ಏನೀ.... ಬಾಳು
ಮಾಯಾನಗರಿಗೆ ಬಂದರೂ...
ತಪ್ಪುತ್ತಿಲ್ಲವಲ್ಲ ಗೋಳು
ಬರವು ಹಳ್ಳಿಯ ಬದುಕನ್ನೆ
ಮಾಡಿದೆಯಲ್ಲ ಹೋಳು
ನೆರೆಯು ತುತ್ತಿನ ಚೀಲದೂರಿಗೂ...
ತುಂಬಿಸಿಬಿಟ್ಟಿತಲ್ಲ ಹೂಳು
ಅರಿವಿಲ್ಲದಾಯಿತೆ ವರುಣ..
ನಮ್ಮೂರಿನಲ್ಲಿ ನೀನೀತ್ತ ಹಸಿವಿನ ಸಂಕಟ
ನಿನಗಿಲ್ಲವಾಯಿತೆ ಕರುಣ...
ತಂದಿಟ್ಟೆಯಲ್ಲೊ ಬೆಂದೂರಿನಲ್ಲಿ
ದುಡಿಮೆಗೂ ಕಂಟಕ
ನಿನಗರಿವಾದಿತೊ...ಬೀದಿ ಕಾಮಣ್ಣರ ಕಣ್ತಪ್ಪಿಸಿ
ಬದುಕುವ ಬದುಕಿನ ಸಂಕಷ್ಟ
ಹುಟ್ಟಿದೂರಿನಲಿ ವಲೆಗೆ ಬೆಂಕಿಯ
ಹಚ್ಚಲು ಶಕ್ತಿಯ ನೀಡಲಿಲ್ಲ
ವಲಸೆ ಬಂದಲ್ಲಿ ವಲೆಯ ಹಚ್ಚಲು.. ನೀರು
ಸುರಿಸಿ.. ಆರಿಸಿ ನಿನ್ನ ಕುಯುಕ್ತಿ ಬಿಡಲಿಲ್ಲ
ತೋಯ್ದ ಬಟ್ಟೆಗಳೊಂದಿಗೆ ನಿನ್ನ ಹನಿಗಳಲಿ
ನೆನೆಯುತ್ತ ಸೂರಿಲ್ಲದೆ ಸಾಗುತಿಹುವೆವಲ್ಲ
ನಮಗಿನ್ನೂ... ಬದುಕುವ ಆಸೆಯಿದೆ
ಬದುಕ ಕಟ್ಟಿಕೊಳ್ಳುವ ಛಲವಿದೆ
ಊರ ಶೆಟ್ಟರಂಗಡಿಯ ದಿನಸಿ ಬಾಕಿಯನ್ನು
ಚುಕ್ತಾ ಮಾಡುವ ದುರಾಸೆಯಿದೆ
ಕರುಳ ಬಳ್ಳಿಗಳ ಓದಿಸಿ ನಮ್ಮ ಕಷ್ಟಗಳಿಗೆ
ಅವರ ಕೈಯಿಂದಲೆ...ಮುಕ್ತಿ ಹಾಡಿಸಬೇಕೆಂಬ
ಮಹದಾಸೆಯಿದೆ
ಬದುಕಬೇಕಿದೆ ನಾವು.. ನಾಳೆಗಳ ಗೆಲ್ಲೋಕೆ
ಮೆಟ್ಟಬೇಕಿದೆ ನಾವು ನೀ ಕೊಟ್ಟ ಕಷ್ಟಗಳ
ಬರುವ ಬದುಕಿನ ಹಾದಿಯ ಹಸನಾಗಿಸೋಕೆ
No comments:
Post a Comment