Sunday, December 10, 2017

ವಿಧಿಗೆ ಸಿಕ್ಕ ವಿಧವೆ

ನೀ... ಹತ್ತಿಸಿದ ಒಲವಿನ ದಾಹವಿನ್ನೂ... ಆರಿಲ್ಲ
ತಣಿಸದೆ, ಅರ್ಧದಲ್ಲೆ ಬತ್ತಿ ಹೋದೆಯಲ್ಲ
ತನುವಿಗೆ ಸೋಕಿಸಿದ ತಾಪವನ್ನು ತಂಪಾಗಿಸದೆ...
ದೇಹದಣು ದಣುವಲು ವಿರಹದ ಬೆಂಕಿಯ ಹೊತ್ತಿಸಿ,
ಕಾಲನ ಅಸೂಯೆಗೆ ಸಿಕ್ಕು ಉರಿದು ಹೋಗುತಿರುವೆಯಲ್ಲ...

ಇರುಳು ಶಯನದಿ ನಾವಿಬ್ಬರೊಡಗೂಡಿ ಹೊಸಕಿದ
ಕುಸುಮಗಳ ವಾಸನೆಯು ಆರಿಲ್ಲ... ಕಿಟಕಿಯಂಚಿನಿಂದ
ಕದ್ದು ಇಣುಕುವ, ಮಧುಚಂದ್ರಮನ ನೋಟಕೆ, ನಾನೇನು
ಉತ್ತರಿಸಲಿ... ಪ್ರತಿ ದಿನವೂ ದೀಪವ ಸಾಯಿಸಿ ಮಲಗುತ್ತಿದ್ದ ನಾವು, ಇಂದು ನೋಡು ನೀನಿಲ್ಲದೆ ಅದರ ಕಾಂತಿ ನನ್ನನು,
ಕರುಣೆ ತೋರದೆ ಸುಡುತಿಹುದು....

ಸಿಹಿ‌ ಮುತ್ತಿನ ಸವಿಯನುಂಡಿದ್ದ ಕೆನ್ನೆಯ ರಂಗುಗಳಿಂದು, ನಿನ್ನಗಲಿಕೆಯ ಕಾಣಿಕೆಯಾಗಿ ಕಣ್ಣೀರಿನ ಉಪ್ಪನು
ಸವಿಯುತಿಹವು...
ಮನದಾಸೆಗಳೆಲ್ಲ ಗರ್ಭಪಾತವಾಗಿ, ಕಂಡ ಕನಸುಗಳೆಲ್ಲ ಕಮರಿಹೋಗಿ, ಮನದ ಮಾತುಗಳ ಅರಗಿಸಿಕೊಳ್ಳಲಾಗದೆ,
ಮನಕೆ ಮೌನದ ಬೀಗವ ಜಡಿದು, ಕುಳಿತಂತಾಗಿದೆ....

ಓ.... ವಿಧಿಯೆ...
ಒಲವ ರಾಗವ ನುಡಿಸುತಲಿದ್ದ, ಕೊಳಲಿನ ಉಸಿರೊಂದನು
ನಿಲ್ಲಿಸಿ, ಕೊನೆಯಿಲ್ಲದ ಶೋಕ ರಾಗದ ಗಾನವನು ಕಟ್ಟಿ
ಕೊಟ್ಟಿರುವೆಯಲ್ಲ.... ಕೊರಳ ಬಂಗಾರವ ಕಸಿದು, ಬಿತ್ತಿದರು ಬೆಳೆಯದಂತಹ ಸಾವಿನ ವಿಷವ ಸುರಿದು, ನಳನಳಿಸುತಿರುವ ಹಣೆಯನು ಬಂಡೆಯನ್ನಾಗಿಸಿ ನಗುತಿರುವೆಯಲ್ಲ...
ಒಡಲ ಕೊಳದಲೊಂದು ಹುಳವಿಗೆ ಜೀವವನು ತುಂಬದೆ !!!

ಓ... ವಿಧಿಯೆ...
ನನ್ನ ಹಣೆಯ ಹುಡಿಯೆ... ಬೇಕಿತ್ತೆ ನಿನಗೆ ?
ಇಬ್ಬರನು.. ಕರೆದೊಯ್ದಿದ್ದರೆ, ಕಷ್ಟವಾಗುತ್ತಿತ್ತೇನೊ....?
ಇದಕ್ಕಾದರೂ.... ಉತ್ತರಿಸುವೇಯಾ...?
ನಲ್ಲನನ್ನೇನೊ...ಬೆಂಕಿಯ ಪಾಲಾಗಿಸಿದೆ..
ನನ್ನನ್ನೇಕೆ ? ಉಳಿಸಿ, ಬಾಳಿಗೆ ಕಣ್ಣೀರನ್ನು
ಉರುಳಾಗಿಸಿದೆ ....

No comments:

Post a Comment