ಭಾಗ ೧
ಅಂದು ಬೆಳಿಗ್ಗೆ ಬೇಗನೆ ಎದ್ದು ನಾನು, ನನ್ನಾಕೆ ಸ್ನಾನ ಮತ್ತು ಉಪಹಾರವನ್ನು ಮುಗಿಸಿಕೊಂಡು, ವಾರದ ಹಿಂದಷ್ಟೆ ಮದುವೆಯಾಗಿದ್ದತಂಹ ನನ್ನ ಗೆಳೆಯನ ಬಾಸಿಂಗ ಬಿಡುವಂತಹ ಕಾರ್ಯಕ್ರಮಕ್ಕೆಂದು ಅವಸರವಸರವಾಗಿ ಹೊರಟು ನಿಂತೆವು. ಬೇಗನೆ ಹೊರಡಲು ಒಂದು ಕಾರಣವೇನಾಯಿತೆಂದರೆ, ಅವರ ಹಳ್ಳಿಯಲ್ಲಿ ಹಾಲು ಸಿಗುತ್ತಿರಲಿಲ್ಲವಂತೆ. ಆ ವಿಷಯವನ್ನು ಕೇಳಿ ನಾನು ಆಘಾತಕ್ಕೊಳಗಾದದ್ದುಂಟು, ಹಳ್ಳಿಯಲ್ಲಿಯೆ ಹಾಲು ಸಿಗುವುದಿಲ್ಲ ಅಂದರೆ ಏನು ಅರ್ಥ ಅಂತ. ಅವರ ಹಳ್ಳಿಯಲ್ಲಿ ಎಲ್ಲರು ತಮ್ಮ ಮನೆಗೆ ಎಷ್ಟು ಬೇಕೊ ಅಷ್ಟು ಹಾಲನ್ನು ಉಳಿಸಿಕೊಂಡು ಮಿಕ್ಕ ಹಾಲನ್ನೆಲ್ಲ ಡೈರಿಗೆ ಹಾಕಿಬಿಡುತ್ತಿದ್ದರಂತೆ, ಕಾರಣವೇನೆಂದರೆ, ಮೊದಲು, ಎಲ್ಲರ ಮನೆಯಲ್ಲಿ ದನಕರುಗಳಿರುತ್ತವೆ, ಎರಡು, ಮನೆ ಮನೆಗೆ ಹಾಕಿ ಬರುವ ಹಾಲಿನ ಹಣ ಇವರ ಖರ್ಚಗೆ ಸಾಕಾಗುವುದಿಲ್ಲವಂತೆ, ಮೂರನೇದ್ದು ತಿಂಗಳಿಗೊ, ಎರಡು ತಿಂಗಳಿಗೊ ಒಟ್ಟೊಟ್ಟಿಗೆ ಬರುವ ಡೈರಿಯ ಹಣದಿಂದಾಗಿ ಮಾಡಿದ ಸಾಲಾನೊ, ಮಗಳ ಮದುವೆ ಖರ್ಚಿಗೆಂದೊ, ಬಂಗಾರ ಮಾಡಿಸಲಿಕ್ಕೊ ಹೀಗೆ ಇನ್ನಿತರ ಖರ್ಚು ವೆಚ್ಷಗಳಿಗೆ ಬಳಸಿಕೊಳ್ಳಬಹುದೆಂಬುದು. ಇನ್ನೂ ಒಂದು ಮುಖ್ಯ ವಿಚಾರ ಏನೆಂದರೆ, ಕುಡುಕ ಗಂಡಸರು ಹಾಲು ಹಾಕಿದ ಮನೆ ಮನೆಗೆ ಹೋಗಿ ಮುಂಗಡವಾಗಿ ಹಣವನ್ನು ಪಡೆದುಕೊಂಡು ಕುಡಿದು ಬರುವುದನ್ನು ತಪ್ಪಿಸುವುದಕ್ಕಾಗಿ, ಹಾಲಿನ ಡೈರಿಗೆ ಹಾಕಿದ ಹಣವು ನೇರವಾಗಿ ಇವರ ಬ್ಯಾಂಕ ಖಾತೆಗಳಿಗೆ ಜಮಾವಣೆ ಆಗುವುದಲ್ಲದೆ, ಹಾಗೂ ಹೀಗೂ ಯಾರಿಂದಲೊ ಹಾಲನ್ನು ಹಾಕಿಸಿಕೊಂಡರೆ ಅರ್ಧ ಹಾಲು ಇನ್ನರ್ಧ ನಲ್ಲಿ ನೀರೆ ಬೇರೆತಿರುತ್ತದೆ. ಎಂಬಿತ್ಯಾದಿ ವಿಷಯಗಳನ್ನು ತಿಳಿಸಿ ನನ್ನ ಜ್ಞಾನ ಭಂಡಾರವನ್ನು ಹೆಚ್ಚಿಸಿದ್ದನು.ಅವನು ಅಷ್ಟು ಹೇಳಿದ ಮೇಲೆ ನಮ್ಮೂರು ಗಜೇಂದ್ರಗಡದಿಂದಲೆ ನಾವು ಅರ್ಧ ಲೀಟರ್ ನ ನಾಲ್ಕು ಪಾಕೀಟು ಹಾಲು, ಎರಡು ಲೀ. ಮೊಸರನ್ನು ತೆಗೆದುಕೊಂಡು ಹೊರಟು ನಿಂತೆವು, ಬದಾಮಿ ಕಡೆಗೆ ಬಸ್ಸಿನ ಸೌಲಭ್ಯ ಈಗೀನಷ್ಟಿರಲಿಲ್ಲ. ಖಾಸಗಿ ವಾಹನಗಳಲ್ಲೆ ಓಡಾಡಬೇಕಾಗಿರುತ್ತಿತ್ತು, ಅದು ನಮಗೇನು ಕಷ್ಟಕರವಾಗಿದ್ದಿಲ್ಲ ನಮ್ಮ ಅಂಗಡಿ ಮತ್ತು ಮನೆಯು ಬಸ್ ನಿಲ್ದಾಣದ ಎದುರಿಗೆ ಇದ್ದುದರಿಂದ, ಆ ಖಾಸಗಿ ವಾಹನಗಳು ನಮ್ಮ ಅಂಗಡಿಯ ಎದುರಿಗೆ ನಿಲ್ಲುತ್ತಿದ್ದರಿಂದ ವಾಹನಗಳನ್ನು ಹುಡುಕಿಕೊಂಡು ಹೋಗುವದು ಕಷ್ಟವೆನಿದ್ದಿಲ್ಲ, ಹೋಗಲು ಅನುವಾಗಿದ್ದಂತಹ ಒಂದು ವಾಹನವನ್ನು ಹತ್ತಿ ಕುಳಿತೆವು ಇಬ್ಬರು. ನಮ್ಮಿಬ್ಬರದು ಒಂದಾರೇಳು ತಿಂಗಳುಗಳ ಹಿಂದಷ್ಟೆ ಮದುವೆಯಾಗಿತ್ತು. ಒಬ್ಬರಿಗೊಬ್ಬರು ಒತ್ತೊತ್ತಿಕೊಂಡೆ ಕುಳಿತುಕೊಂಡೆವು, ಟೆಂಪೊ ಹತ್ತು ನಿಮಿಷದ ನಂತರ ಹೊರಟು ನಮ್ಮೂರಿನ ಕಾಲಕಾಲೇಶ್ವರ ಸರ್ಕಲ್ ನಲ್ಲಿ ಮತ್ತೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಂತಿತು, ನಾನು ಅಲ್ಲಿಯೆ ಇದ್ದ ನಮ್ಮ ಹೂ ಮಾರುವ ಅಲ್ಲಾಭಕ್ಷಿಯ ಅಂಗಡಿಗೆ ಹೋಗಿ ಕಾರ್ಯಕ್ರಮದ ಪೂಜೆಗೆಂದು ಎರಡು ಮಾಲೆ, ನನ್ನವಳ ಮುಡಿಗೆಂದು ಒಂದು ಮೊಳ ಕನಕಾಂಬರ, ಇನ್ನೊಂದು ಮೊಳ ಮಲ್ಲಿಗೆಯನ್ನು ಕಟ್ಟಿಸಿಕೊಂಡು ಬಂದು ನನ್ನವಳ ಮುಡಿಗೆ ಮುಡಿಸಿ ಕುಳಿತುಕೊಂಡೆ, ಅಕ್ಕಪಕ್ಕದವರು ಮುಸುಮುಸು ನಕ್ಕರು ಲೆಕ್ಕಿಸದೆ, ಅಷ್ಟರಲ್ಲಾಗಲೆ ನಮ್ಮ ಎದುರು ಸೀಟಿನಲ್ಲಿ ಒಬ್ಬ ಮಹಿಳೆ ಹೆಣ್ಣು ಕೂಸನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕುಳಿತುಕೊಂಡಿದ್ದಳು, ಎಣ್ಣೆಯಿಲ್ಲದೆ ಕೆದರಿ ನಿಂತ ಕೂದಲು,
ಮುಖವನ್ನು ಸರಿಯಾಗಿ ತೊಳೆದುಕೊಂಡಿಲ್ಲ ಎಂಬುದಕ್ಕೆ ಮಸುಕು ಮಸುಕಾಗಿ ಕಾಣುತ್ತಿದ್ದ ಹಣೆಯ ಕುಂಕುಮ, ಜೋರಾಗಿ ಹಿಡಿದೆಳೆದರೆ ಹರಿದೆ ಹೋಗುವುದೇನೊ ಎಂಬಂತಹ ಉಟ್ಟ ಸೀರೆ, ಕಾಲಿಗೆ ಮೆತ್ತಿಗೊಂಡಿದ್ದ ಮಣ್ಣಿನ ಕೆಸರನ್ನು ನೋಡಿದರೆ ಚಪ್ಪಲಿ...? ಅಂತ ನೋಡುವ ಮಾತೆ ಇಲ್ಲ, ಆದರೆ ಕಾಲುಂಗರದ ಬೆರಳುಗಳಲ್ಲಿ ನನ್ನದೆ ಇದು ಜಾಗ ಎನ್ನುವ ಕುರುಹುಗಳಿದ್ದವೆ ಹೊರತು, ಅವುಗಳಿರಲಿಲ್ಲ,
ಬೆಳಿಗ್ಗೆಯಿಂದ ಏನನ್ನು ತಿಂದಿಲ್ಲ ಎನ್ನುವುದಕ್ಕಿಂತ ಏನನ್ನು ಕುಡಿದೆ ಇಲ್ಲ ಎಂಬುದಕ್ಕೆ ಒಣಗಿ ಅದರುತ್ತಿದ್ದ ತುಟಿಗಳು, ಮಗುವಿನ ಹೊಟ್ಟೆಗೂ ಏನು ಇಲ್ಲ ಎಂಬುದಕ್ಕೆ ಅಂಗಾತ ಮಲಗಿದ ಮಗುವಿನ ಹೊಟ್ಟೆಯು ತೆಗ್ಗು ಬಿದ್ದಂತಾಗಿತ್ತು, ಗಣಿಧಣಿಗಳು ನೈಸರ್ಗಿಕ ಸಂಪನ್ಮೂಲಗಳ ಮಹತ್ವವನರಿಯದೆ ಹಣದ ದುರಾಸೆಗೆ ನೆಲವನ್ನು ಅಗೆದು ಬಗೆದು ಕಂದರಗಳ ಸೃಷ್ಟಿಸಿದ ಹಾಗಿತ್ತು. ಒಂದು ಕ್ಷಣ ಅವರಿಬ್ಬರ ಸ್ಥಿತಿಯನ್ನು ನೋಡಿ ಮೈ ಝುಮ್ಮೆಂದು ಕರಳು ಹಿಂಡಿದಂತಾಯಿತು. ಕಣ್ಣು ಮುಚ್ಚಿ ಎರಡು ಕ್ಷಣ ಹಾಗೆ ಕುಳಿತುಕೊಂಡುಬಿಟ್ಟೆ.
ಭಾಗ ೨
ಅಷ್ಟರಲ್ಲಿ 'ಸಾವಕಾರ ನಮಸ್ಕಾರ್ರಿ' ಎಂದ ಗಾಡಿ ಕ್ಲಿನರ್ (ನಿರ್ವಾಹಕ)
ಕಣ್ಬಿಟ್ಟು ನೋಡಿದೆ, ಪರಿಚಯದವನೆ,
'ನಮಸ್ಕಾರ ಹೇಳಯ್ಯ' ಎಂದೆ,
'ಊರಿಗೆ ಹೊಂಟಿರೇನ್ರಿ' ಎಂದ,
'ಹ್ಞೂಂ... ಇಲ್ಲೆ ಬೇವಿನಕಟ್ಟಿಗೆ, ಒಂದ್ ಬಾಸಿಂಗ ಬಿಡೊ ಕಾರಣ ಇತ್ತ ಅದ್ಕ' ಎಂದು ಅಂಗಿಯ ಜೇಬಿನಿಂದ ಹಣವನ್ನು ತೆಗೆದುಕೊಟ್ಟೆ,
'ಅಲ್ಲಾ...' ಎಂದು ತಲೆಯನ್ನು ಕೆರೆದುಕೊಳ್ಳುತ್ತಲೆ
ಹಣವನ್ನು ಪಡೆಯಲು ಹಿಂಜರಿಯತೊಡಗಿದನು, ಯಾಕೆಂದರೆ ನಮ್ಮಂಗಡಿಯ ಮುಂದೆಯೆ ಅವರು ವಾಹನವನ್ನು ನಿಲ್ಲಿಸುತ್ತಿದ್ದರಿಂದ ನನ್ನಿಂದ ಹೇಗೆ ಹಣವನ್ನು ಪಡೆಯುವುದು ಎಂದು ಅವನಿಗೊಂದಿಷ್ಟು ಪೇಚಿಗೆ ಸಿಲುಕಿದ ಹಾಗಿತ್ತು, ಅವನ ಮುಖದ ಭಾವನೆಯನ್ನು ಕಂಡು
'ಏ ಇರ್ಲಿ ತಗೊಳೊ ಮಾರಾಯ, ಮುಂಜಾನಿ ನಾಷ್ಟಕರ ಬೇಕಲ್ಲ '
ಎನ್ನುತ್ತಾ ಕೊಟ್ಟೆ, ಹಣವನ್ನು ತೆಗೆದುಕೊಂಡು ಮರಳಿ ಚಿಲ್ಲರೆಯನ್ನು ಕೊಟ್ಟು ಪಕ್ಕಕ್ಕೆ ಸರಿದು ಆ ಹೆಣ್ಣು ಮಗಳತ್ತ ಕೈ ಚಾಚಿ 'ಬಸ್ ಚಾರ್ಜ್ ಕೊಡ್ರಿ' ಎಂದ.
ಅವಳ ಕಣ್ಣಲ್ಲಿ ದುಃಖದ ಕಡಲೆ ಕಟ್ಟಿಕೊಂಡಿತ್ತೇನೊ...ಸರಸರನೆ ಕಣ್ಣಿಂದ ಕಣ್ಣೀರು ಸುರಿಯತೊಡಗಿತು, ಸೀರೆಯ ಸೆರಂಗಂಚಿಂದ ಕಣ್ಣೀರನ್ನು ಒರೆಸಿಕೊಳ್ಳುತ್ತಾ, 'ನನ್ಹತ್ರ ರೊಕ್ಕಾ ಇಲ್ಲಣ್ಣಾ ' ಎಂದಳು.
ಮುಖಸಿಂಡರಿಸಿಕೊಂಡ ಅವನು 'ಮೊದ್ಲ ಹೇಳಿ ಹತ್ತಾಕ ಬರ್ತಿತ್ತಿಲ್ಲ ನಿಂಗ, ಮುಂಜಮುಂಜಾನೆದ್ದ ರೊಕ್ಕಿಲ್ಲಂತದ್ರ, ಮಾಲಕನ ಕೈಯ್ಯಾಗೇನ ಚೊಂಬ ಕೊಡ್ಲೇನ ನಾನು, ಗೊತ್ತಾಗತ್ತಿಲ್ಲ ಬೆ ಹೊಟ್ಟಿ ತೆರ್ದ ಮಕ್ಕಳ ಹಡ್ದಿದಿ ಅಷ್ಟು ತಿಳ್ವಳಿಕಿ ಬ್ಯಾಡನ ನಿಂಗ, ಏ ಡ್ರೈವರ್ ಸಾಬ್ ಗಾಡಿ ಸೈಡ್ಗೆ ಹಾಕಪ.. ಇಲ್ಲೊಂದು ಮುಂಜಾನೆದ್ದ ಲಾಭದ ಗಿರಾಕಿನ ಹತ್ತೈತಿ ಗಾಡ್ಯಾಗ ' ಎನ್ನುತ್ತಾ ಗಾಡಿಯನ್ನು ರಸ್ತೆಯ ಬದಿಯಲ್ಲಿ ನಿಲ್ಲುಸಲು ಡ್ರೈವರ್ ನಿಗೆ ಅವಸರಿಸತೊಡಗಿದನು. ಅವಳು ಸರಕ್ಕನೆ ತನ್ನ ರವಿಕೆಯಲ್ಲಿ ಬಚ್ಚಿಟ್ಟುಕೊಂಡಿದ್ದ ತಾಳಿಯನ್ನು ತೆಗೆದು ಅವನ ಮುಂದೆ ಹಿಡಿದು ತೋರಿಸುತ್ತಾ, ' ಅಣ್ಣಾ ಹಂಗ ಮಾಡಬ್ಯಾಡಣ್ಣ, ಇಲ್ಲೆ ಅರ್ಧ ದಾರ್ಯಾಗ ಬಿಟ್ಟು ಹೋಗ್ಬೇಡ, ನೋಡಿಲ್ಲಿ ಬೇಕಿದ್ರ ಬದಾಮಿ ಬಸ್ಟ್ಯಾಂಡನ್ಯಾಗ ಇಳಿದ ತಕ್ಷಣ ಈ ತಾಳಿ ಮಾರಿ ನಿನ್ನ ರೊಕ್ಕ ಕೊಡ್ತೀನ' ಎಂದಳು. ಅವಳ ಮಾತನ್ನು ಕೇಳಿ ಗಾಡಿಯಲ್ಲಿದ್ದ ಎಲ್ಲರು ಒಂದು ಕ್ಷಣ ಸ್ತಬ್ಧಭೂತರಾದರು. ಡ್ರೈವರ್ ಅವಳ ಮಾತನ್ನು ಕೇಳಿ ಗಾಡಿಯನ್ನು ನಿಲ್ಲಿಸದೆ ಓಡಿಸತೊಡಗಿದನು,
'ಎಲ್ಲಿಂದ ಬಂದಿಯವ್ವ' ಎಂದು ಕ್ಲಿನರ್ ಕುತೂಹಲದಿಂದ ಕೇಳಿದ,
' ನಾವು ಇಲ್ಲೆ ಬದಾಮಿ ದಾಟಿ ಒಂದ ಹಳ್ಳಿರಿ, ಈಗೆರಡ ತಿಂಗಳ್ದ ಹಿಂದ ನಾನು ನನ್ನ ಗಂಡ ಮಂಗ್ಳೂರಿಗೆ ದುಡ್ಕೊಂಡ ತಿನ್ನಾಕಂತ ಹೋಗಿದ್ವಿರಿ, ಒಂದ ತಿಂಗಳ ಛಲೊತ್ನ್ಯಾಗ ದುಡ್ದವ್ರ್ಯಾ, ಬಂದ ರೊಕ್ಕಾನೆಲ್ಲ ನನ್ನ ಗಂಡ ಕುಡ್ದ ಜೂಜಿಗೆ ಆಡಾಕ ಹತ್ತಿದ್ನರ್ರಿ, ಮೊನ್ನೆ ರಾತ್ರಿ ಯಾರೊ ಇಬ್ರನ್ನ ಕರ್ಕೊಂಡ ಬಂದ ಈ ಹಸುಗೂಸನ್ನ ಮಾರಾಕ ಹೊಂಟಿದ್ನರ್ರಿ, ಅಲ್ಲೆಲ್ಲಾ ಗುದ್ದಾಡಿ ಬಾಯ್ ಮಾಡಿದ್ದಕ್ಕ ನಮ್ಹಂಗ ಕೆಲ್ಸಕ್ಕ ಬಂದ ಮಂದಿ ಎಲ್ಲಾ ಸೇರಿ ನನ್ನ ಗಂಡನ್ನ ಅವನ ಜೊತಿಗ ಬಂದ್ರವ್ನ ಬಾಸುಂಡೆ ಬರೊ ಹಂಗ ಹೊಡ್ದ ಹೋದರ್ರಿ.. ಇದ ಸಿಟ್ಟಿಲೆ ನನ್ನ ಗಂಡ ಒಡಗಟಗಿ ತಗೊಂಡು ಮೈ ತುಂಬಾ ರಕ್ತ ಬರಂಗ ಹೊಡ್ದ, ಕುಡ್ದ ಬಂದ ಮತ್ತ ಕೈ ತಗೋತಿನಂತ ಹ್ವಾದನ್ರೀ...ಇನ್ನ ಇಂವ ಇಲ್ಲಿದ್ರ ನನ್ನ ಜೀವಾ ಉಳ್ಸಂಗಿಲ್ಲ ಅಂತ ಅನ್ಕೊಂಡ, ಉಟ್ಟ ಬಟ್ಟಿಲೆ ಹಟ್ಟಿ ಬಿಟ್ಟ ಹೊಂಟ ಬಂದೇನ್ರಿ, ಮಂಗ್ಳೂರಿಂದ ನಮ್ಮೂರಿಗ ಬರಾಕ ಟಿಕೆಟ್ಗೆ ರೊಕ್ಕ ಇರಲಾರ್ದಕ್ಕನ ಕಾಲನ ಬೆಳ್ಳಿ ಕಾಲುಂಗ್ರ ಮಾರಿ ಗಡಾತನ್ಕ ಬಂದಿನ್ರೀ..ಇನ್ನೂ ಒಂದು ಹನಿ ನೀರ ಸೈತ ಬಾಯ್ಯಾಗ ಹಾಕ್ಕೊಂಡಿಲ್ರೀ, ಅಣ್ಣೊರ ನಿಮ್ಗ ಪುಣ್ಯ ಬರತೈತ್ರಿ ಬದಾಮಿ ತಂಕ ಕರ್ಕೊಂಡ ಹೋಗ್ರಿ, ಈ ತಾಳಿನ ಮಾರಿಸಿಕೊಡ್ರಿ, ನಿಮ್ಮ ರೊಕ್ಕ ಕೊಟ್ಟ ನಾ ಅತ್ಲಾಗ ನಮ್ಮ ತವರ ಮನಿ ಗಾಡಿ ಹಿಡಿತಿನ್ರೀ...' ಎಂದು ತನ್ನ ರಾಮಾಯಣವನ್ನೆಲ್ಲ ಒಂದೆ ಉಸಿರಿನಲ್ಲಿ ಹೇಳಿಬಿಟ್ಟಿದ್ದಳು. ಬಾಯೆಲ್ಲಾ ಒಣಗಿ ಬಿಟ್ಟಿತ್ತು, ಇನ್ನು ಒಂದು ಮಾತನ್ನು ಆಡಲು ಆಗದು ಎನ್ನುವ ಹಾಗೆ ಸೀಟಿಗೊರಗಿ ಕುಳಿತುಬಿಟ್ಟಳು. ಆಗ ನಾನು ಅವಳ ಕರುಣಾಜನಕ ಕಥೆಯಿಂದ ಹೊರಬಂದು, ನನ್ನ ಬ್ಯಾಗನಲ್ಲಿದ್ದ ನೀರಿನ ಬಾಟಲಿಯನ್ನು ಅವಳಿಗೆ ಕುಡಿಯಲಿಕ್ಕೆಂದು ಕೊಟ್ಟೆ, ಒಂದೆ ಗುಟುಕಿಗೆ ಅರ್ಧದಷ್ಟು ನೀರನ್ನು ಕುಡಿದು ದಣಿವಾರಿಸಿಕೊಂಡಳು. ಅವಳ ಮಾತುಗಳನ್ನು ಕೇಳಿದ ಎಲ್ಲರ ಮೊಗದಲ್ಲು ಅನುಕಂಪದ, ಪಾಪದ ಭಾವನೆ ಎದ್ದು ಕಾಣುತ್ತಿತ್ತು, ಎಲ್ಲೊ ನನ್ನ ಮನದ ಮೂಲೆಯ ಬಣವಿಗೆ ಸಣ್ಣದೊಂದು ನೋವಿನ ಕಿಡಿ ಹೊತ್ತಿದಂತಾಗಿ ನೋವನ್ನು ತಾಳಿಕೊಳ್ಳಲಾದೆ, ಎರಡು ಹನಿ ಕಣ್ಣೀರನ್ನು ಹಾಕಬೇಕೆಂದುಕೊಂಡೆ, ಗಂಡಸಲ್ವ... ಎಂದುಕೊಂಡು ಕಣ್ಮುಚ್ಚಿ ಅವುಡುಗಚ್ಚಿಕೊಂಡೆ.
' ಛೇ...ಛೆ...ಛೆ..ಎಂತ ಮಾತ ಬೆ ತಂಗ್ಯಮ್ಮ, ನನ್ನ ಒಡಹುಟ್ಟಿದ
ತಂಗಿಯಾದ್ರು ಒಂದ, ನೀನಾದ್ರು ಒಂದ, ನಿನ್ನ ತಾಳಿ ಮಾರಿಸಿ ನಾ ಯಾ ನರಕಕ್ಕ ಹೋಗ್ಲೆವ್ವ, ಅಳಬ್ಯಾಡ ನೀನು, ನೋಡ ರೊಕ್ಕ ಕೊಡದ ಬ್ಯಾಡ, ಮುಂದ ಬದಾಮ್ಯಾಗ ನಿಮ್ಮೂರ ಬಸ್ಸ ಹತ್ತಿಸಿ ಕಳ್ಸೊ ಜವಬ್ದಾರಿ ನಂದ ಐತವ್ವ, ಆ ತಾಳಿನ ಮೊದ್ಲಕ ಜ್ವಾಕ್ಯಾಗಿ ಹಂತ್ಯಾಕ ಇಟ್ಕೊ' ಅಂದ ಆ ಕ್ಲಿನರ್ ನ ಕಣ್ಣಲ್ಲಿ ಎರಡು ಹನಿ ಕಣ್ಣೀರು ಉದುರಿದ್ದನ್ನು ಯಾರು ನೋಡಲೆ ಇಲ್ಲ ಅವನ ಮುಂಗೈಯೊಂದು ಹೊರತುಪಡಿಸಿ, ಇನ್ನೇನು ಅರ್ಧ ಕಿ.ಮಿ. ನಲ್ಲಿ ನಮ್ಮ ನಿಲ್ದಾಣ ಬರುತ್ತದೆಂದು ಗೊತ್ತಾದ ಮೇಲೆ ಕೈ ಚೀಲದಲ್ಲಿದ್ದ ಒಂದು ಅರ್ಧ ಲಿ. ಹಾಲಿನ ಪಾಕೀಟನ್ನು ತೆಗೆದು ನನ್ನವಳ ಕೈಯಿಂದ ಆ ಮಗುವಿಗೆ ಹಾಲನ್ನು ಕುಡಿಸಲು ಕೊಡಿಸಿಬಿಟ್ಟೆ, ನಾವು ಇಳಿಯಬೇಕಾದ ಸ್ಥಳವು ಬಂದಾಗ, ಇಳಿಯುವ ಮುಂಚೆ ತಾಯಿ ಮಗಳನ್ನೊಮ್ಮೆ ದಿಟ್ಟಿಸಿನೋಡಿ, ನಿಟ್ಟುಸಿರೊಂದನು ಬಿಟ್ಟು ಕೆಳಗಿಳಿದೆವು. ಆ ಕ್ಲಿನರ್ ನ ಬೆನ್ನನ್ನು ತಟ್ಟಿ ಹಳ್ಳಿಯೊಳಕ್ಕೆ ಹೆಜ್ಜೆ ಹಾಕಿದೆವು.
ಭಾಗ ೩
ಇದಾಗಿ ಎರಡ್ಮೂರು ತಿಂಗಳುಗಳೆ ಕಳೆದು ಹೋಗಿದ್ದವು, ಮತ್ತೆ ಈ ವಿಚಾರವಾಗಿ ನಾನು ಆ ಕ್ಲಿನರ್ ನ ಭೇಟಿಯಾಗಿ ಮಾತು ಆಡಿರಲಿಲ್ಲ. ಅವತ್ತು ಸಂಜೆ ಐದು.. ಐದುವರೆ ಆಗಿರಬಹುದು.. ನಾನು ಏನೊ ಸಾಮಾನುಗಳನ್ನು ಅಂಗಡಿಯಲ್ಲಿ ಹೊಂದಿಸುತ್ತಿದ್ದೆ ಅಂಗಡಿಯಲ್ಲಿ ಒಂದೆರಡು ಗಿರಾಕಿಗಳಿಗೆ ನನ್ನ ತಮ್ಮನು ಮೊಬೈಲ್ ಕರೆನ್ಸಿಯನ್ನು ಹಾಕುತ್ತಿದ್ದಾಗ ಇಬ್ಬರು ಒಳಗೆ ಬಂದರು, ಗಂಡಸು ' ಮಾಲಕ್ರ ಈ ಏರಟೆಲ್ ನಂಬರಿಗೆ ಒಂದೈವತ್ತು ರೂಪಾಯಿ ರೊಕ್ಕ ಹಾಕ್ರೀ' ಎನ್ನುತ್ತಾ ನನ್ನ ತಮ್ಮನ ಜೊತೆ ಮಾತನಾಡುತ್ತಾ ನಿಂತನು, ಅವನ ಹಿಂದೆ ಬಂದದ್ದು ಹೆಣ್ಮಗಳು ನನ್ನ ಹಿಂದೆ ನಿಂತುಕೊಂಡಳು, ಅವಳ ಕೈ ಬಳೆಗಳ ಸದ್ದು, ದೇಹಕ್ಕೆ ಹಾಕಿಕೊಂಡ ಸೆಂಟಿನ ವಾಸನೆ, ಝಗಮಗಿಸುವಂತಹ ಸೀರೆ, ಮುಡಿತುಂಬ ಮಲ್ಲಿಗೆ ಕನಕಾಂಬರ ಸಾಲದೆಂಬಂತೆ ಎರಡು ತುಂಬು ಅರಳಿದ ಗುಲಾಬಿಗಳು, ಹಿಂದಿನಿಂದಲೆ ನೋಡಿ, ಸೊಸಿ ಮಾವನ ಜಾತ್ರಿ ಜೋರ ಮಾಡ್ಸಿರಬೇಕ ಅಂತ ಮನಸ್ಸಿನಲ್ಲಿಯೆ ನಗುತ್ತಾ ಮತ್ತೆ ಕೆಲಸದತ್ತ ಗಮನವನ್ನು ಹರಿಸಿದೆ, ಆಗ ಅವಳು ಏನೊ ಒಂದು ಸಾಮಾನಿಗಾಗಿ ಅವನನ್ನು ಪೀಡಿಸತೊಡಗಿದಳು, ' ನಂಗ ಬೇಕಂದ್ರ ಬೇಕ ನೋಡಿಗ ಏನ. ಆಗ್ಲಿ, ಆರ ಹೋಗಿ ಮೂರರ ಆಗ್ಲಿ, ಒಂಬತ್ತರ ಆಗ್ಲಿ ನಂಗ ಬೇಕಂದ್ರ ಬೇಕ,' ಎನ್ನುತ್ತಾ ಹಠ ಹಿಡಿದಳು. ನನಗಾಗ ಈ ಧ್ವನಿಯನ್ನು ಎಲ್ಲೊ ಕೇಳಿದ ಹಾಗಿದೆಯಲ್ಲ, ಯಾಕೊ ಬಹಳ ಸ್ವಲ್ಪ ಪರಿಚಿತ ಧ್ವನಿ ಇದ್ದ ಹಾಗಿದೆ ಒಮ್ಮೆ ಮುಖವನ್ನು ನೋಡಲೆ ಬೇಕೆಂದುಕೊಂಡು ಅವಳ ಎದುರಿಗೆ ಹೋಗಿ ನಿಂತಾಗ ಅಕ್ಷರಶಃ ಸಿಡಿಲು ಬಡಿದಂತಹ ಅನುಭವ ನನಗೆ, ಅದೆ.. ಅವಳೆ ಅಂದು ಹೊಟ್ಟೆಗೆ ಹಿಟ್ಟಿಲ್ಲದೆ, ಊರಿಗೆ ಹೋಗಲು ಹಣವಿಲ್ಲದೆ ತಾಳಿ ಮಾರಿ ಊರು ಸೇರಲು ಹವಣಿಸುತ್ತಿದ್ದ ಹೆಣ್ಣು ಇವಳೇನಾ...? ಅಬ್ಬಬ್ಬಾ..!!! ಅದೆಂತಹ ಸಂದರ್ಭ ನನಗೊದಗಿ ಬಂದದ್ದು, ಎಣ್ಣೆ ಕಾಣದ ಕೂದಲಿಂದು ಒಪ್ಪವಾಗಿ ಬಾಚಿ, ಮಾರುದ್ದ ಜಡೆಯ ಕಟ್ಟಿಕೊಂಡು ಮುಡಿತುಂಬ ಘಮಘಮಿಸುವ ಹೂವನ್ನು ಮುಡಿದುಕೊಂಡು, ತುಟಿಯ ತುಂಬ ಕೆಂಪು ರಂಗನು ತುಂಬಿಕೊಂಡು, ಕಣ್ಣಂಚಲೆ ಕೊಲ್ಲಲು ಸಾಕಾಗುವಷ್ಟು ಕಾಡಿಗೆಯನ್ನು ತೀಡಿಕೊಂಡು, ಕೈ ಎತ್ತಲು ಭಾರವೆನಿಸುವಷ್ಟು ಕೆಂಪು ಗಾಜಿನ ಚುಕ್ಕಿ ಬಳೆಗಳು ಎರಡು ಕೈಗಳಲ್ಲಿ ಹಾಕಿಕೊಂಡಿದ್ದರೆ, ಕಣ್ಣಲ್ಲಿ ಉತ್ಸಾಹದ ಚಿಲುಮೆ, ಒಟ್ಟಿನಲ್ಲಿ ನೋಡುತ್ತಿದ್ದರೆ ಬೆಂದ ಮರುಳುಗಾಡು ನೀರುಂಡು ಪಶ್ಚಿಮಘಟ್ಟದಂತಹ ಹಸಿರನ್ನು ಹೊದ್ದು ನಿಂತರೆ ಯಾವ ರೀತಿಯಲ್ಲಿ ಕಲ್ಪಿಸಿಕೊಳ್ಳಬಹುದೊ, ಆ ಕಲ್ಪನೆಗೆ ಹೊಂದಿಕೊಳ್ಳುವಂತಿದ್ದಳು. ಅರೆ..!!! ಒಂದಾಶ್ಚರ್ಯ, ಮಗು..!!! ಮಗವೊಂದು ಇರಲಿಲ್ಲ ಅವಳ ಕಂಕುಳಲ್ಲಿ, ತೆರದ ಬಾಯಿಂದ, ಬಿಟ್ಟ ಕಣ್ಣನ್ನು ಬಿಟ್ಟ ಹಾಗೆ ನೋಡುತ್ತಾ ನಿಂತುಬಿಟ್ಟೆ ಎರಡು ಕ್ಷಣ. ಆಗ ಅವಳು ಒಂದೆರಡು ಸಲ ನನ್ನ ಕಡೆ ನೋಡಿ ದೆವ್ವ ನೋಡಿದವರಂತೆ ಅರೆ ಕ್ಷಣದಲ್ಲಿ ಬೆವರಿನಿಂದ ನೀರು ನೀರಾಗಿಬಿಟ್ಟಳು, ನೀನು ಅವಳಲ್ಲವೆ..? ಎನ್ನುವ ನನ್ನ ಹುಬ್ಬು ಗಂಟಿಕ್ಕಿದ ಸೂಜಿ ನೋಟಕ್ಕೆ ಹೆದರಿದಳೇನೊ ಚಿಟ್ಟನೆ ಚೀರಿ ಕೈಯಲ್ಲಿ ಹಿಡಿದುಕೊಂಡಿದ್ದ ಸಾಮಾನನ್ನು ಕೈ ಬಿಟ್ಟು ಅಂಗಡಿಯಿಂದ ಹೊರಗೊಡಿಬಿಟ್ಟಳು. ಎಲ್ಲರು ಕ್ಷಣಕಾಲ ಹೆದರಿಬಿಟ್ಟಿದ್ದರು ಅವಳ ಆಟಕ್ಕೆ, ಅವಳ ಹಿಂದೆ ಬಂದ ಗಂಡಸು ಕರೆನ್ಸಿಯ ಹಣವನ್ನು ಕೊಟ್ಟು ಅವಳ ಹಿಂದೆಯೆ ಓಡಿ ಹೋದನು. ನನಗೆ ಅವತ್ತು ರಾತ್ರಿಪೂರಾ ನಿದ್ದೆನೆ ಬರಲಿಲ್ಲ, ಅವಳು ಅಂದು ನಡೆದುಕೊಂಡ ರೀತಿ, ಇವತ್ತಿನ ವೇಷಭೂಷಣ, ಕಂಕುಳಲ್ಲಿಯ ಕೂಸು ಏನಾಯಿತು, ಕರುಣೆ ತೋರಿ ಬದಾಮಿವರೆಗೂ... ಬಸ್ಸ್ ಚಾರ್ಜ್ ಇಲ್ಲದೆ ಕರೆದೊಯ್ದ ಆ ಕ್ಲಿನರ್ ನ ನಿಯತ್ತು, ಕನಿಕರವೇನಾಯಿತು, ಅಂದವಳ ಅಸಹಾಯಕತೆಯೊ..? ನಾಟಕವೊ..? ಇಂದಿವಳ ನಿಜ ರೂಪವೊ...? ಹಾದರತೆಯೊ...? ನನಗೊಂದು ಇವತ್ತಿಗೂ ಅರ್ಥವಾಗುತ್ತಿಲ್ಲ. ಹೇಗೆ ಹೇಳಲಿ ಇದು ಕಥೆಯಲ್ಲ... ಜೀವನ
No comments:
Post a Comment