Wednesday, October 4, 2023

ಕಜಲ್ - ಮಸೀದಿ ಮಂದಿರಗಳೆಲ್ಲ

ಮಸೀದಿ-ಮಂದಿರ ಚರ್ಚಗಳೆಲ್ಲ ಬಿಕ್ಷೆ
ಬೇಡುವ ಕೇಂದ್ರಗಳಾಗಿ ಮಾರ್ಪಟ್ಟು ಬಿಟ್ಟಿವೆ..!!
ಡೇಬಿಟ್/ಕ್ರೇಡಿಟ್ ಕಾರ್ಡಗಳಿದ್ದರೆ ಮಾತ್ರ... ಕಲಿಯಗದ
ಶ್ರೀಮಂತ ಅಲ್ಲಾ-ಯೇಸು-ದೇವರುಗಳ ದರ್ಶನ
ವಾಗುವುದು ಸಾಕಿ...
ದೇಹಿ ಎಂದು ಹೋದವರೆಲ್ಲ... ದೀನವಾಗಿ
ಸುಡು ಬಿಸಿಲಿನಲ್ಲಿ, ಕಂಕುಳಲ್ಲೊ..ಹೆಗಲ ಮೇಲೊ
ಮಕ್ಕಳನ್ನು ಹೊತ್ತುಕೊಂಡು ಕಾಯುತ್ತಿರಬೇಕಷ್ಟೆ..!!

ಅವರು ಮೆಕ್ಕಾಗೆ ಹೋದರೆ, ಇವರು ಕಾಶಿಯನ್ನು
ಸುತ್ತಿ ಬಂದರು ಮತ್ತವರು ಜೆರುಸೇಲಂ ಗೆ ಹೋಗಿದ್ದರು
ಮತ್ತೊಂದಿಷ್ಟು ಜನ..... ಹಾಲು-ತುಪ್ಪ
ಕುರಿ-ಕೋಳಿಗಳನ್ನು ಬಲಿ ಕೊಡುವ ದೇವ-ದೇವತೆಯರನ್ನು
ಪೂಜಿಸಿದರು-ಆರಾಧಿಸುತ್ತಿರುವರು ಸಾಕಿ...
ಅಲ್ಲಿ, ಇಲ್ಲಿ, ಮತ್ತೆಲ್ಲಿಗೋ... ಹೋಗಿ ಬಂದವರು
ಸಂತರಾದರೂ..? ಸಮಾಜಕ್ಕೆ ಮಾದರಿಯಾದರೂ..?
ಲೋಕೊದ್ಧಾರಕರಾದರೊ..? ಹೋಗಲಿ ಮನೆಯನ್ನು
ಬಿಡಿ... ಮನಸ್ಸಿಗಾದರೂ ಶಾಂತಿ ದಕ್ಕಿದೇಯಾ..?

ಯಾವ ಕಂಪೋಡಿನ ಹತ್ತಿರ ಹೋದರೂ...
ಕಾಮದ ಘಮಟು ವಾಸನೆ ಮೂಗಿಗೆ ಬಡೆಯುತ್ತದೆ..!!
ಕಟ್ಟಡಗಳ ಯಾವ ಮೂಲೆಯೂ ಸಾಕಾಗುತ್ತಿಲ್ಲ
ಕಂತೆ..ಕಂತೆಗಳ ಮೂಟೆಯನ್ನು ಒಟ್ಟಲು
ಸಾಕಿ....
ಕೋರ್ಟಿನ ಕಟಕಟೆಗಳಿಗೂ ಗೆದ್ದಲು ಹತ್ತಿರಬಹುದು!
ಜೈಲಿನ ಕಂಬಿಗಳಿಗೂ.. ತುಕ್ಕು ಹಿಡಿದಿರಬಹುದು..!!
ಶಿಕ್ಷೆಯನ್ನು ಬರೆಯುವ ಲೇಖನಿಯ ಮಸಿಯು ಮಂಕಾಗಿರಬಹುದು...!!
ಎಲ್ಲವನ್ನೂ... ಗೆದ್ದವೆಂದುಕೊಂಡವರು... ಮೇಲಿನವನ
ಲೆಕ್ಕದಿಂದ ನುಣುಚಿಕೊಳ್ಳಬಲ್ಲರಾ...?

No comments:

Post a Comment