Thursday, September 21, 2017

ನಮ್ಮಯ ಸ್ಥಿತಿ

ಆರಿ ಹೋಯಿತು ಕಾವು
ಇತಿಹಾಸದ ಕರಾಳ ಪುಟದಲ್ಲಿ
ಸೇರಿಹೋಯಿತು ಇನ್ನೊಂದು ಸಾವು
ಬೂದಿಯಾಯಿತು ಹೊತ್ತಿದ ಚಿತೆಯು
ಕೇಳದಾದವು ಕರ್ಣಗಳು ನೊಂದವರ ವ್ಯಥೆಯ

ಮೌನವಾದವು ಧರಣಿ ಪ್ರತಿಭಟನೆಗಳು
ಬೀಕೊ ಎನ್ನುತಿಹುವು..ಒಣಗಿದ ಮಾಲೆಯಲಿ
ಕುಳಿತ ಗಾಂಧೀ ಪಟಕೆ ನೆರಳು ನೀಡುವ ಗುಡಾರಗಳು
ನಿಸ್ತೇಜನರಾದರೂ ಕೂಗಿ..ಕೂಗಿ ಕೇಳುವರು
ಇದೊಂದಿನದ ಮಾತೆಲ್ಲವೆಂದು ಮನೆ ಸೇರಿದರೆಲ್ಲ
ಹಿಂಬಾಲಕರು

ನಾಯಿಗಳು ಓಡಾಡುತಿವೆ ಗಲ್ಲಿ.. ಗಲ್ಲಿಗಳ ಮೂಸಿ
ಇನ್ನೂ ಅನುಮಾನದ ಹೊಗೆಯನ್ನೆ ಊದುತ್ತ..
ಕುಳಿತಿಹರು ಬೆತ್ತದ ಮಾಲೀಕರು... ರಾಷ್ಟ್ರ ನಾಯಕನನ್ನೆ
ಕೊಂದ ಪಾತಕರ ಹಿಡಿದ ಪಡೆ ನಮ್ಮದು... ಏನಾಗಿದೆ
ಇಂದು... ಹೊರಗಿನಿಂದಲೆ ಬಂದು ನಾಡೊಳಗಿನ
ಹಿರಿಯರ ಕೊಂದು ಹೋದವರ ಸುಳಿವು ಸಿಗುತ್ತಿಲ್ಲವಲ್ಲ

ಹೇಗಾಗಿದೆಯೊ ನೋಡಿ... ನಮ್ಮದೆ ನೆಲದಲ್ಲಿ
ನಮ್ಮನೆಯ ಬರಹಗಾರರ ಪರಿಸ್ಥಿತಿ
ಬದುಕಬೇಕಾದರೆ ಬರೆಯುವ ಹಕ್ಕನ್ನೆ ....
ತೊರೆಯಬೇಕಾದಂತಹ ದುಸ್ಥಿತಿ
ಬರೆಯಬೇಕಾದರೆ ಬದುಕುವ ಹಕ್ಕನ್ನೆ...
ತೂಗುಗತ್ತಿಗೆ ಕೊಡುವಂತಹ ವಿಷಮಸ್ಥಿತಿ

No comments:

Post a Comment