Thursday, June 14, 2018

ಇದು ಕಥೆಯಲ್ಲ ಜೀವನ ೨

ಅವತ್ತು ಹಾಗೆ ಸುಮ್ಮನೆ ಗಿರಾಕಿಗಳಿಲ್ಲದೆ ಅಂಗಡಿಯಲ್ಲಿ  ಒಬ್ಬನೆ ಕುಳಿತುಕೊಂಡಿದ್ದೆ, ಹೊರಗೆಲ್ಲ ರಸ್ತೆಯಲ್ಲಿ ತಮ್ಮ ತಮ್ಮ ಪಕ್ಷಗಳ ಪ್ರಚಾರ ಕಾರ್ಯದಲ್ಲಿ ಕಾರ್ಯಕರ್ತರು ಹುರುಪಿನಿಂದ, ಅಬ್ಬರದ ಪ್ರಚಾರವನ್ನೆ ಕೈಕೊಂಡಿದ್ದರು. ಹತ್ತು ನಿಮಿಷ ಕಳೆಯಿತು, ಒಂದಿಪ್ಪತ್ತು ಇಪ್ಪತ್ತೈದು ಜನರ ಒಂದು ಪಕ್ಷದ ಗುಂಪು ಅಂಗಡಿಯ ಹತ್ತಿರ ಬಂದು ಆ ಗುಂಪಿನ ಮುಂದಾಳತ್ವವನ್ನು ವಹಿಸಿದಂತ ವ್ಯಕ್ತಿಯು ಬಂದು ತಮ್ಮ ಪಕ್ಷದ ಕರಪತ್ರವನ್ನು ನೀಡುತ್ತಾ, ' ನಮಸ್ಕಾರ ಅಣ್ಣವ್ರ ದಯವಿಟ್ಟು ನಿಮ್ಮ ಓಟನ್ನ ನಮ್ಮ ಸಾಹೇಬ್ರಗೆ ಹಾಕ್ಬೇಕ್ರಿ' ಎಂದು ಗುಟ್ಕಾದಿಂದ ಬಣ್ಣ ಬಡ್ಕೊಂಡಿದ್ದ ಅವನ ಅಳಿದುಳಿದ ಹಲ್ಲುಗಳನ್ನು ಪ್ರದರ್ಶಿಸುತ್ತಾ, 
    ಒಂದು ಕ್ಷಣ ಆ ಕರಪತ್ರವನ್ನು ನೋಡಿ ಆ ವ್ಯಕ್ತಿಯ ಮುಖವನ್ನೊಮ್ಮೆ ನೋಡುತ್ತಾ, ಮೆಲ್ಲಗೆ 'ನಂಗ ಒಂದ ಹದಿನೆಂಟ ಸಾವಿರ ರೂಪಾಯಿ ಕೊಡ್ರೀ.. ಒಂದೊಂದ ಓಟಿಗೆ ಮೂರ ಮೂರ ಸಾವಿರ ರೂಪಾಯಿ ಹಂಗ, ನಮ್ಮನಿಯಾಗ ಒಟ್ಟ ಒಂದಾರ ಓಟ ಅದಾವು, ಇಷ್ಟು ಓಟನ್ನ ನಿಮ್ಮ ಪಕ್ಷಕ್ಕ ಹಾಕ್ತೀವಿ, ಗ್ಯಾರಂಟಿಗೆ ನೀವ್ ಯಾ ದೇವ್ರ ಮೇಲ್ ಪ್ರಮಾಣ ಮಾಡಂದ್ರು ಮಾಡ್ತೀವಿ ಬೇಕಿದ್ರ' ಅಂದೆ ನಾನು
ಆ ವ್ಯಕ್ತಿ ನಾನು ಈ ರೀತಿ ಅವನನ್ನು ಪ್ರಶ್ನಿಸುತ್ತೇನೆಂದು ಎಣಿಸಿರಲಿಕ್ಕಿರಲಿಲ್ಲ, ಕ್ಷಣಕಾಲ ಗಲಿಬಿಲಿಗೊಂಡವನಂತೆ ಕಂಡರು ಸಾವರಿಸಿಕೊಂಡು, ' ಏ..ಏನ್ರೀ ಸರ್ ಏಜ್ಯುಕೇಟೆಡ್ ಆಗಿ ನೀವ್ ಹಿಂಗ ರೊಕ್ಕ ಕೇಳಿದ್ರ ಹ್ಯಾಂಗ್ರಿ.. ಮತ್ತಿನ್ನ ಹಳ್ಳೇನರ ಹ್ಯಾಂಗ ಮಾಡ್ಲಿಕ್ಕೇಳ್ರಿ, ಅದು ಅಲ್ದ ನೀವ್ ಹಿಂಗ ರೊಕ್ಕ ಕೇಳೊದು ಕಾನೂನಿನ ಪ್ರಕಾರ ಅಪರಾಧ ಆಕ್ಕೈತ್ರೀ...' ಎಂದು ತನ್ನವರತ್ತ ನೋಡುತ್ತಲೆ, ಅವನ ಸುತ್ತಲಿದ್ದ ಕೆಲವು ಮಂದಿ 'ಹೌದೌದ್ರೀ..., ಅಲ್ಲನು ಮತ್ತ, ಖರೆ ಐತಿದು, ನಮ್ಮ ಸರ್ ಹೇಳೊದ ಬರೊಬ್ಬರಿ ಐತಿ', ಅಂತ ತಲೆಗೊಂದು ಮಾತಿನ ಮುತ್ತುಗಳು ಉದುರಿದವು.
    ಅವರಾಡಿದ ಮಾತಿಗೆ ನಾನು ತುಸು ನಕ್ಕು, 'ಹೌದಲ್ರೀ ಇದು ನಂಗು ಗೊತ್ತಿರ್ಲಿಲ್ಲ, ತಪ್ಪು...ತಪ್ಪು... ನಾನು ಹಣ ಕೇಳೊದು ತಪ್ಪಾಗ್ತದ, ಅಲ್ವಾ, ' ಎಂದೆ,
ಎಲ್ಲರೂ ಹೌದೌದು ಎನ್ನುವಂತೆ ತಲೆಯಾಡಿಸಿದರು,
' ಮತ್ತ ಇಷ್ಟ ಮಂದಿ ಪ್ರಚಾರಕ್ಕಂತ ಬಂದೀರಿ, ನೀವೆಲ್ಲ ನಿಮ್ಮ ಸ್ವಂತ ರೊಕ್ಕಾನ ಖರ್ಚ ಮಾಡ್ಕೊಂಡು ಪ್ರಚಾರಕ್ಕ ಬಂದಿರೊ, ಇಲ್ಲಾ,... ನಿಮ್ಮ ಸಾಹೇಬ್ರ ಮೇಲಿನ ಅಭಿಮಾನಕ್ಕ ಬಂದೀರೊ...' ಎನ್ನುತ್ತಾ ಎಂದು ನಿಂತೆ,
ನಾ ಕೇಳಿದ ಪ್ರಶ್ನೆಗೆ ಅವನ ಹಿಂದೆ ನಿಂತಿದ್ದ ಕೆಲವರು ಹಾಗೆ ಅಂಗಡಿಯಿಂದ ಹೊರಗೆ ನಡೆದರು,
ಆ ವ್ಯಕ್ತಿಯು ' ಏ ನಾವೆಲ್ಲ ಅವರ ಪಕ್ಕಾ ಅಭಿಮಾನಿಗಳ್ರೀ ಒಂದ ಪೈಸಾನು ಮುಟ್ದಂಗ ಕೆಲ್ಸ ಮಾಡಾಕ ಹತ್ತೀವಿ,' ಎಂದ.
ನಾನು ತಟ್ಟನೆ ಅವನ ಕೈಯನ್ನು ಹಿಡಿದುಕೊಂಡು ಕೈ ಕುಲುಕುತ್ತಾ,  'ಇವತ್ತು ನಾನು ನಿಮ್ಮ ಜೊತಿಗೆ ಪ್ರಚಾರ ಮಾಡಾಕ ಬರ್ತೀನಿ ನಡ್ರಿ ನಿಮ್ಮಂಥಹ ನಿಸ್ವಾರ್ಥ ಕಾರ್ಯಕರ್ತರು ಯಾರ್ ಸಿಗ್ತಾರ್ರೀ ಈಗೀನ ಕಾಲ್ದಾಗ, ಹ್ಞಾಂ, ಮತ್ರ ಸಂಜಿಕ ನಿಮ್ಮ ಸಾಹೇಬ್ರನ್ನ ಭೇಟಿ ಮಾಡಿ, ಅವರ್ಗೊಂದು ಅಭಿನಂದನೆಗಳನ್ನ ತಿಳಿಸಿ, ನನ್ನ ಮನೇನ ಓಟ ಒಷ್ಟು ನಿಮ್ಗ ಹಾಕ್ತೀವ್ರೀ ಅಂತಂದ ಹೇಳ ಬರ್ತೇನ, ಹೋಗೊಣ್ರ್ಯಾ' ಎಂದು ಅಂಗಡಿಯಿಂದ ಆಚೆ ಬರಲು ಅನುವಾದೆ. ಈ ಸಲ ಮಾತ್ರ ಆ ವ್ಯಕ್ತಿಯ ಮುಖ ಮಾತ್ರ ಬಿಳಚಿಕೊಂಡುಬಿಟ್ಟಿತು. ಅವನ ಹಿಂಬಾಲಕರಲ್ಲಿ ಒಬ್ಬ 'ಅದ್ಹೆಂಗ್ರಿ ಮನೇನ ದಗದಾ ಬಗ್ಸಿ ಬಿಟ್ಟ, ಇಂತಾ ರಣರಣ ಬಿಸ್ಲಾಗ ಪುಗ್ಸಟ್ಟೆ, ಅದು ಕೈಲೆ ಖರ್ಚ ಮಾಡ್ಕೊಂಡ ಯಾರ್ ಬರ್ತಾರ್ರೀ ತಲಿಗೀಲಿ ಕೆಟ್ಟೈತನು ನಿಮ್ದು, ' ಅಂದ ಸ್ವಲ್ಪ ಮೂಗಿನಿಂದ ಗುಟುರು ಹಾಕುತ್ತಾ, ' ಹೌದ್ರ್ಯಾ ಮತ್ತ ಒಂದಿನಕ್ಕ ಎಷ್ಟ ತಗೊತಿರಿ ಹಾಗಿದ್ರ,' ಎಂದೆ
' ಇನ್ನೂರ ರೂಪಾಯಿರೀ... ಮುಂಜಾನಿ ನಾಷ್ಟ, ಮಧ್ಯಾಹ್ನದೂಟ, ಸಂಜಿಕೆ ಮನಿಗೆ ಹೋಗ ಮುಂದ ಒಂದ ನೈಂಟಿ,' ಎಂದನು ಗರ್ವದಿಂದಲೆ, ನಾನು ಅಷ್ಟೇ ಶಾಂತವಾಗಿ
'ನೋಡ್ರಪ್ಪ.. ಒಂದಿನಕ್ಕ ಎರಡ್ನೂರ ರೂಪಾಯಿ, ಇನ್ನೂ ಹದಿನೈದ ದಿನ ಐತಿ ಓಟ ಹಾಕೋದು ಅಂದ್ರ ಹದಿನೈದ ದಿನಕ್ಕ ಮೂರು ಸಾವಿರ, ಮತ್ತ ಓಟ ಹಾಕೊ ದಿನ ಎಲ್ಲಾ ಪಕ್ಷದವರ ಒಂದೊಂದಿಷ್ಟು ಕೈ ಬೆಚ್ಗ ಮಾಡ್ತಾರ ಒಟ್ಟಾರೆಯಾಗಿ, ಐದುವರಿ ಸಾವ್ರ ರೊಕ್ಕ ಕೂಡ್ತದ, ಹೌದಲ್ಲೊ' ಅಂದೆ, ಅದಾಗಲೆ ಆ ವ್ಯಕ್ತಿಯ ಹಿಂಬಾಲಕರು ಅರ್ಧದಷ್ಟು ಜನರು ಜಾಗ ಖಾಲಿಮಾಡಿ ಬಿಟ್ಟಿದ್ದರು. ಅವನ ಮೊಗದಲ್ಲಿ ಸಣ್ಣಗೆ ಬೇವರ ಹನಿಗಳು ಗರ್ಭಧರಿಸತೊಡಗಿದವು, ಮತ್ತೆ ನಾನೆ ಮಾತನ್ನು ಮುಂದುವರೆಸುತ್ತಾ, 'ಸರಿ ಇರ್ಲಿ ಬಿಡಿ, ನೀವಂತು ಸಾಲಿ ಕಲ್ತಿಲ್ಲ, ಊರಾಗ ದುಡ್ಕಿಲ್ಲ, ಮಾಡಾಕ ಕೆಲ್ಸಿಲ್ಲ, ಹಿಂಗಾಗಿ ಕೂಲಿ ಆಸೆಗೆ ಬಂದಿರಿ' ಎನ್ನುತ್ತಲೆ, ಹೌದೌದು ಎನ್ನುತ್ತಾ ತಲೆಯಾಡಿಸಿದರಿಬ್ಬರು, ' ನಾ ಕಲ್ತಾವ ಅದೀನಿ,‌ ನೀವು ಕೇಳೊದು ಬರೊಬ್ಬರಿ ಐತಿ, ನಿಮಗ್ಯಾಕ ಬೇಕ್ರಿ ರೊಕ್ಕಾ ಅಂತಂದ ಹೇಳಿ, ಇದು ನ್ಯಾಯವಾದ ಮಾತೈತಿ, ಆದ್ರ ನೀವ್ ನನ್ನ ಹಿಂಗ ಕೇಳ್ದಂಗ, ನಿಮ್ಮ ನಾಯಕರನ್ನ ಯಾಕ ಕೇಳೊದಿಲ್ಲ' ಅಂತಂದೆ, 'ಅವರನ್ನ ಏನಂತ ಕೇಳಬೇಕ್ರೀ..' ಒಬ್ಬ ಸ್ವಲ್ಪ ಸಿಟ್ಟಿಲೆ, 'ಏನಿಲ್ಲೊ ಸಾವಕಾರ ಅಷ್ಟ್ಯಾಕ ಸಿಟ್ಟಿಗೆ ಬರ್ತೀದಿ ನೀನು, ಅಲ್ಲ ನಿಮ್ಮ ನಾಯಕರದ್ದು ಆಸ್ತಿ ಇಲೆಕ್ಷನ್ಗೆ ನಿಂದ್ರೊ ಮುಂಚ್ಯಾಕ, ಅವರಾಸ್ತಿ ಹತ್ತ ಲಕ್ಷೊ, ಒಂದ ಕೋಟಿಯೊ ಇರ್ತದ, ಅವರು ಚುನಾವಣೆ ಗೆದ್ದ, ಐದ ವರ್ಷ ಖುರ್ಚಿ ಮ್ಯಾಲ ಕುಂತ, ಕೆಳಗಿಳಿಯೊದ್ರೊಳಗ, ಅವರಾಸ್ತಿ ದುಪ್ಪಟ್ಟ ಆಗಿರ್ತದ, ಹೆಂಗ ಬಂತ್ರೀ ಇಷ್ಟಕ್ಕೊಂಡ ಆಸ್ತಿ ಅಂತ ಇಲ್ಲಿರೊರು ಯಾರರ ಕೇಳ್ತಿರೇನು?, ಇಲ್ಲ, ಒಂದ ಸಣ್ಣ ಇಂಡಿಕಾ ಕಾರ್ ನ್ಯಾಗ ಓಡಾಡಾಂವ ಅಧಿಕಾರದ ಕೊನಿ ಕೊನಿಗೆ ಹತ್ತ ಹನ್ನೊಂದ ಲಕ್ಷ ರೂಪಾಯಿ ಕಾರ್ನ್ಯಾಗ ಓಡಾಡ್ತೀರ್ತಾನ, ಇದು ಹ್ಯಾಂಗ ಬಂತಂದ ಯಾರರ ಕೇಳ್ತಿರನು.? ಅದು ಇಲ್ಲ, ಅಲ್ರೀ ಒಬ್ಬ ಕನ್ನಡ ಸಾಲಿ ಮಾಸ್ತರನ ಪಗಾರ ಎಷ್ಟೈತಪಾ ಒಂದ ತಿಂಗ್ಳಿಗೆ,     ಇಷ್ಟು ಐದು ವರ್ಷಕ್ಕ.   ಇಷ್ಟಾತ,ಹೌದಾ, ನಿಮ್ಮ ಶಾಸಕರದ್ದು ಎಷ್ಟೈತಪ, ತಿಂಗಳ ಪಗಾರ.      ಇಷ್ಟೈತಿ, ಐದ ವರ್ಷಕ್ಕ.      ಇಷ್ಟಾಗತ್ತ ಮತ್ತ ಉಳ್ದಿದ್ದ ಹಣ ಎಲ್ಲಿಂದ ಬಂತಂದ ಯಾರರ ಕೇಳ್ತಿರೇನು..?'
ಅಂದೆ, ಒಬ್ಬನಿಗೆ ಎಲ್ಲಿಲ್ಲದಷ್ಟು ಕೋಪ ಬಂದ ಬಿಡ್ತು, ಗುಂಪಿನಿಂದ ತೂರಿಕೊಂಡ ಮುಂದ ಬಂದವ್ನ, ' ಏ ತಮ್ಮ ನೀ ಓಟ ಹಾಕ್ತೀನ ಅನ್ನೊಗಿದ್ರ ಹಾಕ, ಇಲ್ದಿದ್ರ ಬಿಡು, ಏನ ನಿಮ್ಮನಿ ಆರ ಓಟ ಬಿಳಲಿಕ್ಕಂದ್ರ  ನಮ್ಮ ನಾಯಕರ ಏನ ಸೋಲುದಿಲ್ಲ, ಅವರ ಸಾಕಷ್ಟ ತ್ವಾಟ ಪಟ್ಟಿ ಅದಾವು, ಅದ್ರಾಗ ಜಬರ್ದಸ್ತ ಇನಕಂ ಬರ್ತೈತಿ, ಗೊತ್ತನ ನಿಂಗ' ಎಂದು ಜೋರು ಧ್ವನಿಯಲ್ಲೆ ದಭಾಯಿಸಿದನು. ' ಹೌದ್ರ್ಯಾ.. ಅಲ್ರೀ ಅದು ನಮ್ಗೂ ಗೊತ್ತೈತ ಬಿಡ್ರಿ ಅವರ ತಮ್ಮ ನಾಮಿನೇಷನ್ ಫೈಲ್ ಮಾಡು ಮುಂದನ ತುಂಬಿರರ್ತಾರ ತಮ್ಮ ಆದಾಯದ ಮುಖ್ಯ ಮೂಲ ಕೃಷಿ ಅಂತಂದ, ಅಲ್ರೀ..ಐದೈದ ವರ್ಷದಾಗ ಇಷ್ಟಿಷ್ಟ ಡಬ್ಬಲ ಆದಾಯ ತೆಗಿತಾರ ಅವರು ಕೃಷಿಯೊಳಗ, ಮತ್ತ ಇವರಿಷ್ಟೆಲ್ಲಾ ಕೃಷಿಯೊಳಗ ಆದಾಯ ತೆಗಿಯೊರು, ನಿಮ್ಮಂಥ ಬಡ ರೈತರ್ಗೆ ಯಾಕ ಅವರು ಹೇಳಿಕೊಡಬಾರ್ದು, ಹೆಚ್ಚ ಆದಾಯ ತೆಗೆಯೋದ ಹೇಗಂತ, ಒಂದಿಷ್ಟ ಸಾಲದ ಭಾದಿ ತಾಳಲಾರ್ದನ ಹೊಲ್ದಾನ ಬೇವಿನ ಮರಕ್ಕ ಊರ್ಲ ಹಾಕ್ಕೊಳ್ಳೊ ಮಂದಿ ಜೀವಾನರ ಉಳಿತಿದ್ವ, ಹೌದಲ್ರಿ ಯಜಮಾನ್ರ, ನಾ ಹೇಳೊದ ಖರೆ ಐತಿಲ್ಲ,' ಎಂದ ಮೆಲ್ಲಗೆ ಅವನ ಹೆಗಲ ಮೇಲೆ ಕೈಯಿಟ್ಟು ಹೇಳಿದೆ, ಇರುವೆ ಸಾಲಿನ ಮೇಲೆ ಒಂದು ಕಡ್ಡಿಯನ್ನು ಓಗೆದರೆ ಹೇಗೆ ಗಲಿಬಿಲಿಗೊಂಡು ಓಡಾಡುತ್ತವು ಹಾಗೆಲ್ಲ ಆ ವ್ಯಕ್ತಿಯ ಹಿಂಬಾಲಕರು ಚಡಪಡಿಸುತ್ತಾ ನನ್ನುತ್ತರಕ್ಕೆ ಉತ್ತರಿಸದೆ, ಎಲ್ಲರೂ ಮೆಲ್ಲಗೆ ಜಾರಿಕೊಂಡುಬಿಟ್ಟರು, ಈ ನಾಕೈದು ಜನರನ್ನು ಹೊರತುಪಡಿಸಿ, ಕೊನೆಗೆ ಅವರು ಅಂಗಡಿಯನ್ನು ದಾಟುವಾಗ ನಾನು ಅವರೊಡಗೂಡಿ ಹೊರಬಂದು 'ನೀವು ನನಗೆ ಪ್ರಶ್ನೆ ಮಾಡಿದ ಹಾಗೆ ನಿಮ್ಮ ನಿಮ್ಮ ನಾಯಕರುಗಳಿಗೆ ನೀವೆನಾದರು ಪ್ರಶ್ನಿಸಿದ್ದೆ ಆದರೆ, ನಾಳೆ ನಿಮ್ಮ ಮಕ್ಕಳು ಅವರ ಮನೆ ಮುಂದೆ ಹೋಗಿ ಹಗಲೆಲ್ಲ ಕಾದು, ಅವರ ಬಂದ ಮ್ಯಾಲ ನಡ ಬಗ್ಗಿಸಿ ಧಣಿ ನಮ್ಮ ಓಣಿಯ್ಯಾಗ ನೀರ ಬರವಲ್ವರೀ ಎಂದ ಹಲ್ಗಿಂಜಕೊಂಡ ಕೇಳೊ ಪ್ರಮೇಯಾ ಬರಂಗಿಲ್ಲ, ನನ್ನ ಮಾತಿಂದ ಏನಾರ ನಿಮ್ಮ ಮನಸ್ಸಿಗೆ ನೋವಾಗಿದ್ರ, ನಿಮ್ಮ ತಮ್ಮನಂತೊನು ಅಂದ್ಕೊಂಡು ಕ್ಷಮಿಸಿಬಿಡ್ರಿ ಅಣ್ಣೊರ' ಎಂದೆ ಆ ವ್ಯಕ್ತಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲೆ ಇಲ್ಲ, ಸುಮ್ಮನೆ ತಲೆಯಾಡಿಸುತ್ತ, ಪಕ್ಕದ ಅಂಗಡಿಯ ಹತ್ತಿರ ನಿಂತಿದ್ದ ತನ್ನ ಗುಂಪಿನತ್ತ ಭಾರವಾದ ಹೆಜ್ಜೆಗಳೊಂದಿಗೆ ನಡೆದನು. ಇಷ್ಟೇಲ್ಲಾ ಆದರೂ ಅವರು ತಿದ್ದುಕೊಳ್ಲುತ್ತಾರೆ, ತಮ್ಮ ನಾಯಕನನ್ನು ಪ್ರಶ್ನಿಸುತ್ತಾರೆ ಅಂತ ನಾನೇನಾದರೂ ತಿಳಿದುಕೊಂಡಿದ್ದರೆ, ನನ್ನಂತಹ ಮೂರ್ಖ ಈ ಲೋಕದಲ್ಲಿ ಯಾರು ಇರೋದಿಲ್ಲ ಅಲ್ವ.. ಏಕೆಂದರೆ ಸಂಜೆ ಅವರು ಕೊಡಿಸುವ ನೈಂಟಿಯಲ್ಲಿ ಎಲ್ಲ ಆದರ್ಶಗಳು ಕೊಚ್ಚೆಯಲ್ಲಿ ಉಚ್ಚೆಯ ರೂಪದಲ್ಲಿ ಹರಿಯುತ್ತಿರುತ್ತವೆ. ಏಷ್ಟೆಯಾದರೂ....
ಮೇರಾ ಭಾರತ್ ಮಹಾನ್

No comments:

Post a Comment