ರೊಟ್ಟಿ ಮಾಡುವುದನ್ನು ಬಿಟ್ಟು ಹೊರಬಂದು ನೋಡಿದಳು ಕಡೆಮನಿ ಬಸ್ಯಾ ನಿಂತಿದ್ದನು. ನಿಂಗವ್ವಳು ಹೊರಬರುತ್ತಿದ್ದಂತೆಯೆ ಬಸ್ಯಾ ' ಯಮ್ಮಾ ನಿನ್ ಮಗಾ ಬಂದಾನಬೆ' ಎಂದ ತಕ್ಷಣವೆ
ರಕ್ಕೆ ಬಂದ ಹಕ್ಕಿಯಂತಾಗಿಬಿಟ್ಟಳು ನಿಂಗವ್ವ
'ಎಲ್ಲಿ... ಎಲ್ಲದನಾ ನನ್ನ ಮಗಾ' ಅವನ ಭುಜವನ್ನು ಹಿಡಿದು ಅತ್ಯುತ್ಸಾಹದಿಂದ ಕೇಳಿದಳು.
'ಇಲ್ಲೇ ಬಸ್ ಸ್ಟ್ಯಾಂಡನಿಂದ ಇಳ್ದ ಬರಾಕ ಹತ್ತ್ಯಾನ'
' ಬಾ...ಬಾ.. ಹೋಗೋಣು ನನ್ನ ಮಗನ್ನ ಕರ್ಕೊಂಡ ಬರೋನು. ಎಂಥಾ ಸುದ್ದಿ ಕೊಟ್ಟಿ ನಾಳೆ ಸುಗ್ಗಿ ದಿನದೊಳಗ ಸೇರ ಕಡಬಿನ ಬ್ಯಾಳಿ ಮಾಡಿ ತಿನ್ ಸ್ತೀನಿ.' ಅವಸರಿಸಿದಳು.
ಬಸ್ಯಾ...' ತಡಿಬೆ... ಇನ್ನೇನ ..' ಅನ್ನುವುದರಲ್ಲಿಯೆ ನಿಂಗವ್ವನ ಮನೆಮುಂದೆ ಹಳ್ಳಿಯ ಅರ್ಧಕ್ಕರ್ದ ಜನ ಬಂದು ಸೇರಿಬಿಟ್ಟರು. ಆ ಗುಂಪಿನಲ್ಲಿ ತಾಯಿ ಹಸು ಕರುವನ್ನು ಹುಡುಕುವಂತೆ, ಗುಳಿಬಿದ್ದ ಕಣ್ಣುಗಳನ್ನು ಹಿಗ್ಗಿಸಿ ನೋಡತೊಡಗಿದಳು. ಶಶಿಕಾಂತನ ಇರುವಿಕೆಯ ಕುರುಹು ಎಲ್ಲೂ ಕಾಣಿಸಲಿಲ್ಲ. ಆಗ ಒಬ್ಬ ಹೆಂಗಸು ಗುಂಪಿನ ನಡುವಿನಿಂದ ಬಂದು ನಿಂಗವ್ವನ ಕಾಲಿಗೆ ಬಿದ್ದು ನಮಸ್ಕರಿಸಿದಳು. ನಿಂಗವ್ವ ' ಚೆನ್ನಾಗಿರು ಮಗಳೆ' ಎಂದು ಆಶೀರ್ವದಿಸುತ್ತಲೆ ಅವಳ ಕಣ್ಣುಗಳು ಮತ್ತೆ ಮಗನಿಗಾಗಿ ಹುಡುಕಾಡತೊಡಗಿದವು. ನಾಗರಾಜ ಬಂದು ಹಳ್ಳಿಯ ಎಲ್ಲ ಜನರನ್ನು ಅವರಿಬ್ಬರನ್ನು ಬಿಟ್ಟು ಹೊರಟು ಹೋಗಿ ಎಂದು ಹೇಳಿದನು.
'ನಾಗು ಶಶಿಯಪ್ಪ ಬಂದಾನಂತಲ್ಲೊ ನನ್ ತಂದೆ, ಕಡೆಮನಿ ಬಸುವ ಹೇಳಿದ, ಎಲ್ಲಾದನಂವ, ಬಂದಾನನು? ಬಂದಿದ್ದ ಖರೆ ಐತೊ? ಇಲ್ಲೊ?'
ನಾಗರಾಜ ತಲೆಯನ್ನು ತಗ್ಗಿಸಿಕೊಂಡು ಕಾಲನ್ನು ಮುಟ್ಟಿ ಆಶೀರ್ವಾದವನ್ನು ಪಡೆದ ಹೆಂಗಸನ್ನು ತೋರಿಸುತ್ತಾ, 'ಇವಳೆ? ಅಲ್ಲ...ಅಲ್ಲ.. ಇವನೇ? ಶಶಿಯಪ್ಪ' ಗದ್ಗಗರಿತವಾದ ಧನಿಯಿಂದ.
ಆ ಹುಡುಗಿಯನ್ನು ಈಗ ದಿಟ್ಟಿಸಿ ನೋಡ ತೊಡಗಿದಳು ನಿಂಗವ್ವ. 'ಹೌದು... ಹೌದು ಥೇಟ್
ಶಶಿಕಾಂತನ ಅಚ್ಚೊದಿಂತಯೆ ಇದ್ದಾಳಲ್ಲ!! ಈ ಹುಡ್ಗಿ,' ಕಣ್ಣುಗಳನ್ನು ಕಾಸಗಲ ಮಾಡಿಕೊಂಡು ನೋಡತೊಡಗಿದಳು. ಅರಳಿದ ತಾವರೆಯಂತ ಮುಖವದನ, ಕಾಮನ ಬಿಲ್ಲಿನಂತಹ ತಿಡಿದ ಹುಬ್ಬುಗಳು, ಪಳಪಳನೆ ಹೊಳೆಯುವ ನಕ್ಷತ್ರದಂತಹ ಕಣ್ಣುಗಳು, ಗುಲಾಬಿಯನ್ನು ರುಬ್ಬಿ ಹಿಂಡಿ ಅದರ ಬಣ್ಣವನ್ನೆ ತುಟಿಗಳಿಗೆ ಸವರಿರುವಂತಹ ಕೆಂದುಟಿಗಳು, ಘಮ್ ಎಂದು ಬರುತ್ತಿದ್ದ ನೀಳ ಕೇಶರಾಶಿಯ ಘಮಲು, ತುಂಬಿದ ಎದೆ, ಕೈ ತುಂಬ ಬಳೆ, ಮುಡಿತುಂಬ ಹೂವ, ಜಗಮಗಿಸುವ ಸೀರೆ, ಕೊರಳಿನ ತುಂಬ ಆಭರಣಗಳ ಅಲಂಕಾರ, ಸಾಕ್ಷಾತ್ ಸ್ವರ್ಗಲೋಕದಿಂದ ಇಳಿದು ಬಂದಂತಹ ಅಪ್ಸರೆಯಂತೆಯೆ ಕಾಣುತ್ತಿದ್ದಳು. ಅವಳನ್ನು ನೋಡುತ್ತಲೆ ಏನೊಂದು ಅರ್ಥವಾಗದಂತೆ ಬಾಯಿಯನ್ನು ತೆರೆದುಕೊಂಡು, ಗರಬಡಿದವರಂತೆ ನಿಂತುಬಿಟ್ಟಳು ನಿಂಗವ್ವ. ನಾಗರಾಜನು ಹಳ್ಳಿಯ ಜನರನ್ನೆಲ್ಲ ಹಿಂದೆ ಸರಿಸಿ, ಶಶಿಕಾಂತಳ ಲಗೇಜನ್ನು ಎತ್ತಿಕೊಂಡು ಮನೆಯೊಳಗಿಟ್ಟು, ತಾಯಿ ಮಗ/ಳ ನ್ನು ಮನೆಯ ಒಳಗೆ ಕರೆದೊಯ್ದನು. ವಿಷಯ ತಿಳಿದು ತೋಟದಲ್ಲಿ ಕೆಲಸ ಮಾಡುತ್ತಿದ್ದಂತಹ ನಿಂಗಪ್ಪ ದಂಪತಿಗಳು ಓಡೋಡಿ ಬಂದಿದ್ದರು. ಶಶಿಯಪ್ಪನ ಅವತಾರವನ್ನು ಕಂಡು ಕ್ಷಣಕಾಲ ದಂಗಾಗಿ ಹೋಗಿದ್ದರು. ಸುದ್ದಿ ಹಳ್ಳಿ, ನಿಂಗವ್ವನ ತವರು ಮನೆ ಬಿಗರು- ಬಿಜ್ಜರು, ಎಲ್ಲ ಪರಿಚಯಸ್ಥರ ಕಿವಿಗಳ ಮೇಲೆ ಹೋಗಿ ಬಿದ್ದಿತು. ವಾರ ಕಳೆಯಯುವುದರಲ್ಲಿ ಜನರೆಲ್ಲ ಆಡಿಕೊಂಡರು, ನಕ್ಕರು, ಹಿಯ್ಯಾಳಿಸಿದರು ಸಹ ನಿಂಗವ್ವ ಅವುಗಳನ್ನೆಲ್ಲ ನುಂಗಿಕೊಂಡಳು.
ನಿಂಗಪ್ಪನ ಮನೆಯಲ್ಲಿ ಎಲ್ಲರೂ ಊಟ ಮಾಡಿ ಮನೆ ಮುಂದಿನ ಕಟ್ಟೆಯ ಮೇಲೆ ಕುಳಿತುಕೊಂಡಿದ್ದರು. ಅಲ್ಲಿಗೆ ನಿಂಗವ್ವಳು ಬಂದು ಕುಳಿತುಕೊಂಡಳು. ನಿಂಗವ್ವ ಬಂದಿದ್ದರಿಂದ ಎಲ್ಲರೂ ಮೌನಕ್ಕೆ ಶರಣಾದರು. ಹತ್ತು ನಿಮಿಷ ಕಳೆದ ಮೇಲೆ ನಿಂಗಪ್ಪನೆ 'ಊಟಾತನವ?'
ಆಯಿತು ಎನ್ನುವಂತೆ ತಲೆಯನ್ನಾಡಿಸಿದಳು ನಿಂಗವ್ವ. ಮತ್ತೆ ಮೌನ... 'ಮುಂದೇನಣ್ಣ?' ಈ ಸಲ ಮಾತ್ರ ನಿಂಗವ್ವನೆ ಮೌನವನ್ನು ಮುರಿದಿದ್ದಳು.
'ಯಾವ್ದುಕ್ಕಮ್ಮ?'
'ಅದೆ ಶಶಿಯಪ್ಪನ ವಿಚಾರ!!'
'ಏನ್ ಮಾಡೊದ್ವಾ?'
'ನಿನ ಹಿಂಗಂದ್ರ ಹ್ಯಾಂಗಣ್ಣ, ಇನ್ನ ಬಾಳಿ ಬದ್ಕ ಬೇಕಾದ ಕೂಸು ಐತದು'
'ಖರೆ ಐತಬೆ, ಮತ್ ಈಗೇನ ಮಾಡಾಕ ಹತ್ತಾನ ಅಂವಾ?'
'ಮಾಡೋದೆನೈತಣ್ಣ, ಏಳೊದ ಎಂಟಕ್ಕ, ಜಳಕ ಮಾಡಿ, ತಾಸತನ ಕನ್ನಡಿ ಮುಂದ ನಿಂತ್ಗೊಂಡ ಸಿಂಗಾರ ಮಾಡ್ಕೊಂಡು, ಹೆಗ್ಲಿಗೊಂದು ಬ್ಯಾಗ ಹಾಕ್ಕೊಂಡ ಮನಿ ಹೊಸ್ಲ ದಾಟದಾಂವ ಬರೋದ ಸವರಾತ್ರಿ(ನಡು ರಾತ್ರಿ)ಗೆ,ಮತ್ ಏಳೊದು, ಹೋಗೊದು ಬರೋದು, ಎಂಟ್ ದಿನದ ಹೊತ್ತಾತು ಇಷ್ಟ ನಡದೈತಿ,'
'ಆತ ತಗೊಬೆ ನಾಳೆ ಏನನ್ನೊದ್ನ ವಿಚಾರ ಮಾಡೊಣಂತ'
ಎದ್ದು ನಿಂತವನೆ ಹೆಂಡತಿ ಶಾಂತವ್ವನ ಹತ್ತಿರ ಹೋಗಿ ಅವಳ ಕಿವಿಯಲ್ಲಿ ಏನೊ ವಿಷಯವನ್ನು ಹೇಳಿ ಮಲಗುವ ಕೋಣೆಗೆ ಹೊರಟು ಹೋದನು. ಸೊಸೆ ಮೊಮ್ಮಗಳನ್ನು ಎತ್ತಿಕೊಂಡು ಅವಳ ಸಹ ಒಳಗಡೆ ಹೋದಳು. ಶಾಂತವ್ವ ಎದ್ದು ಬಂದು ನಿಂಗವ್ವಳನ್ನು ಕರೆದುಕೊಂಡು ಅವಳ ಮನೆಯೊಳಗೆ ಹೋಗಿ ಬಾಗಿಲ ಚೀಲಕವನ್ನು ಹಾಕಿ, ನೆಲದ ಮೇಲೆ ಚಾಪೆಯನ್ನು ಹಾಸಿ ನಿಂಗವ್ವನನ್ನು ಜೊತೆಯಲ್ಲಿಯೆ ಕುಳ್ಳರಿಸಿಕೊಂಡು
'ನೋಡ್ವಾ ನಾನೀಗ ಹೇಳೊ ವಿಷ್ಯಾ ಭಾಳ ಗಂಭೀರ ಆದಂತದ ಐತಿ. ನೀ ಮನಸ್ನ ಗಟ್ಟಿಯಾಗಿ ಇಟ್ಕೊಬೇಕ ನೋಡ್ವಾ' ಆತಂಕದ ದನಿಯಲ್ಲಿ ಮೆಲ್ಲಗೆ ಹೇಳಿದಳು
'ಅಂದ್ರ' ಭಯಭೀತ ಕಣ್ಣುಗಳಿಂದ ನೋಡಿದಳು ನಿಂಗವ್ವ.
'ನಾಗು ಮೊನ್ನೆ ರಾತ್ರಿ ಎಲ್ಲಾ ವಿಷಯಾನು ಹೇಳಾಕ ಹತ್ತಿದ್ದ'
'ಏನ್ ವಿಷಯಾನ? ಯಾರ ಸುದ್ದಿನಾ?'
'ಅದ ಶಶಿಯಪ್ಪಂದ'
'ಏನ್ ಹೇಳಿದ'
'ಶಶಿಯಪ್ಪ ಈಗ ಗಂಡ್ಮಗ ಆಗಿ ಉಳ್ದಿಲ್ಲ!!'
ಶಾಂತವ್ವಳ ಮಾತಿಗೆ ತಲೆಯ ಮೇಲೊಂದು ದೊಡ್ಡದಾದ ಕಲ್ಲನ್ನು ಎತ್ತಿ ಹಾಕಿದಂತಹ ಭಾವವು ಆವರಿಸಿಕೊಂಡಿತು ನಿಂಗವ್ವಳಿಗೆ.
'ಗಂಡಾಗಿ ಉ....ಳದಿ....ಲ್ಲ!! ಹಂಗಂದ್ರ ಏನಬೆ, ವೊಟು ವಾಗತ್ತ್ಯಾಗಿ ಬಿಡಿಸರ ಹೇಳ ನಮ್ಮವ್ವ'
'ಅಂದ್ರ ಬೆಂಗ್ಳೂರ ಪ್ಯಾಟ್ಯಾಗ ಗಂಡಿದ್ದೊರ್ನ ಹೆಣ್ ಮಾಡ್ತಾರಂತ, ಹೆಣ್ಣಿದ್ದೊರ್ನ ಗಂಡ ಮಾಡ್ತಾರಂತ, ಅಂತಲ್ಲಿಗೆ ಹೋಗಿ ನಂ ಶಶಿಯಪ್ಪ ಹೆಣ್ಣಾಗಿ ಬಂದಾನ'
ಈ ಮಾತನ್ನು ಕೇಳಿದ ಮೇಲಂತೂ ಕಿವಿಯಲ್ಲಿ ಕಾದ ಸೀಸವನ್ನು ಸುರಿದ ಹಾಗಾಯಿತು ನಿಂಗವ್ವಳಿಗೆ
'ಹೆಣ್ಣಾಗೊದಂದ್ರ ಹ್ಯಾಂಗ ನಮ್ಮವ್ವ? ಮತ್ ಇಂವ ಹೆಣ್ ಆದ್ನಂದ್ರ ಇವಂಗ ಹೆಣ್ ಯಾರ ಕೊಡ್ತಾರು?'
'ಅಯ್ಯ ನಮ್ಮವ್ವ ಗಂಡ ಅಲ್ ಅಂದಮ್ಯಾಲ ಹೆಣ್ ತರೊ ವಿಚಾರ ಎಲ್ಲಿದ್ ತಗಿ'
'ಮತ್ ಇವಂಗ್ ಗಂಡ ಹುಡ್ಕಬೇಕೆನ?'
'ಇಲ್ಲಂತವ, ಹಂಗೂ ಬರೊದಿಲ್ಲಂತ, ಅತ್ಲಾಗ ಗಂಡು ಅಲ್ಲ! ಇತ್ಲಾಗ ಹೆಣ್ಣೂ ಅಲ್ಲ, ಅದೇನ ಅಂತಾರಲ್ಲ ಬೆ ಮಂಗ್ಳಮುಖೆರ ಅಂತ ನೋಡ, ನೀನು ಗಡಾದ ವಾರದ ಸಂತಿಯೊಳ್ಗ ಇಂತೊರ್ನ ಭಾಳ ಮಂದಿನ ನೋಡಿರಬೇಕಲ್ಲ!'
'ಹೌದು ನೋಡಿನಿ, ಅದ್ರ ಅವ್ರ ಬಗ್ಗೆ ನಾನಷ್ಟೊಂದ ತಲಿ ಕೆಡ್ಸಿಕೊಂಡಿದ್ದಿಲ್ಲ'
' ಹ್ಞೂಂ ಅವ್ರ ಜೊತಿ ಸೇರ್ಕೊಂಡ ಹಿಂಗ ಆಗ್ಯಾನ ನೋಡಿವ ಬಾಡ್ಯಾ ಊರ ಬಾಡ್ಯಾ, ಆವಾಗ ಪೋನ್ ನ್ಯಾಗ ಮಾತಾಡ್ತಿದ್ದ ಅಂತಿದ್ರಲ್ಲ ಇವ್ರ ಜೊತಿನ ಅಂತ ನೋಡ'
'ಅವ್ರದ ಹಾಳಾಗಿ ಹೋಗ್ಲಿ ಬಿಡ ತಾಯಿ, ಶಶಿಯಪ್ಪಂದ ಮುಂದೇನ ಜೀವ್ನ ಅಂತೀನಿ'
'ಅಂವಾ ಒಂದ ಬರಡು ಭೂಮಿ ಇದ್ದಂಗ ನೋಡಾವ, ಬಿತ್ತೊದಿಲ್ಲ, ಬೆಳೆಯೊದಿಲ್ಲ, ಎಮ್ಮಿ ಬಿದ್ದ ಹೊಳ್ಳಾಡಿದ ಕೆಸರಾಗಿನ ನೀರಿದ್ದಂಗ ಕುಡಿಯಾಕನೂ ಇಲ್ಲ, ಬಳಸಾಕನೂ ಇಲ್ಲ.'
'ಅಂದ್ರ, ನನ್ ಮನಿ ವಂಶದ ಕುಡಿ ಮುಂದ ಹಬ್ಬೊದಿಲ್ಲನು?'
ಇಲ್ಲವೆನ್ನುತ್ತ ತಲೆಯನ್ನಾಡಿಸಿದಳು ಶಾಂತವ್ವ.
'ಅಯ್ಯೋ... ಕಳಕಮಲ್ಲಪ್ಪ...ಇದ್ದ ಒಂದ ಮನಿ ಕುಡಿನೂ ಫಲ ಕೊಡಲಾರ್ದಂಗ ಮಾಡ್ಬಿಟ್ಟಲ್ಲ ತಂದೆ. ಮುಂದ ಹ್ಯಾಂಗ್ ನಂ ಬಾಳೆ, ನಾ ಯಾರ್ ಸಲುವಾಗಿ ಇಷ್ಟು ದಿವ್ಸ ಜೀವ ಸವಿಸಿದ್ನೊ
No comments:
Post a Comment