Thursday, October 12, 2023

ಹೆಸರಿಡಿದ ಕವಿತೆಗಳು

ಇಲ್ಲಿ ಕೇಳೊ... ಮಹಾತ್ಮ...
ರಾತ್ರಿಯೆಲ್ಲ ಹುಳಿ, ಹೆಂಡವನ್ನು
ಸವಿದ ನಾಲಿಗೆಯಿಂದು, ಕುಡಿತದಿಂದ
ಸಮಾಜದ ಸ್ವಾಸ್ಥ್ಯ ಹದಗೆಡುತ್ತದೆಂದು
ಭೋದಿಸುತ್ತಿದೆ...

ಇಲ್ಲಿ ನೋಡೊ.... ಮಹಾತ್ಮ...
ಊರಿಗೆ ಬೆಂಕಿ ಹಚ್ಚಿಸಿದವರು
ಅಮಾಯಕರ ಮುಂದೆ  ಶಾಂತಿ-ಸಹಬಾಳ್ವೆಯ
ಹರಿಕಥೆಯನ್ನು ಹರಿಬಿಡುತ್ತಿದ್ದಾರೆ..

ಇಲ್ಲೇನು ಹೇಳುವೇಯೊ... ಮಹಾತ್ಮ...
ಶಾಂತಿಯ ಹೂತೋಟದಲ್ಲಿ ಜಾತಿಗಳೆಂಬ
ಮುಳ್ಳು ಬೇಲಿಯನ್ನು ಹೆಣೆಯುತಿರುವರಲ್ಲೊ
ಇಲ್ಲಿ ಯಾರೊ ಬೆಳೆದದ್ದನ್ನು.. ಇನ್ನಾರೊ
ಉಣ್ಣುತ್ತಾರೆ...

ಅವರಿಗೆಲ್ಲ ಏನೂ ಹೇಳುವುದು... ಮಹಾತ್ಮ..
ಉಂಡ ತಟ್ಟೆಯಲ್ಲಿ ಮಣ್ಣು ಸುರಿದು, ಎದ್ದು
ಹೋಗುವ ಬು(ಲ)ದ್ಧಿ ಜೀವಿಗಳ ಬೆನ್ನನು
ತಟ್ಟುವ ತಾಯ್ಗಂಡರೀರುವಾಗ...

ಮರೆತುಬಿಡೋಣ ಬಿಡು... ಮಹಾತ್ಮ...
ಅರೆ ಘಳಿಗೆ.‌!! ನಿನ್ನ ಪಟಕ್ಕೊಂದು ಹಾರ ಹಾಕಿ,
ಹಕ್ಕಿಯಂತೆ ಕಪಾಟುಗಳ ಬಂಧನದಲ್ಲಿದ್ದ ತಿರಂಗವನ್ನು
ಹಾರಿಸಿ, ದೌಡಾಯಿಸಿ ಬಿಡಬೇಕಿದೆ.. ತೋಟಕ್ಕೊ
ಊರ ಹೊರಗಿನ ಒಂಟಿ ಮನೆಯ ಕಡೆಗೊ
ಇಲ್ಲದಿದ್ದರೆ, ಗುಂಡು-ತುಂಡು ಎರಡು 'ಮಿಸ್ಸ್'
ಆಗುವ ಸಾಧ್ಯತೆ ಇದೆಯಲ್ಲವೇನು?

No comments:

Post a Comment