Wednesday, September 20, 2017

ವರ್ತಮಾನದಲ್ಲಿ ಕವಿ

ವರ್ತಮಾನದ ವಿಷಯಗಳ ಕುರಿತು
ಬರೆಯಲು ಹವಣಿಸುತಿಹುದು ಮನಸು
ಸಮಾಜದೊರೆಕೋರೆಗಳ ತಿದ್ದುವವರೆ
ಎಡುವುತ್ತಿರುವುದನು ಕಂಡು ಕರಗುತಿದೆ
ಕವಿ ಕಂಡ ಸ್ವಸ್ಥ ಸಮಾಜದ ಕನಸು

ಆಂಗ್ಲರ ಬಂಧನದ ಸಂಕೋಲೆಗಳ ತೊಡೆದು
ಹಾಕಿದೆವು... ಕಡೆದು ಹಾಕಲಾಗಲಿಲ್ಲ ಆಂಗ್ಲ ಭಾಷೆಯೆಂಬ
ಹೆಮ್ಮರವನ್ನು... ಇದರ ಗಾಳಿಯ ಸೇವಿಸಿ ಬಿಕ್ಕುತಿಹರಲ್ಲ
ನಾಡಿಗರು...ಹಣದ ಹೊಳೆಯನೆ ಹರಿಸಿ.. ಹರಿಸಿ
ಪೋಷಿಸಿ...ಸೃಷ್ಟಿಸಿಕೊಳ್ಳುತಿಹೆವಲ್ಲ ನಾವೆ ವಿಷವರ್ತುಲವನು

ಮೇಲುಕೀಳು ಅಸ್ಪೃಶ್ಯತೆಯಂತಹ.. ಸಮಾಜದ
ಪಿಡುಗುಗಳ ವಿರುದ್ಧ ವೈಚಾರಿಕತೆಯ ನುಡಿಗಳ
ಸಿಡಿಯುವ ಮತಿಗಳ ಸೀಳುತಿವೆಯಲ್ಲ ಗುಂಡುಗಳು
ಕುಡಿಯಲು ನೀರಿಲ್ಲ.. ಮಳೆ ಬಂದರೆ ಸೂರಿಲ್ಲ
ದುಡಿಯಲು ಕೆಲಸವಿಲ್ಲ...ಆದರೂ ಜಾತ್ರೆ...
ಜಯಂತಿಗಳ ನಡೆಸುವುದಕ್ಕೆ ಹಣಕ್ಕೇನು ಕೊರತೆಯಿಲ್ಲ

ಹುಡುಕುತಿದೆ ಭಾವನೆಗಳ ಮನಸು ಈ ಲೋಕದಲಿ
ಹುಡುಕಿದರೂ ಸಿಗದಾಗಿದೆ ಪ್ರೀತಿ..ಪ್ರೇಮ..
ಕರುಣೆ...ತ್ಯಾಗ..ಸಹನೆ.. ದಯೆ ಎಲ್ಲದರಲ್ಲಿಯೂ
ನಿರ್ಭಾವವೆ ಮನೆಮಾಡಿಬಿಟ್ಟಿದೆ... ಕಾರಣ ಧನದ
ಭೂತವು ಇವೆಲ್ಲವ ಹೂತು ಕುಳಿತುಬಿಟ್ಟಿದೆ
ಹೊರಬರದಂತೆ ಕಾಯುತ್ತ.... ಇದನ್ನೆಬ್ಬಿಸಿ ಓಡಿಸುವ
ಲೇಖಕರ ಲೇಖನಿಗಳು ಅಡುವಾಗಿರುವವಲ್ಲ ಇದರದೆ ಕಪಾಟಿನಲ್ಲಿ....

ತವಕ ತಲ್ಲಣದಿ ಬೇಯುತಿದೆ ಕವಿಯ ಮನವು
ಒಂಟಿ ದಾರಿಯಲಿ ಕೂಗಿ.. ಕೂಗಿ ಕುಸಿದಂತಾಗಿದೆ ಕಸುವು
ನೀಗುವುದೆ ರಾಮರಾಜ್ಯದ ನಿರ್ಮಾಣದ ಹಸಿವು
ಬರುವುದೆಂದು ಬರಗಾಲನೆದುರಿಸುವ ಬಲವು
ಸಿಕ್ಕುವುದೆ...? ಅವನ ಕನಸುಗಳಿಗೆ ಗೆಲವು...ಹೇಗೆ.?
ಬರೆಯದೆ ಅಳಿದುಳಿದ ಹಾಳೆಗಳಿಗೆ ಬೆಲೆಯುಂಟು
ಕವಿ ಕಂಡು ಬರೆದ ಪುಟದೊಳಗಿನ ಭಾವನೆಗಳಿಗೆ
ಏಂಟಾನೆಯ ತೂಕವು........ಇಲ್ಲದಂತಾಗಿರುವಾಗ

No comments:

Post a Comment