ಕಾಲು ಕತ್ತರಿಸಿ ಹೋದುದಕೆ ವ್ಯಥೆಯಿಲ್ಲ
ಕಾಲವು ನಿಲ್ಲದೇ... ಉರುಳುತಿಹುದು
ಎಂಬುದೊಂದು ಚಿಂತೆಯು ಸುಡುತಿಹುದಲ್ಲ ...
ಮೊದಲೆ...ಮಧ್ಯಮ ವರ್ಗದ ಬದುಕಿದು
ಕಾಲವು.. ಕಾಲನು ಕಸಿದುಕೊಂಡು ಬದುಕಿನ
ಮಧ್ಯದಲಿ ಒಂಟಿ ಕಾಲಲಿ ನಿಲ್ಲಿಸಿಬಿಟ್ಟಿದೆಯಲ್ಲ...
ಸಾವಿರ... ಲಕ್ಷ ರೂಪಾಯಿಗಳ ಕೊಟ್ಟು..
ಪುಸ್ತಕಗಳ ಚೀಲವನು... ಹೊತ್ತು ಬರುವಷ್ಟು
ಶಕ್ತಿ ನನ್ನ ಬೆನ್ನಿಗಿಲ್ಲ..
ಹಗಲಿರುಳು ನೂರಾರು ಚೀಲಗಳ...
ಮಣಭಾರವನು ತಂದೆಯು ಹೊತ್ತು ಹಾಕಿದರೂ...
ದಿನದ ಬದುಕು ನಡುಗಡ್ಡೆಯಾಗಿದೆಯಲ್ಲ
ಬೇಡವಣ್ಣ ನನಗೆ ಕ್ರೀಡಾಂಗಣ...ಚಿತ್ರಾಂಗಣ..
ನೃತ್ಯಾಂಗಣ...ರಂಗಾಯಣ...ನೀಡಿರಣ್ಣ
ಕೊಠಡಿಯೊಳಗೊಂದಿನ ಮೂಲೆ...
ಅರಳಿಸ ಬೇಕಿದೆ ನನ್ನ ಕನಸುಗಳನೆಲ್ಲವ...
ಗೋಡೆಗೆ ತೂಗು ಹಾಕಿದ ಕರಿ ಹಲಗೆಯ ಮೇಲೆ.. ತೋರಿಸಿಕೊಡಬೇಕಿದೆ ಈ ಜಗಕೆ ಒಂಟಿ ಕಾಲ್ಬದುಕಿನ ಬೆಲೆ
ಒಂಟಿ ಕಾಲಲೆ ಕಂಡುಕೊಳ್ಳಬೇಕಿದೆ ಬದುಕಿಗೆ ನೆಲೆ
ಬದುಕಲಿ ಕಾಡುವ ನೂರೆಂಟು ಪ್ರಶ್ನೆಗಳಿಗೆ
ಉತ್ತರವ ಕಂಡುಕೊಳ್ಳಲು... ಜಗದೆಲ್ಲ ಕೌತುಕಗಳ
ಓದಿ ತಿಳಿಯುವ ದಾಹವನಿಂಗಿಸಿಕೊಳ್ಳಲು...
ಕಾಲಲಾಗದವನು.. ಎಂದು ನುಡಿಯುವ ಕುಹಕಿಗಳ
ಬಾಯನ್ನು ಮುಚ್ಚಿಸಿ.. ಈ ಒಂಟಿ ಕಾಲ್ಕಂಬದ ಮೇಲೆ
ಮನೆಯ ಹತ್ತು ತೊಲೆಗಳ ಹೊತ್ತು ನಿಲ್ಲಲು ಬೇಕಿದೆ
ಎನಗೆ ಅಕ್ಷರಗಳ ಸೆಲೆ...
No comments:
Post a Comment