Wednesday, October 4, 2023

ಲೇಖಕರ ನುಡಿ


'ಕಥೆ' ಈ ಒಂದು ಶಬ್ದ ಬಾಲ್ಯದಿಂದಲೂ ನನಗೆ ಬಹಳಷ್ಟು ಅಪ್ಯಾಯಮಾನವಾದಂತಹದ್ದು ಒಂದು ರೀತಿಯಲ್ಲಿ ಇಲ್ಲಿಯವರೆಗೂ ಜೀವಾಮೃತವನ್ನೆ ಉಣಿಸಿಕೊಂಡೆ ಬಂದಿದೆ ಎನ್ನಬಹುದು ಅಷ್ಟರಮಟ್ಟಿಗೆ ನನ್ನನ್ನು ಆವರಿಸಿಕೊಂಡಂತಹ ಭಾವ; ನಮ್ಮ ಮನೆಯಲ್ಲಿ ಅಷ್ಟೇ ಏನು, ನಮ್ಮ ವಂಶಸ್ಥರಲ್ಲಾಗಲಿ, ದೂರದೂರದ ಸಂಬಂದಗಳಲ್ಲಾಗಲಿ ಯಾರೆಂದರೆ ಯಾರೊಬ್ಬರಿಗೂ ಸಾಹಿತ್ಯದ ಗಂಧ-ಗಾಳಿ ಗೊತ್ತಿರಲಿಲ್ಲ!. ಕೆಲವು ಹಿರಿಕರು ಹೊಟ್ಟೆಪಾಡಿಗಾಗಿ ಹುಟ್ಟೂರನ್ನು ಬಿಟ್ಟು ಹೋದ ಹಾಗೆ ನಮ್ಮ ಹಿರಿಯರು ಹೊಟ್ಟೆ ಪಾಡಿಗಾಗಿಯೆ ಹಳ್ಳಿಯನ್ನು ಬಿಟ್ಟು ಊರೂರು ಅಲೆದು ಗಜೇಂದ್ರಗಡದಲ್ಲಿ ನೆಲೆಯೂರಲು ಆಯ್ಕೆ ಮಾಡಿಕೊಂಡ ಕೆಲಸವೆಂದರೆ ಚಹಾದಂಗಡಿ. ಅಪ್ಪ-ಅವ್ವ ಬೆಳಿಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಎಂಟರವರೆಗೂ ಬಿಡುವಿರದೆ ದುಡಿಯುತ್ತಿದ್ದರು ನಾವೊ ಉಂಡಿದ್ದು-ಆಡಿದ್ದು ಸರಿ. ಓದಿದ್ದು?- ಬರೆದಿದ್ದು? ಇಲ್ಲಿಯೆ ನೋಡಿ ದೊಡ್ಡ ಸಮಸ್ಯೆ. ಮನೆಯಲ್ಲಿ ಬೇರೆ ಯಾರು ವಿದ್ಯಾವಂತರಿರಲಿಲ್ಲ ಏನು ಬರೆದೆ? ಏನು ಓದಿದೆ?, ಮುಂದಿನ ಭವಿಷ್ಯವೇನು? ಇಂತಹುದನೆಲ್ಲ ವಿಚಾರಿಸಿ, ಸರಿದಾರಿಗೆ ಅಂದರೆ ನೌಕರಿ ಸೇರಲು/ತನ್ನ ಕಾಲಿನ ಮೇಲೆ ತಾನು ನಿಂತು ದುಡಿಯುವಂತಹ ಕೌಶಲ್ಯ ತರಬೇತಿಯ ಯಾವ ಯಾವ ಕೋರ್ಸ್‌ಗಳನ್ನು ಮಾಡಬೇಕು ಮತ್ತು ಹೇಗೆ ಪರೀಕ್ಷೆಗಳನ್ನು ಎದುರಿಸಬೇಕು ಎಂಬಿತ್ಯಾದಿ ವಿಷಯಗಳನ್ನು ಹೇಳುವರಾರು ಇರಲಿಲ್ಲ ಹೀಗಾಗಿ ಈ 'ಕಥೆ' ಎನ್ನುವ ಪದ ಆಗ ನನ್ನನ್ನು ಬಹಳಷ್ಟು ಆಳವಾಗಿ... ಅಂದರೆ ಹೇಗೆ ಹೇಳಬೇಕೆಂದರೆ ತಾಯಿ ಅಕ್ಕಮಹಾದೇವಿಯ ಎದೆಯಾಳದಲ್ಲಿ ಬೇರೂರಿದ ಚೆನ್ನಮಲ್ಲಿಕಾರ್ಜುನನಂತೆ ಈ ವಿಷಯವು ಬೇರೂರಿಬಿಟ್ಟಿತು. ಮುಖ್ಯವಾಗಿ ಆಗೆಲ್ಲ ನನ್ನನ್ನು ಚಹಾದಂಗಡಿಯ ಹುಡುಗನೆಂದೆ ಗುರುತಿಸುತ್ತಿದ್ದರು. ಒಂಥರಾ ಕಿಳರಿಮೆಯ ಭಾವ, ತಾತ್ಸರತೆಯ ನೋಟ, ಗುರುತಿಸಿಕೊಳ್ಳಲು ಹೋರಾಡುವಾಗಲೂ ತುಳಿತ, ಚಿತ್ರಕಲೆಗೆ ಕೈ ಹಾಕಿದೆ ಇದೇನು ಹೊಟ್ಟಿಗೆ ಅನ್ನ ಹಾಕುತ್ತದೇನಯ್ಯ ಎಂದರು, ಚೆಸ್ - ಟೆನಿಕ್ವಾಯಿಟ್ ಆಟಗಳಲ್ಲಿ ಗಜೇಂದ್ರಗಡದ ಪ್ರತಿನಿಧಿಯಾಗಿ ಧಾರವಾಡ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಅರ್ಹತೆ ಅಲ್ಲದೆ ಕೊನೆಕೊನೆಗೆ ಹೋಗುವುದು ಖಚಿತವೆಂದು ತಿಳಿಸಿ ಕೊನೆಯ ಕ್ಷಣದಲ್ಲಿ ಆ ಅವಕಾಶವನ್ನು ಕಸಿದುಕೊಂಡು ಮುಂದಿನ ಸಲ ನೋಡೋಣ ಬಿಡಯ್ಯ ಎಂಬ ಉದಾಸೀನ ಉತ್ತರ ಯಾವಾಗಲೂ ನನ್ನ ಪಾಲಿಗಿರುತ್ತಿತ್ತು. ಇಂತಹ ಹೇಳಿಕೊಳ್ಳಲಾರದಂತಹ ಅವಮಾನ, ಈ ಗುರುತಿಸಿಕೊಳ್ಳುವಿಕೆ ಎಂಬುದೊಂದು ನನ್ನೊಳಗೆ ಒಂಥರಾ ಯಾರಲ್ಲೂ ಹೇಳಿಕೊಳ್ಳಲಾರದಂತಹ ಕಸಿವಿಸಿ, ಸಂಕಟವಾಗುತ್ತಿತ್ತು. ಇದರಿಂದ ಹೊರಬರಲು ಪಟ್ಟ ಹಲವಾರು ಪ್ರಯತ್ನಗಳಲ್ಲಿ ಈ ಬರಹವು ಒಂದು. ಆದರೆ ಬೆಳೆಯುತ್ತ.. ಬೆಳೆಯುತ್ತ ಬಂದಂತೆಲ್ಲ ಬದುಕಿಗೆ ಕೀಳರಿಮೆ, ಅಹಸ್ಯವೇನಿಸುವಿಕೆ, ಗುರುತಿಸುವುದಿರುವಿಕೆ ಇವೆಲ್ಲದಕ್ಕೂ ಮೀಗಿಲಾಗಿ ಹಸಿವೊಂದಿತ್ತು... ಬಾಳಿನ ಹಸಿವು ಎಲ್ಲವನ್ನು ಕಸಿದುಕೊಂಡುಬಿಟ್ಟಿತ್ತು, ಅದರಲ್ಲೂ ನಮ್ಮ ಗಜೇಂದ್ರಗಡದಂತಹ ವಾಣಿಜ್ಯ ನಗರದಲ್ಲಿ ಕಲೆ-ಸಾಹಿತ್ಯ-ಸಾಂಸ್ಕೃತಿಕ ವಿಷಯಕ್ಕೆ ಅಷ್ಟೊಂದು ಪ್ರಾಮುಖ್ಯತೆಯನ್ನು ಕೊಡುತ್ತಿರಲಿಲ್ಲ ಶಾಲೆಯ ಗೋಡೆಯ ಮೇಲೆ ನೀತಿ ಕಥೆಯ ಹೇಳುವ ತೈಲವರ್ಣ ಚಿತ್ರಗಳು, ಜಾಲಿಹಾಳ ಸರ್ ಕೈಯಲ್ಲಿ ಆಕಳದ ಗೆಜ್ಜೆಯನ್ನು ಕಟ್ಟಿ, ತಾಳಕ್ಕೆ ತಕ್ಕಂತೆ ಟೇಬಲ್ ಗೆ ಕುಟ್ಟುತ್ತಾ 'ಧರಣಿ ಮಂಡಲ ಮಧ್ಯದೊಳಗೆ' ಎಂಬ ಹಾಡನ್ನು ಮಣ್ಣಿನಲ್ಲಿ ಮಣ್ಣಾಗುವವರೆಗೂ ಎದೆಯಲ್ಲಿ ಜೀವಂತಿಕೆಯಿಂದ ತುಳುಕುವಂತೆ ಹಾಡಿ- ಹಾಡಿಸಿದ ಜನಪದ ಗೀತೆ ಅಲ್ಲದೆ ಟೋಪಿ ಮಾರುವವ ಮತ್ತು ಮಂಗ, ಮೊಸಳೆ ಮತ್ತು ಮಂಗ, ಬೆಕ್ಕು ಮತ್ತು ಮಂಗ, ಹಾಲು ಮಾರುವವ, ಮೊಲ ಮತ್ತು ಆಮೆ ಹೀಗೆ ಹತ್ತು ಹಲವಾರು ಕಥೆಗಳು ಬದುಕಿಗೆ ಬೇಕಾದಂತಹ ನೈತಿಕತೆ ಹಾಗೂ ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳಲು, ಮಾರ್ಗದರ್ಶಕವಾಗಿಯೂ ಪ್ರೇರಣೆಯಾಗಿದ್ದವು.

  ಇದೀಷ್ಟು ಪೀಠಿಕೆಯನ್ನು ಏಕೆ ಕೊಟ್ಟೆನೆಂದರೆ, ಈಗ ರಾಶಿ ರಾಶಿಗಟ್ಟಲೆ ಹರಿದು ಬರುತ್ತಿರುವ ಸಾಹಿತ್ಯದಲ್ಲಿ ಏನಿದೆ? ಓದಿದರೆ ಏನು ಪ್ರಯೋಜನವಿದೆ? ಯಾವ ದಿಕ್ಕಿನಲ್ಲಿ ನಮ್ಮನ್ನು ಕೊಂಡೊಯ್ಯುತ್ತದೆ? ನಮ್ಮೊಳಗೆ ಯಾವ ಮೌಲ್ಯವನ್ನು ಕಟ್ಟಿಕೊಡುತ್ತದೆ? ಸಮಾಜದಲ್ಲಿ ಬದುಕಲು ಹೇಗೆ ಪ್ರೇರಿಪಿಸುತ್ತದೆ? ಬದುಕಿಗೊಬ್ಬ ಮಾದರಿ ಮನುಷ್ಯನನ್ನಾಗಿಸಿ ರೂಪಗೊಳಿಸಲು ಎಷ್ಟೊಂದು ಬಲವನ್ನು ತುಂಬುತ್ತದೆ? ಒಂದೇ... ಎರಡೇ... ಹೀಗೆ ಕೆದಕುತ್ತಾ ಹೋದಂತೆ ನಮಗೆ ನಿರಾಶೆ ಭಾವವೊಂದನ್ನು ಬಿಟ್ಟು ಮತ್ತಿನ್ನೇನು ದೊರಕದು. ಪದಕ್ಕೆ ಪದ ಪೋಣಿಸಿ ಕವಿತೆಯೆಂದರು, ಸಾಲಿಗೆ ಸಾಲು ಸೇರಿಸಿ ಕಥೆ ಎಂದರು, ಪುಟಕ್ಕೆ-ಪುಟ ಜೋಡಿಸಿ ಕಾದಂಬರಿ ಎಂದರು, ಸರಿ ಎಂದರು ಹಿಂಬಾಲಕರು, ಬಹುಪರಾಕ್ ಹಾಕಿದರು ಬಾಯಿ ಬಡುಕರು. ಇಂತಹ ಪುಸ್ತಕಗಳಿಂದ/ವಿಷಯಗಳಿಂದ  ಸ್ವಾಭಿಮಾನವಿಲ್ಲದ ಓದುಗರನ್ನು ಸೃಷ್ಟಿಸುತ್ತಾ ಸಾಗುತ್ತಿದ್ದೇವೆ.
ಹೀಗಾದರೆ.. ಮುಂದಿನ ಪೀಳಿಗೆ ನಮ್ಮನ್ನು ಬಿಡಿ ಬೇಂದ್ರೆ-ಕುವೆಂಪು ಅಂಥವರನ್ನೆ ಮರೆತುಬಿಡುತ್ತಾರೆ. ನಮ್ಮ ಓದು ಮತ್ತು ಬರಹ ಇಂದಿನ ವಾಸ್ತವಿಕತೆಯನ್ನು ಮುಂದಿನ ತಲೆಮಾರಿಗೆ ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಡುವಂತಹ ವಿಷಯವಾಗಿರಬೇಕು, ಓದುಗ ಪುಸ್ತಕವನ್ನು ಓದುತ್ತಾ ಹೋದಂತೆ ಮಗ್ನನಾಗಬೇಕು, ಭಾವಪರವಶಗೊಳ್ಳಬೇಕು, ಅಳಬೇಕು, ನಗಬೇಕು, ಉತ್ಸಾಹಿತನಾಗಿ ಆ ಕಥೆಯ/ಕಾದಂಬರಿಯ ನಾಯಕ/ಕಿಯು ಅವನ ಬದುಕಿನಲ್ಲಿ ತಿರುವನ್ನು ತಂದುಕೊಡಬೇಕು, ಕಾಡುಮೃಗದಂತಹ ಮನಸ್ಸಿನವರು ಹೂವಾಗಿ ಅರಳಬೇಕು, ಹುಟ್ಟುತ್ತಾ ಯಾರು ಒಳ್ಳೆಯವರು ಆಗಿರುವುದಿಲ್ಲ, ಕೆಟ್ಟವರು ಆಗಿರುವುದಿಲ್ಲ ಕಾಲ, ಸಮಯ, ಸಂದರ್ಭಗಳು ಒಳ್ಳೆಯವನನ್ನು - ಕೆಟ್ಟವನನ್ನಾಗಿಸುತ್ತದೆ, ಕಟುಕರನ್ನು- ಸಾಧುವಿರಂತೆ ಮಾಡುತ್ತವೆ. ಹಾಗಂತ ನಾವು ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ ಈ ಭೂಮಿಯಲ್ಲಿ ಹುಟ್ಟಿದಂತಹ ಪ್ರತಿಯೊಂದು ಜೀವಿಗೂ ಒಂದಲ್ಲ ಒಂದು ದಿನ ಒಂದು ತಿರುವು ಬಂದೆ ಬರುತ್ತದೆ ಆ ತಿರುವನ್ನು ಹೇಗೆ ತನಗೆ ಲಾಭವನ್ನಾಗಿಸಿಕೊಂಡೊ/ಬಳಸಿಕೊಳ್ಳುತ್ತಾನೋ ಅದರ ಮೇಲೆ ಅವನ ಮುಂದಿನ ಭವಿಷ್ಯ ನಿರ್ಧಾರಗೊಳ್ಳುತ್ತದೆ.
ಬರಹ ಸಮಾಜಕ್ಕೆ ಹೊರೆಯಾಗದೆ ಓದುಗನ ಅಂತಃಕರಣವನ್ನು ಜಾಗೃತಿಗೊಳಿಸಿದರೆ ಸಾಕು! ಅರ್ಧ ಊರು, ದೇಶ ನಿಶ್ಚಿಂತೆಯಿಂದ ಉಸಿರಾಡಿದಂತೆ.

ಬದುಕು ಹೇಗೆ? ಯಾವಾಗ? ಎಲ್ಲಿಗೆ ತಂದು ನಿಲ್ಲಿಸುತ್ತದೇಯೊ ಅರಿವಾಗುವುದೇ ಇಲ್ಲ! ಎರಡು ಸಾಲುಗಳನ್ನು ಬರೆಯುತ್ತಿದ್ದವನನ್ನು ಧೀರ್ಘ ಕವನ, ಚುಟುಕು, ಕಾದಂಬರಿ, ಶಾಯರಿ, ಕಜಲ್ ಗಳನ್ನು ಬರೆಯುವಂತೆ ಪ್ರೇರೆಪಿಸಿದ ನಮ್ಮ ನಿಕಟಪೂರ್ವ ಕ.ಸಾ.ಪ.ದ ಸಾಹಿತ್ಯ ಬಳಗಕ್ಕೂ, ನಿಕಟಪೂರ್ವ ಅಧ್ಯಕ್ಷರು ಆದಂತಹ ಶ್ರೀಯುತ ಐ.ಎ.ರೇವಡಿ. ಶಿಕ್ಷಕರು ಇವರಿಗೆ ಮತ್ತು ಮುಖ್ಯವಾಗಿ ದಾರವಾಡದ ಮೌನಿ ಎಂ.‌ಧಾರವಾಡ ಇವರು ಮುಂಬೈನ ಡೊಂಬಿವಿಲಿಯಲ್ಲಿ ಆಯೋಜಿಸಿದ್ದಂತಹ ರಾಷ್ಟ್ರ ಮಟ್ಟದ ಕಥಾ ಸ್ಪರ್ಧೆಯಲ್ಲಿ ನನ್ನ ಚೊಚ್ಚಲ ಅಂದರೆ ಇದೆ ಸ್ಪರ್ಧೆಗಾಗಿ ಬರೆದಂತಹ ಮೊದಲ ಕಥೆ 'ಚಂದ್ರವ್ವ' ಕಥೆಗೆ ವಿಶೇಷ ಬಹುಮಾನವನ್ನು ನೀಡುವ ಮೂಲಕ ಮತ್ತಷ್ಟು ಕಥೆಗಳ‌ನ್ನು ಬರೆಯಲು ದಾರಿಮಾಡಿಕೊಟ್ಟರೆಂದರೆ ತಪ್ಪಾಗಲಾರದು ಹಾಗೂ ಗುರುರಾಜ್ ಎಲ್. ಶ್ರೀಮತಿ ಗೀತಾ ಶ್ರೀಧರ ಯಾಳಗಿ, ಚಂದ್ರಶೇಖರ ಮಾಡಲಗೇರಿ ಇನ್ನೂ ಹಲವರು ನನ್ನ ಕಥಾಯಾನಕ್ಕೆ ಸಾಥ ನೀಡಿದಂತವರಿಗೂ ಹಾಗೂ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿ - ತಾಲೂಕ ಘಟಕ ಗಜೇಂದ್ರಗಡದ ಅಧ್ಯಕ್ಷರು - ಸದಸ್ಯರುಗಳಿಗೆಲ್ಲರಿಗೂ, ಮುಖಪುಟದ ಎಲ್ಲ ಸಹೃದಯಿಗರೆಲ್ಲರಿಗೂ ಈ ಅಕ್ಷರ ಬಡವನಿಂದ ಅನಂತ... ಅನಂತ.. ಪ್ರಣಾಮಗಳು.

  ಕೊನೆಯದಾಗಿ ಈ ಎರಡು ತಿಂಗಳ ಹಿಂದೆಯೆ ಈ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ್ದರೆ ಅದು ನಮ್ಮ ದಿ. ಶ್ರೀ ಈಶ್ವರಪ್ಪ ಎ. ರೇವಡಿ ಇವರ ಕೈಯಿಂದಲೆ ನೆರವೇರಿರುತ್ತಿತ್ತು. ಅವರ ಅಕಾಲಿಕ ಅಗಲಿಕೆಯಿಂದಾಗಿ ನಮ್ಮ ಭಾಗದ ಸಾಹಿತ್ಯವಷ್ಟೆ ಅಲ್ಲ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ವರ್ಗಕ್ಕೆ ಅಪಾರವಾದ ತುಂಬಲಾರದಂತಹ ನಷ್ಟವನ್ನು ಅನುಭವಿಸುತ್ತಿದ್ದೇವೆ. ಈ ನೋವು ಮಾತ್ರ ಶಾಶ್ವತ....

No comments:

Post a Comment