Friday, August 3, 2018

ಸಾಕಿ..೧೦

ಗಂಧದ ಕೊರಡುಗಳೇನು ಬೇಕಿಲ್ಲ.....
ಬೇವಿನ ಕಟ್ಟಿಗೆಗಳಿಂದಾದರೂ ಸರಿ...
ಇಂದು ಸಂಜೆಗೆ, ನನ್ನನು ಸುಟ್ಟು ಹಾಕಿಬಿಡು ಸಾಕಿ...
ನಾಳೆಯವಳ ಮದುವೆ ಮೆರವಣಿಗೆ ಸಾಗುವುದು..!!!
ಹೇಗೆ ಸಹಿಸಿಕೊಳ್ಳಲಿ ನಾನು...? ಬ್ಯಾಂಡ್ ಬಾಜಾದ ಸದ್ದನು...
ಅದಕ್ಕೂ ಮೊದಲೆ, ನನ್ನ ತಮಟೆಯ ಸದ್ದು ಬೀದಿ...
ಬೀದಿಗಳಲ್ಲಿ ಪ್ರತಿಧ್ವನಿಸಿಬಿಡಲಿ...

ಉರಿದು.... ಸುಟ್ಟು ಹೋದ ನನ್ನ ಬೂದಿಯನ್ನು
ಹೊಳೆಯಲ್ಲಿ ವಿಸರ್ಜಿಸಬೇಡ ಸಾಕಿ...
ಒಡಕು ಮಡಕೆಯಲ್ಲಾದರು ಸರಿ, ಗಾಳಿಗೆ ಹಾರಿ
ಹೋಗದಂತೆ ಮುಚ್ಚಳವ ಮುಚ್ಚಿ...ಬಚ್ಚಿಟ್ಟುಬಿಡು...
ಗಂಗೆಯನ್ನು ಹೊತ್ತು ತರಲೆಂದು ಬರುವ ನೀರೆಯರು....
ಬೂದಿ ಬೇರೆತ ನೀರನ್ನೊಯ್ದು...ಸುರಿಗಿಯನ್ನಾಗಿ ಅವಳ
ಮೈ ಮೇಲೆ ಸುರಿದಾರು......ಮದುವೆಗೂ ಮುನ್ನವೆ...
ನಾನನುಭವಿಸಿದ ವಿರಹದ ಉರಿ...
ಅವಳನ್ನು ತಬ್ಬಿಕೊಂಡಾತು...

ಗೋರಿಗೆಂದೆ....ಹೂವಿನ ಚಾದರ ಕಟ್ಟುವ ಬುಟ್ಟಿಯಲ್ಲಿ...
ಒಂದೆ.... ಒಂದು ಮೊಗ್ಗಿನ ಎಸಳು ಉಳಿಯದಂತೆ,
ಕಟ್ಟಬೇಕೆಂದು....ಅಲ್ಲಾಭಕ್ಷಿಗೆ ಆಜ್ಞಾಪಿಸಿಬಿಡು ಸಾಕಿ...
ಮತ್ತೈದೆಯ ಮುಡಿಯನೇರುವ ದಂಡಿಯಲ್ಲಿ...ಸಾವಿನ
ಹೂವೊಂದು ಸೇರಿ..... ಅಪಶಕುನವಾದಾತು...!!!!
ಅವಳ ಮುತ್ತೈದೆತನಕ್ಕೆ ಕಂಟಕ ತರುವ ಪಾಪವು...
ನನ್ನನೆ ಸುತ್ತುಕೊಂಡು......ಹುಗಿದ ಮಣ್ಣಿನೊಳಗು ನನಗೆ
ನೆಮ್ಮದಿಯಿಲ್ಲದಂತಾದಾತು...

ಆತ್ಮಕ್ಕೆ ಶಾಂತಿ ಸಿಗಲೆಂದೇನು...ಮಸಣದಲ್ಲೊಂದು
ದೀಪವ ಹಚ್ಚದಿರು ಸಾಕಿ....
ನಿ ಹಚ್ಚಿಟ್ಟ ಹಣತೆಯ ಬೆಳಕಿನಲ್ಲಿ...ಮೊದಲ ರಾತ್ರಿಗೆ
ಅವಳಾರಿಸುವ ದೀಪದ ದೃಶ್ಯವನ್ನು ಕಣ್ತುಂಬಿಕೊಳ್ಳುವ
ದೌರ್ಭಾಗ್ಯ ನನ್ನದಾಗದಿರಲಿ...ಹೂ ಮಂಚದಲಿ ಅವಳೊಂದಿಗೆ... ಮಲಗದೆ ಹೋದರು...ಈ ಜನ್ಮಕ್ಕೆ,
ಅವಳ್ಹೆಸರಲೆ ಮಣ್ಣಲೆ ಮಲಗುವ ಸೌಭಾಗ್ಯವಾದರು
ಹಾಗೆ ಇರಲಿ....

No comments:

Post a Comment