ಇನ್ನೂ ಇವರ ಕಥಾ ಸಂಕಲನದ ಬಗ್ಗೆ ಹೇಳಬೇಕೆಂದರೆ ಅಥವಾ ವಿಮರ್ಶಿಸಬೇಕೆಂದರೆ ನನಗಂತೂ ಸುಲಿದ ಬಾಳೆ ಹಣ್ಣಿದ್ದ ಹಾಗೆನೆ. ಸಾಹಿತ್ಯ ಪ್ರಕಾರದ ಯಾವುದೇ ವಿಷಯವಿರಲಿ ಅಂದರೆ ಅದು ಬರೆಯುವುದೆ ಇರಲಿ ಇಲ್ಲವೆ ಓದುವುದೆ ಇರಲಿ ಅದರಲ್ಲೂ ಸಾಹಿತ್ತಿಕ ಹೊಸ ಪ್ರಕಾರಕ್ಕೆ ಕೈ ಹಾಕುವ ಮುನ್ನವಂತೂ ನಮ್ಮಿಬ್ಬರ ನಡುವೆ ಸಾಕಷ್ಟು ಚರ್ಚೆಗಳು ನಡೆದೆ ನಡೆಯುತ್ತಿರುತ್ತವೆ. ನಮ್ಮವ್ವ ಕವನ ಸಂಕಲನದ ನಮ್ಮವ್ವ ಎಂಬ ಕವನಗಳು, ಚೌಕಟ್ಟಿನ ಬಂಧವೇಕೆಂದು ಗಜಲ್ ಪೂರಕವಾಗಿ ಕಜಲ್, ಸಾಕಿಯ ಪ್ರತಿರೂಪವಾಗಿ ರಂಗೀ, ಹೀಗೆ ಹತ್ತು ಹಲವಾರು ಪ್ರಾಯೋಗಿಕ ಸಾಹಿತ್ಯದ ಕೃಷಿಯನ್ನು ಕೈಗೊಂಡಿದ್ದಾರೆ. ನನಗಿನ್ನು ಚೆನ್ನಾಗಿ ನೆನಪಿದೆ ನಾನು ಉಡುಪಿಯಲ್ಲಿ ನನ್ನ ಗೆಳೆಯನೊಂದಿಗೆ ಬೈಕನಲ್ಲಿ ಹೋಗುತ್ತಿರಬೇಕಾದರೆ ಅಪಘಾತವಾಗಿ, ಮನೆಯಲ್ಲಿ ಆರಾಮನ್ನು ತೆಗೆದುಕೊಳ್ಳುತ್ತಿದ್ದಂತಹ ಸಂದರ್ಭದಲ್ಲಿ, ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿ ಕರೆದಿದ್ದಂತಹ ರಾಷ್ಟ್ರಮಟ್ಟದ ಕಥಾ ಸ್ಪರ್ದೆಯಲ್ಲಿ ಭಾಗವಹಿಸುವಿಕೆ ಹಾಗೂ ಅದಕ್ಕೆಂದೆ ಕೇವಲ ಚಂದ್ರವ್ವ ಎಂಬ ಕಥೆಯ ಅಂತ್ಯದ ಎಳೆಯನ್ನು ಹೇಳಿದಾಗ ನನಗೆ ಕ್ಷಣ ಶಾಕ್ ಆಯಿತು. ಕೇವಲ ದೀರ್ಘ ಕವನ, ಚುಟುಕು, ಶಾಯರಿಗಳನ್ನು ಬರೆಯುತ್ತಿದ್ದವರು ಇಂದು ಕಥೆಗಾರನಾಗಿ ನನ್ನ ಮುಂದೆ ಕುಳಿತಿರುವುದನ್ನು ಕಂಡು ಇವರೊಳಗಿರುವ ಆ ಸಾಹಿತ್ಯದ ಬಗೆಗಿನ ಸೆಳೆತ, ಮೋಹ, ಶ್ರದ್ಧೆ, ತಾಳ್ಮೆ ಎಂತಹದ್ದೆಂದು ನನಗರಿವಾಯಿತು. ಆಗ ನಾನು ಇದು ಹೀಗೆ ಬರಲಿ ಎಂದು ಸೂಚಿಸಿದ್ದೆ ಕೂಡ, ಆ ಕಥೆಯನ್ನು ಬರೆಯಲಾಯಿತು, ಕಳುಹಿಸಿಯು ಆಯಿತು; ಅಲ್ಲಿ ವಿಮರ್ಶಕರ ಮೆಚ್ಚುಗೆಗೆ ಆಯ್ಕೆಯಾಗಿ ವಿಶೇಷ ಬಹುಮಾನವನ್ನು ಪಡೆದುಕೊಂಡದ್ದು ಇವರ ಮುಂದಿನ ಹಲವಾರು ಕಥೆ, ಕಾದಂಬರಿಗಳಿಗೆ ಪ್ರೇರಣೆಯಾಯಿತು ಎಂದರೆ ಸುಳ್ಳಲ್ಲ, ಆಗಿನ್ನು ಇವರು ಕಾದಂಬರಿಕಾರರಾಗಿರಲಿಲ್ಲ. ಅದಕ್ಕೂ ಬಹಳ ದಿನಗಳನ್ನೇನು ತೆಗೆದುಕೊಳ್ಳಲಿಲ್ಲ, ಇವರೊಳಗಿನ ಸಾಹಿತ್ಯದ ತುಡಿತ ಎಷ್ಟಿತ್ತೆಂದರೆ ನಿರ್ಣಯ ಎಂಬ ಕಾದಂಬರಿಯನ್ನು ಕೇವಲ ಆರು ತಾಸುಗಳಲ್ಲಿ ಬರೆದು ಕೊಟ್ಟದ್ದು ನನಗಿನ್ನು ಆಶ್ಚರ್ಯವಾಗಿಯೆ ಕಾಡುತ್ತಲಿದೆ. ಇರಲಿ ಇತ್ತ ಕಥಾ ಸಂಕಲನದ ಬಗ್ಗೆ ನಾವು ನೋಡುವುದಾದರೆ, ಏನು ಕಥೆಗಳು ? ಏನನ್ನು ಹೇಳುತ್ತವೆ, ಓದುಗನನ್ನು ಯಾವ ದಿಕ್ಕಿಗೆ ತಂದು ನಿಲ್ಲಿಸುತ್ತವೆ ಎಂಬಿತ್ಯಾದಿ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ. ಕಥಾ ಸಂಕಲನದಲ್ಲಿ ಒಂದೊಂದೆ ಕಥೆಗಳನ್ನು ಓದುತ್ತಾ ಹೋದಂತೆ ಕೌಟುಂಬಿಕ, ಸಾಮಾಜಿಕ, ರಾಜಕೀಯ, ಅಪರಾಧ, ಅಸಹಾಯಕತೆ, ಬದುಕಿನ ಗುರಿ, ಹುಟ್ಟಿದ ಜೀವದ ಸಾರ್ಥಕತೆ ಹೀಗೆ ಹತ್ತು ಹಲವಾರು ವಿಷಯಗಳನ್ನು ನಮಗೆ ಮನನವನ್ನು ಮಾಡಿಸುತ್ತಾ ಸಾಗುತ್ತವೆ. ಎಲ್ಲ ಕಥೆಗಳ ಒಳ ಹೂರಣವನ್ನು ನಾನಿಲ್ಲಿ ಬಡಿಸುತ್ತ ಸಾಗುವುದಿಲ್ಲ, ಒಬ್ಬೊಬ್ಬ ಓದುಗನಲ್ಲೂ ಒಂದೊಂದು ಮನಸ್ಥಿತಿ ಇರುತ್ತದೆ, ಆಯಾ ಕಥೆ, ಸನ್ನಿವೇಶ, ಸಂಭಾಷಣೆ, ಪಾತ್ರಗಳು ಓದುಗನ ಎದೆಯಲ್ಲಿ ಅಚ್ಚಳಿಯದೆ ಉಳಿದು ಹೋಗುತ್ತವೆ. ಓದು ಓದುಗರ ಬಾಳಿನ ಹಾದಿಗೆ ಬೆಳಕಾಗಬೇಕು, ಮಾರ್ಗದರ್ಶಕವಾಗಬೇಕು, ಗುರುವಾಗಬೇಕು, ನಿರ್ದೇಶಿಸಬೇಕು ಎಲ್ಲದಕ್ಕೂ ಮೊದಲಾಗಿ ಅವರಲ್ಲಿ ಮನುಷ್ಯತ್ವ, ಮಾನವಿಯತೆ, ಕರುಣೆ, ಅನುಕಂಪ, ತ್ಯಾಗದೊಂದಿಗೆ ಮಾನವನನ್ನಾಗಿಸಬೇಕು. ಅದು ಪ್ರತಿಯೊಬ್ಬ ಲೇಖಕರ/ಕಿಯರ ಸಿದ್ಧಾಂತವಾಗಬೇಕು, ಬರಹ ಕೇವಲ ಜನರ ಭಾವನೆಗಳನ್ನು ಕೆರಳಿಸುತ್ತ, ಮುಖಕ್ಕೆ ಮಸಿ ಬಳಿಯುತ್ತ, ಬೆಳೆಯುತ್ತ ಸಾಗುವುದು ಸಾಹಿತ್ಯದ ಭಾಗವಾಗಬಾರದು. ಮತ್ತು ಇನ್ನೊಂದು ಮುಖ್ಯ ಅಂಶವೆನೆಂದರೆ ಅವರು ಈ ನೆಲದ ಘಮಲನ್ನು ಎತ್ರಿ ಹಿಡಿದಿರುವುದು; ಕಥೆಗಳನ್ನು ಸಾಹಿತ್ತಿಕ ಭಾಷೆಯಲ್ಲಿ ವಿಸ್ತರಿಸುತ್ತ ಸಾಗಿ ಪಾತ್ರಗಳ ಸಂಭಾಷಣೆಯನ್ನು ಆಡು ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ, ಈಗೀನ ಕಾಲಘಟ್ಟಕ್ಕೆ ಇದು ಅತ್ಯವಶ್ಯವು ಕೂಡಾ. ಹೊಟ್ಟೆಪಾಡಿಗಾಗಿ ಆಂಗ್ಲ ಭಾಷೆಯ ಮೊರೆಹೋಗಿ ಮಾತೃಭಾಷೆಯ ಕಡೆಗಣನೆಯು ಹೆಚ್ಚಾಗುತ್ತ ಸಾಗಿದೆ. ಇತ್ತಿತ್ತಲಾಗಿ ಕೆಲವೊಂದು ಆಡು ಭಾಷೆಯ ಪದಗಳೆ ಅಳಿದು ಹೋದಂತಿವೆ ಮತ್ತು ಮರೆತು ಹೋಗುತ್ತಿದ್ದೇವೆ ಕೂಡ, ಅದರ ಮರುಬಳಕೆ ಹಾಗೂ ಮುಂದಿನ ಪೀಳಿಗೆಗೆ ಶಬ್ದ ಸಂಗ್ರಹದ ಅವಶ್ಯಕತೆಯೂ ಬಹಳಷ್ಟಿದೆ ಈ ನಿಟ್ಟಿನಲ್ಲಿ ಇವರ ಪ್ರಯತ್ನ ಶ್ಲಾಘನೀಯ
No comments:
Post a Comment