Tuesday, April 24, 2018

ಶಾಯರಿ ೧೫೬

ಮರ ಎಷ್ಟೇ...
ಎತ್ತರಕ್ಕೇರಿದರೂ
ಒಂದಲ್ಲ
ಒಂದು ದಿನ,
ಒಂದು ಕಡೆ
ಟೀಸಲೊಡೆಯಲೆಬೇಕು
ಸಾಕಿ...

ಪ್ರೀತಿ
ಸಸಿ
ಚಿಗುರುವ
ಮುನ್ನವೇ...
ಚಿವುಟಿ
ನಡೆದಳಲ್ಲಾಕಿ

ನನ್ನವಳೆಂದು

ಬರೆದ ಕಣ್ಣೊಳಗೆ ನೂರೆಂಟು
ಕನಸುಗಳನೆ ತುಂಬುವೆ...
ಬದುಕು ನಿರಾಶಾದಾಯಕವಾಗದಿರಲೆಂದು,
ನೀಳ ನಾಸಿಕಕೊಂದಷ್ಟು ಸಿಟ್ಟನ್ನು
ಸೇರಿಸಿಬಿಡುವೆ... ಸತಾಯಿಸುವಾಗಲೆಲ್ಲ
ನಾ...ಹುಸಿಮುನಿಸ ತೋರಿಸಲೆಂದು,
ತುಟಿಯ ತುಂಬ... ತೊಂಡೆ ಹಣ್ಣಿನ ಬಣ್ಣವ
ತುಂಬಿ ಬಿಡುತ್ತೇನೆ..... ಇಳಿ
ಸಂಜೆಗೊಂದೊಂದು ನನ್ನ ನೊಸಲಿಗೆ
ಮುದ್ರೆಯನೊತ್ತಲು...
ಗುಲಾಬಿ ರಂಗನು ಮೆತ್ತಿ ಕೆನ್ನೆಯಲೊಂದು
ಗುಳಿಯ ತೊಡಿ... ನನ್ನೆದೆಯ ಒಲವನೆಲ್ಲ ತುಂಬುವೆ..
ಬೆಲ್ಲದ ಗಲ್ಲಕ್ಕೊಂದು ಕಪ್ಪು ಕಾಡಿಗೆಯ
ಚುಕ್ಕೆಯನಿರುಸುವೆ, ಕಂಡವರ ನೆದರು ತಾಕದಿರಲಿ...
ಆ ಹಣೆಯಲೊಂದು ಸಿಂಧೂರದ
ಮುದ್ರೆಯನೊತ್ತುವೆ...ಜನ್ಮ ಜನ್ಮಕೂ
ನೀ ನನ್ನವಳೆಂದು...

Tuesday, April 17, 2018

ಬಸವಣ್ಣ....

ಬಸವಣ್ಣ... ಕಿತ್ತು ಬಿಸಾಕಿದುದು
ದಾರವನ್ನಲ್ಲ... ಜಾತಿಯ ಮೌಡ್ಯವನ್ನ....
ಒಪ್ಪಿ...ಎದೆಗೊತ್ತಿಕೊಂಡದ್ದು, ತಾಮ್ರದ
ತಟ್ಟೆಯಲ್ಲಿ ಝಣಝಣಿಸುವ ನಾಣ್ಯಗಳ
ಸುರಿಮಳೆಯ ಸುರಿಸುವ ಕಲ್ಲನ್ನಲ್ಲ...!!!
ಆತ್ಮವನುದ್ಧರಿಸುವ ಲಿಂಗವನ್ನ.....

ಹೇಳಿದೆ ನೀನು... ಕೇಳಲಿಲ್ಲ ನಾನು, ಮುಳುಗೆದ್ದೆ
ಗಂಗೆ...ತುಂಗೆ..ಭದ್ರೆ....ಕಾವೇರಿಗಳ ತಟಗಳಲಿ
ತೊಳೆದದ್ದು, ಪರಸ್ತ್ರೀಯ ಅಂದವ ಕಂಡು, ಮೈಯಲಿ
ಉಕ್ಕಿದ ಬೇವರಿನ ವಾಸನೆಯಷ್ಟೇ...,ಕಾಮನೆಗಳ
ಕಾವಿನಲಿ ಬೇಯುತಿರುವ ಮನಸೆಂದು ನಿಷ್ಕಲ್ಮಷವಾಗುವುದು
ಮುಪ್ಪಾವರಿಸಿ...ಸಾವೆದುರು ಬಂದು ನಿಂತಾಗ ಸಜ್ಜನನಾದರೇನು...?

ನಾನೇಕೆ..ಅಪ್ಪಿಕೊಳ್ಳಲಯ್ಯಾ ನಿನ್ನನು...?
ನಿನ್ನನುಭಾವಮೃತವನೆ ನಾ ಸವಿಯದಿದ್ದಾಗ...!!!
ಹಾಕಿಕೊಟ್ಟ ಸನ್ಮಾರ್ಗವ ತೊರೆದು, ಬದುಕಿನ
ಭವ ಜಂಜಾಟಗಳ ನರಕದ ಹಾದಿಯನು ತುಳಿದಿರುವಾಗ
ಹೊಟ್ಟೆ ಹಿಡಿಯುವಷ್ಟೆ ಉಣ್ಣುವ ನಾವುಗಳು..ಮತ್ತೇಕೆ
ಅನುಭವಿಸಲಾರದಷ್ಟು ಹೆಣ್ಣು...ಹೊನ್ನು..ಮಣ್ಣನ್ನು ಹೊಂದುವೇವು...

ಈ....ಕಲಿಗಾಲದಲ್ಲಿ ನೀ.....ಕಳಬೇಡ ಕೊಲಬೇಡವೆಂದರೆ
ನಾನೆಲ್ಲಿ ಹೋಗಲಿ....ಬಸವಣ್ಣ..
ಅಸತ್ಯ ನುಡಿಯದೆ ಅರುಣೋದಯವಾಗದ ಭವದಲ್ಲಿ
ಬಾಳುತಿರುವ ನಾನೆಂತು ನಿಮ್ಮನಪ್ಪಿ ನಡೆಯಲಯ್ಯ
ಬರಬೇಡವೊ...ಮರಳಿ ಈ ನಾಡಿಗೆ, ಎಲ್ಲರ ಕ್ರಾಂತಿಯ ಕಿಚ್ಚು
ಕುಲ..ಕಾಮ...ಧನಕನಕಗಳನ್ನು ಅನುಭವಿಸದರಲ್ಲಿಯೆ
ಉರಿದು ಹೋಗುತ್ತಿದೆ...

ಇವರಿಗೆಲ್ಲ ಬೇಕಿರುವುದಿಗ ಜ್ಞಾನದ ಬೆಳಕೆನಲ್ಲ..!!!
ಹೊಟ್ಟೆಗೆ ಒಂದಿಷ್ಟು ಹಿಟ್ಟು...ಜುಟ್ಟಿಗೊಂದಿಷ್ಟು ಹೂವು
ಸಾಗುವುದು ಸಂಸಾರ...ಇಲ್ಲದಿದ್ದರೂ ನಿನ್ನ ಸಾರ

ಶಾಯರಿ ೧೫೫

ಅವಳ
ಮುಳ್ಳು
ನೆನಪುಗಳನ್ನು
ಅದೇಷ್ಟೊ
ಕಿತ್ತು ಹಾಕಿರುವೆ
ಸಾಕಿ...

ಯಾಕೋ...
ಏನೋ....
ಕಿತ್ತು ಹಾಕಿದ
ಗಾಯದ
ಹಸಿಯು
ಇನ್ನೂ
ಒಣಗುತ್ತಲೆ
ಇಲ್ಲ....

Sunday, April 15, 2018

ಶಾಯರಿ ೧೫೪

ತುಂಬಿ
ತುಳುಕುವ
ಹೂಜಿ...
ಹೂಜಿಗಳನೆ
ಖಾಲಿ
ಮಾಡಿದೆ
ಸಾಕಿ...
ನಶೆಯೆ
ಏರುತ್ತಿಲ್ಲ...

ಏನು ಮಾಡಲಿ...?
ಅಂದವಳು
ಅಮಲುಗಣ್ಣಲಿ
ಏರಿಸಿದ
ನಶೆಯೆ...
ಇನ್ನೂ
ಇಳಿಯುತ್ತಿಲ್ಲವಲ್ಲ

Friday, April 13, 2018

ಶಾಯರಿ ೧೫೩

ಈ ಕಪ್ಪು
ತುಟಿಯ
ಮೇಲಿಟ್ಟು
ಸುಡುತಿರುವೆ
ಸಾಕಿ
ಭಂಗಿಯನು

ಕೊಳವೆಯೊಳಗಿನ
ತಂಬಾಕನ್ನು
ಸುಡಲೆಂದಲ್ಲ...
ಎದೆಯೊಳಗೆ
ಹೂತಿಟ್ಟ ಅವಳ
ನೆನಪುಗಳ
ಉಸಿರನ್ನು
ಕಟ್ಟಿಸಲು.

Thursday, April 12, 2018

ಶಾಯರಿ ೧೫೨

ಅದೆಂತಹ
ವಿಷವ
ಕುಡಿಸಿಬಿಟ್ಟಿರು
ವವಳು
ಸಾಕಿ....

ಬದುಕಿರುವೆನಲ್ಲ
ಸತ್ತಂತೆ...
ಬಾಳಿನ ಎಲ್ಲ
ಸುಖದ
ಬಾಗಿಲುಗಳನ್ನು
ಮುಚ್ಚಿ...

Monday, April 9, 2018

ಶಾಯರಿ ೧೫೧

ಅವಳು
ಹೂಡಿದ
ಪ್ರೇಮ ಬಾಣವು
ತನ್ನ ಗುರಿಯನ್ನು
ತಪ್ಪಿರುತ್ತಿದ್ದರೆ...
ಸಾಕಿ..

ಬಾಣದ
ನೋವ
ಮರೆಸಿಕೊಳ್ಳಲು
ನಾನಿಂದು...
ನಿನ್ನ ಮಧು
ಬಟ್ಟಲಿನ
ದಾಸನಾಗುತ್ತಿರಲಿಲ್ಲ

ಅಗುಳಿಗಿಲ್ಲದಾಯಿತೆ ಬೆಲೆ

ಹೊಟ್ಟೆ ತುಂಬಿದವರ ಮದುವೆ ಮನೆಯಲ್ಲಿ
ಹಸಿವಿನರಿವಿಲ್ಲದ ನನ್ನ ಹೊಟ್ಟೆ ತುಂಬಿತ್ತು...
ಅಗುಳಿನ ಬೆಲೆಯನರಿಯದವರ ಮೋಜಲ್ಲಿ
ನಾರು ಗುಡಿಯೊಳಗಿನ ಜೀವವೊಂದು
ಹಸಿವಿಂದಲೆ ಸತ್ತಿತ್ತು, ಒಡಲು ಬರಿದಾಗಿ...ಎದೆ
ಬಡೆದುಕೊಂಡು ಅಳುತ್ತಿತ್ತೊಂದು ಕರುಳು...

ಜಿಹ್ವದ ದುರಾಸೆಗಾಗಿ ಬಡಿಸಿಕೊಂಡು...
ತಿಂದು ತೇಗುವಿರಲ್ಲ ಹೊಟ್ಟೆ ಬಿರಿಯುವಷ್ಟು
ಉಳಿದನ್ನವನು ಚೆಲ್ಲಿ ನಡೆದುಬಿಡುವಿರಿ, ಅಡುಗೆ ಭರ್ಜರಿಯೆಂದು...
ಶ್ರಮಿಕನ ಶ್ರಮವು ಸೇರುವುದಲ್ಲ ತಿಪ್ಪೆಗೊ...ಗಟಾರಕ್ಕೊ..
ಮದುವೆ ಮನೆ ಮುಂದೆ ಸಾಲುಗಟ್ಟಿ ನಿಂತ ಭಿಕ್ಷುಕರಿಗೆ ಕೊಡುವಿರಲ್ಲ ಬೆನ್ನಿಗೆಟು

ಕಾಣಲಿಲ್ಲವೆ ನಿಮಗೆ, ವಧು/ವರರ ಪಿತೃಗಳ
ಹೆಗಲು ಸೋತದ್ದು...
ಅಗುಳಗುಳಿಗಾಗಿ ಅವರು ಪಟ್ಟ ಪಡಿಪಾಟಲು...
ಬಂಧು ಬಾಂಧವರು ಕೈಬಿಟ್ಟಾಗ, ಮನೆ, ಹೊಲಗದ್ದೆಗಳ
ಮೇಲೆ ಸಾಲವ ಮಾಡಿ ಮಾಡಿಟ್ಟ ಮೃಷ್ಟಾನ್ನವದು...
ಎಷ್ಟೋ.. ಜನರ ಕಣ್ಣೀರ ಕುಡಿದರಳಿದ ಅಗುಳದು

ಹೊತ್ತು...ಹೊತ್ತಿಗೆ ವಿದ್ಯುತ್ ಇಲ್ಲ, ಸಾಲುತಿಲ್ಲ ನೀರು...
ಬೆಳೆಯಲು ಭತ್ತ, ನಮ್ಮ ನೀರಿಗಾಗಿಯೆ ಪರರಾಜ್ಯಗಳೊಂದಿಗೆ
ನಿತ್ಯ ನಿರಂತರ ಹೋರಾಟ, ಬೆನ್ನ ಬಂಡೆಯ ಕಾಯಿಸಿ...
ಭೂದೇವಿಗೆ ಬೆವರನುಣಿಸಿ...ಬಂಗಾರದ ಬೆಳೆ ಬೆಳೆದು
ನಿಮ್ಮಂಗಳಕೆ ಹಾಕುವವನ ಬೆನ್ನಿನ ಬಟ್ಟೆ ಯಾವಾಗಲೂ...
ತ್ಯಾಪೆಯೆ...ಮಡದಿಯ ರವಿಕೆಗಳಲ್ಲಿ ಲೆಕ್ಕವಿಲ್ಲದಷ್ಟು ನಕ್ಷತ್ರಗಳು

ಈ ಭೂಮಿಯಲ್ಲಿ... ಹಸಿವಿನಿಂದಲೆ ಸಾಯುತ್ತಿರುವ
ಅದೇಷ್ಟೊ ದೇಶಗಳಿವೆ, ಪೌಷ್ಟಿಕಾಂಶದ ಕೊರತೆಯಿಂದಲೆ,
ಅನುದಿನವು ಸಾವಿರಾರು ಮಕ್ಕಳು ಮಸಣವ ಸೇರುತಿಹವು.
ಕಟ್ಟಿ ತರಬಹುದು,ತಟ್ಟೆಯಲ್ಲಿ ಅನ್ನವನುಳಿಸಿ ಚೆಲ್ಲುವಷ್ಟು ಬೆಲೆ
ಅರಿಯುವಿರೇನು ಬೆವರ ಹರಿಸಿ ಬೆಳೆ ತೆಗೆಯುವ ಕಲೆ
ಇದೆ ಏನು ? ಮಣ್ಣ ಮಕ್ಕಳಿನ ಬೆವರಿಗೆ ಕಟ್ಟುವ ಬೆಲೆ...

Saturday, April 7, 2018

ಶಾಯರಿ ೧೫೦

ನಿನ್ನರಮನೆಯ
ಮುಂದೆ
ನಿಂತಿರುವ
ನನ್ನೆಲ್ಲ
ಗೆಳೆಯರನ್ನು
ಮರಳಿ
ಕಳುಹಿಸಿಬಿಡು
ಸಾಕಿ...

ಬಡವ
ಹೋಗನಿಂದು...
ನನಗೀಗ ಅವರ
ಸಾಂತ್ವನದ ನುಡಿಗಳ
ಅವಶ್ಯಕತೆಯಿಲ್ಲ.....
ಬೇಕಿರುವುದು ನಾಲ್ಕು
ಹೆಗಲುಗಳಷ್ಟೆ...
ಅದಕ್ಕಿನ್ನೂ ಸಮಯವಿದೆ
ಎಂದು ಹೇಳಿಬಿಡು..

ಶಾಯರಿ ೧೪೯

ಇಂದು
ನನ್ನ ಗುಡಿಸಲಿಗೆ
ನಾನು ಹೋಗಲೆ
ಬೇಕಿದೆ
ಸಾಕಿ...

ಗೊತ್ತಿಲ್ಲ..
ಬಲಗಣ್ಣು
ಬಹಳಷ್ಟು
ಅದರುತಿಹುದು
ಅವಳು
ಮರಳಿ ಬರಹುದೇನೊ...?

ಶಾಯರಿ ೧೪೮

ನಿನ್ನ
ಮಧುವಿನರಮನೆಯಲ್ಲಿ
ಅದೇಷ್ಟೊಂದು
ಒಲವಿಹುದು
ಸಾಕಿ....

ನೀ...
ಮೊಗೆಮೊಗೆದು
ಕೊಟ್ಟಷ್ಟು
ಹೆಚ್ಚಾಗುತಿದೆಯಲ್ಲ....
ಪಡೆದವರು
ಯಾಕೋ...
ತಮ್ಮ ಎದೆಯಲ್ಲಿ
ತುಂಬಿಕೊಳ್ಳುತ್ತಿಲ್ಲ...

ಶಾಯರಿ ೧೪೭

ಕೆಲವರು
ಇತಿಹಾಸವನ್ನು
ಸೃಷ್ಟಿಸಲೆಂದೆ
ಹುಟ್ಟಿರುತ್ತಾರಂತೆ
ಸಾಕಿ...

ನಾನು
ಇತಿಹಾಸವಾಗಲೆಂದೆ
ಹುಟ್ಟಿರಬಹುದಲ್ಲವೆ...?
ಬಹುಶಃ...
ನಾನಳಿದ ಮೇಲೆ
ಈ ಮಾತು
ನಿಜವಾಗಬಹುದೇನೊ.

ಶಾಯರಿ ೧೪೬

ಕುಡಿದರೆ
ಮಧುವನ್ನು
ನೆತ್ತರು
ಬರುವುದೆನ್ನುವರು
ಎಲ್ಲರು
ಎದೆಯಿಂದ
ಸಾಕಿ...

ನನಗೇಕೆ
ಹೀಗೆ ?
ಕುಡಿದಾಗಲೆಲ್ಲ
ಅವಳ
ನೆನಪುಗಳೆ
ಉಮ್ಮಳಿಸಿ
ಬರುವವು

ಶಾಯರಿ ೧೪೫

ನೀನು
ಗೆಜ್ಜೆಕಟ್ಟಿ
ಕುಣಿಯುವೆ
ಸಾಕಿ...
ಹೊಟ್ಟೆ
ಪಾಡಿಗಾಗಿ..

ಗೆಜ್ಜೆಯಿಲ್ಲದೆ
ನನ್ನನೆ...
ಕುಣಿಸಿಬಿಟ್ಟಳವಳು
ಕೇವಲ
ಶೋಕಿಗಾಗಿ

ಶಾಯರಿ ೧೪೪

ಈ ರಸ್ತೆಯನ್ನೇಕೆ
ದಿಟ್ಟಿಸಿ
ನೋಡುತ್ತಿರುವೆ
ಎಂದು
ಕೇಳುತಿರುವೆಯಲ್ಲ
ಸಾಕಿ...

ಆ ರಸ್ತೆಯ
ತುಂಬಾ...
ಅವಳು
ನನ್ನನು ಬಿಟ್ಟು
ಹೋದ
ಹೆಜ್ಜೆಯ
ಗುರುತುಗಳೆ
ತುಂಬಿಕೊಂಡಿವೆ...
ಮರಳಿ ಬರುವಳೇನೊ..?
ಎಂಬ ಆಶಯದಿಂದ
ಕಾಯುತಿರುವೆ....

ಶಾಯರಿ ೧೪೩

ಆ... ನಿಷ್ಕರುಣೆಯ
ದೇವಿಗೆ
ನಾನಾವ
ಬಲಿಯ
ಕೊಡಲಿ
ಸಾಕಿ...

ಹಗಲುಗಳನ್ನೆಲ್ಲ
ಇರುಳುಗಳಾಗಿಸಿ...
ಇರುಳುಗಳನ್ನೆಲ್ಲವ
ಹಗಲಾಗಿಸಿದ
ಅವಳ ವರಕ್ಕೆ
ನಾನೇಷ್ಟು
ವಂದಿಸಲಿ

ಶಾಯರಿ ೧೪೨

ಕೆಸರಿನಲ್ಲಿಯೆ
ಕಮಲ
ಅರಳುತ್ತದೆಂದು
ಕೇಳಿದ್ದೆ
ಸಾಕಿ...

ನಿನ್ನ
ನೋಡಿದ
ಮೇಲೆಯೆ
ನನಗರಿವಾದದ್ದು
ಹೂವಿನ
ಬದುಕು
ಎಷ್ಟು
ಸಾರ್ಥಕವೆಂದು..

ಶಾಯರಿ ೧೪೧

ವೈದ್ಯನ
ರೀತಿ ನನ್ನ
ಬಳಿಯಲೊಂದು
ಸ್ಟೇಥಸ್ಕೋಪ್
ಇದ್ದಿದ್ದರೆ..
ಅವಳ
ಹೃದಯದ
ಬಡಿತವನ್ನಾದರೂ
ಕೇಳಬಹುದಿತ್ತು
ಸಾಕಿ...

ಯಾರಿಗೆ ಗೊತ್ತು..?
ಅವಳಲ್ಲಿ
ಅದು
ಇದೆಯೋ...?
ಇಲ್ಲವೋ....?

ಶಾಯರಿ ೧೪೦

ಈ ರಾತ್ರಿಗೇತಕೊ..
ನೀ.... ಕುಡಿಸಿದ
ಮಧುವಿನ
ರುಚಿಯು
ಉಪ್ಪಾಗಿತ್ತು
ಸಾಕಿ...

ನನ್ನ
ನೋವ ಕಂಡು
ನಿನ್ನ ಕಂಗಳು...
ನೊಂದು
ಬಟ್ಟಲಲಿ
ಎರಡು
ಹನಿಗಳನ್ನು
ಜಾರಿಸಿರಬಹುದೇನೊ...?

ಶಾಯರಿ ೧೩೯

ನಿನೇಷ್ಟು
ಕರುಣಾಮಯಿ
ಸಾಕಿ...

ಜೇಬು ಮತ್ತು
ಹೃದಯ...
ಎರಡು ಖಾಲಿ
ಎಂದು
ಗೊತ್ತಿದ್ದರು
ಹೊಟ್ಟೆ ತುಂಬಾ
ಮಧುವನ್ನು
ಕುಡಿಸಿದೆಯಲ್ಲ...

ಶಾಯರಿ ೧೩೮

ತಮ್ಮ
ಪ್ರೀತಿಯ
ಸೋಲನ್ನೆ...
ಮರೆಯಬೇಕೆಂದೆ
ಬಂದವರೆಲ್ಲ... ಇಲ್ಲಿ
ಸಾಕಿ...

ಎಲ್ಲರೂ....
ನೆನಪಿಸಿಕೊಂಡವರೆ
ಮರೆತು
ಹೋದ ಒಬ್ಬರನ್ನಾದರು
ನಾ... ಕಾಣಲಿಲ್ಲ

ಶಾಯರಿ ೧೩೭

ನಿನ್ನ
ಮಧುಶಾಲೆಯ
ಪಂಜರದಿಂದ
ಹಾರಿ ಹೋಗಲು
ಎಷ್ಟೋ...
ಪ್ರಯತ್ನಿಸುತ್ತಿರುವೆ
ಸಾಕಿ...

ಬಾಗಿಲೇನೊ...
ತೆರೆದಿದೆ..
ಹಾರಲಿ ಹೇಗೆ
ರೆಕ್ಕೆ ಬಿಚ್ಚಿ...
ಜೋಡಿಯಿಲ್ಲದೆ
ಬಾನಿಗೆ
ಒಂಟಿಯಾಗಿ..

ಶಾಯರಿ ೧೩೬

ಮಂದಿರದಲ್ಲಿನ
ತೀರ್ಥವು..
ನನ್ನ ಪ್ರೀತಿಯನ್ನು
ದಯಪಾಲಿಸುವುದಾದರೆ....
ನಿನ್ನ ಮಧು
ಬಟ್ಟಲನ್ನು ಈಗಲೆ
ಬಿಡಲು
ನಾನು
ಸಿದ್ಧ
ಸಾಕಿ...

ಶಾಯರಿ ೧೩೫

ಸಂತೆಯಲ್ಲಿ
ಹೂ ಮಾರುವವಳು
ಮಲ್ಲಿಗೆ ಬೇಕೆ
ಎಂದು
ಕೇಳಿದಳು
ಸಾಕಿ...

ಹೃದಯವು ಬರಿದಾಗಿತ್ತು..
ಜೇಬು ಖಾಲಿಯಾಗಿತ್ತು...
ಸಂತೆ ಬೀದಿಯ
ತಿರುವಿನಲ್ಲಿ,
ನನ್ನ ಪ್ರೀತಿಯು ಸತ್ತಿತ್ತು...
ಪುಟ್ಟಿಯೊಳಗಿನ ಮಲ್ಲಿಗೆಯ..
ಘಮಲಿಗೆ ಕುಡಿದಿದ್ದ,
ಮಧುವಿನ
ಮತ್ತು.. ಇಳಿದಿತ್ತು..

ಶಾಯರಿ ೧೩೪

ಪ್ರೀತಿಯ
ಗಾಯಕ್ಕೆ...
ನಿನ್ನ ಮಧುರಸವೆ
ಮದ್ದೆಂದರೆಲ್ಲರೂ
ಸಾಕಿ...

ಅದಕೆ..
ಆಚಾರ..
ವಿಚಾರಗಳ
ಕಂತೆಗಳನ್ನು
ಅಗಸಿ ಬಾಗಿಲಲ್ಲೆ
ಇಟ್ಟು ಬಂದಿರುವೇನು..

ಶಾಯರಿ ೧೩೩

ಕಣ್ಣುಗಳಿಲ್ಲದಿದ್ದರೂ...
ಕನಸುಗಳನ್ನು
ಕಾಣಬಹುದು
ಸಾಕಿ...

ಕನಸುಗಳೆ...
ಇಲ್ಲದ
ಕಣ್ಣುಗಳಿದ್ದರೇನು
ಹಸಿ ಬಣವಿಗೆ
ಬೆಂಕಿ..
ಹಚ್ಚಿದಂತೆ

ಶಾಯರಿ ೧೩೨

ಮಂದಿರಕ್ಕೆಂದೆ
ಹೊರಟು
ನಿಂತಿದ್ದೆ
ಸಾಕಿ...

ಪಕ್ಕದ
ಭಕ್ಷಿಯ
ಮನೆಯಿಂದ
ಕೋಳಿ ಸಾರಿನ
ವಾಸನೆ
ಮೂಗಿಗೆ
ಬಡೆಯಿತು..

ಶಾಯರಿ ೧೩೧

ನನ್ನ ನಾಡಿ
ಮಿಡಿತವನ್ನು
ಪರಿಕ್ಷೀಸಿ...
ವೈದ್ಯನು
ನೀಡಿದ್ದು
ಕಹಿ ಮದ್ದು

ನೀನೊಬ್ಬಳೆ
ಸಾಕಿ...
ಎದೆಯ ಮುಟ್ಟಿ
ಮಧುವಿನಿಂದ
ಉಪಚರಿಸಿದ್ದು..

ಶಾಯರಿ ೧೩೦

ಅಲ್ಲೊಬ್ಬ
ಕೇಳಿದ....
ಎಷ್ಟೊಂದು
ಕುಡಿಯುವೆ ಬಡವ
ಕರಳುಗಳು
ಸುಟ್ಟು
ಹೋದಾವು...

ಸಾಕಿಯೆಂದಳು...
ಅವನೆದೆಯೆ
ಸುಟ್ಟು
ಹೋಗಿದೆ...
ಇನ್ನೂ ಕರುಳಿನ
ಪಾಡೇನು ಬಿಡು
ಎಂದಳು

ಶಾಯರಿ ೧೨೯

ಬಿದಿರಿಗೆ
ಎಷ್ಟು ರಂಧ್ರಗಳಿದ್ದರೇನು ?
ಉಸಿರದು
ಸೋಕದೆ...
ರಾಗವು
ಮೂಡದು
ಸಾಕಿ....

ಬದುಕಲಿ
ಎಷ್ಟು ಸಿರಿಯಿದ್ದರೇನು..?
ಅವಳಿಲ್ಲದ
ಬಾಳು
ಹೊನ್ನಾಗುವುದೇನು..?

ಮೈಲಿಗೆ

ಮೈಲಿಗೆಯ ಕಳಚಿ
ಒಳಗಿಳಿವಾ ಆಸೆ ನನಗೂ
ಇದೆ.. ಮೌನದಿ ಕುಳಿತ
ಮನಸ್ಸಿಗೆ ನಾಲ್ಕು ಮಾತನ್ನು
ಹೇಳಿಕೊಡಬೇಕಿದೆ...ಏನು ಮಾಡಲಿ ?
ಮನೆಯ ಮರ್ಯಾದೆಯು ಹಾಕಿದೆಯಲ್ಲ
ಸುತ್ತಲು ಬೇಲಿ...

Friday, April 6, 2018

ಗಾಲಿಬ್

ಆಸ್ತಿ......? ಗಾಲಿಬ್..!!!!
ನೋವಿನ ಮುಳ್ಳುಗಳನೆ ಹೊತ್ತು
ತರುವ.. ಗಂಟನು ನಾನೇನು ಮಾಡಲಿ...
ಪ್ರೀತಿ ಉಡಿಯನು ಬರಿದೆ ಹಿಡಿದುಕೊಂಡು
ಬರುವ ಮನಗಳಿಗೆ.... ನಾನದೇಷ್ಟು ಸಂತೈಸಲಿ...

ಎಷ್ಟೋ ಮನಗಳು.... ಮೌನಗಳ
ಕಂದರದಲ್ಲಿ ಬಿದ್ದು ಉಸಿರಿಲ್ಲದಂತಾಗಿವೆ...
ಕೈ ಹಿಡಿದೆತ್ತಲದಷ್ಟು..., ಸೋತವರನ್ನು
ನನ್ನ ಮಡಿಲಲಿ ಮಲಗಿಸಿಕೊಳ್ಳಲದೇಷ್ಟು...
ಶಕ್ತಿಯು ಕುಂದಿರುವಾಗ....

ಗಾಲಿಬ್...
ನಾನು ಹಾಡುವ ಎಲ್ಲ ಹಾಡುಗಳು
ಹಳಸಿದಂತಯೆ ಕೇಳುವುದು...ಕಾರಣ,
ನಿನ್ನ ಮನದಲಿ ಅವಳು ಮೀಟಿದ ನೋವಿನ
ರಾಗವು ಇನ್ನೂ... ಮಿಡಿಯುತ್ತಲೆ ಇರುವುದಲ್ಲ !!!!

ಮಲ್ಲಿಗೆಯದ್ದೇನು ತಪ್ಪು..?
ಅವಳ ಮನಸ್ಸಿಗದು ಹಿಡಿಸದಿದ್ದಾಗ....
ಸುಗಂಧವೇನು ಕಡಿಮೆ ಸೂಸಿತೆ..? ಮುಡಿಗೇರಿಸಿದರೇನು, ಅವಳಂಗಸಂಗಕೆಂದು ಮಂಚದ ಮೇಲೆ ಬಿಸುಡಿದರೇನು...
ಅದರಂತರಂಗದ ನೋವನ್ನು ಕೇಳುವರಾರು..?

ಮರೆಯಲೆಂದು ಬಂದವರಾರು ಮರೆತಿಲ್ಲ..!!
ಮಧು ಬಟ್ಟಲೊಳಗಿನ ಮಧುವ ಕುಡಿದವರು...
ಅವಳ ತುಟಿಯಂಚಿಂದ ಹೀರಿದ ಜೇನಿನ....ಸವಿಯನ್ನೆ ಮರೆತಿಲ್ಲ.... ಇನ್ನೂ ಮರೆಯುವ ಮಾತಾದರೂ ಎಲ್ಲಿ ಗಾಲಿಬ್
ಅವಳನ್ನು ಮರೆಯುವ ನಿಯತ್ತು ನಿನಗಿಲ್ಲ
ಅವಳ ಮತ್ತನು ಮರೆಸುವ ತಾಕತ್ತು ಮಧುವಿಗಿಲ್ಲ...!!!!!

Thursday, April 5, 2018

ಶಾಯರಿ ೧೨೮

ಕಲ್ಲು
ದೇವರನ್ನು
ಕಲ್ಲಿನ..
ಕಟ್ಟಡದೊಳಗೆ
ಏಕೆ...ಕಟ್ಟಿಡುವರೆಂದು
ನನಗಿಂದು
ಅರ್ಥವಾಯಿತು
ಸಾಕಿ...

ನೋವುಂಡವರು
ನೋವುಂಡವಳ
ಮಡಿಲಿನ
ಮಧು
ಬಟ್ಟಲಿಗೆ
ಹಾತೊರೆಯುವದನ್ನು
ನೋಡಿ..!!!!

ಶಾಯರಿ ೧೨೭

ಎಲ್ಲರೂ...
ಎದೆಯ
ಮೇಲಿನ ಕಪ್ಪು
ಲಿಂಗವನೆ...
ಹಿಡಿದು
ಮಾತನಾಡುತ್ತಿರುವರು
ಸಾಕಿ...

ಯಾರು...
ಮೌನವನ್ನೇ....
ಕೊಲ್ಲುತ್ತಿಲ್ಲ...
ಮನಕಂಟಿದ
ಮಸಿಯನ್ನು
ಅಳಿಸಿ...

ಶಾಯರಿ ೧೨೬

ಈ ಎದೆಯ
ಗೂಡೊಂದು
ಗಾರೆ, ಇಟ್ಟಿಗೆಗಳಿಂದ
ಕಟ್ಟಿದ್ದಾಗಿದ್ದರೆ
ಎಷ್ಟು ಸುಖವಿರುತ್ತಿತ್ತು
ಸಾಕಿ...

ನೋವಿಂದ
ಒಡೆದಾಗಲೆಲ್ಲ...
ಮತ್ತೆ... ಮತ್ತೆ...
ಕಟ್ಟಿಕೊಳ್ಳಬಹುದಿತ್ತು...

ಶಾಯರಿ ೧೨೫

ನನ್ನೆದೆಯೊಳಗೆ
ಸುಡುವವಳ
ನೆನಪುಗಳ
ಕಾವು...
ನಿನಗರಿವಾಗದು
ಸಾಕಿ...

ನಾ...
ಬರೆದಿಟ್ಟ
ಪದ್ಯಗಳ
ಮೇಲೆ...
ಒಮ್ಮೆ ಕೈ
ಇಟ್ಟಾದರೂ
ನೋಡು....
ಬಿಸಿ ತಾಕಿದರೂ...
ತಾಕಬಹುದು..

ಶಾಯರಿ ೧೨೪

ಸೋಲುತ್ತೆವೆಂದು
ಗೊತ್ತಿದ್ದರೂ...
ಅವಳ
ಮನದ
ಬಾಗಿಲನ್ನು
ತಟ್ಟುವರಲ್ಲ
ಎಲ್ಲ
ರಸಿಕರು...
ಸಾಕಿ....

ಬಹುಶಃ
ಸೋತವರಿಗೆಲ್ಲ
ನಿನ್ನರಮನೆಯ
ಬಾಗಿಲು
ತೆರೆದಿರುವುದಲ್ಲ
ಎಂಬ ಹುಂಬು
ಧೈರ್ಯವಿರಬಹುದೇನೋ....

ಶಾಯರಿ ೧೨೨

ಅವಳಂದವ
ಕಂಡು...
ಹೊಟ್ಟೆ
ಉರಿದುಕೊಂಡವರು
ಅದೇಷ್ಟೊ...
ಸಾಕಿ..

ಉರಿಯುತಿರುವ
ಹೊಟ್ಟೆಯ
ತಣ್ಣಗಾಗಿಸಿಕೊಳ್ಳಲು
ಅನುದಿನವು
ಕುಡಿಯುತಿರುವೆ...
ಅವಳ ನೆನಪುಗಳ
ಬಾಗಿಲಿಗೆ
ಬೀಗ ಹಾಕಿ...

ಶಾಯರಿ ೧೨೧

ಅವನ
ಅಡಿಗೆ ಒಂದು
ಹೂವನ್ನಾದರೂ
ಇಟ್ಟಿರಲ್ಲಿಲ್ಲ
ಸಾಕಿ....
ಅವಳ
ಮೋಹದ
ಸೆರಗಲಿ
ಸೆರೆಯಾಗಲೆಂದು

ಅಡಿಯಿಂದ
ಮುಡಿಯವರೆಗೂ...
ಪುಷ್ಪಗಳಲ್ಲೆ...
ಅವನನ್ನು
ಮುಚ್ಚಿಬಿಟ್ಟಿರುವೆನಿಂದು
ಅವಳ
ನೆನಪುಗಳ
ಸುಳಿಯಿಂದ
ಮೇಲೆತ್ತಲೆಂದು...

ಶಾಯರಿ ೧೨೦

ನಿನ್ನನ್ನು
ದೇವರೊಮ್ಮೆ
ಭೇಟಿಯಾದರೆ...
ನನಗೂ
ತಿಳಿಸು
ಸಾಕಿ....

ಅವನಲ್ಲಿ
ಒಂದು ಪ್ರಶ್ನೆಯನ್ನು
ಕೇಳಬೇಕಿದೆ...
ಬದುಕಿನ
ತಕ್ಕಡಿಯಲ್ಲಿ
ನೋವಿನ ಭಾರವನ್ನೆ
ಏಕೆ
ಹೊರಿಸಿದೆಯೆಂದು...

Wednesday, April 4, 2018

ಶಾಯರಿ ೧೨೩

ಊರಲ್ಲಿರುವ
ಎಲ್ಲ....
ದೇವರುಗಳಲ್ಲಿ
ಬೇಡಿಕೊಂಡು
ಬಂದಿರುವೆ
ಸಾಕಿ..

ನಾ ಕೊಟ್ಟ
ಗುಲಾಬಿ
ಅವಳ
ಮುಡಿಯಲ್ಲಾದರೂ
ನಗುತಿರಲಿ
ಇಲ್ಲವೆ.....
ನನ್ನ
ಗೋರಿಯ
ಮೇಲಾದರು
ಅಳುತಿರಲಿ..

ಶಾಯರಿ ೧೧೯

ಬತ್ತಿಯಿಲ್ಲದ
ದೀಪಕೆ
ಸುರಿಯದಿರು
ಎಣ್ಣೆಯನು
ಸಾಕಿ...

ಒಲವ
ಬತ್ತಿಯಿಲ್ಲದೆ
ಒಣಗುತಿರುವ
ನನ್ನನು...
ಉಳಿಸಿಕೊಳ್ಳುವಾಸೆ
ಏಕೆ...?
ಬಟ್ಟಲೊಳಗಿನ
ಮಧುವನ್ನು
ಹಾಕಿ

ಶಾಯರಿ ೧೧೮

ಈ ಹುಣ್ಣಿಮೆ
ಕಳೆಯುವವರೆಗೂ
ನಿನ್ನ ದಾವಣಿಯಿಂದ
ನನ್ನ ಮೊಗವನ್ನು
ಮುಚ್ಚಿಬಿಡು
ಸಾಕಿ..

ನನಗೂ
ಅವನಿಗೂ..
ಬಹಳ
ದಿನಗಳಿಂದ
ಮತ್ಸರ

ಶಾಯರಿ ೧೧೭

ಅವಳ
ಪ್ರೀತಿಯ
ನಶೆಯಲ್ಲಿ
ಕಣ್ಮುಚ್ಚಿಕೊಂಡು
ನಾನದೇಷ್ಟು
ದೂರ.... ನಡೆದು
ಬಂದಿದ್ದೆ
ಸಾಕಿ

ಅವಳು
ಕೈ ಕೊಟ್ಟು
ಕಣ್ತೆರಿಸಿದಾಗಲೆ
ನನಗರಿವಾದದ್ದು
ನಾ ನಡೆದು
ಬಂದದ್ದು
ಮುಳ್ಳಿನ
ಹಾದಿಯಂದು

ಶಾಯರಿ ೧೧೬

ಈ ಜಗದ
ಮೇಲಿನ
ನಂಬಿಕೆಯನ್ನೆ...
ಕಳೆದುಕೊಂಡಿರುವೆ
ಸಾಕಿ...

ನನ್ನೆದೆಯ
ನೋವುಗಳನ್ನೆಲ್ಲ
ನಿನ್ನ
ಮಧು ಬಟ್ಟಲಿಗೆ
ಹಾಕಿ..

ಬಾನೆತ್ತರ ಮುಟ್ಟಲಿ ನಮ್ಮೊಲವು...

ಅಳೆಯುವ ಎತ್ತರವಿಲ್ಲದಿರಬಹುದು
ನಮ್ಮಿಬ್ಬರದು... ಗೆಳತಿ
ಮಾಪಿಸುವರೇನು....? ಎದೆಯ ಗೂಡೊಳಡಗಿ
ಕುಳಿತಿರುವ ಮುಗಿಲೆತ್ತರದ ಪ್ರೀತಿ

ನಿಜ... ನಾವಿಬ್ಬರು ಕಪ್ಪು ಹಲಗೆಯ
ಬಣ್ಣದವರೆ... ಆದರೇನಾಯಿತು..?
ಒಲವ ಬಿಳುಪಿನ ಬಳಪದಿಂದ,
ಬದುಕಿಗೆ ಹೊಸ ಕಾವ್ಯವ ಬರೆಯಲಾರವೆ....

ನಿಲುಕದು ನಮ್ಮಿಬ್ಬರಿಗೂ.. ಮಧುಮಂಚ !!!
ಆಡಿ ನಗುವುದೇನೊ ನೋಡಿ ಪರಪಂಚ...
ಭೂದೇವಿಯ ಮಡಿಲಿದೆ, ಹಾಸುವ ಚಾಪೆಯ ಕೊಂಚ
ಹರೆಯ ಹರಿದು ಹೋಗಲಿ ಬೇಡವಿನ್ನು ಸಂಕೋಚ..

ಚೆಲುವೆ...ಜಗತ್ತು ದೊಡ್ಡದು, ಮನಸ್ಸು ಚಿಕ್ಕದು
ನಾವು ಚಿಕ್ಕವರು ಅಳತೆಯಲ್ಲಿ, ಬದುಕೆಂದು ದೊಡ್ಡದೆ ನಮಗೆ
ಈಜುವ ಬಾಳ ಸಾಗರದಲಿ, ಯಾರೊಬ್ಬರಿಗೂ ಅಂಗಲಾಚದೆ
ಶಕ್ತಿಯಿಲ್ಲದಿರಬಹುದು ತೋಳಲಿ, ಛಲವೊಂದಿಹುದಲ್ಲ ಎದೆಯಲಿ..

ನಡೆಯುವ ಬದುಕಿನ ಹಾದಿ ಬಹುದೂರ...
ಮೊಲದ ಹೆಜ್ಜೆಗಳನೀಡುತಲಾದರೂ...ಕ್ರಮಿಸೋಣ
ಕಲ್ಲು..ಮುಳ್ಳುಗಳು.. ನೋವು...ಅಪಹಾಸ್ಯಗಳು
ನಮಗೇನು ಹೊಸತಲ್ಲ, ಜೊತೆಗೂಡಿ ಜಯಿಸೋಣ

ಹಾದಿ ಬೀದಿಯಲಿ ನೋಡಿ ನಗುವರು, ನೀ ಅಳಬೇಡ
ಗೇಲಿ ಮಾಡುವರು, ಮರು ಮಾತನಾಡಬೇಡ
ಬೇಕು ಬೇಕೆಂದೆ ಚುಡಾಯಿಸುವರು, ಸಿಡುಕಬೇಡ
ಅವರೆಲ್ಲರನ್ನೊಮ್ಮೆ ನೋಡಿ ನೀ...ನಕ್ಕು ನಡೆಯುವದನ್ನು ಮರಿಬೇಡ

ಬದುಕಿದ್ದೇವೆಂದು...ಬದುಕುವುದು ಬೇಡ..
ಬದುಕಲು ಒಂದು ಅವಕಾಶವಿದೆಯಲ್ಲ...ಅನುಭವಿಸೋಣ
ಬಾನೆತ್ತರಕೇರಿದವರು ತುಳಿಯಲೇ..ಬೇಕಲ್ಲ ನೆಲವ
ನೆಲದಲ್ಲಿದ್ದುಕೊಂಡೆ ಬಾನೇತ್ತರವ ಮುಟ್ಟಿಸುವ ನಮ್ಮೊಲವ

Monday, April 2, 2018

ಶಾಯರಿ ೧೧೫

ಇರುಳೆಲ್ಲ
ಕುಳಿತುಕೊಳ್ಳುವೆ
ನನ್ನೆದುರಿಗೆ
ಸಾಕಿ
ಹಾಲಂತ
ನಗುವನ್ನು
ಚೆಲ್ಲುತ್ತಾ...
ಆದರೂ...
ಅವಳ ನಗುವಿನಷ್ಟು
ಮತ್ತಿಲ್ಲ...

ಎಂದೊ...
ನಕ್ಕು, ಇಳಿಯದ
ನಶೆಯನ್ನು
ಏರಿಸಿ..
ಹೋಗಿರುವಳಲ್ಲ
ಅವಳ
ನಗೆಯಲಿರುವಷ್ಟು
ಮತ್ತು...
ನಿನ್ನ ಕೆಂದುಟಿಯ
ನಗುವಲಿ
ಏಕಿಲ್ಲ...?

Sunday, April 1, 2018

ಶಾಯರಿ ೧೧೪

ಎದೆಯಲ್ಲಿ
ಅವಳ
ನೆನಪುಗಳಿಗೆಲ್ಲ
ಗೋರಿ
ಕಟ್ಟಿರುವೆ
ಸಾಕಿ...

ಆದರೂ
ನೋಡು
ಗೋರಿಯ
ಮೇಲೆ
ಕನಸಿನ
ಬಳ್ಳಿ
ಚಿಗುರಿವುದು