Thursday, August 30, 2018

ಹನಿ ಶಾಯಿ

ತುಫಾಕಿಯ ಗುಂಡುಗಳಿಗಷ್ಟೆ ಇದ್ದ ರಕ್ತದ ರುಚಿ...
ಲೇಖನಿಯ ನಿಬ್ಬಿಗೂ ಸವಿಯುವ ಆಸೆ ಬಂತೇಕೊ...?
ನಂದನವನವಾಗಿಸಬೇಕಿದ್ದ ವಿಚಾರ ಧಾರೆಗಳು
ಧರೆಯನೆ ಹೊತ್ತುರಿಸಲು ಹಪಹಪಿಸುತಿಹುವೇಕೊ....?

ಗಿರಿ...ಕಂದರದೊಳಡಗಿರುವ ನರಿಗಳ ಬುದ್ದಿ
ನಾಗರಿಕ ನಾಯಕರ ಮತಿಗೂ ಬಳೆದುಕೊಂಡಿತ್ಹೇಗೊ..?
ಧರ್ಮದ ಧಮನಿ...ಧಮನಿಗಳು ಸಿಡಿದು ಪಡೆದ ಉಸಿರಿಗೆ
ಮತ್ತೆ...ಮತ್ತೆ...ಮತಿಯ ದಿಗ್ಭಂದನದಿಂದಲೆ ಉಸಿರುಗಟ್ಟಿಸುತಿರುವಿರೇಕೊ...?

ಅರಳುವ ಹೂಗಳಿಗೆ ಹಾಕಿಕೊಡುವ ದಾರಿ ಇದೇನಯ್ಯ ?
ಮನೆಯ ಸುತ್ತ ಬೇಲಿಯ ಕಟ್ಟಿಕೊಂಡೆ ಬದುಕುವುದು ಸಾಧ್ಯವೇನಯ್ಯ..?
ಅಂಧಕಾರಕೆ ಬೆಳಕಿನ ಹಣತೆಯ ಹಚ್ಚದೆ ಕೆಂಡದಹಾಸು ಹಾಸುವಿರೇನಯ್ಯ...?
ಏರಿಳಿತಗಳ ಸಮವಾಗಿಸುವ ಭರದಲ್ಲಿ ತಾಯಿ ಮಮತೆಯನೆ
ಮರೆಯುವರೇನಯ್ಯ ?

ಸಾಕು...ಸಾಕುಬಿಡಿ ಎದೆಗೆ ಗುರಿಯಿಕ್ಕುವುದನು, ಅರಿವಿಲ್ಲವೇನು..? ಬೆನ್ನು ತೋರಿಸುವವರ ಹಡೆಯುವ ಮಣ್ಣಿದಲ್ಲವೆಂದು
ಹೊಡೆಯುವುದೆ ಆದರೆ, ಹೊಡೆದುರುಳಿಸಿಬಿಡಿ ಮೌಢ್ಯಗಳನು
ಕಟ್ಟುವ ಕಿಚ್ಚೊಂದು ನಿಮ್ಮೆದೆಯಲ್ಲಿ ಉರಿಯುತ್ತಿದ್ದರೆ ಮಾತ್ರ !!

ಚಿಂತನೆಗಳಿರಲಿ...ಚಿತೆಗೇರಿಸುವ ಚಮತ್ಕಾರವ ತೋರದಿರಿ
ಮಥಿಸುತಿರಲಷ್ಟೆ ಮೌನ....ಮತ್ಸರವನ್ನೆ ಮೆಳೈಸಿಕೊಳ್ಳದಿರಲಿ
ಚಿಮ್ಮುತಿರಲಿ ಪದಗಳು...ವಿಷ ಬೀಜಗಳನೆ ಬಿತ್ತದಂತಿರಲಿ
ಚೆಲ್ಲಿದ ಹನಿ ಹನಿ ಶಾಯಿಯು....ರಕ್ತಚರಿತ್ರೆಯನ್ನ ಸೃಷ್ಟಿಸದಂತಿರಲಿ

No comments:

Post a Comment