ಉಫ್........
ಇಷ್ಟೊಂದು ಮದವೇರಿಸುವ ಮತ್ಗಣ್ ಗಳ
ಗಾಳಕ್ಕೆ ಸಿಗದೆ ಬದುಕುಳಿದವರುಂಟೆ ಸಾಕಿ.....
ಕುಡಿದುಬಿಟ್ಟ ನಿನ್ನ ಮದ್ಯದ ಸವಿಯನ್ನಾದರೂ
ಮರೆಯಬಹುದು, ಮರೆಯಲಾದಿತೆ!!?
ಮರೆಯುವುದಾದರೂ ಹೇಗೆ, ಕಚ್ಚಿ ಹೀರಿಕೊಂಡ
ಕೆಂದುಟಿಯ ಮಧುವಿನ ಸವಿ ನೆನಪುಗಳನ್ನು....
ಹಾಯ್......
ಹಿಡಿತಕ್ಕೆ ಸಿಗುತ್ತಿಲ್ಲ ಮನಸ್ಸು..ತನುವಿನಣುವಣುವು
ಉರಿದುಹೋಗುತಿಹುದು, ಇದೆಂತಹ ವಯಸ್ಸು ಸಾಕಿ....
ಕಾವಿಯ ತೊಟ್ಟು, ಮೂಗು ಹಿಡಿದುಕೊಂಡು ಕೂರಲು,
ಹಳ್ಳ-ಕೊಳ್ಳಗಳಲ್ಲಿ, ನದಿ ಹೊಳೆಗಳಲ್ಲಿ ನೀರಿಲ್ಲ!!!
ಬಟ್ಟ ಬಯಲಿನಲಿ, ಒಂಟಿ ಮರದ ನೆರಳಡಿಯಿರುವ
ಕಲ್ಲು ಬಂಡೆಯ ಮೇಲೆ ಕುಳಿತುಕೊಂಡ ನನ್ನೊಳಗೆ
ಮನಃಶಾಂತಿಯೆಂಬುದು ಬಿಂದೂವಿನಷ್ಟು ಇಲ್ಲ!!
ಅಬ್ಬಬ್ಬಾ....!!!!
ಹತ್ತಿಕ್ಕಿಕೊಳ್ಳಲಿ ಹೇಗೆ? ಭಾವನೆಗಳನ್ನು.... ಹುಚ್ಚು
ಹಿಡಿಸಿಬಿಟ್ಟಿವೆ ಕಾ....ಮನಾಕಾರದ ಹುಬ್ಬುಗಳು ಸಾಕಿ...
ಬದುಕುಳಿದದ್ದೆ ಹೆಚ್ಚು...ಆ ನೋಟಕ್ಕೆ, ಯಾರು ಕಲಿಸಿಕೊಟ್ಟಿರಬಹುದು ಮೋಹದಲೆ ಕಟ್ಟಿಹಾಕುವ ವಿದ್ಯೆ!!!!
ಹೀಗಾದರೆ.....ನಿಂತೆ ಹೋಗುವುದಲ್ಲ ಬ್ರಹ್ಮಚಾರಿಗಳ ನಿದ್ದೆ!!
ಹ್ಞೂಂ....
ಇನ್ನೇನು ಮಾಡುವುದು? ಸೋತವನು ಸಂಸಾರಿಯಾಗಲಿಲ್ಲ,
ನಿಗ್ರಹಿಸಿಕೊಂಡು ವಟುವು ಆಗಲಿಲ್ಲ...ಭಗ್ನಗೊಂಡಿರುವೆನಲ್ಲ
ತುಂಟ ಹುಡುಗಿಯು ಎಸೆದು ಹೋದ ಬೊಂಬೆಯ ಹಾಗೆ ಸಾಕಿ....
ಮುಕ್ಕಣ್ಣನ ಬೆಂಕಿಗೆ ಸಿಕ್ಕು, ಉರಿದು ಹೋದ ಮದನನ
ನೋವು...!!! ಹ್ಹ...!!!, ಈ ಅಮಲು ಕಣ್ಣುಗಳು ಪರಿಚಯಿಸಿದವಲ್ಲ
ಬದುಕೊಳಗೊಳಗೇನುಳಿದಿದೆ, ಎಂಜಲು ಬಟ್ಟಲೊಳಗಿನ
ಕಹಿ ಮದ್ಯವ ಹೊರತುಪಡಿಸಿ...
No comments:
Post a Comment