Saturday, December 30, 2017

ಹರೆಯ ಜಾರುವ ಮುನ್ನ.....

ಮತ್ತೀಳಿಯುವ ಮೊದಲೆ....
ಸವಿ ಮುತ್ತೊಂದನು....ನೀಡಿಬಿಡು..
ಚಳಿ ತೊರೆಯುವ ಮುನ್ನವೆ...
ಈ ದೇಹವ ಅಪ್ಪಿ...ಬೆಚ್ಚಗಾಗಿಸಿಬಿಡು

ಹರೆಯ ಜಾರುವ ಮುನ್ನ....
ಹಿಂಡಿಬಿಡು ಈ ಕಬ್ಬಿನಾ....ಜಲ್ಲೆಯನು
ಸಿಹಿ ಮಾಸುವ ಮುನ್ನ...
ಹೀರಿಬಿಡು ಕೆಂದುಟಿಯೊಳಗಿನ ಗಂಧವನು

ತಾಳಲಾಗದಿನ್ನು....ನನ್ನಿಂದ ಮಾಗಿಯ ಕೊರೆತ
ತೊರೆಯಲು...ಬಿಡಗೊಡುತಿಲ್ಲ ನಿನ್ನೊಲವಿನಾ ಸೆಳೆತ
ಎದೆಯ ಮೇಲೊರಗಿ ಕೇಳೊ ನನ್ನೆದೆಯ ಬಡಿತ
ಪ್ರತಿ ಬಡಿತದೊಳಡಗಿದೆ ನಿನ್ನದೆ....ಹೆಸರಿನಾ... ಮಿಡಿತ

ಕತ್ತಲಿಗೂ... ನಾಚಿಕೆಯ ತರೀಸಬೇಕಿಂದು ನಾ,
ನಿನ್ನ ತೋಳೊಳಗೆ ಬಂಧಿಯಾಗಿ....
ಚಂದ್ರನ ಹಾಲ್ಬೆಳದಿಂಗಳಿಗೂ... ಹೊಟ್ಟೆ ಕಿಚ್ಚನು
ಹೊತ್ತಿಸಬೇಕು, ನಿನ್ನೊಳು ನನ್ನೆಯ ಸಿರಿಯು ಸೊರೆಯಾಗಿ

ಪ್ರೇಮೊನ್ಮಾದದಿ ಉಸಿರಿದ ಬಿಸಿಯುಸಿರಿಗೆ,
ಕರಗಲಿ ಉಕ್ಕಿದ ಬೆವರು ಆವಿಯಾಗಿ....
ಕುಂಕಮವು ಕರಗಿ, ಸುಮಗಳೆಲ್ಲವ ಹೊಸಕಿ
ಉಳಿಯಲಿದು ಇರುಳು ಎಂದೆಂದು ನೆನಪಾಗಿ...

ಬಾರೊ....ಮನ್ಮಥ ಈ ಹುಣ್ಣಿಮೆಗೆ, ವಿರಹವೆಂಬ
ಅಮವಾಸೆಯ ಕತ್ತಲು ಅಪ್ಪುವ ಮುನ್ನ..
ಚಪ್ಪರಿಸಿ ಸವಿಯ ಬಾರೊ...ಬಾಳಿನ ತೊಟ್ಟಿಂದ,
ಹರೆಯವೆಂಬ ಈ ಹಣ್ಣು ಉದುರುವ ಮುನ್ನ...

Thursday, December 28, 2017

ಪ್ರೂಫ್

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ರೋಣ
ಕ.ಸಾ.ಪ ತಾಲೂಕ ಘಟಕ ಗಜೇಂದ್ರಗಡ ಇವರ ಸಂಯುಕ್ತಾಶ್ರಯದಲ್ಲಿ ೮೦ ನೇ ವಾರದ ಸಾಹಿತ್ಯ ಚಿಂತನಾಗೋಷ್ಠಿ ನಡೆಯಲಿದ್ದು ಅಧ್ಯಕ್ಷತೆ ಶ್ರಿ ಆಯ್. ಎ. ರೇವಡಿ ಅಧ್ಯಕ್ಷರು ಕ.ಸಾ.ಪ. ರೋಣ. ವಿದ್ಯಾದರ್ ಮುತಾಲಿಕ್ ದೇಸಾಯಿ. ವಿದ್ಯಾದರ ಕನ್ನಡ ಪ್ರತಿಷ್ಠಾನ (ಠಾಕುರ್ಲಿ-ಠಾಣೆ ಮಹಾರಾಷ್ಟ್ರ) ಇವರು ಕಳೆದ ತಿಂಗಳು ಆಹ್ವಾನಿಸಿದ್ದ ರಾಷ್ಟ್ರ ಮಟ್ಟದ ಕಥಾ ಸ್ಪರ್ಧೆಯಲ್ಲಿ ನಮ್ಮೂರಿನವರೆ ಆದ ಶ್ರೀ ಶರಣಪ್ಪ ಕ. ಬೇವಿನಕಟ್ಟಿ ಇವರ "ಚಂದ್ರವ್ವ" ಎಂಬ ಕಥೆಗೆ ವಿಶೇಷ ಪುರಸ್ಕಾರವು ಲಭಿಸಿದ್ದು, ಈ ಒಂದು ವಿಷಯವಾಗಿ "ನಾನು ನನ್ನ ಕಥೆ" ಎಂಬ ವಿಷಯದ ಕುರಿತು ಶ್ರೀ ಶರಣಪ್ಪ ಕ. ಬೇವಿನಕಟ್ಟಿ ಗ.ಗಡ  ಇವರು ಉಪನ್ಯಾಸವನ್ನು ನೀಡುತ್ತಿದ್ದು, ಅತಿಥಿಗಳಾಗಿ ಶ್ರೀ ಬಿ.ಕೆ ಮಾದಿ   ಮತ್ತು ಡಾ|| ಜಗದೀಶ. ಹುಲ್ಲೂರ ಪ್ರಾಧ್ಯಾಪಕರು  ಸ.ಪ್ರ.ದ.ಕಾಲೇಜ್ ಗ.ಗಡ. ಇವರು ಕಥೆಯ ಕುರಿತು ವಿಮರ್ಶಾತ್ಮಕ ನುಡಿಗಳನ್ನು ಆಡಲಿದ್ದು ಕವನ ವಾಚನವನ್ನು  ಕುಮಾರಿ.ಕೆ.ಬಿ.ಮಾಳೋತ್ತರ ವಾಚಿಸಲಿದ್ದು ೧೨ ನೇ ಶತಮಾನದ ಮೊದಲ ವಚನಗಾರ್ತಿಯಾದಂತ ಅಕ್ಕಮಹಾದೇವಿ ಯವರ ಕುರಿತು ಪರಿಚಯದ ನುಡಿಗಳನ್ನಾಡಲಿದ್ದಾರೆ ಕುಮಾರಿ. ಎ.ಟಿ.ಪೋಲಿಸ್ ಪಾಟೀಲ ಇವರುಗಳು ನಡೆಸಿಕೊಡಲಿದ್ದಾರೆ.
ಎಂದಿನಂತೆ ಕಾರ್ಯಕ್ರಮವು ಸಹ ಅಂದರೆ ದಿ.೦೩-೦೨-೨೦೧೮ ಶನಿವಾರದಂದು ಸಂಜೆ, ಸಮಯ ೬.೦೦ ಕ್ಕೆ ಸರಿಯಾಗಿ ಮೈಸೂರು ಮಠದಲ್ಲಿ ನಡೆಯಲಿದೆ ಕಾರಣ ಸಕಲ ಕನ್ನಡದ ಮನಸ್ಸುಗಳು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಎಂದು ವಿನಂತಿಸಿಕೊಳ್ಳುತ್ತಾ ಸರ್ವರಿಗೂ ಹಾರ್ದಿಕ ಸ್ವಾಗತ.

Wednesday, December 27, 2017

ನಾ ಹ್ಯಾಂಗ ಮಾಡ್ಲಿ ?

ಸುಮ್ಕ ಕುಂದ್ರಬ್ಯಾಡ ಹಿಂಗ ನನ್ನೇದುರಿಗೆ
ಎಷ್ಟೊತ್ತಾತು ಕಾಯ್ಲಾಕ ಹತ್ತು ನಿನ್ನ ನಗುವಿಗೆ
ತುರುಬನ್ಯಾಗಿಟ್ಟ ಗುಲಾಬಿ ಹೂವಿಂದ ನಗುನರ
ಕೊಡ್ಸಲೇನ.. ಕಡ ಮಾಡಿ ನಿನ್ನ ತುಟಿಗೆ
ಈ ಮನದಾಗ ಪ್ರೀತಿ ಹಣತೆ ಹಚ್ಚಿ... ಬರಬಾರದ್ಯಾಕ
ನೀನು ಬಲಗಾಲಿಟ್ಟು ನನ್ನ ಹಟ್ಟಿಗೆ

ತುಡ್ಗ ಕಣ್ಣಿಲೆ...ಕಣ್ಣೇತ್ತಿ ಒಮ್ಮೇರ ನೋಡ ನನ್ನ ಕಡಿಗೆ
ಎದೆಯುರಿನರ ಕಡ್ಮೀ.. ಆಗ್ಲಿ ಒಂದ್ಹೊತ್ತಿನ ಮಟ್ಟಿಗೆ
ಪ್ರೀತಿ ಕಲ್ಲ ಎಡವಿ ಬಿದ್ದೇನ ಹುಡುಗಿ... ನಿನ್ನ ಹೆಸರಿನ
ಬೀದಿಗೆ

ಶರಣಾಗದ ಹೊರತು...

ಮನಕೆ ತೊಟ್ಟಿರುವ ನಾನೆಂಬ
ವಸ್ತ್ರವ ವಿವಸ್ತ್ರಗೊಳಿಸಿ ಬಿಡು
ಕಣ್ಣುಗಳಿಗೆ ಮೆತ್ತಿರುವ ಅಹಂ ನ
ಪರದೆಯನು ಕಳಚಿ ನೋಡು

ಎಲ್ಲ ನಿನ್ನಂತವರಿಲ್ಲ, ಒಳಗಣ್ಣ
ತೆರದು ಓದು, ಮೇಲೇರಿದವರದೇಷ್ಟು
ತಲೆಬಾಗಿ ನಡೆಯುತಿಹರು, ಬರೆಯುತಿರುವವರು ನಿನ್ನನೆ ದಿಟ್ಟಿಸಿ
ನೋಡುತಿಹರು

ಮೇಲೆರಿದವರ ಕಾಲೆಳೆಯಬೇಡ
ಹಿಂಬಾಲಕರ, ದಟ್ಟ ಕಾನನದ ಒಂಟಿ
ದಾರಿಯಲಿ ಕೈ  ಬಿಡಬೇಡ
ಪದಪದಗಳು ಅರಳುವವು ನಿನ್ನಂತರಂಗದೊಳು, ಪರರ ನಿಂದಿಸಲು
ಬಳಸಬೇಡ, ಪರರು ಇಲ್ಲದೆ ನಿನ್ನ
ಪದಗಳಿಗೆ ಬೆಲೆಯಿಲ್ಲ

ಹೆಗಲೆರುವುದು ಆಗಾಗ ಯಶಸ್ಸಿನ
ಭಾರ, ಹಿರಿಯರ ಮುಂದೆ ಬಾಗಿ ಬಾಗಿ
ಅರ್ಪಿಸಿಬಿಡು ಅವರ ಪಾದಗಳ ಧೂಳಿಗೆ
ಹಗುರಾಗಿ ಎಲ್ಲರೊಡಗೂಡಿ ಸಾಗಲು
ಅನುವಾಗುವುದು ಆವಾಗ

ನಿನ್ನ ಮನದ ಜ್ಯೋತಿಯ ಇನ್ನೊಬ್ಬರ
ಮನಕೆ ಹಚ್ಚುವ ದೀವಿಗೆಯಾಗಲಿ
ಅವರ ನಡೆದು ಹೋಗುವ ದಾರಿಯ
ಕತ್ತಲನು ಕಳೆಯುವ ಪಂಜಾಗಲಿ
ನಾನೆ ಜ್ಞಾನಿಯಂಬ ಹುಚ್ಚು ಯಜ್ಞದಲಿ
ಸುಟ್ಟು ಕರಕಲಾಗಬೇಡ

ಕಲಿ..ಕಲಿಸು.. ಕಲಿಯುತಿರು
ಬದುಕಿದು ನಿರಂತರ... ನಿನ್ನ
ಬರವಣಿಗೆಯೊಂದೆ ನಿಲ್ಲದಿರಲಿ
ಬರಲಿ ಬದುಕಲಿ ಅದೇಷ್ಟು ಅಂತರ

ನೀ ಜಗಕೆ ಶರಣಾಗದ ಹೊರತು
ನಿನಗೆ ಜಯವಿಲ್ಲ 
🙏🙏🙏🙏🙏🙏🙏🙏🙏🙏

ನಿನ್ನ ನಗುವು ೪೨೪

ನಿನ್ನ ಮರೆತು ನಗಲೆಂದು
ಎಷ್ಟೊ... ಪ್ರಯತ್ನಪಟ್ಟೆ
ಹತಾಶೆನಾದೆ.. ಕಾರಣ
ಅದು ನಿನ್ನ ತುಟಿಯ ಮೇಲೆ
ಕುಣಿಯುತ್ತಿತ್ತು...!!!!!

Thursday, December 14, 2017

ಮಾರು ಹೋಗುವುದು

ಇತ್ತೀಚೆಗೆ...
ಮದಿರೆಯ ಬಟ್ಟಲುಗಳು
ಮತ್ತೇರಿಸುತ್ತಿಲ್ಲ...
ಬಹುಶಃ
ಅವುಗಳು ಅವಳ
ಸೌಂದರ್ಯಕ್ಕೆ...
ಮಾರುಹೋಗಿರಬಹುದೇನೊ..????

ನಮ್ಮವರಾರು....?

ನಮ್ಮರೆಂದು ನೋಡಿದರೆ ಲೆಕ್ಕಹಾಕಿ,
ಯಾರೀಹರು ? ಈ ಜಗದಿ....
ಮೂರು ಪರದೆಗಳ ನಾಟಕದಿ
ಬಂದು ಹೋಗುವ ಪಾತ್ರಗಳ
ನೆನಹುವವರಾರು ?

ನಕ್ಕಾಗ... ನಕ್ಕು ನಲಿದವರು,
ಅತ್ತಾಗ ಕಣ್ಣನೊರೆಸಿ ಸಾಂತ್ವಾನಿಸಿದವರು,
ಸಾಧನೆಯ ಹಾದಿಗೆ ಬೆಳಕಾದವರು,
ಮರೆಯಾಗುವವರೆ.... ಎಲ್ಲ ಹಾದಿಯ ಕೊನೆಗೆ.
ಉಳಿಯುವವರು ಕೇವಲ ನೆನಪಿಗೆ

ಎದೆಯ ಗಟ್ಟಿಗೊಳಿಸಿಕೊಂಡು,
ನಡೆಯಬೇಕಿದೆ ಬಾಳಿನುದ್ದಕು,
ಯಾರಿಲ್ಲದಿದ್ದರೇನು ಜೊತೆಗೆ,
ನೆಮ್ಮದಿಯ ನೀಡುವುದಿಲ್ಲವೆ
ಪುಸ್ತಕಗಳು ನೊಂದ ಮನಕೆ

ನಮ್ಮರೆಂದು ನೋಡಿದರೆ ಲೆಕ್ಕಹಾಕಿ
ಯಾರೀಹರು ? ಈ ಜಗದಿ....
ಮೂರು ಪರದೆಗಳ ನಾಟಕದಿ
ಬಂದು ಹೋಗುವ ಪಾತ್ರಗಳ
ನೆನಹುವವರಾರು ?

ನಕ್ಕಾಗ... ನಕ್ಕು ನಲಿದವರು
ಅತ್ತಾಗ ಕಣ್ಣನೊರೆಸಿ ಸಾಂತ್ವಾನಿಸಿದವರು
ಮರೆಯಾಗುವರೆಲ್ಲ ಹಾದಿಯ ಕೊನೆಗೆ
ಉಳಿಯುವರು ಕೇವಲ ನೆನಪಿಗೆ

ಎದೆಯ ಗಟ್ಟಿಗೊಳಿಸಿಕೊಂಡು, ನಡೆಯಬೇಕಿದೆ
ಬಾಳಿನುದ್ದಕು, ಯಾರಿಲ್ಲದಿದ್ದರೇನು ಜೊತೆಗೆ
ನೆಮ್ಮದಿಯ ನೀಡುವುದಿಲ್ಲವೆ ಪುಸ್ತಕಗಳು ನೊಂದ ಮನಕೆ

Monday, December 11, 2017

ಜಟ್ಟಿ

ಎಷ್ಟರ ತುಂಬ್ಕೊಂಡೀದಿ ನಡ್ಗ್ಯಾಗ ಲಜ್ಜಿ....
ಹೊಸ್ತಿಲ್ನಾರ..ದಾಟ್ಕೊಂಡು ಬಾರ ಕಟಗೊಂಡ
..ನಾ ಕೊಟ್ಟ ಕಾಲನ ಗೆಜ್ಜಿ
ಮುಟ್ಟದಲೇ....ಮುಕ್ಕಿಸಿಬಿಟ್ಟಿಯಲ್ಲಾ... ಈ
ಜಟ್ಟಿನಾ...ಸಣ್ಣ ನಗುವಿಲೆ ಜಜ್ಜಿ
ಹೊಳ್ಳಿ...ಯಾವಾಗ ಬರ್ತೀಯಂತ ಕಾಯ್ಕೊಂತ
ಕುಂತೇನ...ನೋಡ್ಕೊತ ಮಣ್ಣಾನ ಹೆಜ್ಜಿ

ಮಾತ... ಮಾತನ್ಯಾಗ ಮತ್ತ ತುಂಬಿ..ಮೂರ್ಹೊತ್ತು
ನಿನ್ನ ಗುಂಗನ್ಯಾಗ ತೇಲುವಂಗ ಮಾಡೋಕಿ..

ಸಾ.ಚಿ.ಗೋಷ್ಠಿ ೭೨

ಇಂದಿನ ೭೨ ನೇ ವಾರದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ಹಾಗೂ ಉಪನ್ಯಾಸಕರು. " ಕರ್ನಾಟಕದಲ್ಲಿ ಸ್ಮಾರಕಗಳು" ವಿಷಯ ಕುರಿತು ಶ್ರೀಯುತ ಇಮಾಮಸಾಬ ಕೋಲಕಾರ (ಭೂ ಸೇನಾ ನಿವೃತ್ತಿ ಸೈನಿಕರು, ಸದರಿ ಭಾರತೀಯ ಪುರಾತತ್ವ ಇಲಾಖೆ ಸ್ಮಾರಕಗಳ ಸಂರಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವರು) ಇವರು ಉಪನ್ಯಾಸವನ್ನು ನೀಡಿದರು. ಅದರ ಕುರಿತು ಕೆಲವು ಉಪಯುಕ್ತ ಮಾಹಿತಿ ನಿಮ್ಮ ಅವಗಾಹನೆಗಾಗಿ..

  ಪ್ರಾರಂಭದಲ್ಲಿ ಶ್ರೀಯುತರು ತಮ್ಮ ಸೇನಾ ಕಾರ್ಯಸೇವೆಯ ಬಗ್ಗೆ ಮಾತನಾಡಿದರು. ಇಪ್ಪತ್ತು ವರ್ಷ ಮತ್ತು ಮೂನ್ನುರ ನಾಲ್ವತ್ತೊಂದು ದಿನಗಳಲ್ಲಿ ದೇಶದ ಮುಖ್ಯ ಗಡಿಭಾಗಗಳಲ್ಲಿ ಸೇವೆಗೈಯ್ಯುಯದದನ್ನು ನೆನೆದು ಸ್ಮಾರಕಗಳ ಕುರಿತು ತಮ್ಮ ಉಪನ್ಯಾಸವನ್ನು ಪ್ರಾರಂಭಿಸಿದರು. ಬಸವಣ್ಣನನ್ನು ನೆನೆದು
೧೯೯೬ರಲ್ಲಿ ನಮ್ಮ ಕರ್ನಾಟಕದ ಪ್ರಧಾನ ಮಂತ್ರಿಯಾದಂತಹ ದೇವೆಗೌಡ ಹಾಗೂ ದಿ. ಎಸ್ ಆರ್ ಬೊಮ್ಮಾಯಿ ಇವರ ಆಸಕ್ತಿಯೊಂದಿಗೆ ಧಾರವಾಡದಲ್ಲಿ ಭಾರತೀಯ ಪುರಾತತ್ವ ವಲಯ ಎಂಬ ಶಾಖೆಯು ತೆರೆಯಲ್ಪಟ್ಟಿತು. ಈ ಒಂದು ಕಟ್ಟಡವನ್ನು ಉಧ್ಘಾಟಿಸಿದ್ದು ದಿ.ಎಮ್.ಎಮ್. ಕಲ್ಬುರ್ಗಿ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ಬೀದರನಿಂದ ಹಿಡಿದು ಭಟ್ಕಳದವರೆಗೂ ಇದರ ವ್ಯಾಪ್ತಿಗೊಳಪಡುತ್ತದೆ. ಧಾರವಾಡದ ವಲಯಗಳ ಕೆಳಗೆ ಹನ್ನೊಂದು ಉಪ ವಲಯಗಳು ಬರುತ್ತವೆ. ಅದರಲ್ಲೂ ಬಿಜಾಪುರ ಪೂರ್ವ, ಪಶ್ಚಿಮ ಬಿಜಾಪುರ ಎಂದು ವಿಂಘಡಿಸಿದ್ದಾರೆ ಕಾರಣ ನಮ್ಮ ಉತ್ತರ ಕರ್ನಾಟಕದಲ್ಲಿ ಬಿಜಾಪುರದಲ್ಲಿ ಸಾಕಷ್ಟು ಸ್ಮಾರಕಗಳು ಬರುವುದರಿಂದ ಇದನ್ನು ವಿಭಾಗಿಸಲಾಗಿದೆ. ೧೯೫೮ ರ ಕಾನೂನಿನ ಪ್ರಕಾರ ಆ ಕಾಯ್ದೆಯಲ್ಲಿ ಏನನ್ನು ತಿಳಿಸಲಾಗಿದೆಯೊ.. ಆ ಕಾನೂನುಗಳ ಪ್ರಕಾರ ಸ್ಮಾರಕಗಳನ್ನು ಹಾಗೆ ಸಂರಕ್ಷಿಸಬೇಕಾಗುತ್ತದೆ. ಇದರ ಪ್ರಕಾರ ಗುಡಿಯಾಗಲಿ, ಮಸೀದಿಯಾಗಲಿ, ಜೈನ ಮಂದಿರಗಳಾಗಲಿ ಇದ್ದ ಸ್ಥಿತಿಯಲ್ಲಿಯೆ ಕಾಪಾಡಿಕೊಂಡು ಹೋಗಬೇಕಾಗುತ್ತದೆ. ಧಾರವಾಡದ ವಲಯದಲ್ಲಿ ಎರಡ್ನೂರ ಇಪ್ಪತ್ಮೂರು
ಕುಕನೂರು ಇಟಗಿಯ ಮಹಾದೇವ ಸ್ಮಾರಕ ಗುಡಿಯ ಕುರಿತು ಉಪನ್ಯಾಸವನ್ನು ನೀಡಲು ಡಿ.೧೫. ೧೬. ೧೭. ರಂದು ಇಟಗಿ ಉತ್ಸವವು ನಡೆಯುತ್ತಿದ್ದು ಕಾರಣ ಸಕಲರು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಎಂದು ವಿನಂತಿಸಿಕೊಳ್ಳುತ್ತಾ...ಇಟಗಿ ಸ್ಮಾರಕ
ಸೋಮನಾಥೇಶ್ಚರ ದೇವಾಲಯ ಪೂರ್ವ ಉತ್ತರ ಮತ್ತು ದಕ್ಷಿಣ ಕ್ಕೆ ಮೂರು ದ್ವಾರ ಬಾಗಿಲಗಳಿದ್ದು

ನಿನ್ನದೆ ಮದಿರೆ

ಮೋಹಕ ನಗುವಿನೊಂದಿಗೆ
ಅಂದೇದೆಯಲಿ ನೀ ಹಚ್ಚಿ, ಬಿಟ್ಟು
ಹೋದ ಪ್ರೀತಿಯ ಬೆಂಕಿಯ ಆರಿಸಲು...
ಕುಡಿಯುತಿರುವೆ, ಬಟ್ಟಲು...ಬಟ್ಟಲು..ಮದಿರೆ..
ಕುಡಿದಷ್ಟೂ... ಹೆಚ್ಚಾಗುತಿದೆ ವಿನಃ...
ನಂದಿ ಹೋಗುವ ಸೂಚನೆಯನ್ನೆ ತೋರುತಿಲ್ಲ

ಮಧುಪಾತ್ರೆಯಲಿ ಮಲಗಿದ ಮಧ್ಯಕ್ಕೆ
ಹಚ್ಚಿದ ಬೆಂಕಿಯನು ನಂದಿಸಬಹುದು...
ಕುಡಿದಾದರೂ...
ನಾ ಹೇಗೆ ನಂದಿಸಿಕೊಳ್ಳಲಿ ? ನನ್ನೆದೆಯ ಬೆಂಕಿಯ,
ಮಧು ತುಂಬಿದ ನಿನ್ನದರದಿಂದ, ನನ್ನದರಕೆ
ಒಲವೆಂಬ ತಂಪನು ಸುರಿಯುವವರೆಗೂ...

ಉಳಿಸಿಕೊಳ್ಳುವೇಯಾ...?
ಈ ಮದಿರೆಯ ದಾಸನನು, ನೆನಪುಗಳ ಕೆಸರಲಿ
ಸಿಕ್ಕು ನರಳಾಡುತಿರುವೆ, ನಿನ್ನ ಹೆಸರನೆ
ಕೂಗಿ...ಕೂಗಿ...
ಕಿರು ಬೆರಳಾದರೂ ನೀಡು, ಎದ್ದು ಬರುವೆ ಈ
ನರಕದಿಂದ,  ಇಲ್ಲವೆ.....
ಚೂರು ವಿಷವಾದರೂ ಕುಡಿಸಿಬಿಡು
ಮರೆಯಾಗಿ ಬಿಡುವೆ ಈ ಲೋಕದಿಂದ

Sunday, December 10, 2017

ವಿಧಿಗೆ ಸಿಕ್ಕ ವಿಧವೆ

ನೀ... ಹತ್ತಿಸಿದ ಒಲವಿನ ದಾಹವಿನ್ನೂ... ಆರಿಲ್ಲ
ತಣಿಸದೆ, ಅರ್ಧದಲ್ಲೆ ಬತ್ತಿ ಹೋದೆಯಲ್ಲ
ತನುವಿಗೆ ಸೋಕಿಸಿದ ತಾಪವನ್ನು ತಂಪಾಗಿಸದೆ...
ದೇಹದಣು ದಣುವಲು ವಿರಹದ ಬೆಂಕಿಯ ಹೊತ್ತಿಸಿ,
ಕಾಲನ ಅಸೂಯೆಗೆ ಸಿಕ್ಕು ಉರಿದು ಹೋಗುತಿರುವೆಯಲ್ಲ...

ಇರುಳು ಶಯನದಿ ನಾವಿಬ್ಬರೊಡಗೂಡಿ ಹೊಸಕಿದ
ಕುಸುಮಗಳ ವಾಸನೆಯು ಆರಿಲ್ಲ... ಕಿಟಕಿಯಂಚಿನಿಂದ
ಕದ್ದು ಇಣುಕುವ, ಮಧುಚಂದ್ರಮನ ನೋಟಕೆ, ನಾನೇನು
ಉತ್ತರಿಸಲಿ... ಪ್ರತಿ ದಿನವೂ ದೀಪವ ಸಾಯಿಸಿ ಮಲಗುತ್ತಿದ್ದ ನಾವು, ಇಂದು ನೋಡು ನೀನಿಲ್ಲದೆ ಅದರ ಕಾಂತಿ ನನ್ನನು,
ಕರುಣೆ ತೋರದೆ ಸುಡುತಿಹುದು....

ಸಿಹಿ‌ ಮುತ್ತಿನ ಸವಿಯನುಂಡಿದ್ದ ಕೆನ್ನೆಯ ರಂಗುಗಳಿಂದು, ನಿನ್ನಗಲಿಕೆಯ ಕಾಣಿಕೆಯಾಗಿ ಕಣ್ಣೀರಿನ ಉಪ್ಪನು
ಸವಿಯುತಿಹವು...
ಮನದಾಸೆಗಳೆಲ್ಲ ಗರ್ಭಪಾತವಾಗಿ, ಕಂಡ ಕನಸುಗಳೆಲ್ಲ ಕಮರಿಹೋಗಿ, ಮನದ ಮಾತುಗಳ ಅರಗಿಸಿಕೊಳ್ಳಲಾಗದೆ,
ಮನಕೆ ಮೌನದ ಬೀಗವ ಜಡಿದು, ಕುಳಿತಂತಾಗಿದೆ....

ಓ.... ವಿಧಿಯೆ...
ಒಲವ ರಾಗವ ನುಡಿಸುತಲಿದ್ದ, ಕೊಳಲಿನ ಉಸಿರೊಂದನು
ನಿಲ್ಲಿಸಿ, ಕೊನೆಯಿಲ್ಲದ ಶೋಕ ರಾಗದ ಗಾನವನು ಕಟ್ಟಿ
ಕೊಟ್ಟಿರುವೆಯಲ್ಲ.... ಕೊರಳ ಬಂಗಾರವ ಕಸಿದು, ಬಿತ್ತಿದರು ಬೆಳೆಯದಂತಹ ಸಾವಿನ ವಿಷವ ಸುರಿದು, ನಳನಳಿಸುತಿರುವ ಹಣೆಯನು ಬಂಡೆಯನ್ನಾಗಿಸಿ ನಗುತಿರುವೆಯಲ್ಲ...
ಒಡಲ ಕೊಳದಲೊಂದು ಹುಳವಿಗೆ ಜೀವವನು ತುಂಬದೆ !!!

ಓ... ವಿಧಿಯೆ...
ನನ್ನ ಹಣೆಯ ಹುಡಿಯೆ... ಬೇಕಿತ್ತೆ ನಿನಗೆ ?
ಇಬ್ಬರನು.. ಕರೆದೊಯ್ದಿದ್ದರೆ, ಕಷ್ಟವಾಗುತ್ತಿತ್ತೇನೊ....?
ಇದಕ್ಕಾದರೂ.... ಉತ್ತರಿಸುವೇಯಾ...?
ನಲ್ಲನನ್ನೇನೊ...ಬೆಂಕಿಯ ಪಾಲಾಗಿಸಿದೆ..
ನನ್ನನ್ನೇಕೆ ? ಉಳಿಸಿ, ಬಾಳಿಗೆ ಕಣ್ಣೀರನ್ನು
ಉರುಳಾಗಿಸಿದೆ ....

Wednesday, December 6, 2017

ನಡೆವುದೊಂದೆ ಆಯ್ಕೆ

ಬಾಳ ಕಾನನದಿ ತೊಟ್ಟಿಲು ತೂಗಿ
ಕೈ ಬಿಟ್ಟಿಹನು ಭಗವಂತ....
ನಡೆವ ದಾರಿ ಕಲ್ಲೊ....ಮುಳ್ಳೊ.....
ಎಚ್ಚೆತ್ತು ನಡೆಯುತ್ತಾ ಸಾಗುತ್ತಿರಬೇಕು

ಕಣ್ತಪ್ಪಿ ತುಳಿದ ಮುಳ್ಳಿನ ನೋವು
ಮುಂದಿನ ದಾರಿಯ ಬಗ್ಗೆ ಎಚ್ಚರವಹಿಸುವಂತೆ ಮಾಡುತ್ತದೆ
ಈಗ ಎಡವಿದ ಕಲ್ಲು, ಮುಂದೆಂದೂ
ಎಡವದಿರೆಂದು ಎಚ್ಚರಿಸುತ್ತದೆ.

ನಮ್ಮಂತೆ ಎಷ್ಟೊ.... ಜನರಿಹರಿಲ್ಲಿ
ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು
ನಡೆಯಬೇಕಿದೆ ಇಲ್ಲಿ.... ದುಷ್ಟ ಮನಗಳ
ಮೃಗಗಳ ಕಣ್ತಪ್ಪಿಸಿ

ನಡೆಯುವುದೊಂದೆ ಆಯ್ಕೆ,
ನಡೆಯುತಿರಬೇಕು ದಣಿವಾದರೂ...
ಸೂರ್ಯಾಸ್ತವ ಹೊಂದುವವರೆಗೂ

🙏🙏🙏🙏🙏🙏🙏
👌👌👌👌👌👌👌

Tuesday, December 5, 2017

ಬಂಧನ ೪೨೫

ಚುಮು...ಚುಮು ಚಳಿಯ
ಕೊರೆತಕ್ಕೆ, ಕೊರಳಿಗೆ ಹಾಕುವೆ
ತೋಳ್ಬಂಧನ..

ಉರಗಗಳಂತಿಬ್ಬರು ಬಿಗಿದು
ಹಾಕಿ ಬಿಡುವ....
ವಿರಹದುರಿಗೆ
ದಿಗ್ಬಂಧನ

Sunday, December 3, 2017

ಮಣ್ಣಲಿ ಮಣ್ಣಾಗಿಸು

ನಿನ್ನ ಹಾಗೆ ಅತ್ತು ಎದೆಭಾರವ
ಹಗುರ ಮಾಡಿಕೊಳ್ಳುವ ಧೈರ್ಯ
ನನಗಿಲ್ಲದಲೆ... ಮದಿರೆಯ ಬಟ್ಟಲನ್ನು
ಹಿಡಿದಿರುವೆ...
ನನ್ನೆದೆಯ ಉರಿಯ ತಣ್ಣಗಾಗಿಸಿಕೊಳ್ಳುವ
ದವಾ.. ವಾಗಿಸಿಕೊಂಡೆ ಮಧು...ರಾ

ಕರೆದರೂ.. ಕರಗದ ಕತ್ತಲಲಿ,
ಮೋಡದ ಮರೆಯಲ್ಲಿ ಅವಿತು...
ನಗೆಯ ಮುಳ್ಳನು ಚುಚ್ಚುವ
ಚಂದಿರನ ರಾತ್ರಿಗಳಷ್ಟನ್ನೆ..
ನೀನು ಅನುಭವಿಸಿದ್ದು !!!
ನೋವನು ಅವನೊಂದಿಗೆ ಹಂಚಿಕೊಂಡದ್ದು...
ಹಗಲಿರುಳಗಳ ಅಡಕತ್ತರಿಯಲ್ಲಿ
ಸಿಕ್ಕ ನನ್ನ ನೋವಿನ ಅಡಿಕೆಯ ಮನವನ್ನು
ಅರಿಯುವರೊಬ್ಬಾರು... ಇಲ್ಲವಿಲ್ಲಿ...!!!
ಎಲ್ಲರೂ... ನನ್ನಾವಸ್ಥೆಯ ಕಂಡು, ನಗುವೆಂಬ
ಕತ್ತರಿಯ ಹಿಡಿದೆ ನಿಂತಿರುವರು...ಕತ್ತರಿಸಲು !!!

ನೃತ್ಯದ ರಭಸಕೆ ಜಿನುಗಿದ ಹಿಮ್ಮಡಿಯ
ನಿನ್ನ ರಕ್ತಕ್ಕಿಂತ....
ನನ್ನೆದೆಯ ರಕ್ತವು ಎಷ್ಟೊ....
ಮದಿರೆಯ ಬಟ್ಟಲುಗಳಲ್ಲಿ
ಇಳಿದಿದ್ದು ನಿನಗೆ ತಿಳಿದೆ.. ಇಲ್ಲ !!!
ಬರೆದ ಪ್ರತಿಯೊಂದು ಕಾವ್ಯದ
ಪದಕೆ ನಿ ಕಿವಿಯಾಗಲೇ....ಇಲ್ಲ
ಮೇಣ ದೀಪದ ಬೆಳಕಲಿ ಮಿಂಚಿ,
ನಿನ್ನ ಕೆಂಪು ರಂಗೀನ ಮದರಂಗಿ ಪಾದಗಳಿಗಂಟಿದ,
ನನ್ನ ಕಣ್ಣಂಚಿಂದ ಜಾರಿದ ಹನಿಗಳ ನಿ....
ಎತ್ತಿಕ್ಕಲೆ ಇಲ್ಲ..
ಮುಂಗೈಗೆ ಸುತ್ತಿ ಘಮಘಮಿಸಿದ
ಮಲ್ಲಿಗೆಯ ಆಘ್ರಾಣಿಸಿ, ಮೆಚ್ಚಿ ನಿನ್ನ
ತುರುಬಿಗೆ ನಾ ಮುಡಿಸಿದ ಘಳಿಗೆಯ
ಒಂದಿನಿತು ನಿ....ನೆನೆಯಲೆ....ಇಲ್ಲ

ನಿನಗೆ ಹೇಗೆ ಹೇಳಲಿ, ನನ್ನೊಳಗಿನ ನೋವನು
ಬಟ್ಟಲೊಳಗಿನ....ಷರಾಬಿನ ಹನಿ... ಹನಿಗೂ
ಹೇಳುವೆ....ನಿನ್ನನ್ನು,
ಸ್ವಪ್ನದಲ್ಲಾದರೂ ಒಂದುಗೂಡಿಸು
ಇಲ್ಲವೆ ನನ್ನನ್ನು ಮಣ್ಣುಗೂಡಿಸು ಎಂದು

ಶರಣ ೭

ಅಜ್ಞಾನವು ಮತಿಯ ಹೊಕ್ಕು
ಮದಬಂದ ಗಜದಂತೆ ಮೆರೆಯುತಿಹುದು
ಕಾಯ..
ಜ್ಞಾನವೆಂಬ ಅಂಕುಶದಿಂದ ಎನ್ನ
ದುರ್ಬುದ್ದಿಯ ಮದಿಸಿ...
ಸುಜ್ಞಾನದ ಸುಧೆಯ ಸುರಿಸಿ...
ಸತ್ವಿಚಾರಗಳತ್ತ....ಬೆಳಕ ತೋರೊ..
ಶ್ರೀ ಶರಣಬಸವ

Thursday, November 30, 2017

ತಾಯಿ.....ಲೇಖನ

ಚಂದ್ರಿ" ಎಂದು ಕೂಗಿದಳು ಕಲ್ಲವ್ವ, ಮನೆಯಿಂದ ಹೊರಗೋಡಿ ಬಂದಳು ಕಂಕುಳಲ್ಲಿ ಅಕ್ಕನ ಮಗಳನ್ನು ಎತ್ತಿಕೊಂಡು. "ಹೇಳ್ಬೇ.."  ಎಂದು ನಿಂತಳು ಚಂದ್ರವ್ವ ಕಲ್ಲವ್ವನ ಆರನೇ ಮಗಳು, ಕಿತ್ತು ತಿನ್ನುವ ಬಡತನಕ್ಕೆ ಅಸರೆಯಾಗಲೆಂದು ಗಂಡು ಗಂಡೆಂದು ಸಾಲು ಸಾಲಾಗಿ ಆರು ಹೆಣ್ಣು ಮಕ್ಕಳ ಹಡೆದಿದ್ದಳು ಕಲ್ಲವ್ವ. ಕೊನೆಗೆ ಆರು ಹೆರಿಗೆಗಳ ನಂತರ " ನಿನಗೆ ರಕ್ತಹೀನತೆಯಿದೆ, ಮತ್ತೆ ಏನಾದರೂ ಗರ್ಭವನ್ನು ಧರಿಸಿದರೆ ನಿನಗೆ ಪ್ರಾಣಾಪಾಯವಿದೆ" ಎಂದು ಸರಕಾರಿ ಆಸ್ಪತ್ರೆಯ ಡಾಕ್ಟ್ರಮ್ಮ ಕಲ್ಲವ್ವನ ಗಂಡ ಸಿದ್ದಪ್ಪನಿಗೆ ಹೇಳಿದ ಮೇಲೆ ಅದೇ ವಾರದಲ್ಲಿ ವಿಧಿಯಿಲ್ಲದೆ ಸಂತಾನ ಹರಣ ಚಿಕಿತ್ಸೆಯನ್ನು ಮಾಡಿಸಿಕೊಂಡು, ಗಂಡು ಸಂತಾನದ ಆಸೆಗೆ ಎಳ್ಳು ನೀರು ಬಿಟ್ಟು ಊರು ಸೇರಿದ್ದರು." ಯವ್ವಾ... ಇನ್ನೊಂದೆರ್ಡ ಬಿಂದ್ಗಿ ನೀರ...ರ ತಂದ ಹಾಕ್ಬೇ, ಮುಸುರಿ, ಬಟ್ಟಿ ವಗ್ಯಾಣ ಭಾಳ ಅದಾವು" ಎಂದು ದಣಿದ ದನಿಯಲ್ಲಿ ನುಡಿದಳು. "ಅಯ್ಯ... ಸಾಕ ಬಾರ್ಬೆ,  ಈಕೀನ್ನ ನೀನ ಎತ್ಗೊ ಬಾ ಇಲ್ಲೆ, ನಾನ ಎಲ್ಲ ಅರ್ಬಿ ವಗ್ದ ಹಾಕಿ, ಮುಸರಿನೂ ತೋಳ್ಕೊಂಡು ಬರ್ತೀನಿ, ನಿನ್ಗ ಆಗ್ಲೆ ಹೇಳಿದ್ದೀಲ್ಲಾ ನಾನು
ಎಲ್ಲಾ ಕೆಲ್ಸ ನಾ ಇಕ್ಕಟ್ಟ ಮಾಡ್ತೀನಿ ಅಂತಂದ ಆಗ್ಲೆ ಬಂದ ಕುಂತ ಬಿಟ್ಟಿಯನ ಇಲ್ಲೆ ಅಂಗಳ್ದಾಗ ಬಂದ, ನಡಿ.. ನಡಿ.. ಎಳ ಎದ್ದೇಳ... ನಾನೆಲ್ಲ ಕೆಲ್ಸ ಮುಗ್ಸಿಕೊಂಡ ಬರ್ತಿನ ನಡಿ". ಎನ್ನುತ್ತಾ ಅಕ್ಕನ ಮಗಳನ್ನು ತಾಯಿ ಕಂಕುಳಿಗೆ ವರ್ಗಾಯಿಸುತ್ತಾ, ಲಂಗಾವನ್ನು ಎತ್ತಿ ನಡುವಿಗೆ ಸಿಕ್ಕಿಸಿಕೊಂಡು, ಮುಸುರಿ ಮತ್ತು ಬಟ್ಟೆಗಳನ್ನು ಒಗೆಯಲು ಅಣಿಯಾದಳು ಚಂದ್ರವ್ವ. ಚಂದ್ರವ್ವ ಅಷ್ಟೊಂದು ಹೇಳಿಕೊಳ್ಳುವಷ್ಟೇನು ಸುಂದರಿಯಲ್ಲ, ಆದರೆ ಒಮ್ಮೆ ನೋಡಿದರೆ ಇನ್ನೊಮ್ಮೆ ನೋಡಬೇಕೆನ್ನುವ ಅಂಗಸೌಷ್ಠವ. ಐದು ಅಕ್ಕಂದಿರ ಮದುವೆ, ಬಾಣೆಂತನ ಅವರು ಹಬ್ಬ ಹರಿದಿನಗಳಿಗೆ ಬಂದರೆ ಅವರ ಮಕ್ಕಳ ಚಾಕರಿ, ಅವರವರ ಅತ್ತೆ ಮನೆಗಳಲ್ಲಿ ನಡೆಯುತ್ತಿದ್ದಂತಹ ವಿಚಾರಗಳ ಕೇಳಿ, ದುಃಖಕ್ಕೆ ಸಂತೈಸುತ್ತಿದ್ದರೆ... ನಲಿವಿಗೆ ಮತ್ತಷ್ಟು ಜೇನನ್ನು ಬೇರಸುತ್ತಿದ್ದಳು. ಅಕ್ಕಂದಿರದೆಲ್ಲರ ಬಾಳನ್ನು ಕಂಡು, ವಿದ್ಯಾವಂತೆಯಲ್ಲದಿದ್ದರೂ... ಬಾಳಿನ ಒಳಾರ್ಥವನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದಳು. ವಿವೇಚನೆಯುಳ್ಳವಳಾಗಿದ್ದು, ಸ್ವಾಭಿಮಾನಿಯು ಆಗಿದ್ದಳು.

     ಹೀಗೆ ದಿನಗಳು ಕಳೆದಂತೆ.. ಚಂದ್ರವ್ವ ಮಾಗಿದ ಹಣ್ಣಾದಳು, ಆ ಹಣ್ಣನ್ನು ಜೋಪಾನದ ಜವಾಬ್ದಾರಿಯ ಭಾರವನ್ನು ಹೋರುವ ಗಂಡಿನ ಹುಡುಗಾಟಕ್ಕಾಗಿ ತಂದೆ ಸಿದ್ದಪ್ಪ ಅಲೆದಾಡಿ ಊರೊರನ್ನು ವಿಚಾರಿಸುತ್ತಿದ್ದನು.

  ಅವನು ಮಲ್ಲವ್ವನನ್ನು ಕೋಣೆಯೊಳಗೆ ಕರೆದುಕೊಂಡು ಬಂದು ಬಾಗಿಲ ಚೀಲಕವನ್ನು ಹಾಕಿ, ಮೆಲ್ಲಗೆ ಕೋಣೆಯ ಕಿಡಕಿಯನ್ನು ತೆಗೆಯುತ್ತಾನೆ. ತಣ್ಣನೆ ಗಾಳಿಯು ಸುಳಿ ಸುಳಿದು ಬಂದು ಅವನ ಮೈಯೆಲ್ಲಾ ಆವರಿಸಿ ಕಾದ ಹಂಚಿನ ಮೇಲೆ ಸಿಡಿಸಿದ ನೀರಿನಂತೆ ಚುರ್ರೆಂದು ಅವನ ದೇಹದೊಳಗಿನ ಕಾಮದ ಪಿತ್ತವನ್ನು ಹೆಚ್ಚಿಸುತ್ತದೆ, ಆರು ತಿಂಗಳ ಗರ್ಭಿಣಿಯಂತೆ ಅರ್ಧಾಕೃತಿಯಂತಿರುವ ಚಂದ್ರನ ಬೆಳಕು ಅತ್ತ ಹೆಚ್ಚು ಅಲ್ಲ ಇತ್ತ ಕಡಿಮೆಯೂ ಇಲ್ಲದಂತೆ ಕೋಣೆಯ ಒಂದು ಭಾಗಕ್ಕೆ ಹರಡುತ್ತದೆ. ಕತ್ತಲಿನಲ್ಲಿ ಮರೆಯಾಗಿ ನಿಂತಿದ್ದ ಮಲ್ಲವ್ವನ ಭುಜವನ್ನು ಎರಡು ಕೈಗಳಿಂದ ಹಿಡಿದುಕೊಂಡು ಬೆಳಕಿನತ್ತ ಕರೆತರುತ್ತಾನೆ. ಮೆಲ್ಲಗೆ ಅವಳೆದೆಯ ಮೇಲಿನ ಸೆರಗನ್ನು ಜಾರಿಸುತ್ತಾನೆ. ಆ ಮಂದ ಬೆಳಕಿನಲ್ಲಿ ಮಲ್ಲವ್ವನ ಹಾಲು ತುಂಬಿದ ಎದೆಯ ಕಂಡು ಉನ್ಮಕ್ತನಾಗಿ ಅವಳನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾನೆ. ಇದೆಲ್ಲದರ ಅರಿವಿಲ್ಲದಂತೆ ಮಲ್ಲವ್ವ ಕಣ್ಣೀರು ಸುರಿಸುತ್ತಾ ನಿಂತಿರುತ್ತಾಳೆ. ಇನ್ನೇನು, ಹೊತ್ತು ಸರಿದರೆ ತುಪ್ಪ ಜಾರಿದಂತಯೆ ಲೆಕ್ಕ ಇಷ್ಟು ದಿನ ಮನದಲ್ಲಿ ಮಂಡಿಗೆ ತಿನ್ನುತ್ತಿದ್ದವನಿಗೆ ಇಂದು ಆ ದೇವರು ಅನಾಯಾಸವಾಗಿ ಬಾಳೆಲೆಯ ತುಂಬ ಮೃಷ್ಟಾನ್ನವನ್ನೆ ಉಣಲು ಕೊಟ್ಟಂತಾಗಿದೆ, ಅಬ್ಬಾ ಇನ್ನೂ  ತಾಳಲಾಗದು" ಎಂದು ಮನದಲ್ಲಿಯೆ ಮಾತನಾಡಿಕೊಳ್ಳುತ್ತ ತಡಮಾಡದೆ  ತಿಮ್ಮಣ್ಣ ಅವಳ ಎಲ್ಲ ವಸ್ತ್ರಗಳನ್ನು ಕಳಚಿ, ನೆಲದ ಮೇಲೆ ಮಲಗಿಸಿ ಅವಳ ಮೇಲೆ ಹುಲಿಯಂತೆ ಎಗರುತ್ತಾನೆ, ಸುಖದ ತುತ್ತ ತುದಿಯನೇರಬೇಕೆನ್ನುವಾಗ ಮಲ್ಲವ್ವನನ್ನು ಕೇಳುತ್ತಾನೆ, "ನಿನಗೆ ಈಗ ಹೇಗೆ ಎನ್ನಿಸುತ್ತಿದೆ". ಎಂದು ನಾನೆ ಗೆದ್ದೆ ಎಂಬ ಧ್ವನಿಯಲ್ಲಿ, ಆಗ ಮಲ್ಲವ್ವ ಇದನ್ನೆಲ್ಲ ಕಣ್ಮುಚ್ಚಿ ಸಹಿಸಿಕೊಳ್ಳುತ್ತಿದ್ದಳು, ತಿಮ್ಮಯ್ಯನ ಮಾತುಗಳನ್ನು ಕೇಳಿ, ಕಣ್ಬಿಟ್ಟು  ಮಬ್ಬುಗತ್ತಲಿನಲ್ಲಿ ಅವನನ್ನು ದಿಟ್ಟಿಸಿ ನೋಡಿದಳು, ಕಾಮದ ಬೆಂಕಿಗೆ ಬೆವರಿ ನೀರು ನೀರಾಗಿದ್ದನು, ಕಣ್ಣುಗಳಲ್ಲಿ ನಿನ್ನ ಹೆಣ್ತನದ ಅನ್ನವನ್ನು ನಾನಿಂದು ತಿಂದು ತೇಗುವೆ ಎನ್ನುವ ಭಾವ ತುಂಬಿ ಹರಿದಾಡುತ್ತಿತ್ತು, ಮಲ್ಲವ್ವ ಮೆಲ್ಲನೆ ಕಣ್ಣೀರನ್ನು ಒರೆಸಿಕೊಳ್ಳುತ್ತಾ, ಹೇಳಿದಳು " ನೋಡು ತಿಮ್ಮಯ್ಯ, ಕಾಲವೆಂಬ ಹುಲಿಯ ಬಾಯಿಗೆ ಸಿಕ್ಕ ಹರಿಣಿ ನಾನು, ನೀನು ನನ್ನ ದೇಹವನ್ನೆಲ್ಲವ ಆಕ್ರಮಿಸಿಕೊಳ್ಳುತಿರುವೆ, ನನ್ನ ಶೀಲದ ಕೊಳಕ್ಕೆ ಕೆಸರಿನ ಕಳಕಂವ ಸುರಿಯಲು ಹಾತೊರೆಯುತ್ತಿರುವೆ, ಏನು ಮಾಡಲಿ ? ನನಗಿದು ಅನಿವಾರ್ಯವಾಗಿದೆ ನನ್ನ ಮಾಂಗಲ್ಯ ಭಾಗ್ಯವ ಉಳಿಸಿಕೊಳ್ಳಲು, ನಿನಗಿದು ಕಾಮದೂಟ, ನನಗೆ ಇದನ್ನು ಚಿಕ್ಕ ಮಗುವಿನಾಟವಾಗಿ ನೋಡಿತ್ತಿದ್ದೇನೆ, ಕೇಳು, ಕೆಳಗಿನ ಭಾಗವ ನೀನು ಆಕ್ರಮಿಸಿದರೆ, ನಾನು ನನ್ನ ಎರಡನೇಯ ಮಗುವಿಗೆ ಜನ್ಮವ  ನೀಡುತ್ತಿರುವ ಹೆರಿಗೆಯ ನೋವು ಎಂದುಕೊಂಡು ಹಿಂಸೆಯನ್ನೆಲ್ಲಾ.... ಸಹಿಸಿಕೊಳ್ಳುತ್ತೇನೆ, ಮತ್ತೆ ನನ್ನೆದೆಯ ಮೇಲೆ ನೀನು ಎರಗಿದರೆ, ಹುಟ್ಟಿದ ಹಸುಗೂಸಿನ ಹೊಟ್ಟೆಯ ಹಸಿವನಿಂಗಿಸಲು ಎದೆಹಾಲ ನೀಡುತ್ತಿರುವೆನೆಂದು ಸಹಿಸಿಕೊಳ್ಳುವೆ, ನನ್ನ ಮೊಗದ ತುಂಬಾ ನಿನ್ನ ಮುಳ್ಳು ಚುಂಬನಗಳು ಮುದ್ರೆಯ ಒತ್ತಲು ಬರುವುದಾದರೆ, ಅಂಗಳದಿ ಆಡಿ ಓಡೋಡಿ ಬಂದ ಮಗವು ತನ್ನ ತಾಯಿಯನ್ನು ಅಪ್ಪಿ ಮುದ್ದಾಡಿತೆಂದು ಮಲಗಿ ಬಿಡುವೆ, ಗಂಡು ಸಂತಾನವಿರದ ನನಗೆ ನಿನ್ನನೆ ಮಗನೆಂದುಕೊಳ್ಳುವೆ", ಎಂದು ಮಲ್ಲವ್ವ ಅವನ ಕಾಮದೋಕುಳಿಗೆ ಸಹಕರಿಸಲು ಮುಂದಾದಳು, ಮೈತುಂಬಾ ವಿದ್ಯುತ್ ಶಕ್ತಿಯ ತರಂಗಗಳು ಹರಿದಾಡಿದಂತಾಗಿ, ಧಿಕ್ಕನೆ ಮಲ್ಲವ್ವನ ಮೈ ಮೇಲಿಂದ ಎದ್ದು ಬಿಟ್ಟನು ತಿಮ್ಮಯ್ಯ, ಮಳೆಯಲ್ಲಿ ನೆಂದವರಂತೆ ಮೈಯಿಂದ ಸರಸರನೆ ಬೆವರು ಕಿತ್ತು ಬರಲಾರಂಭಿಸಿತು. ನೆತ್ತಿಗೇರಿದ್ದ ಕಾಮದ ಪಿತ್ತವು ಪಾಪಪ್ರಜ್ಞೆಯ ಬೆಂಕಿಗೆ ಸುಟ್ಟು ಕರಗಿ ಇಳಿದು ಹೋಗಿತ್ತು, ನಿಂತ ನೆಲವು ಬಾಯ್ತೆರೆದು ನುಂಗುವಂತೆ ಭಾಸವಾಗಹತ್ತಿತು, ಅರೆ ಕ್ಷಣವು ಅಲ್ಲಿ ನಿಲ್ಲದೆ, ಹೊರಳಿ ಮಲ್ಲವ್ವನತ್ತ ಕಣ್ಣೇತ್ತಿಯೂ ನೋಡದೆ, ಬಟ್ಟೆಯ ಧರಿಸಿಕೊಂಡು ಹೊರ ನಡೆದುಬಿಟ್ಟ, ಇದನ್ನು ಊಹಿಸದೆ ಇರದ ಮಲ್ಲವ್ವ, ಸರಕ್ಕನೆ ಎದ್ದು ಕುಳಿತಳು "ಅಯ್ಯೋ ಭಗವಂತ ಇದೇನಾಯಿತು ? ಬಾಯಿಗೆ ಬಂದಂತೆ ನಾನು ಏನೇನೊ ಮಾತನಾಡಿಬಿಟ್ಟೆ, ಒಂದು ವೇಳೆ ಇವನು ರಕ್ತವ ಕೊಡದೆ ಹೋದರೆ ನನ್ನ ಮಾಂಗಲ್ಯದ ಗತಿಯೇನು?" ಎನ್ನುತ್ತಲೆ ಮಲ್ಲವ್ವ ಬಟ್ಟೆಗಳನ್ನೆಲ್ಲ ಉಟ್ಟುಕೊಂಡು ತಿಮ್ಮಯ್ಯನನ್ನೆ ಹುಡುಕಲು ಮಹಡಿಯ ಹತ್ತಿ ಬಂದಳು, ಅಷ್ಟರಲ್ಲಾಗಲೆ ತಿಮ್ಮಯ್ಯನು ರಕ್ತಭಂಡಾರ ಕೋಣೆಯಲ್ಲಿ ತನ್ನ ರಕ್ತವನ್ನು ಕೊಡುತ್ತಿದ್ದನು. ಅರ್ಧ ತಾಸಿನಲ್ಲಿ ಮಲ್ಲವ್ವನ ಗಂಡ ಸಣ್ಣಯ್ಯನಿಗೆ ರಕ್ತವ ಹಾಕಿದರು. ರಕ್ತವ ಕೊಟ್ಟ ತಿಮ್ಮಯ್ಯ ತಲೆತಗ್ಗಿಸಿಕೊಂಡು ಬಂದು ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದ ಸಣ್ಣಯ್ಯನ ಪಾದವ ಹಿಡಿದುಕೊಂಡು ಅಳುತ್ತಾ, ಅಲ್ಲೆ ನಿದ್ರೆಗೆ ಶರಣಾಗಿದ್ದ, ಮಲ್ಲವ್ವನಿಗೆ ಏನು ತಿಳಿಯದೆ ಗೋಡೆಗೆ ಆಸರೆಯಾಗಿ ಕುಳಿತುಕೊಂಡು ನೆಲಕ್ಕೆ ಮಲಗಿಸಿದ್ದ ಮಗವನ್ನು ಮಡಿಲಲ್ಲಿ ಹಾಕಿಕೊಂಡು ಎದೆಹಾಲನ್ನು ಕೊಡುತ್ತಾ, ಗಂಡನಿಗೆ ರಕ್ತ ಸಿಕ್ಕಿದುದಕೆ ಸಮಾಧಾನಗೊಂಡು ಹಾಗೆ ಸ್ವಲ್ಪ ನಿರಾಳವಾಗಿ ಕಣ್ಮುಚ್ಚಿದಳು.

      ಮುಂಜಾವು ನಾಲ್ಕರ ಸಮಯ, ಸಣ್ಣಯ್ಯ ಸಣ್ಣಗೆ ಬಿಕ್ಕ ತೊಡಗಿದನು, " ಮಲ್ಲಿ, ಮಲ್ಲಿ," ಎಂದೆರಡು ಸಲ ಕೂಗಿದನು. ಮಲ್ಲವ್ವನಿಗೆ ತಟಕ್ಕನೆ ಎಚ್ಚರವಾಗಿ ಮಗಳನ್ನು ನೆಲದ ಮೇಲೆ ಮಲಗಿಸಿ, ಗಂಡನ ಬಳಿ ಸರಿದು " ಏನಾಯ್ತು, ಹೇಳ್ರಿ, ಏನ್ಬೇಕಿತ್ತು ? ನೀರು ಕುಡಿತೀರಾ ಇರೀ ನರ್ಸಮ್ಮನ್ನ ಕರೀತಿನಿ" ಎಂದು ಅವಸರಿಸಿದಳು. ಸಣ್ಣಯ್ಯ ಗೋಣಾಡಿಸುತ್ತಲೆ ಬೇಡವೆಂದ, ಮೆಲ್ಲಗೆ ನಡುಗುವ ಕೈಗಳಿಂದ ಅವಳ ಕೈಯನ್ನು ಹಿಡಿದುಕೊಂಡು " ಮಗ....ಳು... ಹು...ಷಾ..ರು" ಎನ್ನುತ್ತಲೆ ಅವನ ಪ್ರಾಣಪಕ್ಷಿ ಎದೆಗೂಡಿನಿಂದ ಬಿಡುಗಡೆಯ ಹೊಂದಿತ್ತು.
ಮರಳಿ ಅವನು ಮಾತನಾಡದೆ ಇರುವುದನ್ನು ನೋಡಿ ಮಲ್ಲವ್ವ ಜೋರಾಗಿ ಅಳುತ್ತಾ, ನರ್ಸಮ್ಮನನ್ನು ಕರೆಯಲು ಓಡಿದಳು. ಮಲ್ಲಮ್ಮನ ಚೀರುವಿಕೆಗೆ ಎಚ್ಚರಗೊಂಡ ತಿಮ್ಮಯ್ಯನು ಎದ್ದು ಸಣ್ಣಯ್ಯನನ್ನು ನೋಡುತ್ತಾನೆ, ಸಣ್ಣಯ್ಯನ ಕಣ್ಣುಗಳು ಇವನನ್ನೆ ದಿಟ್ಟಿಸಿ ತಿವಿದು ನೋಡುವ ಹಾಗೆ ತೆರದುಕೊಂಡಿರುತ್ತವೆ. ಮಲ್ಲವ್ವನ ಕರೆಗೆ ಓಡಿ ಬಂದ ನರ್ಸಮ್ಮ ಸಣ್ಣಯ್ಯನ ನಾಡಿ ಮಿಡಿತವನ್ನು ಪರೀಕ್ಷಿಸಿ, ಅವನೆರಡು ಕಣ್ಣುಗಳ ರೆಪ್ಪೆಯ ಮುಚ್ಚಿ, ಮಲ್ಲವ್ವನ ಮುಖವನೊಮ್ಮೆ ನೋಡಿ ಸಣ್ಣಯ್ಯ ಇನ್ನಿಲ್ಲ ಎಂಬಂತೆ ತಲೆಯಾಡಿಸಿ ಹೊರಟು ಹೋಗುತ್ತಾಳೆ. ತಲೆಯ ಮೇಲೆ ಬಂಡೆಕಲ್ಲು ಬಿದ್ದವರ ಹಾಗೆ ಮಲ್ಲವ್ವಳಿಗೆ ಏನು ಮಾಡುವುದು ತೋಚದೆ ಗೋಡೆಗೊರಗಿ ತಲೆಮ್ಯಾಲೆ ಎಡಗೈಯನ್ನಿಟ್ಟುಕೊಂಡು, ಸೀರೆಯ ಅಂಚನ್ನು ಬಲಗೈಯಿಂದ ಬಾಯಿಗೆ ಒತ್ತಿ ಹಿಡಿದು ಅಳಲಾರಂಭಿಸುತ್ತಾಳೆ.
ಪಕ್ಕದ ಮಂಚದಲ್ಲಿ ಇದನ್ನೇಲ್ಲವ ನೋಡುತ್ತಿದ್ದ ರೋಗಿ ಅಜ್ಜಿಯೊಬ್ಬಳು " ಶಿವ್ನೆ ಇಷ್ಟು ಚಿಕ್ಕ ವಯಸ್ಸನ್ಯಾಗ ಆ ಹುಡುಗಿನ ವಿಧವೆ ಮಾಡ್ದೆಲ್ಲಪ್ಪ, ಆ ತಾಯಿ ಮತ್ತ ಹಸುಗೂಸಿಗೆ ದಿಕ್ಕು ದೇಸಿಯಿಲ್ದ ಪರದೇಶಿ ಮಾಡ್ದೇಲ್ಲೊ, ಇನ್ನಾರ ದಿಕ್ಕ ಆಕ್ಕಾರ ಇವರ ಬಾಳ್ವಿಗೆ" ಎಂದು ಎರಡು ಹನಿ ಕಣ್ಣೀರನ್ನು ಸುರಿಸುತ್ತಾ ಹೇಳಿದಳು.

    ಇಷ್ಟು ಹೊತ್ತು ಇದನ್ನೆಲ್ಲಾ ನೋಡುತ್ತಾ ಸುಮ್ಮನೆ ಕುಳಿತಿದ್ದ ತಿಮ್ಮಯ್ಯ ಅಜ್ಜಿಯ ಮಾತುಗಳ ಕೇಳಿ, ಕಣ್ಣೀರೊರೆಸಿಕೊಳ್ಳುತ್ತಾ, ಸಣ್ಣಯ್ಯನ ಕಾಲ್ಬಳಿ ಬಂದು ಅವನ ಪಾದಗಳ ಮುಟ್ಟಿ ನಮಸ್ಕರಿಸಿ, ಧೀರ್ಘವಾದ ನಿಟ್ಟುಸಿರೊಂದನು ಬಿಟ್ಟು, ನೆಲದ ಮೇಲೆ ಮಲಗಿಸಿದ್ದ ಮಗುವನ್ನು ಎತ್ತಿಕೊಂಡು ಮಲ್ಲವ್ವನ ಬಳಿ ಬಂದು, ಅವಳ ಕೈಯನ್ನು ಹಿಡಿದೆಬ್ಬಿಸಿಕೊಂಡು, ಸಣ್ಣಯ್ಯನ ಶವದೇದುರು ನಿಂತು ಒಂದು ಮಾತನ್ನು ಹೇಳುತ್ತಾನೆ. " ಇಂದಿನಿಂದ ನನ್ನ ತಂಗಿ ಮತ್ತು......‌ನನ್ನ ತಾಯಿಯನ್ನು.....‌ ನಾನು ಸಾಕುತ್ತೇನೆ". ಎಂದಾಗ, ಬಿಟ್ಟ ಕಣ್ಣನು ಹಾಗೆ ಬಿಟ್ಟು ಮಲ್ಲವ್ವಳು ತಿಮ್ಮಯ್ಯನನ್ನು ನೋಡುತ್ತಾಳೆ. ಆಗ ತಿಮ್ಮಯ್ಯನು " ನಿಜ ಅವ್ವ ಮಲ್ಲವ್ವ, ನನ್ನ ತಾಯಿ ನನಗೆ ಜನ್ಮವಕೊಟ್ಟು ಈ ಭುವಿಗೆ ತಂದಿರಬಹುದು. ಆದರಿನ್ನೂ ನಾನು ಕತ್ತಲಲ್ಲೆ ಇದ್ದೆ, ಮನದೊಳಗಿನ ಕೋಣೆ ಬೆಳಕನ್ನು ಬೇಡುತ್ತಿತ್ತು ಅದನ್ನು ನೀನಿಂದು ಕತ್ತಲಲಿ ಹೊತ್ತಿಸಿದೆ, ಕಾರ್ಗತ್ತಲಲೂ... ನನಗೆ ಬಾಳಿನ ಜ್ಞಾನೋದಯವ ಬೆಳಗಿಸಿದೆ. ನಿನ್ನ ಹೊಟ್ಟೆಯಲ್ಲಿ ಹುಟ್ಟಸಿದ್ದರೂ ನಿನ್ನ ದೇಹ ಸ್ಪರ್ಶದಿಂದ ಈ ಹಿಂದೆ ನಾ ಮಾಡಿದ ಪಾಪಗಳೆಲ್ಲವು ತೊಡೆದು ಹೋಗಿ ಮತ್ತೆ ನನಗೆ ಪುನರ್ಜನ್ಮವ ನೀಡಿದೆ. ಉಳಿದ ಪಾಪದ ಕೊಡಗಳನ್ನು ನಿನ್ನ ಪಾದ ಸೇವೆಯಲ್ಲಿ ಸುರಿಯುತ್ತಾ ಹಗುರು ಮಾಡಿಕೊಳ್ಳುವೆ.
ತಿರಸ್ಕರಿಸಬೇಡ ತಾಯಿ... ಮಲ್ಲವ್ವ... ನಿನ್ನ ಹಿರಿಮಗನೆಂದು ನಿನ್ನ ಸೇರಗಿಗೆ ಗಂಟು ಹಾಕಿಕೊಳ್ಳವ್ವ" ಎಂದೆನ್ನುತ್ತ ಗೋಳೊ ಎಂದಳತೊಡಗಿದನು.

   ಮಲ್ಲವ್ವನಿಗೆ ಆತಂಕದೊಳಗೊಂದು ನಿರಾತಂಕದ ಕಿರಣವೊಂದು ಮೂಡಿತು. ಗಂಡ ಸಣ್ಣಯ್ಯನ ಮೊಗವನೊಮ್ಮೆ ನೋಡಿ ಅವನ ಪಾದವಮುಟ್ಟಿ ನಮಸ್ಕರಿಸಿ ಮುಂದಿನ ಕಾರ್ಯಕ್ಕೆ ಅಣಿಯಾಗತೊಡಗಿದರು.