Tuesday, June 26, 2018

ಗಂಡಿನಾಸೆ....

ಗಂಡು.....ಗಂಡೆಂಬ ಗಂಡನಾಸೆಗೆ
ಹೊತ್ತು..ಹೇರುತಿರುವೆ ಪ್ರತಿ ಸಾರಿಯೂ...ನಾ,
ನನ್ನ ಪ್ರತಿ ರೂಪವನೆ...
ಸುಮ್ಮನೀರುವನೇನವನು...? ಮತ್ತೆ..ಮತ್ತೆ
ಹದಗೊಳಿಸುವನವನು ನನ್ನನು, ಬೀಜವಾಂಕುರಿಸಲು
ಪ್ರತಿ ರಾತ್ರಿಗಳಲಿ...

ಬೆಸೆದ ಮನಸುಗಳೆರಡು ಹೊಸೆದು...
ಬಿಗಿದು... ಸುಖಗೊಳ್ಳಲೆಂದೆ ಕೂಡಿದ ತನುವುಗಳೇನಲ್ಲ,
ಸುಣ್ಣವ ಕುಡಿದು ಹಾಲ್ಬೆಳಂದಿಗಳನೆ ಹೊದ್ದು
ನಿಂತ ಗೋಡೆಗಳಿಗೂ ಕಾಣಿಸದು...
ಅನುಭವಿಸುವುದು.....,ಸಂತೈಸುವುದು...,
ಕಣ್ಣಂಚಲಿ ಜಾರಿದ ಲವಣದ ಹನಿ ಹನಿಗಳನು
ತನ್ನೊಡಲಲಿ, ಗುಟುಕು...ಗುಟುಕಾಗಿ ಕುಡಿದು ತಣ್ಣಗೆ
ಆಸರೆಯಾದ ತಲೆದಿಂಬೊಂದೆ

ನಾನೇನು...ಮಣ್ಣೆ....? ಹೌದಲ್ಲವೆ...!!!
ಬಿತ್ತಿದಂತಲ್ಲವೆ....ಬೆಳೆ..!!!, ಬೀಜವೆ ಹುಸಿಹೋಗಿರುವಾಗ
ಉತ್ಕೃಷ್ಟ ಫಲದ ಆಸೆಯ ಹೊಂದುವುದು
ತಪ್ಪಲ್ಲವೆ...? ಯಾರಿಗೂ ಗೊತ್ತಿಲ್ಲವೆ..? ಇಲ್ಲವೆ...
ಹೆಣ್ಣು ಹುಣ್ಣೆಂಬ ನಿರ್ದಯಿ ಮೌನದ ನಾಟಕವೆ,
ಏಕೆ..? ನಾನು ಉಸಿರಾಡುತಿರುವ ಹೆಣ್ಣಲ್ಲವೆ...?

ಅರಳಿ ನಗಬೇಕಾಗಿದ್ದೇರಡು ಮೊಗ್ಗುಗಳು
ತಂತ್ರಜ್ಞಾನಕೆ ಸಿಕ್ಕು ಹೊಸಕಿ ಹೋದವಲ್ಲ,
ಕಾನೂನಿನ ನೆರಳೊಂದಿರದಿದ್ದರೆ...?
ನೀವಿಬ್ಬರು... ಈ ನರಕದ ಬಾಗಿಲನ್ನು
ತಟ್ಟುತಿರಲಿಲ್ಲ.... ನಿಮ್ಮ ಮೊಗವನ್ನು ಕಾಣುವ
ಸೌಭಾಗ್ಯವು ನನಗಿರುತಿರಲಿಲ್ಲ....

ನಡೆಸಿಯೆ ಬಿಟ್ಟಿರುವವನು.. ಪುತ್ರ ಕಾಮೇಷ್ಟೆಯ
ಯಾಗವನ್ನು, ಉರಿದು.. ಹರಿದು ಹೋಗುತ್ತಿರುವುದು
ನನ್ನ ಗರ್ಭಚೀಲ ಮಾತ್ರ....
ಗಂಡನ ವಂಶದ ಗೋಪುರದ ಕಳಸಕ್ಕಷ್ಟೆ ಪ್ರಾಮುಖ್ಯತೆ
ಯಿಲ್ಲಿ... ನಾನು ನನ್ನೆರಡು ಕರುಳ ಬಳ್ಳಿಗಳು ಕೇವಲ
ನಿಮಿತ್ತದ ಪಾತ್ರಗಳು...

ಸುಡುವ ಸೂರ್ಯನ ಕಿರಣಗಳಿಂದೇನೊ...
ರಕ್ಷಿಸಬಲ್ಲೆ ಮೊಗ್ಗುಗಳೆ ಸೆರಗನ್ನು ಹೊದಿಸಿ...
ಅನುದಿನವು....ನಾಚಿಕೆಯಿಲ್ಲದೆ ಮಲಗಬೇಕಿದೆಯಲ್ಲ
ಗಂಡನ, ಗಂಡಿನಾಸೆಗೆ ಸೇರಗನ್ನು ಸರಿಸಿ...
ಬದುಕಬಲ್ಲೇನೆ...? ನಾನು..!!! ಕಾಮ, ಮೋಹಗಳೆ
ತುಂಬಿದ ಈ ಜಗವನ್ನು ಜಯಿಸಿ.....

Friday, June 15, 2018

ಸಾಕಿ ೫

ಮಧ್ಯರಾತ್ರಿಯಲ್ಲಿ..ಹರಿದು ಮುಕ್ಕುವ
ತೋಳಗಳ ಕೂಗಿಗು ಅಂಜದೆ...
ಪಂಜನ್ನು ಹಿಡಿದುಕೊಂಡು, ಮೋಹಿನಿಯು ಹೆದರುವಂತೆ
ನಾ ಕೊಡಿಸಿದ್ದ ಕಾಲ್ಗೆಜ್ಜೆಯ ಕಟ್ಟಿಕೊಂಡು,
ಸ್ಮಶಾನದ ಗೋರಿಯೊಳಗಿನ ಎಲ್ಲ ಹೆಣಗಳು
ಹೆದರಿ ಹೊರಬರದಂತೆ,
ಝಲ್...ಝಲ್‌...ಝಲ್‌‌‌...ಎಂದು ಕಾಲ್ಗೆಜ್ಜೆಯ
ಸದ್ದನು ಮಸಣದ ತುಂಬುತ್ತಾ,
ನನ್ನ ಗೋರಿಯ ಬಳಿ ಅವಳು ಬಂದು ನಿಂತಿದ್ದಳು
ಸಾಕಿ....
ಆದ...ಆನಂದಕ್ಕೇನು ಕೊರತೆಯಿರಲಿಲ್ಲ,
ಏನು ಮಾಡಲಿ.....? ಎದ್ದು ಬರುವ ಹಾಗೂ ಇರಲಿಲ್ಲ
ಅವಳೆ ಒಂದಿಷ್ಟು ಹಿಡಿ ಮಣ್ಣನ್ನು ಹಾಕಿ
ಹೋಗಿದ್ದಳಲ್ಲ...

Thursday, June 14, 2018

ಶಾಯರಿ ೨೪೨

ಅವಳ
ಹೆಸರಿನಲ್ಲಿ
ಲೆಕ್ಕವಿಲ್ಲದಷ್ಟು
ಪ್ರೇಮ ಪತ್ರಗಳನ್ನು
ಬರೆದಿಟ್ಟಿರುವೆ
ಸಾಕಿ...
ಕಪಾಟಿನಲ್ಲಿ

ತೆರೆಯಲು
ಮನಸ್ಸೆ ಆಗುತ್ತಿಲ್ಲ....
ಬರೆಯಲೇನಿದೆ
ಈಗ...
ಬರಿ ವಿರಹದ
ಶಾಹಿಯೆ
ತುಂಬಿರುವಾಗ
ಲೇಖನಿಯಲ್ಲಿ

ಇದು ಕಥೆಯಲ್ಲ ಜೀವನ ೨

ಅವತ್ತು ಹಾಗೆ ಸುಮ್ಮನೆ ಗಿರಾಕಿಗಳಿಲ್ಲದೆ ಅಂಗಡಿಯಲ್ಲಿ  ಒಬ್ಬನೆ ಕುಳಿತುಕೊಂಡಿದ್ದೆ, ಹೊರಗೆಲ್ಲ ರಸ್ತೆಯಲ್ಲಿ ತಮ್ಮ ತಮ್ಮ ಪಕ್ಷಗಳ ಪ್ರಚಾರ ಕಾರ್ಯದಲ್ಲಿ ಕಾರ್ಯಕರ್ತರು ಹುರುಪಿನಿಂದ, ಅಬ್ಬರದ ಪ್ರಚಾರವನ್ನೆ ಕೈಕೊಂಡಿದ್ದರು. ಹತ್ತು ನಿಮಿಷ ಕಳೆಯಿತು, ಒಂದಿಪ್ಪತ್ತು ಇಪ್ಪತ್ತೈದು ಜನರ ಒಂದು ಪಕ್ಷದ ಗುಂಪು ಅಂಗಡಿಯ ಹತ್ತಿರ ಬಂದು ಆ ಗುಂಪಿನ ಮುಂದಾಳತ್ವವನ್ನು ವಹಿಸಿದಂತ ವ್ಯಕ್ತಿಯು ಬಂದು ತಮ್ಮ ಪಕ್ಷದ ಕರಪತ್ರವನ್ನು ನೀಡುತ್ತಾ, ' ನಮಸ್ಕಾರ ಅಣ್ಣವ್ರ ದಯವಿಟ್ಟು ನಿಮ್ಮ ಓಟನ್ನ ನಮ್ಮ ಸಾಹೇಬ್ರಗೆ ಹಾಕ್ಬೇಕ್ರಿ' ಎಂದು ಗುಟ್ಕಾದಿಂದ ಬಣ್ಣ ಬಡ್ಕೊಂಡಿದ್ದ ಅವನ ಅಳಿದುಳಿದ ಹಲ್ಲುಗಳನ್ನು ಪ್ರದರ್ಶಿಸುತ್ತಾ, 
    ಒಂದು ಕ್ಷಣ ಆ ಕರಪತ್ರವನ್ನು ನೋಡಿ ಆ ವ್ಯಕ್ತಿಯ ಮುಖವನ್ನೊಮ್ಮೆ ನೋಡುತ್ತಾ, ಮೆಲ್ಲಗೆ 'ನಂಗ ಒಂದ ಹದಿನೆಂಟ ಸಾವಿರ ರೂಪಾಯಿ ಕೊಡ್ರೀ.. ಒಂದೊಂದ ಓಟಿಗೆ ಮೂರ ಮೂರ ಸಾವಿರ ರೂಪಾಯಿ ಹಂಗ, ನಮ್ಮನಿಯಾಗ ಒಟ್ಟ ಒಂದಾರ ಓಟ ಅದಾವು, ಇಷ್ಟು ಓಟನ್ನ ನಿಮ್ಮ ಪಕ್ಷಕ್ಕ ಹಾಕ್ತೀವಿ, ಗ್ಯಾರಂಟಿಗೆ ನೀವ್ ಯಾ ದೇವ್ರ ಮೇಲ್ ಪ್ರಮಾಣ ಮಾಡಂದ್ರು ಮಾಡ್ತೀವಿ ಬೇಕಿದ್ರ' ಅಂದೆ ನಾನು
ಆ ವ್ಯಕ್ತಿ ನಾನು ಈ ರೀತಿ ಅವನನ್ನು ಪ್ರಶ್ನಿಸುತ್ತೇನೆಂದು ಎಣಿಸಿರಲಿಕ್ಕಿರಲಿಲ್ಲ, ಕ್ಷಣಕಾಲ ಗಲಿಬಿಲಿಗೊಂಡವನಂತೆ ಕಂಡರು ಸಾವರಿಸಿಕೊಂಡು, ' ಏ..ಏನ್ರೀ ಸರ್ ಏಜ್ಯುಕೇಟೆಡ್ ಆಗಿ ನೀವ್ ಹಿಂಗ ರೊಕ್ಕ ಕೇಳಿದ್ರ ಹ್ಯಾಂಗ್ರಿ.. ಮತ್ತಿನ್ನ ಹಳ್ಳೇನರ ಹ್ಯಾಂಗ ಮಾಡ್ಲಿಕ್ಕೇಳ್ರಿ, ಅದು ಅಲ್ದ ನೀವ್ ಹಿಂಗ ರೊಕ್ಕ ಕೇಳೊದು ಕಾನೂನಿನ ಪ್ರಕಾರ ಅಪರಾಧ ಆಕ್ಕೈತ್ರೀ...' ಎಂದು ತನ್ನವರತ್ತ ನೋಡುತ್ತಲೆ, ಅವನ ಸುತ್ತಲಿದ್ದ ಕೆಲವು ಮಂದಿ 'ಹೌದೌದ್ರೀ..., ಅಲ್ಲನು ಮತ್ತ, ಖರೆ ಐತಿದು, ನಮ್ಮ ಸರ್ ಹೇಳೊದ ಬರೊಬ್ಬರಿ ಐತಿ', ಅಂತ ತಲೆಗೊಂದು ಮಾತಿನ ಮುತ್ತುಗಳು ಉದುರಿದವು.
    ಅವರಾಡಿದ ಮಾತಿಗೆ ನಾನು ತುಸು ನಕ್ಕು, 'ಹೌದಲ್ರೀ ಇದು ನಂಗು ಗೊತ್ತಿರ್ಲಿಲ್ಲ, ತಪ್ಪು...ತಪ್ಪು... ನಾನು ಹಣ ಕೇಳೊದು ತಪ್ಪಾಗ್ತದ, ಅಲ್ವಾ, ' ಎಂದೆ,
ಎಲ್ಲರೂ ಹೌದೌದು ಎನ್ನುವಂತೆ ತಲೆಯಾಡಿಸಿದರು,
' ಮತ್ತ ಇಷ್ಟ ಮಂದಿ ಪ್ರಚಾರಕ್ಕಂತ ಬಂದೀರಿ, ನೀವೆಲ್ಲ ನಿಮ್ಮ ಸ್ವಂತ ರೊಕ್ಕಾನ ಖರ್ಚ ಮಾಡ್ಕೊಂಡು ಪ್ರಚಾರಕ್ಕ ಬಂದಿರೊ, ಇಲ್ಲಾ,... ನಿಮ್ಮ ಸಾಹೇಬ್ರ ಮೇಲಿನ ಅಭಿಮಾನಕ್ಕ ಬಂದೀರೊ...' ಎನ್ನುತ್ತಾ ಎಂದು ನಿಂತೆ,
ನಾ ಕೇಳಿದ ಪ್ರಶ್ನೆಗೆ ಅವನ ಹಿಂದೆ ನಿಂತಿದ್ದ ಕೆಲವರು ಹಾಗೆ ಅಂಗಡಿಯಿಂದ ಹೊರಗೆ ನಡೆದರು,
ಆ ವ್ಯಕ್ತಿಯು ' ಏ ನಾವೆಲ್ಲ ಅವರ ಪಕ್ಕಾ ಅಭಿಮಾನಿಗಳ್ರೀ ಒಂದ ಪೈಸಾನು ಮುಟ್ದಂಗ ಕೆಲ್ಸ ಮಾಡಾಕ ಹತ್ತೀವಿ,' ಎಂದ.
ನಾನು ತಟ್ಟನೆ ಅವನ ಕೈಯನ್ನು ಹಿಡಿದುಕೊಂಡು ಕೈ ಕುಲುಕುತ್ತಾ,  'ಇವತ್ತು ನಾನು ನಿಮ್ಮ ಜೊತಿಗೆ ಪ್ರಚಾರ ಮಾಡಾಕ ಬರ್ತೀನಿ ನಡ್ರಿ ನಿಮ್ಮಂಥಹ ನಿಸ್ವಾರ್ಥ ಕಾರ್ಯಕರ್ತರು ಯಾರ್ ಸಿಗ್ತಾರ್ರೀ ಈಗೀನ ಕಾಲ್ದಾಗ, ಹ್ಞಾಂ, ಮತ್ರ ಸಂಜಿಕ ನಿಮ್ಮ ಸಾಹೇಬ್ರನ್ನ ಭೇಟಿ ಮಾಡಿ, ಅವರ್ಗೊಂದು ಅಭಿನಂದನೆಗಳನ್ನ ತಿಳಿಸಿ, ನನ್ನ ಮನೇನ ಓಟ ಒಷ್ಟು ನಿಮ್ಗ ಹಾಕ್ತೀವ್ರೀ ಅಂತಂದ ಹೇಳ ಬರ್ತೇನ, ಹೋಗೊಣ್ರ್ಯಾ' ಎಂದು ಅಂಗಡಿಯಿಂದ ಆಚೆ ಬರಲು ಅನುವಾದೆ. ಈ ಸಲ ಮಾತ್ರ ಆ ವ್ಯಕ್ತಿಯ ಮುಖ ಮಾತ್ರ ಬಿಳಚಿಕೊಂಡುಬಿಟ್ಟಿತು. ಅವನ ಹಿಂಬಾಲಕರಲ್ಲಿ ಒಬ್ಬ 'ಅದ್ಹೆಂಗ್ರಿ ಮನೇನ ದಗದಾ ಬಗ್ಸಿ ಬಿಟ್ಟ, ಇಂತಾ ರಣರಣ ಬಿಸ್ಲಾಗ ಪುಗ್ಸಟ್ಟೆ, ಅದು ಕೈಲೆ ಖರ್ಚ ಮಾಡ್ಕೊಂಡ ಯಾರ್ ಬರ್ತಾರ್ರೀ ತಲಿಗೀಲಿ ಕೆಟ್ಟೈತನು ನಿಮ್ದು, ' ಅಂದ ಸ್ವಲ್ಪ ಮೂಗಿನಿಂದ ಗುಟುರು ಹಾಕುತ್ತಾ, ' ಹೌದ್ರ್ಯಾ ಮತ್ತ ಒಂದಿನಕ್ಕ ಎಷ್ಟ ತಗೊತಿರಿ ಹಾಗಿದ್ರ,' ಎಂದೆ
' ಇನ್ನೂರ ರೂಪಾಯಿರೀ... ಮುಂಜಾನಿ ನಾಷ್ಟ, ಮಧ್ಯಾಹ್ನದೂಟ, ಸಂಜಿಕೆ ಮನಿಗೆ ಹೋಗ ಮುಂದ ಒಂದ ನೈಂಟಿ,' ಎಂದನು ಗರ್ವದಿಂದಲೆ, ನಾನು ಅಷ್ಟೇ ಶಾಂತವಾಗಿ
'ನೋಡ್ರಪ್ಪ.. ಒಂದಿನಕ್ಕ ಎರಡ್ನೂರ ರೂಪಾಯಿ, ಇನ್ನೂ ಹದಿನೈದ ದಿನ ಐತಿ ಓಟ ಹಾಕೋದು ಅಂದ್ರ ಹದಿನೈದ ದಿನಕ್ಕ ಮೂರು ಸಾವಿರ, ಮತ್ತ ಓಟ ಹಾಕೊ ದಿನ ಎಲ್ಲಾ ಪಕ್ಷದವರ ಒಂದೊಂದಿಷ್ಟು ಕೈ ಬೆಚ್ಗ ಮಾಡ್ತಾರ ಒಟ್ಟಾರೆಯಾಗಿ, ಐದುವರಿ ಸಾವ್ರ ರೊಕ್ಕ ಕೂಡ್ತದ, ಹೌದಲ್ಲೊ' ಅಂದೆ, ಅದಾಗಲೆ ಆ ವ್ಯಕ್ತಿಯ ಹಿಂಬಾಲಕರು ಅರ್ಧದಷ್ಟು ಜನರು ಜಾಗ ಖಾಲಿಮಾಡಿ ಬಿಟ್ಟಿದ್ದರು. ಅವನ ಮೊಗದಲ್ಲಿ ಸಣ್ಣಗೆ ಬೇವರ ಹನಿಗಳು ಗರ್ಭಧರಿಸತೊಡಗಿದವು, ಮತ್ತೆ ನಾನೆ ಮಾತನ್ನು ಮುಂದುವರೆಸುತ್ತಾ, 'ಸರಿ ಇರ್ಲಿ ಬಿಡಿ, ನೀವಂತು ಸಾಲಿ ಕಲ್ತಿಲ್ಲ, ಊರಾಗ ದುಡ್ಕಿಲ್ಲ, ಮಾಡಾಕ ಕೆಲ್ಸಿಲ್ಲ, ಹಿಂಗಾಗಿ ಕೂಲಿ ಆಸೆಗೆ ಬಂದಿರಿ' ಎನ್ನುತ್ತಲೆ, ಹೌದೌದು ಎನ್ನುತ್ತಾ ತಲೆಯಾಡಿಸಿದರಿಬ್ಬರು, ' ನಾ ಕಲ್ತಾವ ಅದೀನಿ,‌ ನೀವು ಕೇಳೊದು ಬರೊಬ್ಬರಿ ಐತಿ, ನಿಮಗ್ಯಾಕ ಬೇಕ್ರಿ ರೊಕ್ಕಾ ಅಂತಂದ ಹೇಳಿ, ಇದು ನ್ಯಾಯವಾದ ಮಾತೈತಿ, ಆದ್ರ ನೀವ್ ನನ್ನ ಹಿಂಗ ಕೇಳ್ದಂಗ, ನಿಮ್ಮ ನಾಯಕರನ್ನ ಯಾಕ ಕೇಳೊದಿಲ್ಲ' ಅಂತಂದೆ, 'ಅವರನ್ನ ಏನಂತ ಕೇಳಬೇಕ್ರೀ..' ಒಬ್ಬ ಸ್ವಲ್ಪ ಸಿಟ್ಟಿಲೆ, 'ಏನಿಲ್ಲೊ ಸಾವಕಾರ ಅಷ್ಟ್ಯಾಕ ಸಿಟ್ಟಿಗೆ ಬರ್ತೀದಿ ನೀನು, ಅಲ್ಲ ನಿಮ್ಮ ನಾಯಕರದ್ದು ಆಸ್ತಿ ಇಲೆಕ್ಷನ್ಗೆ ನಿಂದ್ರೊ ಮುಂಚ್ಯಾಕ, ಅವರಾಸ್ತಿ ಹತ್ತ ಲಕ್ಷೊ, ಒಂದ ಕೋಟಿಯೊ ಇರ್ತದ, ಅವರು ಚುನಾವಣೆ ಗೆದ್ದ, ಐದ ವರ್ಷ ಖುರ್ಚಿ ಮ್ಯಾಲ ಕುಂತ, ಕೆಳಗಿಳಿಯೊದ್ರೊಳಗ, ಅವರಾಸ್ತಿ ದುಪ್ಪಟ್ಟ ಆಗಿರ್ತದ, ಹೆಂಗ ಬಂತ್ರೀ ಇಷ್ಟಕ್ಕೊಂಡ ಆಸ್ತಿ ಅಂತ ಇಲ್ಲಿರೊರು ಯಾರರ ಕೇಳ್ತಿರೇನು?, ಇಲ್ಲ, ಒಂದ ಸಣ್ಣ ಇಂಡಿಕಾ ಕಾರ್ ನ್ಯಾಗ ಓಡಾಡಾಂವ ಅಧಿಕಾರದ ಕೊನಿ ಕೊನಿಗೆ ಹತ್ತ ಹನ್ನೊಂದ ಲಕ್ಷ ರೂಪಾಯಿ ಕಾರ್ನ್ಯಾಗ ಓಡಾಡ್ತೀರ್ತಾನ, ಇದು ಹ್ಯಾಂಗ ಬಂತಂದ ಯಾರರ ಕೇಳ್ತಿರನು.? ಅದು ಇಲ್ಲ, ಅಲ್ರೀ ಒಬ್ಬ ಕನ್ನಡ ಸಾಲಿ ಮಾಸ್ತರನ ಪಗಾರ ಎಷ್ಟೈತಪಾ ಒಂದ ತಿಂಗ್ಳಿಗೆ,     ಇಷ್ಟು ಐದು ವರ್ಷಕ್ಕ.   ಇಷ್ಟಾತ,ಹೌದಾ, ನಿಮ್ಮ ಶಾಸಕರದ್ದು ಎಷ್ಟೈತಪ, ತಿಂಗಳ ಪಗಾರ.      ಇಷ್ಟೈತಿ, ಐದ ವರ್ಷಕ್ಕ.      ಇಷ್ಟಾಗತ್ತ ಮತ್ತ ಉಳ್ದಿದ್ದ ಹಣ ಎಲ್ಲಿಂದ ಬಂತಂದ ಯಾರರ ಕೇಳ್ತಿರೇನು..?'
ಅಂದೆ, ಒಬ್ಬನಿಗೆ ಎಲ್ಲಿಲ್ಲದಷ್ಟು ಕೋಪ ಬಂದ ಬಿಡ್ತು, ಗುಂಪಿನಿಂದ ತೂರಿಕೊಂಡ ಮುಂದ ಬಂದವ್ನ, ' ಏ ತಮ್ಮ ನೀ ಓಟ ಹಾಕ್ತೀನ ಅನ್ನೊಗಿದ್ರ ಹಾಕ, ಇಲ್ದಿದ್ರ ಬಿಡು, ಏನ ನಿಮ್ಮನಿ ಆರ ಓಟ ಬಿಳಲಿಕ್ಕಂದ್ರ  ನಮ್ಮ ನಾಯಕರ ಏನ ಸೋಲುದಿಲ್ಲ, ಅವರ ಸಾಕಷ್ಟ ತ್ವಾಟ ಪಟ್ಟಿ ಅದಾವು, ಅದ್ರಾಗ ಜಬರ್ದಸ್ತ ಇನಕಂ ಬರ್ತೈತಿ, ಗೊತ್ತನ ನಿಂಗ' ಎಂದು ಜೋರು ಧ್ವನಿಯಲ್ಲೆ ದಭಾಯಿಸಿದನು. ' ಹೌದ್ರ್ಯಾ.. ಅಲ್ರೀ ಅದು ನಮ್ಗೂ ಗೊತ್ತೈತ ಬಿಡ್ರಿ ಅವರ ತಮ್ಮ ನಾಮಿನೇಷನ್ ಫೈಲ್ ಮಾಡು ಮುಂದನ ತುಂಬಿರರ್ತಾರ ತಮ್ಮ ಆದಾಯದ ಮುಖ್ಯ ಮೂಲ ಕೃಷಿ ಅಂತಂದ, ಅಲ್ರೀ..ಐದೈದ ವರ್ಷದಾಗ ಇಷ್ಟಿಷ್ಟ ಡಬ್ಬಲ ಆದಾಯ ತೆಗಿತಾರ ಅವರು ಕೃಷಿಯೊಳಗ, ಮತ್ತ ಇವರಿಷ್ಟೆಲ್ಲಾ ಕೃಷಿಯೊಳಗ ಆದಾಯ ತೆಗಿಯೊರು, ನಿಮ್ಮಂಥ ಬಡ ರೈತರ್ಗೆ ಯಾಕ ಅವರು ಹೇಳಿಕೊಡಬಾರ್ದು, ಹೆಚ್ಚ ಆದಾಯ ತೆಗೆಯೋದ ಹೇಗಂತ, ಒಂದಿಷ್ಟ ಸಾಲದ ಭಾದಿ ತಾಳಲಾರ್ದನ ಹೊಲ್ದಾನ ಬೇವಿನ ಮರಕ್ಕ ಊರ್ಲ ಹಾಕ್ಕೊಳ್ಳೊ ಮಂದಿ ಜೀವಾನರ ಉಳಿತಿದ್ವ, ಹೌದಲ್ರಿ ಯಜಮಾನ್ರ, ನಾ ಹೇಳೊದ ಖರೆ ಐತಿಲ್ಲ,' ಎಂದ ಮೆಲ್ಲಗೆ ಅವನ ಹೆಗಲ ಮೇಲೆ ಕೈಯಿಟ್ಟು ಹೇಳಿದೆ, ಇರುವೆ ಸಾಲಿನ ಮೇಲೆ ಒಂದು ಕಡ್ಡಿಯನ್ನು ಓಗೆದರೆ ಹೇಗೆ ಗಲಿಬಿಲಿಗೊಂಡು ಓಡಾಡುತ್ತವು ಹಾಗೆಲ್ಲ ಆ ವ್ಯಕ್ತಿಯ ಹಿಂಬಾಲಕರು ಚಡಪಡಿಸುತ್ತಾ ನನ್ನುತ್ತರಕ್ಕೆ ಉತ್ತರಿಸದೆ, ಎಲ್ಲರೂ ಮೆಲ್ಲಗೆ ಜಾರಿಕೊಂಡುಬಿಟ್ಟರು, ಈ ನಾಕೈದು ಜನರನ್ನು ಹೊರತುಪಡಿಸಿ, ಕೊನೆಗೆ ಅವರು ಅಂಗಡಿಯನ್ನು ದಾಟುವಾಗ ನಾನು ಅವರೊಡಗೂಡಿ ಹೊರಬಂದು 'ನೀವು ನನಗೆ ಪ್ರಶ್ನೆ ಮಾಡಿದ ಹಾಗೆ ನಿಮ್ಮ ನಿಮ್ಮ ನಾಯಕರುಗಳಿಗೆ ನೀವೆನಾದರು ಪ್ರಶ್ನಿಸಿದ್ದೆ ಆದರೆ, ನಾಳೆ ನಿಮ್ಮ ಮಕ್ಕಳು ಅವರ ಮನೆ ಮುಂದೆ ಹೋಗಿ ಹಗಲೆಲ್ಲ ಕಾದು, ಅವರ ಬಂದ ಮ್ಯಾಲ ನಡ ಬಗ್ಗಿಸಿ ಧಣಿ ನಮ್ಮ ಓಣಿಯ್ಯಾಗ ನೀರ ಬರವಲ್ವರೀ ಎಂದ ಹಲ್ಗಿಂಜಕೊಂಡ ಕೇಳೊ ಪ್ರಮೇಯಾ ಬರಂಗಿಲ್ಲ, ನನ್ನ ಮಾತಿಂದ ಏನಾರ ನಿಮ್ಮ ಮನಸ್ಸಿಗೆ ನೋವಾಗಿದ್ರ, ನಿಮ್ಮ ತಮ್ಮನಂತೊನು ಅಂದ್ಕೊಂಡು ಕ್ಷಮಿಸಿಬಿಡ್ರಿ ಅಣ್ಣೊರ' ಎಂದೆ ಆ ವ್ಯಕ್ತಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲೆ ಇಲ್ಲ, ಸುಮ್ಮನೆ ತಲೆಯಾಡಿಸುತ್ತ, ಪಕ್ಕದ ಅಂಗಡಿಯ ಹತ್ತಿರ ನಿಂತಿದ್ದ ತನ್ನ ಗುಂಪಿನತ್ತ ಭಾರವಾದ ಹೆಜ್ಜೆಗಳೊಂದಿಗೆ ನಡೆದನು. ಇಷ್ಟೇಲ್ಲಾ ಆದರೂ ಅವರು ತಿದ್ದುಕೊಳ್ಲುತ್ತಾರೆ, ತಮ್ಮ ನಾಯಕನನ್ನು ಪ್ರಶ್ನಿಸುತ್ತಾರೆ ಅಂತ ನಾನೇನಾದರೂ ತಿಳಿದುಕೊಂಡಿದ್ದರೆ, ನನ್ನಂತಹ ಮೂರ್ಖ ಈ ಲೋಕದಲ್ಲಿ ಯಾರು ಇರೋದಿಲ್ಲ ಅಲ್ವ.. ಏಕೆಂದರೆ ಸಂಜೆ ಅವರು ಕೊಡಿಸುವ ನೈಂಟಿಯಲ್ಲಿ ಎಲ್ಲ ಆದರ್ಶಗಳು ಕೊಚ್ಚೆಯಲ್ಲಿ ಉಚ್ಚೆಯ ರೂಪದಲ್ಲಿ ಹರಿಯುತ್ತಿರುತ್ತವೆ. ಏಷ್ಟೆಯಾದರೂ....
ಮೇರಾ ಭಾರತ್ ಮಹಾನ್

ಚು.೩೮೦

ನಿನ್ನ ಈ ಕುಡಿ ನೋಟದ
ಬಾಣಗಳೆ ತಾನೆ ನನ್ನ
ಬಂಧಿಸಿದ್ದು..
ಹೂ ಮಲ್ಲಿಗೆಯ
ನಗುವಲ್ಲವೆ ನಿನ್ನ
ಹೃದಯದರಮನೆಗೆ
ನನ್ನನು...
ದಾಸನನ್ನಾಗಿಸಿದ್ದು..

ಇತಿಹಾಸವಾಗಲೆಬೇಕಲ್ಲ ಸಾಕಿ ೬

ನಿನ್ನ ಮದಿರೆ ಮನೆಯ ಗೋಡೆಯ
ಮೇಲೆ, ನನ್ನ ಪ್ರೇಮದಿತಿಹಾಸವನ್ನು
ಬರೆಸಿಬಿಡು ಸಾಕಿ...
ಹೋಗಿ ಬರುವವರೆಲ್ಲರಿಗೂ...
ಗೊತ್ತಾಗಬೇಕಲ್ಲವೆ..ಅವಳ ಹೆಸರಲಿ
ಅಳಿದ ಮೊದಲ ಹೆಸರು ನನ್ನದೆ..ಎಂದು

ನಾ ಕುಡಿದುಬಿಟ್ಟ ಮದಿರೆ ಹೂಜಿಗಳ
ಲೆಕ್ಕವನ್ನು ಬರೆದು... ತೂಗು ಹಾಕಿರು
ಸಾಕಿ....ಮಧುಶಾಲೆಯ ಮುಖ್ಯ ದ್ವಾರಕ್ಕೆ....
ನಿನ್ನ ಮಧು ಬಟ್ಟಲನ್ನು ಹಿಡಿಯುವ
ಮೊದಲು, ಅವರೆಲ್ಲ ಯೋಚಿಸಬೇಕಲ್ಲವೆ...
ಯೋಚಿಸಲೇನಿದೆ...? ಅವಳೆ.. ಕೈ ಬಿಟ್ಟು
ಹೋಗಿರುವಾಗ

ಅವಳ್ಹೆಸರಲಿ ತಂದ ಮಲ್ಲಿಗೆಯ ಗುಚ್ಚವು...
ನಿತ್ಯ ಸಂಜೆಗೆ ನರ್ತಿಸುವ ನಿನ್ನ ಕಾಲಡಿಯಲಿ
ಸಿಕ್ಕು...ಹೊಸಕಿ ಹೋದಾಗ, ಅವುಗಳನ್ನು
ಬಳೆದು ಕಸದ ಬುಟ್ಟಿಗೆ ಹಾಕದಿರು.....
ಸಾಕಿ
ಅವುಗಳೆದೆಯ ಮಕರಂದವೇನೊ...ನಿನ್ನ
ಕಾಲ್ಮದರಂಗಿಗೆ ಮೆತ್ತಿಗೊಂಡಿದೆ, ನನ್ನೆದೆಯ
ನೋವ ಕಣ್ಣೀರಿನ ಹನಿಗಳಿನ್ನೂ...ಅವುಗಳೆದೆಯಲ್ಲೆ
ಉಳಿದುಕೊಂಡಿವೆ, ಬರುವವರಿಗೆಲ್ಲ ಅರಿವಾಗಬೇಕಲ್ಲ
ಹೂವಲ್ಲೂ... ನೋವಿದೆಯೆಂಬುದು

ನಾ ಸತ್ತು...ಹುಗಿದ ಗೋರಿಯ ಮೇಲೆ
ಗರಿಕೆ ಹುಲ್ಲುಗಳು ಮೊಳೆತು...ಕಸಕಂಟಿಗಳಿಂದ
ತುಂಬಿ...ದಾರಿಹೋಕ ಬಿಡಾಡಿ ನಾಯಿಯೊಂದು
ನನ್ನ ಗೋರಿಯನ್ನು ಮೂಸಿ...ತನ್ನ ಕಾಲನ್ನೆತ್ತಿ
ಮೂತ್ರವನ್ನೊಮ್ಮೆ ವಿಸರ್ಜಿಸಿದಾಗ....
ಸುಣ್ಣವ ಬಳೆದುಬಿಡು ಸಾಕಿ... ಗೋಡೆಗೆ
ಅಳಿಸಿಹೋಗಲಿ ನನ್ನ ಇತಿಹಾಸವಾಗ...
ಅವಳ ತೆಕ್ಕಯಲಿ ಇತಿಹಾಸವನ್ನೆ....
ಸೃಷ್ಟಿಸುತ್ತೇವೆಂದು ಬಂದವರೆಲ್ಲ....
ನಿನ್ನ ಮದಿರೆ ಮನೆಯ ಗೋಡೆಯ ಮೇಲೆ
ಇತಿಹಾಸವಾಗಲೆಬೇಕಲ್ಲ...

Wednesday, June 13, 2018

ಶಾಯರಿ ೨೪೩

ಅವಳನ್ನು
ಮರೆಯಬೇಕೆಂಬ
ದುರಾಸೆಯಿಂದೇನು
ಕುಡಿಯುತ್ತಿಲ್ಲ
ಸಾಕಿ...

ಬದುಕಬೇಕೆಂಬ
ಆಸೆಯೊಂದು
ಉಳಿದಿಲ್ಲ
ನೋಡು...

ನಮ್ಮವ್ವ ೧೫

ಸಾಲಿಗೆ ಹೋಗೊ
ಪುಸ್ತಕದ ಚೀಲಾನ
ಹೊರಲಾರ್ದಂತ
ಎಸಳು ಹೆಗಲುಗಳು
ನನವು,
ಕೇಳವ್ವ....
ಸಂಸಾರ.... ಅನ್ನೊ
ನೊಗದ ಭಾರಾನ,
ಹೊರಿಸಿ ಕೈ
ಬಿಟ್ಟಾರಲ್ಲೊ
ನಮ್ಮವ್ವ....

ಅವ್ವನ ಮಡಿಲಾನ
ಬೆಚ್ಗ ಮಲ್ಗೊ.....
ಸುಖಾನ ನಾನಿನ್ನು
ಸವಿದಿಲ್ಲ
ಗೊತ್ತೆನವ್ವ.....
ಮತ್ತೊಬ್ನ ದೇಹದ
ಬಿಸಿ...ತಣಿಸಾಕ
ಕತ್ಲ...ಕೋಣಿಗೆ
ದೂಡಿಬಿಟ್ಟಾರಲ್ಲೊ
ನಮ್ಮವ್ವ ....

ಕುಂಟೆಬಿಲ್ಲೆ ಆಡೋ
ವಯಸ್ಸನ್ಯಾಗ
ಗಂಡನ ಮನಿ ಹೊಸ್ಲ
ದಾಟ್ಸಿದ್ರಲ್ಲೊ
ನಮ್ಮವ್ವ ....
ಬಿಂದ್ಗಿ ಕೊಡಾನ...
ಹೊರಲಾರ್ದ ನಡುವನ್ಯಾಗ
ಉಸಿರಾಡೊ ಗೊಂಬಿ
ಕೊಟ್ಟಾರಲ್ಲೊ
ನಮ್ಮವ್ವ ...

Sunday, June 10, 2018

ಕಥೆ

ಭಾಗ ೧

ಅಂದು ಬೆಳಿಗ್ಗೆ ಬೇಗನೆ ಎದ್ದು ನಾನು, ನನ್ನಾಕೆ ಸ್ನಾನ ಮತ್ತು ಉಪಹಾರವನ್ನು ಮುಗಿಸಿಕೊಂಡು, ವಾರದ ಹಿಂದಷ್ಟೆ ಮದುವೆಯಾಗಿದ್ದತಂಹ ನನ್ನ ಗೆಳೆಯನ ಬಾಸಿಂಗ ಬಿಡುವಂತಹ ಕಾರ್ಯಕ್ರಮಕ್ಕೆಂದು ಅವಸರವಸರವಾಗಿ ಹೊರಟು ನಿಂತೆವು. ಬೇಗನೆ ಹೊರಡಲು ಒಂದು ಕಾರಣವೇನಾಯಿತೆಂದರೆ, ಅವರ ಹಳ್ಳಿಯಲ್ಲಿ  ಹಾಲು ಸಿಗುತ್ತಿರಲಿಲ್ಲವಂತೆ. ಆ ವಿಷಯವನ್ನು ಕೇಳಿ ನಾನು ಆಘಾತಕ್ಕೊಳಗಾದದ್ದುಂಟು, ಹಳ್ಳಿಯಲ್ಲಿಯೆ ಹಾಲು ಸಿಗುವುದಿಲ್ಲ ಅಂದರೆ ಏನು ಅರ್ಥ ಅಂತ. ಅವರ ಹಳ್ಳಿಯಲ್ಲಿ ಎಲ್ಲರು ತಮ್ಮ ಮನೆಗೆ ಎಷ್ಟು ಬೇಕೊ ಅಷ್ಟು ಹಾಲನ್ನು ಉಳಿಸಿಕೊಂಡು ಮಿಕ್ಕ ಹಾಲನ್ನೆಲ್ಲ ಡೈರಿಗೆ ಹಾಕಿಬಿಡುತ್ತಿದ್ದರಂತೆ, ಕಾರಣವೇನೆಂದರೆ, ಮೊದಲು, ಎಲ್ಲರ ಮನೆಯಲ್ಲಿ ದನಕರುಗಳಿರುತ್ತವೆ, ಎರಡು, ಮನೆ ಮನೆಗೆ ಹಾಕಿ ಬರುವ ಹಾಲಿನ ಹಣ ಇವರ ಖರ್ಚಗೆ ಸಾಕಾಗುವುದಿಲ್ಲವಂತೆ, ಮೂರನೇದ್ದು ತಿಂಗಳಿಗೊ, ಎರಡು ತಿಂಗಳಿಗೊ ಒಟ್ಟೊಟ್ಟಿಗೆ ಬರುವ ಡೈರಿಯ ಹಣದಿಂದಾಗಿ ಮಾಡಿದ ಸಾಲಾನೊ, ಮಗಳ ಮದುವೆ ಖರ್ಚಿಗೆಂದೊ, ಬಂಗಾರ ಮಾಡಿಸಲಿಕ್ಕೊ ಹೀಗೆ ಇನ್ನಿತರ ಖರ್ಚು ವೆಚ್ಷಗಳಿಗೆ ಬಳಸಿಕೊಳ್ಳಬಹುದೆಂಬುದು. ಇನ್ನೂ ಒಂದು ಮುಖ್ಯ ವಿಚಾರ ಏನೆಂದರೆ, ಕುಡುಕ ಗಂಡಸರು ಹಾಲು ಹಾಕಿದ ಮನೆ ಮನೆಗೆ ಹೋಗಿ ಮುಂಗಡವಾಗಿ ಹಣವನ್ನು ಪಡೆದುಕೊಂಡು ಕುಡಿದು ಬರುವುದನ್ನು ತಪ್ಪಿಸುವುದಕ್ಕಾಗಿ, ಹಾಲಿನ ಡೈರಿಗೆ ಹಾಕಿದ ಹಣವು ನೇರವಾಗಿ ಇವರ ಬ್ಯಾಂಕ ಖಾತೆಗಳಿಗೆ ಜಮಾವಣೆ ಆಗುವುದಲ್ಲದೆ, ಹಾಗೂ ಹೀಗೂ ಯಾರಿಂದಲೊ ಹಾಲನ್ನು ಹಾಕಿಸಿಕೊಂಡರೆ ಅರ್ಧ ಹಾಲು ಇನ್ನರ್ಧ ನಲ್ಲಿ ನೀರೆ ಬೇರೆತಿರುತ್ತದೆ. ಎಂಬಿತ್ಯಾದಿ ವಿಷಯಗಳನ್ನು ತಿಳಿಸಿ ನನ್ನ ಜ್ಞಾನ ಭಂಡಾರವನ್ನು ಹೆಚ್ಚಿಸಿದ್ದನು.ಅವನು ಅಷ್ಟು ಹೇಳಿದ ಮೇಲೆ ನಮ್ಮೂರು ಗಜೇಂದ್ರಗಡದಿಂದಲೆ ನಾವು ಅರ್ಧ ಲೀಟರ್ ನ ನಾಲ್ಕು ಪಾಕೀಟು ಹಾಲು, ಎರಡು ಲೀ. ಮೊಸರನ್ನು ತೆಗೆದುಕೊಂಡು ಹೊರಟು ನಿಂತೆವು, ಬದಾಮಿ ಕಡೆಗೆ ಬಸ್ಸಿನ ಸೌಲಭ್ಯ ಈಗೀನಷ್ಟಿರಲಿಲ್ಲ. ಖಾಸಗಿ ವಾಹನಗಳಲ್ಲೆ ಓಡಾಡಬೇಕಾಗಿರುತ್ತಿತ್ತು, ಅದು ನಮಗೇನು ಕಷ್ಟಕರವಾಗಿದ್ದಿಲ್ಲ ನಮ್ಮ ಅಂಗಡಿ ಮತ್ತು ಮನೆಯು ಬಸ್ ನಿಲ್ದಾಣದ ಎದುರಿಗೆ ಇದ್ದುದರಿಂದ, ಆ ಖಾಸಗಿ ವಾಹನಗಳು ನಮ್ಮ ಅಂಗಡಿಯ ಎದುರಿಗೆ ನಿಲ್ಲುತ್ತಿದ್ದರಿಂದ ವಾಹನಗಳನ್ನು ಹುಡುಕಿಕೊಂಡು ಹೋಗುವದು ಕಷ್ಟವೆನಿದ್ದಿಲ್ಲ, ಹೋಗಲು ಅನುವಾಗಿದ್ದಂತಹ ಒಂದು ವಾಹನವನ್ನು ಹತ್ತಿ ಕುಳಿತೆವು ಇಬ್ಬರು. ನಮ್ಮಿಬ್ಬರದು ಒಂದಾರೇಳು ತಿಂಗಳುಗಳ ಹಿಂದಷ್ಟೆ ಮದುವೆಯಾಗಿತ್ತು. ಒಬ್ಬರಿಗೊಬ್ಬರು ಒತ್ತೊತ್ತಿಕೊಂಡೆ ಕುಳಿತುಕೊಂಡೆವು, ಟೆಂಪೊ ಹತ್ತು ನಿಮಿಷದ ನಂತರ ಹೊರಟು ನಮ್ಮೂರಿನ ಕಾಲಕಾಲೇಶ್ವರ ಸರ್ಕಲ್ ನಲ್ಲಿ ಮತ್ತೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಂತಿತು, ನಾನು ಅಲ್ಲಿಯೆ ಇದ್ದ ನಮ್ಮ ಹೂ ಮಾರುವ ಅಲ್ಲಾಭಕ್ಷಿಯ ಅಂಗಡಿಗೆ ಹೋಗಿ ಕಾರ್ಯಕ್ರಮದ ಪೂಜೆಗೆಂದು ಎರಡು ಮಾಲೆ, ನನ್ನವಳ ಮುಡಿಗೆಂದು ಒಂದು ಮೊಳ ಕನಕಾಂಬರ, ಇನ್ನೊಂದು ಮೊಳ ಮಲ್ಲಿಗೆಯನ್ನು ಕಟ್ಟಿಸಿಕೊಂಡು ಬಂದು ನನ್ನವಳ ಮುಡಿಗೆ ಮುಡಿಸಿ ಕುಳಿತುಕೊಂಡೆ, ಅಕ್ಕಪಕ್ಕದವರು ಮುಸುಮುಸು ನಕ್ಕರು ಲೆಕ್ಕಿಸದೆ, ಅಷ್ಟರಲ್ಲಾಗಲೆ ನಮ್ಮ ಎದುರು ಸೀಟಿನಲ್ಲಿ ಒಬ್ಬ ಮಹಿಳೆ ಹೆಣ್ಣು ಕೂಸನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕುಳಿತುಕೊಂಡಿದ್ದಳು, ಎಣ್ಣೆಯಿಲ್ಲದೆ ಕೆದರಿ ನಿಂತ ಕೂದಲು,
ಮುಖವನ್ನು ಸರಿಯಾಗಿ ತೊಳೆದುಕೊಂಡಿಲ್ಲ ಎಂಬುದಕ್ಕೆ ಮಸುಕು ಮಸುಕಾಗಿ ಕಾಣುತ್ತಿದ್ದ ಹಣೆಯ ಕುಂಕುಮ, ಜೋರಾಗಿ ಹಿಡಿದೆಳೆದರೆ ಹರಿದೆ ಹೋಗುವುದೇನೊ ಎಂಬಂತಹ ಉಟ್ಟ ಸೀರೆ, ಕಾಲಿಗೆ ಮೆತ್ತಿಗೊಂಡಿದ್ದ ಮಣ್ಣಿನ ಕೆಸರನ್ನು ನೋಡಿದರೆ ಚಪ್ಪಲಿ...? ಅಂತ ನೋಡುವ ಮಾತೆ ಇಲ್ಲ, ಆದರೆ ಕಾಲುಂಗರದ ಬೆರಳುಗಳಲ್ಲಿ ನನ್ನದೆ ಇದು ಜಾಗ ಎನ್ನುವ ಕುರುಹುಗಳಿದ್ದವೆ ಹೊರತು, ಅವುಗಳಿರಲಿಲ್ಲ,
ಬೆಳಿಗ್ಗೆಯಿಂದ ಏನನ್ನು ತಿಂದಿಲ್ಲ ಎನ್ನುವುದಕ್ಕಿಂತ ಏನನ್ನು ಕುಡಿದೆ ಇಲ್ಲ ಎಂಬುದಕ್ಕೆ ಒಣಗಿ ಅದರುತ್ತಿದ್ದ ತುಟಿಗಳು, ಮಗುವಿನ ಹೊಟ್ಟೆಗೂ ಏನು ಇಲ್ಲ ಎಂಬುದಕ್ಕೆ ಅಂಗಾತ ಮಲಗಿದ ಮಗುವಿನ ಹೊಟ್ಟೆಯು ತೆಗ್ಗು ಬಿದ್ದಂತಾಗಿತ್ತು, ಗಣಿಧಣಿಗಳು ನೈಸರ್ಗಿಕ ಸಂಪನ್ಮೂಲಗಳ ಮಹತ್ವವನರಿಯದೆ ಹಣದ ದುರಾಸೆಗೆ ನೆಲವನ್ನು ಅಗೆದು ಬಗೆದು ಕಂದರಗಳ ಸೃಷ್ಟಿಸಿದ ಹಾಗಿತ್ತು. ಒಂದು ಕ್ಷಣ ಅವರಿಬ್ಬರ ಸ್ಥಿತಿಯನ್ನು ನೋಡಿ ಮೈ ಝುಮ್ಮೆಂದು ಕರಳು ಹಿಂಡಿದಂತಾಯಿತು. ಕಣ್ಣು ಮುಚ್ಚಿ ಎರಡು ಕ್ಷಣ ಹಾಗೆ ಕುಳಿತುಕೊಂಡುಬಿಟ್ಟೆ.

ಭಾಗ ೨

ಅಷ್ಟರಲ್ಲಿ 'ಸಾವಕಾರ ನಮಸ್ಕಾರ್ರಿ' ಎಂದ ಗಾಡಿ ಕ್ಲಿನರ್ (ನಿರ್ವಾಹಕ)
ಕಣ್ಬಿಟ್ಟು ನೋಡಿದೆ, ಪರಿಚಯದವನೆ,
'ನಮಸ್ಕಾರ ಹೇಳಯ್ಯ' ಎಂದೆ,
'ಊರಿಗೆ ಹೊಂಟಿರೇನ್ರಿ' ಎಂದ,
'ಹ್ಞೂಂ... ಇಲ್ಲೆ ಬೇವಿನಕಟ್ಟಿಗೆ, ಒಂದ್ ಬಾಸಿಂಗ ಬಿಡೊ ಕಾರಣ ಇತ್ತ ಅದ್ಕ' ಎಂದು ಅಂಗಿಯ ಜೇಬಿನಿಂದ ಹಣವನ್ನು ತೆಗೆದುಕೊಟ್ಟೆ,
'ಅಲ್ಲಾ...' ಎಂದು ತಲೆಯನ್ನು ಕೆರೆದುಕೊಳ್ಳುತ್ತಲೆ
ಹಣವನ್ನು ಪಡೆಯಲು ಹಿಂಜರಿಯತೊಡಗಿದನು, ಯಾಕೆಂದರೆ ನಮ್ಮಂಗಡಿಯ ಮುಂದೆಯೆ ಅವರು ವಾಹನವನ್ನು ನಿಲ್ಲಿಸುತ್ತಿದ್ದರಿಂದ ನನ್ನಿಂದ ಹೇಗೆ ಹಣವನ್ನು ಪಡೆಯುವುದು  ಎಂದು ಅವನಿಗೊಂದಿಷ್ಟು ಪೇಚಿಗೆ ಸಿಲುಕಿದ ಹಾಗಿತ್ತು, ಅವನ ಮುಖದ ಭಾವನೆಯನ್ನು ಕಂಡು
'ಏ ಇರ್ಲಿ ತಗೊಳೊ ಮಾರಾಯ, ಮುಂಜಾನಿ ನಾಷ್ಟಕರ ಬೇಕಲ್ಲ '
ಎನ್ನುತ್ತಾ ಕೊಟ್ಟೆ, ಹಣವನ್ನು ತೆಗೆದುಕೊಂಡು ಮರಳಿ ಚಿಲ್ಲರೆಯನ್ನು ಕೊಟ್ಟು ಪಕ್ಕಕ್ಕೆ ಸರಿದು ಆ ಹೆಣ್ಣು ಮಗಳತ್ತ ಕೈ ಚಾಚಿ 'ಬಸ್ ಚಾರ್ಜ್ ಕೊಡ್ರಿ' ಎಂದ.
ಅವಳ ಕಣ್ಣಲ್ಲಿ ದುಃಖದ ಕಡಲೆ ಕಟ್ಟಿಕೊಂಡಿತ್ತೇನೊ...ಸರಸರನೆ ಕಣ್ಣಿಂದ ಕಣ್ಣೀರು ಸುರಿಯತೊಡಗಿತು, ಸೀರೆಯ ಸೆರಂಗಂಚಿಂದ ಕಣ್ಣೀರನ್ನು ಒರೆಸಿಕೊಳ್ಳುತ್ತಾ, 'ನನ್ಹತ್ರ ರೊಕ್ಕಾ ಇಲ್ಲಣ್ಣಾ ' ಎಂದಳು.
ಮುಖಸಿಂಡರಿಸಿಕೊಂಡ ಅವನು 'ಮೊದ್ಲ ಹೇಳಿ ಹತ್ತಾಕ ಬರ್ತಿತ್ತಿಲ್ಲ ನಿಂಗ, ಮುಂಜಮುಂಜಾನೆದ್ದ ರೊಕ್ಕಿಲ್ಲಂತದ್ರ, ಮಾಲಕನ ಕೈಯ್ಯಾಗೇನ ಚೊಂಬ ಕೊಡ್ಲೇನ ನಾನು, ಗೊತ್ತಾಗತ್ತಿಲ್ಲ ಬೆ ಹೊಟ್ಟಿ ತೆರ್ದ ಮಕ್ಕಳ ಹಡ್ದಿದಿ ಅಷ್ಟು ತಿಳ್ವಳಿಕಿ ಬ್ಯಾಡನ ನಿಂಗ, ಏ ಡ್ರೈವರ್ ಸಾಬ್ ಗಾಡಿ ಸೈಡ್ಗೆ ಹಾಕಪ.. ಇಲ್ಲೊಂದು ಮುಂಜಾನೆದ್ದ ಲಾಭದ ಗಿರಾಕಿನ ಹತ್ತೈತಿ ಗಾಡ್ಯಾಗ ' ಎನ್ನುತ್ತಾ ಗಾಡಿಯನ್ನು ರಸ್ತೆಯ ಬದಿಯಲ್ಲಿ ನಿಲ್ಲುಸಲು‌ ಡ್ರೈವರ್ ನಿಗೆ ಅವಸರಿಸತೊಡಗಿದನು. ಅವಳು ಸರಕ್ಕನೆ ತನ್ನ ರವಿಕೆಯಲ್ಲಿ ಬಚ್ಚಿಟ್ಟುಕೊಂಡಿದ್ದ ತಾಳಿಯನ್ನು ತೆಗೆದು ಅವನ ಮುಂದೆ ಹಿಡಿದು ತೋರಿಸುತ್ತಾ, ' ಅಣ್ಣಾ ಹಂಗ ಮಾಡಬ್ಯಾಡಣ್ಣ, ಇಲ್ಲೆ ಅರ್ಧ ದಾರ್ಯಾಗ ಬಿಟ್ಟು ಹೋಗ್ಬೇಡ, ನೋಡಿಲ್ಲಿ ಬೇಕಿದ್ರ ಬದಾಮಿ ಬಸ್ಟ್ಯಾಂಡನ್ಯಾಗ ಇಳಿದ ತಕ್ಷಣ ಈ ತಾಳಿ ಮಾರಿ ನಿನ್ನ ರೊಕ್ಕ ಕೊಡ್ತೀನ' ಎಂದಳು. ಅವಳ ಮಾತನ್ನು ‌ಕೇಳಿ ಗಾಡಿಯಲ್ಲಿದ್ದ ಎಲ್ಲರು ಒಂದು ಕ್ಷಣ ಸ್ತಬ್ಧಭೂತರಾದರು. ಡ್ರೈವರ್ ಅವಳ ಮಾತನ್ನು ಕೇಳಿ ಗಾಡಿಯನ್ನು ನಿಲ್ಲಿಸದೆ ಓಡಿಸತೊಡಗಿದನು,
'ಎಲ್ಲಿಂದ ಬಂದಿಯವ್ವ' ಎಂದು ಕ್ಲಿನರ್ ಕುತೂಹಲದಿಂದ ಕೇಳಿದ,
' ನಾವು ಇಲ್ಲೆ ಬದಾಮಿ ದಾಟಿ ಒಂದ ಹಳ್ಳಿರಿ, ಈಗೆರಡ ತಿಂಗಳ್ದ ಹಿಂದ ನಾನು ನನ್ನ ಗಂಡ ಮಂಗ್ಳೂರಿಗೆ ದುಡ್ಕೊಂಡ ತಿನ್ನಾಕಂತ ಹೋಗಿದ್ವಿರಿ, ಒಂದ ತಿಂಗಳ ಛಲೊತ್ನ್ಯಾಗ ದುಡ್ದವ್ರ್ಯಾ, ಬಂದ ರೊಕ್ಕಾನೆಲ್ಲ ನನ್ನ ಗಂಡ ಕುಡ್ದ ಜೂಜಿಗೆ ಆಡಾಕ ಹತ್ತಿದ್ನರ್ರಿ, ಮೊನ್ನೆ ರಾತ್ರಿ ಯಾರೊ ಇಬ್ರನ್ನ ಕರ್ಕೊಂಡ ಬಂದ ಈ ಹಸುಗೂಸನ್ನ ಮಾರಾಕ ಹೊಂಟಿದ್ನರ್ರಿ, ಅಲ್ಲೆಲ್ಲಾ ಗುದ್ದಾಡಿ ಬಾಯ್ ಮಾಡಿದ್ದಕ್ಕ ನಮ್ಹಂಗ ಕೆಲ್ಸಕ್ಕ ಬಂದ ಮಂದಿ ಎಲ್ಲಾ ಸೇರಿ ನನ್ನ ಗಂಡನ್ನ ಅವನ ಜೊತಿಗ ಬಂದ್ರವ್ನ ಬಾಸುಂಡೆ ಬರೊ ಹಂಗ ಹೊಡ್ದ ಹೋದರ್ರಿ.. ಇದ ಸಿಟ್ಟಿಲೆ ನನ್ನ ಗಂಡ ಒಡಗಟಗಿ ತಗೊಂಡು ಮೈ ತುಂಬಾ ರಕ್ತ ಬರಂಗ ಹೊಡ್ದ, ಕುಡ್ದ ಬಂದ ಮತ್ತ ಕೈ ತಗೋತಿನಂತ ಹ್ವಾದನ್ರೀ...ಇನ್ನ ಇಂವ ಇಲ್ಲಿದ್ರ ನನ್ನ ಜೀವಾ ಉಳ್ಸಂಗಿಲ್ಲ ಅಂತ ಅನ್ಕೊಂಡ, ಉಟ್ಟ ಬಟ್ಟಿಲೆ ಹಟ್ಟಿ ಬಿಟ್ಟ ಹೊಂಟ ಬಂದೇನ್ರಿ, ಮಂಗ್ಳೂರಿಂದ ನಮ್ಮೂರಿಗ ಬರಾಕ ಟಿಕೆಟ್ಗೆ ರೊಕ್ಕ ಇರಲಾರ್ದಕ್ಕನ ಕಾಲನ ಬೆಳ್ಳಿ ಕಾಲುಂಗ್ರ ಮಾರಿ  ಗಡಾತನ್ಕ ಬಂದಿನ್ರೀ..ಇನ್ನೂ ಒಂದು ಹನಿ ನೀರ ಸೈತ ಬಾಯ್ಯಾಗ ಹಾಕ್ಕೊಂಡಿಲ್ರೀ, ಅಣ್ಣೊರ ನಿಮ್ಗ ಪುಣ್ಯ ಬರತೈತ್ರಿ ಬದಾಮಿ ತಂಕ ಕರ್ಕೊಂಡ ಹೋಗ್ರಿ,  ಈ ತಾಳಿನ ಮಾರಿಸಿಕೊಡ್ರಿ, ನಿಮ್ಮ ರೊಕ್ಕ ಕೊಟ್ಟ ನಾ ಅತ್ಲಾಗ ನಮ್ಮ ತವರ ಮನಿ ಗಾಡಿ ಹಿಡಿತಿನ್ರೀ...' ಎಂದು ತನ್ನ ರಾಮಾಯಣವನ್ನೆಲ್ಲ ಒಂದೆ ಉಸಿರಿನಲ್ಲಿ ಹೇಳಿಬಿಟ್ಟಿದ್ದಳು. ಬಾಯೆಲ್ಲಾ ಒಣಗಿ ಬಿಟ್ಟಿತ್ತು, ಇನ್ನು ಒಂದು ಮಾತನ್ನು ಆಡಲು ಆಗದು ಎನ್ನುವ ಹಾಗೆ ಸೀಟಿಗೊರಗಿ ಕುಳಿತುಬಿಟ್ಟಳು. ಆಗ ನಾನು ಅವಳ ಕರುಣಾಜನಕ ಕಥೆಯಿಂದ ಹೊರಬಂದು, ನನ್ನ ಬ್ಯಾಗನಲ್ಲಿದ್ದ  ನೀರಿನ ಬಾಟಲಿಯನ್ನು ಅವಳಿಗೆ ಕುಡಿಯಲಿಕ್ಕೆಂದು ಕೊಟ್ಟೆ, ಒಂದೆ ಗುಟುಕಿಗೆ ಅರ್ಧದಷ್ಟು ನೀರನ್ನು ಕುಡಿದು ದಣಿವಾರಿಸಿಕೊಂಡಳು. ಅವಳ ಮಾತುಗಳನ್ನು ಕೇಳಿದ ಎಲ್ಲರ ಮೊಗದಲ್ಲು ಅನುಕಂಪದ, ಪಾಪದ ಭಾವನೆ ಎದ್ದು ಕಾಣುತ್ತಿತ್ತು, ಎಲ್ಲೊ ನನ್ನ ಮನದ ಮೂಲೆಯ ಬಣವಿಗೆ ಸಣ್ಣದೊಂದು ನೋವಿನ ಕಿಡಿ ಹೊತ್ತಿದಂತಾಗಿ ನೋವನ್ನು ತಾಳಿಕೊಳ್ಳಲಾದೆ, ಎರಡು ಹನಿ ಕಣ್ಣೀರನ್ನು ಹಾಕಬೇಕೆಂದುಕೊಂಡೆ, ಗಂಡಸಲ್ವ... ಎಂದುಕೊಂಡು ಕಣ್ಮುಚ್ಚಿ ಅವುಡುಗಚ್ಚಿಕೊಂಡೆ.
' ಛೇ...ಛೆ...ಛೆ..ಎಂತ ಮಾತ ಬೆ ತಂಗ್ಯಮ್ಮ, ನನ್ನ ಒಡಹುಟ್ಟಿದ
ತಂಗಿಯಾದ್ರು ಒಂದ, ನೀನಾದ್ರು ಒಂದ, ನಿನ್ನ ತಾಳಿ ಮಾರಿಸಿ ನಾ ಯಾ ನರಕಕ್ಕ ಹೋಗ್ಲೆವ್ವ, ಅಳಬ್ಯಾಡ ನೀನು‌‌, ನೋಡ ರೊಕ್ಕ ಕೊಡದ ಬ್ಯಾಡ, ಮುಂದ ಬದಾಮ್ಯಾಗ ನಿಮ್ಮೂರ ಬಸ್ಸ ಹತ್ತಿಸಿ ಕಳ್ಸೊ ಜವಬ್ದಾರಿ ನಂದ ಐತವ್ವ, ಆ ತಾಳಿನ ಮೊದ್ಲಕ‌ ಜ್ವಾಕ್ಯಾಗಿ ಹಂತ್ಯಾಕ ಇಟ್ಕೊ' ಅಂದ ಆ ಕ್ಲಿನರ್ ನ ಕಣ್ಣಲ್ಲಿ ಎರಡು ಹನಿ ಕಣ್ಣೀರು ಉದುರಿದ್ದನ್ನು ಯಾರು ನೋಡಲೆ ಇಲ್ಲ ಅವನ ಮುಂಗೈಯೊಂದು ಹೊರತುಪಡಿಸಿ, ಇನ್ನೇನು ಅರ್ಧ ಕಿ.ಮಿ. ನಲ್ಲಿ ನಮ್ಮ ನಿಲ್ದಾಣ ಬರುತ್ತದೆಂದು ಗೊತ್ತಾದ ಮೇಲೆ ಕೈ ಚೀಲದಲ್ಲಿದ್ದ ಒಂದು ಅರ್ಧ ಲಿ. ಹಾಲಿನ ಪಾಕೀಟನ್ನು ತೆಗೆದು ನನ್ನವಳ ಕೈಯಿಂದ ಆ ಮಗುವಿಗೆ ಹಾಲನ್ನು ಕುಡಿಸಲು ಕೊಡಿಸಿಬಿಟ್ಟೆ, ನಾವು ಇಳಿಯಬೇಕಾದ ಸ್ಥಳವು ಬಂದಾಗ, ಇಳಿಯುವ ಮುಂಚೆ ತಾಯಿ ಮಗಳನ್ನೊಮ್ಮೆ ದಿಟ್ಟಿಸಿನೋಡಿ, ನಿಟ್ಟುಸಿರೊಂದನು ಬಿಟ್ಟು ಕೆಳಗಿಳಿದೆವು. ಆ ಕ್ಲಿನರ್ ನ ಬೆನ್ನನ್ನು ತಟ್ಟಿ ಹಳ್ಳಿಯೊಳಕ್ಕೆ ಹೆಜ್ಜೆ ಹಾಕಿದೆವು.

ಭಾಗ ೩

ಇದಾಗಿ ಎರಡ್ಮೂರು ತಿಂಗಳುಗಳೆ ಕಳೆದು ಹೋಗಿದ್ದವು, ಮತ್ತೆ ಈ ವಿಚಾರವಾಗಿ ನಾನು ಆ ಕ್ಲಿನರ್ ನ ಭೇಟಿಯಾಗಿ ಮಾತು ಆಡಿರಲಿಲ್ಲ. ಅವತ್ತು ಸಂಜೆ ಐದು.. ಐದುವರೆ ಆಗಿರಬಹುದು.. ನಾನು ಏನೊ ಸಾಮಾನುಗಳನ್ನು ಅಂಗಡಿಯಲ್ಲಿ ಹೊಂದಿಸುತ್ತಿದ್ದೆ ಅಂಗಡಿಯಲ್ಲಿ ಒಂದೆರಡು ಗಿರಾಕಿಗಳಿಗೆ ನನ್ನ ತಮ್ಮನು  ಮೊಬೈಲ್ ಕರೆನ್ಸಿಯನ್ನು ಹಾಕುತ್ತಿದ್ದಾಗ ಇಬ್ಬರು ಒಳಗೆ ಬಂದರು, ಗಂಡಸು ' ಮಾಲಕ್ರ ಈ ಏರಟೆಲ್ ನಂಬರಿಗೆ ಒಂದೈವತ್ತು ರೂಪಾಯಿ ರೊಕ್ಕ ಹಾಕ್ರೀ' ಎನ್ನುತ್ತಾ ನನ್ನ ತಮ್ಮನ ಜೊತೆ ಮಾತನಾಡುತ್ತಾ ನಿಂತನು, ಅವನ ಹಿಂದೆ ಬಂದದ್ದು ಹೆಣ್ಮಗಳು ನನ್ನ ಹಿಂದೆ ನಿಂತುಕೊಂಡಳು, ಅವಳ ಕೈ ಬಳೆಗಳ ಸದ್ದು, ದೇಹಕ್ಕೆ ಹಾಕಿಕೊಂಡ ಸೆಂಟಿನ ವಾಸನೆ, ಝಗಮಗಿಸುವಂತಹ ಸೀರೆ, ಮುಡಿತುಂಬ ಮಲ್ಲಿಗೆ ಕನಕಾಂಬರ ಸಾಲದೆಂಬಂತೆ ಎರಡು ತುಂಬು ಅರಳಿದ ಗುಲಾಬಿಗಳು, ಹಿಂದಿನಿಂದಲೆ ನೋಡಿ‌, ಸೊಸಿ ಮಾವನ ಜಾತ್ರಿ ಜೋರ ಮಾಡ್ಸಿರಬೇಕ ಅಂತ ಮನಸ್ಸಿನಲ್ಲಿಯೆ ನಗುತ್ತಾ ಮತ್ತೆ ಕೆಲಸದತ್ತ ಗಮನವನ್ನು ಹರಿಸಿದೆ, ಆಗ ಅವಳು ಏನೊ ಒಂದು ಸಾಮಾನಿಗಾಗಿ ಅವನನ್ನು ಪೀಡಿಸತೊಡಗಿದಳು, ' ನಂಗ ಬೇಕಂದ್ರ ಬೇಕ ನೋಡಿಗ ಏನ. ಆಗ್ಲಿ, ಆರ ಹೋಗಿ ಮೂರರ ಆಗ್ಲಿ, ಒಂಬತ್ತರ ಆಗ್ಲಿ ನಂಗ ಬೇಕಂದ್ರ ಬೇಕ,' ಎನ್ನುತ್ತಾ ಹಠ ಹಿಡಿದಳು. ನನಗಾಗ ಈ ಧ್ವನಿಯನ್ನು ಎಲ್ಲೊ‌ ಕೇಳಿದ ಹಾಗಿದೆಯಲ್ಲ, ಯಾಕೊ‌ ಬಹಳ ಸ್ವಲ್ಪ ಪರಿಚಿತ ಧ್ವನಿ ಇದ್ದ ಹಾಗಿದೆ ಒಮ್ಮೆ ಮುಖವನ್ನು ನೋಡಲೆ ಬೇಕೆಂದುಕೊಂಡು ಅವಳ ಎದುರಿಗೆ ಹೋಗಿ ನಿಂತಾಗ ಅಕ್ಷರಶಃ ಸಿಡಿಲು ಬಡಿದಂತಹ ಅನುಭವ ನನಗೆ, ಅದೆ.. ಅವಳೆ ಅಂದು ಹೊಟ್ಟೆಗೆ ಹಿಟ್ಟಿಲ್ಲದೆ, ಊರಿಗೆ ಹೋಗಲು ಹಣವಿಲ್ಲದೆ ತಾಳಿ ಮಾರಿ ಊರು ಸೇರಲು ಹವಣಿಸುತ್ತಿದ್ದ ಹೆಣ್ಣು ಇವಳೇನಾ...? ಅಬ್ಬಬ್ಬಾ..!!! ಅದೆಂತಹ ಸಂದರ್ಭ ನನಗೊದಗಿ ಬಂದದ್ದು, ಎಣ್ಣೆ ಕಾಣದ ಕೂದಲಿಂದು ಒಪ್ಪವಾಗಿ ಬಾಚಿ, ಮಾರುದ್ದ ಜಡೆಯ ಕಟ್ಟಿಕೊಂಡು ಮುಡಿತುಂಬ ಘಮಘಮಿಸುವ ಹೂವನ್ನು ಮುಡಿದುಕೊಂಡು, ತುಟಿಯ ತುಂಬ ಕೆಂಪು ರಂಗನು ತುಂಬಿಕೊಂಡು, ಕಣ್ಣಂಚಲೆ ಕೊಲ್ಲಲು ಸಾಕಾಗುವಷ್ಟು ಕಾಡಿಗೆಯನ್ನು ತೀಡಿಕೊಂಡು, ಕೈ ಎತ್ತಲು ಭಾರವೆನಿಸುವಷ್ಟು ಕೆಂಪು ಗಾಜಿನ ಚುಕ್ಕಿ ಬಳೆಗಳು ಎರಡು ಕೈಗಳಲ್ಲಿ ಹಾಕಿಕೊಂಡಿದ್ದರೆ, ಕಣ್ಣಲ್ಲಿ ಉತ್ಸಾಹದ ಚಿಲುಮೆ, ಒಟ್ಟಿನಲ್ಲಿ ನೋಡುತ್ತಿದ್ದರೆ ಬೆಂದ ಮರುಳುಗಾಡು ನೀರುಂಡು ಪಶ್ಚಿಮಘಟ್ಟದಂತಹ ಹಸಿರನ್ನು ಹೊದ್ದು ನಿಂತರೆ ಯಾವ ರೀತಿಯಲ್ಲಿ ಕಲ್ಪಿಸಿಕೊಳ್ಳಬಹುದೊ, ಆ ಕಲ್ಪನೆಗೆ ಹೊಂದಿಕೊಳ್ಳುವಂತಿದ್ದಳು. ಅರೆ..!!! ಒಂದಾಶ್ಚರ್ಯ, ಮಗು..!!! ಮಗವೊಂದು ಇರಲಿಲ್ಲ ಅವಳ ಕಂಕುಳಲ್ಲಿ, ತೆರದ ಬಾಯಿಂದ, ಬಿಟ್ಟ ಕಣ್ಣನ್ನು ಬಿಟ್ಟ ಹಾಗೆ ನೋಡುತ್ತಾ ನಿಂತುಬಿಟ್ಟೆ ಎರಡು ಕ್ಷಣ. ಆಗ ಅವಳು ಒಂದೆರಡು ಸಲ ನನ್ನ ಕಡೆ ನೋಡಿ ದೆವ್ವ ನೋಡಿದವರಂತೆ ಅರೆ ಕ್ಷಣದಲ್ಲಿ ಬೆವರಿನಿಂದ ನೀರು ನೀರಾಗಿಬಿಟ್ಟಳು, ನೀನು ಅವಳಲ್ಲವೆ..? ಎನ್ನುವ ನನ್ನ ಹುಬ್ಬು ಗಂಟಿಕ್ಕಿದ ಸೂಜಿ ನೋಟಕ್ಕೆ ಹೆದರಿದಳೇನೊ ಚಿಟ್ಟನೆ ಚೀರಿ ಕೈಯಲ್ಲಿ ಹಿಡಿದುಕೊಂಡಿದ್ದ ಸಾಮಾನನ್ನು ಕೈ ಬಿಟ್ಟು ಅಂಗಡಿಯಿಂದ ಹೊರಗೊಡಿಬಿಟ್ಟಳು. ಎಲ್ಲರು ಕ್ಷಣಕಾಲ ಹೆದರಿಬಿಟ್ಟಿದ್ದರು ಅವಳ ಆಟಕ್ಕೆ, ಅವಳ ಹಿಂದೆ ಬಂದ ಗಂಡಸು ಕರೆನ್ಸಿಯ ಹಣವನ್ನು ಕೊಟ್ಟು ಅವಳ ಹಿಂದೆಯೆ ಓಡಿ ಹೋದನು. ನನಗೆ ಅವತ್ತು ರಾತ್ರಿಪೂರಾ ನಿದ್ದೆನೆ ಬರಲಿಲ್ಲ, ಅವಳು ಅಂದು ನಡೆದುಕೊಂಡ ರೀತಿ, ಇವತ್ತಿನ ವೇಷಭೂಷಣ, ಕಂಕುಳಲ್ಲಿಯ ಕೂಸು ಏನಾಯಿತು, ಕರುಣೆ ತೋರಿ ಬದಾಮಿವರೆಗೂ... ಬಸ್ಸ್ ಚಾರ್ಜ್ ಇಲ್ಲದೆ ಕರೆದೊಯ್ದ ಆ ಕ್ಲಿನರ್ ನ ನಿಯತ್ತು, ಕನಿಕರವೇನಾಯಿತು, ಅಂದವಳ ಅಸಹಾಯಕತೆಯೊ..? ನಾಟಕವೊ..? ಇಂದಿವಳ ನಿಜ ರೂಪವೊ...? ಹಾದರತೆಯೊ...?  ನನಗೊಂದು ಇವತ್ತಿಗೂ ಅರ್ಥವಾಗುತ್ತಿಲ್ಲ.   ಹೇಗೆ ಹೇಳಲಿ ಇದು ಕಥೆಯಲ್ಲ... ಜೀವನ