ಮಂಗಳಮುಖಿ - ೫
ಬಸ್ಸಿನಲ್ಲಿ ಹತ್ತಿ ಕುಳಿತುಕೊಂಡ ಕಲ್ಲವ್ವನಿಗೆ ಲೋಕದ ಪರಿವೆ ಇಲ್ಲದ ಹಾಗಾಗಿ ಹೋಯಿತು, ಬಸ್ ಕಂಡಕ್ಟರ್ ಎರಡೆರಡು ಸಲ ಕೂಗಿ, ಹಣವನ್ನು ಪಡೆದು ಟಿಕೆಟನ್ನು ಕೊಟ್ಟು ಮುನ್ನಡೆದಿದ್ದನು, ಕಲ್ಲವ್ವನ ತಲೆಯಲ್ಲಿ ಅದೆ ಮಾತುಗಳು, ಅವರ ಚೆಲ್ಲಾಟಗಳು, ಹಣವನ್ನು ಕಿತ್ತುಕೊಂಡ ರೀತಿ, ಮಗನು ಅವರ ಸಂಗದಲ್ಲಿ ಇದ್ದದ್ದನ್ನು ಕಂಡು, ಎಡವಿದ ಬೆರಳಿನ ಮೇಲೆ ಕೈ ಜಾರಿ ಬಿದ್ದ ಪಾತ್ರೆಯ ನೀಡುವ ನೋವಿನಷ್ಟೆ ಅಧಿಕ ಸಂಕಟ, ತಳಮಳವುಂಟಾಗಿಬಿಟ್ಟಿತ್ತು ಕಲ್ಲವ್ವನೆದೆಯಲ್ಲಿ.
########
ಸಮಯ ಆಗಲೆ ರಾತ್ರಿ ಹತ್ತೂವರೆ ಎಂದು ಸೂಚಿಸುತ್ತಿತ್ತು, ಕಾಂತಳು ಎಂದಿನಂತೆಯೆ, ಮನೆಯ ಬಾಗಿಲವರೆಗೂ ಇಬ್ಬರು ಯುವಕರ ಜೊತೆಯಲ್ಲಿಯೆ ಬಂದು ನಿಂತಗೊಂಡು ಕ್ಷಣಕಾಲ ಲಲ್ಲೆಯನ್ನು ಹೊಡೆದು, ಒಳಗೆ ಬಂದಳು. ಗೋಡೆಗಾಣಿಸಿಕೊಂಡು ಓಡುವ ಗಡಿಯಾರವನ್ನೆ ನೋಡಿಕೊಂಡು ಕುಳಿತಿದ್ದಂತಹ ಕಲ್ಲವ್ವನತ್ತ ಒಂದು ಉದಾಸೀನತೆಯ ನೋಟವನ್ನು ಬಿರಿ, ಮನೆಯ ಬಾಗಿಲನ್ನು ಮುಚ್ಚಿ, ತನ್ನ ಮಲಗುವ ಕೋಣೆಗೆ ಹೋಗಿ ಮಲಗಿಕೊಂಡುಬಿಟ್ಟಳು.
'ಯವ್ವಾ... ಕಲ್ಲವ್ವ,... ಕಲ್ಲವ್ವ.. ಕಲ್ಲವ್ವಾ... ಯಾರು ಇಲ್ಲನಬೆ ಹಟ್ಯಾಗ, ಎಷ್ಟೊತ್ತ್ ಆತ ನಾ ಮನಿ ಬಾಗಲ್ದಾಗ ನಿಂತ್ಗೊಂಡ ದನಾ ಒದ್ರದಂಗ ಒದ್ರಾಕ್ಹತ್ತೀನಿ, ಒಬ್ರನೂ ಹ್ಞಾಂ ಅನುವಲ್ರು ಹ್ಞೂಂ ಅಂತರ ಅನುವಲ್ರ, ಚಿಗವ್ವಾ, ಬೇ ಕಲ್ಲವ್ವಾ' ಮತ್ತೊಂದೆರಡು ಸಾರಿ ಕೂಗಿದಳು ಹಿಂದಿನ ಮನೆಯ ಶಾಂತವ್ವ.
ಶಾಂತವ್ವಳ ಕೂಗಿಗೆ ಎಚ್ಚರಕೊಂಡ ಕಾಂತಳು, ಎದ್ದು ಹಾಳು ಮುಖದಲ್ಲೆ ಹೊರಗೆ ಬಂದಳು. ಸಮಯ ನೋಡಿಕೊಂಡಾಗ ಏಳು ಇಪ್ಪತ್ತಾಗಿತ್ತು
'ಹ್ಞೂಂ... ಏನ್ ಬೇಕಿತ್ತವ್ವ ಬೆಳ್ಗ ಬೆಳ್ಗೆನ ಬಂದ ನಿದ್ದಿ ಹಾಳ ಮಾಡಿದಿ' ಕಣ್ಣನ್ನು ತಿಕ್ಕಿಕೊಳ್ಳುತ್ತಾ, ಮೈಯನ್ನು ಮುರಿಯುತ್ತಾ,
ಕಣ್ಣನ್ನು ತಿಕ್ಕಿಕೊಳ್ಳುತ್ತಲೆ ಕೇಳಿದಳು.
'ಏನಿಲ್ಲ, ಗಿಂಡಿ ಹಾಲ್ ಬೇಕಾಗಿತ್ತ್ ಆವಾಗ್ಲಿಂದ ಕರಿಯಾಕ್ಹತ್ತಿನಿ ಯಾರು ಹ್ಞೂಂ ಅನುವಲ್ರಿ, ಹ್ಞಾಂ ಅನುವಲ್ರಿ'
ಕಾಂತಾಳು ಇನ್ನೇನೊ ಹೇಳಬೇಕೆನ್ನುವಷ್ಟರಲ್ಲಿ ಎದುರು ಮನೆ ಬಸಲಿಂಗ ಓಡುತ್ತಾ ಬಂದು ಎದುಸಿರನ್ನು ಬಿಡುತ್ತಾ, 'ನಿಮ್ಮವ್ವ.....
'ಹ್ಞೂಂ.. ನಮ್ಮವ್ವ?'
'ನಿಮ್ಮವ್ವ... ತ್ವಾಟದಾಗ ಸತ್ತ ಬಿದ್ದಾಳ..'
'ಏನಂದಿ..!!!' ಅಂತ ಪ್ರಶ್ನೆ ಕೇಳಿದ ಕಾಂತಾಳು ಬಸಲಿಂಗನ ಮರುತ್ತರಕ್ಕು ಕಾಯದೆ, ತೋಟದ ಕಡೆಗೆ ಓಟಕಿತ್ತಳು,
###
ಒಂದೆ ಉಸಿರಿನಲ್ಲಿ ಓಡಿಬಂದಳು ಕಾಂತಳು ಅವಳ ಹಿಂದೆಯೆ ಹಳ್ಳಿಗೆ ಹಳ್ಳಿಯೆ ಬಂದು ಜಮಾಯಿಸಿಬಿಟ್ಟಿತಲ್ಲಿ ಕಾಂತಳು ತಾಯಿಯ ಹೆಣವನ್ನು ನೋಡಿದಳು. ಕಲ್ಲವ್ವ ಹೊಲದಲ್ಲಿ ಬೊರಲಾಗಿ ಬಿದ್ದಿದ್ದಳು, ಎಡಗೈಯಲ್ಲಿ ದನಕ್ಕೆಂದು ಕೊಯ್ದುಕೊಂಡಿದ್ದ ಕಸ, ಬಲಗೈಯಲ್ಲಿ ಬಲವಾಗಿ ಹಿಡಿದುಕೊಂಡಿದ್ದ ಕುಡಗೋಲು ಎರಡರಲ್ಲಿ ಒಂದನ್ನು ಕೈ ಬಿಟ್ಟಿರಲಿಲ್ಲ. ಆಗ ಅಲ್ಲೊಂದು, ಇಲ್ಲೊಂದು ಮಾತುಗಳು ಕೇಳಿ ಬರಲಾರಂಭಿಸಿದವು
'ಎಂಥ ಹೆಣ್ಮಗ್ಳರಿ, ನಾಕಾಳ ಗಂಡಿನ ಕೆಲ್ಸಾನ ಒಬ್ಬಾಕಿ ನಿಗ್ಸ್ತಿದ್ಳ, ಹಗ್ಲೆನು, ರಾತ್ರೆನು ಎರ್ಡು ಒಂದ ಮಾಡ್ಬಿಡ್ತಿದ್ಲು ಹೊಲ್ದಾಗ ದಗ್ದ ಅದಾವಂತಂದ್ರ,'
'ಹೌದ್ರಿ, ಅದ್ಕ ದ್ಯಾವ್ರ ದೇವ್ರಂತವ್ರನ್ನ ಜಲ್ದಿ ತನ್ ಹತ್ರಕ್ಕ ಕರ್ಸಿಕೊಂಡ ಬಿಡ್ತಾನ ನೋಡ್ರಿ, ಅಲ್ಲ,.. ನನವು ಮೂರ ಮೊಮ್ಮಕ್ಳನ್ನು ಅದೆಷ್ಟು ಹಚ್ಗೊಂಡಿದ್ಳು ಅಂತೀನಿ, ಉಂಡ್ರು ಬಿಟ್ರು ಎಲ್ಲಾ ಈಕಿ ಮನಿಯಾಗ, ಇನ್ನೀಕಿ ಇಲ್ಲ ಅನ್ನೊ ಸುದ್ದಿ ಅವಕ್ಕೇನರ ಗೊತ್ತಾತಂತಂದ್ರ ಏನ್ಮಾಡ್ತಾವೊ ಏನೊ?'
ಎಲ್ಲರೂ ಕಲ್ಲವ್ವನ ಗುಣಗಾನವನ್ನು ಮಾಡುವವರೆ, ಕೊನೆಗೆ ಊರಿನ ಹಿರಿಯರು ಬಂದು ಬಂಡಿಯಲ್ಲಿ ಹೆಣವನ್ನು ಹಾಕಿಕೊಂಡು ಬಂದು ಶಾಸ್ತ್ರಗಳನ್ನು ಮುಗಿಸಿಕೊಂಡು, ಮರಳಿ ತೋಟಕ್ಕೆ ಕಲ್ಲವ್ವನ ಹೆಣವನ್ನು ತಂದು ತೋಟದ ಮದ್ಯದಲ್ಲಿ ಗುಂಡಿಯನ್ನು ತೋಡಿ, ಹುಗಿದು, ಎಲ್ಲರೂ ಕೊನೆಯದಾಗಿ ಕೈ ಮುಗಿದು ಊರಿಗೆ ಮರಳಿದರು.
##
ವಾರ ಕಳೆಯಿತು, ಕಲ್ಲವ್ವನನ್ನು ಕ್ರಮೇಣವಾಗಿ ಮರೆತ ಜನರು ತಮ್ಮ ನಿತ್ಯದ ಬದುಕಿನಲ್ಲಿ ಕಳೆದುಹೋಗಿದ್ದರು. ಭೂ ಗರ್ಭದಲ್ಲಿ ನಿಶ್ಚಿಂತೆಯಾಗಿ ಮಲಗಿದ್ದ ಕಲ್ಲವ್ವನ ಹುಗಿದ ಜಾಗದಲ್ಲೊಂದು ಕಟ್ಟೆಯನ್ನು ಕಟ್ಟಿ ಹೂವಿನ ಹಾರಗಳಿಂದ ಸಿಂಗರಿಸಿದ್ದರು. ಅವಳ ನೆನಪಿಗಾಗಿ ಒಂದು ಗಿಡವನ್ನು ನೆಟ್ಟಿದ್ದರು. ತಾಯಿಯ ಮರಣದ ನಂತರ ಕಾಂತಾಳ ಮನಸ್ಸು ಬಹಳಷ್ಟು ಘಾಸಿಗೊಂಡಿತ್ತು. ಯಾರ ಸಂಪರ್ಕಕ್ಕೂ ಸಿಗದೆ, ಕಲ್ಲವ್ವನ ಕಟ್ಟೆಯ ಪಕ್ಕದಲ್ಲೆ ಕುಳಿತಿರುತ್ತಿದ್ದಳು.
ಅವತ್ತು ಒಂದು ದಿನ ಮಧ್ಯಾಹ್ನ ಮೂರರ ಹೊತ್ತು, ಸಣ್ಣಪ್ಪನ ಮಡದಿ ಶಾಂತವ್ವಳು ತಲೆ ತುಂಬಾ ಸೇರಗನ್ನು ಹೊದ್ದುಕೊಂಡು ಕೈಯಲ್ಲಿ ಬುತ್ತಿಯನ್ನು ಕಟ್ಟಿಕೊಂಡು ಕಾಂತಾಳ ಎದುರು ಬಂದು ನಿಂತುಗೊಂಡಳು. ಅವಳನ್ನು ಕಣ್ಣೆತ್ತಿ ನೋಡಿದ ಕಾಂತಳು
'ನೀವ್ ಯಾಕ ಬರಾಕ ಹೋಗಿದ್ರಿ ಇಷ್ಟ ಬಿಸ್ಲಾಗ' ಸೋತ ದ್ವನಿಯಲ್ಲಿ ಕೇಳಿದಳು.
'ಎರ್ಡ ದಿನ್ದ ಹೊತ್ತಾತ್ ಹೊಟ್ಟಿಗೆ ಸರಿಯಾಗಿ ಕೂಳು ನೀರಿಲ್ಲ, ಅಂತಾದ್ರಾಗ ಸುಡೊ ಬಿಸ್ಲಾಗ ಇಲ್ಲೆ ಹಿಂಗ ಬಂದ ಕುಂತ್ಗೊಂಡ್ರ ಹ್ಯಾಂಗ?'
'ಎರ್ಡ ದಿನ ಕೂಳ ತಿನ್ದಿದ್ರ ನಾನೇನ ಸಾಯೋದಿಲ್ಲಾಳ್ಬೆ'
'ಮುಚ್ಚ ಬಾಯಿ ಭಾಡೆನ ಮಗ್ನ, ನನ್ಗ ಎದ್ರುತ್ರ ಕೊಡ್ತಿ, ನಿಮ್ಮವ್ವ ಇದ್ದಿದ್ರ ನಿ ಹಿಂಗ ಇರಾಕ ಬಿಡ್ತಿದ್ಲನ ನಿಂಗ' ಗದರಿಸಿದಳು ತುಸು ಗಡಸಿನ ಧನಿಯಲ್ಲಿ.
ತಾಯಿಯ ಹಳೆಯ ನೆನಪುಗಳೆಲ್ಲ ಉಕ್ಕಿಬಂದು, ಎರಡು ಕೈಯಿಂದ ಮುಖವನ್ನು ಮುಚ್ಚಿಕೊಂಡು ಗಳಗಳನೆ ಅಳತೊಡಗಿದಳು.
'ಸಾಕ್ಬಿಡು ಅತ್ತಿದ್ದ, ಹ್ವಾದ ಜೀವ ಏನ್ ಹೊಳ್ಳಿ ಬರ್ತದನು, ದೇವ್ರಂತಾಕಿ, ದೇವ್ರ ಹಂತೇಕನ......' ಮಾತು ಗಂಟಲದಲ್ಲೆ ಸಿಕ್ಕಿ ಹಾಕಿಕೊಂಡಿತು ಶಾಂತವ್ವಳಿಗೆ, ಗಂಟಲು ಕಟ್ಟಿ ಉಮ್ಮಳಿಸಿ ಬಂದ ಎದೆಯ ದುಃಖವನ್ನು ಸೀರೆ ಸೇರಗಂಚಿನಿಂದ ಬಾಯನ್ನು ಮುಚ್ಚಿಕೊಂಡು ಕಣ್ಣೀರಾದಳು.
ಕಾಂತಳು ಶಾಂತವ್ವಳು ದುಃಖಿಸುವ ಪರಿಯನ್ನು ಕಂಡು ಎದ್ದು ಬಂದು ಅವಳ ಕಾಲನ್ನು ಹಿಡಿದುಕೊಂಡು ಮತ್ತಷ್ಟು ಜೋರಾಗಿ ಅಳಲಾರಂಭಿಸಿದಳು. ಶಾಂತವ್ವಳು ಅವಳ ತೋಳನ್ನು ಹಿಡಿದು ಎಬ್ಬಿಸಿಕೊಂಡು, ಸಮಾಧಾನ ಮಾಡಿ, ಅಲ್ಲೆ ತೋಟದ ಬದುವಿನಲ್ಲಿದ್ದ ಬೇವಿನಗಿಡದ ನೆರಳಿಗೆ ಕರೆ ತಂದು, ಕುಡಿಯಲಿಕ್ಕೆ ನೀರನ್ನು ಕೊಟ್ಟು, ಬುತ್ತಿಯ ಗಂಟನ್ನು ಬಿಚ್ಚಿ, ತಾಟಿನಲ್ಲಿ ಅನ್ನವನ್ನು ನೀಡಿ ಕೊಟ್ಟಳು. ಒಂದೆರಡು ತುತ್ತುಗಳನ್ನು ಉಂಡ ನಂತರ ಊಟ ಸೇರದೆಂದು ತಟ್ಟೆಯನ್ನು ಕೆಳಗಿಟ್ಟು ಕೈ ತೊಳೆದುಕೊಂಡು ಬಿಟ್ಟಳು ಕಾಂತ. ಕ್ಷಣಕಾಲ ಇಬ್ಬರು ಮೌನವಾಗಿದ್ದರು, ಆಗಾಗ ಬೀಸುವ ಸುಂಯ್ಯ ಎಂಬ ಗಾಳಿ, ಗುಂಯ್ಯ ಎಂದು ತಿಪ್ಪೆಗುಂಡಿಯಿಂದ ಹಾರಾಡಿ ಬರುತ್ತಿದ್ದ ನೊಣಗಳು, ನಿಮ್ಮದು ಆಗಿದ್ದರೆ ನನ್ನ ಪಾಲಿನದ್ದು ನೀಡಿಬಿಡಿ ಎಂದು ಅವರಿಬ್ಬರ ಎದುರಿನಲ್ಲಿ ಬಾಲವನ್ನು ಅಲ್ಲಾಡಿಸಿಕೊಂಡು ನಿಂತಿದ್ದ ಪಕ್ಕದ ತೋಟದ ಚಂದಪ್ಪನ ನಾಯಿ, ಚೆಲ್ಲಿದ ಅನ್ನದಗಳನ್ನು ತನ್ನ ಗರ್ಭವ ಸೇರಿಸಿಕೊಳ್ಳುವ ಕಾತುರದಲ್ಲಿ ಕಾ...ಕಾ.. ಎಂದು ಒಂದೆ ಸಮನೆ ಒದರುತ್ತಿದ್ದ ಕಾಗೆಗಳ ಗುಂಪು, ಇವಾವು ಅವರಿಬ್ಬರ ಅರಿವಿಗೆ ಬಂದಿಲ್ಲವೇನೊವೆಂಬಂತೆ, ಶಿಲ್ಪಿಯು ಕೆತ್ತಿಟ್ಟ ಮಾತಿಲ್ಲದ ಮೂರ್ತಿಗಳಂತೆ ಕುಳಿತುಬಿಟ್ಟಿದ್ದರು. ಸಮಯ ಕಳೆಯುತ್ತಿತ್ತು, ನಾಯಿಯು ಹಸಿವನ್ನು ತಾಳಲಾರದೆ, ಶಾಂತವ್ವಳ ಪಕ್ಕದಲ್ಲಿದ್ದ ಬುತ್ತಿಯ ಚೀಲಕ್ಕೆ ಬಾಯಿಯನ್ನು ಹಾಕಿ ಓಟ ಕಿತ್ತಿತು, ಮರದ ಕೊಂಬೆಯ ಮೇಲೆ ಕುಳಿತ ಕಾಗೆಗಳೆಲ್ಲ ನಾಯಿ ಹಿಂದೆ ಹಾರಿ ಹೋದವು. ಆಗ ಎಚ್ಚೆಂತಹ ಕಾಂತಳು, 'ಅಯ್ಯೊ, ಆ ನಾಯಿ ನಮ್ಮ ಬುತ್ತಿಯನ್ನು ಒಯ್ಯುತ್ತಿದೆ,' ಎಂದು ಎದ್ದು ಅದನ್ನು ಹಿಂಬಾಲಿಸಲು ಮುಂದಾದಳು. ಆಗ ಶಾಂತವ್ವಳು ಅವನ ಕೈಯನ್ನು ಹಿಡಿದು ಕುಳ್ಳರಿಸಿದಳು.
'ಕೈ ಬಿಡ್ಬೆ ಯವ್ವಾ, ಆ ನಾಯಿ ಬುತ್ತಿ ಕಸ್ಕೊಂಡ ಹೊಂಟೈತಿ
ಹೊಡ್ದ ಕಿತ್ಗೊಂಡ ಬರ್ತಿನಿ'
'ಬ್ಯಾಡೆಪ್ಪ, ಹೋದ್ರ ಹೋತ್ ಬಿಡು ಅತ್ಲಾಗ'
'ಹಂಗಂದ್ರ ಹ್ಯಾಂಗ್ಬೆ'
'ಒಂದ ಕಳ್ಕೊಂಡ್ರ ಏನಾತ ಮತ್ತೊಂದ ಸಿಕ್ತಲ್ಲ'
ಹುಬ್ಬನ್ನು ಗಂಟಿಕ್ಕಿಕೊಂಡು ಏನು ಎನ್ನುವ ದೃಷ್ಠಿಯಲ್ಲಿ ಶಾಂತವ್ವಳನ್ನು ನೋಡಿದಳು ಕಾಂತಳು.
'ಗೊತ್ತಾಗ್ಲಿಲ್ಲೇನ?'
ಇಲ್ಲವೆಂದು ತಲೆಯಾಡಿಸಿದಳು.
' ನೀನ್ ಮತ್ತ್ ನನ್ ಹೊಳ್ಳಿ ಅವ್ವಾ ಅಂತಂದ ಬಾಯ್ತುಂಬಾ ಕರ್ದೆಲ್ಲ, ಇದಕ್ಕಿಂತ ಮತ್ತೀನೆನ ಬೇಕಿತ್ತ, ತಮ್ಮ'
ಮತ್ತೊಮ್ಮೆ ಎದೆಯೊಳಗಿನ ದುಃಖವೊ, ಮಾಡಿದ ತಪ್ಪಿನ ಅರಿವಾದಂತಾಗಿ ಗಳಗಳನೆ ಅಳತೊಡಗಿದಳು ಕಾಂತಳು.
'ಹೋಗ್ಲಿ ಬಿಡು ಆದದ್ದಾತು, ಮತ್ತ್ ಅದನ್ನ ಯಾಕ ಮನಸ್ನ್ಯಾಗ ಇಟ್ಗೊಂಡ ಮರ್ಗತಿದಿ'
'ತಪ್ಪಾತ್ಬೆ ಯವ್ವಾ, ಆವತ್ತ ನಿಮ್ಗ ನಾನ ಅನ್ಬಾರ್ದ ಅಂದ ಬಿಟ್ನಿ'
'ಹುಚ್ಚಪ್ಪ, ಮಕ್ಳ ತಪ್ಪ ಮಾಡ್ತಾವಂತಂದು ದೊಡ್ಡವ್ರು ಮಾಡೊಕಾಗ್ತದನು, ಬಾ.. ಕುಂದರಿಲ್ಲೆ' ಹಿಡಿದಿದ್ದ ಕೈಯನ್ನು ಎಳೆದು ಪಕ್ಕದಲ್ಲಿ ಕುಳ್ಳರಿಸಿಕೊಂಡಳು.
'ಹೌದ್ವಾ.. ನಾ ದೊಡ್ಡ ತಪ್ಪ ಮಾಡ್ಬಿಟ್ನಿ, ಅಲ್ಬೆ ಆ ಬುತ್ತಿನರ ತಗೊಂಡ ಬರ್ತಿನ ಹೋಗಿ' ಮತ್ತೆ ಎಳಲನುವಾದಳು.
"ಬ್ಯಾಡ ಹೋಗ್ಲಿಬಿಡು, ಹೋದದ್ದೇನು ಹಿಡಿ ಅನ್ನ ಒಂದ ಸಿಲ್ವಾರ ತಾಟ. ಅದೇನ ನಮ್ಮಿಬ್ರ ಹಸಿವನ್ನ ಬ್ಯಾರೆ ಕಿತ್ಗೊಂಡ ಹೋಗಿಲ್ಲ!!, ಸಂಜಿಕ ಮತ್ ಚಟಾಕ ಅಕ್ಕಿ ಹಾಕಿದ್ರಾತು, ನಾಳೆ ಸಂತ್ಯಾಗೊಂದ ಬ್ಯಾರೆ ತಾಟ ತಂದ್ರಾತು"
ಈ ಮಾತಿಗೆ ಕಾಂತಳ ಬಳಿಯಲ್ಲಿ ಉತ್ತರವಿರಲಿಲ್ಲ. ಮತ್ತೆ ಶಾಂತವ್ವಳೆ ಮುಂದುವರಿದು " ಮತ್ ಮುಂದ ಹ್ಯಾಂಗಪಾ ಜೀವ್ನಾ?" ಕೇಳಿದ ಪ್ರಶ್ನೆಗೆ ಕ್ಷಣ ಅವಕ್ಕಾದ ಕಾಂತಳು ಎದೆಯ ಮೇಲೆ ಜಾರಿದ್ದ ಸೀರೆ ಸೇರಗನ್ನು ಸರಿಪಡಿಸಿಕೊಂಡು, ಪಕ್ಕದಲ್ಲಿ ಬಿದ್ದಿದ್ದ ಬೇವಿನಕಡ್ಡಿಯನ್ನು ತೆಗೆದುಕೊಂಡು ನೆಲದ ಮೇಲೆ ಗೀರತೊಡಗಿದಳು.
ಇದನ್ನು ಕಂಡು ಶಾಂತವ್ವಳು ಮತ್ತೆ ತಾನೆ ಮಾತಿಗಿಳಿದಳು.
No comments:
Post a Comment