲ್ಲ, ತನ್ನವರು - ಹೊರಗಿನವರು ಯಾರು? ಯಾರೂ? ಲೆಕ್ಕಕ್ಕೆ ಸಿಗುತ್ತಿಲ್ಲ. ಒಂದೂರಿನಿಂದ ಒಂದೂರಿಗೆ, ಮತ್ತೊಬ್ಬರ ಗೆಳೆತನ, ಇನ್ನೊಂದು ಗುಂಪು, ಅದೇ ಅಲೆದಾಟ..!!ಸಿಕ್ಕ ಸಿಕ್ಕಲ್ಲಿ ಭಾರಿ ಭೋಜನಗಳು, ಕಂಠಪೂರ್ತಿ ಕುಡಿದು ಸ್ವರ್ಗದಲ್ಲೆ ತೇಲಾಡುವ ದಿನಗಳು, ದಿನಪೂರ್ತಿ ಕನ್ನಡಿಯ ಮುಂದೆ ನಿಂತು ತೀಡಿಕೊಳ್ಳುವ ಉಬ್ಬು-ತಗ್ಗುಗಳು..ಛೇ...ಛೇ.. ಬದುಕೇ...!!
ತಲೆಯೊಳಗೊಂದು ಗುಂಗಿ ಹುಳ ಹೊಕ್ಕು ಗುಂಯ್ಯ...ಗುಟ್ಟಂತಾಗಿ ತಲೆ ಸಿಡಿದು ಹೋಗುವಂತಹ ಅನುಭವವಾಗತೊಡಗಿತು ಶಶಿಕಾಂತಳಿಗೆ...ಯಾವುದು ಸರಿ? ಯಾವುದು ತಪ್ಪು? ಎಲ್ಲಿ ನಿಲ್ಲಲಿ? ಏನು ಮಾಡಲಿ? ಯಾವುದನ್ನು ಆರಿಸಿಕೊಳ್ಳಲಿ? ಹಿಂದೆ ಹೋಗಬಹುದಾ? ಸಾಧ್ಯವಿಲ್ಲ!! ಎಲ್ಲ ಕಳೆದುಕೊಂಡಾಗಿದೆ, ಸರಿಪಡಿಸಲಾಗುವುದೇ? ಯಾವುದಂತ? ಮಾವನ ಮರ್ಯಾದೆಯನ್ನೊ? ಅವ್ವನ ನೋವನ್ನೊ? ಸಾವನ್ನೊ?. ಮತ್ತೇ.... ಮುಂದೆ ಸಾಗಲಾ? ಹೀಗೆ...!! ಸಾಗಿ ಏನನ್ನು ಕಟ್ಟಬೇಕು? ಯಾವುದನ್ನು ಉಳಿಸಬೇಕು? ಯಾರಿಗೆ ಮಾದರಿಯಾಗಬೇಕು? ಯಾರು ಬರುವರು ಜೊತೆಗೆ?
ಹಿಂದೆ ಸರಿಯಲಾ?...ಮುಂದೆ ಹೋಗಲಾ? ಇಲ್ಲೇ ನಿಲ್ಲಲಾ?
ನಿಂತರೆ...? ಹೋದವರಾರು ಬರುವುದಿಲ್ಲ!! ಇದ್ದವರು ಜೊತೆಗಿರುವುದಿಲ್ಲ ಎಲ್ಲ ಮುನ್ನಡೆಯುವವರೆ!! ಹಾಗಿದ್ದರೆ ನಾನೇನು ಮಾಡಲಿ? ಏನು ಮಾಡಲಿ? ಏನು ಮಾಡಲಿ?
ತಲೆಯ ಕೂದಲನ್ನು ಹಿಡಿದುಕೊಂಡು ಆಕಾಶದತ್ತ ಮುಖಮಾಡಿಕೊಂಡು ನಿಂತಳು.
ಪಶ್ಚಿಮದಲ್ಲಿ ಬೆಳಕು ಅಸ್ತಂಗತವಾಗತೊಡಗಿತ್ತು. ಇನ್ನೇನಿದ್ದರು ಬೆಳಕು ಮೂಡುವುದನ್ನು ಕಾಯಬೇಕಷ್ಟೆ..
No comments:
Post a Comment