"ಅಯ್ಯೋ.. ಮೂದೇವಿ, ಎದ್ದೇಳೆ ನಿನಗೇನು ಹೊತ್ತುಗಿತ್ತು ಆಗೈತೆ ಇಲ್ಲೊ..? ಸೂರ್ಯ ಆಗ್ಲೇ ನೆತ್ತಿ ಮೇಲೆ ಬಂದವ್ನೆ" ಎಂದು ದಬದಬ ಬಾಗಿಲು ಬಡೆಯುತ್ತಿತ್ತು ಮುದುಕಿ. ಆ ಸದ್ದಿನ ಸಪ್ಪಳಕ್ಕೆ ಧಿಕ್ಕನೆ ಎದ್ದು ಕುಳಿತಳು ಮಂಜುಳಾ. ಗೋಡೆಗೆ ನೇತು ಹಾಕಿದ ಗಡಿಯಾರವ ನೋಡಿದಳು ರಾತ್ರಿ ಮೂರಕ್ಕೆ ಇಪ್ಪತ್ತಕ್ಕೆ ನಿಂತು ಬಿಟ್ಟಿದೆ. ಬೆಳಗ್ಗೆ ಐದು ಮೂವತ್ತಕ್ಕೆ ಎಬ್ಬಿಸಬೇಕಾದದ್ದು ಹಾಳಾದ್ದು ತಾನು ನಿಂತು ನನ್ನನ್ನು ಇವತ್ತು ಅತ್ತೆಯ ಕೈಯಿಂದ ಬೆಳಿಗ್ಗೆ ಬೆಳಿಗ್ಗೆಯೆ ಮಂಗಳಾರತಿ ಮಾಡಿಸುತ್ತಿದೆ ಎಂದುಕೊಂಡು ಮೆಲ್ಲನೆ ಏಳು ತಿಂಗಳ ಹೊಟ್ಟೆಯ ಹಿಡಿದುಕೊಂಡು ಮೇಲೆದ್ದು ತಲಬಾಗಿಲವ ತೆರೆದಳು. ಹಾಳ ಮುಖದ್ಲೆ... ಅತ್ತಿ ಮತ್ತಿಷ್ಟು ಶುರು ಹಚ್ಚಿಕೊಂಡು ಬಿಟ್ಲು, "ಅಯ್ಯೊ ನಿನ್ನ ದುರ್ಗವ್ವ ನುಂಗಿ ದ್ಯಾಮವ್ವ ನೀರ ಕುಡಿಲಿ, ಏದ್ದಿದ್ದ ಹೊತ್ತಾಗಿ ಅಂತಾದ್ರಾಗ ಮತ್ತ ನಿನ್ನ ನೀರ ಕಾಣ್ದ ಹಾಳ ಸುಡಗಾಡಿ ಮೊತಿ ತೋರ್ಸಿಬಿಟ್ಟೆಲ್ಲ, ಆತ ಇವತ್ತು ಸಂಜೆನ್ನೊದ್ರೊಳಗ ಏನ ಕಾದೈತೊ ಏನೊ, ಸರಿಸರಿ ದಾರಿಬಿಡು, ಕ್ವಾಣ ಊರ ಕ್ವಾಣ ನಾಳೆ ಹೊಟ್ಟಿ ತೆರ್ದ ಹಡದ್ರ ತಾಯಿ ಆಗಾಕಿ ಅದೀದಿ ಅಷ್ಟು ಗೊತ್ತಾಗದಿಲ್ಲನು ನಿನಗ " ಅಂತಾ ವಟಗುಡುತ್ತಾ ಹಾಗೆ ಊರಗೋಲನ್ನು ಹಿಡ್ಕೊಂಡು ಒಳಗೆ ಹೋದಳು. ತಡವಾಗಿ ಎದ್ದಿದ್ದಕ್ಕೆ ತನ್ನನ್ನೆ ಬೈದುಕೊಳ್ಳುತ್ತಾ, ಕೊಟ್ಗಿಯಲ್ಲಿದ್ದ ಎಮ್ಮೆಯನ್ನು ಮನೆಯನ ಪಕ್ಕದಲ್ಲಿದ್ದ ವೀರಭದ್ರೇಶ್ವರ ದೇವಸ್ಥಾನದ ಮೈದಾನದಲ್ಲಿದ್ದ ಬೇವಿನ ಗಿಡಕ್ಕೆ ಕಟ್ಟಿ ಬಂದು, ಸಗಣಿ ಸಾರಿಸಿ, ಅಂಗಳದ ಕಸ ಹೊಡೆದು, ನೀರನ್ನು ಹಣಿಸಿ, ಚುಕ್ಕಿಯ ಸೇರಿಸಿ ರಂಗೋಲಿಯನಿಟ್ಟು, ದಡಬಡನೆ ಬಂದು ಮೊಖವನ್ನು ತೊಳೆದುಕೊಂಡು ಒಲೆಯ ಹಚ್ಚಿದಳು ಚಹಾವ ಸೊಸಲು. ಚಹಾವ ಸೊಸಿ ಅತ್ತೆಗೆ ಕೊಟ್ಟು ಮನೆಯ ಪಕ್ಕದ ದೇವಸ್ಥಾನದ ಕಟ್ಟೆಯ ಮೇಲೆ ಮಲಗಿದ್ದ ಮಾನವನನ್ನು ಎಬ್ಬಿಸಿ ಅವರಿಗೆ ಕುಡಿಯಲಿಕ್ಕೆ ನೀರು, ಚಹಾವನ್ನು ಕೊಟ್ಟು ಬಂದು ಗಂಡನನ್ನು ಹುಡುಕಿದಳು. ಅವನ್ಯಾವಗಲೊ ಎದ್ದು ಹೋದ ಹಾಗಿತ್ತು, ಅಷ್ಟರಲ್ಲೇ ಸರಕಾರಿ ನಳವು ಝಳು ಝಳೆಂದು ಸದ್ದು ಮಾಡತೊಡಗಿತ್ತು ಅಕ್ಕಪಕ್ಕದವರು ಆವಾಗಲೆ ಎರಡೆರಡು ಕೊಡಗಳ ಪಾಳೆಯ ಹಚ್ಚತೊಡಗಿದ್ದರು. ಮಂಜುಳಾನು ಅವಸರಿಸಿ ಕೊಡವ ತೆಗೆದುಕೊಂಡು ಹೋಗಿ ಪಾಳೆಗಿಟ್ಟಳು. ಬಿಡುವುದೆ ಒಂದು ತಾಸು ನೀರು ಅಷ್ಟರಲ್ಲಿ ಎರಡು ದಿನಕ್ಕಾಗುವಷ್ಟು ನೀರನ್ನು ಹೊತ್ತು ಹಾಕಬೇಕಿತ್ತು. ಪಾಳೆಯ ಬಂದು ತುಂಬಿದ ಬಿಂದಿಗೆಯನ್ನು ಎತ್ತಿ ಕಂಕುಳಲ್ಲಿ ಇಟ್ಟುಕೊಳ್ಳಬೇಕೆಂಬಷ್ಟರಲ್ಲಿ ಹೊಟ್ಟೆಯ ಬಲ ಪಕ್ಕಡಿಯಲ್ಲಿ ಮುಳ್ಳಂತೆ ಚುಚ್ಚಿದ ಅನುಭವವಾಯಿತು. ಅದೊಂದೆ ಕೊಡವ ಹೊತ್ತು ತಂದು ಜಗುಲಿಯಲ್ಲಿಟ್ಟು, ಹೊಟ್ಟೆಯ ಹಿಡಿದುಕೊಂಡು, ಗೋಡೆಗೆ ತಲೆಕೊಟ್ಟು ಆಸರೆಯಾಗಿ ಕಣ್ಮುಚ್ಚಿ ನಿಂತು ರಾತ್ರಿ ನಡೆದ ಘಟನೆಯನ್ನು ನೆನಪಿಸಿಕೊಂಡು ಬೆಚ್ಚಿಬಿದ್ದಳು.
ಸಮಯ ಮಧ್ಯರಾತ್ರಿ ಹನ್ನೆರಡು ವರೆಯಾಗಿತ್ತು, ಓಣಿಯ ಬೀದಿಗಳೆಲ್ಲ ಅಲ್ಲೊ ಇಲ್ಲೊ ಬೀದಿ ನಾಯಿಗಳು ಬೌಂ... ಅನ್ನುವ ಕೂಗೊಂದನು ಹೊರತುಪಡಿಸಿ ನಿಶ್ಯಬ್ದವನ್ನು ಹೊದ್ದು ಮಲಗಿದ್ದವು, ಬಾಗಿಲ ಸಂದಿಯಲ್ಲಿ ಗುಯ್ಯಂ.. ಅನ್ನುವ ಹುಳದ ಶಬ್ದ, ವಲೆಯ ಮೇಲೆ ಮಾಡಿದ ಅಡುಗೆ ಆರಿ ಮಲಗಿತ್ತು, ಮಂಜುಳಾಳ ಕಣ್ಣುಗಳು ಮೆಲ್ಲಗೆ ನಿದ್ರೆಗೆ ಜಾರತೊಡಗಿದ್ದವು. ಡಬ್ ಡಬ್ ಎಂದು ಬಾಗಿಲ ಬಡಿತದ ಶಬ್ದ ಆ ಶಬ್ದಕ್ಕೆ ತಟ್ಟನೆ ಎಚ್ಚರವಾಗಿ ಎದ್ದು ಹೋಗಿ ಬಾಗಿಲನ್ನು ತೆರೆದಳು. ಗಂಡ ಸುರೇಶನು ಎಂದಿನಂತೆ ಇವತ್ತು ಹೊತ್ತಾಗಿ ಸ್ವಲ್ಪ ಕುಡಿದೆ ಬಂದಿದ್ದನು. " ಯಾಕೀಷ್ಟೊತ್ತು ಬಾಗ್ಲಾ ತಗಿಯಾಕ ?, ಎದೆಯುದ್ಕ ತಿಂದ ಕುಂತಬಿಟ್ಟಿದ್ದೇನ ಟಿ.ವಿ ನೋಡ್ಕೊಂಥ " ಎನ್ನುತ್ತಾ ಅವಳ ಭುಜವ ಹಿಡಿದು ಸರಿಸಿ ಒಳ ನಡೆದ ಇವಳಿಗೆ ಸ್ವಲ್ಪ ಗಾಭರಿಯಾಯಿತು ದಿನಕ್ಕಿಂತಲೂ ಇಂದು ಯಾಕೊ ಅವರ ಮಾತಲ್ಲಿ ತಿರಸ್ಕೃತ, ಸಿಟ್ಟಿನ ಭಾವ ಹೆಚ್ಚಾಗಿತ್ತು. ಬಟ್ಟೆಯ ಬದಲಿಸಿ ಮುಖವನ್ನು ತೊಳೆದುಕೊಂಡು ಊಟಕ್ಕೆ ಬಂದು ಕುಳಿತನು. ಮಂಜುಳಾನು ಮಾಡಿದಡುಗೆಯ ನೀಡಿ ಗೋಡೆಗೆ ಒರಗಿ ನಿಂತಳು. ಅನ್ನವನುಣ್ಣುವ ಮುಂದ ನೀಡಿದ ಸಾರು ತಣ್ಣಗಾಗಿತ್ತು. ತುತ್ತನ್ನು ಕೈಯಲ್ಲಿ ಹಿಡಿದುಕೊಂಡು " ಮನ್ಯಾಗ ಕುತ್ಕೊಂಡು ಏನ ಮಾಡ್ತೀದಿ ನೀನು, ಕತ್ತಿಗಿತ್ತಿ ಕಾಯಾಕರ ಹೋಗು ಏನ ನಿಮ್ಮವ್ವ ಅಡ್ಗಿ ಮಾಡಿ ನೀಡೊದನ್ನ ಹಿಂಗ ಕಲ್ಸ್ಯಾಳನು" ಎಂದು ಮಾತ ಮಾತನಾಡುತ್ತಲೆ ಕೈಯಲ್ಲಿದ್ದ ತುತ್ತನ್ನು ಅವಳ ಮುಖಕ್ಕೆ ಎಸೆದನು, ಕೋಪ ತಣ್ಣಗಾಗಲಿಲ್ಲವೇನೊ, ಅತ್ತ ಇತ್ತ ನೋಡಿ ಮುಂದಿ ಕುಡಿಯಲಿಕ್ಕೆಂದು ತುಂಬಿಟ್ಟಿದ್ದ ಚರಿಗೆಯನ್ನು ತೆಗೆದುಕೊಂಡು ಮಂಜುಳಾತ್ತ ಎಸೆದನು. ಅದು ನೇರವಾಗಿ ಬಂದು ಅವಳ ಬಲ ಪಕ್ಕಡಿಗೆ ಬಿದ್ದಿತು. ಉಸಿರೆ ನಿಂತಂತ ಅನುಭವವಾಗಿತ್ತು ಮಂಜುಳಾಳಿಗೆ ಹಾಗೆ ಹೊಟ್ಟೆಯ ಹಿಡಿದುಕೊಂಡು "ಅವ್ವಾ..." ಎಂದು ಚೀರಿ ಅಲ್ಲೆ ಹೊಟ್ಟೆಯ ಹಿಡಿದುಕೊಂಡು ಅಳುತ್ತಾ ಕುಳಿತು ಬಿಟ್ಟಳು. ಗಂಡನೆಂಬುವನು ಅವಳ ನೋವಿಗೆ ಕಿವಿಗೊಡದೆ ಹಾದಿಗೆ ದಿಂಬನು ಎತ್ತಿಕೊಂಡು ಮಾಳಿಗೆಯ ಹತ್ತಿಬಿಟ್ಟಿದ್ದನು. ಆ ನೋವನ್ನು ಹಾಗೊ ಹೀಗೊ ಸಹಿಸಿಕೊಂಡು ಸ್ವಲ್ಪ ಹೊತ್ತು ಬಿಟ್ಟು ಮೇಲೆದ್ದಳು, ಅಡುಗೆ ಮನೆಗೆ ಹೋಗಿ ಕೊಡದ ಮುಚ್ಚಳವನ್ನು ತೆಗೆದು ಚರಿಗೆ ನೀರನ್ನು ಕುಡಿದು ಹೊರಗೆ ಪಡಸಾಲೆಗೆ ಬಂದು ಅಲ್ಲಿಯೆ ಮೆಲ್ಲಗೆ ನೆಲದ ಮೇಲೆ ಹಾಸಿಕೊಂಡಿದ್ದ ಹಾದಿಗೆಯ ಮೇಲೆ ಮಲಗಿದಳು. ಹೊಟ್ಟೆಗೆ ಬಿದ್ದ ಪೆಟ್ಟಿಗೂ.. ಮದುವೆಯಾಗಿ ಐದು ವರುಷಗಳಲ್ಲಿ ಪಟ್ಟ ನೋವುಗಳ ನೆನೆದು ಕಣ್ಣಂಚಿನ ತುದಿಯಿಂದ ಕಣ್ಣೀರು ಜಾರಿ ತಲೆ ದಿಂಬನ್ನು ತೊಯಿಸುತ್ತಿದ್ದವು. ಮಲಗಿದಲ್ಲಿಯೆ ಮದುವೆಯ ನಂತರದ ದಿನಗಳನ್ನು ನೆನೆಯ ಹತ್ತಿದಳು.
"ಬೇಕಾಗಿಲ್ರೀ ನಿಮ್ಮ ಮಗಳು ನಮ್ಗ, ಒಂದು ತೊಲಿ ಬಂಗಾರ ಕೊಡೊದ ಅಗೋದಿಲ್ಲಂದ್ರ ನಿಮ್ಮ ಮಗ್ಳನ್ನ ಇಲ್ಲೆ ಇಟ್ಕೊಳ್ಳಿ ನಮಗೇನು ಜರುರತ್ತೇನಿಲ್ಲ, ನಿಮ್ಮ ಮಗಳ ಕೈಲೆ ರೊಟ್ಟಿ ತಿನ್ಬೇಕ ಅನ್ನೊದು. ಬಂಗಾರ ತಯಾರಾದಾಗ ಹೇಳ್ರಿ, ನಾನಾ ಖುದ್ದಾಗಿ ಬಂದು ಬಂಗಾರನ ನಿಮ್ಮ ಮಗ್ಳನ ಕರ್ಕೊಂಡು ಹೊಗ್ತೀನಿ. ಅಲ್ಲಿ ತನ್ಕ ನಿಮ್ಮ ಮಗ್ಳನ ಇಲ್ಲೆ ನಿಮ್ಮ ತವರ ಮನಿಯಾಗ ಇಟ್ಕೊಳ್ರಿ" ಅಂಥ ಅತ್ತೆ ಅಂದು ಮದುವೆಯಾದ ಮೂರೆ ದಿನಕ್ಕೆ ಹಾಕಿದ ಮೂರು ಗಂಟುಗಳಿಗೆ ಬೆಲೆ ಕೊಡದೆ, ಬೆನ್ನಿ ತಿರುಗಿಸಿ ನಡೆದುಬಿಟ್ಟಿದ್ದಳು. ಪಾಪ ಅಪ್ಪ ಎರಡು ಕೊಡ ನೀರು ತುಂಬಲು ಒಂದು ನಲ್ಲಿ ಇರದ ಮನೆಗೆ ಎರಡು ಲಕ್ಷ ಖರ್ಚು ಮಾಡಿ, ಅವರು ಕೇಳಿದಷ್ಟು ವರದಕ್ಷಿಣೆ ಬಂಗಾರವ ಕೊಟ್ಟಿದ್ದ ಅದೊಂದು ತೊಲಿಯ ಬಂಗಾರಕ್ಕಾಗಿ ನನ್ನ ಬಾಳು ಸಂಸಾರದ ಮೊದಲ ಮೆಟ್ಟಿಲಲ್ಲೆ ನಿಂತುಬಿಟ್ಟಿತು. ಬಂದು ಬಳಗದವರಾರು ಕೈ ಚಾಚಿ ಕೊಡಲು ಮುಂದೆ ಬರಲಿಲ್ಲ. ಅವರ ಗುಣವನರಿತಿದ್ದ ಅಪ್ಪನು ಅವರ ಮುಂದೆ ಕೈ ಚಾಚಿರಲಿಲ್ಲ. ನನ್ನಲ್ಲೆ ಕ್ಷಮೆ ಕೇಳಿ, ಕಣ್ಣೀರಿಟ್ಟು ಆ ಒಂದು ತೊಲೆಗಾಗಿ ಹಗಲಿರುಳು ದುಡಿಯಲು ಹತ್ತಿದ. ದಿನಗಳೆದಂತೆ ಕಷ್ಟಗಳು ಹೆಚ್ಚಾಗುತ್ತ ಹೋದಾವು, ಅಮ್ಮನ ಅರೋಗ್ಯ, ತಮ್ಮನ ವಿದ್ಯಾಭ್ಯಾಸ, ಹಬ್ಬ ಹರಿದಿನಗಳಿಗೆ ಬಂದು ಹೋಗುವ ಅಕ್ಕ, ಅವರ ಮಕ್ಕಳಿಗೆ ಬಟ್ಟೆ ಬರೆ ಹಾಗೆ... ನೋಡ ನೋಡುತ್ತಿದ್ದಂತೆಯೆ ನಾಲ್ಕು ವರ್ಷಗಳು ಕಳೆದು ಹೋದವು.
ಹಣವು ಹೊಂದಿತು. ಬಂಗಾರವು ಬಂದಿತು, ಅತ್ತೆಯ ಬಂದಿದ್ದಳು ತನ್ನ ನವವಧುವನ್ನು ಮನೆಯ ತುಂಬಿಸಿಕೊಳ್ಳಲು.
ಹ್ಞೂಂ.. ಇನ್ನೇನು ಉಳಿದಿತ್ತು ನವ ವಧುವಿನಲ್ಲಿ ಮದುವೆಯ ಹೊಸತರಲ್ಲಿ ಕಂಡ ಕನಸುಗಳು ಬೇರಿಲ್ಲದೆ ಕಮರಿದ್ದವು. ಮೈ ಕೈಗೆ ಹಚ್ಚಿದ ಅರಿಷಿಣದ ಬಣ್ಣ ಎಂದೊ ಮಾಸಿ ಹೋಗಿತ್ತು. ಸುರಿಗೆ ನೀರಲ್ಲಿ ಎರೆದ ದೇಹವು ವಿರಹದಿಂದಲೆ ಬಾಡಿ ಹೋಗಿತ್ತು. ಬಾಳಲ್ಲಿ ಈಗ ವಸಂತವೇನೊ ಬಂದಿತ್ತು ಆದರೆ ಅದರ ಚಿಗುರನು ತಿಂದು ಸಂತಸದಿ ಹಾಡುವ ಆಸೆ ಇರಲಿಲ್ಲ.
ಹೇಗೊ.. ಅಕ್ಕಿ ಬೆಲ್ಲದ ಸೇರನ್ನು ಒದ್ದು ಬಲಗಾಲಿಟ್ಟು ಒಳಗೆ ಬಂದೆ, ಆರತಿ ಶಾಸ್ತ್ರಗಳೊಂದಿಗೆ ಮಧುಮಂಚಕೆ ಹೋದೆ, ಇಷ್ಟು ದಿನಗಳ ಮೇಲಾದರೂ ಬಾಳಲಿ ಕಾಮನಬಿಲ್ಲು ಅರಳುವುದಲ್ಲ ಎಂದವಳಿಗೆ ಆಘಾತ ಕಾದಿತ್ತು. ಇವಳಿಗಿಂತ ಮುಂಚೆಯೆ ಸುರೇಶ ಸುರಪಾನವ ಸೇವಿಸಿ ಸುರಲೋಕದ ಪಯಣದಲ್ಲಿದ್ದ. ನಾಲ್ಕು ವರ್ಷಗಳಲ್ಲಿ ಹೇಗಿದ್ದೀಯಾ ಎಂದು ಕೇಳದವನು ಇಂದಾದರೂ.. ನನ್ನನೆತ್ತಿ ಅಪ್ಪಿ ಮುದ್ದಾಡುವನೇನೊ ಎಂದು ಕಂಡ ಕನಸು... ಕನಸಾಗಿಯೆ ಉಳಿಯಿತು... ನನಗನ್ನಿಸಿದ್ದು ಅಂದು ನಾ ದಾಟಿ ಬಂದದ್ದು ನರಕದ ಬಾಗಿಲೆಂದು. ಬೆಳಗಾಯಿತು.. ದಿನ ದಿನಕ್ಕೆ ಕೆಲಸದ ವೇಳೆಯು ನಿಗದಿಯಾಯಿತು.. ಕೆಲಸ ಮುಗಿದ ಮೇಲೆ ದಿನ ರಾತ್ರಿ ಗಂಡನ ಕಾಯುವ ಪಾಳೆಯಾಯಿತು. ಕುಡಿದ ಮತ್ತಿನಲಿ ಒಪ್ಪಿಯೊ.. ಒಪ್ಪದೇಯೊ.. ದೇಹವನುಂಡದ್ದಾಯಿತು.. ಬೆಳಗು ಕತ್ತಲೂ..ಕತ್ತಲೂ ಬೆಳಗಿನಾಟದೊಳಗೆ ಬಸುರು ಉಸಿರಿತು. ಅತ್ತೆಯು ನನ್ನ ತವರು ಮನೆಗೆ ಹೋಗಿ ಸೀಮಂತ ಕಾರಣಕ್ಕೆ ಹೋಗಿ ಬೇಡಿಕೆಯನ್ನಿಟ್ಟು ಬಂದಿದ್ದಳು. ಬಂದ ದಿನದಿಂದ ಶುರುವಾಗಿತ್ತು ಬೈಗಳುಗಳ ಸುರಿಮಳೆ, ಒಮ್ಮೊಮ್ಮೆ ಹೊಡೆತ
ಹಾಗೊ ಹೀಗೊ ಕುಂಟುತ್ತಾ ದಿನಗಳ ದೂಡುವ ಹೊತ್ತಿಗೆ.. ಈ ಕತ್ತಲಿಗೆ ಅವನ ಕೋಪದ ತಾಪಕ್ಕೆ ಹೊಟ್ಟೆಗೆ ಪೆಟ್ಟು ಬಿದ್ದಿತ್ತು. ಹಾಗೆ ಎಲ್ಲವ ನೆನೆಯುತ್ತಾ.. ನೆನೆಯುತ್ತಾ ನಿದ್ದೆಗೆ ಜಾರಿದ್ದೆ ಅರಿವಾಗಲಿಲ್ಲ.. ಅತ್ತೆಯು ಬೆಳಿಗ್ಗೆ ಬೈಯುತ್ತಾ ಬಾಗಿಲ ಬಡೆಯುವವರೆಗೂ ಎಚ್ಚರವಾಗಿರಲಿಲ್ಲ. " ಅಯ್ಯೋ.. ಬೇಗ ಬಾರೆ ಮಂಜು ನಿನ್ನ ಕೊಡ ತುಂಬಿತು " ಎಂದು ಎದುರುಮನೆ ಶಾಂತಕ್ಕ ಕೂಗಿದಾಗಲೆ ಕಳೆದ ಘಟನೆಗಳಲಿ ಲೀನವಾಗಿದ್ದ ಮಂಜು ಎಚ್ಚರವಾಗಿ ಮೊದಲೆ ತುಂಬಿದ್ದ ಕೊಡವನ್ನು ಹರಿವಿಗೆ ಸುರಿದು, ಮತ್ತೆ ನೀರನ್ನು ತರಲು ನಲ್ಲಿಯ ಕಡೆಗೆ ನೋವನ್ನು ಅವುಡುಗಚ್ಚುತ್ತಾ ನಡೆದಳು.
ಎಲ್ಲೆಲ್ಲೂ.. ಓಡಾಟದ ಸಂಭ್ರಮ ಆರತಿಯ ಹಾಡುಗಳು, ಚಿಕ್ಕ ಮಕ್ಕಳ ಕೇಕೆಗಳು, ತವರು ಸೀರೆಯನುಟ್ಟು ಉಡಿತುಂಬ....... ತುಂಬಿಕೊಂಡು ಗಂಡ ಸುರೇಶನೊಂದಿಗೆ ಸೀಮಂತ ಕಾರಣದ ಕಾರ್ಯಕ್ರಮದಲ್ಲಿ ಕುಳಿತುಕೊಂಡಿದ್ದರು.
ದೂರದೂರಿಂದ ಬಂದಂತಹ ಬೀಗರು, ಮನೆಯವರು, ಓಣಿಯ ಎಲ್ಲ ಮುತ್ತೈದೆಯರು ಆರತಿಯ ಮಾಡಿ ಹುಟ್ಟುವ ಮಗುವು ಬಂಗಾರದಂತಹ ಗುಂಡು ಕಲ್ಲಿನಂಥಹ ಗಂಡಾಗಲೆಂದು ಎಲ್ಲರೂ ಹರಸಿ ಹಾರೈಸುತ್ತಿದ್ದರು. ಮಂಜುಳಾನ ಅಪ್ಪ ಭೀಮಪ್ಪಜ್ಜನು ಅಳಿಯನಿಗೆ ಉಡುಗೊರೆಯಾಗಿ ಅರ್ಧ ತೊಲೆ ಬಂಗಾರದ ಸುತ್ತನ್ನು ಅವನ ನಡು ಬೆರಳಿಗೆ ತೋಡಿಸಿ ಹರಸಿದನು. ಅತ್ತೆ ರತ್ನವ್ವಳ ಮೊಗದಲ್ಲಿ ವಿಜಯದ ನಗು ಕುಣಿಯುತ್ತಿತ್ತು... ದೀಪದಾರತಿಯ ಬೆಳಕಿಗೆ ಸುತ್ತು ಫಳಫಳನೆ ಹೊಳೆಯುತ್ತಿತ್ತು..
ಅಷ್ಟೇಲ್ಲ ಸಂಭ್ರಮ ಸಡಗರಗಳ ನಡುವೆ ಬಾಗಿಲ ಸಂಧಿಯಲಿ ನಿಂತಿದ್ದ ಭೀಮಜ್ಜನ ಕಣ್ಣುಗಳಿಂದ ಜಾರಿದ ಹನಿಗಳನ್ನು ಯಾರು ಗಮನಿಸಿರಲಿಲ್ಲ... ತಾಯಿ ಕಾಯಿಲೆಯಿಂದ ಸಾವಿನಂಚಿನಲ್ಲಿ ಇದ್ದುದ್ದರಿಂದ ಈ ಶುಭ ಕಾರ್ಯಕ್ಕೆ ಬಂದಿರಲಿಲ್ಲ. ಅಬ್ಬಾ..!!! ಇನ್ನೇನು ಎಲ್ಲಾ ಸೂಸುತ್ರವಾಗಿ ಮುಗಿಯಿತೇನ್ನುವಷ್ಟರಲ್ಲಿಯೆ ಅಡುಗೆ ಬಡಿಸುತ್ತಿದ್ದ ಸ್ಥಳದಿಂದ ಗದ್ದಲದ ಸದ್ದು ಕೇಳಿ ಬಂದಿತ್ತು.
"ಏನೋ ಇಷ್ಟೇಲ್ಲಾ ಖರ್ಚು ಮಾಡಿ ಊಟಕ್ಕೆ ಉಪ್ಪಿನಕಾಯಿ ತಂದಿಲ್ವಾ, ಥೂ ನಿಮ್ಮ ಜನ್ಮಕ್ಕಿಷ್ಟು" ಅಂತಾ ಗಂಡನ ಮನೆಯ ಕಡೆಯ ಬೀಗರೊಬ್ಬರು ಉಪ್ಪಿನಕಾಯಿಯ ಸಲುವಾಗಿ ಜಗಳವನ್ನು ಪ್ರಾರಂಭಿಸಿಬಿಟ್ಟಿದ್ದರು. ಯಾರು ಎಷ್ಟೇ ಸಮಾಧಾನಪಡಿಸಿದರು ಸಮಾಧಾನವಾಗದೆ, ಅತ್ತೆಯೂ... ಮಧ್ಯಸ್ಥಿಕೆ ವಹಿಸಿ ಇತ್ಯರ್ಥಗೊಳಿಸಬೇಕೆನ್ನುವಷ್ಟರಲ್ಲಿ, " ಏನಮ್ಮ ನಿಮ್ಮ ಮನೆ ಕಾರ್ಯಕ್ಕೆ ಬಂದವರಿಗೆ ಛಲೋ ಮರಿಯಾದಿನ ಕೊಟ್ರಿ ಬಿಡ್ರಿ" ಎಂದು ಬಿಟ್ಟ ಒಬ್ಬ ಆಸಾಮಿ. ಇಷ್ಟು ದಿನದ ಹೊಟ್ಟೆಯೊಳಗಿನ ಎಲ್ಲ ಕೆಸರನ್ನು ಹೊರಹಾಕಿ, ಶುಭಕಾರ್ಯವನ್ನು ಅಶುಭವಾಗಿ ಮಾರ್ಪಾಡಿಸಿಬಿಟ್ಟಳು. ಮಂಜುಳಾಳ ತಂದೆ ಎಷ್ಟೇ ಪರಿಪರಿಯಾಗಿ ಬೇಡಿಕೊಂಡರು, ಕವಡೆ ಕಾಸು ಕಿಮ್ಮತ್ತು ಕೊಡದೆ, ಉಟ್ಟ ಬಟ್ಟೆಯಲ್ಲೆ ಎಲ್ಲ ಬಂಧು ಬಾಂಧವರ ಎದುರಿನಲ್ಲಿ ತುಂಬು ಗರ್ಭಿಣಿಯನ್ನು ಹೊರದಬ್ಬಿಬಿಟ್ಟರು. ಹಣೆಬರಹಾನ ಯಾರ ತಪ್ಪಿಸೊಕೆ ಸಾಧ್ಯ ಬನ್ನಿ ಹೋಗೊಣ ದೇವರಿದ್ದಾನೆ ಎನ್ನುತ್ತಾ ಎಲ್ಲ ಹೆಣ್ಣಿನ ಕಡೆಯವರು ಹೊರಟು ನಿಂತರು. ಮಂಜುಳಾ ಇಲ್ಲಿಗೆ ನನ್ನ ಗಂಡನ ಮನೆಯ ಹೊಸ್ತಿಲು ಭಾಗ್ಯ ಮುಗಿಯಿತೇನೊ ಎಂಬಂತೆ ಎರಡು ಕ್ಷಣ ನಿಂತು, ಹೊಟ್ಟೆಯ ಹಿಡಿದುಕೊಂಡು ಅಪ್ಪನ ಕಡೆ ಒಮ್ಮೆ ನೋಡಿ, ಕಣ್ಣೀರನ್ನು ಒರೆಸಿಕೊಂಡು " ಸಾಕಪ್ಪ ಈ ಬಾಳ್ವೆ, ನನ್ನ ಕರುಳಬಳ್ಳಿ ಯಾವುದೆ ಇರಲಿ, ನಾನೆ ದುಡಿದು ಸಂಪಾದಿಸಿ, ಆ ಕಂದನನ್ನು ಹೆಮ್ಮರವಾಗಿ ಬೆಳೆಯುವಂತೆ ನಾನು ಹಗಲಿರುಳು ಕಷ್ಟ ಪಡುವೆ, ನಿ ಚಿಂತಿಸದಿರು, ಸಾಕು ನಡೆಯಿರಿ ಇಲ್ಲಿಂದ ಅವರು ಮಾಡಿದ ಅವಮಾನದಿಂದ ಈಗಲೆ ಸಾಕಷ್ಟು ಹೊಟ್ಟೆ ತುಂಬಿದೆ, ಇನ್ನಷ್ಟು ಹೆಚ್ಚಿನದನ್ನು ನಾವು ಬಯಸಿದರೆ ಅದು ಅಜೀರ್ಣವಾದಿತು". ಎನ್ನುತ್ತಾ ಮಂಜುಳಾ ತನ್ನಪ್ಪನ ಕೈಯನ್ನು ಹಿಡಿದುಕೊಂಡು ಬಸ್ ನಿಲ್ದಾಣದ ಕಡೆಗೆ ನಡೆದಳು.
"ಅಮ್ಮಾ " ಎಂದು ಜೋರಾಗಿ ಕಿರುಚಿದಳು ಮಂಜುಳಾ, ಆ ಕಿರುಚುವಿಕೆಯ ಹಿಂದೆಯೆ ಮಗುವಿನ ಅಳುವಿನ ಶಬ್ದವು ಅರಳಿತು ಮಧ್ಯರಾತ್ರಿಯಲ್ಲಿ, ಭೀಮಜ್ಜನ ಕಣ್ಣುಗಳಲ್ಲಿ ಕಾಂತಿ, ತಾಯಿ ಮಗು ಆರೋಗ್ಯವಾಗಿರುವುದನ್ನ ವಿಚಾರಿಸಿಕೊಂಡು ಸಮಾಧಾನದ ನಿಟ್ಟುಸಿರನ್ನು ಬಿಟ್ಟನು. ಮಂಜುಳಾಳು ಗಂಡು ಮಗುವಿಗೆ ಜನ್ಮವನಿತ್ತಿದ್ದಳು. ತವರುಮನೆಯಲ್ಲಿ ಸಂತಸಕ್ಕೆ ಪಾರವೆ ಇರಲಿಲ್ಲ, ಮತ್ತೆ ದೀಪಾವಳಿ ಬಂದಿತೆಂದು ಮನೆಯವರೆಲ್ಲರೂ ಸಂಭ್ರಮಿಸಿದರು. ಇತ್ತ ಗಂಡನ ಮನೆಯವರಿಗೆ ಸುದ್ಧಿ ತಿಳಿದ ತಕ್ಷಣವೆ ಅತ್ತೆ ರತ್ನವ್ವಳಿಗೆ ಬೆಟ್ಟದಷ್ಟು ಸಂತೋಷದೊಂದಿಗೆ, ಆದ ಘಟನೆಯ ನೆನೆದು ಹಲುಬತೊಡಗೊದಳು. ಹೇಗೊ ಮತ್ತೆ ಊರ ಜನರ ಪಂಚಾಯ್ತಿ ಸೇರಿಸಿ, ಭೀಮಜ್ಜನ ಮನೆ ಬಾಗಿಲವರೆಗೂ ಬಂದು, ಮೊಮ್ಮಗನನ್ನು ಎತ್ತಿ ಸಂತೋಷಿಸಿದಳು, ಬಹಳ ವಿಜೃಂಭಣೆಯಾಗಿ ತೊಟ್ಟಿಲ ಕಾರ್ಯಕ್ರಮವು ನೇರವೇರಿತು.
ಹಳೆಯ ನೆನಪುಗಳ ಎಲೆಗಳುದಿರಿ ಹೊಸ ಕನಸುಗಳ ಚಿಗುರುಗಳು ಚಿಗುರೊಡೆಯುವುವೇನೊ.. ಬಾಳಲ್ಲಿ ಎಂದುಕೊಂಡಿದ್ದ ಮಂಜುಳಾಳ ಮನದಲ್ಲಿ ಇನ್ನೂ ದುಗುಡುವು ಮನೆ ಮಾಡಿತ್ತು. ಗಂಡನು ಅಷ್ಟಕ್ಕಷ್ಟೇ, ಮಾವ ಲೆಕ್ಕಕ್ಕಿಲ್ಲ, ಇನ್ನೂ ತಾಸು ತಾಸಿಗೂ ಬುದ್ದಿ ಬದಲಾಯಿಸುವ ಅತ್ತೆಯ ನೆನಸಿಕೊಂಡರೆ ಮೈಯಲ್ಲೆಲ್ಲಾ ನಡುಕ, ಯಾವ ಹೊತ್ತಿನಲಿ ಯಾರ ಮಾತ ಕೇಳಿ ನನ್ನನ್ನು ಹೊರಗೆ ದೂಡಿದರೆ !!! ಏನು ಮಾಡುವುದು? ಎಂಬ ಆತಂಕವೊಂದು ಅನುದಿನವು ಮಂಜುಳಾಳನ್ನು ಕಾಡುತ್ತಿತ್ತು. ಬೇಡ... ಬೇಡ ಇಷ್ಟು ದಿನ ಅವರೊಂದಿಗಿದ್ದು ಅವರು ಕೊಟ್ಟ ನೋವನ್ನು ಅನುಭವಿಸಿದ್ದು ಸಾಕು. ಮಡಿಲಲ್ಲಿ ಬೆಂಕಿಯಂತ ಗಂಡು ಮಗನಿದ್ದಾನೆ, ಇವನಿಗಿಂದು ನಾನಾಸರೆಯಾದರೆ, ನಾಳೆ ಇವನು ನನಗಾಸರೆಯಾಗಲಾರನೇನು? ಇದೊಂದೆ ನನ್ನ ಕನಸು, ಈ ಕನಸನ್ನು ಪೂರ್ಣಗೊಳಿಸಲು ನಾನು ಅಣಿಗೊಳ್ಳಬೇಕಿದೆ, ನಾ ಕಂಡ ಕನಸು ಕಾಮನಬಿಲ್ಲಾಗದೆ, ಸದಾ ರವಿಯ ಕಿರಣದಂತೆ ನಳನಳಿಸುತಿರಬೇಕು. ಎಂದು ಕಣ್ಮುಚ್ಚಿ ಮಗುವಿಗೆ ಎದೆಹಾಲನ್ನು ಕುಡಿಸುತ್ತಾ ಕುಳಿತಿದ್ದ ಮಂಜುಳಾಗೆ ಮಗುವು, ಕೆಮ್ಮಿ, ಕೆಮ್ಮಿ ಕುಡಿದ ಹಾಲನ್ನೆಲ್ಲ ಕಕ್ಕಿಬಿಟ್ಟಿತು, ಮುಂಜಾನೆ ಸ್ವಲ್ಪ ಹುಳಿ ಜಾಸ್ತಿ ಉಂಡಿದ್ದಕ್ಕಾಗಿ ಅವನು ಈ ಥರ ಕಕ್ಕಿರಬೇಕೆಂದು ಮಂಜುಳಾ ಸುಮ್ಮನಾದಳು. ಸಂಜೆಯವರೆಗೂ ಇದೆ ಪುನರಾವರ್ತನೆಯಾಗತೊಡಗಿತು. ರಾತ್ರಿ ವೇಳೆಗೆ ವ್ಯಧ್ಯರ ಹತ್ತಿರ ಹೋಗಿ ಔಷದಿಯ ಬರೆಸಿಕೊಂಡು ಬಂದಳು. ದಿನದಿಂದ ದಿನಕ್ಕೆ ಖಾಯಿಲೆ ಹೆಚ್ಚಾಗುತ್ತಲೆ ಹೋಯಿತು, ಗಂಡನ ಮನೆಗೆ ತಿಳಿಸಿದರೆ ಅವರ್ಯಾರು ಹೆಚ್ಚಿಗೆ ತಲೆಯನ್ನು ಕೆಡಸಿಕೊಳ್ಳಲಿಲ್ಲ, ಮಂಜುಳಾ ಮತ್ತು ಭೀಮಜ್ಜ ಇಬ್ಬರೂ ಕೂಸನ್ನು ಕರೆದುಕೊಂಡು ಇಲಕಲ್ ನ ದೊಡ್ಡ ದವಾಖಾನೆಗೆ ತೋರಿಸಿಕೊಂಡು ಬರಲು ಹೊರಟರು. ವಿಧಿ ದಾರಿ ಮಧ್ಯೆದಲ್ಲಿ ಕಾದು ಕುಳಿತಿದ್ದು ಮಂಜುಳಾಳ ಮಗನ ಪ್ರಾಣಹರಣವನ್ನು ಮಾಡಿಬಿಟ್ಟಿತು. ನಡುದಾರಿಯಲ್ಲೆ ಇಳಿದು, ಅಲ್ಲೆ ಪಕ್ಕದಲ್ಲೆ ಹೊಲದ ಬದುವಿಗೆ ಇದ್ದ ಬೇವಿನ ಮರದ ನೆರಳಿಗೆ ಕುಳಿತು ಮಡಿಲಲ್ಲಿ ಮಗುವನ್ನು ಮಲಗಿಸಿಕೊಂಡು, ಮುಳುಗುತ್ತಿರುವ ಸೂರ್ಯನನ್ನೆ ದಿಟ್ಟಿಸುತ್ತಾ ಕುಳಿತಳು, ಅವಳ ಮನದಲ್ಲಿ "ದೇವರು ನನಗೆ ಏತಕೆ ಬೇರುಗಳಿಲ್ಲ ಕನಸುಗಳನ್ನು ಕಟ್ಟಿಕೊಟ್ಟನು". ಎಂಬ ಪ್ರಶ್ನೆಯು ಕಾಡುತ್ತಿದ್ದರೆ, ಇದ್ದ ಒಂದು ಕನಸು ಕಮರಿಹೋಗಿದ್ದನ್ನು ಕಂಡು, ನಾಳೆಗೆ ಮೂಡುವ ಸೂರ್ಯನ ಭರವಸೆಯನ್ನು ಹೊಂದದೆ ಭೀಮಜ್ಜ ಮಗಳ ರಟ್ಟೆಯನ್ನು ಹಿಡಿದೆಬ್ಬಿಸಿ, ಮರಳಿ ತಮ್ಮೂರಿಗೆ ಕಡೆಗೆ ಭಾರವಾದ ಹೆಜ್ಜೆಗಳ ಹಾಕುತ್ತ ನಡೆದರು.
No comments:
Post a Comment