ಅಬ್ಬಾ..!!! ಅದೆಂತಹ ಸುಂದರ ಸಂಜೆ, ರವಿಯು ತನ್ನ ದಿನದ ಕೆಲಸವ ಮುಗಿಸಿಕೊಂಡು ಪಶ್ಚಿಮಾತ್ಯದೊಳು ಮುಳುಗುವ ಹೊತ್ತು. ಬೆಳಿಗ್ಗೆಯಿಂದಲೂ ಬಿಸಿಲಲಿ ಸುತ್ತಾಡಿ ಮೈಯೆಲ್ಲ ಬೆವರಿನಿಂದ ತೊಯ್ದು ಬಟ್ಟೆ ಮೈಗೆ ಅಂಟಿಕೊಂಡು ಅಂಟಂಟಾಗಿತ್ತು. ಮೂಡಣದ ಸಣ್ಣಗೆ ತಣ್ಣಗೆ ಬೀಸತೊಡಗಿದ ಗಾಳಿಯು, ನನ್ನನು ಎದೆತುಂಬ ಹಾಲುಣಿಸಿ ತೊಟ್ಟಿಲಲಿ ಮಗುವನು ಹಾಕಿ ಜೋಗುಳವ ಹಾಡುತ್ತ ಹಸುಕಂದನನ್ನು ಮಲಗಿಸುವಂತಹ ಅನುಭವವನ್ನು ನೀಡಿತು, ನಾನು ಮಿತ್ರ ಚಂದ್ರು ರಾಜಸ್ಥಾನ ವಿಶೇಷ ಪಾನಿಪುರಿಯನ್ನು ತಿನ್ನಲು ಒತ್ತು ಅಂಗಡಿ ಬಳಿ ಬಂದು ನಿಂತಿದ್ದೇವು. ಹಿಂದೆಯೆ ಆಲದ ಮರ. ಆ ಮರದ ರೆಂಬೆಗಳ ತುದಿಗಳಲಿ ಆಗ ತಾನೆ ಗೂಡು ಸೇರುತ್ತಿದ್ದ ಗಿಳಿಗಳ ಚಿಲಿಪಿಲಿ ಹಿಂಡು, ಆ ಮರದ ಕೆಳಗೆ ಚಿಕ್ಕ ಉದ್ಯಾನವನ, ಕೆಲವು ಮಕ್ಕಳೊಂದಿಗೆ ತಾಯಂದಿರು ಅವರೊಡಗೂಡಿ ತಾವು ಚಿಕ್ಕ ಮಕ್ಕಳ ಹಾಗೆ ಆಡಿ ಓಡಾಡಿ ತಮ್ಮ ದಿನದ ಕೆಲಸದ ಒತ್ತಡವನ್ನು ಕಳೆದುಕೊಳ್ಳುತ್ತಿರುವುದನ್ನು ಅವರ ಮೊಗದಲ್ಲಿ ಕಾಣಬಹುದಾಗಿತ್ತು.. ಹಾಗೆ ನೋಡ್ತಾ ನೋಡ್ತಾನೆ ಅಂಗಡಿಯವನು ಎರಡು ಬಿಸಿಬಿಸಿ ಕಚೋರಿಯನ್ನು ಮಾಡಿಕೊಟ್ಟನು.. ಅವನು ಅದಕ್ಕೆ ಹಾಕಿದ ಗರಂ ಮಸಾಲೆಯ ವಾಸನೆಗೆ ಹೊಟ್ಟೆಯೊಳಗೆ ಮತ್ತಷ್ಟು ಹಸಿವಿನ ಕಾವು ಹೆಚ್ಚಾಯಿತು ಇನ್ನೇನು ಒಂದು ತುತ್ತನ್ನು ಬಾಯಲ್ಲಿ ಇಟ್ಕೊಳ್ಳಬೇಕು ಅಷ್ಟರಲ್ಲಿ ಒಂದು ಮಗು ಮಮ್ಮಿ...ಮಮ್ಮಿ ... ಆಯ್ ವಾಂಟ್ ನೂಡಲ್ಸ.. ಎಂದು ರಚ್ಚೆ ಹಿಡಿಯಿತು. ಆ ತಾಯಿಯು ಒಂದು ಪ್ಲೇಟ್ ನೂಡಲ್ಸನ್ನು ಹೇಳಿದಳು. ನನಗೆ ಏಕೊ ಏನೊ ಆ ಕ್ಷಣ ಆ ಕಚೋರಿಯನ್ನು ತಿನ್ನಬೇಕೆಂಬ ಮನಸ್ಸಾಗಲಿಲ್ಲ. ಮನಸ್ಸು ನನ್ನನು ನನ್ನ ಬಾಲ್ಯದ ದಿನಗಳಿಗೆ ಕರೆದೊಯ್ಯಿತು. ಮತ್ತೆ.. ಮತ್ತೆ ನನ್ನವ್ವ ನನಗೆ ನೀಡುತ್ತಿದ್ದ ಕೈ ರುಚಿಯ ಸವಿಯ ನೆನಪಾಗಿಸಿತು.
ನನಗೆ ತಿಳುವಳಿಕೆ ಬಂದಾಗಿನಿಂದಲೂ ನಮ್ಮವ್ವ ಹೇಳುತ್ತಿದ್ದಳು ನಾನು ಹಠಮಾರಿಯಂತೆ, ಕೇಳಿದ್ದನ್ನು, ಕಂಡದ್ದನ್ನು ಕೊಡಿಸುವವರೆಗೂ ಬೀಡುತ್ತಿರಲಿಲ್ಲವಂತೆ. ನನಗಿನ್ನು ಚೆನ್ನಾಗಿ ನೆನಪಿದೆ. ನಾನು ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಶಾಲೆಗೆ ಹೋಗಲು ಬಹಳಷ್ಟು ಹಠವನ್ನು ಮಾಡುತ್ತಿದ್ದೆ, ನಮ್ಮ ಚಹಾದಂಗಡಿಯ ಆಳುಗಳು ನನ್ನನ್ನು ಕೈ ಕಾಲು ಕಟ್ಟಿ ಶಾಲೆಗೆ ಹಾಕಿ ಬರುತ್ತಿದ್ದರು. ಶಾಲೆಯೊಳಗೆ ಹೋದ ಮೇಲೆ ರಾಯಬಾಗಿ ಗುರುಗಳ ಬೆತ್ತದ ರುಚಿನು ಸವಿಬೇಕಾಗಿತ್ತು, ವಿಧಿಯಿಲ್ದೆ ಮಧ್ಯಾಹ್ನದವರೆಗೂ ಒಂದು ಮೂಲೆಯಲ್ಲಿ ಕುಳಿತಿರುತ್ತಿದ್ದೆ. ಮಧ್ಯಾಹ್ನ ಊಟಕ್ಕೆ ಬಿಟ್ಟಾಗ
ಓಡೋಡಿ ಮನೆಗೆ ಬರುತ್ತಿದ್ದೆ. ನಮ್ಮವ್ವನಿಗೆ ಗೊತ್ತು ನನಗೆ ಯಾವ ರೀತಿಯಲ್ಲಿ ಕೈ ತುತ್ತನ್ನು ಉಣ್ಣಿಸಬೇಕೆಂದು. ಆ ರುಚಿಗಾಗಿಯೆ ಅಷ್ಟು ದೂರದ ಶಾಲೆಯಿಂದ ಓಡೋಡಿ ಬರುತ್ತಿದ್ದೆ. ಅವ್ವ ಮಧ್ಯಾಹ್ನಕ್ಕೆ ಬಿಸಿಬಿಸಿ ಅನ್ನ, ಆ ಅನ್ನದ ಮೇಲೆ ಬ್ಯಾಳಿ ಸಾರು, ಕುಟ್ಟಿದ ಗುರಳ್ಳ ಚಟ್ನಿ, ಒಂದು ಚಮಚೆ ತುಪ್ಪ, ಅಪ್ಪ ಶೇಂಗಾ ಎಣ್ಣೆಯಲ್ಲಿ ಕರೆದ ಮಿರ್ಚಿ, ಎಲ್ಲವನ್ನು ಕಲಿಸಿ ಒಂದು ತುತ್ತನ್ನು ನನ್ನ ಬಾಯಿಗೆ ಇಟ್ಟು, ಮಿರ್ಚಿ ಬಜಿಯನ್ನು ತಿನ್ನಿಸುತ್ತಿದ್ದರೆ..... ಆಹಾ...!!! ಹಾ...! ನೆನೆದಾಗಲೆಲ್ಲ ಬಾಯ್ತುಂಬ ನೀರು ಬರುತ್ತದೆ. ಅಷ್ಟುಂಡು ನೀರನ್ನು ಕುಡಿದು ಶಾಲೆಗೆ ಹೋಗುತ್ತಿದ್ದೆ, ಒಂದು ಬಟ್ಟಲವನ್ನು ತೆಗೆದುಕೊಂಡು ಈಗೀನ ಹಾಗೆ ಪ್ಲಾಸ್ಟಿಕ್ ಹಾಳೆಗಳ ಕಾಟವಿರಲಿಲ್ಲ. ಸಂಜೆ ನಾಲ್ಕಕ್ಕೆ ಸರಿಯಾಗಿ ಗೋಧಿ ಉಪ್ಪಿಟ್ಟು ಬರುತ್ತಿತ್ತು. ಎಲ್ಲ ಗೆಳೆಯರೊಂದಿಗೆ ಸಾಲಿನಲ್ಲಿ ನಿಂತು, ಬಟ್ಟಲಿನಲ್ಲಿ ಉಪ್ಪಿಟ್ಟನ್ನು ಹಾಕಿಸಿಕೊಂಡು ಮನೆಗೆ ಓಡೋಡಿ ಬರುತ್ತಿದ್ದೆ. ಆ ಉಪ್ಪಿಟ್ಟಾದರೂ ಎಷ್ಟು ರುಚಿಯಿರುತ್ತಿತ್ತು, ಉಳ್ಳಾಗಡ್ಡಿ, ಎಣ್ಣೆ, ಹಸಿ ಮೆಣಸಿನಕಾಯಿ ಇವನ್ನಷ್ಟೆ ಹಾಕಿ ಮಾಡಿರುತ್ತಿದ್ದರು, ಮನೆಗೆ ತಂದ ಮೇಲೆ, ಅದಕ್ಕೆ ಅವ್ವ, ಕುಟ್ಟಿದ ಒಣಮೆಣಸಿನಕಾಯಿ ಖಾರ ಕಲಿಸಿ, ಅದರ ಜೊತೆಗೆ ಚೂರು ಹಾಲಿನ ಕೆನೆಯನ್ನು ಹಾಕಿ, ಕಲಿಸಿ ಬಾಯಲ್ಲಿ ಒಂದು ತುತ್ತನು ಇಡುತ್ತಿದ್ದರೆ, ಈ ಸಂಜೆಗೆ ಈ ಹೊತ್ತು ತಿನ್ನಲು ಕುಳಿತಿರುವ, ಕೇಳುತ್ತಿರುವ ಈ ಆಹಾರವನ್ನು ನೋಡಿದರೆ ಅವೆಲ್ಲದರ ಮುಂದೆ ಸಪ್ಪೆ ಎನಿಸತೊಡಗಿತು ನನಗೆ.
ಇನ್ನೊಂದು ಘಟನೆ ನೆನಪಾಯಿತು ನನಗೆ, ಅದು ಬಿ.ಎ. ಪದವಿಯನ್ನು ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಮನೆಯವರೆಲ್ಲರೂ ಸೇರಿಕೊಂಡು ದಕ್ಷಿಣ ಕನ್ನಡದತ್ತ ಪ್ರಯಾಣವನ್ನು ಬೆಳಸಿದ್ದೇವು. ಮೈಸೂರನ್ನು ನೋಡಿಕೊಂಡು ಶ್ರೀರಂಗಪಟ್ಟಣಕ್ಕೆ ಹೋಗುವಾಗ ಬಹಳಷ್ಟು ಕತ್ತಲಾಗಿಬಿಟ್ಟಿತ್ತು, ಎಲ್ಲರ ಹೊಟ್ಟೆಯು ಹಸಿದಿತ್ತು, ಗಾಡಿಯಲ್ಲಿ ಅಡುಗೆ ಮಾಡಿಕೊಳ್ಳುವ ಎಲ್ಲ ಸಾಮಾನುಗಳಿದ್ದರೂ....ಹೊತ್ತಾಗಿಬಿಟ್ಟಿತ್ತು, ದಾರಿ ಮಧ್ಯದಲ್ಲಿ ಚನ್ನರಾಯಪಟ್ಟಣದ ಬಸ್ ನಿಲ್ದಾಣದಲ್ಲಿ ವಾಹನವನ್ನು ನಿಲ್ಲಿಸಿ, ಊಟದ ವ್ಯವಸ್ಥೆಗಾಗಿ ಹುಡುಕಾಡಿದವು ಅಷ್ಟೊಂದು ಹೊತ್ತಿನಲ್ಲಿ ಏನು ಸಿಗಲಿಲ್ಲ, ಒಂದು ಅಂಗಡಿಯಲ್ಲಿ ಬಿಸಿಬಿಸಿ ಮಿರ್ಚಿ ಬಜಿಯನ್ನು ಹಾಕುತ್ತಿದ್ದರು, ಎಲ್ಲರಿಗೂ ಎರಡೆರಡು ತಿನ್ನಲು ಬರುವಷ್ಟು ಬಜಿಯನ್ನು ಅಪ್ಪನು ತಂದುಕೊಟ್ಟನು.
ಮಧ್ಯಾಹ್ನ ಮೈಸೂರ ಅರಮನೆಯ ಹೊರಾಂಗಣದಲ್ಲಿ ಮಾಡಿದ್ದ ಅನ್ನವು ಉಳಿದಿತ್ತು. ನಿಲ್ದಾಣದ ಬಯಲಿನಲ್ಲಿ ತಾಡಪಾಲನ್ನು ಹಾಸಿದೆವು, ದಿನವಿಡಿ ಗಾಡಿಯಲ್ಲಿ ಕುಳಿತು ಮೈಯಲ್ಲ ಬೇವರಿನಿಂದ ಸೆಕ್ಕಿಟ್ಟು ಹೋಗಿತ್ತು, ತಣ್ಣನೆ ಇರುಳಗಾಳಿ ತನುವನೆಲ್ಲವನು ತಣಿಸಿತ್ತು, ಸುತ್ತಮುತ್ತಲೆಲ್ಲ ಚುಕ್ಕಿಗಳ ಮಂದ ಬೆಳಕು ಚೆಲ್ಲಿತ್ತು, ಹೊಟ್ಟೆಯು ಬಿಸಿ ಮಿರ್ಚಿಯ ವಾಸನೆಗಾಗಲೆ ಚುರ್ರಗುಟ್ಟಿತ್ತು, ನಮ್ಮ ದುರಾದೃಷ್ಟಕ್ಕೆ ಆ ಮಧ್ಯಾಹ್ನದ ಅನ್ನದೊಂದಿಗೆ ಚಿಪಿ ತಿನ್ನಲು ಒಂದು ಹೋಳು ಉಪ್ಪಿನಕಾಯಿಯು ಉಳಿದಿರಲಿಲ್ಲ, ಊರಿಂದ ಕಟ್ಟಿಕೊಂಡು ಬಂದಿದ್ದ ಕಡ್ಲಿಪುಡಿಯೊಂದೆ ಉಳಿದಿತ್ತು. ಅವ್ವ ಅದನ್ನೆ ಎಲ್ಲರ ತಾಟಿಗೆ ಅನ್ನವ ಬಡಿಸಿ ಮೇಲಿಷ್ಟು ಕಡ್ಲಿಪುಡಿಯನ್ನು ಹಾಕಿಕೊಟ್ಟಳು, ನನಗಾವಗಲೇ ಹಿರಿಯರ ಒಂದು ಮಾತು ನೆನಪಿಗೆ ಬಂದಿತ್ತು "ಹೊಟ್ಟೆ ಹಸಿದು ಸಾಯೋ ಮುಂದ ಹಳಸಿದ್ದು ಮೃಷ್ಟಾನ್ನವಾಗುತ್ತದೆ". ಎಂಬುದು ಹಾಗೆ ಅನ್ನ ಚಟ್ನಿ ಎರಡನ್ನು ಕಲಿಸಿಕೊಂಡು ಒಂದು ತುತ್ತು ಬಾಯಿಗಿಟ್ಟುಕೊಂಡು ಮಿರ್ಚಿಯನ್ನು ಕಡೆದು ತಿಂದರೆ... ಹ್ಮ....ಹ್ಮ...ಹ್ಮ... ನನಗೀಗಲೂ ಬಾಯಲ್ಲಿ ನೀರು ಸುರಿಯುತ್ತದೆ. ಇಂತಹ ಅನೇಕ ಘಟನೆಗಳು ನನ್ನ ನೆನಪಿನ ಬುತ್ತಿಯಲ್ಲಿ ಭದ್ರವಾಗಿವೆ, ಈಗ ಶ್ರಾವಣ ಬಂತೆಂದರೆ ಮನೆಯಲ್ಲಿ ಕಡ್ಲಿ ಹಿಟ್ಟಿನ ಕರದಂಟನ್ನು ಮಾಡುತ್ತಾರೆ, ನಾನು ಚಿಕ್ಕವನಿದ್ದಾಗ ಅರ್ಧ ಕೆ.ಜಿ.ಯಷ್ಟು ತುಪ್ಪವನ್ನು ನಾನೊಬ್ಬನೆ ವಾರದಲ್ಲಿ ತಿಂದು ಮುಗಿಸುತ್ತಿದೆ, ಅದ್ಹೇಗೆಂದರೆ ಹೇಳಿದರೆ ನಿಮ್ಮ ಬಾಯಲ್ಲೂ ನೀರು ಬಾರದೆ ಇರದು. ಒಂದು ಕರದಂಟಿನ ಬಿಲ್ಲೆ ಮೇಲೆ ಅದರ ಮೇಲ್ಮೈ ತುಂಬಾ ತುಪ್ಪವ
ಸವರಿಕೊಂಡು ಅದರ ಮೇಲೆ ಮತ್ತೊಂದು ಬಿಲ್ಲೆಯನಿಟ್ಟು ಅವ್ವ ಕೊಡುತ್ತಿದ್ದಳು ಅದನ್ನು ತಿನ್ನುತ್ತಿದ್ದರೆ ಎದುರಿಗಿರುವವರೆಲ್ಲರೂ ಹೊಟ್ಟೆಯುರಿದುಕೊಳ್ಳಬೇಕು ಅಷ್ಟು ಮಜಾ ಬರುತ್ತಿತ್ತು, ಇದರ ಹಾಗೇನೆ ನಮ್ಮ ಕಡೆ ಎಳ್ಳ ಅಮವಾಸೆಗೆ ಎಳ್ಳು ಹೋಳಿಗೆಯಂತ ಮಾಡುತ್ತಾರೆ, ಅದನ್ನು ಇದೇ ತರನಾಗಿ ಅವ್ವ ತಯಾರು ಮಾಡಿ ಕೊಡುತ್ತಿದ್ದಳು. ಉಫ್ !!!! ... ಎಷ್ಟೊಂದು ರುಚಿಗಳು ನೆನೆದಾಗಲೆಲ್ಲ ಕಣ್ಣಾಲಿಗಳು ತೇವವಾಗದೆ ಇರದು.
ಈಗೀನ ಮಕ್ಕಳ ಬಾಲ್ಯವನ್ನು ನೆನೆದರೆ, ನಾವೆ ಎಲ್ಲೊ ಅವರ ಬಾಲ್ಯವನ್ನು ಕೇವಲ ಹಣಗಳಿಕೆಯ ಯಂತ್ರಗಳನ್ನಾಗಿ ರೂಪಿಸುವಲ್ಲಿ ಕೈ ತೊಳೆದುಕೊಂಡು ಬೆನ್ನು ಹತ್ತಿಬಿಟ್ಟಿರುವೇವೇನೊ?
ತೀರಾ ಇತ್ತೀಚೆಗಷ್ಟೇ ನಮ್ಮನ್ನಗಲಿದ ಸೋದರತ್ತೆ ಹನುಮಸಾಗರದವರು ಅವರು, ನಾನು ಊರಿಗೆ ಹೋದಾಗಲೆಲ್ಲ ಒಣಬ್ಯಾಳಿ ಪಲ್ಯೆಯನ್ನು ಎರಡು ರೊಟ್ಟೆಯಲ್ಲಿ ಹಚ್ಚಿಕೊಂಡು ಎಡಗೈಯಲ್ಲಿ ಹಿಡಿದುಕೊಂಡು, ಬಲಗೈಯಲ್ಲಿ ಒಂದು ಚರಿಗೆ ಮಜ್ಜಿಗೆಯನ್ನು ತೆಗೆದುಕೊಂಡು "ಅಯ್ಯಯ್ಯ ನಮ್ಮ ಗಡಾದ ಶಾಣಪ್ಪ ಬಂದಾನಂತ, ಸರೀರಿಲ್ಲೆ ಎಲ್ಲ ಅದಾನ ಅಂವಾ, ಅವ್ಗ ನಾಷ್ಟಾಗೀಷ್ಟಾ ಮಾಡಬ್ಯಾಡ್ರಿ, ಅವಂಗ ಹೊಟ್ಟಿ ತುಂಬಂಗಿಲ್ಲ." ಎನ್ನುತ್ತಾ ಓಣಿಗೆಲ್ಲಾ ಕೇಳುವಂತೆ ನನ್ನಕ್ಕನ ಪಕ್ಕದ ಮನೆಯಿಂದ ಮಾತನಾಡುತ್ತ ಬರುತ್ತಿದ್ದಳು, ನನ್ನ ಬಳಿ ಬಂದು ಆ ಎರಡು ರೊಟ್ಟಿಯ ಊಟ ಹೊಟ್ಟೆತುಂಬಾ ಮಜ್ಜಿಗೆಯ ಕುಡಿಸಿದ ಮೇಲೆಯೆ ಅತ್ತೆಯು ಮೇಲೆಳುತ್ತಿದ್ದಳು. ಇಂದು ಅತ್ತೆಯಿಲ್ಲ, ಮೊನ್ನೆ ಆ ಊರಿಗೆ ಹೋದಾಗ ಓಣಿಯ ಬೀದಿ ಬೀಕೊ ಎನ್ನಿಸುತ್ತಿತ್ತು, ಅಕ್ಕನ ಮನೆಯಲ್ಲಿ ಹೋಗಿ ಕುಳಿತು ನೀರು ಕುಡಿದು ಕುಳಿತೆ, ಅಕ್ಕ ಕೇಳಿದಳು ನಾಷ್ಟಾ ಏನಾರ ಮಾಡ್ಲೇನು ? ಅಂತಾ, ತಕ್ಷಣ ನನ್ನ ಬಾಯಿಂದ ಬಂದದ್ದು "ಅತ್ತೆ ರೊಟ್ಟಿ ತರ್ತಾಳೀರು"ಅಂತಾ, ಕ್ಷಣ ಇಬ್ಬರು ಮೌನವಾಗಿಬಿಟ್ಟೆವು ಕಾರಣ ಅತ್ತೆ ಮೊನ್ನೆಯಷ್ಟೆ ಬಾರದೂರಿಗೆ ಹೋಗಿದ್ದರು, ಅವಳು ತೋರಿಸುತ್ತಿದ್ದ ಕೈ ತುತ್ತಿನ ರುಚಿ ಮರೆಯದಂತೆ ಮಾಡಿತ್ತು.
" ಶರಣಪ್ಪಣ್ಣಾರ ಬೇಗ ತಿನ್ರೀ ಆರಿ ಹೊಕ್ಕೈತದು" ಎಂದು ಮಿತ್ರ ಚಂದ್ರು ಎಚ್ಚರಿಸಿದಾಗಲೆ ನೆನಪಿನ ಸುಳಿಯಿಂದ ಹೊರಬಂದದ್ದು. ಏಕೋ ಏನೋ ಕಚೋರಿಯನ್ನು ತಿನ್ನಲು ಮನಸ್ಸಾಗಲಿಲ್ಲ ಪ್ಲೇಟಿನಲ್ಲಿದ್ದ ಕಚೋರಿಯು ಆರಿ ತಣ್ಣಗೆ ಮಲಗಿತ್ತು ಆದರೆ ಮನದೊಳಗಿನ ಹಳೆಯ ನೆನಪುಗಳ ವಲೆಗೆ
ಕಿಡಿಯನ್ನು ಹೊತ್ತಿಸಿತ್ತು, ಅದನ್ನು ಅಲ್ಲಿಯೆ ಬಿಟ್ಟು ಮಿತ್ರನಿಗೆ ವಿದಾಯ ಹೇಳಿ ಹಸಿದ ಹೊಟ್ಟೆಯಲ್ಲೆ ಊರಿನ ಬಸ್ಸನ್ನು ಹತ್ತಿದೆ. ಮನೆಯಲ್ಲಿ ಅವ್ವನ ಕೈಯಿಂದಲೆ ಏನಾದರೂ ಮಾಡಿಸಿಕೊಂಡು ಹೊಟ್ಟೆ ತುಂಬಾ ಉಣ್ಣಬೇಕೆಂದು ಸೀಟಿನಲ್ಲಿ ಕುಳಿತು ಕಣ್ಮುಚ್ಚಿ ಕುಳಿತುಕೊಂಡೇನು ಮತ್ತೆ ಹಳೆಯ ನೆನಪುಗಳ ಹೊಳೆಯಲ್ಲಿ ಈಜಲು
No comments:
Post a Comment