"ಎಲ್ಲ ಬಲ್ಲವರಿಲ್ಲ,
ಬಲ್ಲವರು ಬಹಳಿಲ್ಲ,
ಸಾಹಿತ್ಯವೆಂಬುವುದು
ಎಲ್ಲರಿಗಿಲ್ಲ" ಎಂಬ ಸರ್ವಜ್ಞನ ನುಡಿಯಂತೆ ವೃತ್ತಿಯಿಂದ ವ್ಯಾಪಾರಸ್ಥರಾದರು ಪ್ರವೃತ್ತಿಯಿಂದ ಭಾವನಾ ಜೀವಿಯಾಗಿ ಸಾಹಿತ್ಯದತ್ತ ವಾಲಿರುವ ಅಪರೂಪದ ವ್ಯಕ್ತಿತ್ವ ಹೊಂದಿರುವಂತಹ ಶ್ರೀ ಶರಣಪ್ಪ ಕ.ಬೇವಿನಕಟ್ಟಿ ಇವರು ನಿಷ್ಠುರ ಮಾತಿನ, ಮೃದು ಮನಸ್ಸಿನ ಹಾಗೂ ಜಾನಪದ ಶೈಲಿಯ ಕವನಗಳ ಬರೆಯುವಲ್ಲಿ ಇವರು ನಿಸ್ಸೀಮರು, ಪದಗಳ ಜೋಡಣೆಯ ಅಕ್ಕಸಾಲಿಗ, ಆಡು ಮಾತಿನ ಪದಗಳಿಂದಲೆ ಕವನ ಕಟ್ಟುವ ಕಲೆ ಇವರಿಗೆ ಕರತಲಾಮಲಕವಾಗಿದೆ. ಗಜೇಂದ್ರಗಡ ನಗರವು ಸುತ್ತಮುತ್ತಲಿನ ನಗರಗಳಾದಂತಹ ರೋಣ, ನರೇಗಲ್, ಯಲಬುರ್ಗಾ, ಗುಡೂರು, ಬೇಲೂರು ಇವೆಲ್ಲ ನಗರಗಳ ವ್ಯಾಪಾರಕ್ಕಿಂತ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯುತ್ತಿರುತ್ತದೆ ಇಂತಹ ವಾತಾವರಣದಲ್ಲಿದ್ದುಕೊಂಡು ಸ್ವತಃ ಒಬ್ಬ ವ್ಯಾಪಾರಸ್ಥರಾಗಿ, ರೈತರಾಗಿ, ಸಾಮಾಜಿಕವಾಗಿ ಕ್ರಿಯಾಶೀಲವಾಗಿದ್ದುಕೊಂಡು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕವನ ವಾಚನ, ಅಲ್ಲದೇ ನಾಡಿನ ಪ್ರತಿಷ್ಠಿತ ಸಾಹಿತ್ತಿಕ ಸಂಸ್ಥೆಗಳು ಆಯೋಜಿಸಿದಂತಹ ಕಾರ್ಯಕ್ರಮಗಳಲ್ಲಿ ಅಧ್ಯಕ್ಷತೆ, ಉಪನ್ಯಾಸ, ಅತಿಥಿಯಾಗಿ ಭಾಗವಹಿಸಿ ಊರ ಕೀರ್ತಿಯನ್ನು ನಾಡಿನಾದ್ಯಂತ ಪಸರಿಸಿದ್ದಾರಲ್ಲದೆ, ನಮ್ಮ ಗಜೇಂದ್ರಗಡ ನಗರದಲ್ಲಿ ನಡೆಸುತ್ತಿದ್ದಂತಹ ಮಹತ್ವಪೂರ್ಣ ವಾರದ ಸಾಹಿತ್ಯ ಚಿಂತನಾಗೋಷ್ಠಿಗಳಾದಂತಹ ೧೫೦, ೧೭೫, ೨೦೦ ವಾರಗಳ ಸಾಹಿತ್ಯ ಚಿಂತನಾಗೋಷ್ಠಿಗಳ ಸಂಭ್ರಮಾಚರಣೆಯ ಪ್ರಯುಕ್ತವಾಗಿ ರಾಜ್ಯ ಮಟ್ಟದ ಸಾಹಿತ್ಯ ಚಿಗುರು ಮತ್ತು ಸಾಹಿತ್ಯ ಸಿರಿ ಎಂಬ ಪುಸ್ತಕ ಪ್ರಶಸ್ತಿಗಳ ಆಯ್ಕೆಯಲ್ಲಿ ಮುಖ್ಯ ವಿಮರ್ಶಕರಾಗಿ ಯಾವುದೇ ಕಪ್ಪು ಚುಕ್ಕೆ ಬರದ ಹಾಗೆ ಕಾರ್ಯ ನಿರ್ವಹಿಸಿದ್ದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಈಗಾಗಲೇ ನಮ್ಮವ್ವ - ಅವಳೆದೆಯ ಮಾತುಗಳು ಕವನ ಸಂಕಲನ ಹಾಗೂ ನಿರ್ಣಯ - ಕಾದಂಬರಿ ಈಗ ಚಂದ್ರವ್ವ ಎಂಬ ಕಥಾ ಸಂಕಲನವನ್ನು ಹೊರತರುತ್ತಿರುವುದು ನಮಗೆಲ್ಲ ಅತೀವ ಸಂತೋಷವನ್ನುಂಟುಮಾಡಿದೆ. ಚಂದ್ರವ್ವ ಎಂಬ ಕಥೆಗೆ ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿ ವಿಶೇಷ ಬಹುಮಾನವನ್ನು ಪಡೆದುಕೊಂಡು ಬಂದು ನಮ್ಮ ಕನ್ನಡ ಕಂಪನ್ನು ನಾಡಿನಾಚೆಗೂ ಪಸರಿಸಿದ ಚೈತನ್ಯವಿದು. ಐದುವರೆ ವರ್ಷಗಳ ಕಾಲ ನಮ್ಮೊಡಗೂಡಿ ಕನ್ನಡ ಸಾಹಿತ್ಯ ಪರಿಷತ್ತು ರೋಣ-ಗಜೇಂದ್ರಗಡ ತಾಲೂಕ ಘಟಕದ ಅವಿಭಾಜ್ಯ ಅಂಗವಾಗಿ ಕಾರ್ಯವನ್ನು ನಿರ್ವಹಿಸಿದ್ದು
ಈ ಕಥಾಸಂಕಲನದ ಮೂಲಕ ನಾಡು ಮೆಚ್ಚುವ ಅದ್ಭುತ ಕಥೆಗಾರನಾಗಿ ಸಾಹಿತ್ಯ ಲೋಕಕ್ಕೆ ಪರಿಚಿತವಾಗಿ ಅವರು ಊರಿನ ಅಭಿನವ ಬೇಂದ್ರೆಯಾಗಿ ಬೆಳೆಯಲಿ ಎಂಬುದೆ ನನ್ನ ಹಾಗೂ ನಮ್ಮ ಕಸಾಪ ಬಳಗದ ಸದಸ್ಯರೆಲ್ಲರ ಸದಾಶಯ.
ಈಶ್ವರಪ್ಪ ಎ. ರೇವಡಿ
ಶಿಕ್ಷಕರು, ನಿಕಟಪೂರ್ವ ಅಧ್ಯಕ್ಷರು
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ
ರೋಣ-ಗಜೇಂದ್ರಗಡ
.
No comments:
Post a Comment