Wednesday, October 4, 2023

ಚುಟುಕುಗಳು ರಂಗೀ

ಅವಳು ಹೊರಟು
ಹೋದ ಮೇಲೆ... ಹೆಚ್ಚು
ಗಾಬರಿಗೊಂಡುಬಿಟ್ಟಿದ್ದೆ..!!
ಜಗತ್ತು ನನ್ನ ಬಗ್ಗೆ ಏನೆಲ್ಲ
ಯೋಚಿಸುತ್ತದೆ ಅಂತಾ
ರಂಗೀ....
ಯಾವ ಮಣ್ಣಿನಲ್ಲಿ...
ಮಡಿದ ಯೋಧರನ್ನು
ನೆನಪಿಸಿಕೊಳ್ಳುವುದಿಲ್ಲವೊ
ಅಂತವರು ನನ್ನ ಬಗ್ಗೆ ಯಾವ
ರೀತಿಯ ಕಾಳಜಿಯನ್ನು ಮಾಡುತ್ತಾರೆ
ಬಿಡು...

ಯಾರೋ... ಹೇಳಿದರು
ಅವಳ ಕೆನ್ನೆ ರೇಷ್ಮೆಗಿಂತಲೂ
ಮೃದುವಾಗಿದೆ ಎಂದು
ರಂಗೀ....
ಮುಟ್ಟಲು ಹೋದೆ..!!
ನನ್ನ ಕೆನ್ನೆಗೆ ಕರೆಂಟ್
ಹೊಡೆದಂತಹ
ಅನುಭವವಾಯಿತು..!!

ಅವಳು ಕೈ ಬಿಟ್ಟಳೆಂದು
ನನ್ನ ಪಾಲಿನ ಜಗತ್ತು
ಮುಗಿದು ಹೋಯಿತೆಂದು
ಕಣ್ಮುಚ್ಚಿಕೊಂಡು ಬಿಟ್ಟೆ
ರಂಗೀ....
ಅಲ್ಲಿ ನನ್ನ
ತಾಯಿ ಕಂಡಳು....
ಮತ್ತೊಂದು ಹೊಸ
ಜಗತ್ತು ತೆರೆದುಕೊಂಡಿತು.

ಆ ದೀಪವನ್ನು
ಆರಿಸಿಬಿಡು
ರಂಗೀ....
ಬಾಳಲ್ಲಿ ಬೆಳಕಾಗ
ಬೇಕಾದವಳೆ,
ಎಂದೋ...ಕತ್ತಲೆಗೆ
ದೂಡಿ ಹೋಗಿದ್ದಾಳೆ...

ಎದೆಯ ದುಃಖವನ್ನು
ಯಾರೊಂದಿಗೂ ನಾನು
ಹಂಚಿಕೊಳ್ಳಲಾರೆ... ಬೇಕಿದ್ದರೆ
ಚೂರು ವಿಷವನ್ನು ಕೊಟ್ಟುಬಿಡಲಿ
ನುಂಗಿ ಬಿಡುತ್ತೇನೆ...!!
ರಂಗೀ...
ಆ ವಿಷವು ನನ್ನನ್ನು ಕೊಲ್ಲುವುದು
ಇಲ್ಲವೋ... ಗೊತ್ತಿಲ್ಲ..!!
ಅಷ್ಟೊಂದು ನಂಜೆರಿಬಿಟ್ಟಿದೆ
ದೇಹದಲ್ಲಿ..

ದುಃಖವು ಒಂದು
ಸಿರಿಯಲ್ಲವೇನು..?
ಎಲ್ಲರಿಗೂ ಅದನ್ನು ಹೇಗೆ
ಹಂಚುತ್ತಾ... ಬರಲಿ
ರಂಗೀ....
ಬಟ್ಟಲು ಮದಿರೆಗೆ
ಜೊತೆಯಾದವರು...
ನೋವಿನಲ್ಲಿ
ಬಾಗಿಯಾಗುವರೇನು?

ಪಾಪ ಕಳೆಯುತ್ತವೆ ಎಂಬ
ಎಲ್ಲ ಹರಿಯುವ ನೀರಿನಲ್ಲೂ
ಅಂಗೈಯನ್ನು ಉಜ್ಜಿ...ಉಜ್ಜಿ
ತೊಳೆದುಕೊಂಡೆ
ರಂಗೀ...
ಕಾಣಿಸಲೆ... ಇಲ್ಲ..
ಯಾವುದು ಇರಬಹುದದು..!!
ಅವಳನ್ನು ಒಲಿಸಿಕೊಂಡವನ
ಅಂಗೈಯ ರೇಖೆ..

ಅವಳ ಕಣ್ಣಂಚಿನಿಂದ
ನನ್ನೆದೆಗೆ ನಂಜನ್ನು
ಸುರಿದುಬಿಟ್ಟರೂ ಸಾಕಿತ್ತು...
ರಂಗೀ...
ಒಲವಿನ ನಶೆಯನ್ನೆ...
ಏರಿಸಿಬಿಟ್ಟಳು...
ವಿರಹದ ನಗರಕ್ಕೆ
ನಾನೇ ರಾಜನೀಗ..

ಏನೂ... ಗೊತ್ತಿಲ್ಲದ
ಅಮಾಯಕ ನಾನು
ನಡೆಯತ್ತಿದ್ದೆ ಬೀದಿಯಲ್ಲಿ
ರಂಗೀ....
ಅವಳು ನಕ್ಕುಬಿಟ್ಟಳು
ಬದುಕಿನ ಹಾದಿಯೆ
ಬದಲಾಗಿ ಹೋಯಿತು..!!

ಹೇಳಿದ ಅದೇಷ್ಟೊ..
ಮಾತುಗಳಿಗವಳು
ಕಿವಿಯಾಗಲೆ ಇಲ್ಲ
ರಂಗೀ...
ಹಿತ್ತಲಿನಲ್ಲಿ ಹಚ್ಚಿದ್ದ
ಹೂವಿನ ಗಿಡಗಳು
ಬಾಡಿ ಹೋಗುತ್ತೀವೆ..

ಹುಟ್ಟಿದವರ ಕೊನೆಯ
ನಿಲ್ದಾಣ ಇದೆ...ತಾನೇ..?
ನಾನೇನು ಹೊತ್ತು ತರಲಿಲ್ಲ
ರಂಗೀ....
ನನ್ನವರೇ...ಇಲ್ಲಿ
ನನ್ನನ್ನು ಸುಟ್ಟು
ಹಾಕಿದರು....

ಅವಳು ನನ್ನನ್ನು
ಬದಲಿಸಿದಳು....
ಜಗತ್ತು ನನ್ಮನ್ನು
ಬದಲಿಸಲಿಲ್ಲ..!
ರಂಗೀ..
ಜಗತ್ತಿಗೆ ನನ್ನ
ಅವಶ್ತಕತೆ ಇತ್ತು
ಅವಳಿಗೆ ಮಾತ್ರ ನನ್ನ
ಜರೂರತ್ತು ಇರಲಿಲ್ಲ.

ಎಲ್ಲರೂ...ಕೇಳಿದರು
ನಿನ್ನೆದೆಗೆ ಗಾಯವನ್ನು
ಮಾಡಿದವರು ಯಾರು..?
ರಂಗೀ...
ಹೇಗೆ ಹೇಳಲಿ....
ಆಕೆಯಿನ್ನೂ... ಮುಖದ
ಪರದೆಯನ್ನೆ ಸರಿಸಿಲ್ಲ..!!

ಕೇವಲ.... ಅವಳ ನಗೆಯ
ಸದ್ದನ್ನು ಕೇಳಿ.. ಎದೆಯ ಹಕ್ಕಿ
ಬೇಟೆಗಾರ ಬಿಸಿದ ಬಲೆಗೆ ಸಿಕ್ಕು
ವಿಲವಿಲನೆ ಒದ್ದಾಡುವಂತೆ
ಮಾಡಿಬಿಟ್ಟಿದೆ ರಂಗೀ...
ಇನ್ನವಳು... ಎದುರಿಗೆ
ಬಂದು ಬಿಟ್ಟರೆ...!!

ಇಂದವಳ ಪಾದವನ್ನು
ಸ್ಪರ್ಶಿಸಿದೆ ರಂಗೀ...
ಹೂವಿಗಿಂತಲೂ...
ಮೃದುವಾಗಿದೆ ಆದರೂ
ಅದರೊಳಗಿನ ಗಂಧ
ಇಲ್ಲಿ ಸಿಗಲಿಲ್ಲ..

ಪ್ರೀತಿಯೆಂಬುದು
ಕೆಸರಿದ್ದ ಹಾಗೆ...
ಒಮ್ಮೆ ಇಳಿದರೆ
ಎದ್ದು ಬರುವುದು ಕಷ್ಟ..!!
ಗೆಳೆಯ...
ಅಲ್ಲಿ ಸುಮ್ಮನೆ
ಕಾಲಹರಣ ಮಾಡಬಾರದು
ಮಾಡಿದರೆ....
ಯೌವ್ವನಕ್ಕೆ ನಷ್ಟ..!!

ಅವಳ
ತುಟಿಯಂಚಿನಲ್ಲಿ
ಹೇಗೆ ಇಷ್ಟೊಂದು
ಸಿಹಿಯಿದೆ
ರಂಗೀ...
ಬಹುಶಃ ಅವಳಿಗೆ
ಇದ್ದಿರಬಹದೇನೊ
ಸಕ್ಕರೆಯ ಕಾಯಿಲೆ 😝

ಮುರಿದು ಬೀಳುವ
ಸಂಬಂಧಗಳಿಗೇತಕೆ
ಮನಸ್ಸು ಹಾತೊರೆಯುತ್ತದೆ
ರಂಗೀ...
ಖಾರ ಅರಿಯುವವರ
ಮಧ್ಯದಲ್ಲಿ...
ಬೆಣ್ಣೆ ತಿನ್ನುವವನಿಗೇನು
ಕೆಲಸ..

ಕವಿತೆ‌‌...ಘಜಲ್
ಶಾಯರಿಗಳನ್ನು
ಬರೆದು ನನ್ನ ದುಃಖವನ್ನು
ಮರೆಯುತ್ತೇನೆ ಎನ್ನುವುದು
ನಿಜವಾದರೆ ರಂಗೀ...
ಮದ್ಯವನ್ನು ಮುಟ್ಟದೆ
ಅವಳ ಕಹಿ ನೆನಪುಗಳನ್ನು
ಕೊಲ್ಲಬಲ್ಲೆ ಎಂಬುದು
ಸತ್ಯ..

ಎದೆಯ ಮೇಲಿನ
ಖಾಲಿ ಜೇಬು...ಸಂಬಂಧಗಳ
ನಡುವೆ ಅಳೆದು ತೂಗಿ
ಕೂರಿಸುತ್ತದೆ
ರಂಗೀ...
ಖಾತೆ ಚಲಾವಣೆ ಇಲ್ಲವೆಂದ
ಮೇಲೆ.. ಅವರ ಪಟ್ಟಿಯಲ್ಲಿ
ನಮ್ಮ ಹೆಸರನ್ನು ಹುಡುಕುವುದು
ಹುಚ್ಚತನವಲ್ಲದೆ..
ಬೆರಿನ್ನೇನು..?

ಮೊನ್ನೆ-ನಿನ್ನೆ ಕೂಡಿ
ನಡೆದ ದಾರಿಗಳೆಲ್ಲ
ಈಗ ಹೆದ್ದಾರಿಗಳಾಗಿವೆ
ರಂಗೀ...
ನಡೆಯುವ ಹಾದಿಗಳೆ
ವಿಸ್ತಾರವಾಗಿರುವಾಗ...
ಇಂದೇಕೆ ನಿನ್ನ ಮನಸ್ಸು
ಸಂಕುಚಿತಗೊಳ್ಳುತ್ತಿದೆ..!!

No comments:

Post a Comment