ಇತಿಹಾಸದ ಪುಟದಲ್ಲಿ
ಹೊತ್ತೆರುವ ಮುನ್ನವೆ...
ಅಲ್ಲಾಭಕ್ಷಿಗೆ ಹೇಳಿ, ನನ್ನ ಗೋರಿಗೊಂದು
ಹೂವಿನ ಚಾದರವ ಕಟ್ಟಿಸಿಬಿಡು
ಸಾಕಿ....
ಬಾಳಲ್ಲಿ ನಳನಳಿಸದೆ ನಲುಗಿ ಹೋಗಿದೆ ಪ್ರೀತಿ
ಬುಟ್ಟಿಯಲ್ಲಿ ಮಲಗಿದ ಮಲ್ಲಿಗೆಯ
ಘಮಲು... ಚೂರಾದರು ಉಳಿಯಲಿ...
ನಾಲ್ಕು ಹನಿ ಅತ್ತಾರನ್ನು ಚಿಮುಕಿಸಿಬಿಡು
ನನ್ನೆದೆಯ ಮೇಲೆ...ಸಾಕಿ...
ಹೊತ್ತಿದಡುಗೆಯ ಸವಿಯು ರುಚಿಸದಾರಿಗೂ...
ಬೆಂದ ಮನದ ವಾಸನೆ ಯಾರ ಮೂಗಿಗು
ತಾಕದಿರಲಿ....
ಉಸಿರಿರುವ ಮುನ್ನವೆ....ಗೋರಿಯೊಳಗೆ
ಹುಗಿದುಬಿಡು ಸಾಕಿ... ಕಲ್ಲು ಗಾರೆಗಳ ಹಾಕಿ...
ಗಾಳಿಯು ಒಳಹೊರಗೆ ನುಸುಳದಂತೆ,
ಕೊನೆಯುಸಿರನ್ನು ಅಲ್ಲಿಯೆ ಬಿಟ್ಟುಬಿಡುವೆ...
ಅವಳ್ಹೆಸರಲೆ...ಉಸಿರಿದ ಉಸಿರಿದು,
ಅಲ್ಲಿಯೆ ಸುಳಿಸುಳಿಯುತಿರಲಿ...
ನಿನ್ನ ಹಿಡಿಯಿಂದ ಶಪಿಸಿ...ಒಂದಿಷ್ಟು ಮಣ್ಣನ್ನು
ಚೆಲ್ಲಿಬಿಡು ಗೋರಿಯ ಮೇಲೆ...
ಮರುಜನ್ಮದಲ್ಲಾದರು ಅವಳ ಪಡೆಯಬೇಕೆಂಬ
ಆಸೆಯು ಮಣ್ಣುಗೂಡಲೆಂದು
ಕಟ್ಟಿಹಾಕಿ ಬಿಡಲಿ... ಅಳಿದ ನನ್ನ ಪ್ರೀತಿಗೆ
ಮರುಗಿ ಉದುರಿದ ನಿನ್ನ ಕಣ್ಣ ಹನಿಗಳು..
ನೀನೇಕೆ ದುಃಖಿಸುವೆ ಸಾಕಿ....?
ಬೇಕಾದವರೆ ಎರಡು ಹನಿ ಕಣ್ಣೀರನ್ನು ಹಾಕದಿದ್ದಾಗ,
ನಿತ್ಯ.....ನಿನ್ನ ಮಧು ಬಟ್ಟಲಿನ ಗಿರಾಕಿಯ
ಸಾವಾಗಿ, ನಷ್ಟವಾಯಿತೆಂದುಕೊಂಡೆಯಾ....?
ಹುಚ್ಚಿ...!!!! ಜಗದಲ್ಲಿ ಪ್ರೀತಿಗೇನು ಕೊರತೆಯಿಲ್ಲ,
ಸೋತು ನೊಂದವರೆಲ್ಲ ನಿನ್ನ ಗಿರಾಕಿಗಳಾಗಲೆಬೇಕಲ್ಲ....
ನಾನು ಸತ್ತನೆಂದು ಯಾರಿಗೂ ಹೇಳಬೇಡ ಸಾಕಿ...
ಅವಳ ಮನೆಯತ್ತ ಸುಳಿಯುವ ಗಾಳಿಗೂ...
ಗೊತ್ತಾಗದಂತೆ, ಹುಚ್ಚು ಹುಡುಗಿಯವಳು
ಸುದ್ದಿಯ ತಿಳಿದು ನೊಂದುಕೊಂಡಾಳು...
ಅವಳನ್ನು ನೋಯಿಸಿ...ನಾನವ ಸ್ವರ್ಗಕ್ಕೆ...? ಹೋಗಲಿ
ಕೊನೆಯದಾಗಿ....
ಮಸಿಯನ್ನು ಸವರಿಬಿಡು ಸಾಕಿ ಗೋರಿಗೆ
ದೇವದಾಸನ ಹೆಸರಿನಲ್ಲಿ ನಾನಿಂದು ಗೋರಿಯಲ್ಲಿ
ಮಲಗಿರುವೆ...
ನನ್ನ ಹೆಸರಿನ ಹುರುಪಿನಲ್ಲಿ ಮತ್ತೊಬ್ಬನು
ಗೋರಿಗೆ ಚಾದರವ ಹಾಸಿಕೊಳ್ಳದಿರಲಿ...
ಇತಿಹಾಸದ ಪುಟದಲ್ಲಿ ನನ್ನ ಹೆಸರೆಂದು ಸೇರದಿರಲಿ..
ಬಸವಣ್ಣ...
ಬಸವಣ್ಣ... ಕಿತ್ತು ಬಿಸಾಕಿದುದು
ದಾರವನ್ನಲ್ಲ... ಜಾತಿಯ ಮೌಡ್ಯವನ್ನ....
ಒಪ್ಪಿ...ಎದೆಗೊತ್ತಿಕೊಂಡದ್ದು, ತಾಮ್ರದ
ತಟ್ಟೆಯಲ್ಲಿ ಝಣಝಣಿಸುವ ನಾಣ್ಯಗಳ
ಸುರಿಮಳೆಯ ಸುರಿಸುವ ಕಲ್ಲನ್ನಲ್ಲ...!!!
ಆತ್ಮವನುದ್ಧರಿಸುವ ಲಿಂಗವನ್ನ.....
ಹೇಳಿದೆ ನೀನು... ಕೇಳಲಿಲ್ಲ ನಾನು, ಮುಳುಗೆದ್ದೆ
ಗಂಗೆ...ತುಂಗೆ..ಭದ್ರೆ....ಕಾವೇರಿಗಳ ತಟಗಳಲಿ
ತೊಳೆದದ್ದು, ಪರಸ್ತ್ರೀಯ ಅಂದವ ಕಂಡು, ಮೈಯಲಿ
ಉಕ್ಕಿದ ಬೇವರಿನ ವಾಸನೆಯಷ್ಟೇ...,ಕಾಮನೆಗಳ
ಕಾವಿನಲಿ ಬೇಯುತಿರುವ ಮನಸೆಂದು ನಿಷ್ಕಲ್ಮಷವಾಗುವುದು
ಮುಪ್ಪಾವರಿಸಿ...ಸಾವೆದುರು ಬಂದು ನಿಂತಾಗ ಸಜ್ಜನನಾದರೇನು...?
ನಾನೇಕೆ..ಅಪ್ಪಿಕೊಳ್ಳಲಯ್ಯಾ ನಿನ್ನನು...?
ನಿನ್ನನುಭಾವಮೃತವನೆ ನಾ ಸವಿಯದಿದ್ದಾಗ...!!!
ಹಾಕಿಕೊಟ್ಟ ಸನ್ಮಾರ್ಗವ ತೊರೆದು, ಬದುಕಿನ
ಭವ ಜಂಜಾಟಗಳ ನರಕದ ಹಾದಿಯನು ತುಳಿದಿರುವಾಗ
ಹೊಟ್ಟೆ ಹಿಡಿಯುವಷ್ಟೆ ಉಣ್ಣುವ ನಾವುಗಳು..ಮತ್ತೇಕೆ
ಅನುಭವಿಸಲಾರದಷ್ಟು ಹೆಣ್ಣು...ಹೊನ್ನು..ಮಣ್ಣನ್ನು ಹೊಂದುವೇವು...
ಈ....ಕಲಿಗಾಲದಲ್ಲಿ ನೀ.....ಕಳಬೇಡ ಕೊಲಬೇಡವೆಂದರೆ
ನಾನೆಲ್ಲಿ ಹೋಗಲಿ....ಬಸವಣ್ಣ..
ಅಸತ್ಯ ನುಡಿಯದೆ ಅರುಣೋದಯವಾಗದ ಭವದಲ್ಲಿ
ಬಾಳುತಿರುವ ನಾನೆಂತು ನಿಮ್ಮನಪ್ಪಿ ನಡೆಯಲಯ್ಯ
ಬರಬೇಡವೊ...ಮರಳಿ ಈ ನಾಡಿಗೆ, ಎಲ್ಲರ ಕ್ರಾಂತಿಯ ಕಿಚ್ಚು
ಕುಲ..ಕಾಮ...ಧನಕನಕಗಳನ್ನು ಅನುಭವಿಸದರಲ್ಲಿಯೆ
ಉರಿದು ಹೋಗುತ್ತಿದೆ...
ಇವರಿಗೆಲ್ಲ ಬೇಕಿರುವುದಿಗ ಜ್ಞಾನದ ಬೆಳಕೆನಲ್ಲ..!!!
ಹೊಟ್ಟೆಗೆ ಒಂದಿಷ್ಟು ಹಿಟ್ಟು...ಜುಟ್ಟಿಗೊಂದಿಷ್ಟು ಹೂವು
ಸಾಗುವುದು ಸಂಸಾರ...ಇಲ್ಲದಿದ್ದರೂ ನಿನ್ನ ಸಾರ
ನಮಗೇತಕೆ ಬೇಕು ? ಪ್ರತಿಮೆಗಳು...
ಉರುಳಿಸಿಬಿಡಿ ಬಜಾರಿನ ಮುಖ್ಯರಸ್ತೆಯ
ಮಧ್ಯದಲಿ ನಿಲ್ಲಿಸಿಬಿಟ್ಟ ಪ್ರತಿಮೆಗಳನ್ನು....
ಅವರು ಹಾಕಿಕೊಟ್ಟ ದಾರಿ ನಮಗೇತಕೆ ಬೇಕಿದೆ ಈಗ
ಇರುವರೇನು ನಮ್ಮಷ್ಟು ಜಾಣರು ಯಾರಾದರೂ..
ಈ ಶತಮಾನದಲ್ಲಿ..!!!! ಹೆಣ್ಣು ಹೂವನು ಹೊಸಕುವವರನ್ನು
ಹೊತ್ತು ಮೆರೆಸುವೆವು ಹೊನ್ನ ಪಲ್ಲಕಿಯಲಿ,
ಏಷ್ಟಾದರೂ..ಕಳಬೇಡ..ಕೊಲಬೇಡನೆಂದವರನ್ನು
ಹೊಳೆಗೆ ಹಾರಿಸಿದಂತಹ ಧೀರರು ನಾವು...
ಮಸಿ ಬಳೆದುಬಿಡಿ... ವಾಯು ವಿಹಾರದ ತೋಟದಲಿ
ನಡೆಯುವ ಕಾಮಕೇಳಿಗಳ ಕಂಡು...ಕಾಣದ ಹಾಗೆ
ಕಣ್ಮುಚ್ಚಿ ನಗುತಿರುವ ಪುತ್ಥಳಿಗಳಿಗೆ....
ಕಾಯಕವೇ ಕೈಲಾಸದ ಹೆಸರಿನಡಿಯಲ್ಲಿ
ಕೈ ಬೆಚ್ಚಗಾಗಿಸಿಕೊಳ್ಳುವವರನ್ನು ಬೈಯ್ಯದೆ
ಇಷ್ಟೇಲ್ಲಾ...ಮಾಡಿ ಮತ್ತೆ ರಾಜರಂತೆ ಎದೆಯುಬ್ಬಿಸಿ
ನಡೆಯುವಂತೆ ಸಂವಿಧಾನ ರೂಪಿಸಿಕೊಟ್ಟ ಶಿಲ್ಪಿಗಳಿಗೆ
ಏಕೆ ಉರುಳಿಸುತ್ತೀರಿ ಸ್ವಾಮಿ..ಪ್ರತಿಮೆಗಳನ್ನು..
ಶಿಲ್ಪಗಳನ್ನು... ಮರೆತು ಮಲಗಿಬಿಟ್ಟಿರುವಿರೇನು..?
ಇಂದಿನ ನಿಮ್ಮ ಸುಖಕ್ಕೆ...ಅವರುಂಡ ನೋವಿನ
ದಿನಗಳನು, ಹನುಮನಂತೆ ಎದೆ ಸೀಳಿ ತೋರಿಸಬಲ್ಲಿರೇನು?
ಆ ಮಹಾನುಭಾವರ ಆದರ್ಶಗಳನು, ಇಲ್ಲವಲ್ಲ..!!!
ಮತ್ತೇಕೆ...? ಅವರ ಹಾಕಿಕೊಟ್ಟ ಹಾದಿಯು ನಿಮಗೆ
ಬೇಡವಾಗಿರುವಾಗ... ಇವ ನಮ್ಮವ...ಇವ ನಮ್ಮವನೆಂದು
ಜಯಂತಿಗಳ ದುಂದುವೆಚ್ಚವ ಮಾಡುವಿರಿ...
ಅಷ್ಟೊಂದು ಕೋಪ ಪ್ರಕೋಪವೆ..ನಿರ್ಜೀವ ಪುತ್ಥಳಿಗಳ ಮೇಲೆ, ಬನ್ನಿ..ಹಾಗಿದ್ದರೆ,... ಜಾತ್ಯಾತೀತವಾದಿಗಳೆ...೧೨ ನೇ
ಶತಮಾನದಲ್ಲಾಗದ್ದನ್ನು ಈ ೨೧ ನೇ ಶತಮಾನದಲ್ಲಾದರೂ
ಸಾಧಿಸೋಣ...ಮೇಲು ಕೀಳುಗಳ ಮಹಲನು ಒಡೆಯೋಣ
ರಾಜಕೀಯ ಪ್ರೇರಿತ ಧರ್ಮ ವಿಭಜನೆಗಳನು ಖಂಡಿಸೋಣ
ಬರುವಿರಾ...!! ಬರುವಿರಾ...!!! ಬರುವಿರಾ...!!!!!
ಹೇಗೆ ತಾನೆ ಬರುವಿರಿ...ಕುಲದ ರೇಖೆಯನು ದಾಟಿ...
ಹೊರಡಬನ್ನಿ... ಅಗೋ ನೋಡಿ..ರಸ್ತೆಯ ತಿರುವಿನಲ್ಲೊಂದು
ಪುತ್ಥಳಿ ನಗುತ್ತಿದೆ ನಮ್ಮನೆ ನೋಡಿ..
ಇಂದು ರಾತ್ರಿಗೆ ಅದಕ್ಕೆ ಗುಂಡಿಯ ತೋಡಿ....
ಕಾಮ ಕಾಮನೆಗಳ ದಹನ...
ಶತಶತಮಾನಗಳು ಕರಗಿಹೋದವು
ಕಾಲನ ಗರ್ಭದಲಿ.....ತಣ್ಣನೆ !!
ಮರದ ನಿರ್ಜೀವ ಕೊರಡುಗಳು
ಉರಿದು ಹೋದವು.... ಧಗಧಗನೆ ಸುಮ್ಮನೆ...!!
ಉರಿಸಿದವರೆದೆಯಲ್ಲಿ ಹೊತ್ತಿದೊಂದಾವುದು
ಉರಿದು ಬೂದಿಯಾಗಲಿಲ್ಲವಲ್ಲ ಕಾಮನೆ..!!!!
ಉರಿದು ಬೂದಿಯಾಗಿ.. ಸುಳಿಗಾಳಿಗೆ ಸಿಕ್ಕು
ಅನಂತದಲಿ ಲೀನವಾಗುವ ಕಾಮಣ್ಣನ ಮಣ್ಣಿನಲಿ...
ನಿಲ್ಲುತಿಲ್ಲವಲ್ಲ ಹಸುಕಂದಗಳ ಮೇಲಿನ ಬಲತ್ಕಾರ..
ಕೇಳುತಿಲ್ಲವೇನೊ...? ಮೂಜಗದ ಮೂಕ್ಕಣ್ಣನೆ...
ಹಸಿದ ಹದ್ದುಗಳ ವಾಂಛೆಗೆ ಬಲಿಯಾದ
ನೊಂದೊಡಲುಗಳು ಚೀರುವ ಚಿತ್ಕಾರ...
ಸುಟ್ಟು.. ಸಂಭ್ರಮಿಸಿ ಎರಚಾಡುವರಲ್ಲ
ಬಗೆ ಬಗೆಯ ಬಣ್ಣವನು...ಯಾವ ಬೇಧವಿಲ್ಲದೆ
ಮತ್ತೇಕೆ ..? ಹಂಚಿಕೊಳ್ಳುವಿರಿ... ಸಮಾಜ ಸ್ವಾಸ್ಥ್ಯವ
ಹದಗೇಡಿಸುವ ಬಣ್ಣ ಬಣ್ಣದ ಬಟ್ಟೆಗಳನು..
ಸಪ್ತ ರಂಗುಗಳ ಮಿಲನಕರಳಿತು ಬಿಳಿಯು
ಮಿಲನಗೈಯ್ಯದ ಬಾವುಟಗಳು ಕಕ್ಕುತಿಹವು ನೆತ್ತರನು..
ನಾಗರೀಕತೆಯ ಸೋಗಿನಲ್ಲೂ...ನರಹತ್ಯೆಗಳು ನಿಲ್ಲುತಿಲ್ಲ
ಮದನ ಮಣ್ಣಾಗುವ ನೆಲದಲ್ಲೂ ಬಲತ್ಕಾರಗಳಿಗೆ ಬರವಿಲ್ಲ
ಭೂಗರ್ಭ ಸಂಜಾತೆಯ ಹೊತ್ತೊಯ್ದ ದಶಮುಖನ ದಹನಗೈದು, ಲೋಕಕೆ ರಾಮಾಯಣವ ಕೊಟ್ಟ ಮಣ್ಣಿದು
ಮಾತೃ ಸ್ವರೂಪಳ ಸೇರಗಿಗೆ ಕೈ ಹಾಕಿದ ವಂಶಸ್ಥರ ರಕ್ತದ
ಕಾಲುವೆಯನೆ ಹರಿಸಿ...ಕಾರ್ಯಫಲದ ಗೀತೆ ಸಾರಿದ ಬೀಡಿದು
ಉರಿಸುವವಷ್ಟೇ... ಮಾತು ಬಾರದ, ಕಡೆದು
ಒಡೆದು ಹಾಕಿದ ಟೊಂಗೆಗಳ...
ಲಾಠಿಯ ಹಿಡಿದು... ಅಟ್ಟಾಡಿಸಿ, ಹೊಡೆದೊಡಿಸಲಾಗುತಿಲ್ಲ
ಕಾಮಮದವೇರಿದ ಮಂಗಗಳ..
ಉರಿದು ಹೋಗಲಿ....
ಇರುಳ ಕನಲಿಕೆಗಳ ಕಾಟವ ತಾಳಲಾರದೆ
ಸುಳಿಗಾಳಿಯ ತಂಪಿಗೆ ನರಳಲಾರದೆ
ಸುಂಯ್ಯಗುಡುವ ಸೊಳ್ಳೆಯ ಸದ್ದನು ಸಹಿಸಲಾಗದೆ
ಮಂದ ದೀಪದ ಬೆಳಕಿನ ಕಾವನ್ನು ತಡೆಯಲಾಗದೆ
ನಿನ್ಹೆಸರಿನಲಿ ಮಾಡಿರುವೆನಲ್ಲ ಜಾಗರಣೆ
ಉರಿವ ತನುವಿಗೆ ತಣ್ಣೀರನು ಸುರಿದುಕೊಂಡು,
ದಿನವು ಜಡೆಯಾಗಲು ಜಗಳವಾಡುವ ಹೇರಳುಗಳನು ಸಡಿಲಿಸಿ..
ಮೂಡಣವು ಚೆಲ್ಲಿದ ಬಂಗಾರ ಬೆಳಕಿಗೆ ಮೈಯೊಡ್ಡಿ,
ಕಾದಿರುವೆ ತಲೆಬಾಗಿಲ ಚೀಲಕದ ಸದ್ದಿಗೆ
ಕಿವಿಗಳನು ಕಾಯ್ದಿರಿಸಿ
ವಿರಹದೊರೆ ಕೊಳಲ್ಪಿಡಿದವನಿಗೂ ಹಚ್ಚಿರುವೆ ದೀಪ
ಕರುಣಿಸಿ...ಕರಗಿಸಲಿ ನಿನ್ನೆದೆಯೊಳಗಿನ ಕೋಪ
ಕೊನೆಯಾಗಲಿ ಈ ಘಳಿಗೆಗೆ ನಿನ್ನ ಕಾಯುವಿಕೆಯ ಜಪ
ಬಂದಾಗ ನಿನಗರಿವಾಗುವುದು ನನ್ನೊಳಗಿನ ತಾಪ
ತೋರಿಸಿಬಿಡು..ನೀನಾಗ ಈ ಬೆಲ್ಲದ ಗಲ್ಲದಾ.... ಮೇಲೆ
ನಿನ್ನೆಲ್ಲ ಪ್ರತಾಪ
ತೊಟ್ಟ ಬಳೆಗಳಲ್ಲೊಂದೆರಡಾದರೂ ವಡೆದು ಬಿಡಲಿ...
ಹರಡಿದ ಧೂಪದ ಸುವಾಸನೆಯು... ನಮ್ಮಿಬ್ಬರ
ಮೈ ಬೇವರಿಗೆ ನಾಚಿಕೊಳ್ಳಲಿ
ತಿಳಿ ಬೆಳಕು ಧಗಧಗನೆ ಉರಿದುಕೊಳ್ಳಲಿ,
ನಮ್ಮೊಳಗಿಬ್ಬರಲಿ ಹೊತ್ತಿದ ಉರಿಯು... ತಣ್ಣಗಾಗಿಬಿಡಲಿ
ಗಾಲಿಬ್
(ಸಾಕಿಯ ಒಡಲಾಳದ ಮಾತುಗಳು)
ಆಸ್ತಿ......? ಗಾಲಿಬ್..!!!!
ನೋವಿನ ಮುಳ್ಳುಗಳನೆ ಹೊತ್ತು
ತರುವ.. ಗಂಟನು ನಾನೇನು ಮಾಡಲಿ...
ಪ್ರೀತಿ ಉಡಿಯನು ಬರಿದೆ ಹಿಡಿದುಕೊಂಡು
ಬರುವ ಮನಗಳಿಗೆ.... ನಾನದೇಷ್ಟು ಸಂತೈಸಲಿ...
ಎಷ್ಟೋ ಮನಗಳು.... ಮೌನಗಳ
ಕಂದರದಲ್ಲಿ ಬಿದ್ದು ಉಸಿರಿಲ್ಲದಂತಾಗಿವೆ...
ಕೈ ಹಿಡಿದೆತ್ತಲದಷ್ಟು..., ಸೋತವರನ್ನು
ನನ್ನ ಮಡಿಲಲಿ ಮಲಗಿಸಿಕೊಳ್ಳಲದೇಷ್ಟು...
ಶಕ್ತಿಯು ಕುಂದಿರುವಾಗ....
ಗಾಲಿಬ್...
ನಾನು ಹಾಡುವ ಎಲ್ಲ ಹಾಡುಗಳು
ಹಳಸಿದಂತಯೆ ಕೇಳುವುದು...ಕಾರಣ,
ನಿನ್ನ ಮನದಲಿ ಅವಳು ಮೀಟಿದ ನೋವಿನ
ರಾಗವು ಇನ್ನೂ... ಮಿಡಿಯುತ್ತಲೆ ಇರುವುದಲ್ಲ !!!!
ಮಲ್ಲಿಗೆಯದ್ದೇನು ತಪ್ಪು..?
ಅವಳ ಮನಸ್ಸಿಗದು ಹಿಡಿಸದಿದ್ದಾಗ....
ಸುಗಂಧವೇನು ಕಡಿಮೆ ಸೂಸಿತೆ..? ಮುಡಿಗೇರಿಸಿದರೇನು, ಅವಳಂಗಸಂಗಕೆಂದು ಮಂಚದ ಮೇಲೆ ಬಿಸುಡಿದರೇನು...
ಅದರಂತರಂಗದ ನೋವನ್ನು ಕೇಳುವರಾರು..?
ಮರೆಯಲೆಂದು ಬಂದವರಾರು ಮರೆತಿಲ್ಲ..!!
ಮಧು ಬಟ್ಟಲೊಳಗಿನ ಮಧುವ ಕುಡಿದವರು...
ಅವಳ ತುಟಿಯಂಚಿಂದ ಹೀರಿದ ಜೇನಿನ....ಸವಿಯನ್ನೆ ಮರೆತಿಲ್ಲ.... ಇನ್ನೂ ಮರೆಯುವ ಮಾತಾದರೂ ಎಲ್ಲಿ ಗಾಲಿಬ್
ಅವಳನ್ನು ಮರೆಯುವ ನಿಯತ್ತು ನಿನಗಿಲ್ಲ
ಅವಳ ಮತ್ತನು ಮರೆಸುವ ತಾಕತ್ತು ಮಧುವಿಗಿಲ್ಲ...!!!!!
ಬಾನೆತ್ತರ ಮುಟ್ಟಲಿ ನಮ್ಮೊಲವು....
ಅಳೆಯುವ ಎತ್ತರವಿಲ್ಲದಿರಬಹುದು
ನಮ್ಮಿಬ್ಬರದು... ಗೆಳತಿ
ಮಾಪಿಸುವರೇನು....? ಎದೆಯ ಗೂಡೊಳಡಗಿ
ಕುಳಿತಿರುವ ಮುಗಿಲೆತ್ತರದ ಪ್ರೀತಿ
ನಿಜ... ನಾವಿಬ್ಬರು ಕಪ್ಪು ಹಲಗೆಯ
ಬಣ್ಣದವರೆ... ಆದರೇನಾಯಿತು..?
ಒಲವ ಬಿಳುಪಿನ ಬಳಪದಿಂದ,
ಬದುಕಿಗೆ ಹೊಸ ಕಾವ್ಯವ ಬರೆಯಲಾರವೆ....
ನಿಲುಕದು ನಮ್ಮಿಬ್ಬರಿಗೂ.. ಮಧುಮಂಚ !!!
ಆಡಿ ನಗುವುದೇನೊ ನೋಡಿ ಪರಪಂಚ...
ಭೂದೇವಿಯ ಮಡಿಲಿದೆ, ಹಾಸುವ ಚಾಪೆಯ ಕೊಂಚ
ಹರೆಯ ಹರಿದು ಹೋಗಲಿ ಬೇಡವಿನ್ನು ಸಂಕೋಚ..
ಚೆಲುವೆ...ಜಗತ್ತು ದೊಡ್ಡದು, ಮನಸ್ಸು ಚಿಕ್ಕದು
ನಾವು ಚಿಕ್ಕವರು ಅಳತೆಯಲ್ಲಿ, ಬದುಕೆಂದು ದೊಡ್ಡದೆ ನಮಗೆ
ಈಜುವ ಬಾಳ ಸಾಗರದಲಿ, ಯಾರೊಬ್ಬರಿಗೂ ಅಂಗಲಾಚದೆ
ಶಕ್ತಿಯಿಲ್ಲದಿರಬಹುದು ತೋಳಲಿ, ಛಲವೊಂದಿಹುದಲ್ಲ ಎದೆಯಲಿ..
ನಡೆಯುವ ಬದುಕಿನ ಹಾದಿ ಬಹುದೂರ...
ಮೊಲದ ಹೆಜ್ಜೆಗಳನೀಡುತಲಾದರೂ...ಕ್ರಮಿಸೋಣ
ಕಲ್ಲು..ಮುಳ್ಳುಗಳು.. ನೋವು...ಅಪಹಾಸ್ಯಗಳು
ನಮಗೇನು ಹೊಸತಲ್ಲ, ಜೊತೆಗೂಡಿ ಜಯಿಸೋಣ
ಹಾದಿ ಬೀದಿಯಲಿ ನೋಡಿ ನಗುವರು, ನೀ ಅಳಬೇಡ
ಗೇಲಿ ಮಾಡುವರು, ಮರು ಮಾತನಾಡಬೇಡ
ಬೇಕು ಬೇಕೆಂದೆ ಚುಡಾಯಿಸುವರು, ಸಿಡುಕಬೇಡ
ಅವರೆಲ್ಲರನ್ನೊಮ್ಮೆ ನೋಡಿ ನೀ...ನಕ್ಕು ನಡೆಯುವದನ್ನು ಮರಿಬೇಡ
ಬದುಕಿದ್ದೇವೆಂದು...ಬದುಕುವುದು ಬೇಡ..
ಬದುಕಲು ಒಂದು ಅವಕಾಶವಿದೆಯಲ್ಲ...ಅನುಭವಿಸೋಣ
ಬಾನೆತ್ತರಕೇರಿದವರು ತುಳಿಯಲೇ..ಬೇಕಲ್ಲ ನೆಲವ
ನೆಲದಲ್ಲಿದ್ದುಕೊಂಡೆ ಬಾನೇತ್ತರವ ಮುಟ್ಟಿಸುವ ನಮ್ಮೊಲವ
ಎತ್ತದಿರು ರಮಣಿ ಲಟ್ಟಣಿಕೆ....
ತೋರಿಸಬ್ಯಾಡ ನಿನ್ನ ಲಟ್ಟಣಿಕೆ
ಹತ್ತಬೇಕಾದಿತು ನಾನು ಮಾಳಗಿಯ ನಿಚ್ಚುಣಕೆ
ಮರೆತು ಬಂದಿರುವೆ ನೀ ಆಜ್ಞಾಪಿಸಿದ ಕಾಣಿಕೆ
ನಾಳೆ ತಪ್ಪದೆ ತಂದುಕೊಡುವೆ ತಂಪಗಾಗೆ ಚಂದ್ರಿಕೆ
ಬಾರಿಸದಿರು... ಲಟ್ಟಣಿಗೆಮೇಳ
ತಾಳಲಾರದು ದೇಹವಿದು ನೀ...ಮಿಡಿಯುವ ತಾಳ
ಅರಿವಾಗುತಿಲ್ಲವೇನೆ ತಲೆಯಲೆದ್ದ ಗಂಟುಗಳ ಗೋಳ
ನೋಯ್ತಾವ ಕಣೆ ಖಂಡಗಳು.... ಹೊಡಿಬೇಡ ನಿ ಬಹಳ
ನಿನ್ನ ಕೋಪದ ತಾಪಕೆ ತೊಡೆ ತಟ್ಟಿ ನಿಲ್ಲಬಲ್ಲೇನೇನೆ
ನಾನು...| ಕಾಳಿ ಕಣ್ಣಿನ ಅಗ್ನಿ ದೃಷ್ಟಿಯೊಂದೆ ಸಾಕು
ನಾ ಸುಟ್ಟು ಬೂದಿಯಾಗಲು..| ಅದಾವ ಭಟ್ ರ ಹಾಡ
ಹಾಡಿ...ಮೈಸೂರು ಸಿಲ್ಕ ಸಾರಿಯನ್ನ ಅರ್ಪಿಸಲಿ..
ಮೂಲೋಕದೊಳದಾವ ಗಂಡುಗಳುಂಟು ಚೆಲುವೆ,
ನಿನ್ನಾಯುಧವನೇದುರಿಸಿ ನಿಲ್ಲುವ ಭಂಟರು
ನಾನೊ... ನಿರಾಯುಧ, ಶಾಂತಿದ್ಯೂತಕ....ನಿನ್ನ ಸೀರೆಯ ಸೆರಗಂಚಲ್ಲದೆ, ಇನ್ನಾವುದನು ಎತ್ತಲಾರದಷ್ಟು ಅಮಾಯಕ
ಶಾಂತಳಾಗು ದೇವಿ.. ರಾತ್ರಿಗೆಲ್ಲ ಹಾಡುವೆ ಪ್ರೇಮಾಯಣ
ಕಡಕೊಟ್ಟದಾರೂ ಸರಿ ತಂದು ಹೂಡುವೆ ಮನ್ಮಥನ ಬಾಣ
ಖರ್ಚಿಲ್ಲದ ಪ್ರೀತಿಯ ಸುರಿಸಲು ನಾನಲ್ಲ ಜಿಪುಣ
ಮಡಿಲಿಗೆ ಬಂಗಾರದ ಬೊಂಬೆಯ ಕೊಡಬಲ್ಲನೀ..ನಿಪುಣ
ನನ್ನುಸಿರನು ಬೇರಸಿ...
ರನ್ನೆ.... ಎಷ್ಟೀದ್ದರೇನು ತಲೆಯಲ್ಲಿ ಹೇನು!!
ಬಾಚಿ, ಹೆಕ್ಕಿ ಹೊಸೆಯುವುದಿಲ್ಲವೆ ನಾನು ?
ಇರದಿದ್ದರೇನು ? ಹೇರಳುಗಳಿಗೆ ಎಣ್ಣೆ..
ನವೀರಾಗಿ ಬಾಚಿ..ಜಡೆಯ ಕಟ್ಟುವೆ ಕೇಳೆ ಜಾಣೆ
ಜಗದಲಿ ನಿನಗಿಂತಲೂ ಸುಂದರಿಯ ನಾ ಕಾಣೆ
ತುಂಬಿಲ್ಲವೆ ನಮ್ಮ ಬಾಳಲ್ಲಿ ಎಷ್ಟೊಂದು ಜೇನು !!
ತರು ಲತೆಗಳ ಮಿಲನಕರಳಿಲ್ಲವೆ ಮಡಿಲಲೊಂದು ಹೂವು
ಸಿರಿತನದ ಬೇಗುದಿಯೊಂದನು ಹೊರತುಪಡಿಸಿ
ಸುರಲೋಕದ ಸುಖವು ಸಂಕಟಗೊಳ್ಳುತಿಹುದು...
ನಮ್ಮಿಬ್ಬರ ನೋಡಿ..
ನಿನಗದೇಷ್ಟು ವಂದಿಸಲಿ ಕರುಣಾಮಯಿ...
ತುಳಿಯುವ ಸಪ್ತಪದಿ ಕಲ್ಲು ಮುಳ್ಳುಗಳ
ಹಾಸೆಂದರಿತಿದ್ದರೂ...ಕಣ್ಮುಚ್ಚಿ ನಡೆದುಬಂದೆ
ನನಗೆಂದೆ...ಹರಿದ ಸೀರೆಯ ಸೆರಗಂಚಲಿ
ಪ್ರೀತಿಯ...ಬುತ್ತಿಯನು ಕಟ್ಟಿ..ತಂದೆ
ಹೊಸ್ತಿಲಿಲ್ಲದವನ ಬೆನ್ನು ಬಿದ್ದು ಬಂದವಳೆ...
ಸೂರು... ನೆರಳಿಲ್ಲದ ತಿರುಕನಿಗೆ ಒಲಿದವಳೆ..
ಹಣಕೊಟ್ಟು ತರುವುದಿರಲಿ... ಊರ ತೋಟದ
ಹೂವೊಂದನು ಮುಡಿಸದವನಿಗೆ ಒಲಿದ ಲಕ್ಷ್ಮೀಯೆ..
ಕಾಪಾಡಿಕೊಳ್ಳುವೆ ಹುಡಿಯೊಳಗಿನ ಲೋಹಕ್ಕಿಂತಲೂ ಹೆಚ್ಚಾಗಿ
ಹೊತ್ತಿನನ್ನವ ಕುಚ್ಚಲು... ಮಣ್ಣ ಮಡಿಕೆಯೂ
ಇಲ್ಲದವನ ಮಡದಿಯಾದವಳೆ...
ಹೊತ್ತೊತ್ತಿಗಿಲ್ಲದಗುಳಿಗೆ ಬತ್ತಿದೆಯನು ಕಂದನು
ಗೀರುವ... ನೋವ ಸಹಿಸಿಕೊಳ್ಳುವವಳೆ
ನೋವೆಲ್ಲ ನನಗಿರಲಿ.. ನಗುವೊಂದೆ ನಿನಗಿರಲೆನ್ನುವವಳೆ..
ಏನು ಕೊಡಲೆ... ಮಡದಿ ನಿನ್ನೀ... ತ್ಯಾಗಕೆ
ಸರಿದೂಗುವುದೆ..ನಿನ್ನೊಲವಿಗೆ ನಿರ್ಜೀವ ಕಾಣಿಕೆ
ನೀನೊಬ್ಬಳು ಬೆಲೆ ಕಟ್ಟಲಾಗದ ಅವತಾರ ಕನ್ನಿಕೆ
ಏನಿದೆ... ನನ್ನಲಿ ನಿನ್ನೊಲವೊಂದನು ಹೊರತುಪಡಿಸಿ
ಮಲಗಿಬಿಡುವೆ ಸುಮ್ಮನೆ.... ನಿನ್ಮಡಿಲಿಗೆ, ನಿನ್ನುಸಿರಿಗೆ
ನನ್ನುಸಿರನು ಬೇರಸಿ
ನಿನ್ನ ಹಾಗೇಯೆ...
ಜೋಡು ಹಾಸಿಗೆಯಲಿ ನಿನ್ನೊಬ್ಬಳನೆ...
ಒಂಟಿಯಾಗಿಸಿ, ಬರುವಾಸೆಯು
ನನಗೂ... ಇರಲಿಲ್ಲ
ಎಷ್ಟೇ.. ಹೊರಳಾಡಿ.. ಕಣ್ಮುಚ್ಚಿದರೂ...
ಗಡಿಯಾರದ ಶಬ್ದವು... ಮಲುಗಲೆ ಬಿಡುತಿಲ್ಲ
ಸವಿ ನೆನಪುಗಳೊಂದಿಗೆ...ಹಿಂಡಿ
ಹಿಪ್ಪಿಕ್ಕುವ ಚಳಿಯ ತೊಳಿಗೆ ನಿನ್ನ
ಕೊಟ್ಟು ಬರಲು ನನ್ನಲಿ ಅದೇಷ್ಟು
ಸಂಕಟ.. ನಿನಗೂ ಗೊತ್ತು..!!! ಕ್ಷಣ..ಕ್ಷಣವು
ಅಣು...ಅಣುವನು ಸುಡುತಿಹುದು ನಿನ್ನದೆ ಮತ್ತು..!!!
ತೋಳ್ಬಂದಗಳಿ ಬಂಧಿಯಾಗಿಯಿಬ್ಬರು
ಕನಸಿನರಮನೆಗೆ ಕಿಚ್ಚು ಹಚ್ಚಿ...
ಅದರ ಕಾವಲ್ಲೆ... ಇರುಳನು
ಸ್ವರ್ಗವಾಗಿಸಿಕೊಳ್ಳುವ ಪರಿಯನ್ನು
ನಿನ್ನಿಂದಲೇ...ತಾನೆ ನಾ ಕಲಿತದ್ದು...
ಜಗಕೆ.. ಊರ್ಮಿಳೆ, ಸೀತೆಯರ ಒಂಟಿ
ವನವಾಸದ ವಿರಹವಷ್ಟೇ ಗೊತ್ತು...
ರಾಮ, ಲಕ್ಷ್ಮಣರೆದೆಯಲರಳುತಿದ್ದ
ಕನಸುಗಳು ಕಸುವಿಲ್ಲದೆ ಸಾಯುತ್ತಿದ್ದುದು...
ಯಾರಿಗೆ ತಾನೆ ಗೊತ್ತು..?
ನಿನ್ನ ಹಾಗೆಯೇ...
ನನ್ನದು ಹಾಗೆ ಇದೆ ಪರಿಸ್ಥಿತಿ..
ತಿಳಿನೀರ ಕೊಳದಲ್ಲಿ ಕಲ್ಲುಬಿದ್ದ ಹಾಗೆ...
ಮಾಗಿಯ ನಡುಕದಲಿ... ತಣ್ಣೀರಿನ ಕಲ್ಯಾಣಿಯಲಿ
ಮುಳುಗೆದ್ದ ಹಾಗೆ...!!!
ನಿನ್ನ ಮನದ ಭಾವಗಳನು...
ಆ ತುಂಬು ಚಂದಿರನಲ್ಲಾದರು ನೀ...
ತೊಡಿಕೊಳ್ಳಬಹುದು !!
ನನ್ತನುಮನದ ಉರಿಯ ಹೇಗಾದರು...
ತಣಿಸಿಕೊಳ್ಳಲಿ ನಾನು....?
ನಾನು ಜಾರುವವಳಲ್ಲ....
ನಾನೊಂದು ನಗುವಿನ ನಗವಿಲ್ಲದೆ
ಸೊರಗುತಿರುವ ಬಳ್ಳಿ...
ಬಿಟ್ಟು ಬಂದಿರುವೇನು ಹೊಟ್ಟೆಯ
ಹೊರೆಯಲು ನನ್ನಯ ಹಳ್ಳಿ
ನನ್ನೊಡಲಿನ ಹಸಿವಿನ ನಿಟ್ಟುಸಿರಿಗೆ
ಜೀವತುಂಬಿ ನಿಂತಿವೆಯನ್ನ..ಕೈಯಲ್ಲಿ ಉಬ್ಬಸಗಳು
ಊದಿದಷ್ಟು... ಹೆಚ್ಚಾಗುತಿದೆ ಹೊಟ್ಟೆಯೊಳಗೆ
ಹಸಿವೆಂಬ ಮರಳುಗಾಡಿನ ಕಾವು..
ಕೇಳುವರಾರು ? ಸುಡು ನೆತ್ತಿಯ ರಭಸಕೆ
ಮುಡಿದ ಮಲ್ಲಿಗೆಯ...ಬಾಡಿದ ಗೋಳು..
ಅರೆಯುವರಾರು ? ನೆಲದ ಕೆಂಡಕೆ ಬೊಬ್ಬೆಯೆದ್ದು
ನೋವುಣ್ಣುತಿರುವ ಪಾದಗಳ ಅಳಲು...
ಬೆಲೆ ಕಟ್ಟುವರು...!!! ನನ್ನುಸಿರ ನುಂಗಿ
ನಿಂತ ಉಬ್ಬುಸುಗಳಿಗಲ್ಲ....
ಹಸಿವ ನಿಗಿಸಿಕೊಳ್ಳಲು ಬಂದಿರುವ, ನನ್ನ
ದೇಹದ ಉಬ್ಬು ತಗ್ಗುಗಳಿಗೆ....ಕಟ್ಟುವರು
ಹಸಿವಿದೆ...ಕಾಂಚಣದ ಝಣ..ಝಣದ
ಸದ್ದಿಗೆ ಜಾರುವ ಜಾರಿಣಿಯು ನಾನಲ್ಲ...
ಕೆಚ್ಚೆದೆಯಿದೆ... ಅನುದಿನವು ಹಸಿವಿನಿಂದ ಸತ್ತರೂ..
ಎದೆಯ ಮೇಲಿನ ಸೇರಗನು ಜಾರಿಸುವುದಿಲ್ಲ...
ಹರೆಯ ಜಾರುವ ಮುನ್ನ...
ಮತ್ತೀಳಿಯುವ ಮೊದಲೆ....
ಸವಿ ಮುತ್ತೊಂದನು....ನೀಡಿಬಿಡು..
ಚಳಿ ತೊರೆಯುವ ಮುನ್ನವೆ...
ಈ ದೇಹವ ಅಪ್ಪಿ...ಬೆಚ್ಚಗಾಗಿಸಿಬಿಡು
ಹರೆಯ ಜಾರುವ ಮುನ್ನ....
ಹಿಂಡಿಬಿಡು ಈ ಕಬ್ಬಿನಾ....ಜಲ್ಲೆಯನು
ಸಿಹಿ ಮಾಸುವ ಮುನ್ನ...
ಹೀರಿಬಿಡು ಕೆಂದುಟಿಯೊಳಗಿನ ಗಂಧವನು
ತಾಳಲಾಗದಿನ್ನು....ನನ್ನಿಂದ ಮಾಗಿಯ ಕೊರೆತ
ತೊರೆಯಲು...ಬಿಡಗೊಡುತಿಲ್ಲ ನಿನ್ನೊಲವಿನಾ ಸೆಳೆತ
ಎದೆಯ ಮೇಲೊರಗಿ ಕೇಳೊ ನನ್ನೆದೆಯ ಬಡಿತ
ಪ್ರತಿ ಬಡಿತದೊಳಡಗಿದೆ ನಿನ್ನದೆ....ಹೆಸರಿನಾ... ಮಿಡಿತ
ಕತ್ತಲಿಗೂ... ನಾಚಿಕೆಯ ತರೀಸಬೇಕಿಂದು ನಾ,
ನಿನ್ನ ತೋಳೊಳಗೆ ಬಂಧಿಯಾಗಿ....
ಚಂದ್ರನ ಹಾಲ್ಬೆಳದಿಂಗಳಿಗೂ... ಹೊಟ್ಟೆ ಕಿಚ್ಚನು
ಹೊತ್ತಿಸಬೇಕು, ನಿನ್ನೊಳು ನನ್ನೆಯ ಸಿರಿಯು ಸೊರೆಯಾಗಿ
ಪ್ರೇಮೊನ್ಮಾದದಿ ಉಸಿರಿದ ಬಿಸಿಯುಸಿರಿಗೆ,
ಕರಗಲಿ ಉಕ್ಕಿದ ಬೆವರು ಆವಿಯಾಗಿ....
ಕುಂಕಮವು ಕರಗಿ, ಸುಮಗಳೆಲ್ಲವ ಹೊಸಕಿ
ಉಳಿಯಲಿದು ಇರುಳು ಎಂದೆಂದು ನೆನಪಾಗಿ...
ಬಾರೊ....ಮನ್ಮಥ ಈ ಹುಣ್ಣಿಮೆಗೆ, ವಿರಹವೆಂಬ
ಅಮವಾಸೆಯ ಕತ್ತಲು ಅಪ್ಪುವ ಮುನ್ನ..
ಚಪ್ಪರಿಸಿ ಸವಿಯ ಬಾರೊ...ಬಾಳಿನ ತೊಟ್ಟಿಂದ,
ಹರೆಯವೆಂಬ ಈ ಹಣ್ಣು ಉದುರುವ ಮುನ್ನ...
ವಿದಿಗೆ ಸಿಕ್ಕ ವಿಧವೆ....
ನೀ... ಹತ್ತಿಸಿದ ಒಲವಿನ ದಾಹವಿನ್ನೂ... ಆರಿಲ್ಲ
ತಣಿಸದೆ, ಅರ್ಧದಲ್ಲೆ ಬತ್ತಿ ಹೋದೆಯಲ್ಲ
ತನುವಿಗೆ ಸೋಕಿಸಿದ ತಾಪವನ್ನು ತಂಪಾಗಿಸದೆ...
ದೇಹದಣು ದಣುವಲು ವಿರಹದ ಬೆಂಕಿಯ ಹೊತ್ತಿಸಿ,
ಕಾಲನ ಅಸೂಯೆಗೆ ಸಿಕ್ಕು ಉರಿದು ಹೋಗುತಿರುವೆಯಲ್ಲ...
ಇರುಳು ಶಯನದಿ ನಾವಿಬ್ಬರೊಡಗೂಡಿ ಹೊಸಕಿದ
ಕುಸುಮಗಳ ವಾಸನೆಯು ಆರಿಲ್ಲ... ಕಿಟಕಿಯಂಚಿನಿಂದ
ಕದ್ದು ಇಣುಕುವ, ಮಧುಚಂದ್ರಮನ ನೋಟಕೆ, ನಾನೇನು
ಉತ್ತರಿಸಲಿ... ಪ್ರತಿ ದಿನವೂ ದೀಪವ ಸಾಯಿಸಿ ಮಲಗುತ್ತಿದ್ದ ನಾವು, ಇಂದು ನೋಡು ನೀನಿಲ್ಲದೆ ಅದರ ಕಾಂತಿ ನನ್ನನು,
ಕರುಣೆ ತೋರದೆ ಸುಡುತಿಹುದು....
ಸಿಹಿ ಮುತ್ತಿನ ಸವಿಯನುಂಡಿದ್ದ ಕೆನ್ನೆಯ ರಂಗುಗಳಿಂದು, ನಿನ್ನಗಲಿಕೆಯ ಕಾಣಿಕೆಯಾಗಿ ಕಣ್ಣೀರಿನ ಉಪ್ಪನು
ಸವಿಯುತಿಹವು...
ಮನದಾಸೆಗಳೆಲ್ಲ ಗರ್ಭಪಾತವಾಗಿ, ಕಂಡ ಕನಸುಗಳೆಲ್ಲ ಕಮರಿಹೋಗಿ, ಮನದ ಮಾತುಗಳ ಅರಗಿಸಿಕೊಳ್ಳಲಾಗದೆ,
ಮನಕೆ ಮೌನದ ಬೀಗವ ಜಡಿದು, ಕುಳಿತಂತಾಗಿದೆ....
ಓ.... ವಿಧಿಯೆ...
ಒಲವ ರಾಗವ ನುಡಿಸುತಲಿದ್ದ, ಕೊಳಲಿನ ಉಸಿರೊಂದನು
ನಿಲ್ಲಿಸಿ, ಕೊನೆಯಿಲ್ಲದ ಶೋಕ ರಾಗದ ಗಾನವನು ಕಟ್ಟಿ
ಕೊಟ್ಟಿರುವೆಯಲ್ಲ.... ಕೊರಳ ಬಂಗಾರವ ಕಸಿದು, ಬಿತ್ತಿದರು ಬೆಳೆಯದಂತಹ ಸಾವಿನ ವಿಷವ ಸುರಿದು, ನಳನಳಿಸುತಿರುವ ಹಣೆಯನು ಬಂಡೆಯನ್ನಾಗಿಸಿ ನಗುತಿರುವೆಯಲ್ಲ...
ಒಡಲ ಕೊಳದಲೊಂದು ಹುಳವಿಗೆ ಜೀವವನು ತುಂಬದೆ !!!
ಓ... ವಿಧಿಯೆ...
ನನ್ನ ಹಣೆಯ ಹುಡಿಯೆ... ಬೇಕಿತ್ತೆ ನಿನಗೆ ?
ಇಬ್ಬರನು.. ಕರೆದೊಯ್ದಿದ್ದರೆ, ಕಷ್ಟವಾಗುತ್ತಿತ್ತೇನೊ....?
ಇದಕ್ಕಾದರೂ.... ಉತ್ತರಿಸುವೇಯಾ...?
ನಲ್ಲನನ್ನೇನೊ...ಬೆಂಕಿಯ ಪಾಲಾಗಿಸಿದೆ..
ನನ್ನನ್ನೇಕೆ ? ಉಳಿಸಿ, ಬಾಳಿಗೆ ಕಣ್ಣೀರನ್ನು
ಉರುಳಾಗಿಸಿದೆ ....
ನಿನಗಿದು ತರವೆ...? ಜನನಿ..
ನಿನಗಿದು ತರವೆ...? ಜನನಿ
ಉಸಿರಿಲ್ಲದೆ ಮಡಿಲಲಿ ಮಲಗಿ
ಮಾಡಿದೆಲ್ಲ ನನ್ನನು ಜಗದೊಂದಿಗೆ ಮೌನಿ
ಎನಿತು ಜನ್ಮಗಳ ಪುಣ್ಯಗಳ ಫಲವೊ...
ಹೆತ್ತು.. ಹೊತ್ತು... ಎದೆ ಹಾಲುಣಿಸಿ...
ಆಸೆ ಕಂಗಳಲೆನ್ನ ನೋಡುತಾ....ಮಡಿಲಲಿ
ಮಲಗಿಸಿಕೊಂಡು ಮುದ್ದಾಡುತಿದ್ದ ಜ್ಯೋತಿಯೆ...
ಲೆಕ್ಕ ಮುಗಿಸಿದ ಕಾಲ ತಜ್ಞನ ಸುಳಿಗಾಳಿಗೆ
ಸಿಕ್ಕು , ಸರಿದೆಯಲ್ಲವ್ವ... ಕಾರ್ಗತ್ತಲಲಿ
ಲಕ್ಷ.. ಲಕ್ಷ.. ಮಾಡಿದರು ವೆಚ್ಚ..!!!
ಮಿಡಿಯಲಿಲ್ಲ ಇನ್ನಷ್ಟು ದಿನ... ನಿನ್ನ
ಹೃದಯದ ಬಡಿತ... ಅರಿವಾಗಲಿಲ್ಲವೇಕೊ...?
ಚತುರ್ಮುಖನ ಲೇಖನಿಗೆ.. ಅನುಕ್ಷಣವು ಅಮ್ಮನಿಗಾಗಿ
ಹಲಬುತಿರುವ ನನ್ನ ಮನದಾಳದ ತುಡಿತ !!!
ವಲೆಯ ಕಾವನುಂಡು ನಿ ಬಡಿಯುತ್ತಿದ್ದ ರೊಟ್ಟೆಯ
ಸಪ್ಪಳಕ್ಕಿಂತ... ನನ್ನೆದೆಯ ಬಡಿತವು... ಹೊಡೆದು
ಹೊಡೆದು...ಸಿಡಿಯುವುದೇನೊ..? ಎಂದೆನಿಸುತಿದೆ..
ನೀನಿಂದು ಪೂರ್ಣಾಗ್ನಿ ಕಾವಿಗೆ ಹೊತ್ತುರಿಯುತ್ತಿರುವುದ ಕಂಡು. ಮನೆಯೊಲೆಯೊಳು ಸುಟ್ಟು ಮಲಗಿದೆ ಸುಖಗಳ ಬೂದಿ... ಮನದೊಲೆಯೊಳು ಸಹಿಸದ ಕಿಚ್ಚ ಹೊತ್ತಿಸಿದೆ...
ನಿನ್ನ ನುಂಗಿ ಮಲಗಿದ ಬೂದಿ
ನನಗೇನು ಅರಿವಾಗುತ್ತಿತ್ತೊ..? ಜೀವನ್ಮರಣದಿ ಕಾದಾಡಿ
ನನಗೆ ಜನ್ಮವಿಯ್ಯಲು ನೀನನುಭವಿಸಿದ ನೋವು..!!!
ಅರಿವಾಗುತಿವುದಿಂದು...ಎದೆಯಲಿ ಸಾವಿರ ನೋವಿನ
ಸೂಜಿಗಳ ನರ್ತಗೈಯಿಸುತಿದೆ ಅವ್ವ... ನಿನ್ನ ಸಾವು !!!
ಇನ್ನಾರ ಬಳಿ ನಾ ಕೈ ಚಾಚಿ ಬೇಡಲಿ... ಕೈ ತುತ್ತನುಣಿಸಿ
ಲಾಲಿಯ ಹಾಡಿ ಇಂಗಿಸುವರೆ...? ತಾಯ್ವೊಲವ ಹಸಿವು !!!
ನಿನಗಿದು ತರವೆ...? ಜನನಿ
ಹೆಗಲೆರಿಸಿ ಹೊರಟು ಹೋದೆಯಲ್ಲ ನೀನು
ನೋವಿನ.. ಶನಿ
ನನ್ನೆದೆಯ ಹಾಡಿದು
ಹಾಡಿದು... ನನ್ನದೆ ಹಾಡಿದು
ಎದೆಯೊಳಡಗಿದ ಕನಸುಗಳ ಹೊತ್ತು
ರಿದುರಿದು ಹೊಗೆಯಾಡುತಿರುವ ಹಾಡಿದು
ನನಗಲ್ಲದೆ ಇನ್ನಾರಿಗೂ ಬೇಡವಾದ ಗೀತೆಯಿದು
ಹೊತ್ತು ಹೊತ್ತಿಗೂ ಬಿಸಿ ದೇಹಗಳ ತಾಪಕೆ
ಕರಗಿ... ಮತ್ತೆ ಮತ್ತೆ ಧರಿಸುವ ಸಿಂಧೂರಕೆ
ಎಂಟಾನೆಯ ಬೆಲೆಯಿಲ್ಲ...
ಬಂದು ಹೋಗುವವರಿಗೆಲ್ಲ ಬೇಕಾದದ್ದು
ಮಾನ ಕಾಯುವ ಬಟ್ಟೆಯ ಸೊಗಸಲ್ಲ...
ಅವರ ತನುವ ಹಸಿವ ತಣಿಸುವ ಮಾಂಸವು ಬೇಕಲ್ಲ
ನನ್ನೆದೆಯ ನೋವಿಗೆ ಯಾವ ರಾಗವಿಲ್ಲ
ಶೃತಿ ಲಯದ ತಂತಿಗಳು ಎಂದೊ.. ಕಿತ್ತು ಹೋಗಿವೆ
ಬಂದವರಿಗೆಲ್ಲ ಹಾಸಿನ ಮುಲುಗಗಳು
ಬೇಕೆ ವಿನಃ....ನೋವಿನ ಮೀಟುಗಳಲ್ಲ
ನಾನವ ಮಗ್ಗುಲಲಿ ಹಾಡಲಿ...?
ಘಳಿ ಘಳಿಗೆಗಳಿಗೆ ನನ್ನ ಶೋತೃಗಳು
ಬದಲಾಗುವವರಲ್ಲ
ಬಂದವರೆಲ್ಲವರು ಮುನ್ನುಡಿಯ ಬರೆಯ
ಬಂದವರೆ... ಹ್ಹ..ಹ್ಹ..ಹ್ಹ....ಹ್ಹ.......ಹ್ಹ....
ಬೆನ್ನುಡಿಯ ಬರೆಯುವ ಧೈರ್ಯವನ್ನು
ಮಾಡುವರಾರು ? ಎಷ್ಟು ಜನರು ಸುಖದ
ಅಮಲಿನಲಿ ಪರಿಚಿ ಬಿಟ್ಟ ಹಸಿ ಗಾಯದ ಗುರುತುಗಳೆ
ಇರುವಾಗ !!!!
ಯಾವ ಕೊನೆಯ ಚರಣವ ಬರೆಯಲಿ ?
ಉಸಿರು ಬಸಿಯುವವರೆಗೂ... ನಾ ಮುದುಡಿದ
ಹಾಸಿಗೆಯಲ್ಲಿ ಮುಲಗಬೇಕಲ್ಲ..!!!
ಕಣ್ಣಂಚಲಿ ಜಾರುವ ಕಂಬನಿಯು ಬೇಡವಾಗಿ
ತುಟಿಯಂಚಲಿ ಕಚ್ಚುವ ಸಿಹಿಗೆ ಎಲ್ಲರೂ
ಹಾತೊರೆಯುತ್ತಿರುವಾಗ
ಮುಖವಾಡಗಳು ಮತ್ತು ನಾನು
ಎಷ್ಟೇಂದು ಧರಿಸಲಿ ಮುಖವಾಡಗಳನು
ಕಳೆದುಕೊಂಡಿರುವೆನಲ್ಲ ಇವುಗಳೊಡಗೂಡಿ
ನನ್ನತನವನು....
ಮರೆಮಾಚಿರುವೆನಲ್ಲ ಅದುಮಿ ಅದೇಷ್ಟೊ
ನೋವುಗಳನು....
ಪ್ರೀತಿಸಿದವನು ಕೈ ಕೊಟ್ಟಾಗ..ಮನಸ್ಸಿಲ್ಲದೆ
ಮನಸ್ಸಿನಿಂದ ಇನ್ನೊಬ್ಬನ ಕೈ ಹಿಡಿಯುವಾಗ
ನಗು ಮೊಗದ ಮುಖವಾಡವ ತೊಟ್ಟಿದ್ದೆ....
ಆ ಮುಖವಾಡದ ಹಿಂದೆ ನಾ ಸುರಿಸಿದ
ಸೋತ ಪ್ರೀತಿಯ ನೋವಿನ ಕಣ್ಣೀರಿನ
ರುಚಿ... ನನ್ನ ಸೀರೆ ಸೇರಗಂಚಿಗಷ್ಟೇ ಗೊತ್ತಿತ್ತು...
ಮನವಿಲ್ಲದೆ ಮಂಚವನೇರಿ ಮೈಯ
ಹಂಚಿಕೊಂಡರು.. ನಿನ್ನಿಂದಲೆ ಈ ಬಾಳಿಗೆ
ಬೆಳಕು.. ಇನ್ನೂ ಈ ಮುಖವಾಡವಾದರೂ ಏಕೆ
ಬೇಕೆನ್ನುವಷ್ಟರಲ್ಲಿ... ದಿನಗಳಳಿದಂತೆ..
ಮೊದಲುಗೊಂಡವಲ್ಲ ನಿನ್ನ ದುಶ್ಚಟದೆಟುಗಳು
ನನ್ನ ಮುದ್ದಿಸಿದ ಮೈ ಮೇಲೆಲ್ಲ ನರ್ತಿಸತೊಡಗಿದವಲ್ಲ
ಕಾಮದ ಹಸಿವನಿಂಗಿಸಿಕೊಂಡ ಕೈಗಳು...
ಇಲ್ಲಿಯೂ ಸೋತು... ಸಾಯಲು ತಯಾರಾಗಿ
ನಿಂತ ನನಗೆ ಮತ್ತೆ.. ಮತ್ತೆ.. ಆ ಹುಸಿ ನಗು
ಮೊಗದ ಮುಖವಾಡವನ್ನು ಧರಿಸಬೇಕಾಯಿತಲ್ಲ
ಹೆತ್ತ ಕರುಳಕುಡಿಗಳೆದುರಿಗೆ.. ನನ್ನೀ ನರಕಕ್ಕೆ
ಅರಿತರಿವಿಲ್ಲದೆಯೊ ದೂಡಿದ ಹೆತ್ತವರೆದುರಿಗೆ
ಬಾಳೊಂದು ಕಂಡವರ ಪಾಲಿಗೆ ನಗೆಪಾಟಲಾಗ
ದಿರಲೆಂಬ ಸಂಕಟಕೆ..
ಬದುಕಿದು ಬಾಳಿನಲ್ಲಿ ನಗುವನೊಂದನು
ಅರಳಿಸುತಿಲ್ಲ...
ಮುಖವಾಡವೊಂದನು ಕಳಚಿ...ನೆಮ್ಮದಿಯ
ನಿಟ್ಟುಸಿರನೊಂದ ಎಳದುಕೊಳ್ಳಲು....
ಅಳಿದುಳಿದ ದಿನಗಳು ಅನುಮತಿಯನ್ನೆ....
ನೀಡುತ್ತಿಲ್ಲ...
ದಿನ.. ದಿನಕ್ಕೂ... ಹೊತ್ತು.. ಹೊತ್ತಿಗೂ.. ಹೊಸ
ಹೊಸ ಮುಖವಾಡಗಳನೆ ಧರಿಸುವ ಸಂದರ್ಭಗಳು
ಮತ್ತೆ.... ಮತ್ತೆ... ಎದುರಾಗುತಿಹುವಲ್ಲ
ಏನು ಮಾಡಲಿ...? ಮುಖವಾಡಗಳೆ ಬದುಕಿ
ನಾಸರೆಯಾಗಿವೆಯಲ್ಲ....
ಬದುಕಲೆ.....?
ಒಂಟಿ ಕಾಲ್ಬದುಕಿನ ಬೆಲೆ
ಕಾಲು ಕತ್ತರಿಸಿ ಹೋದುದಕೆ ವ್ಯಥೆಯಿಲ್ಲ
ಕಾಲವು ನಿಲ್ಲದೇ... ಉರುಳುತಿಹುದು
ಎಂಬುದೊಂದು ಚಿಂತೆಯು ಸುಡುತಿಹುದಲ್ಲ ...
ಮೊದಲೆ...ಮಧ್ಯಮ ವರ್ಗದ ಬದುಕಿದು
ಕಾಲವು.. ಕಾಲನು ಕಸಿದುಕೊಂಡು ಬದುಕಿನ
ಮಧ್ಯದಲಿ ಒಂಟಿ ಕಾಲಲಿ ನಿಲ್ಲಿಸಿಬಿಟ್ಟಿದೆಯಲ್ಲ...
ಸಾವಿರ... ಲಕ್ಷ ರೂಪಾಯಿಗಳ ಕೊಟ್ಟು..
ಪುಸ್ತಕಗಳ ಚೀಲವನು... ಹೊತ್ತು ಬರುವಷ್ಟು
ಶಕ್ತಿ ನನ್ನ ಬೆನ್ನಿಗಿಲ್ಲ..
ಹಗಲಿರುಳು ನೂರಾರು ಚೀಲಗಳ...
ಮಣಭಾರವನು ತಂದೆಯು ಹೊತ್ತು ಹಾಕಿದರೂ...
ದಿನದ ಬದುಕು ನಡುಗಡ್ಡೆಯಾಗಿದೆಯಲ್ಲ
ಬೇಡವಣ್ಣ ನನಗೆ ಕ್ರೀಡಾಂಗಣ...ಚಿತ್ರಾಂಗಣ..
ನೃತ್ಯಾಂಗಣ...ರಂಗಾಯಣ...ನೀಡಿರಣ್ಣ
ಕೊಠಡಿಯೊಳಗೊಂದಿನ ಮೂಲೆ...
ಅರಳಿಸ ಬೇಕಿದೆ ನನ್ನ ಕನಸುಗಳನೆಲ್ಲವ...
ಗೋಡೆಗೆ ತೂಗು ಹಾಕಿದ ಕರಿ ಹಲಗೆಯ ಮೇಲೆ.. ತೋರಿಸಿಕೊಡಬೇಕಿದೆ ಈ ಜಗಕೆ ಒಂಟಿ ಕಾಲ್ಬದುಕಿನ ಬೆಲೆ
ಒಂಟಿ ಕಾಲಲೆ ಕಂಡುಕೊಳ್ಳಬೇಕಿದೆ ಬದುಕಿಗೆ ನೆಲೆ
ಬದುಕಲಿ ಕಾಡುವ ನೂರೆಂಟು ಪ್ರಶ್ನೆಗಳಿಗೆ
ಉತ್ತರವ ಕಂಡುಕೊಳ್ಳಲು... ಜಗದೆಲ್ಲ ಕೌತುಕಗಳ
ಓದಿ ತಿಳಿಯುವ ದಾಹವನಿಂಗಿಸಿಕೊಳ್ಳಲು...
ಕಾಲಲಾಗದವನು.. ಎಂದು ನುಡಿಯುವ ಕುಹಕಿಗಳ
ಬಾಯನ್ನು ಮುಚ್ಚಿಸಿ.. ಈ ಒಂಟಿ ಕಾಲ್ಕಂಬದ ಮೇಲೆ
ಮನೆಯ ಹತ್ತು ತೊಲೆಗಳ ಹೊತ್ತು ನಿಲ್ಲಲು ಬೇಕಿದೆ
ಎನಗೆ ಅಕ್ಷರಗಳ ಸೆಲೆ...
ತಾಯಿ ಭುವನೇಶ್ವರಿ
ಎಷ್ಟು ಸುಕೋಮಲೆ.... ತಾಯೆ ನೀನು ಭುವನೇಶ್ವರಿ
ಲೋಕದಲಿ ನಿನ್ನಷ್ಟು ಯಾರಿಲ್ಲವಿಲ್ಲಿ ಸುಗಂಧವತಿ
ಶಿಲ್ಪಿಯ ಶಿಲೆಯ ಕಲೆಯ ಬಲೆಯೊಳರಳಿ ನಿಂತ
ಸೌಂದರ್ಯವತಿ
ಅಷ್ಟಪೀಠಗಳಿಗೆ ಜನ್ಮವನಿತ್ತ ತಪೋ ಭೂಮಿಯು ನೀನು
ಕಾವೇರಿ ಗೋದಾವರಿಗಳ ತುಂಬಿ ಹರಿಯುವಂತ
ಜೀವ ನದಿಗಳ ಒಡಲು ನೀನು
ಕವಿ ರನ್ನ ಪಂಪ ರಾಘವಾಂಕರ ಪದಗಳಲಿ ಮಿಂದ
ನಿನ್ನನು....ನಾನಾವ ಪದಗಳಲಿ ಕಟ್ಟಿಕೊಡಲಿ ತಾಯೆ...
ಏನು ಮಾಡುತ್ತಿರುವರು ನೋಡು ? ನಿನ್ನನು..
ಗಂಧವತಿ ಎಂದೆ ಸದ್ದು ಗದ್ದಲವಿಲ್ಲದೆ ಕಡೆದು
ಕಡೆದು ಕಳ್ಳ ಸಾಗಾಣಿಕೆಯ ಮಾಡುತಿಹರು...!!
ಪ್ರೇಮ ಮೋಹದ ಮತಿಹೀನರು ನಿನ್ನ ಶಿಲೆಯ
ಕಲೆಯ ಕೊಳಕಾಗಿಸುತಿಹರು...!!
ಪುಣ್ಯದ ಮಣ್ಣೆಂದೆ ಲಾರಿ..ಲಾರಿಗಟ್ಟಲೆ ಅಗೆದು
ಬಗೆದು ಮಾರಿಬಿಟ್ಟರು...ಮಾರುತಿಹರು..ಮಾರಾಟದ
ಹೊಸ ದಾರಿಗಳನ್ನೂ... ಹುಡುಕುತಿಹರು
ಜೀವನದಿಗಳ ಹೊಂದಿದುರಿಂದಲೆ ತಾಯೆ.. ನೆರೆ
ಹೊರೆಯವರು ನಿನ್ನ ಮಕ್ಕಳು.. ಬಾಯಾರಿಕೆಯಿಂದ
ಸತ್ತರೂ ನೋಡದೆ.. ತಮ್ಮ ಹೊಲ ಗದ್ದೆಗಳಿಗೆ ಜಲವ
ಹರಿಸಿಕೊಂಡು.... ನಮ್ಮ ಬದುಕಿನಂಗಳವ ಬರಡಾಗಿಸಿ
ತಮ್ಮ ನೆಲಗಳನು ಹಸಿರಾಗಿಸಿಕೊಳ್ಳುತಿಹರು
ಸಾಕು ತಾಯೆ.. ಸಾಕಿನ್ನು ಕನ್ನಡಿಗರು ಶಾಂತಿ ಪ್ರಿಯರೆಂಬ
ಬಿರುದು... ಎಳೆದಿಕೊ ತುಕ್ಕು ಹಿಡಿಯುತ್ತಿರುವ ಖಡ್ಗವನು
ಝಳಪಳಿಸಿ ಬಿಡು.. ಎದುರಾಳಿಗಳ ಎದೆಯು ನಡಗುವಂತೆ
ಸಾರಿ ಬಿಡು ಯುದ್ಧವನು.. ಅನ್ಯರು ನಮ್ಮ ನೆಲವೆಂದು ಕಬಳಿಸಲು ಬರುವವರ ಕಾಲನು ಕತ್ತರಿಸಲು...
ನಮ್ಮ ನೆಲದನ್ನವನುಂಡು ಪರಕೀಯ ಭಾಷೆಯ
ಮಾತನಾಡುವ ನಾಲಿಗೆಯನ್ನು ಸೀಳಲು...
ಕಲೆಯ ಬೆಲೆಯನರಿಯದೆ ಶಿಲೆಯ ವಿರೂಪಗೊಳಿಸುವ
ಕೈಗಳನು ಕತ್ತರಿಸಲು...
ಇನ್ನೊಬ್ಬರ ಬಗೆಗೆ ಅನುಕಂಪವಿರದೆ ನೀರು..ನೀರೆನ್ನುವವರ
ನೆತ್ತರಿನ ಕಾಲುವೆಯನೆ... ಹರಿಸಲು...
ನಿನ್ನನೆ ಮಾರಿ... ಮೈ ತುಂಬಾ ರೋಗ ರುಜಿನಗಳ ಹೊಂದುವ
ಶ್ರೀಮಂತರ ದೇಹವನ್ನು ಅದೇ ಮಣ್ಣಲಿ ಮಣ್ಣಾಗಿಸಲು...
ಏನು ಮಾಡುವುದು ತಾಯೆ....? ಏನು ಮಾಡುವುದು ?
ನಾಡ ಕಾಯಲು ನಿಂತ ಕನ್ನಡಿಗರ ನೆತ್ತರದ ಸವಿಯನ್ನು
ಕೋವಿಯು ಸವೆಯುತಿದೆ...
ಹಿರಿಯರು ಹೊತ್ತಿಸಿದ ದೀಪವಿಂದು ಕ್ಷೀಣಿಸುತ್ತಿದೆ....
ಈಗಲೋ.. ಆಗಲೋ ಎಂಬಂತೆ ಬಿಕ್ಕುತಿದೆ...
ಬಿಸಿ ರಕ್ತದ ಯುವಶಕ್ತಿಯ ಮತಿಗಳ ಜ್ಞಾನದಾ...
ಎಣ್ಣೆಯು ಬೇಕಿದೆಯಿಂದು ತಾಯೆ....ಸೋಕಿಸೆಲ್ಲರ
ಮನದಲಿ ಜಾಗೃತಿಯ ಕಿಡಿಗಳನು.....ತಾಯಿ ಭುವನೇಶ್ವರಿ
ಮತ್ತೆ ಭೂ ಪಟದಲಿ ಹಿಂದೆಂದಿಗಿಂತಲೂ...ಪ್ರಜ್ವಲಿಸಲು
ವರ್ತಮಾನದಲ್ಲಿ ಕವಿ
ವರ್ತಮಾನದ ವಿಷಯಗಳ ಕುರಿತು
ಬರೆಯಲು ಹವಣಿಸುತಿಹುದು ಮನಸು
ಸಮಾಜದೊರೆಕೋರೆಗಳ ತಿದ್ದುವವರೆ
ಎಡುವುತ್ತಿರುವುದನು ಕಂಡು ಕರಗುತಿದೆ
ಕವಿ ಕಂಡ ಸ್ವಸ್ಥ ಸಮಾಜದ ಕನಸು
ಆಂಗ್ಲರ ಬಂಧನದ ಸಂಕೋಲೆಗಳ ತೊಡೆದು
ಹಾಕಿದೆವು... ಕಡೆದು ಹಾಕಲಾಗಲಿಲ್ಲ ಆಂಗ್ಲ ಭಾಷೆಯೆಂಬ
ಹೆಮ್ಮರವನ್ನು... ಇದರ ಗಾಳಿಯ ಸೇವಿಸಿ ಬಿಕ್ಕುತಿಹರಲ್ಲ
ನಾಡಿಗರು...ಹಣದ ಹೊಳೆಯನೆ ಹರಿಸಿ.. ಹರಿಸಿ
ಪೋಷಿಸಿ...ಸೃಷ್ಟಿಸಿಕೊಳ್ಳುತಿಹೆವಲ್ಲ ನಾವೆ ವಿಷವರ್ತುಲವನು
ಮೇಲುಕೀಳು ಅಸ್ಪೃಶ್ಯತೆಯಂತಹ.. ಸಮಾಜದ
ಪಿಡುಗುಗಳ ವಿರುದ್ಧ ವೈಚಾರಿಕತೆಯ ನುಡಿಗಳ
ಸಿಡಿಯುವ ಮತಿಗಳ ಸೀಳುತಿವೆಯಲ್ಲ ಗುಂಡುಗಳು
ಕುಡಿಯಲು ನೀರಿಲ್ಲ.. ಮಳೆ ಬಂದರೆ ಸೂರಿಲ್ಲ
ದುಡಿಯಲು ಕೆಲಸವಿಲ್ಲ...ಆದರೂ ಜಾತ್ರೆ...
ಜಯಂತಿಗಳ ನಡೆಸುವುದಕ್ಕೆ ಹಣಕ್ಕೇನು ಕೊರತೆಯಿಲ್ಲ
ಹುಡುಕುತಿದೆ ಭಾವನೆಗಳ ಮನಸು ಈ ಲೋಕದಲಿ
ಹುಡುಕಿದರೂ ಸಿಗದಾಗಿದೆ ಪ್ರೀತಿ..ಪ್ರೇಮ..
ಕರುಣೆ...ತ್ಯಾಗ..ಸಹನೆ.. ದಯೆ ಎಲ್ಲದರಲ್ಲಿಯೂ
ನಿರ್ಭಾವವೆ ಮನೆಮಾಡಿಬಿಟ್ಟಿದೆ... ಕಾರಣ ಧನದ
ಭೂತವು ಇವೆಲ್ಲವ ಹೂತು ಕುಳಿತುಬಿಟ್ಟಿದೆ
ಹೊರಬರದಂತೆ ಕಾಯುತ್ತ.... ಇದನ್ನೆಬ್ಬಿಸಿ ಓಡಿಸುವ
ಲೇಖಕರ ಲೇಖನಿಗಳು ಅಡುವಾಗಿರುವವಲ್ಲ ಇದರದೆ ಕಪಾಟಿನಲ್ಲಿ....
ತವಕ ತಲ್ಲಣದಿ ಬೇಯುತಿದೆ ಕವಿಯ ಮನವು
ಒಂಟಿ ದಾರಿಯಲಿ ಕೂಗಿ.. ಕೂಗಿ ಕುಸಿದಂತಾಗಿದೆ ಕಸುವು
ನೀಗುವುದೆ ರಾಮರಾಜ್ಯದ ನಿರ್ಮಾಣದ ಹಸಿವು
ಬರುವುದೆಂದು ಬರಗಾಲನೆದುರಿಸುವ ಬಲವು
ಸಿಕ್ಕುವುದೆ...? ಅವನ ಕನಸುಗಳಿಗೆ ಗೆಲವು...ಹೇಗೆ.?
ಬರೆಯದೆ ಅಳಿದುಳಿದ ಹಾಳೆಗಳಿಗೆ ಬೆಲೆಯುಂಟು
ಕವಿ ಕಂಡು ಬರೆದ ಪುಟದೊಳಗಿನ ಭಾವನೆಗಳಿಗೆ
ಏಂಟಾನೆಯ ತೂಕವು........ಇಲ್ಲದಂತಾಗಿರುವಾಗ
ಏನೀ....ಬಾಳು
ಏನೀ.... ಬಾಳು
ಮಾಯಾನಗರಿಗೆ ಬಂದರೂ...
ತಪ್ಪುತ್ತಿಲ್ಲವಲ್ಲ ಗೋಳು
ಬರವು ಹಳ್ಳಿಯ ಬದುಕನ್ನೆ
ಮಾಡಿದೆಯಲ್ಲ ಹೋಳು
ನೆರೆಯು ತುತ್ತಿನ ಚೀಲದೂರಿಗೂ...
ತುಂಬಿಸಿಬಿಟ್ಟಿತಲ್ಲ ಹೂಳು
ಅರಿವಿಲ್ಲದಾಯಿತೆ ವರುಣ..
ನಮ್ಮೂರಿನಲ್ಲಿ ನೀನೀತ್ತ ಹಸಿವಿನ ಸಂಕಟ
ನಿನಗಿಲ್ಲವಾಯಿತೆ ಕರುಣ...
ತಂದಿಟ್ಟೆಯಲ್ಲೊ ಬೆಂದೂರಿನಲ್ಲಿ
ದುಡಿಮೆಗೂ ಕಂಟಕ
ನಿನಗರಿವಾದಿತೊ...ಬೀದಿ ಕಾಮಣ್ಣರ ಕಣ್ತಪ್ಪಿಸಿ
ಬದುಕುವ ಬದುಕಿನ ಸಂಕಷ್ಟ
ಹುಟ್ಟಿದೂರಿನಲಿ ವಲೆಗೆ ಬೆಂಕಿಯ
ಹಚ್ಚಲು ಶಕ್ತಿಯ ನೀಡಲಿಲ್ಲ
ವಲಸೆ ಬಂದಲ್ಲಿ ವಲೆಯ ಹಚ್ಚಲು.. ನೀರು
ಸುರಿಸಿ.. ಆರಿಸಿ ನಿನ್ನ ಕುಯುಕ್ತಿ ಬಿಡಲಿಲ್ಲ
ತೋಯ್ದ ಬಟ್ಟೆಗಳೊಂದಿಗೆ ನಿನ್ನ ಹನಿಗಳಲಿ
ನೆನೆಯುತ್ತ ಸೂರಿಲ್ಲದೆ ಸಾಗುತಿಹುವೆವಲ್ಲ
ನಮಗಿನ್ನೂ... ಬದುಕುವ ಆಸೆಯಿದೆ
ಬದುಕ ಕಟ್ಟಿಕೊಳ್ಳುವ ಛಲವಿದೆ
ಊರ ಶೆಟ್ಟರಂಗಡಿಯ ದಿನಸಿ ಬಾಕಿಯನ್ನು
ಚುಕ್ತಾ ಮಾಡುವ ದುರಾಸೆಯಿದೆ
ಕರುಳ ಬಳ್ಳಿಗಳ ಓದಿಸಿ ನಮ್ಮ ಕಷ್ಟಗಳಿಗೆ
ಅವರ ಕೈಯಿಂದಲೆ...ಮುಕ್ತಿ ಹಾಡಿಸಬೇಕೆಂಬ
ಮಹದಾಸೆಯಿದೆ
ಬದುಕಬೇಕಿದೆ ನಾವು.. ನಾಳೆಗಳ ಗೆಲ್ಲೋಕೆ
ಮೆಟ್ಟಬೇಕಿದೆ ನಾವು ನೀ ಕೊಟ್ಟ ಕಷ್ಟಗಳ
ಬರುವ ಬದುಕಿನ ಹಾದಿಯ ಹಸನಾಗಿಸೋಕೆ
ನಗಿ ಬಾಂವ್ಯಾಗ ಬಿದ್ದಾವ...
ಬಾವಿಕಟ್ಟಿ ಮುಂದ ನೀ ನನ್ನ
ನೋಡಿ ನಕ್ಕಿದ್ದು ಸುಳ್ಳಲ್ಲ
ಆ ನಗಿ ಬಾವ್ಯಾಗ ಸದ್ದಿಲ್ದ ಬಿದ್ದಾಂವ
ನಾನಂತ ಇಲ್ಲೆ ಯಾರಿಗೂ.. ಗೊತ್ತಿಲ್ಲ
ಎಷ್ಟ ಬಿಂದ್ಗಿ ನೀರ ಸೇದಿ ಸುರಕೊಂಡ್ರೂ
ನಿನ್ನ ನಗಿ ಮತ್ತ.. ಇಳಿತಿಲ್ಲ
ಹಾದಿ ಮೂಲ್ಯಾಗ ನಿಂತ್ಗೊಂಡ ಜಿಂಕಿ
ಕಣ್ಣಿಲೆ ಎಷ್ಟರ ಪ್ರೇಮದ ಬಾಣ ಬಿಟ್ಟಿ
ಹಗಲ್ಯಾವ್ದೊ... ರಾತ್ರಿಯಾವ್ದೊ...ಕಣ್ಣಿಗೆ
ಪುರಸೊತ್ತ ಇಲ್ದಂಗ ನಿದ್ದಿಗೆ ಕೊಳ್ಳಿ ಇಟ್ಟಿ
ಕಣ್ಣಿದ್ದೂ.. ಕುರ್ಡನಂಗ ಅಡ್ಯಾಡಕ ಹಚ್ಚಿಯಲ್ಲ
ನನ್ನ.... ಕಣ್ಣಿಗೆ ನಿನ್ನ ಪ್ರೀತಿ ಬಟ್ಟಿಯ ಕಟ್ಟಿ
ಎದಿಯಾಗ ಎಷ್ಟ ಭಾರ ಆಗೈತಿದು
ನಿನಗ ಹೇಳುವಂತ ಮಾತ... ಒಂದು
ಕೇಳಿಯೂ... ಕೇಳ್ದಂಗ ಹೋಗ್ಬ್ಯಾಡ ನೀನು
ಪ್ರೀತಿ ಹಾದ್ಯಾಗ ಕಾದ ಕುಂತ ಹಕ್ಕಿನ ಕೊಂದು
ಬಾಳೊದ ಆಗೋದಿಲ್ಲ ನಂಗ... ವಲ್ಲೆನ್ನೊ
ನೋವಿನ ಬೆಂಕ್ಯಾಗ ಬೆಂದು ನೊಂದು
ನಿನ್ನ ನಗಿ ಬಾವ್ಯಾಗ ಬಿದ್ದಾವ್ನ
ಮುಳಗುಸ್ತೀಯೊ... ತೇಲಸ್ತಿಯೊ...ಹೆಂಗೊ.?
ತಲಿಬಾಗ್ಲದಾಗ ಅಕ್ಕಿ ತುಂಬಿದ ಸೇರಿಟ್ಟಿನಿ
ಒದ್ದ ಒಳಗ ಬರ್ತೀಯೊ....
ನಿನ್ನ ನಂಬಿ ಕುಂತ ಎದಿಮ್ಯಾಲ ಕಾಲಿಟ್ಟ
ಅದರ ಉಸುರ ನಿಲ್ಲಿಸಿ ಹೋಗ್ತಿಯೊ...
ಸೆಡವು
ಎಷ್ಟರ..ಸೇಡವು ನನ್ನ ಮ್ಯಾಲೆ
ಮುಡಿಗೆ ತೊಡಿಸ್ಲೇನ ಹೂವಿನ ಮಾಲೆ
ಕೇಳ್ಲಿಲ್ಲಂತ ಸಿಟ್ಟಾಗಬೇಡ ನೀನು ಆಮೇಲೆ
ಆ ಮೊಗದಾಗ ನಗುವಿನ ಮಲ್ಗಿನ.. ಇಲ್ಲಂದ್ರ
ನಾ ಹ್ಯಾಂಗರ ಬದುಕಿರ್ಲಿ..ಈ ಭೂಮಿ ಮ್ಯಾಲೆ
ಮನದಾನ ಸಿಟ್ಟನ್ನ ಕನಸಿಗ್ನೂ
ಯಾಕ ಕಲಿಸಿದಿ
ಕನಸನ್ನು ಕಸಗೊಂಡು ರಾತ್ರಿ
ನಿದ್ದಿ ಯಾಕ ಮರೆಸಿದಿ
ನೆನಪಿನ ಭಾರನ ಎದಿಮ್ಯಾಲ
ಅದೇಷ್ಟು ಹೊರಿಸಿದಿ
ನೋವಿನ ನೀರು ಎಷ್ಟ ಕಹಿಯಂತ
ನೀ ಏನ ತಿಳಿದಿ
ನನ್ನ ಕಣ್ಣೀರಾಗ ನಿನ್ನ ಕಣ್ಣನ್ನರ ತೊಳ್ಕೊ...
ತಿಳಿಯಾಗ್ಲಿ ನಿನ್ನ ಕಣ್ಣಾನ ಹಳ್ದಿ
ಮುಚ್ಚಿಟ್ಟಿದ್ದು ಭಾಳ ದಿನ ನಿಂದ್ರಂಗಿಲ್ಲ
ಹಳಸಿ ಹೊಕ್ಕೈತಿ
ಪ್ರೀತಿ ಉಸಿರ ತಡೆ ಹಿಡ್ಕೋಬ್ಯಾಡ
ತಡ ಆದ್ರ ಅದರ ಉಸಿರ ನಿಲ್ತತೈತಿ
ಜೇನು ಹೂವಿಗೆ ಮುತ್ತು ಕೊಟ್ರ..ಹೂ
ಅರಳಿದ್ದು ಸಾರ್ಥಕ ಆಕ್ಕೈತಿ
ನನ್ನ ಹೂವಿನ ಜೊತೆ ನಾನು ಬಾಳೆ ಮಾಡಿದ್ರನ
ಬದುಕಿಗೊಂದು ಅರ್ಥ ಬರತೈತಿ..
ಗುರುಗಳೆ....
ಬೆತ್ತದ ರುಚಿಯಲಿ
ಬತ್ತದ ಅಕ್ಷರಗಳ ಕಲಿಸಿದವರು
ಗೆಜ್ಜೆಗಳ ನಾದದಲಿ
ಗೋವಿನ ಹಾಡನು ಹಾಡಿಸಿದವರು
ಒಂಟಿ ಕಾಲಲೆ ನಿಲ್ಲಿಸಿ
ಸಾಲು ಸಾಲು ಮಗ್ಗಿಗಳ ಕಲಿಸಿಕೊಟ್ಟವರು
ಹಗಲಿರುಳು ತಮ್ಮ ತಾ ಸುಟ್ಟುಕೊಂಡು
ನಮ್ಮ ಬಾಳಿಗೆ ಬೆಳಕ ಚೆಲ್ಲಿದವರು
ಬಗ್ಗದ.. ಜಗ್ಗದ ದಡ್ಡ ಕಬ್ಬಿಣಗಳ
ಕಾಯಿಸಿ..ಕಾಯಿಸಿ ರೂಪವ ಕೊಟ್ಟವರು
ಜೀವನದ ಹಾಳೆಯಲಿ ತಪ್ಪುಗಳನೆಲ್ಲವ
ಅಳಿಸಿ.. ಮರಿಸಿ..ಒಳ್ಳೆಯದಕ್ಕೆ ಮುನ್ನುಡಿಯ
ಬರೆದವರು
ಬೆಟ್ಟ ಗುಡ್ಡಗಳ ಸುತ್ತಾಡಿಸಿ.. ಪ್ರಕೃತಿಯ ಮಡಿಲಲಿ
ಬೇರಸಿ.. ಮಲಗಿಸಿ ಮಾಸದ ಅನುಭವವ
ಕಟ್ಟಿಕೊಟ್ಟವರು
ಗೆಲುವೆಂದರೆ ಅದು ನಿನ್ನಿಂದ ಎಂಬ
ಹುರುದುಂಬಿಸುವ ಮಾತುಗಳಿಂದ ಕ್ರೀಡೆಗಳಿಗೆ
ಕಳಿಸುತ್ತೀದವರು
ನಮಗಾಗಿ ಬದುಕುವುದು ಬದುಕಲ್ಲ..
ಇನ್ನೊಬ್ಬರಿಗಾಗಿ ಬದುಕುವುದು ಬದುಕೆಂದು
ಬದುಕಿ ತೋರಿಸಿಕೊಟ್ಟವರು
ಜಡವಾದ ಕೊರಡಾಗಿದ್ದೇನ್ನನು.. ನೆಟ್ಟು
ಜ್ಞಾನದ ನೀರೆರೇದು ಪೋಷಿಸಿದವರು
ಮನಸಿನ ಕಲ್ಮಷವನು ಶಿಕ್ಷಣದ ಗಂಗೆಯಲಿ
ತೊಳೆದು ಸನ್ಮಾರ್ಗವ ತೋರಿದವರು
ಸಮಾಜಕ್ಕೆ ನೆರಳಾಗಿಸಿ.. ದೇಶಕ್ಕೆ ಉತ್ತಮ
ಫಲಕಾರ್ಯಗಳ ನೀಡುವಂತೆ ರೂಪಿಸಿದವರು
ಗುರುಗಳೆ...ನೀವು ಬಿತ್ತಿದ ಪದ ಪದಗಳಿಗೂ
ನಾನವ ಬೆಲೆಯ ಕಟ್ಟಲಿ... ಅದಾವ ರೀತಿಯಲ್ಲಿ
ಗುರು ಕಾಣಿಕೆಯನರ್ಪಿಸಲಿ...
ನೀನು... ದೇವರಾದೆಯಲ್ಲೊ..ಕಂದ
ನೀನು ದೇವರಾದೆಯಲ್ಲೊ...ಎಸುಳೆ
ಹನ್ನೊಂದು ಮಾಸಗಳಷ್ಟೇ ಬೆಳಗಿ
ಮಡಿಲಿಗೆ ಮುಳ್ಳನಿಟ್ಟು.. ಆಸೆ ಕಂಗಳಲಿ
ಕಣ್ಣೀರ ಕೆರೆಯ ಕಟ್ಟಿ.. ಕತ್ತಲಿನ ದಿನಗಳ
ಉಳಿಸಿ ಹೋದೆಯಲ್ಲೊ ಕಾಲನ ಕರೆಗೆ ಕರಗಿ
ತುಂಬಿದೆದೆಯಿದು ಬಿಗಿದು... ಮೊಲೆಯ ತೊಟ್ಟಿನಿಂದ
ಅಮೃತವು ಜಿನುಗಿ... ರವಿಕೆಯಲ್ಲ ಹಸಿಯಾಗಿಹುದು
ಉಸಿರಿಡಿದು ಅಳುವ ನಿನ್ನ ಸಂತೈಸಲು
ನನ್ನಜ್ಜಿಯಿಂದ ಕಲಿತ ಜೋಗುಳ ಪದಗಳು
ನೀನಿಲ್ಲದೆ ಉಸಿರುಗಟ್ಟಿವವು....
ಅಪ್ಪ ತಂದಿಟ್ಟ ಗೊಂಬೆಯ ಆಡಿಸಲಿಲ್ಲ.. ಬೀಳಿಸಲಿಲ್ಲ
ಆಡಿಸಿ.. ಬೀಳಿಸಿ ನಕ್ಕು ನಮ್ಮನು ನಗಿಸಲಿಲ್ಲ
ಅಜ್ಜಿ ಮಾಡಿಸಿಟ್ಟ ಕಾಲ್ಗೆಜ್ಜೆಯ ತೊಡಲಿಲ್ಲ.. ನಡೆಯಲಿಲ್ಲ
ತೊಟ್ಟು.. ಓಡಾಡಿ.. ಮನೆಯಂಗಳದ ತುಂಬ
ಕಾಲ್ಗೆಜ್ಜೆಯ ನಾದವ ತುಂಬಿಸುವ ಮೊದಲೆ
ಮರೆಯಾಗಿಬಿಟ್ಟೆಯಲ್ಲೊ... ಮಗುವೆ..
ಎರಡೆರಡು ಬಾರಿ ಹೃದಯಾಘಾತವಾದರೂ..
ನಿನ್ನಜ್ಜನೆದೆಯ ಬಯಲು ನಿನ್ನ ಮುದ್ದು ಪಾದಗಳ
ಹೆಗ್ಗುರುತಿಗಾಗಿ ಕಾಯುತ್ತಿತ್ತಲ್ಲ... ಬಯಲು ಬರೀ..
ಬಯಲಾಗಿಯೇ.. ಉಳಿಯಿತೆಂಬ ಸತ್ಯವು ಗೊತ್ತಾದ
ಮೇಲೆಯೂ ನೀ.. ಬಂದೆ ಬರುವೆ ಎಂಬ ನಂಬಿಕೆಯಿಂದ
ಮಿಡಿಯುತಿಹುದಲ್ಲ
ಮೌನವಾದೆಯಲ್ಲೊ... ಮಗುವೆ ಕಲ್ಲು
ದೇವರ ಹಾಗೆ..ತೊಟ್ಟಿಲು ನಿಂತಿದೆ.. ಜೋಗುಳ
ಕಾದಿದೆ..ಎಣ್ಣೆ ನೀರದು ಆರುತಿದೆ... ನೀನ್ನಳುವ
ಕೇಳದೆ ಮನೆಯ ಮೂಲೆ ಮೂಲೆಯಲೂ..
ಮೌನದ ತಾಂಡವ ನೃತ್ಯವೆ ವಿಜೃಂಭಸಿದೆ...
ಸಂತೈಸುವ ಮಡಿಲು ಬರಿದಾಗಿದೆ... ನೀನ್ನೆನೆದು
ಸುರಿಸುವ ಕಂಬನಿಗೆ ಕೊನೆಯಿಲ್ಲದಾಗಿದೆ...
ದೇವರಾಗಿಬಿಟ್ಟೆಯಲ್ಲೊ.. ಮಗುವೆ..
ವಂಶದ ಚಿಗುರು ಚಿಗಿಯುವ ಮೊದಲೆ...
ಕಾವಿಗೂ...ಕಾವು ಬೇಕೆ..?
ಕಾವಿಗೂ... ಕಾವು ಬೇಕೆ ?
ಆಧ್ಯಾತ್ಮದ ಯಜ್ಞಕುಂಡಕ್ಕೂ
ಕಾಮದ ತುಪ್ಪ ಬೇಕೆ ?
ನಿಷ್ಕಲ್ಮಷ ಮನದಿ ದೇವರಡಿದಾವರೆಗಳ
ಪೂಜೆಗೆ ಸಲ್ಲಬೇಕಾಗಿದ್ದ ಹೂವುಗಳೆಲ್ಲ..
ಕೊಂದ ವ್ಯಾಘ್ರದ ಚರ್ಮದ ಮೇಲೆ
ಕುಳಿತು ಶಾಂತಿ ಮಂತ್ರವ ಬೋಧಿಸುವವರ
ಶಯನದಲಿ ಅಹಿಂಸೆಯಿಂದ ನಲಗುತಿವೆಯಲ್ಲ ....
ಕಾಲನ ಗರ್ಭದಲಿ ಅಬಲೆಯರದದೇಷ್ಟೊ
ಕೂಗುಗಳು ಹೂತು ಹೋಗಿವೆಯಲ್ಲ
ಕಾಮುಕರ ಕೋಣೆಯಲಿ ನತದೃಷ್ಟೆಯರ
ಮೈ ಮನಗಳು ಇನ್ನೂ ಮುದುಡುತಿಹುವೆಯಲ್ಲ
ಹುಲಿಯ ವೇಷದ ನರಿಯ ಮನಸುಗಳು
ಧರ್ಮನಿಷ್ಠೆಯ ಶರಣರನು ಭಕ್ತರ ಅನುಮಾನದ
ಅಲಗು ಕಣ್ಣಿಗೆ ನೂಕುತಿಹುವಲ್ಲ
ರಂಭೆ.. ಊರ್ವಶಿ.. ಮೇನಕೆ.. ತಿಲೋತ್ತಮೆ
ಯಂತಹ ಸುರಲೋಕದ ವೇಶ್ಯೆಯರು
ಋಷಿಮುನಿಗಳ ತಪವ ಭಂಗಗೊಳಿಸಿ.. ಅವರ
ಮನಕಾಮನೆಯ ಬಡಿದೆಬ್ಬಿಸಿ.. ಬದುಕಿನ
ಮಹೋನ್ನತ ಗುರಿಯ ತಪಕೆ ತಮ್ಮ ಕಾಮದ
ಕಿಡಿಯ ಸೊಕಿಸಿ ಹೊತ್ತಿ ಉರಿಸಿಬಿಡುತ್ತಿದ್ದರಂದು..
ಮನದ ಶಾಂತಿಗಾಗಿ... ಬಾಳ ಜಂಜಾಟಗಳ
ಗಂಟುಗಳ ವಿಮುಕ್ತಿಗಾಗಿ ಶರಣೆಂದು ಚರಣಕೆ
ಶರಣಾದವರಸಹಾಯಕತೆಯ ಹಾಸಿಗೆ ಮಾಡಿಕೊಂಡು
ದೇಹದ ತುಂಬ ಮಾಸದ ಮುಳ್ಳು ಗುರುತುಗಳ
ಮೂಡಿಸಿ.. ಲೌಕಿಕ ಅಲೌಕಿಕಗಳ ಸಹವಾಸವೆ
ಸಾಕೆಂದು ಸಾಯಲು ಸಿದ್ದಗೊಳ್ಳುವಂತೆ ಮಾಡುವ
ಕಾಮಾ...ಸ್ತಿಕರೆ.. ಸ್ವಲ್ಪವಾದರೂ ಅಂತರಾತ್ಮದ
ಭಯವಿಲ್ಲವೆ ?
ಬದುಕಿದು ನಶ್ವರವೆಂದು ಸಾರುವವರು
ಸಾವಿರಾರು ಕೋಟಿಯ ಆಸ್ತಿಯ ಹೊಂದುವರು
ಹೆಣ್ಣು... ಹೊನ್ನು.. ಮಣ್ಣುಗಳೆಂಬ ಮೋಹವ
ತೊಡೆಯಲು ಬಯಲಿಗೆ ಬಂದು...ಮಣ್ಣನು
ಗಳಿಸಿ..ಮಣ್ಣಲಿ ಹೊನ್ನಿನ ಹಾಸಿಗೆಯ ಹಾಸಿ
ಮುಕ್ತಿಯ ನೆಪದಲಿ ಹೆಣ್ಣನು ಹರಿದು ಮುಕ್ಕುವರಲ್ಲ
ಇಂಥ ಧುರುಳರ ಪೂಜಿಸಬೇಕೆ..?
ಇವರ ದುರ್ಮಾರ್ಗವ ಅನುಸರಿಸಬೇಕೆ...?
ತಪ್ಪಿನ ಶಿಕ್ಷೆಗೆ ಒಳಗಾದವರನ್ನು ಅಪ್ಪಿಕೊಂಡು
ಪರರ ಆಸ್ತಿಯನ್ನು ಸುಟ್ಟು ಹಾಕುವುದು ಸರಿಯೆ..?
ನ್ಯಾಯಾಂಗದ ಮುಂದೆ ಎಲ್ಲರೂ ಒಂದೆ ಎಂಬ
ಉಕ್ತಿಗೆ.. ಅಗೌರವ ತೋರಿದಂತಾಗುವುದಿಲ್ಲವೆ..?
ಎಚ್ಚೆತ್ತುಕೊಳ್ಳುವುದಾದರೂ ಯಾವಾಗ..?
ಕಾವಿಯ ಕಾವು ನಮ್ಮ ಮನೆಯ ಬಾಗಿಲನ್ನು
ತಾಕುವವರೆಗೂ ಕಾಯಬೇಕೇನೊ...?
ನನಗೇಕಿ...ಬಾಳು
ನನಗೇತಕಿ ಬಾಳು..
ಅರಿಯದಾಯಿತೆ ಜಗವಿದು
ಎನ್ನೆದೆಯ ಗೋಳು... ಅರ್ಥವಿಲ್ಲದ
ದಾರಿಯಲ್ಲಿ ... ಗೊತ್ತು ಗುರಿಯಿಲ್ಲದೆ
ಸಾಗುತಿಹುದಲ್ಲ ಬಾಳು
ಅಪ್ಸರೆಯ ರೂಪವ ತುಂಬಿದಿ ದೇಹಕೆ
ಬುದ್ಧಿಮಾಂದ್ಯತೆಯ ಕೊಡುಗೆಯು
ಯಾರಿಲ್ಲದ ಹೊತ್ತಿನಲಿ ಹೊಂಚು ಹಾಕಿದ
ಹದ್ದಿಗೆ ಬೇಟೆಯಾದ ಹಕ್ಕಿಯಿದು
ಹೂವಾದ ದೇಹವಿದು
ಮಧುಮಂಚಕೆ ಶೃಂಗಾರವಾಗಲಿಲ್ಲ
ಕಾಮದ ಕಾವಿಗೆ ಸಿಕ್ಕು...
ಸುಟ್ಟ ಚಿಟ್ಟೆಯಾದೆನಲ್ಲ
ನನ್ನದಲ್ಲದ ತಪ್ಪಿಗೆ... ಮನೆತನದ
ಮರ್ಯಾದಕ್ಕೆ ಹೆತ್ತವರು ಹೊರ
ದೂಡಿದರಲ್ಲ..
ಹಗಲಿರುಳೆನ್ನದೆ... ಗಂಡು ನಾಯಿಗಳೆನ್ನ
ಕಾಮದ ಹಾಸಿಗೆಯನ್ನಾಗಿಸಿಹರಲ್ಲ
ಬದುಕೆಂದರೇನು....?
ಎಂದರಿಯುವ ಮೊದಲೇ...
ಜಗವರಿಯದ ಕರುಳಿಗೆ.. ಕಣ್ಣೀರನರಿಯದ
ಪಾಪದ ಪಿಂಡವೊಂದು ಕಂಕುಳಲಿ
ಕೂತಿದೆಯಲ್ಲ..
ಎದೆಯು ಬಿಗಿಯುವಷ್ಟು ದಿನಗಳ
ವರೆಗಷ್ಟೇ.. ಇದಕೆ ಉಸಿರು
ರವಿಕೆ ಸಡಿಲಗೊಂಡ ಮೇಲೆ... ಇದರ
ಕೊರಳಿಗೆ ಕುಣಿಕೆ ಹೆಣೆಯುವುದೇನೊ..
ಆ ವಿಧಿ... ನಾನಂತೂ ಅರಿಯೇ..
ತುಂಬಿದ ಸೌಂದರ್ಯದಲರ್ದದಷ್ಟಾದರೂ
ಬುದ್ಧಿಯನ್ನಾದರೂ ತುಂಬಿದ್ದರೆ..
ನನಗಿಂತ ದುರ್ಗತಿ ಬರುತ್ತಿರಲಿಲ್ಲ
ಬಂದರೂ... ಎದುರಿಸಿ ನಿಲ್ಲದೆ
ಸೋಲುತ್ತಿರಲಿಲ್ಲ...
ಏನು ಮಾಡಲಿ..? ಕೊನೆಯದಾಗಿ
ಬಾಳಿನ ದಾರಿ ಗೋಚರಿಸುತ್ತಿಲ್ಲ
ನನಗೆ ಹಸಿವಿನ ಬಯಕೆ ನಿಗ್ತಾಯಿಲ್ಲ
ಏಕೊ.. ಏನೋ... ಸಾವಿಗೆ ಬಾಯಾರಿಕೆ ಆಗ್ತಾಯಿಲ್ಲ
ಓ...ವಿಧಿಯೆ...
ಓ.. ವಿಧಿಯೆ.. ನಿಲ್ಲಿಸದಿರು
ಬದುಕಿನ ಜೋಕಾಲಿ..
ಕರುಳಿಲ್ಲದ ಈ ಕಾಲ್ಬಳ್ಳಿಗೆ
ಮಲಗಿಸಿ ಹಾಡಬೇಕಿದೆ ಲಾಲಿ
ತಂದು ನಿಲ್ಲಿಸಿರುವೆ ಮಧ್ಯದಲಿ
ಸವಾರನಿಲ್ಲದ ಬದುಕಿನ ಬಂಡಿ
ಭಯವಾಗುತಿಹುದು ಭಾರ ಹೊರಲಾರದ ನಡುವು ಕಳಚುವುದೆಲ್ಲೊ..? ಭಾಂದವ್ಯದ ಕೊಂಡಿ
ಬಲವಿಲ್ಲದ ರೆಟ್ಟೆಯ ಹಚ್ಚಿಬಿಟ್ಟು
ಹಸಿವಿನ ಹೊಟ್ಟೆಯ ಕಟ್ಟಿಕೊಟ್ಟೆ
ಸಾವನು ಕಣ್ಮುಚ್ಚಿ ಕುಳ್ಳರಿಸಿಬಿಟ್ಟು
ಕಣ್ಣೀರ ಸವಿಯನು ಸವಿಯಬಿಟ್ಟೆ
ಬಾಳ ಆಶಾಕಿರಣಗಳನ್ನೆಲ್ಲವ ಕಷ್ಟದ
ಕಾರ್ಮೋಡಗಳಲ್ಲಿ ಮರೆಯಾಗಿಸಿ
ದಿನ... ದಿನವು..ಕ್ಷಣ.. ಕ್ಷಣವು ಹಂಬಲಿಸುವಂತೆ
ನೀಡಿದೆಯಲ್ಲ ಹಸಿವೆಯನ್ನು ಹೊರೆಯಾಗಿಸಿ
ಅಲೆಯಲದೇಷ್ಟು ದೂರ... ಸಾಗುವ
ಹಾದಿ ರಹದಾರಿಯಾಗಿರುವಾಗ
ಹೊತ್ತಾದರೂ ಕರೆದೊಯ್ಯಲ್ಹೇಗೆ..ಇವನನು
ಪಿಷ್ಠವಿರದ ಕಾಲುಗಳು ಸೋತಿರುವಾಗ
ಮಾರಿಕೊಳ್ಳಲೆ ನನ್ನೆ... ನಾನು
ಎರಡ್ಹೊತ್ತಿನ ಅಗುಳಿಗಾಗಿ
ಕೊಳ್ಳುವುವರಾದರೂ ಯಾರಿಲ್ಲಿ...?
ಹುಟ್ಟಿಸಿ ಕೈ ಬಿಡುವವರೆ ಎಲ್ಲ ಕಾಮದ ತೀಟೆಗಾಗಿ
ಓ.. ವಿಧಿಯೆ... ಇಲ್ಲೊ.. ಅಲ್ಲೊ...
ನಿಂತಿದ್ದರೆ ಕೂಗಿ ಕರೆದುಬಿಡು
ನಿನ್ನ ಮಡಿಲ ಮಕ್ಕಳಂತೆ ತೆಕ್ಕೆಯಲಿ
ಬರಸೆಳೆದು... ಕಣ್ತೆರಯದ ಜೋಗುಳವ ಹಾಡಿಬಿಡು
ಓ... ಸಾವೆ ನೀ ದಯಾಮಯ
ಓ... ಸಾವೆ ನಿನಗೆ ಶರಣು....
ಸಾವಲ್ಲೂ... ನಮ್ಮಿಬ್ಬರ ಒಂದುಗೂಡಿಸಿದ
ನಿನಗೆ.. ಇಗೋ..ಇನ್ನೊಮ್ಮೆ ನಿನಗೆ
ಶರಣು... ಶರಣು...
ನಾ ಸತ್ತು.. ಅವಳು ಬದುಕುಳಿದಿದ್ದರೆ..
ಏನು ಮಾಡುತ್ತಿದ್ದಳೊ.. ನನಗಂತು ಗೊತ್ತಿಲ್ಲ
ಅವಳು ಸತ್ತು ನಾ ಬದುಕಿದ್ದರೆ... ಒಂದರಘಳಿಗೆಯು
ನಾನು ಬದುಕುತ್ತಿರಲಿಲ್ಲ...
ಓ.. ಸಾವೆ ನೀನೆಷ್ಟು ಕರುಣಾಮಯಿ..
ಸಂಜೆ ತಂದ ಮಲ್ಲಿಗೆಯ ಮುಡಿದು..
ಬಂದಳೆನ್ನುದುರಿಗೆ ಸಂಜೆಯ ಚಹಾವ ಹಿಡಿದು..
ಅವಳ ಮಧು ತುಂಬಿದ ಬಟ್ಟಲು ಚಹಾವ ಕುಡಿದು
ಬರಸೆಳೆದು ಕುಳ್ಳರಿಸಿಕೊಂಡೆ ನನ್ನೆರಡು ತೊಡೆಗಳ
ಮೇಲೆ.. ಮಲ್ಲಿಗೆಯ ಮುಡಿದು ರಂಗೇರಿದ ಗಲ್ಲಕೆ
ಸವಿ ಮುತ್ತನೊಂದ ನೀಡುವ ಮೊದಲೆ..
ಕ್ಷಣಾರ್ಧದಿ ಧರೆಯ ಗಡಗಡ ನಡುಗಿಸಿ ನಿನ್ನ ತೆಕ್ಕೆಗೆ
ಎಳೆದುಕೊಂಡುಬಿಟ್ಟೆ.. ನಮ್ಮಿಬ್ಬರ ಪ್ರೀತಿಗೆ ಇನ್ನಾರ
ಭಯವು.. ತೊಂದರೆಯ ಕೊಡದ ಹಾಗೆ..ಶಾಶ್ವತವಾಗಿ
ನಮ್ಮನು ನಿನ್ನ ಮರಣದ ತೊಟ್ಟಿಲಲಿ ಹಾಕಿ ತೂಗಿಬಿಟ್ಟೆ...
ಓ... ಸಾವೆ ನಿನ್ನನೆಷ್ಟು ಶಪಿಸುವರಲ್ಲ ನೀನೊಬ್ಬ ಕಟುಕ
ಅದು ಹೇಗೆ ಅಂದಾರೆಲ್ಲರು..? ನನ್ನವಳ ಎದೆಯ
ಮೇಲೊರಗಿಸಿ.. ಎದೆಯ ಹಕ್ಕಿಯ ಬಿಡುಗೊಡೆಗೊಳಿಸಿದ
ನೀನೊಬ್ಬ ಕರುಣಾಜನಕ
ಎಷ್ಟು ಜನ್ಮಗಳ ಪುಣ್ಯವಿರಬಹುದು ಅವಳದು.. ನನ್ನದು
ಅವಳ ಮಡಿಲಲಿ ಮಗುವಾಗಿಸಿ ಮಣ್ಣು ತೂರಿಬಿಟ್ಟೆಯಲ್ಲ
ನಿನ್ನನು ಕಟುಕನೆನ್ನುವವರ ಬಾಯಿಗೆ ನಾನೇನು
ಹೇಳಲಿ...
ನಿಜ.. ನಿನೇಷ್ಟಿದ್ದರೂ ಕಟುಕನೆ.. ಈ ವಿಷಯದಲ್ಲಿ
ನೋಡು ಒಂದು ತಪ್ಪನು ಮಾಡಿಬಿಟ್ಟೆ.. ಆಡಲು ಹೋದ
ಮಕ್ಕಳೆರಡು ನಮ್ಮೊಟ್ಟಿಗೆ ನೀ ಕರೆದು ಕಳಿಸಿದ್ದರೆ ಎಷ್ಟು
ಸುಖವಾಗಿರುತ್ತಿತ್ತು.. ಸಾವಲ್ಲೂ... ಅಳಿದುಳಿದ
ಆ ಮಕ್ಕಳ ಅಳುವಿಗೆ ಕಿವಿಯಾಗುವರಾರು... ?
ಅವುಗಳ ಹಸಿವಿಗೆ ತುತ್ತಾಗುವರಾರು.. ?
ಕೆನ್ನೆಗೆ ಮೆತ್ತಿದ ಕಂಬನಿಯ ಮುತ್ತನು... ಒರೆಸುವರಾರು...? ರಾತ್ರಿ ಬೀದಿ ನಾಯಿಗಳಿಗೆ ಆಹಾರವಾಗಿಸದೆ ಒಂದು
ಸೂರಿನಡಿ ತಂದು.. ಲಾಲಿಯ ಹಾಡಿ.. ಕಿಟಕಿಯ ಸರಳುಗಳ
ನಡುವಿನಿಂದ ಬಾಲ ಚಂದಿರನ ಅಂದವ ತೋರಿಸುತ್ತ...
ಕೈ ತುತ್ತನುಣಿಸುವರಾರು..?
ಎದೆಗೆ ನಾಲ್ಕಕ್ಷರದ ಬೀಜವ ಬಿತ್ತುವರಾರು..?
ಆಗು ನೀ ಇನ್ನೊಂಚೂರು ಕಟುಕ...
ನೀನಾಗಿಬಿಡು ಅವರ ಬಾಳಿಗೆ ಕಂಟಕ...
ದಯತೋರಿ ನೀಗಿಬಿಡು ಮಕ್ಕಳೆರಡರ ಸಂಕಟ..
ಕೊನೆಯ ಸಾಲುಗಳ ನೀ..ಬರೆದುಬಿಡು ಅವರ ಜಾತಕ....
ನೀಗಲಿ ಅವರ ಬಾಲ್ಯದ ನರಕ..
ಜಗವಿದು... ಅತ್ತು ಕಳೆಯುವರು ಎರಡು ದಿನಗಳ ಸೂತಕ..
ಓ.. ಸಾವೆ ನೀ ದಯಾಮಯ..
ನಮ್ಮಿಬ್ಬರನು ಸಾವಲ್ಲೂ ಒಂದು ಗೂಡಿಸಿದ್ದಕ್ಕೆ..
ಓ.. ಸಾವೆ ನೀ ಮಕ್ಕಳೆರಡ ತಬ್ಬಲಿ ಮಾಡಿದಕ್ಕೆ
ನೀನೊಬ್ಬ ಕಟುಕ.. ಕಟುಕ.. ಕಟುಕ
ಮಂಗಳಮುಖಿ
ನಾನಾಗೀಯೆ.. ಆದೇನೆ ಮಂಗಳಮುಖಿ
ಬಯಸಿ ಬಯಸಿ ಪಡೆದನೆ ಬದುಕಿನ ಕಹಿ
ಎಷ್ಟು ದುಃಖವಾಗಿರಬಹುದು... ಎಷ್ಟು ಸಂಕಟಗಳ
ಉಂಡಿರಬಹುದು.. ಅದೇಷ್ಟು ನೋವುಗಳ ಸಹಿಸಿಕೊಂಡಿರಬಹುದು.....ಎಷ್ಟೇಷ್ಟೊ ಹೆತ್ತೊಡಲಿನ ಸಾವಿರ
ಕನಸುಗಳು ಕಮರಿರಬಹುದು....ಅವ್ವನ ನೂರಾರು
ಕನಸುಗಳು ಕನವರಿಸಿ...ಕಮರಿ....ಕರಗಿರಬಹುದು
ಹೇಗೆ ಸಹಿಸಬಲ್ಲಳೊ ಹಡೆದವ್ವ.. ಹುಟ್ಟಿದಾಗಿನಿಂದ
ಗಂಡು ಗಂಡೆಂದು.. ಮೀಸೆ ಬಾರದ ಮುಖಕ್ಕೆ ಕಾಡಿಗೆ
ಯಲೆ.. ತಿಡಿ.. ತಿಡಿ.. ನನ್ನಂಗಳದ ಸರದಾರ ಎಂದು
ಎದೆಯುಬ್ಬಿಸಿ ನಡೆಯುತ್ತಿದ್ದ ತಾಯಿಗೆ ಎಂತಹ ಶಿಕ್ಷೆಯ
ಕೊಟ್ಟುಬಿಟ್ಟೆ ಶಿವನೆ...
ಹರೆಯಕ್ಕೆ ಬಂದವನು ಅವನಲ್ಲ... ಅವಳು.. ಅಂತಾದರೆ?
ಅವಳಾದರೂ ಪರವಾಗಿಲ್ಲ.. ಅವನು ಇಲ್ಲ....ಇವಳು ಇಲ್ಲ...
ಎಂದಾದರೆ ಹೆತ್ತೊಡಲು ಯಾರ ಮುಂದೆ ತನ್ನ ನೋವ
ಹೇಳಿಕೊಂಡಾಳು.. ನನ್ನೀ.. ರೂಪದ ಬೆಟ್ಟದ ಕಷ್ಟವ
ಇನ್ನಾವ ದೇವ ಮಂದಿರಲಿ ತೋಡಿ... ತೋಡಿ...ಅತ್ತಾಳು
ಆ ಕಲ್ಲು ಗುಡಿಯೊಳಗಿನ ಕಲ್ಲು ದೇವರು.. ನನ್ನನು ಜೀವ
ತುಂಬಿದ ಕಲ್ಲನ್ನಾಗಿ ಮಾಡಿಬಿಟ್ಟನಲ್ಲ...
ಗಂಡಸಿನ ರೂಪವ ಹೊಂದಿದ್ದರು ನನ್ನಲೇಕೆ ಅವಳ
ಭಾವವ ತುಂಬಿದೆ... ಅವಳ ಬಣ್ಣ ಶೃಂಗಾರದ ಸಾಧನಗಳು ಉಡುಗೆ-ತೊಡುಗೆಯ ತೊಟ್ಟ ಮಾತ್ರಕೆ ನಾನಾಗಿಬಿಡುವೇನೆ ಕನ್ಯೆ ? ಹೆಣ್ಣನುಭವಿಸುವ ಎಲ್ಲ ಸೌಭಾಗ್ಯಗಳ ಅನುಭವಿಸಲಾದಿತೆ? ನಲ್ಲನ ತೋಳಲಿ ಬಂಧಿಯಾಗಬಲ್ಲೇನೆ ? ಗಂಡನ ಮನೆಯ ಹೊಸ್ತಿಲ ತುಳಿಯಬಲ್ಲೇನೆ.. ?
ಅವನ ಕಾಮದ ತಾಪಕ್ಕೆರಡು ಮಕ್ಕಳ ಹೊರಲಾದಿತೆ... ಹೇರಲಾದಿತೆ ?
ಗಂಡನ ಮನೆಯು ಹೋಗಲಿ.. ಈ ಸಮಾಜ ನನ್ನನೊಪ್ಪಿಕೊಳ್ಳುವುದೆ..? ನಾಲ್ಕು ಜನರ ಹಾಗೆ ಬದುಕಲು ಬಿಡುವುದೆ? ಒಂದಿಷ್ಟು ಸವಿ ಮಾತುಗಳನಾಡಿ ಹತ್ತಿರ ಬರಮಾಡಿಕೊಳ್ಳುವರೆ ? ಮನೆಗೆ ಕರೆಯುವರೆ.. ಕಾರಣಕ್ಕೆ ಕರೆಯುವರೆ.. ಊರ ಜಾತ್ರೆಗೆ ಕರೆಯುವರೆ... ಮದುವೆ
ಮುಂಜಿಗೆ ಕರೆಯುವರೆ.. ಹುಟ್ಟಿದ ಸತ್ತ ಕಾರ್ಯಗಳಿಗೆ ಕರೆಯುವರೆ.. ಎಲ್ಲರಂತೆ ನೀನೊಬ್ಬ/ಳು ಅಂತ ಭಾವಿಸುವರೆ..
ಮನದ ಮಾತುಗಳ ಕೇಳುವರೆ.. ನನ್ನಲೊಂದು ಮನಸಿದೆ ಎಂಬುದ ಅರಿಯುವರೆ.. ಚುಚ್ಚು ಮಾತುಗಳಿಗೆ ಮನವು
ನೊಂದಿಕೊಳ್ಳುವುದೆಂಬುದನು ಅರಿಯುವರೆ...? ???????
ನೋಡಿದೆಯಾ ದೇವರೆ.. ಬದುಕಲ್ಲಿ ಬರೀ ಉತ್ತರ ಸಿಗದ
ಪ್ರಶ್ನೆಗಳ ಮೂಟೆಯನ್ನೆ ಕೊಟ್ಟು ಕಳಿಸಿಬಿಟ್ಟಿರುವೆಯಲ್ಲಾ...
ಈ ಬದುಕಿನ ಜಂಜಾಟವ ಹೇಗೆ ದಾಟಿ ಬರಲಿ..
ಹಡೆದ ಒಡಲಿಗೆ ಯಾವ ಧೈರ್ಯವ ತುಂಬಲಿ..
ಕಣ್ಣೀದ್ದು ಕುರುಡವಾಗಿರುವ ಈ ಸಮಾಜದಲಿ..
ಹುಟ್ಟಿಸಿದ ದೇವರೆ ಬದುಕಿಗೆ ಮೋಸವ ಮಾಡಿರುವಾಗ
ನಾ...ಯಾರನ್ನು ನಂಬಲಿ..
ಏನಂಥ... ಬಾಳಲಿ...
ಅನಾಥರು...
ಅನಾಥರು ನಾವು ಅನಾಥರು
ಹರೆಯದ ವಯಸಲಿ ಎಡವಿದ
ತಪ್ಪಿಗೆ.. ಅವರು ಮಾಡಿದ ರಾತ್ರಿಗಳ
ಪಾಪಕ್ಕೆ... ಹುಟ್ಟಿದ ಪಾಪದ ಪಾಪುಗಳು
ಜೀವವನಿತ್ತ ಪರಮಾತ್ಮನು ಕರುಣಿಸೆ
ಯಾರದೊ ಜೋಳಿಗೆಯ ಪಿಂಡಗಳಾಗುವೆವು
ಇಲ್ಲವೊ ಬೀದಿ ನಾಯಿಗಳ ಬಾಯಿಗೆ ಸಿಕ್ಕ
ಮಾಂಸದ ಉಂಡೆಗಳಾಗುವೆವು...
ನಮ್ಮ ಅಳುವೆ ನಮಗೆ ಜೋಗುಳ
ತೂಗುವವರಿಲ್ಲ... ಲಾಲಿಸುವವರಿಲ್ಲ..
ಹಸಿದಿಹೆ... ಎಂದು ಎತ್ತಿ ಎದೆಹಾಲ
ಕೊಡುವವರಿಲ್ಲ... ಕೆನ್ನೆಗೆ ಮೆತ್ತಿದ
ಕಣ್ಣೀರಿನ ಉಪ್ಪನು ಒರೆಸುವರಿಲ್ಲ..
ಚಳಿಯೆಂದು ಹೊದಿಸುವರಿಲ್ಲ..
ಮಳೆಯೆಂದು ಕೊಡೆ ಹಿಡಿಯದವರಿಲ್ಲ.
ಬಿಸಿಲೆಂದು ಕುಡಿಯಲು ನೀರು ಕೊಡುವವರಿಲ್ಲ
ಹಸಿವೆಂದು ಬೇಡಿದರು... ಕರೆದು ಕೂಳು
ಹಾಕುವರಿಲ್ಲ..
ಅನಾಥರು... ಸ್ನಾನದ ಹೆಸರನು
ಕೇಳದ ಗೊಬ್ಬು ನಾರುವ ನಾಥರು...
ಊರಿಲ್ಲ... ಸೂರಿಲ್ಲ... ನೆಲೆಯಿಲ್ಲ
ಬೇಡಿದ್ದೆ ಊರು.. ಮಲಗಿದ ನೆರಳೆ
ಸೂರು... ದಣಿವಾರಿಸಲು ಕುಳಿತ
ಸ್ಥಳವೆ.. ನೆಲೆಯು..
ಓಡಾಡುವ ರಸ್ತೆಗಳಲಿ ಗಾಡಿಗಳು
ಗುದ್ದಿ ಹೋದರು... ರಾತ್ರಿ ಮಲಗಿದಾಗ
ನಿದ್ರೆ ಮಂಪರು ಬರಿಸಿ...ಅಂಗಾಂಗಗಳ
ಕಿತ್ತುಕೊಂಡು ಹೋದರು.. ಕೆಲಸಕ್ಕಿರುವ
ಮನೆಯಲ್ಲಿ ಹೊಡೆದು ಬಡೆದು..ಲೈಂಗಿಕ
ಕಿರುಕುಳ ಕೊಟ್ಟರು.. ನಮ್ಮನ್ನಾರೂ..
ಕೇಳದ.. ಲೆಕ್ಕಿಸದ ಅನಾಥರು...
ಸುಸಂಸ್ಕೃತರ ನಾಡಿನಲಿ ಅಸಂಸ್ಕೃತರು
ಮಾಡಿದ ಗಲೀಜು ನಾವು...ವಯಸ್ಸಿನ
ಅಮಲಿನಲಿ.. ಹಣದ ಮೋಹಕ್ಕೊಳಗಾಗಿ
ಶೋಕಿಗಾಗಿ ಸಂಸ್ಕೃತವಂತರು ಮಾಡಿದ
ಲಜ್ಜೆಗೇಡಿತನಕ್ಕಾಗಿ... ನಿಮ್ಮ ಸುಸ್ವಸ್ಥವಾದ
ಸಮಾಜದಲ್ಲಿ ಗೊಬ್ಬು ನಾರುವ
ಅ....ನಾಥರು..
ಬದುಕಿದ್ದೇನೆ...ಬದುಕಬೇಕಲ್ಲ
ಹತ್ತು ದೇವರಿಗೆ ಹರಕೆ ಹೊತ್ತು
ಹೆತ್ತೊಡಲಿಗೆ ಹೊತ್ತು ಕೂಳಿಲ್ಲದೆ
ಬೀದಿಗೆ ತಳ್ಳಿದ ಕರುಳ ಬಳ್ಳಿಗಳು
ಕರುಳ ಕತ್ತರಿಸಿ ಜನ್ಮವನಿತ್ತವಳಿಗೆ
ಹೊತ್ತಿನೂಟಕು ಹೊರೆಯಾಗಿ
ಬಿಟ್ಟೇನೆ ಈ ಮಕ್ಕಳಿಗೆ..
ಅಂದು ಎನಗೆ ಭಾರವಾಗದ
ಈ ಕಾಯಿಗಳು.... ಇಂದು
ಈ ಕಾಯಿಗಳಿಗೆ ಬಳ್ಳಿಯೆ
ಭಾರವಾಗಿಬಿಟ್ಟಿದೆ..
ಹರೆಯ ಹರೆದು ಹೋಗಿ
ಸೌಭಾಗ್ಯ ಅಳಿಸಿಹೋಗಿ
ನಡುವು ನಿಲ್ಲದಾಗಿ.. ಕಣ್ಣು ಕಾಣದಾಗಿ
ನಿಮ್ಮ ತುಂಬು ಆಶ್ರಯದ ಬಯಕೆಯ
ಹೊಸ್ತಿಲಲಿ ನಾ ನಿಂತಿರುವಾಗ
ಕೈಗೊಂದು ನಿರ್ಜೀವ ಕಟ್ಟಿಗೆಯೆ..
ಆಸರೆಯಾಯಿತೆ ವಿನಃ...
ಅದನ್ನು ಕಡೆದು ಹಾಕಿದ ಬಲಶಾಲಿ
ಭುಜಗಳಾವವು ಕೈ ಹಿಡಿಯಲಿಲ್ಲ
ಹರಿಯುವ ನೀರು ಹೊಲಸಾದರೇನು..
ತಿಳಿಯಾದರೇನು.. ದಾಹನಿಂಗಿಸುವುದು
ಕಣ್ಣಲಿ ಬರುವ ಉಪ್ಪು ನೀರು ಕೇವಲ
ದುಃಖವ ನೀಗಿಸುವುದು...ಹಸಿವನ್ನು
ಇಂಗಿಸದು
ನರಜನ್ಮವು ಈ ಒಂದು ಜನ್ಮಕೆ
ಸಾಕೆನಿಸಿಬಿಟ್ಟಿದೆಯಲ್ಲ....
ಹಸಿವೆಯಂತು ಬೆನ್ನು ಬಿಡುತಿಲ್ಲ
ಸಾವಂತೂ ಸನಿಹ ಸುಳಿಯುತಿಲ್ಲ
ಬದುಕಿದ್ದೇನೆ ಬದುಕಬೇಕಲ್ಲ
ಹೆಣ್ಣು- ಹುಣ್ಣು
ಹೆಣ್ಣನು ಹುಣ್ಣೆಂದು ಕಾಣುವ ಹುಂಬರು
ಹುಟ್ಟಿಸಿದ ಒಡಲೊಂದು...ಹೆಣ್ಣೆಂದು ಮರೆತಿರುವರು
ನೆತ್ತರವ ಬಸಿದು... ನಿಮ್ಮನು ಇಳೆಗೆ ತಂದು..
ತನ್ನೆಲ್ಲ ಆಸೆ ಆಕಾಂಕ್ಷೆಗಳ ನಿಮಗಾಗಿ ಕೊಂದು..
ಸಾಕಿ ಸಲುಹುವವಳು ಬದುಕೆಲ್ಲಾ... ಬೆಂದು..
ಈ ತಾಯಿ ತ್ಯಾಗಕೆ ಕರೆಯುವಿರೆಲ್ಲ.. ಅವಳು
ಹುಣ್ಣೆಂದು...
ನಿಮ್ಮ ಹೊತ್ತುರಿಯುವ ಹರೆಯದ...ಕಾಮದ
ಬೆಂಕಿಗೆ.... ಅವಳಾಗುವಳಲ್ಲ ಮಡದಿ ಎಂಬ
ದಂತದ ಕೊರಡು...
ಉರಿದುರಿದು ನಿಮ್ಮ ವಂಶ ಕಳಶಕೆ ಜ್ಯೋತಿಯ ಹಚ್ಚುವಳಲ್ಲ... ಅಂಗಳದ ಹುಲುವಾದ ನಿಮ್ಮ
ಚಿಗುರುಗಳನ್ನು... ಬಾಳಿನ ಬಾನೆತ್ತರ ಮುಟ್ಟುವ
ಮರಗಳನ್ನಾಗಿಸುವಳಲ್ಲ... ಇಂತವಳ ಕರುಣೆ ಕಾಣದೆ
ಅಂತಃಕರುಣೆಯ ಮರೆತು ಹೇಳುವಿರಲ್ಲಾ.. ಹೆಣ್ಣು
ಹುಣ್ಣೆಂದು... ನಿಮ್ಮ ಒಳ ಮನಸ್ಸು ಆಯಿತೆ ಕುರುಡು
ಹುಟ್ಟಿದ ಹೆಣ್ಣಿನ ಕಣ್ಣಿಗೆ ಸುಣ್ಣವ ಹಚ್ಚಿ..
ಅವಳ ಆಸೆಗಳ ಸಸಿಗಳಿಗೆ ನೀರುಣಿಸದೆ
ನಿಮ್ಮ ಒಣದರ್ಪಗಳ ಹೊಡೆತಕ್ಕೆ ನಲುಗಿಸಿ
ಹೆಣ್ಣಿನ ಮನಸನರಿಯದ... ಅವಳ ಭಾವಗಳಿಗೆ
ಸ್ಪಂದಿಸದ ನಿನ್ನಂಥ ಇನ್ನೊಬ್ಬ ಕಟುಕನಿಗೆ...
ಆಡುವ ವಯಸ್ಸಿನಲ್ಲಿ.... ಸಾಯುವವರೆಗೂ
ಉರುಳಾಗಿ ಕಾಡುವ ತಾಳಿಯ ಬಂಧನಕ್ಕೆ
ಕಟ್ಟಿ.. ಸಾಗಿಹಾಕಿ ಬಿಡುವಿರಲ್ಲ.. ಕಟುಕನ ಕೈಗೆ
ಕರುವನು ಕೊಟ್ಟಂತೆ..
ನಿಮ್ಮ ಮನವದು ಆಗಿದ್ದರೆ ಹಣ್ಣು...
ಒಳಮನಸ್ಸು ತೆರೆದಿದ್ದರೆ ಕಣ್ಣು..
ಹುಣ್ಣೆಂದು ಕರೆಯುವ ನಾಗರೀಕ ಜಗದ
ಅನಾಗರೀಕರೆ......ಕಣ್ತೆರೆದು ನೋಡಿರಿ
ಅವಳು ಒಂದು ಹೆಣ್ಣು
ನೆಮ್ಮದಿಯಾದರೂ.... ಸಿಗಲಿ
ನಿನ್ನ ಕೆಂದುಟಿಯಂಚಿಂದ ಮಧು...
ಬಟ್ಟಲನೊಮ್ಮೆ ಚುಂಬಿಸಿ ಕೊಟ್ಟುಬಿಡು
ಸಾಕಿ...
ಒಲವಲ್ಲಿ ಬಾಯಾರಿ ಮಣ್ಣು ಸೇರಿದ
ಎಷ್ಟೋ....ಭಗ್ನ ಹೃದಯಗಳಿವೆ.... ಎರಡು
ಬಟ್ಟಲು ಮದಿರೆಯನ್ನಾದರು...ಸುರಿದು
ಬರುವೆ, ತಣ್ಣಗಿರಲೆಂದು ಗೋರಿಯಾ ಮೇಲೆ...
ನಿನ್ನ ಮಧುವೊಂದನ್ನು ಬಿಟ್ಟು....
ಮುಕ್ತಿಕೊಡುವ ಬೇರಾವ ಅಮೃತವು ಉಂಟು
ಸಾಕಿ...
ವಿಷವನ್ನೆ...ಕುಡಿದವರು ಬದುಕಿದ್ದರಲ್ಲ...!!!!
ನಿನ್ನ ಮಧುವನ್ನೆ ಕುಡಿದು...,ಅಮೃತವೇನಲ್ಲ
ವಾದರು...ಉಳಿಸಿಕೊಂಡಿತ್ತಲ್ಲ, ಉಳಿದರಾದರೂ...
ಅವಳ ನೆನಪುಗಳ ಉರುಳಿಗೆ ಸಿಕ್ಕವರೊಬ್ಬರಾದರು....
ಉಳಿಯಲಿಲ್ಲವಲ್ಲ...
ಘಲ್...ಘಲ್..ಘಲ್...ಎನ್ನುವ ನಿನ್ನ
ಗೆಜ್ಜೆಯ ಕಟ್ಟಿಕೊಂಡು...ಈ ನೀರವ
ನಿಷ್ಕರುಣಿ ಮಸಣದಲ್ಲೊಮ್ಮೆ ನಡೆದು ಹೋಗು
ಸಾಕಿ...
ಗೆಜ್ಜೆ ನಾದಗಳ ಸದ್ದಿಗೆ...ಅತೃಪ್ತ ಆತ್ಮಗಳೆಲ್ಲವು
ಅರೆ ಘಳಿಗೆ, ಶಾಂತಿಯಿಂದಾದರು ನಿದ್ರಿಸಲಿ...
ಹ್ಹ....ಹ್ಹ...ಹ್ಹ...ಹುಚ್ಚನೆನ್ನುವರು, ನನ್ನನೆಲ್ಲರು
ಸಾಕಿ... ಗೋರಿಗಳ ಮುಂದೆ ಕುಳಿತು ನಾ....
ಮಾತನಾಡುವುದ ಕಂಡು..., ಹಣ್ಣಿನ ರುಚಿ...ಕಚ್ಚಿ...
ಸವಿದ ಗಿಳಿಗಳಿಗೆ ಮಾತ್ರ ಗೊತ್ತು..!!!
ಹೆಣ್ಣಿನ ಪ್ರೀತಿಯ ಸವಿಯನ್ನು ಸವಿಯಲಾಗದೆ
ಅನುಭವಿಸುವ ಯಾತನೆ ಪ್ರೇಮಾತ್ಮಗಳಿಗಷ್ಟೇ...ಗೊತ್ತು..
ಏನೆಂತ ವಿವರಿಸಲಿ ಸಾಕಿ... ನಿನಗೆ, ಹುಗಿದ ಮಣ್ಣಿನೊಳಗು
ಸಿಕ್ಕಿಲ್ಲವಂತೆ ಶಾಂತಿ... ಸೀಗುವುದಾದರು ಹೇಗೆ ?
ಲೆಕ್ಕವಿರದಷ್ಟು ದೇಹಗಳ ನುಂಗಿ..ನುಂಗಿ...ಮಲಗಿಸಿಕೊಂಡ ಭೂ ಒಡಲ ಕಣಕಣದಲ್ಲೂ...
ಬರಿ ವಿರಹದ ತಾಪವೆ.... ತುಂಬಿಕೊಂಡುಬಿಟ್ಟಿದೆಯಂತೆ,
ಬದುಕಿದ್ದಾಗಲೆ ಬೇಯಿಸಿದಂತಹ ವಿರಹದ ತಾಪ,
ಇನ್ನೂ ಮಣ್ಣು ಸೇರಿದ ಮೇಲೆ...? ನೀನೆ ಊಹಿಸಿ ನೋಡು...
ಗೋರಿಯೊಳಗೆ ಹುಗಿದು ಹೋದವರ ಪಾಡು
ನಿನಗೇನು ಗೊತ್ತು ಸಾಕಿ....
ನೀನೇನೊ...ಬದುಕಿದ್ದಾಗ, ಉರಿಯುವ ಎದೆಗಳನ್ನು
ಉಳಿಸಿಕೊಳ್ಳಲೆತ್ನಿಸಿದೆ ಮಧುವನ್ನು ಹಾಕಿ...
ಗೋರಿಯ ಮೇಲೆ ಅವಳಿಟ್ಟು ಹೋದ ಗುಲಾಬಿಯ
ಮುಳ್ಳುಗಳು ಇವರನ್ನು.... ನರಕಕ್ಕೂ ಹೋಗದಂತೆ
ಬೇಲಿಯ ಹಾಕಿಬಿಟ್ಟಿವೆಯಂತೆ ಮಿಸುಕದಂತೆ, ಕಟ್ಟಿಹಾಕಿ...
ಹೇಗೆ ಹೇಳಲಿ....? ಸಾಕಿ....
ಗೋರಿಯೊಳಗೆ ಮಲಗಿದವರೆಲ್ಲ...ಸತ್ತದ್ದು
ಹೊರನೋಟಕ್ಕಷ್ಟೆ.....ಒಳಗಣ್ಣನು ತೆರೆದಾದರು ನೋಡೊಮ್ಮೆ...ಅವಳ ಹೆಸರಿನ ಜಪದಲ್ಲೆ...
ಸುತ್ತುತಿಹವು...ದುರಾತ್ಮಗಳು...? ಮಸಣವನು...
ಸಾಕಿ......
ದಿನವು ನರ್ತಿಸಿ...ನರ್ತಿಸಿ....ಮದರಂಗಿ ಮೆತ್ತಿದ
ನಿನ್ನ ಕಾಲಡಿಯಲಿ ಸಿಕ್ಕು, ಹೊಸಕಿ ಹೋದ
ಮಲ್ಲಿಗೆಗಳನ್ನಾದರು......ತಂದು, ಚೆಲ್ಲಿಬಿಡು ಈ ಗೋರಿಗಳ ಮೇಲೆ, ನೆಮ್ಮದಿ ಎನ್ನುವುದಾದರೂ... ನಿನ್ನ ಪಾದದ
ಧೂಳಿನಿಂದಾದರು ಸಿಗಲಿ...
No comments:
Post a Comment